ಎಡಿಟೋರಿಯಲ್

ಉಕ್ರೇನ್ ಯುದ್ಧ ನಿಲ್ಲಿಸಬಲ್ಲವರು ಮಣಿಪುರದ ಮುಂದೇಕೆ ಅಸಹಾಯಕರು?

ಹಿಂಸೆ , ದ್ವೇಷದ ದಳ್ಳುರಿಯಲ್ಲಿ ಬೂದಿಯಾಗುತ್ತಿರುವ ಮಣಿಪುರದಿಂದ ಮತ್ತೊಂದು ಪೈಶಾಚಿಕ ಕೃತ್ಯ ಮೇಲೆ ತೇಲಿದೆ. ಕುಕಿ ಬುಡಕಟ್ಟಿನ ಹೆಣ್ಣುಮಕ್ಕಳನ್ನು ಮೇತೀ ಸಮುದಾಯದ ಪುರುಷಪಶುಗಳ ಗುಂಪು ಬೆತ್ತಲೆ ಮೆರವಣಿಗೆ ಮಾಡಿಸಿದೆ. ಆನಂತರ ಈ ಪೈಕಿ ಒಬ್ಬಾಕೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಲಾಗಿದೆ.

ಈ ಹೆಣ್ಣುಮಕ್ಕಳ ಗ್ರಾಮಕ್ಕೆ ಬೆಂಕಿ ಇಟ್ಟು ಬೂದಿಯಾಗಿಸಿ, ಇಬ್ಬರು ಗಂಡಸರನ್ನು ಬಡಿದು ಕೊಂದ ನಂತರ ಈ ಹೇಯ ಕ್ರಿಯೆ ನಡೆದಿದೆ.

ಎರಡೂವರೆ ತಿಂಗಳ ಹಿಂದೆ ನಡೆದಿರುವ ಈ ನಾಚಿಕೆಗೇಡಿನ ಕೃತ್ಯದ ವಿಡಿಯೋ ಇದೀಗ ಬಹಿರಂಗವಾಗಿದೆ. ಸುಪ್ರೀಂ ಕೋರ್ಟು ಈ ಪ್ರಕರಣವನ್ನು ತಾನಾಗಿಯೇ ಗಮನಿಸಿ ವಿಚಾರಣೆಗೆ ಎತ್ತಿಕೊಂಡಿದೆ. ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರ ತಕ್ಷಣವೇ ಸೂಕ್ತ ಕ್ರಮ ಜರುಗಿಸುವಂತೆ ಆದೇಶ ನೀಡಿದೆ. ಹೀಗಾಗಿ ಮಣಿಪುರದ ದಳ್ಳುರಿಯ ಕುರಿತು ತಳೆದಿದ್ದ ಮಹಾಮೌನವನ್ನು ಪ್ರಧಾನಿ ಮೋದಿಯವರು ಇಂದು ಕಡೆಗೂ ಮುರಿಯಲೇಕಾಯಿತು ಪಾಪ. ಆದರೆ ಹೀಗೆ ಮೌನ ಮುರಿಯಲು ಮಹಿಳೆಯರ ಬೆತ್ತಲೆ ಮೆರವಣಿಗೆ ಮತ್ತು ಸಾಮೂಹಿಕ ಅತ್ಯಾಚಾರದ ಪ್ರಕರಣ ಬಯಲಿಗೆ ಬರಬೇಕಾಯಿತು ಎಂಬುದು ಲಜ್ಜೆಗೇಡಿನ ಸಂಗತಿ.

ಮಣಿಪುರವೆಂಬುದು ಉರಿದ ಮನೆಗಳು, ಮುರಿದು ಮಣ್ಣಿಗೆ ಬಿದ್ದ ಕನಸುಗಳು, ಇನ್ನೆಂದೂ ಜೋಡಿಸಲಾರದಂತೆ ಒಡೆದ ಮನಸುಗಳ ಸೀಮೆ. ಡಬಲ್ ಎಂಜಿನ್ ಸರ್ಕಾರ ಎಂದು ದನಿಯೆತ್ತಿ ಎದೆ ತಟ್ಟಿಕೊಳ್ಳುವವರು ಮಣಿಪುರದಲ್ಲಿ ತಮ್ಮ ಮೂಗಿನ ಕೆಳಗೆ ನಡೆಯುತ್ತಿರುವ ಘನಘೋರ ಕುರಿತು ಆತ್ಮಶೋಧನೆ ಮಾಡಿಕೊಳ್ಳಬೇಕಿದೆ.

