ಕ್ರೀಡೆ

ಆಶಸ್‌ ಟೆಸ್ಟ್‌| ರೋಚಕ ಪಂದ್ಯದಲ್ಲಿ ಗೆದ್ದ ಇಂಗ್ಲೆಂಡ್: ಬ್ರಾಡ್​ಗೆ ಗೆಲುವಿನ ವಿದಾಯ

ದಿ ಓವಲ್‌ : ಲಂಡನ್​ನ ಕೆನ್ನಿಂಗ್ಟನ್ ಓವಲ್​ ಮೈದಾನದಲ್ಲಿ ನಡೆದ ಆಶಸ್‌ ಸರಣಿಯ ಅಂತಿಮ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಇಂಗ್ಲೆಂಡ್ 49 ರನ್​ಗಳ ಭರ್ಜರಿ ಜಯ ಸಾಧಿಸಿದೆ. ಈ ಗೆಲುವಿನೊಂದಿಗೆ ಈ ಬಾರಿಯ ಆ್ಯಶಸ್ ಸರಣಿಯು 2-2 ಸಮಬಲದೊಂದಿಗೆ ಅಂತ್ಯಗೊಂಡಿದೆ.

ಹಾಗೆಯೇ ಈ ಅಮೋಘ ಜಯದೊಂದಿಗೆ ಇಂಗ್ಲೆಂಡ್ ವೇಗಿ ಸ್ಟುವರ್ಟ್​ ಬ್ರಾಡ್ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಗೆಲುವಿನ ವಿದಾಯ ಹೇಳಿದ್ದಾರೆ. ಇದಕ್ಕೂ ಮುನ್ನ ಈ ಪಂದ್ಯದಲ್ಲಿ ಟಾಸ್ ಗೆದ್ದಿದ್ದ ಆಸ್ಟ್ರೇಲಿಯಾ ತಂಡದ ನಾಯಕ ಪ್ಯಾಟ್ ಕಮಿನ್ಸ್ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್ ಪರ ಹ್ಯಾರಿ ಬ್ರೂಕ್ (85) ಭರ್ಜರಿ ಅರ್ಧಶತಕ ಸಿಡಿಸಿ ಮಿಂಚಿದ್ದರು. ಈ ಅರ್ಧಶತಕದ ನೆರವಿನೊಂದಿಗೆ ಇಂಗ್ಲೆಂಡ್ ತಂಡವು ಮೊದಲ ಇನಿಂಗ್ಸ್​ನಲ್ಲಿ 283 ರನ್​ ಪೇರಿಸಿ ಆಲೌಟ್ ಆಗಿದ್ದರು.

ಇದಕ್ಕುತ್ತರವಾಗಿ ಪ್ರಥಮ ಇನಿಂಗ್ಸ್ ಆರಂಭಿಸಿದ ಆಸ್ಟ್ರೇಲಿಯಾ ಪರ ಸ್ಟೀವ್ ಸ್ಮಿತ್ 71 ರನ್​ಗಳ ಆಕರ್ಷಕ ಅರ್ಧಶತಕ ಬಾರಿಸಿದರು. ಇದಾಗ್ಯೂ ಮೊದಲ ಇನಿಂಗ್ಸ್​ನಲ್ಲಿ ಆಸ್ಟ್ರೇಲಿಯಾ ತಂಡವು 295 ರನ್​ಗಳಿಸಲಷ್ಟೇ ಶಕ್ತರಾಗಿದ್ದರು.

