ರಾಜ್ಯ

ಎಸ್‌ಸಿಪಿ,ಟಿಎಸ್‌ಪಿ ಅನುದಾನ ಗ್ಯಾರಂಟಿಗೆ ಬಳಕೆ : ಕಾಂಗ್ರೆಸ್‌ನಲ್ಲೇ ಅಸಮಾಧಾನ

ಬೆಂಗಳೂರು : ಪರಿಶಿಷ್ಟ ಜಾತಿ ಉಪಯೋಜನೆ ಹಾಗೂ ಗಿರಿಜನ ಉಪಯೋಜನೆ ಅನುದಾನವನ್ನು ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆಗಳಿಗೆ ಬಳಕೆ ಮಾಡುತ್ತಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ, ಎಸ್‍ಸಿ/ಎಸ್‍ಟಿ ಸಮುದಾಯಕ್ಕೆ ಸೇರಿದ ಕಾಂಗ್ರೆಸ್ ಸಚಿವರು ಹಾಗೂ ಶಾಸಕರು ಮಂಗಳವಾರ ಸಂಜೆ ಬೆಂಗಳೂರಿನಲ್ಲಿ ಗೌಪ್ಯ ಸಭೆ ನಡೆಸಿದ್ದು, ಸಭೆಯಲ್ಲಿ ಈ ಸಂಬಂಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಗೃಹ ಸಚಿವ ಡಾ. ಜಿ ಪರಮೇಶ್ವರ್ ಅಧ್ಯಕ್ಷತೆಯಲ್ಲಿ ತಡ ರಾತ್ರಿ ಖಾಸಗಿ ಹೊಟೇಲ್ ನಲ್ಲಿ ನಡೆದ ಭೋಜನಕೂಟದ ಸಭೆಯಲ್ಲಿ ಸಚಿವರಾದ ಹೆಚ್. ಸಿ.ಮಹದೇವಪ್ಪ, ಶಿವರಾಜ್ ತಂಗಡಗಿ, ಕೆ.ಎಚ್ ಮುನಿಯಪ್ಪ, ಆರ್.ಬಿ.ತಿಮ್ಮಾಪೂರ, ಶಾಸಕರಾದ ಮಳವಳ್ಳಿ ಪಿ.ಎಂ. ನರೇಂದ್ರ ಸ್ವಾಮಿ, ಬಂಗಾರಪೇಟೆ ಎಸ್.ಎ.ನಾರಾಯಣಸ್ವಾಮಿ, ಹುಬ್ಬಳ್ಳಿಯ ಪ್ರಸಾದ್ ಅಬ್ಬಯ್ಯ, ದಾವಣಗೆರೆಯ ಬಸಂತಪ್ಪ, ಪಾವಗಡದ ವೆಂಕಟೇಶ್ ಸೇರಿ 30 ಕ್ಕೂ ಹೆಚ್ಚು ಶಾಸಕರು ಭಾಗಿದ್ದರು.

ದಲಿತ ಸಿಎಂ ವಿಚಾರ, ಅನುದಾನ ಕುರಿತಂತೆ ಸಭೆಯಲ್ಲಿ ಚರ್ಚೆ ನಡೆಸಲಾಗಿದೆ. ಹೈಕಮಾಂಡ್ ಮುಖ್ಯಮಂತ್ರಿ ಸ್ಥಾನದಿಂದ ಸಿದ್ದರಾಮಯ್ಯ ಅವರನ್ನು ಬದಲಾವಣೆ ಮಾಡುವ ಪ್ರಯತ್ನ ಮಾಡಿದರೆ ದಲಿತ ಸಮುದಾಯದವರಿಗೆ ಮುಖ್ಯಮಂತ್ರಿಯಾಗುವ ಅವಕಾಶ ನೀಡಬೇಕು ಎಂಬ ಪ್ರತಿಪಾದನೆ ಪ್ರಮುಖವಾಗಿ ಕೇಳಿ ಬಂದಿದೆ.