ಉಕ್ರೇನ್ ಯುದ್ಧವನ್ನು ನಿಲ್ಲಿಸಿ ನೊಬೆಲ್ ಶಾಂತಿ ಪಾರಿತೋಷಕ ಪಡೆಯುತ್ತಾ ರೆಂದು ಪ್ರಚಾರ ಪಡೆದವರು ತಮ್ಮದೇ ದೇಶದ ಹಿತ್ತಿಲಿನ ಪುಟ್ಟ ರಾಜ್ಯವೊಂದರ ಗಲಭೆಗಳನ್ನು ತಿಂಗಳುಗಳ ನಂತರವೂ ನಿಲ್ಲಿಸದಿರುವುದು ಸೋಜಿಗವೇ ಸರಿ. ಅಥವಾ ಅವರ ಈ ನಡೆಯ ಹಿಂದೆಯೂ ಯಾವುದಾದರೊಂದು ‘ಮಾಸ್ಟರ್ ಸ್ಟ್ರೋಕ್’ನ್ನು ಪತ್ತೆ ಮಾಡಿ ತೋರಿಸಬಹುದು ಮಡಿಲ ಮೀಡಿಯಾ.

ಬೆತ್ತಲೆ ಮೆರವಣಿಗೆ ಮತ್ತು ಅತ್ಯಾಚಾರದ ಈ ಪ್ರಕರಣ ತಮಗೆ ತಿಳಿದದ್ದು ‘ಈಗ ತಾನೇ’ ಎಂಬ ಮುಖ್ಯಮಂತ್ರಿ ಬೀರೇನ್ ಸಿಂಗ್ ಪ್ರತಿಕ್ರಿಯೆಯು ವಿಕಟ ವಿಡಂಬನೆ. ಪ್ರಕರಣದ ದೂರು ಮೇ.18ರಂದೇ ದಾಖಲಾಗಿದೆ. ಈ ಪ್ರಕರಣವನ್ನು ಸ್ಥಳೀಯ ಅಂತರ್ಜಾಲ ಸುದ್ದಿತಾಣವೊಂದು ಮೇ.4ರಂದೇ ವರದಿ ಮಾಡಿದೆ. ಆದರೆ ಪೊಲೀಸರು ಎಫ್‌ಐಆರ್ ದಾಖಲಿಸಲು (ಜೂನ್ 21) ಒಂದು ತಿಂಗಳು ತಡವಾದದ್ದು ಏಕೆ? ವಿಡಿಯೋ ಹೊರಬಿದ್ದದ್ದು ಜುಲೈ 19ರಂದು. ಅಲ್ಲಿಯ ತನಕ ಯಾವುದೇ ಕ್ರಮ ಜರುಗಲಿಲ್ಲವೇಕೆ? ರಾಜ್ಯ ಪೊಲೀಸ್ ಮುಖ್ಯಸ್ಥರು ಮತ್ತು ಮುಖ್ಯಮಂತ್ರಿಯ ನಡುವಣ ಸಂಪರ್ಕ ಎರಡೂವರೆ ತಿಂಗಳ ಕಾಲ ಮುರಿದು ಬೀಳುವುದು ಸಾಧ್ಯವೇ? ಅಥವಾ ಕಾನೂನು ಮತ್ತು ಸುವ್ಯವಸ್ಥೆಯ ಗಂಭೀರ ವಿಷಯಗಳನ್ನು ಪೊಲೀಸ್ ಮುಖ್ಯಸ್ಥರು ಮುಖ್ಯಮಂತ್ರಿಯಿಂದ ಮುಚ್ಚಿಟ್ಟರೇ? ಇಲ್ಲವೇ ವಿಷಯ ತಿಳಿದಿದ್ದೂ ಮುಚ್ಚಿಟ್ಟು ತಿಪ್ಪೆ ಸಾರಿಸಿದರೇ ಮುಖ್ಯಮಂತ್ರಿ? ತಪ್ಪಿತಸ್ಥರನ್ನು ಮೊನ್ನೆ ಮೊನ್ನೆಯ ತನಕ ಏಕೆ ಬಂಧಿಸಿರಲಿಲ್ಲ, ತನಿಖೆಯಲ್ಲಿ ಏಕೆ ಯಾವುದೇ ಪ್ರಗತಿಯಾಗಿರಲಿಲ್ಲ? ಆರೋಪಿಗಳನ್ನು ರಕ್ಷಿಸುತ್ತಿದ್ದ ಶಕ್ತಿಗಳು ಯಾವುವು ಮತ್ತು ಯಾಕಾಗಿ?