ಕೇವಲ 12 ರನ್​ಗಳ ಹಿನ್ನಡೆಯೊಂದಿಗೆ ದ್ವಿತೀಯ ಇನಿಂಗ್ಸ್ ಆರಂಭಿಸಿದ ಇಂಗ್ಲೆಂಡ್ ಈ ಬಾರಿ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿತು. ಆರಂಭಿಕ ಆಟಗಾರ ಝಾಕ್ ಕ್ರಾಲಿ (73) ಸ್ಪೋಟಕ ಅರ್ಧಶತಕ ಬಾರಿಸಿದರೆ, ಜೋ ರೂಟ್ ಕೇವಲ 106 ಎಸೆತಗಳಲ್ಲಿ 91 ರನ್ ಚಚ್ಚಿದರು. ಹಾಗೆಯೇ ಜಾನಿ ಬೈರ್​ಸ್ಟೋವ್ 78 ರನ್​ಗಳ ಕೊಡುಗೆ ನೀಡಿದರು. ಪರಿಣಾಮ ದ್ವಿತೀಯ ಇನಿಂಗ್ಸ್​ನಲ್ಲಿ ಇಂಗ್ಲೆಂಡ್ ತಂಡವು 395 ರನ್ ಪೇರಿಸಿತು.

ಇತ್ತ ಮೊದಲ ಇನಿಂಗ್ಸ್​ನ ಮುನ್ನಡೆಯೊಂದಿಗೆ ಆಸ್ಟ್ರೇಲಿಯಾ ತಂಡವು ದ್ವಿತೀಯ ಇನಿಂಗ್ಸ್​ನಲ್ಲಿ 384 ರನ್​ಗಳ ಗುರಿ ಪಡೆಯಿತು. ಈ ಟಾರ್ಗೆಟ್ ಅನ್ನು ಬೆನ್ನತ್ತಿದ ಆಸ್ಟ್ರೇಲಿಯಾಗೆ ಉಸ್ಮಾನ್ ಖ್ವಾಜಾ (72) ಹಾಗೂ ಡೇವಿಡ್ ವಾರ್ನರ್ (60) ಉತ್ತಮ ಆರಂಭ ಒದಗಿಸಿದ್ದರು. ಅಲ್ಲದೆ ಮಳೆಬಾಧಿತ ನಾಲ್ಕನೇ ದಿನದಾಟದ ಅಂತ್ಯಕ್ಕೆ 135 ರನ್ ಪೇರಿಸಿದ್ದರು.

ಆದರೆ 5ನೇ ದಿನದಾಟದ ಆರಂಭದಲ್ಲೇ ಆಸ್ಟ್ರೇಲಿಯಾ ಆರಂಭಿಕರಿಗೆ ಪೆವಿಲಿಯನ್ ಹಾದಿ ತೋರಿಸುವಲ್ಲಿ ಕ್ರಿಸ್ ವೋಕ್ಸ್ ಯಶಸ್ವಿಯಾದರು. ಇದರ ಬೆನ್ನಲ್ಲೇ  ಮಾರ್ಕ್​ವುಡ್ ಎಸೆತದಲ್ಲಿ ಮಾರ್ನಸ್ ಲಾಬುಶೇನ್ (13)  ಕ್ಯಾಚ್ ನೀಡಿ ಹೊರನಡೆದರು. ಈ ಹಂತದಲ್ಲಿ ಜೊತೆಗೂಡಿದ ಸ್ಟೀವ್ ಸ್ಮಿತ್ ಹಾಗೂ ಟ್ರಾವಿಸ್ ಹೆಡ್ 4ನೇ ವಿಕೆಟ್​ಗೆ 95 ರನ್​ಗಳ ಜೊತೆಯಾಟವಾಡಿದರು.

ಭೋಜನ ವಿರಾಮದ ಬಳಿಕ ಕ್ರೀಸ್​ಗೆ ಆಗಮಿಸಿದ ಟ್ರಾವಿಸ್ ಹೆಡ್​ (43) ರನ್ನು ಮೊಯೀನ್ ಅಲಿ ಔಟ್ ಮಾಡಿದರೆ, ಸ್ಟೀವ್ ಸ್ಮಿತ್​ (54) ಗೆ ಕ್ರಿಸ್ ವೋಕ್ಸ್ ಪೆವಿಲಿಯನ್ ಹಾದಿ ತೋರಿಸಿದರು. ಈ ಎರಡು ವಿಕೆಟ್ ಸಿಗುತ್ತಿದ್ದಂತೆ ಪಂದ್ಯದ ಮೇಲೆ ಹಿಡಿತ ಸಾಧಿಸಿದ ಇಂಗ್ಲೆಂಡ್ ಬೌಲರ್​ಗಳು ಆಸ್ಟ್ರೇಲಿಯಾ ಬ್ಯಾಟರ್​ಗಳ ಮೇಲೆ ಒತ್ತಡ ಹೇರುವಲ್ಲಿ ಯಶಸ್ವಿಯಾದರು.

