ಮೈಸೂರು ನಗರ

ಮೇಲು-ಕೀಳು ಕಳೆಯಲಿ ; ಸರ್ವರೂ ಒಂದೇ ಎಂಬ ಮನೋಭಾವ ಮೂಡಲಿ : ಮೋಹನ್‌ ಭಾಗವತ್‌

ಮೈಸೂರು : ಮೇಲು-ಕೀಳು ಎಂಬ ಮನೋಭಾವ ಕಳೆದು ಸರ್ವರೂ ಒಂದೇ ಎಂಬ ಏಕ ಭಾವ ಭಾರತೀಯರಲ್ಲಿ ಮೂಡಬೇಕು ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸರ ಸಂಘಚಾಲಕ ಮೋಹನ್ ಭಾಗವತ್ ಹೇಳಿದರು.

ನಗರದ ಚಾಮುಂಡಿಬೆಟ್ಟದ ತಪ್ಪಲಿನಲ್ಲಿರುವ ಸುತ್ತೂರು ಶಾಖಾಮಠದ ಆವರಣದಲ್ಲಿ ಜೆಎಸ್‌ಎಸ್ ಮಹಾವಿದ್ಯಾಪೀಠದ ಸುವರ್ಣ ಮಹೋತ್ಸವದ 15ನೇ ವಿಶೇಷ ಉಪನ್ಯಾಸದಲ್ಲಿ ‘ರಾಷ್ಟ್ರೀಯ ಅಭಿವೃದ್ಧಿಗೆ ಸಾಮಾಜಿಕ ಸೌಹಾರ್ದತೆ ಪ್ರೇರಕ’ ವಿಷಯ ಕುರಿತು ಅವರು ಮಾತನಾಡಿದರು.

ಸಹೋದರರನ್ನು ಅಸ್ಪೃಶ್ಯರಾಗಿ ಶತಮಾನಗಳಿಂದ ದೂರವಿಡಲಾಗಿದೆ. ಹೀಗಾಗಿ ಅಂಬೇಡ್ಕರ್ ಅವರ ಸಂವಿಧಾನ ಸಭೆಯ ಭಾಷಣಗಳನ್ನು ಮತ್ತೊಮ್ಮೆ ಓದಿಕೊಳ್ಳಬೇಕಿದೆ. ರಾಜಕೀಯ ಮತ್ತು ಆರ್ಥಿಕ ಸಮಾನತೆಗಿಂತ ಸಾಮಾಜಿಕ ಸಮಾನತೆ ಮುಖ್ಯ ಎಂದು ಅಂಬೇಡ್ಕರ್ ಪ್ರತಿಪಾದಿಸಿದ್ದಾರೆ. ಸ್ವಾತಂತ್ರ್ಯ ಮತ್ತು ಸಮಾನತೆಯನ್ನು ಬೆಸೆಯುವ ಕೊಂಡಿಯೇ ಬಂಧುತ್ವ. ಈ ಬಂಧುತ್ವ-ಭಾವ ಇಲ್ಲದಿದ್ದರೆ ದೇಶದ ಸ್ವಾತಂತ್ರ್ಯ ಕಾಪಾಡಿಕೊಳ್ಳುವುದು ಕಷ್ಟ ಎಂದರು.

ಭಾಷೆ, ಜಾತಿ, ಪಂಗಡಗಳನ್ನು ಮೀರಿ ಬಂಧುತ್ವ ನೆಲೆಗೊಳ್ಳಬೇಕು. ಅಸ್ತಿತ್ವಕ್ಕಾಗಿ ಮತ್ತೊಬ್ಬರ ವಿರುದ್ಧ ಹೋರಾಟ ನಡೆಸುವುದು ಪಾಶ್ಚಾತ್ಯ ಪರಿಕಲ್ಪನೆಯಾಗಿದೆ. ಆದರೆ, ಭಾರತೀಯರು ಭ್ರಾತೃತ್ವ ಮತ್ತು ಪರಸ್ಪರ ಸಹಾಯದೊಂದಿಗೆ ನಾಗರಿಕತೆ ಕಟ್ಟಿದ್ದಾರೆ. ನಮ್ಮ ಸಮಾಜವು, ಪರೋಪಕಾರವೇ ಸೇವೆ, ಕರ್ತವ್ಯವೇ ಜೀವನದ ಪರಮ ಗುರಿಯೆಂದು ತಿಳಿದಿದೆ ಎಂದು ವಿವರಿಸಿದರು.