ಅಧಿವೇಶನದ ನಡುವೆಯೇ ಸಭೆ ಸೇರಿರುವ ಶಾಸಕರು, ಸಚಿವರು ಕುರ್ಚಿ ವಿಚಾರ ಪ್ರಸ್ತಾಪಿಸಿದ್ದಾರೆ. ಅಧಿಕಾರ ಹಂಚಿಕೆಯ ವಿವಾದ ತಣ್ಣಗಾಗಿರುವ ಮಧ್ಯೆಯೇ ಪ್ರತ್ಯೇಕ ಸಭೆ ಮತ್ತೆ ಕುರ್ಚಿ ಕಿತ್ತಾಟದ ಕಾವು ಹೆಚ್ಚುವಂತೆ ಮಾಡಿದೆ. ಸಭೆಯಲ್ಲಿ ಭಾಗವಹಿಸಿದ್ದ ಬಹುತೇಕರು ಸಿದ್ದರಾಮಯ್ಯ ಅವರಿಗೆ ನೈತಿಕ ಬೆಂಬಲ ವ್ಯಕ್ತಪಡಿಸಿದ್ದಾರೆ.

ಒಳ ಮೀಸಲಾತಿಯ ಗೊಂದಲ ಬಗ್ಗೆಯೂ ಚರ್ಚೆಯಾಗಿದೆ. ಈಗಾಗಲೇ ಮೂರು ಬಾರಿ ಕಾನೂನು ಮಾಡಲಾಗಿದೆ. ಆದರೂ ಅಲ್ಲಲ್ಲಿ ಅಪಸ್ವರಗಳು ಕೇಳಿ ಬರುತ್ತಲೇ ಇವೆ. ಎಲ್ಲಾ ಭಿನ್ನಮತವನ್ನು ಮರೆತು ಒಗ್ಗಟ್ಟಿನಿಂದ ಒಳ ಮೀಸಲಾತಿಯ ಅನುಷ್ಠಾನಕ್ಕೆ ಪ್ರತಿಪಾದನೆ ಮಾಡುವ ಅಗತ್ಯವಿದೆ. ಜೊತೆಗೆ ರಾಜ್ಯ ಸರ್ಕಾರ ರೂಪಿಸಿರುವ ಒಳ ಮೀಸಲಾತಿಯ ವರ್ಗೀಕರಣ ಆಧಾರಿತವಾಗಿ ಸಂಸತ್ತಿನಲ್ಲಿ ಕಾನೂನು ತಿದ್ದುಪಡಿಯಾಗಬೇಕು. ಶೆಡ್ಯೂಲ್ ಒಂಬತ್ತಕ್ಕೆ ರಾಜ್ಯ ಸರ್ಕಾರದ ನಿರ್ಧಾರ ಸೇರ್ಪಡೆಯಾಗಬೇಕು. ಈ ನಿಟ್ಟಿನಲ್ಲಿ ಒತ್ತಡ ಹೆಚ್ಚಿಸಬೇಕು ಎಂದು ಚರ್ಚೆಗಳಾಗಿವೆ.