ಈ ಪೈಕಿ ಕೆಲವು ಪ್ರಶ್ನೆಗಳಿಗೆ ಉತ್ತರ ಹೇಳುವ ಪ್ರಯತ್ನವನ್ನು ಮುಖ್ಯಮಂತ್ರಿ ಮಾಡಿದ್ದಾರೆ. ದೂರುಗಳು, ಎಫ್‌ಐಆರ್‌ಗಳ ರಾಶಿಯೇ ಬಿದ್ದಿತ್ತು. ವಿಡಿಯೋ ಹೊರಬೀಳುವ ತನಕ ಅಪರಾಧಿಗಳ ಗುರುತು ಪತ್ತೆ ಮಾಡುವುದು ಸಾಧ್ಯವಿರಲಿಲ್ಲ ಎಂದಿದ್ದಾರೆ. ಆದರೆ ಗಲಭೆಗಳ ಸಂದರ್ಭಗಳಲ್ಲಿ ಪೊಲೀಸರು ನಾಪತ್ತೆಯನ್ನು ವಿವರಿಸಲು ಅವರಿಗೆ ಸಬೂಬುಗಳು ದೊರೆತಿಲ್ಲ.

ಹೊಣೆಗಾರಿಕೆ ಅಥವಾ ಉತ್ತರದಾಯಿತ್ವ ಎಂಬುದು ಪ್ರಧಾನಿ ಮೋದಿಯವರ ಮತ್ತು ಭಾರತೀಯ ಜನತಾ ಪಕ್ಷದ ನಿಘಂಟಿನಲ್ಲಿ ಇಲ್ಲವೇ ಇಲ್ಲ ಏಕೆ?ಅಲೀಮುದ್ದೀನ್ ಅನ್ಸಾರಿ ಎಂಬ ದನಗಳ ವ್ಯಾಪಾರಿಯನ್ನು ಐದು ವರ್ಷಗಳ ಹಿಂದೆ ಹಜಾರಿಬಾಗ್‌ನಲ್ಲಿ ಜಜ್ಜಿ ಕೊಂದ ಎಂಟು ಮಂದಿ ಪಾತಕಿಗಳ ಕೊರಳಿಗೆ ಹೂಮಾಲೆ ಹಾಕಿ ಸನ್ಮಾನಿಸಿದ್ದರಲ್ಲವೇ ಅಂದಿನ ಕೇಂದ್ರ ಮಂತ್ರಿ ಜಯಂತ್ ಸಿನ್ಹಾ?

ಪ್ರಚಂಡ ಮಾತಿನ ಮಲ್ಲರಾದ ಮೋದಿಯವರು ಹಲವು ವಿಷಯಗಳ ಕುರಿತು ಓತಪ್ರೋತವಾಗಿ ‘ಮನ್ ಕೀ ಬಾತ್’ ಆಡುತ್ತಾರೆ. ಎರಡೂ ಕೈಗಳನ್ನು ಹಲವು ಭಂಗಿಗಳಲ್ಲಿ ಎತ್ತಿ ಇಳಿಸಿ ಭಾಷಣಗಳನ್ನು ಕುಟ್ಟಿ ಕೆಡವುತ್ತಾರೆ. ಆದರೆ ದೇಶವನ್ನು, ಸಮಾಜವನ್ನು ಸುಡುವ ಹಲವು ವಿಷಯಗಳ ಕುರಿತು ತಿಂಗಳುಗಟ್ಟಲೆ ಮೌನ ತಳೆಯುತ್ತಾರೆ. ಈ ಮಹಾಮೌನಗಳ ಹಿಂದಿನ ರಹಸ್ಯ ಏನಿರುತ್ತದೆಂದು ಯಾವಾಗಲಾದರೊಮ್ಮೆ ‘ಮನ್ ಕೀ ಬಾತ್’ನಲ್ಲಿ ದೇಶವಾಸಿಗಳಿಗೆ ಜ್ಞಾನೋದಯ ಮಾಡಿಸುವ ಕೃಪೆ ತೋರಬೇಕು.