ಇದರ ಫಲವಾಗಿ ಮಿಚೆಲ್ ಮಾರ್ಷ್ ಕೇವಲ 6 ರನ್​ಗಳಿಸಿ ಮೊಯೀನ್ ಅಲಿ ಎಸೆತದಲ್ಲಿ ವಿಕೆಟ್ ಕೀಪರ್​ಗೆ ಕ್ಯಾಚಿತ್ತರು. ಇದರ ಬೆನ್ನಲ್ಲೇ ಮಿಚೆಲ್ ಸ್ಟಾರ್ಕ್​ರನ್ನು ಕ್ರಿಸ್ ವೋಕ್ಸ್ ಶೂನ್ಯಕ್ಕೆ ಔಟ್ ಮಾಡಿದರು. ಒಂದು ಹಂತದಲ್ಲಿ 264 ರನ್​ಗಳಿಗೆ ಕೇವಲ 4 ವಿಕೆಟ್ ಕಳೆದುಕೊಂಡಿದ್ದ ಆಸ್ಟ್ರೇಲಿಯಾ ತಂಡವು 275 ರನ್​ಗಳಿಸುವಷ್ಟರಲ್ಲಿ 7 ವಿಕೆಟ್ ಪತನಗೊಂಡಿತು.

ಈ ಹಂತದಲ್ಲಿ ಜೊತೆಯಾದ ನಾಯಕ ಪ್ಯಾಟ್ ಕಮಿನ್ಸ್ ಹಾಗೂ ಅಲೆಕ್ಸ್ ಕ್ಯಾರಿ ಎಚ್ಚರಿಕೆಯ ಆಟಕ್ಕೆ ಒತ್ತು ನೀಡಿದರು. ಅದರಂತೆ ಈ ಜೋಡಿಯು 19 ರನ್​ಗಳಿಸಿದರು. ಈ ಹಂತದಲ್ಲಿ ಮತ್ತೆ ದಾಳಿಗಿಳಿದ ಮೊಯೀನ್ ಅಲಿ ಪ್ಯಾಟ್ ಕಮಿನ್ಸ್ (9) ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು.

ಆದರೆ ಅಂತಿಮ ಹಂತದಲ್ಲಿ ಅಲೆಕ್ಸ್ ಕ್ಯಾರಿ ಜೊತೆಗೂಡಿದ ಟಾಡ್ ಮರ್ಫಿ 35 ರನ್​ಗಳ ಪಾಲುದಾರಿಕೆ ನೀಡಿದರು. ಇತ್ತ ಕೊನೆಯ 2 ವಿಕೆಟ್ ಪಡೆಯಲು ಇಂಗ್ಲೆಂಡ್​ ಬೌಲರ್​ಗಳು ಹೆಚ್ಚಿನ ಶ್ರಮವಹಿಸಬೇಕಾಯಿತು. ಇದರ ನಡುವೆ ದಾಳಿಗಿಳಿದ  ಸ್ಟುವರ್ಟ್ ಬ್ರಾಡ್ ಟಾಡ್ ಮರ್ಫಿ (18) ವಿಕೆಟ್ ಪಡೆದು ಅಮೂಲ್ಯ ಯಶಸ್ಸು ತಂದುಕೊಟ್ಟರು.

