ಭಾರತದ ನೆರೆಯ ದೇಶವಾದ ಮ್ಯಾನ್ಮಾರ್ (ಹಿಂದಿನ ಬರ್ಮಾ) ಮಿಲಿಟರಿ ತೆಕ್ಕೆಯಿಂದ ಹೊರಬರುವ ಸೂಚನೆಗಳು ಮತ್ತೆ ಇಲ್ಲವಾಗಿವೆ. ಎರಡು ವರ್ಷಗಳ ಹಿಂದೆ ನಡೆದ ಚುನಾವಣೆಯ ಫಲಿತಾಂಶವನ್ನು ರದ್ದು ಮಾಡಿ ಅಧಿಕಾರ ಕಬಳಿಸಿದ ಮಿಲಿಟರಿ ಜನರಲ್ ಮಿನ್ ಆಂಗ್ ಲಿಯಾಂಗ್, ದೇಶದಲ್ಲಿ ಜಾರಿ ಇದ್ದ ತುರ್ತು ಪರಿಸ್ಥಿತಿಯನ್ನು ಆರು ತಿಂಗಳ ಕಾಲ ವಿಸ್ತರಿಸಿ ಆದೇಶ ಹೊರಡಿಸಿದ್ದಾರೆ.
ಅಧಿಕಾರ ಕಬಳಿಸಿದ ಹೊಸದರಲ್ಲಿ ತುರ್ತು ಪರಿಸ್ಥಿತಿ ಎರಡು ವರ್ಷ ಮಾತ್ರ ಇರುವುದೆಂದು ಮತ್ತು ಅದು ಇದೇ ಫೆಬ್ರವರಿ ಒಂದನೇ ತಾರೀಖಿಗೆ ಅಂತ್ಯವಾಗಿ ಆಗಸ್ಟ್ ತಿಂಗಳಲ್ಲಿ ಸಂಸತ್ ಚುನಾವಣೆ ನಡೆಯುವುದೆಂದು ಅವರು ಘೋಷಿಸಿದ್ದರು. ಆದರೆ ಈಗ ದೇಶದಲ್ಲಿ ಕಾನೂನು ಸುವ್ಯವಸ್ಥೆ ಪರಿಸ್ಥಿತಿ ಸರಿಯಿಲ್ಲದಿರುವುದರಿಂದ ಈ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಮಿಲಿಟರಿ ಆಡಳಿತ ಪ್ರಕಟಿಸಿದೆ. ಈ ಬೆಳವಣಿಗೆ ಸಹಜವಾಗಿ ಪ್ರಜಾತಂತ್ರ ಹೋರಾಟಗಾರರಿಗೆ ಆಘಾತ ಉಂಟುಮಾಡಿದೆ.
ಎರಡು ವರ್ಷಗಳ ಹಿಂದೆ ನಡೆದ ಸಂಸತ್ ಚುನಾವಣೆಗಳಲ್ಲಿ ಪ್ರಜಾತಂತ್ರ ಹೋರಾಟದ ನಾಯಕಿ ಆಂಗ್ ಸು ಕಿ ಅವರ ನೇತೃತ್ವದ ನ್ಯಾಷನಲ್ ಲೀಗ್ ಫಾರ್ ಡೆಮಾಕ್ರಸಿ (ಎನ್ಎಲ್ಡಿ) ಪಕ್ಷ ಅಭೂತಪೂರ್ವ ಗೆಲುವು ಸಾಧಿಸಿತ್ತು. ಸಂಸತ್ ಪ್ರತಿನಿಧಿಗಳು ಪ್ರಮಾಣ ವಚನ ಸ್ವೀಕರಿಸುವ ಒಂದು ದಿನ ಮೊದಲು ಮಿಲಿಟರಿ ಕ್ಷಿಪ್ರ ಕ್ರಾಂತಿ ನಡೆದು ಅಧಿಕಾರ ಕಬಳಿಸಲಾಯಿತು. ದೇಶದ ಮಿಲಿಟರಿ ಬೆಂಬಲದ ನಿವೃತ್ತ ಮಿಲಿಟರಿ ಅಧಿಕಾರಿಗಳ ಯೂನಿಯನ್ ಸಾಲಿಡಾರಿಟಿ ಅಂಡ್ ಡೆವಲಪ್ಮೆಂಟ್ ಪಾರ್ಟಿ(ಯುಎಸ್ಡಿಪಿ) ಹೀನಾಯ ಸೋಲು ಅನುಭವಿಸಿದ ಹಿನ್ನೆಲೆಯಲ್ಲಿ ಈ ಬೆಳವಣಿಗೆಯಾಗಿತ್ತು. ಚುನಾವಣೆಯಲ್ಲಿ ಭಾರಿ ಮೋಸ ನಡೆದಿದೆ ಎನ್ನುವುದು ತನ್ನ ಕ್ರಮಕ್ಕೆ ಮಿಲಿಟರಿ ನೀಡಿದ ಕಾರಣ.
