ದೇಶ- ವಿದೇಶ

ಸಂವಿಧಾನದ ಬಲದಿಂದಲೇ ನಾನು ಮುಖ್ಯಮಂತ್ರಿ, ಪ್ರಧಾನಿಯಾದೆ | ಹೆಚ್.ಡಿ.ದೇವೇಗೌಡ

ಹೊಸದಿಲ್ಲಿ: ಅತ್ಯಂತ ಬಡ ರೈತನ ಮಗನಾದ ನನಗೆ ಈ ದೇಶದ ಸಂವಿಧಾನ ಎಲ್ಲವನ್ನೂ ಕೊಟ್ಟಿದೆ ಎಂದು ರಾಜ್ಯಸಭೆಯಲ್ಲಿ ಮಂಗಳವಾರ ಭಾವಪೂರ್ಣವಾಗಿ ಮಾತನಾಡಿದ ಮಾಜಿ ಪ್ರಧಾನಿಗಳಾದ ಹೆಚ್.ಡಿ.ದೇವೇಗೌಡರು, ಸಂವಿಧಾನದ ಬಲದಿಂದಲೇ ನಾನು ಮುಖ್ಯಮಂತ್ರಿ, ಪ್ರಧಾನಮಂತ್ರಿ ಆಗುವಂತೆ ಆಯಿತು ಎಂದರು.

ಸಂವಿಧಾನವನ್ನು ಅಳವಡಿಸಿಕೊಂಡ 75 ವರ್ಷಗಳ ಸಂದರ್ಭದಲ್ಲಿ ರಾಜ್ಯಸಭೆಯಲ್ಲಿ ಭಾಷಣ ಮಾಡಿದ ಅವರು; ಸಂವಿಧಾನ ನನಗೆ ಎಲ್ಲವನ್ನೂ ಕೊಟ್ಟಿದೆ. ಒಬ್ಬ ಬಡ ರೈತನ ಮಗನಾಗಿ, ದೂರದ ಹಳ್ಳಿಯಿಂದ ಮತ್ತು ಜಾತಿ ಸ್ತರದ ಕೆಳಮದಿಂದ ನಾನು ಮುಖ್ಯಮಂತ್ರಿ ಮತ್ತು ಪ್ರಧಾನಿಯಾಗಲು ಸಾಧ್ಯವಾಗಿದ್ದರೆ ಅದು ನಮ್ಮ ಸಂವಿಧಾನದಿಂದ ಮಾತ್ರ ಎಂದರು.

ಕಳೆದ 75 ವರ್ಷಗಳ ಅವಧಿಯಲ್ಲಿ ಸಂವಿಧಾನದ ಚೌಕಟ್ಟಿನಲ್ಲಿ ಭಾರತದ ಬೆಳೆದ ರೀತಿ, ಮಾಡಿದ ಸಾಧನೆಗಳ ಬಗ್ಗೆ ಮಾಜಿ ಪ್ರಧಾನಿಗಳು ಅನೇಕ ಮಹತ್ವಪೂರ್ಣ ಅಂಶಗಳನ್ನು ಸದನದಲ್ಲಿ ಹಂಚಿಕೊಂಡರು. ಆಧುನಿಕ ಭಾರತವನ್ನು ರೂಪಿಸುವಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರ ದೂರದೃಷ್ಟಿಯ ಸಂವಿಧಾನ ಅಸಾಧಾರಣ ಕೊಡುಗೆ ನೀಡಿದೆ. ಬಾಬಾ ಸಾಹೇಬ್ ಅವರ ನೇತೃತ್ವದಲ್ಲಿ ರಚನೆಯಾದ ನಮ್ಮ ಸಂವಿಧಾನವು ಅನೇಕ ಒತ್ತಡಗಳು ಮತ್ತು ನಮ್ಮ ಕಾಲದ ರಾಜಕೀಯವನ್ನು ತಡೆದುಕೊಂಡು ನಿಂತಿದೆ” ಎಂದು ಅವರು ಹೇಳಿದರು.

ಸಂವಿಧಾನದ ಮೇಲಿನ ಚರ್ಚೆಯ ಸಂದರ್ಭದಲ್ಲಿ ತುರ್ತು ಪರಿಸ್ಥಿತಿ ಸಂದರ್ಭವನ್ನು ನೆನಪು ಮಾಡಿಕೊಂಡ ಮಾಜಿ ಪ್ರಧಾನಿಗಳು; ತುರ್ತು ಪರಿಸ್ಥಿತಿಯ ಕಾಲ ಕರಾಳ ಅವಧಿ. ಐವತ್ತು ವರ್ಷಗಳ ಹಿಂದೆ ತುರ್ತು ಪರಿಸ್ಥಿತಿಯನ್ನು ಘೋಷಿಸಿದಾಗ, ಈ ರಾಷ್ಟ್ರದ ಬಹುತೇಕ ರಾಜಕೀಯ ವಿರೋಧಿಗಳೆಲ್ಲರೂ ಜೈಲು ಪಾಲಾದರು. ಸರಕಾರದ ವಿರುದ್ಧ ಟೀಕೆ ಮಾಡುತ್ತಿದ್ದವರು ಎಲ್ಲರನ್ನೂ ಜೈಲಿಗೆ ಕಳುಹಿಸಲಾಯಿತು ಎಂದು ಅವರು ಹೇಳಿದರು.