ಪಾಶ್ಚಾತ್ಯ ದೇಶಗಳಲ್ಲಿ ಸೊಸೈಟಿ ಎಂಬ ಪರಿಕಲ್ಪನೆ ಸಾಮಾಜಿಕ ಒಪ್ಪಂದದ ಸಿದ್ಧಾಂತದ ಮೇಲೆ ನಿರ್ಮಾಣವಾಗಿದೆ. ಅಲ್ಲಿ ಜನರು ಪರಸ್ಪರ ಸಹಕಾರ ಮತ್ತು ಲಾಭದ ಉದ್ದೇಶದಿಂದ ಒಟ್ಟಿಗೆ ಬದುಕುತ್ತಾರೆ. ಆದರೆ, ಭಾರತೀಯ ಸಮಾಜದ ಪರಿಕಲ್ಪನೆ ಅದಕ್ಕಿಂತ ಭಿನ್ನವಾಗಿದೆ. ಭಾರತದಲ್ಲಿ ಸಮಾಜವೆಂದರೆ ಕೇವಲ ಜನರ ಗುಂಪು ಅಥವಾ ಒಪ್ಪಂದದ ಆಧಾರದ ಮೇಲೆ ನಿರ್ಮಾಣವಾದ ವ್ಯವಸ್ಥೆಯಲ್ಲ, ದೀರ್ಘಕಾಲ ಒಟ್ಟಿಗೆ ಬದುಕಿ, ಪರಸ್ಪರ ಆತ್ಮೀಯತೆ, ಒಂದೇತನದ ಭಾವನೆ ಹಾಗೂ ಸಾಮೂಹಿಕ ಗುರಿಯನ್ನು ಹೊಂದಿರುವ ಜನರ ಸಮೂಹವೇ ಸಮಾಜ. ಕುಟುಂಬದಿಂದ ಆರಂಭವಾಗುವ ಈ ಒಗ್ಗಟ್ಟು ಪರಿಸರ, ಸಂಸ್ಕೃತಿ ಮತ್ತು ಜೀವನ ಮೌಲ್ಯಗಳ ಮೂಲಕ ವಿಸ್ತಾರಗೊಳ್ಳುತ್ತದೆ ಎಂದರು.

ನೀವು ನನಗೆ ಉಪಾಕಾರ ಮಾಡಿದರೂ ಮಾಡದಿದ್ದರೂ ನೀವು ನನ್ನವರೇ. ಆದ್ದರಿಂದ ನಾನು ಮಾಡುವ ಪ್ರತಿಯೊಂದು ಕಾರ್ಯವೂ ಇತರರ ಹಿತಕ್ಕಾಗಿ ಇರಬೇಕು ಎಂಬುದು ಭಾರತೀಯ ಸಮಾಜದ ಮೂಲ ಭಾವನೆ. ಪರೋಪಕಾರ ಮತ್ತು ಸೇವೆಯ ಮೌಲ್ಯಗಳೊಂದಿಗೆ ಉನ್ನತ ಜೀವನ ಸಾಽಸುವುದೇ ಭಾರತೀಯ ಸಮಾಜದ ಗುರಿಯಾಗಿದೆ ಎಂದು ಅಭಿಪ್ರಾಯಪಟ್ಟರು.

ರಾಷ್ಟ್ರವೆಂದರೆ ಕೇವಲ ರಾಜಕೀಯ ವ್ಯವಸ್ಥೆ ಅಥವಾ ಭೌಗೋಳಿಕ ಗಡಿಯಲ್ಲ. ಭೂಮಿ, ಜನರು, ಸಂಸ್ಕೃತಿ ಮತ್ತು ಸಾಮೂಹಿಕ ಚೇತನವೇ ರಾಷ್ಟ್ರದ ಮೂಲ ಅಂಶಗಳಾಗಿವೆ. ಭಾರತದಲ್ಲಿ ವಿವಿಧ ಆಡಳಿತ ವ್ಯವಸ್ಥೆ ಗಳು ಮತ್ತು ರಾಜ್ಯಗಳು ಇದ್ದರೂ ದೇಶದ ಏಕತೆಯ ಭಾವನೆ ಭೂಮಿಯೊಂದಿಗೆ ಹೊಂದಿರುವ ಆತ್ಮೀಯ ಸಂಬಂಧದಿಂದಲೇ ರೂಪುಗೊಂಡಿದೆ ಎಂದು ವಿಶ್ಲೇಷಿಸಿದರು.

ಭಾರತೀಯ ಸಮಾಜದ ಮೂಲಭೂತ ತತ್ವ ಅಂತರಂಗದಲ್ಲಿ ಏಕತೆ ಸಾಧಿಸುವುದೇ ಆಗಿದೆ. ಮಾನವ, ಸಮಾಜ ಮತ್ತು ಸೃಷ್ಟಿ ಪರಸ್ಪರ ಸಂಬಂಧ ಹೊಂದಿವೆ. ಮನುಷ್ಯ ಕೇವಲ ದೇಹ ಅಥವಾ ಮನಸ್ಸಲ್ಲ; ಆತ್ಮ ಎಂಬ ಶಕ್ತಿಯು ಇವೆಲ್ಲವನ್ನೂ ಒಂದಾಗಿ ಕಟ್ಟುತ್ತದೆ ಎಂದು ಹೇಳಿದರು.

