‘ಬೆಂಗಳೂರು ಬಾಯ್ಸ್’ ನಂತರ ಸಚಿವ ಚೆಲುವರಾಯಸ್ವಾಮಿ ಮಗ ಸಚಿನ್ ಚೆಲುವರಾಯಸ್ವಾಮಿ ಸದ್ದಿಲ್ಲದೆ ಹೊಸ ಚಿತ್ರವೊಂದರಲ್ಲಿ ನಟಿಸುತ್ತಿದ್ದಾರೆ. ತಮ್ಮ ಮೊದಲ ಚಿತ್ರದಂತೆ, ಈ ಬಾರಿಯೂ ಚಿತ್ರವನ್ನು ಅವರ ತಾಯಿ ಬಿ.ಕೆ. ಧನಲಕ್ಷ್ಮೀ ನಿರ್ಮಿಸಿದರೆ, ನಟ ರಾಜವರ್ಧನ್ ಚಿತ್ರಕ್ಕೆ ಕ್ರಿಯೇಟಿವ್ ಹೆಡ್ ಆಗಿ ಕೆಲಸ ಮಾಡುತ್ತಿದ್ದಾರೆ. ಚಿತ್ರಕ್ಕೆ ‘ಕಮಲ್ ಶ್ರೀದೇವಿ’ ಎಂಬ ಹೆಸರಿಡಲಾಗಿದ್ದು, ಇತ್ತೀಚೆಗೆ ಚಿತ್ರದ ಶೀರ್ಷಿಕೆ ಅನಾವರಣವಾಗಿದೆ.
‘ಕಮಲ್ ಶ್ರೀದೇವಿ’ ಚಿತ್ರದಲ್ಲಿ ಸಚಿನ್ ಜೊತೆಗೆ ಸಂಗೀತಾ ಭಟ್, ಕಿಶೋರ್, ರಮೇಶ್ ಇಂದಿರಾ, ಮಿತ್ರ, ಎಂ.ಎಸ್ ಉಮೇಶ್ ಮುಂತಾದವರು ನಟಿಸಿದ್ದು, ‘ಗಜರಾಮ’ ಚಿತ್ರವನ್ನು ನಿರ್ದೇಶನ ಮಾಡಿದ್ದ ವಿ.ಎ. ಸುನೀಲ್ ಕುಮಾರ್ ನಿರ್ದೇಶನ ಮಾಡಿದ್ದಾರೆ.
ಈ ಚಿತ್ರದ ಕುರಿತು ಮಾತನಾಡುವ ನಿರ್ದೇಶಕ ಸುನೀಲ್, ‘ಇದೊಂದು ಮರ್ಡರ್ ಮಿಸ್ಟ್ರಿ ಚಿತ್ರ. ಪೋಸ್ಟರ್ನಲ್ಲಿರುವ ಏಳು ಪ್ರಾಣಿ-ಪಕ್ಷಿಗಳು ಒಂದೊಂದು ಪಾತ್ರವನ್ನು ಪ್ರತಿನಿಧಿಸುತ್ತದೆ. ಕೊನೆಯವರೆಗೂ ಯಾರು ಕೊಲೆ ಮಾಡಿದ್ದಾರೆ ಎಂದು ಗೊತ್ತಾಗುವುದಿಲ್ಲ. ಪ್ರೇಕ್ಷಕರನ್ನು ಸೀಟಿನಂಚಿನಡಿ ಕೂರಿಸುವಂತಹ ಒಂದು ಚಿತ್ರ ಇದು. ಯಾರಿಗೂ ಬೇಸರವಾಗದಂತೆ, ಖುಷಿಯಾಗುವಂತಹ ಚಿತ್ರ’ ಎಂದು ಹೇಳಿದರು.
ಈ ಚಿತ್ರಕ್ಕೂ, ಕಮಲ್ ಹಾಸನ್ ಮತ್ತು ಶ್ರೀದೇವಿ ಅವರಿಗೂ ಯಾವುದೇ ಸಂಬಂಧವಿಲ್ಲ ಎನ್ನುವ ಸಚಿನ್, ‘ಚಿತ್ರದಲ್ಲಿ ಕಮಲ್ ಮತ್ತು ಶ್ರೀದೇವಿ ಪಾತ್ರಗಳು ಪ್ರಮುಖ ಪಾತ್ರ ವಹಿಸುವುದರಿಂದ, ಆ ಹೆಸರನ್ನು ಇಟ್ಟಿದ್ದೇವೆ. ಇದು ಬಯೋಪಿಕ್ ಅಲ್ಲ. ಕಮಲ್ ಮತ್ತು ಶ್ರೀದೇವಿ ಎಂಬುದು ಪಾತ್ರಗಳ ಹೆಸರು. ಒಂದು ಕ್ರೈಮ್ ನಡೆಯುತ್ತದೆ. ಅದನ್ನು ಯಾರು ಮಾಡಿದರು ಎಂಬುದೇ ಚಿತ್ರದ ಕಥೆ. ಚಿತ್ರದಲ್ಲೊಂದು ಚಿತ್ರವಿದೆ. ಆ ಚಿತ್ರದ ನಿರ್ದೇಶಕನಾಗಿ ನಾನು ಅಭಿನಯಿಸುತ್ತಿದ್ದೇನೆ. ಈ ಮಧ್ಯೆ ಒಂದು ಕೊಲೆ ಆಗಿ, ಅದರಿಂದ ಏನೆಲ್ಲಾ ಆಗುತ್ತದೆ ಎಂಬುದು ಚಿತ್ರದ ಕಥೆ. ಈಗಾಗಲೇ ಶೇ. 70ರಷ್ಟು ಚಿತ್ರೀಕರಣ ಮುಗಿದಿದೆ. ಬಾಕಿ ಇರುವ ಚಿತ್ರೀಕರಣ ಸದ್ಯದಲ್ಲೇ ಮುಗಿಯಲಿದೆ’ ಎಂದರು.
ಈ ಚಿತ್ರಕ್ಕೆ ‘ಮಮ್ಮಿ’ ಚಿತ್ರದ ನಿರ್ದೇಶಕ ಲೋಹಿತ್ ಕಥೆ ಕೊಟ್ಟರಂತೆ. ಇನ್ನು, ‘ಗೊಂಬೆಗಳ ಲವ್’ ಖ್ಯಾತಿಯ ಸಂತು ಶೀರ್ಷಿಕೆ ಕೊಟ್ಟರು ಎನ್ನುವ ರಾಜವರ್ಧನ್, ‘ಈ ಕಥೆ ನನಗಿಂತ ಸಚಿನ್ಗೆ ಹೆಚ್ಚು ಹೊಂದುತ್ತದೆ ಎಂದನಿಸಿತು. ಹಾಗಾಗಿ, ಅವರಿಗೆ ಹೇಳಿದೆ. ‘ಗಜರಾಮ’ ಚಿತ್ರದಲ್ಲಿ ಕೆಲಸ ಮಾಡುವಾಗ ಸುನೀಲ್ ಅವರ ಕೆಲಸ ನೋಡಿದ್ದೆ. ಅವರ ಕೆಲಸ ಇಷ್ಟವಾಗಿ, ಚಿತ್ರ ನಿರ್ದೇಶಿಸುವುದಕ್ಕೆ ಅವರನ್ನು ಕೇಳಿದೆ. ಇದೊಂದು ಕಂಟೆಂಟ್ ಇರುವ ಚಿತ್ರ. ಹೀರೋಯಿಸಂ ಇಲ್ಲದ, ಕಥೆಗೆ ಏನು ಬೇಕೋ ಅಷ್ಟು ಮಾತ್ರ ಇರುವ ಚಿತ್ರ ಇದು. ಏಳು ಪಾತ್ರಗಳ ಸುತ್ತ ಸುತ್ತುವ ಚಿತ್ರ ಇದು. ಈ ಪೋಸ್ಟರ್ನಲ್ಲೇ ಚಿತ್ರದ ಕಥೆ ಇದೆ. ಈಗಾಗಲೇ 56 ದಿನಗಳ ಕಾಲ ಚಿತ್ರೀಕರಣ ಮುಗಿದಿದೆ. 10 ದಿನಗಳ ಚಿತ್ರೀಕರಣ ಬಾಕಿ ಇದೆ’ ಎಂದರು.