“ನನ್ನನ್ನೂ ಜೈಲಿಗೆ ಕಳುಹಿಸಲಾಯಿತು. ನನ್ನ ಸೆರೆವಾಸವು ನನ್ನ ತಂದೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರಿ ಕುಟುಂಬದ ಮೇಲೆ ಮಾನಸಿಕ ಒತ್ತಡ ಉಂಟು ಮಾಡಿತು. ಕೊನೆಗೆ ಆ ನೋವಿನಲ್ಲಿಯೇ ತಂದೆಯವರು ವಿಧಿವಶರಾದರು. ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಟ್ಟಿರುವ ಮತ್ತು ತಮ್ಮ ರಾಜಕೀಯ ನಂಬಿಕೆಗಳ ಜತೆ ನಿಂತಿದ್ದ ಅನೇಕರಿಗೆ ಇದು ಆಘಾತಕಾರಿ ಸಮಯವಾಗಿತ್ತು” ಎಂದು ದೇವೇಗೌಡರು ಭಾವುಕರಾಗಿ ಹೇಳಿದರು.

ತುರ್ತು ಪರಿಸ್ಥಿತಿ ಅವಧಿಯಲ್ಲಿ ಭಾರತ ಅನೇಕ ಪಾಠಗಳನ್ನು ಕಳಿತುಕೊಂಡಿತು. ಆ ಸಮಯದಲ್ಲಿಯೇ ರಾಷ್ಟ್ರವು ಸಂವಿಧಾನವು ನಮಗೆ ನೀಡಿದ ಸ್ವಾತಂತ್ರ್ಯ ಎಂತಹುದು ಎಂಬುದನ್ನು ಅರಿತುಕೊಂಡಿತು ಎಂದ ಮಾಜಿ ಪ್ರಧಾನಿಗಳು; ಯುವ ಪೀಳಿಗೆಯು ಪ್ರಜಾಪ್ರಭುತ್ವವನ್ನು ಸಂರಕ್ಷಿಸಲು ತುರ್ತು ಪರಿಸ್ಥಿತಿ ಸಮಯದಲ್ಲಿ ಅನೇಕರು ಮಾಡಿದ ತ್ಯಾಗವನ್ನು ಸ್ಮರಿಸಬೇಕೆಂದು ಮನವಿ ಮಾಡಿದರು.

“ನಮ್ಮ ಸಂವಿಧಾನ ವಿಶ್ವದ ಅತ್ಯುತ್ತಮ ಸಂವಿಧಾನಗಳಲ್ಲಿ ಒಂದು. ಅಂತಹ ಮಹೋನ್ನತ ಸಂವಿಧಾನವನ್ನು ನಾವು ಹೊಂದಿದ್ದೇವೆ. ಇದರ ಸಂರಚನೆ ನಮ್ಮ ವೈವಿಧ್ಯತೆ ಮತ್ತು ಒಕ್ಕೂಟ ವ್ಯವಸ್ಥೆಯ ರಚನೆಯನ್ನು ಗುರುತಿಸುವಾಗ ಪ್ರಜಾಪ್ರಭುತ್ವದ ವಿವಿಧ ಸಾಂಸ್ಥಿಕ ಸ್ತಂಭಗಳ ನಡುವೆ ಅಧಿಕಾರದ ಸಮತೋಲನವನ್ನು ಸಂವಿಧಾನವು ಅತ್ಯಂತ ಬಲವಾಗಿ ಎತ್ತಿ ಹಿಡಿದಿದೆ” ಎಂದು ಅವರು ಹೇಳಿದರು.