ಅಲ್ಲದೆ ಅಲೆಕ್ಸ್ ಕ್ಯಾರಿ (28) ಯನ್ನು ಔಟ್​ ಮಾಡುವ ಮೂಲಕ ಸ್ಟುವರ್ಟ್ ಬ್ರಾಡ್ ತಮ್ಮ ಕೊನೆಯ ಪಂದ್ಯದ ಅಂತಿಮ ಎಸೆತದಲ್ಲಿ ವಿಕೆಟ್ ಪಡೆದು ಆಸ್ಟ್ರೇಲಿಯಾ ತಂಡವನ್ನು 334 ರನ್​ಗಳಿಗೆ ಆಲೌಟ್ ಮಾಡಿದರು. ಈ ಮೂಲಕ ಇಂಗ್ಲೆಂಡ್ ತಂಡಕ್ಕೆ 49 ರನ್​ಗಳ ಜಯ ತಂದುಕೊಟ್ಟರು. ಇನ್ನು ಇಂಗ್ಲೆಂಡ್ ಪರ ಕ್ರಿಸ್ ವೋಕ್ಸ್ 4 ವಿಕೆಟ್ ಪಡೆದರೆ, ಮೊಯೀನ್ ಅಲಿ 3 ವಿಕೆಟ್ ಕಬಳಿಸಿದರು. ಹಾಗೆಯೇ ಸ್ಟುವರ್ಟ್ ಬ್ರಾಡ್ 2 ವಿಕೆಟ್ ಕಬಳಿಸಿ ಮಿಂಚಿದರು.

ಪಂದ್ಯ ಶ್ರೇಷ್ಠ : ಕ್ರಿಸ್‌ ವೋಕ್ಸ್‌

ಸೆರಣಿ ಶ್ರೇಷ್ಠ : ಕ್ರಿಸ್‌ ವೋಕ್ಸ್‌ ಮತ್ತು ಮಿಚೆಲ್‌ ಸ್ಟಾರ್ಕ್‌

ಆ್ಯಶಸ್ ಸರಣಿಯ ಸಂಕ್ಷಿಪ್ತ ಫಲಿತಾಂಶ:

  1. ಮೊದಲ ಟೆಸ್ಟ್ ಪಂದ್ಯ- ಆಸ್ಟ್ರೇಲಿಯಾ ತಂಡಕ್ಕೆ 2 ವಿಕೆಟ್​ಗಳ ಜಯ
  2. ಎರಡನೇ ಟೆಸ್ಟ್ ಪಂದ್ಯ- ಆಸ್ಟ್ರೇಲಿಯಾ ತಂಡಕ್ಕೆ 43 ರನ್​ಗಳ ಜಯ
  3. ಮೂರನೇ ಟೆಸ್ಟ್ ಪಂದ್ಯ- ಇಂಗ್ಲೆಂಡ್ ತಂಡಕ್ಕೆ 3 ವಿಕೆಟ್​ಗಳ ಜಯ
  4. ನಾಲ್ಕನೇ ಟೆಸ್ಟ್ ಪಂದ್ಯ- ಮ್ಯಾಚ್ ಡ್ರಾ
  5. ಐದನೇ ಟೆಸ್ಟ್ ಪಂದ್ಯ- ಇಂಗ್ಲೆಂಡ್ ತಂಡಕ್ಕೆ 49 ರನ್​ಗಳ ಜಯ
andolanait

Recent Posts

ಗುಂಡ್ಲುಪೇಟೆ: ಮದ್ದೂರು ವಲಯದಲ್ಲಿ ಮೃತ ಹುಲಿ ಕಳೇಬರ ಪತ್ತೆ

ಮಹೇಂದ್ರ ಹಸಗೂಲಿ: ಗುಂಡ್ಲುಪೇಟೆ ತಾಲ್ಲೂಕು ವರದಿಗಾರರು ಗುಂಡ್ಲುಪೇಟೆ: ತಾಲ್ಲೂಕಿನ ಬಂಡೀಪುರ‌ ಹುಲಿ ಸಂರಕ್ಷಿತ ಪ್ರದೇಶದ ಮದ್ದೂರು ವಲಯದ ಮಾರಿಗುಡಿ ಬೀಟ್…