ರೋಹಿತ್ ವೇಮುಲನ ಆತ್ಮಹತ್ಯೆಯ ದುರಂತ ದೇಶದ ಆತ್ಮಸಾಕ್ಷಿಯನ್ನು ಕೆಣಕಿತ್ತು. ಆದರೆ ಮೋದಿಯವರು ಬಾಯಿ ಬಿಡಲು ಬಹುಕಾಲ ಬೇಕಾಯಿತು. ಗುಜರಾತಿನ ಊನಾ ಎಂಬಲ್ಲಿ ಸತ್ತ ದನದ ಚರ್ಮ ಸುಲಿಯುತ್ತಿದ್ದ ದಲಿತರನ್ನು ‘ಗೋರಕ್ಷಕರು’ ನಡುರಸ್ತೆಯಲ್ಲಿ ಅಮಾನುಷವಾಗಿ ಥಳಿಸಿದ ಕುರಿತು ಅವರು ತುಟಿ ತೆರೆದದ್ದು ಘಟನೆ ಜರುಗಿದ ಒಂದು ತಿಂಗಳ ನಂತರ.

ಚೀನೀಯರು ಭಾರತದ ನೆಲವನ್ನು ಆಕ್ರಮಿಸಿ ತಿಂಗಳು ಗಟ್ಟಲೆ ಬೀಡು ಬಿಟ್ಟ ಕುರಿತು ಯಾರೂ ಒಳನುಸುಳಿಲ್ಲ, ಯಾರೂ ಆಕ್ರಮಿಸಿಕೊಂಡಿಲ್ಲ ಎಂದು ಒಮ್ಮೆ ಬಾಯಿಬಿಟ್ಟು ಬಣ್ಣಗೇಡಾದರು. ನಂತರ ಗಾಢ ಮೌನಕ್ಕೆ ಶರಣಾದರು. ‘ಕೊಲ್ಲಲು ನಾವು ತಯಾರಿದ್ದೇವೆ, ನೀವೂ ಸಿದ್ಧರಾಗಿ, ಹತಾರುಗಳನ್ನು ಹಿಡಿದಿಟ್ಟುಕೊಳ್ಳಿರಿ, ಕೊಲ್ಲದೆ ಬೇರೆ ದಾರಿಯೇ ಇಲ್ಲ’ ಎಂಬ ಹರಿದ್ವಾರದ ಹಿಂದೂ ಸಂತ ಸಮ್ಮೇಳನದ ಪ್ರಚೋದನಕಾರಿ ಭಾಷಣಗಳ ಕುರಿತು ಪ್ರಧಾನಿ ಕಡೆಗೂ ಬಾಯಿ ಬಿಟ್ಟಿಲ್ಲ. ಹಿಂದೂ ರಾಷ್ಟ್ರ ಸ್ಥಾಪಿಸಲು ಸಾಯಲು, ಸಾಯಿಸಲು ತಯಾರು ಎಂಬ ಹಿಂದೂ ಯುವವಾಹಿನಿಯ ದೆಹಲಿ ಪ್ರತಿಜ್ಞೆಯನ್ನು ಖಂಡಿಸಲಿಲ್ಲ. ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಭಾರತದ ಜಾತ್ಯತೀತತೆ, ಸಹಿಷ್ಣುತೆ, ಧಾರ್ಮಿಕ ಸೌಹಾರ್ದದ ಕುರಿತು ತಾವು ಅಡಿಗಡಿಗೆ ಎದೆ ತಟ್ಟಿಕೊಂಡು ಸಾರುವುದನ್ನು ನಿಲ್ಲಿಸಲೂ ಇಲ್ಲ. ಜಿ-20ಯ ಅಧ್ಯಕ್ಷ ಪಟ್ಟದ ಸರದಿ ಭಾರತಕ್ಕೆ ಸಂದಿದ್ದು, “ಒಂದು ಭೂಮಿ, ಒಂದು ಕುಟುಂಬ, ಒಂದು ಭವಿಷ್ಯ” ಎಂಬ ಘೋಷವಾಕ್ಯವನ್ನು ಬರೆದುಕೊಳ್ಳಲಾಗುತ್ತಿರುವುದು ಅಪ್ಪಟ ಆಷಾಢಭೂತಿತನ.