ಆಂದೋಲನ ಡೆಸ್ಕ್

Recent Posts

ಪಿರಿಯಾಪಟ್ಟಣ | ವಿಶೇಷಚೇತನರಿಗೆ ವಿತರಣೆಯಾಗದ ಸಾಧನಗಳು

ಫಲಾನುಭವಿಗಳಿಗೆ ವಿತರಿಸಲು ಶಾಸಕರ ದಿನಾಂಕ ಸಿಗದೆ ಕೊಠಡಿಯಲ್ಲಿ ತುಂಬಿ ಬೀಗ ಹಾಕಿದ ಅಧಿಕಾರಿಗಳು ಪಿರಿಯಾಪಟ್ಟಣ : ಕೇಂದ್ರ ಸರ್ಕಾರದ ಅಲಿಂಕೋ…

1 hour ago

3 ತಿಂಗಳಿಂದ ಬಾರದ ಮಾಸಾಶನ ; ಬಡಜನರು ಕಂಗಾಲು

ವೃದ್ಧರು, ವಿಧವೆಯರು, ಅಂಗವಿಕಲರಿಗೆ ಬಾರದ ಮಾಸಿಕ ಹಣ ; ಕಚೇರಿಗಳಿಗೆ ನಿತ್ಯ ಅಲೆದಾಟ ಎಚ್.ಡಿ.ಕೋಟೆ : ವೃದ್ಧರು, ವಿಧವೆಯರು, ಅಂಗವಿಕಲರೂ…

2 hours ago

ಗ್ರಾಪಂನಲ್ಲೇ ವಾಸಸ್ಥಳ ದೃಢೀಕರಣ ಪತ್ರ ; ಇನ್ನು ಹೋಬಳಿ ಕೇಂದ್ರಗಳಿಗೆ ಅಲೆಯುವಂತಿಲ್ಲ: ಸರ್ಕಾರದ ತೀರ್ಮಾನ

ಬೆಂಗಳೂರು : ಗ್ರಾಮೀಣ ಜನರಿಗೆ ರಾಜ್ಯ ಸರ್ಕಾರ ಮಹತ್ವದ ರಿಲೀಫ್ ನೀಡಿದ್ದು, ಇನ್ನು ಮುಂದೆ ವಾಸಸ್ಥಳ ದೃಢೀಕರಣ ಪತ್ರವನ್ನು ತಮ್ಮ…

2 hours ago

ಆರ್.ಟಿ.ವಿಠ್ಠಲಮೂರ್ತಿ ಅವರ ವಾರದ ಅಂಕಣ : ರಾಜ್ಯ ಕಾಂಗ್ರೆಸ್‌ನಲ್ಲಿ ಒಗ್ಗಟ್ಟು : ಬಿಜೆಪಿ -ಜಾ.ದಳ ನಾಯಕರಿಗೆ ಆಘಾತ

ಪರಿಷತ್ ಚುನಾವಣೆ ಫಲಿತಾಂಶದ ಮೂಲಕ ಭಿನ್ನಮತೀಯರು, ಮೈತ್ರಿ ಕೂಟಕ್ಕೆ ಎಚ್ಚರಿಕೆ ಸಂದೇಶ ರವಾನಿಸಿದ ಡಿಕೆಶಿ ರಾಜ್ಯ ಕಾಂಗ್ರೆಸ್‌ನಲ್ಲಿ ನಡೆಯುತ್ತಿರುವ ಬೆಳವಣಿಗೆಗಳನ್ನು…

5 hours ago

ಆಂದೋಲನ ಸಂಪಾದಕೀಯ | ಅಡ್ಡ ಮತದಾನ : ರಾಜಕಾರಣದ ನೈತಿಕ ದಿವಾಳಿತನ

ಅಡ್ಡ ಮತದಾನ ಮಾಡಿ ‘ಆತ್ಮ ಸಾಕ್ಷಿ’ಯೆಂಬ ತಡೆಗೋಡೆಯ ರಕ್ಷಣೆ ಪಡೆದಿರುವ ಶಾಸಕರ ಪತ್ತೆಗೆ ‘ಸತ್ಯಶೋಧನೆ’, ‘ಆಣೆ-ಪ್ರಮಾಣ’ಗಳೆಲ್ಲವೂ ಗುಡ್ಡ ಅಗೆದು ಇಲಿ…

5 hours ago

ಮಹಾಪಂಚ್‌ ಕಾರ್ಟೂನ್‌

ಮಹಾಪಂಚ್‌ ಕಾರ್ಟೂನ್‌ | ಜೂನ್‌ 22 ಸೋಮವಾರ

6 hours ago