ಪರಿಶಿಷ್ಟ ಜಾತಿ ಮತ್ತು ಪಂಗಡದ ಅಭಿವೃದ್ಧಿಗಾಗಿ 2025-26ನೇ ಸಾಲಿನ ಬಜೆಟ್ಟಿನಲ್ಲಿ 42 ಸಾವಿರ ಕೋಟಿ ರೂಪಾಯಿ ಅನುದಾನ ಒದಗಿಸಿರುವುದಾಗಿ ಪ್ರಚಾರ ಮಾಡುತ್ತಿದ್ದೇವೆ. ಆದರೆ ಇದರಲ್ಲಿ ಗ್ಯಾರಂಟಿ ಯೋಜನೆಗಳಿಗೆ ಸುಮಾರು 30 ಸಾವಿರಕ್ಕೂ ಕೋಟಿಗೂ ಹೆಚ್ಚಿನ ಹಣ ಬಳಕೆ ಮಾಡಿಕೊಳ್ಳಲಾಗಿದೆ. ಬಾಕಿ ಉಳಿದಿರುವುದೇ 12 ಸಾವಿರ ಕೋಟಿ. ಈ ಹಿಂದೆ ಎಸ್‍ಇಪಿ, ಟಿ ಎಸ್ ಪಿ ಕಾಯ್ದೆ ಜಾರಿಗೆ ಬರುವ ಮುನ್ನ ಸಮುದಾಯದ ಅಭಿವೃದ್ಧಿಗೆ ಮೀಸಲಿಡುತ್ತಿದ್ದ ಅನುದಾನಕ್ಕಿಂತಲೂ ಕಡಿಮೆ ಮೊತ್ತ ಈಗ ದೊರೆತಂತಾಗಿದೆ. ಇನ್ನು ಯಾವ ಮುಖ ಇಟ್ಕೊಂಡು ನಾವು ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಕಾಂಗ್ರೆಸ್ ಪರವಾಗಿ ಮತ ಕೇಳಬೇಕು ಎಂದು ಶಾಸಕರು ಆಕ್ರೋಶ ಹೊರ ಹಾಕಿದ್ದಾರೆ.

ಸಂಪುಟದಲ್ಲಿರುವ ಸಚಿವರು ಅನುದಾನದ ದುರ್ಬಳಕೆಯ ಬಗ್ಗೆ ಧ್ವನಿ ಎತ್ತಬೇಕಿತ್ತು. ಶಾಸಕರು ನಾವು ಅಧಿವೇಶನದಲ್ಲಾಗಲಿ ಅಥವಾ ಹೊರಗಡೆ ಮಾತನಾಡಿದರೆ ಅದರಿಂದ ಪಕ್ಷಕ್ಕೆ ಹಾನಿಯಾಗುತ್ತದೆ, ಮಾತನಾಡದೆ ಇದ್ದರೆ ಅನ್ಯಾಯ ತೀವ್ರವಾಗಿದೆ ಎಂದು ಅಸಮಧಾನ ಹೊರ ಹಾಕಿದ್ದಾರೆ. ಮುಂದಿನ ಬಜೆಟ್ಟಿನಲ್ಲಿ ಎಸ್ ಇ ಪಿ ಮತ್ತು ಟಿಎಸ್‍ಪಿ ಅನುದಾನವನ್ನು ಪ್ರತ್ಯೇಕವಾಗಿ ಮೀಸಲಿಡಬೇಕು. ಅದನ್ನು ಯಾವುದೇ ಕಾರಣಕ್ಕೂ ಗ್ಯಾರಂಟಿ ಯೋಜನೆಗಳಿಗೆ ಬಳಸಬಾರದು ಎಂದು ಶಾಸಕರು ಆಗ್ರಹಿಸಿದ್ದಾರೆ ಎಂದು ಹೇಳಲಾಗಿದೆ.

ಎಸ್‍ಸಿ ಮತ್ತು ಎಸ್‍ಟಿ ಸಮುದಾಯಗಳಿಗೆ ಅವರ ಹಕ್ಕಿನ ಅನುದಾನ ಸಿಗುತ್ತಿಲ್ಲ. ಇದು ದೊಡ್ಡ ಮಟ್ಟದ ನಿರಾಸೆ ಮತ್ತು ಮೋಸ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಸಭೆಯಲ್ಲಿ ಪ್ರಮುಖವಾಗಿ, ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಸೌಲಭ್ಯ ಒದಗಿಸುವ ಶಕ್ತಿ ಯೋಜನೆ ಸೇರಿದಂತೆ ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಿಗೆ ಎಸ್‍ಸಿಪಿ-ಟಿಎಸ್‍ಪಿ ನಿಧಿಗಳನ್ನು ಬಳಸಲಾಗುತ್ತಿದೆ ಎಂಬ ವಿಚಾರ ಚರ್ಚೆಗೆ ಬಂದಿದೆ.