1977ರ ನಂತರ ಭಾರತದಲ್ಲಿ ಸಮ್ಮಿಶ್ರ ಸರಕಾರಗಳ ಯಶಸ್ಸು ಸಂವಿಧಾನದ ಸಧೃಢತೆಗೆ ಹಿಡಿದ ಕನ್ನಡಿ ಎಂದ ಅವರು; ನಾನು ಮೊದಲ ಬಾರಿಗೆ 13 ಪಕ್ಷಗಳ ಒಕ್ಕೂಟವನ್ನು ಮುನ್ನಡೆಸಿದ್ದೇನೆ. ಆ ಸರಕಾರದ ಆರ್ಥಿಕ ಸಾಧನೆಯ ಪ್ರಜಾಪ್ರಭುತ್ವದೆಡೆಗಿನ ಹೆಗ್ಗುರುತುಗಳನ್ನು ಗಮನಿಸಿದರೆ ನಮ್ಮ ಸಂವಿಧಾನದ ಶಕ್ತಿ ಎಂತದ್ದು ಎನ್ನುವುದು ಅರ್ಥವಾಗುತ್ತದೆ. ನಾನು ಅನುಸರಿಸಿದ ಸರಳ ನಿಯಮವೆಂದರೆ, ನೀವು ಸಂವಿಧಾನವನ್ನು ನಿಕಟವಾಗಿ ಮತ್ತು ನಿಷ್ಠೆಯಿಂದ ಅನುಸರಿಸಿದರೆ, ನಾವು ದೊಡ್ಡ ತಪ್ಪುಗಳನ್ನು ತಪ್ಪಿಸಬಹುದು ಎಂದರು.

ಸಂವಿಧಾನದ ಪಾವಿತ್ರ್ಯತೆಯನ್ನು ಎತ್ತಿ ಹಿಡಿಯಲು ನಿರಂತರ ಪ್ರಯತ್ನಗಳು ನಡೆಯಬೇಕು ಎಂದು ಕರೆ ನೀಡಿದ ಅವರು; ಇಂತಹ ಪ್ರಯತ್ನವನ್ನು ನಾವು ಎಂದಿಗೂ ಕೈಬಿಡಬಾರದು ಎಂದರು. ಹಾಗೂ ಸಂವಿಧಾನಕ್ಕೆ ಕೊಡುಗೆ ನೀಡಿದ ಡಾ.ಅಂಬೇಡ್ಕರ್ ಮತ್ತು ಇತರರಿಗೆ ಶ್ರದ್ಧಾಂಜಲಿ ಸಲ್ಲಿಸಿದರು.

“ನಾವು ನಮ್ಮ ಸಂವಿಧಾನ ಅಳವಡಿಸಿಕೊಂಡ ಶತಮಾನೋತ್ಸವವನ್ನು ಆಚರಿಸೋಣ ಮತ್ತು ಈ ರಾಷ್ಟ್ರದ ಭವ್ಯ ಭವಿಷ್ಯದಲ್ಲಿ ಅದರ ಅನೇಕ ಶತಮಾನಗಳನ್ನು ಆಚರಿಸೋಣ” ಎಂದು ಅವರು ಕರೆ ನೀಡಿದರು.

ಚಂದು ಸಿಎನ್

ಮೈಸೂರು ಜಿಲ್ಲೆಯ ಹುಣಸೂರಿನ ಚಲ್ಲಹಳ್ಳಿ ಗ್ರಾಮದವನಾದ ನಾನು ಒಂದು ದಶಕದಿಂದ ಮೈಸೂರಿನಲ್ಲಿ ನೆಲೆಸಿದ್ದೇನೆ. ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಪತ್ರಿಕೋದ್ಯಮ ಪದವಿ ಪಡೆದು ಅಂದಿನಿಂದಲೇ ಹವ್ಯಾಸಿ ಪತ್ರಕರ್ತನಾಗಿ ವೃತ್ತಿ ಆರಿಸಿಕೊಂಡೆ. ನಂತರ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ವಿಷಯದಲ್ಲಿ ಸ್ನಾತಕೋತ್ತರ ಪದವಿ ಮುಗಿಸಿದ ಬಳಿಕ ಪತ್ರಿಕೋದ್ಯಮ ಕ್ಷೇತ್ರದಲ್ಲಿ 2 ವರ್ಷಗಳ ಕಾಲ ಅನುಭವ ಪಡೆದಿದ್ದೇನೆ. ಸದ್ಯ ಮೈಸೂರಿನ ಪ್ರತಿಷ್ಠಿತ ಆಂದೋಲನ ಪತ್ರಿಕೆಯ ಡಿಜಿಟಲ್‌ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಪ್ರಾಚೀನ ಪಳಿಯುಳಿಕೆ ಹಾಗೂ ಇತಿಹಾಸದ ಕಡೆ ಎಲ್ಲಿಲ್ಲದ ಒಲವು. ಪ್ರವಾಸ, ಪುಸ್ತಕ ಓದುವುದು ನೆಚ್ಚಿನ ಹವ್ಯಾಸಗಳಾಗಿವೆ. ಮೊಬೈಲ್‌ ಸಂಖ್ಯೆ: 9164535321.

Recent Posts

ನೀಟ್-ಯುಜಿ ಮರುಪರೀಕ್ಷೆ : ಪರೀಕ್ಷೆ ಬರೆದ 22 ಲಕ್ಷ ವಿದ್ಯಾರ್ಥಿಗಳು

ಹೊಸದಿಲ್ಲಿ : ದೇಶದಾದ್ಯಂತ ವೈದ್ಯಕೀಯ ಕೋರ್ಸ್‌ಗಳ ಪ್ರವೇಶಕ್ಕಾಗಿ ನಡೆದ ನೀಟ್-ಯುಜಿ ಮರುಪರೀಕ್ಷೆಯಲ್ಲಿ 22 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆದರು. ದೇಶದ…

8 hours ago

ತಮಿಳುನಾಡು ಸೀಫುಡ್‌ ಘಟಕದಲ್ಲಿ ಅನಿಲ ಸೋರಿಕೆ ; 7 ಜನ ಸಾವು, ಹಲವರು ಗಂಭೀರ

ಚೆನ್ನೆ : ಇಲ್ಲಿನ ತಿರುವಳ್ಳೂರಿನಲ್ಲಿರುವ ಸೀಗಡಿ ಸಂಸ್ಕರಣಾ ಕಾರ್ಖಾನೆಯಲ್ಲಿ ಭಾನುವಾರ ಮಧ್ಯಾಹ್ನ ಅಮೋನಿಯಾ ಅನಿಲ ಸೋರಿಕೆಯಾಗಿ, ಏಳು ಮಂದಿ ಮಹಿಳಾ…

9 hours ago

ಬೆಂಗಾಳಿಗಳನ್ನು ಬಾಂಗ್ಲಾ ವಲಸಿಗರೆಂದು ಗ್ರಹಿಕೆ ; ಮೈಸೂರು ರೈಲ್ವೆ ನಿಲ್ದಾಣದಲ್ಲಿ ಕೆಲಕಾಲ ಆತಂಕ

ಆಧಾರ್‌ ಕಾರ್ಡ್‌ ಪರಿಶೀಲನೆ ನಂತರ ಶಂಕೆ ನಿವಾರಣೆ ಮೈಸೂರು : ಪಶ್ಚಿಮ ಬಂಗಾಳದಿಂದ ಬಂದವರನ್ನು ಬಾಂಗ್ಲಾ ದೇಶದ ನಿವಾಸಿಗಳೆಂದು ತಿಳಿದ…

10 hours ago

ಚಾ.ನಗರ | ಸಿದ್ದಲಿಂಗಪುರ ಬಳಿ ಹುಲಿ ದಾಳಿ ; 4 ಮೇಕೆಗಳು ಸಾವು

ರೈತರು, ದನಗಾಹಿಗಳಲ್ಲಿ ಆತಂಕ ಬೇಗ ಹುಲಿ ಸೆರೆ ಹಿಡಿಯಲು ಆಗ್ರಹ ಚಾಮರಾಜನಗರ : ತಾಲ್ಲೂಕಿನ ಸಿದ್ದಲಿಂಗಪುರದ ಸಮೀಪ ಭಾನುವಾರ ಮಧ್ಯಾಹ್ನ…

11 hours ago

ಕರ್ನಾಟಕದಲ್ಲಿ ಮುಂಗಾರು ವಿಳಂಬ: ಕಂಗಾಲಾದ ರೈತರು

ಬೆಂಗಳೂರು: ಕರ್ನಾಟಕದಲ್ಲಿ ಮುಂಗಾರು ವಿಳಂಬವಾಗಿದ್ದು, ಇದು ಉತ್ಪಾದನೆಯ ಮೇಲೆ ಪರಿಣಾಮ ಬೀರಬಹುದು. ಕೃಷಿ ಇಲಾಖೆಯ ಅಧಿಕಾರಿಗಳು ಬಿತ್ತನೆ ಗುರಿಯ ಶೇಕಡಾ…

15 hours ago

ಇದು ಕೇವಲ ಆರಂಭ: ಮುಂದೆ ಹೋರಾಟ ದೊಡ್ಡಮಟ್ಟದಲ್ಲಿ ಇದೆ ಎಂದ ನಿಖಿಲ್‌ ಕುಮಾರಸ್ವಾಮಿ

ರಾಮನಗರ: ಟೌನ್‌ಶಿಪ್ ಯೋಜನೆ ವಿರೋಧಿಸಿ ಜೆಡಿಎಸ್‌ ಕೈಗೊಂಡಿರುವ ಕೈಗೊಂಡಿರುವ ಬೃಹತ್‌ ಪಾದಯಾತ್ರೆಯಲ್ಲಿ ಮಾತನಾಡಿದ ಯುವನಾಯಕ ನಿಖಿಲ್‌ ಕುಮಾರಸ್ವಾಮಿ ಇದು ಕೇವಲ…

15 hours ago