‘ಕಮಲ್ ಶ್ರೀದೇವಿ’ ಚಿತ್ರಕ್ಕೆ ಕೀರ್ತನ್ ಸಂಗೀತ, ನಾಗೇಶ್ ಆಚಾರ್ಯ ಛಾಯಾಗ್ರಹಣ ಮತ್ತು ಜ್ಞಾನೇಶ್ ಅವರ ಸಂಕಲನವಿದೆ.
ಮೂರೂ ದಿನಗಳಿಂದಲೂ ಸೇತುವೆಯತ್ತ ಮುಖ ಮಾಡದ ರೈಲ್ವೆ ಇಲಾಖೆ ನಂಜನಗೂಡು : ಮಹಾತ್ಮಾಗಾಂಧಿ ಶತಾಬ್ಧಿ ರಸ್ತೆಗೆ ನಿರ್ಮಿಸಿರುವ ರೈಲ್ವೆ ಕೆಳ…
ಮುಂಬೈ : ‘ಟಾಕ್ಸಿಕ್’ ಮತ್ತು ‘ರಾಮಾಯಣ’ ಸಿನಿಮಾಗಳ ಕೆಲಸಗಳಲ್ಲಿ ನಿರತರಾಗಿರುವ ಯಶ್, ‘ರಾಮಾಯಣ’ ಸಿನಿಮಾದಲ್ಲಿ ಕೇವಲ ಸಹ-ನಿರ್ಮಾಪಕರಾಗಿ ಮಾತ್ರವಲ್ಲದೆ ʻರಾವಣʼನ…
ಬೆಂಗಳೂರು : ಭೂಕುಸಿತ, ಬರದಂತಹ ಭೀಕರ ಪ್ರಕೃತಿ ವಿಕೋಪಗಳಿಂದ ಕಂಗಾಲಾಗಿರುವ ರಾಜ್ಯಗಳಿಗೆ ಕೇಂದ್ರ ಸರ್ಕಾರದಿಂದ ಸಿಗಬೇಕಾದ ವಿಪತ್ತು ಪರಿಹಾರ ಅನುದಾನದಲ್ಲಿ…
ಹನೂರು: ಕಾವೇರಿ ವನ್ಯಜೀವಿಧಾಮದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳ ದಾಳಿಗೆ ಮೃತಪಟ್ಟ ಕುಟುಂಬಗಳಿಗೆ ಸರ್ಕಾರಿ ಉದ್ಯೋಗ, ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸ ಹಾಗೂ ಸೂಕ್ತ…
ವಾರಣಾಸಿ : ವಾರಣಾಸಿಯ ಲಾಲ್ ಬಹದ್ದೂರ್ ಶಾಸ್ತ್ರಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭಾನುವಾರ ಬೆಳಿಗ್ಗೆ ನಡೆದ ಆಘಾತಕಾರಿ ಘಟನೆಯೊಂದರಲ್ಲಿ, ಶಸ್ತ್ರಾಸ್ತ್ರ ತಪಾಸಣೆಯ…
ತಕ್ಷಣವೇ ನೈಸ್ ರಸ್ತೆ ಟೋಲ್ ಸಂಗ್ರಹಕ್ಕೆ ತಡೆ ಹಾಕಬೇಕು ಎಂದು ಕೇಂದ್ರ ಸಚಿವರ ಅಗ್ರಹ ಹೈಕೋರ್ಟ್ ಅಭಿಪ್ರಾಯದಂತೆ ನೈಸ್ ಯೋಜನೆಯನ್ನು…