2002ರ ಗುಜರಾತಿನ ಕೋಮು ಗಲಭೆಗಳಲ್ಲಿ, 2013ರ ಪಶ್ಚಿಮೀ ಉತ್ತರಪ್ರದೇಶದ ಮುಝಫ್ಛರ್ಪುರದ ಕೋಮುಗಲಭೆಗಳಲ್ಲಿ, ಮೊನ್ನೆ ಮೊನ್ನೆ ಉತ್ತರಾಖಂಡದಲ್ಲಿ ಕೈ ಕಾಯಿಸಿಕೊಂಡ ಶಕ್ತಿಗಳು ಯಾವುವೆಂಬುದು ಜನಜನಿತ. ಇದೀಗ ಇವೇ ಶಕ್ತಿಗಳು ಮಣಿಪುರದ ಮೇತೀಗಳೆಂಬ ವೈಷ್ಣವ ಹಿಂದೂಗಳು ಮತ್ತು ಕುಕೀಗಳೆಂಬ ಗುಡ್ಡಗಾಡು ಕ್ರ್ತ್ಯೈಸ್ತ ಬುಡಕಟ್ಟುಗಳ ನಡುವೆ ಬೆಂಕಿ ಹಚ್ಚಿವೆ. ಅಪಾರ ಸಾವು-ನೋವು, ಹಿಂಸೆಯ ದಳ್ಳುರಿಯ ನಡುವೆ ದ್ವೇಷದ ಫಸಲಿನ ಕಟಾವಿಗೆ ಕುಡುಗೋಲು ಹಿಡಿದು ಗಹಗಹಿಸಿವೆ.

ಗುಜರಾತ್, ಮುಝಫ್ಪರ್ಪುರದ ಕೋಮು ಗಲಭೆಗಳಲ್ಲಿ ಒಂದು ಕೋಮಿಗೆ ಸೇರಿದ ಹೆಣ್ಣುಮಕ್ಕಳ ಮೇಲೆ ಸೇಡಿನ ಸಾಮೂಹಿಕ ಅತ್ಯಾಚಾರಗಳು ನಡೆದವು, ಹೆಣ್ಣು ದೇಹವೆಂಬುದು ಗಲಭೆಗಳು-ಸಮರಗಳು-ಸೇಡುಗಳನ್ನು ತೀರಿಸುವ ಕದನ ಮೈದಾನ. ಇತಿಹಾಸದ ಕರಾಳ ಅಧ್ಯಾಯಗಳು ಈ ಕಹಿಸತ್ಯವನ್ನು ಚೀರಿ ಹೇಳುತ್ತವೆ.ಮಣಿಪುರ ವಿನಾಶದ ಈ ಇಡೀ ಪ್ರಕರಣವನ್ನು ಕುರಿತು ಉನ್ನತ ಮಟ್ಟದ ನ್ಯಾಯಾಂಗ ವಿಚಾರಣೆ ನಡೆಯಬೇಕಿದೆ. ಈ ವಿಚಾರಣೆಯು ಸುಪ್ರೀಂ ಕೋರ್ಟಿನ ನೇರ ಉಸ್ತುವಾರಿಯಲ್ಲೇ ನೆರವೇರಬೇಕು. ಜನಾಂಗೀಯ ದ್ವೇಷದ ದಳ್ಳುರಿಯಲ್ಲಿ ಕೈ ಕಾಯಿಸಿಕೊಳ್ಳುವ ರಾಜಕೀಯ ಶಕ್ತಿಗಳನ್ನು ಕಟಕಟೆಗೆ ತಂದು ನಿಲ್ಲಿಸಬೇಕು.