ಸಭೆಯಲ್ಲಿ ಭಾಗವಹಿಸಿದ ನಾಯಕರು, ಈ ವಿಚಾರವನ್ನು ಇನ್ನಷ್ಟು ಗಂಭೀರವಾಗಿ ಮುಂದಕ್ಕೆ ಕೊಂಡೊಯ್ಯಲು ಕಾಂಗ್ರೆಸ್ ಹೈಕಮಾಂಡ್‍ಗೆ ಪತ್ರ ಬರೆಯಲು ತೀರ್ಮಾನಿಸಿದ್ದಾರೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಪಕ್ಷದ ಉನ್ನತ ನಾಯಕತ್ವಕ್ಕೆ ಈ ಪತ್ರ ರವಾನಿಸುವ ಯೋಜನೆ ರೂಪಿಸಲಾಗಿದೆ. ಈಗಾಗಲೇ ಪತ್ರ ಸಿದ್ಧವಾಗಿದ್ದು, ಎಸ್‍ಸಿಪಿ-ಟಿಎಸ್‍ಪಿ ನಿಧಿಗಳನ್ನು ಗ್ಯಾರಂಟಿ ಯೋಜನೆಗಳಿಗೆ ಬಳಕೆ ಮಾಡುವುದನ್ನು ತಕ್ಷಣವೇ ನಿಲ್ಲಿಸಬೇಕು. ಇಂತಹ ಕ್ರಮಗಳು ದಲಿತರು ಹಾಗೂ ಆದಿವಾಸಿಗಳ ಸಬಲೀಕರಣದ ಉದ್ದೇಶಕ್ಕೆ ಧಕ್ಕೆ ತರುತ್ತದೆ ಮತ್ತು ಕರ್ನಾಟಕ ಎಸ್‍ಸಿ ಉಪಯೋಜನೆ ಹಾಗೂ ಎಸ್‍ಟಿ ಉಪಯೋಜನೆ ಕಾಯ್ದೆ–2013ರ ಆಶಯಕ್ಕೆ ವಿರುದ್ಧವಾಗಿದೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ ಎಂದು ತಿಳಿದುಬಂದಿದೆ.

ಗ್ಯಾರಂಟಿ ಯೋಜನೆಗಳಲ್ಲಿಯೂ ಎಸ್‍ಸಿ/ಎಸ್‍ಟಿ ಫಲಾನುಭವಿಗಳಿಗೆ ಮಾತ್ರ ಈ ಹಣ ಬಳಸಲಾಗುತ್ತಿದೆ. ಯಾವುದೇ ದುರುಪಯೋಗವಾಗಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದರು.

ಸಮಾಜ ಕಲ್ಯಾಣ ಸಚಿವ ಡಾ. ಎಚ್.ಸಿ. ಮಹದೇವಪ್ಪ ಕೂಡ ಆಗಸ್ಟ್ 2025ರಲ್ಲಿ, ಸುಮಾರು ರೂ.13,500 ಕೋಟಿ ಎಸ್‍ಸಿಪಿ-ಟಿಎಸ್‍ಪಿ ನಿಧಿಯನ್ನು ಗ್ಯಾರಂಟಿ ಯೋಜನೆಗಳಿಗೆ ವರ್ಗಾಯಿಸಲಾಗಿದೆ ಎಂದು ಒಪ್ಪಿಕೊಂಡಿದ್ದರೂ, ಅದು ಸಂಪೂರ್ಣವಾಗಿ ಎಸ್‍ಸಿ/ಎಸ್‍ಟಿ ಸಮುದಾಯದ ಪ್ರಯೋಜನಕ್ಕಾಗಿ ಮಾತ್ರ ಎಂದು ಸಮರ್ಥಿಸಿಕೊಂಡಿದ್ದರು. ಈ ನಡುವೆ, ವಿರೋಧ ಪಕ್ಷ ಬಿಜೆಪಿ ಸರ್ಕಾರದ ವಿರುದ್ಧ ತೀವ್ರ ಟೀಕೆ ನಡೆಸಿದ್ದು, “ದಲಿತರು ಮತ್ತು ಆದಿವಾಸಿಗಳ ವಿರುದ್ಧ ವ್ಯವಸ್ಥಿತ ಅನ್ಯಾಯ ನಡೆಯುತ್ತಿದೆ ಎಂದು ಆರೋಪಿಸಿದೆ.