1 min ago

ಭಾರತದಲ್ಲಿ ಕಚ್ಚಾ ತೈಲ ಸಾಕಷ್ಟು ಲಭ್ಯವಿದೆ: ಪ್ರಧಾನಿ ನರೇಂದ್ರ ಮೋದಿ

ನವದೆಹಲಿ: ದೇಶದಲ್ಲಿ ಕಚ್ಚಾ ತೈಲ ಸಾಕಷ್ಟು ಲಭ್ಯವಿದೆ. ಭಾರತವು ಕಚ್ಚಾ ತೈಲಕ್ಕಾಗಿ ಸಾಕಷ್ಟು ಸಂಗ್ರಹಣಾ ಸೌಲಭ್ಯಗಳು ಮತ್ತು ವಿಶ್ವಾಸಾರ್ಹ ಪೂರೈಕೆ…

3 hours ago

ರಸ್ತೆ ಅಪಘಾತಗಳನ್ನು ತಡೆಗಟ್ಟಲು ಅಗತ್ಯ ಕ್ರಮ ಕೈಗೊಳ್ಳಿ: ಜಿಲ್ಲಾಧಿಕಾರಿ ಲಕ್ಷ್ಮೀಕಾಂತರೆಡ್ಡಿ

ಮೈಸೂರು: ರಸ್ತೆ ಅಪಘಾತದಿಂದ ಹಲವರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಆದ್ದರಿಂದ ರಸ್ತೆ ಅಪಘಾತಗಳನ್ನು ತಡೆಗಟ್ಟಲು ಕ್ರಮ ಕೈಗೊಳ್ಳಿ ಎಂದು ಜಿಲ್ಲಾಧಿಕಾರಿ ಲಕ್ಷ್ಮೀಕಾಂತರೆಡ್ಡಿ…

3 hours ago

ಪಾರಂಪರಿಕ ಕಟ್ಟಡಗಳ ಸಂರಕ್ಷಣೆಗೆ ಅನುದಾನ ಒದಗಿಸಿ: ಎಂಎಲ್‌ಸಿ ಕೆ.ಶಿವಕುಮಾರ್‌ ಆಗ್ರಹ

ಬೆಂಗಳೂರು: ಮೈಸೂರು ನಗರ ಸೇರಿದಂತೆ ರಾಜ್ಯದಲ್ಲಿರುವ ಪಾರಂಪರಿಕ ಕಟ್ಟಡಗಳ ಸಂರಕ್ಷಣೆಗೆ ಹೆಚ್ಚಿನ ಅನುದಾನ ಒದಗಿಸಬೇಕೆಂದು ಎಂಎಲ್‌ಸಿ ಕೆ.ಶಿವಕುಮಾರ್‌ ಒತ್ತಾಯಿಸಿದ್ದಾರೆ. ಈ…

3 hours ago

ಮಹೇಶ್‌ ಶೆಟ್ಟಿ ತಿಮರೋಡಿ ಗಡಿಪಾರು ಆದೇಶಕ್ಕೆ ಹೈಕೋರ್ಟ್‌ ಮಧ್ಯಂತರ ತಡೆ

ಬೆಂಗಳೂರು: ಮಹೇಶ್‌ ಶೆಟ್ಟಿ ತಿಮರೋಡಿ ಗಡಿಪಾರು ಮಾಡಿ ಹೊರಡಿಸಿದ್ದ ಆದೇಶಕ್ಕೆ ಹೈಕೋರ್ಟ್‌ ಮಧ್ಯಂತರ ತಡೆಯಾಜ್ಞೆ ನೀಡಿದೆ. ತಿಮರೋಡಿ ಅವರನ್ನು ದಕ್ಷಿಣ…

4 hours ago

ಇರಾನ್-‌ಇಸ್ರೇಲ್‌ ಸಂಘರ್ಷ: ನಾಳೆ ಸರ್ವಪಕ್ಷ ಸಭೆ ಕರೆದ ಕೇಂದ್ರ ಸರ್ಕಾರ

ನವದೆಹಲಿ: ಇರಾನ್‌-ಇಸ್ರೇಲ್‌ ಸಂಘರ್ಷ ಮುಂದುವರಿದಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ನಾಳೆ ಸರ್ವ ಪಕ್ಷಗಳ ಸಭೆ ಕರೆದಿದ್ದು, ವಿರೋಧ ಪಕ್ಷಗಳಿಗೆ ಪರಿಸ್ಥಿತಿ…

4 hours ago