lokesh

Recent Posts

ಕಳಪೆ ಪ್ರಗತಿ ಸಾಧಿಸಿದ 5 ಪಿಡಿಒಗಳಿಗೆ ಕಾರಣ ಕೇಳಿ ನೋಟಿಸ್ ನೀಡಿದ ಸಿಇಒ ನಂದಿನಿ

ಮಂಡ್ಯ : ಜಲ ಶಕ್ತಿ ಜನ ಭಾಗೀದಾರಿ, ಮಹಾತ್ಮ ಗಾಂಧಿ ನರೇಗಾ, ತೆರಿಗೆ ವಸೂಲಾತಿ ಸೇರಿದಂತೆ ಇತರೆ ಯೋಜನೆ ಮತ್ತು…

3 hours ago

ಅಕ್ರಮ ನಾಟ ಸಾಗಾಟ : ಲಾರಿ ಸಮೇತ ಮೂವರ ಬಂಧನ

ಸೋಮವಾರಪೇಟೆ : ಮರದ ನಾಟಗಳನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ವಾಹನವನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ಹೊಸಳ್ಳಿ ಗ್ರಾಮದಲ್ಲಿ ವಶಪಡಿಸಿಕೊಂಡಿದ್ದಾರೆ. ಹುದುಗೂರು…

3 hours ago

ಡೆವಿಲ್‌ ಅಬ್ಬರ | ಮೊದಲ ದಿನದ ಗಳಿಗೆ ಎಷ್ಟು?

ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೈಲಿನಲ್ಲಿ ಇದ್ರೂ ಗುರುವಾರ ಬಿಡುಗಡೆಯಾದ ಅವರ ಅಭಿನಯದ ಡೆವಿಲ್…

3 hours ago

ಮಳವಳ್ಳಿ | ವಿದ್ಯುತ್‌ ಸ್ಪರ್ಶ ; ಕಾರ್ಮಿಕ ಸಾವು

ಮಳವಳ್ಳಿ : ವಿದ್ಯುತ್ ಸ್ಪರ್ಶಿಸಿ ಕಾರ್ಮಿಕನೋರ್ವ ಸ್ಥಳದಲ್ಲೇ ಮೃತಪಟ್ಟಿರುವ ದುರ್ಘಟನೆ ತಾಲ್ಲೂಕಿನ ಕಲ್ಕುಣಿ ಗ್ರಾಮದ ಬಳಿ ನಡೆದಿದ್ದು, ಸೆಸ್ಕ್ ಅಧಿಕಾರಿಗಳ…

3 hours ago

2027ರ ಜನಗಣತಿ | 11,718 ಕೋಟಿ ನೀಡಲು ಕೇಂದ್ರ ಸಂಪುಟ ಅನುಮೋದನೆ

ಹೊಸದಿಲ್ಲಿ : ದೇಶದಾದ್ಯಂತ ನಡೆಸಲು ಉದ್ದೇಶಿಸಿರುವ ೨೦೨೭ರ ಜನಗಣತಿಗೆ ರೂ. ೧೧,೭೧೮ ಕೋಟಿ ಅನುದಾನ ನೀಡಲು ಕೇಂದ್ರ ಸಚಿವ ಸಂಪುಟವು…

4 hours ago

ಇಂಡಿಗೋ ಬಿಕ್ಕಟ್ಟು | ನಾಲ್ವರು ವಿಮಾನ ನಿರ್ವಹಣಾ ಇನ್ಸ್‌ಪೆಕ್ಟರ್‌ಗಳ ಅಮಾನತ್ತು

ಮುಂಬೈ : ಇಂಡಿಗೊ ವಿಮಾನ ಕಾರ್ಯಾಚರಣೆ ವ್ಯತ್ಯಯ ಪ್ರಕರಣ ಸಂಬಂಧ ನಾಲ್ವರು ವಿಮಾನ ನಿರ್ವಹಣಾ ಇನ್ಸ್‌ಪೆಕ್ಟರ್‌ಗಳನ್ನು (ಎಫ್.ಒ.ಐ) ನಾಗರಿಕ ವಿಮಾನಯಾನ…

4 hours ago