ಚಂದು ಸಿಎನ್

ಮೈಸೂರು ಜಿಲ್ಲೆಯ ಹುಣಸೂರಿನ ಚಲ್ಲಹಳ್ಳಿ ಗ್ರಾಮದವನಾದ ನಾನು ಒಂದು ದಶಕದಿಂದ ಮೈಸೂರಿನಲ್ಲಿ ನೆಲೆಸಿದ್ದೇನೆ. ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಪತ್ರಿಕೋದ್ಯಮ ಪದವಿ ಪಡೆದು ಅಂದಿನಿಂದಲೇ ಹವ್ಯಾಸಿ ಪತ್ರಕರ್ತನಾಗಿ ವೃತ್ತಿ ಆರಿಸಿಕೊಂಡೆ. ನಂತರ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ವಿಷಯದಲ್ಲಿ ಸ್ನಾತಕೋತ್ತರ ಪದವಿ ಮುಗಿಸಿದ ಬಳಿಕ ಪತ್ರಿಕೋದ್ಯಮ ಕ್ಷೇತ್ರದಲ್ಲಿ 2 ವರ್ಷಗಳ ಕಾಲ ಅನುಭವ ಪಡೆದಿದ್ದೇನೆ. ಸದ್ಯ ಮೈಸೂರಿನ ಪ್ರತಿಷ್ಠಿತ ಆಂದೋಲನ ಪತ್ರಿಕೆಯ ಡಿಜಿಟಲ್‌ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಪ್ರಾಚೀನ ಪಳಿಯುಳಿಕೆ ಹಾಗೂ ಇತಿಹಾಸದ ಕಡೆ ಎಲ್ಲಿಲ್ಲದ ಒಲವು. ಪ್ರವಾಸ, ಪುಸ್ತಕ ಓದುವುದು ನೆಚ್ಚಿನ ಹವ್ಯಾಸಗಳಾಗಿವೆ. ಮೊಬೈಲ್‌ ಸಂಖ್ಯೆ: 9164535321.

Recent Posts

ಉಪಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ಸಾಧಿಸುವ ವಿಶ್ವಾಸವಿದೆ: ಮುಖ್ಯಮಂತ್ರಿ ಸಿದ್ದರಾಮಯ್ಯ

ದಾವಣಗೆರೆ: ನುಡಿದಂತೆ ನಡೆಯುವ ಕಾಂಗ್ರೆಸ್ ಪಕ್ಷದ ಮೇಲೆ ಜನರಿಗೆ ಭರವಸೆಯಿದ್ದು, ಈ ಬಾರಿಯ ಉಪಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ಸಾಧಿಸುವ ವಿಶ್ವಾಸವಿದೆ…

5 hours ago

ಕೆ.ಆರ್‌.ನಗರ: ಮಾಜಿ ಸಚಿವ ಸಾ.ರಾ. ಮಹೇಶ್ ಪುತ್ರ ಹಾಗೂ ಉದ್ಯಮಿ ಸಾ.ರಾ.ಜಯಂತ್‌ ಹುಟ್ಟುಹಬ್ಬ ಆಚರಣೆ