ಎರಡು ವರ್ಷಗಳ ಹಿಂದೆ ನಡೆದ ಮಿಲಿಟರಿ ಕ್ಷಿಪ್ರಕ್ರಾಂತಿಗೆ ಅಂತಾರಾಷ್ಟ್ರೀಯ ಸಮುದಾಯ ತೀವ್ರ ಆಕ್ರೋಶ ವ್ಯಕ್ತ ಮಾಡಿತ್ತು. ಜನರು ಸಹಜವಾಗಿಯೇ ಬೀದಿಗಿಳಿದು ಪ್ರತಿಭಟಿಸಿದ್ದರು. ಮಿಲಿಟರಿ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆಯೇ ಮೊದಲು ಮಾಡಿದ ಕೆಲಸ ಎನ್ಎಲ್ಡಿ ಪಕ್ಷದ ಸಂಸತ್ ಸದಸ್ಯರನ್ನು ಬಂಧಿಸಿ ಜೈಲಿಗೆ ದೂಡಿದ್ದು. ಅಷ್ಟೇ ಅಲ್ಲ ಮಿಲಿಟರಿ ವಿರೋಧಿ ಸಂಘಟನೆಗಳ ನಾಯಕರೆಲ್ಲರನ್ನೂ ಜೈಲಿಗೆ ಕಳುಹಿಸಲಾಯಿತು. ಆಂಗ್ ಸಾನ್ ಸೂಕಿ(77) ಅವರು ಆಗಾಗಲೇ ಶಿಕ್ಷೆಗೆ ಒಳಗಾಗಿ ಜೈಲಿನಲ್ಲಿದ್ದರು. ಅವರಿಗೆ ಮಿಲಿಟರಿ ನ್ಯಾಯಾಲಯ 33 ವರ್ಷಗಳ ಜೈಲು ಶಿಕ್ಷೆ ವಿಧಿಸಿತ್ತು. ನಾಯಕರನ್ನೂ ಜೈಲಿಗೆ ದೂಡಿದ ನಂತರವೂ ಮಿಲಿಟರಿ ಆಡಳಿತದ ವಿರುದ್ಧ ಪ್ರತಿಭಟನೆಗಳು ನಿಲ್ಲಲಿಲ್ಲ. ಪ್ರತಿಭಟನೆಯನ್ನು ಹತ್ತಿಕ್ಕಲು ಮಿಲಿಟರಿ ಗುಂಡು ಹಾರಿಸಲು ಆರಂಭಿಸಿತು. ಮಿಲಿಟರಿ ಆಡಳಿತದ ವಿರುದ್ಧದ ಯುವ ಹೋರಾಟಗಾರರು ಕ್ರಮೇಣ ದೇಶದ ಗ್ರಾಮೀಣ ಪ್ರದೇಶಗಳಿಗೆ ತೆರಳಿ ಅಲ್ಲಿ ಜನರನ್ನು ಸಂಘಟಿಸತೊಡಗಿದರು. ಮ್ಯಾನ್ಮಾರ್ನಲ್ಲಿ ಸಣ್ಣಪುಟ್ಟ ನೂರಾರು ಜನಾಂಗಗಳಿದ್ದು, ಅವುಗಳನ್ನು ಮಿಲಿಟರಿ ಆಡಳಿತದ ವಿರುದ್ಧ ಅಣಿಗೊಳಿಸುವ ಕೆಲಸವನ್ನು ಯುವ ಗೆರಿಲ್ಲಾ ಹೋರಾಟಗಾರರು ಮಾಡುತ್ತ ಬಂದರು. ಹೀಗಾಗಿ ಪ್ರತಿರೋಧ ದೇಶವ್ಯಾಪಿ ಹಬ್ಬಿದೆ.