ಭೇರ್ಯ ಮಹೇಶ್:‌ ಕೆ.ಆರ್‌.ನಗರ ತಾಲ್ಲೂಕು ವರದಿಗಾರರು  ಕೆ.ಆರ್.ನಗರ : ಜಾತಿ ಬೇದವಿಲ್ಲದೆ ನೊಂದವರಿಗೆ ದ್ವನಿಯಾಗಿ, ಸಂಕಷ್ಟದಲ್ಲಿರುವವರುಗೆ ಆರ್ಥಿಕ ನೆರವು ನೀಡಿ,…

5 hours ago

ಮಾ.28ರಂದು ಮೇಲುಕೋಟೆ ವೈರಮುಡಿ ಜಾತ್ರಾ ಮಹೋತ್ಸವ: 140 ಬಸ್‌ಗಳ ಕಾರ್ಯಾಚರಣೆ

ಮಂಡ್ಯ: ಮಾರ್ಚ್.‌28ರಂದು ಮೇಲುಕೋಟೆ ವೈರಮುಡಿ ಜಾತ್ರಾ ಮಹೋತ್ಸವ ನಡೆಯಲಿರುವ ಹಿನ್ನೆಲೆಯಲ್ಲಿ ಕೆಎಸ್‌ಆರ್‌ಟಿಸಿ ವತಿಯಿಂದ 140 ಬಸ್‌ಗಳು ಕಾರ್ಯಾಚರಣೆ ನಡೆಸಲಿವೆ. ಜಾತ್ರಾ…

6 hours ago

ಎಚ್ಚರಿಕೆ ನೀಡಿದ್ದಕ್ಕೆ ಟ್ರಂಪ್‌ ಕದನ ವಿರಾಮ ಘೋಷಣೆ: ಇರಾನ್‌ ಖಡಕ್‌ ತಿರುಗೇಟು

ಟೆಹರಾನ್: ನಾವು ನೀಡಿದ ಎಚ್ಚರಿಕೆಗೆ ತಲೆಬಾಗಿ ಅಮೇರಿಕಾ ಈಗ ಕದನ ವಿರಾಮ ಘೋಷಣೆ ಮಾಡಿದ ಎಂದು ಇರಾನ್‌ ತಿರುಗೇಟು ನೀಡಿದೆ.…

6 hours ago

ಕೃಷಿ ಹೊಂಡದಲ್ಲಿ ಈಜಲು ಹೋಗಿ ಬಾಲಕ ಸಾವು

ಮಂಡ್ಯ: ಕೃಷಿ ಹೊಂಡದಲ್ಲಿ ಈಜಲು ಹೋಗಿ ಬಾಲಕನೊಬ್ಬ ಸಾವನ್ನಪ್ಪಿರುವ ಘಟನೆ ಮಂಡ್ಯ ಜಿಲ್ಲೆ ಮಳವಳ್ಳಿ ತಾಲ್ಲೂಕಿನ ನಂದೀಪುರ ಗ್ರಾಮದಲ್ಲಿ ನಡೆದಿದೆ.…

6 hours ago

ಕೆಪಿಎಸ್‌ಸಿ ಬದಲಿಗೆ ಕೆಇಎ ಮೂಲಕ ಸಹಾಯಕ ಕೃಷಿ ಅಧಿಕಾರಿಗಳ ಹುದ್ದೆಗೆ ನೇಮಕಾತಿ: ಸಚಿವ ಚಲುವರಾಯಸ್ವಾಮಿ

ಬೆಂಗಳೂರು: ಕಳೆದ ವರ್ಷ ಕೃಷಿ ಇಲಾಖೆಯ ಸಮಾರು 945 ಕೃಷಿ ಅಧಿಕಾರಿ ಹಾಗೂ ಸಹಾಯಕ ಕೃಷಿ ಅಧಿಕಾರಿ ಹುದ್ದೆಗಳ ನೇಮಕಾತಿಯನ್ನು…

6 hours ago