ಮಿಲಿಟರಿ ಕಾರ್ಯಾಚರಣೆಯಲ್ಲಿ ಈ ಎರಡು ವರ್ಷಗಳಲ್ಲಿ 2890 ಮಂದಿ ಸತ್ತಿದ್ದಾರೆಂದು, ಲಕ್ಷಾಂತರ ಜನರು ಮನೆಮಠ ಕಳೆದುಕೊಂಡು ವಲಸೆಹೋಗಿದ್ದಾರೆಂದು ವಿಶ್ವಸಂಸ್ಥೆ ವರದಿಯೊಂದು ತಿಳಿಸಿದೆ. ಗೆರಿಲ್ಲಾಗಳು ಇಂಥ ಊರಿನಲ್ಲಿದ್ದಾರೆಂಬ ಅನುಮಾನ ಬಂದ ಪಕ್ಷದಲ್ಲಿ ಮಿಲಿಟರಿ ಇಡೀ ಊರಿಗೆ ಬೆಂಕಿ ಹಚ್ಚುತ್ತಿತ್ತು. ಈ ಎರಡು ವರ್ಷದಲ್ಲಿ ಕನಿಷ್ಠ 40 ಸಾವಿರ ಮನೆಗಳು ಮಿಲಿಟರಿ ಕಾರ್ಯಾ-ಚರಣೆಯಲ್ಲಿ ಸುಟ್ಟುಕರಕಲಾಗಿವೆ ಎಂದು ಮತ್ತೊಂದು ವರದಿ ತಿಳಿಸಿದೆ. ಮೊದಲೇ ಬಡತನ ತುಂಬಿದ ದೇಶ. ಯಾವುದಕ್ಕೂ ಮಿಲಿಟರಿ ಆಡಳಿತವನ್ನು ಕೇಳುವಂತೆಯೇ ಇಲ್ಲ. ಲಕ್ಷಾಂತರ ಜನರು ಹತಾಶರಾಗಿ ದೇಶಾಂತರ ಹೋಗಿದ್ದಾರೆ. ರೊಹಿಂಗ್ಯಾ ಮುಸ್ಲಿಮರ ಮೇಲೆ ನಡೆದ ದೌರ್ಜನ್ಯ ಮತ್ತು ಆ ಜನರ ವಲಸೆ ಈ ಶತಮಾನ ಕಂಡ ಅತ್ಯಂತ ಘೋರ ಬೆಳವಣಿಗೆ ಎಂದು ಅಂತಾರಾಷ್ಟ್ರೀಯ ವೀಕ್ಷಕರು ಅಭಿಪ್ರಾಯಪಟ್ಟಿದ್ದಾರೆ.
ಉಕ್ರೇನ್ ಮೇಲೆ ರಷ್ಯಾ ಮಿಲಿಟರಿ ದಾಳಿ ಮತ್ತು ನಂತರದ ಯುದ್ಧದ ಬಗ್ಗೆ ಕಂಡು ಬಂದ ಅಂತಾರಾಷ್ಟ್ರೀಯ ಪ್ರತಿಕ್ರಿಯೆಗೆ ಹೋಲಿಸಿದರೆ ಮ್ಯಾನ್ಮಾರ್ ದುರಂತದ ಬಗ್ಗೆ ಕಂಡುಬಂದ ಪ್ರತಿಕ್ರಿಯೆ ನೀರಸವಾದುದು. ಉಕ್ರೇನ್ ವಿಚಾರದಲ್ಲಿ ಆರ್ಥಿಕ ವಿಷಯಗಳೂ ಸೇರಿಕೊಂಡಿದ್ದರಿಂದಾಗಿ ಹೆಚ್ಚು ಮಹತ್ವ ಸಿಕ್ಕಿರುವುದು ನಿಜ. ಆದರೆ ಮಾನವ ದುರಂತ ಮ್ಯಾನ್ಮಾರ್ನಲ್ಲಿ ಅತ್ಯಂತ ಭೀಕರವಾದುದು ಎನ್ನುವುದನ್ನು ಮರೆಯುವಂತಿಲ್ಲ. ಹೀಗಾಗಿ ಅಂತಾರಾಷ್ಟ್ರೀಯ ಸಮುದಾಯ ಈ ವಿಚಾರದಲ್ಲಿ ಮತ್ತಷ್ಟು ಮುತುವರ್ಜಿ ವಹಿಸಬೇಕಿತ್ತೇನೋ ಎನಿಸುತ್ತದೆ. ಇದೇನೇ ಇರಲಿ. ಎರಡು ವರ್ಷಗಳ ಹಿಂದೆ ಮ್ಯಾನ್ಮಾರ್ ಆಡಳಿತವನ್ನು ಮಿಲಿಟರಿ ಕಬಳಿಸಿದಾಗ ಸ್ವಲ್ಪ ಮಟ್ಟಿಗಾದರೂ ಅಂತಾರಾಷ್ಟ್ರೀಯ ಪ್ರತಿಕ್ರಿಯೆ ಕಂಡುಬಂದಿದ್ದು ಸಮಾಧಾನದ ವಿಷಯ. ವಿಶ್ವಸಂಸ್ಥೆ ಸೇರಿದಂತೆ ಅಮೆರಿಕ, ಜರ್ಮನಿ, ಬ್ರಿಟನ್, ಫ್ರಾನ್ಸ್ ಮುಂತಾದ ದೇಶಗಳು ಮಿಲಿಟರಿ ಕ್ಷಿಪ್ರಕ್ರಾಂತಿಯನ್ನು ಖಂಡಿಸಿದವು. ಭದ್ರತಾ ಮಂಡಳಿಯಲ್ಲಿ ಖಂಡಾನಾ ನಿರ್ಣಯದ ಪ್ರಶ್ನೆ ಬಂದಾಗ ಮಂಡಳಿಯ ಶಾಶ್ವತ ಸದಸ್ಯ ದೇಶವಾದ ಚೀನಾ ಅದು ಆಂತರಿಕ ವಿಷಯ ಎಂದು ವಾದ ಮಾಡಿತು. ಅಂತಿಮವಾಗಿ ಖಂಡನಾ ನಿರ್ಣಯ ಅಂಗೀಕಾರವಾಗಲಿಲ್ಲ. ನೆರೆಯ ದೇಶವಾದ ಭಾರತಕ್ಕೆ ಇದು ಸೂಕ್ಷ ವಾದ ವಿಚಾರ. ಅದು ಕೂಡಾ ಖಂಡನೆ ಮಾಡಿ ಸುಮ್ಮನಾಯಿತು. ಚೀನಾ ದೇಶ ಮ್ಯಾನ್ಮಾರ್ನಲ್ಲಿ ಅಪಾರ ಪ್ರಮಾಣದಲ್ಲಿ ಬಂಡವಾಳ ಹೂಡಿದೆ. ಜೊತೆಗೆ ಮಿಲಿಟರಿ ಸಂಬಂಧ ಇದೆ. ಮಿಲಿಟರಿಗೆ ಶಸ್ತ್ರಾಸ್ತ್ರಗಳನ್ನು ಭಾರಿ ಪ್ರಮಾಣದಲ್ಲಿ ಸರಬರಾಜು ಮಾಡುತ್ತಿದೆ. ಚೀನಾ ಅಷ್ಟೇ ಅಲ್ಲ ರಷ್ಯಾ ಕೂಡಾ ಮ್ಯಾನ್ಮಾರ್ ಮಿಲಿಟರಿ ಆಡಳಿತಗಾರರ ಜೊತೆ ಉತ್ತಮ ಬಾಂಧವ್ಯ ಹೊಂದಿದ್ದು ಶಸ್ತ್ರಾಸ್ತ್ರಗಳನ್ನು ಸರಬರಾಜು ಮಾಡುತ್ತಿದೆ. ನೆರೆಯ ದೇಶವಾದ ಭಾರತ ಕೂಡಾ ಮ್ಯಾನ್ಮಾರ್ನಲ್ಲಿ ಸಾಕಷ್ಟು ಬಂಡವಾಳ ಹೂಡಿದೆ. ಪ್ರಜಾತಂತ್ರದ ಪರ ಭಾರತ ಇರುವುದಾದರೂ ಸೂಕ್ಷ ಪರಿಸ್ಥಿತಿಯಿಂದಾಗಿ ಮಿಲಿಟರಿ ಜೊತೆ ಮೈತ್ರಿಯಿಂದ ಇರಬೇಕಾಗಿ ಬಂದಿದೆ. ಇದಕ್ಕೆ ಇನ್ನೂ ಒಂದು ಕಾರಣವಿದೆ. ಭಾರತದ ಈಶಾನ್ಯ ರಾಜ್ಯಗಳ ಬಂಡುಕೋರರ ತರಬೇತಿ ಕೇಂದ್ರಗಳು ಮ್ಯಾನ್ಮಾರ್ನ ಗಡಿಯಲ್ಲಿ ನಡೆಯುತ್ತಿರುವ ಮಾಹಿತಿ ಆಧರಿಸಿ ಅವುಗಳನ್ನು ನಾಶ ಮಾಡಲು ಭಾರತ ಕೋರಿದಾಗ ಅದಕ್ಕೆ ಅಲ್ಲಿನ ಮಿಲಿಟರಿ ಅಧಿಕಾರಿಗಳು ಸಕಾರಾತ್ಮಕವಾಗಿ ಸ್ಪಂದಿಸಿದ ನಿದರ್ಶನವಿದೆ. ಹೀಗಾಗಿ ಭಾರತ ಸರ್ಕಾರ ಮ್ಯಾನ್ಮಾರ್ ಮಿಲಿಟರಿ ಆಡಳಿತದ ವಿಚಾರದಲ್ಲಿ ಮೃದುವಾದ ಧೋರಣೆಯನ್ನೇ ತಳೆಯುತ್ತ ಬಂದಿದೆ. ಬಹುಶಃ ಮಿಲಿಟರಿ ಆಡಳಿತವನ್ನು ಆರು ತಿಂಗಳು ಮುಂದುವರಿಸುವ ಅಲ್ಲಿನ ಮಿಲಿಟರಿ ಆಡಳಿತದ ತೀರ್ಮಾನದ ಬಗ್ಗೆಯೂ ಭಾರತದ ಪ್ರತಿಕ್ರಿಯೆ ಖಂಡನೆಯನ್ನು ಮೀರಿ ಇರಲಾರದು.
ಪ್ರಜಾತಂತ್ರ ಪರ ಹೋರಾಟಕ್ಕೆ ಚೀನಾ ಆಗಲಿ, ಭಾರತ ಆಗಲಿ, ರಷ್ಯಾದ ನೆರವಾಗಲಿ ಇಲ್ಲ. ಅನಿವಾರ್ಯವಾಗಿ ಯೂರೋಪ್ ಮತ್ತು ಪಾಶ್ಚಾತ್ಯ ದೇಶಗಳ ನೆರವನ್ನು ಮ್ಯಾನ್ಮಾರ್ ಹೋರಾಟಗಾರರು ಪಡೆಯಬೇಕು. ಆದರೆ ಅಂಥ ನೆರವು ಸಿಗುತ್ತಿಲ್ಲ. ಅತ್ಯಾಧುನಿಕ ಯುದ್ಧಾಸ್ತ್ರಗಳನ್ನು ಬಳಕೆ ಮಾಡುತ್ತಿರುವ ಮ್ಯಾನ್ಮಾರ್ ಮಿಲಿಟರಿ ವಿರುದ್ಧ ಬಳಸಲು ಪ್ರಜಾತಂತ್ರ ಹೋರಾಟಗಾರರ ಬಳಿ ಯುದ್ಧಾಸ್ತ್ರಗಳೇ ಇಲ್ಲ. ರಹಸ್ಯವಾಗಿ ಮತ್ತು ಸ್ಥಳೀಯವಾಗಿ ತಯಾರಿಸಿದ ಮತ್ತು ಮಿಲಿಟರಿ ನೆಲೆಗಳ ಮೇಲೆ ದಾಳಿ ಮಾಡಿ ವಶಮಾಡಿಕೊಂಡ ಯುದ್ಧಾಸ್ತ್ರಗಳನ್ನೇ ಗೆರಿಲ್ಲಾಗಳು ಬಳಸಬೇಕಾಗಿ ಬಂದಿದೆ. ದೇಶದ ಗುಡ್ಡ ಪ್ರದೇಶಗಳಲ್ಲಿ ಬೆಳೆಯುತ್ತಿರುವ ಕೊಕೇನ್ ಮಾರಿ ರಹಸ್ಯವಾಗಿ ಯುದ್ಧಾಸ್ತ್ರಗಳನ್ನು ಗೆರಿಲ್ಲಾಗಳು ಕೊಳ್ಳಬೇಕಾಗಿ ಬಂದಿದೆ. ಸಾಕಷ್ಟು ಯುದ್ಧಾಸ್ತ್ರಗಳು ಇಲ್ಲದಿರುವುದರಿಂದ ಹೆಚ್ಚು ಮಂದಿ ಹೋರಾಟಗಾರರು ಸಾಯುತ್ತಿದ್ದಾರೆಂದು ವರದಿಯಾಗಿದೆ.
ಆರು ತಿಂಗಳು ಮಿಲಿಟರಿ ಆಡಳಿತ ವಿಸ್ತರಣೆ ಆಗಿದೆಯೆಂದು ಪ್ರಕಟಿಸಲಾಗಿದ್ದರೂ ಆ ನಂತರ ಚುನಾವಣೆ ನಡೆದೇ ನಡೆಯುತ್ತದೆ ಎಂದು ಹೇಳುವುದು ಕಷ್ಟ. ಮಿಲಿಟಿರಿಗೆ ವಿಶ್ವಾಸಾರ್ಹತೆಯಿಲ್ಲ. ಮಿಲಿಟರಿ ಆಡಳಿತ ಮ್ಯಾನ್ಮಾರ್ ದೇಶದ ಜನರಿಗೆ ಹೊಸದೇನೂ ಅಲ್ಲ. ಸ್ವಾತಂತ್ರ್ತ್ಯ್ಯ ಬಂದ 1948ರ ನಂತರ 25 ವರ್ಷಗಳ ಕಾಲ ಮಿಲಿಟರಿ ಆಡಳಿತ ನಡೆದಿದೆ. 1990ರಲ್ಲಿ ವ್ಯಾಪಕ ವಿದ್ಯಾರ್ಥಿ ಚಳವಳಿಯಿಂದಾಗಿ ಪ್ರಜಾತಂತ್ರ ವ್ಯವಸ್ಥೆ ಅಲ್ಲಿ ಮರು ಸ್ಥಾಪನೆ ಆಯಿತಾದರೂ ಅದು ಬಹಳ ಕಾಲ ಉಳಿಯಲಿಲ್ಲ. ಮ್ಯಾನ್ಮಾರ್ ಮಿಲಿಟರಿಯನ್ನು ದುರ್ಬಲಗೊಳಿಸುವ ದಿಸೆಯಲ್ಲಿ ಅಮೆರಿಕ ಮತ್ತು ಯೂರೋಪಿನ ದೇಶಗಳು ಕೆಲವು ನಿರ್ಬಂಧಗಳನ್ನು ಹಿಂದೆ ಹೇರಿವೆ. ಅವು ಯಾವುವೂ ಮಿಲಿಟರಿ ಶಕ್ತಿಯನ್ನು ಕುಂದಿಸಲಿಲ್ಲ. ಇದೀಗ ಮತ್ತಷ್ಟು ನಿರ್ಬಂಧಗಳನ್ನು ಹೇರಲಾಗಿದೆ. ಪ್ರಜಾತಂತ್ರ ವ್ಯವಸ್ಥೆ ಮರು ಸ್ಥಾಪಿಸಲು ವಿಶ್ವಸಂಸ್ಥೆ ಮತ್ತೆ ಮಿಲಿಟರಿಯ ಮೇಲೆ ಒತ್ತಡ ಹೇರಿದೆ.
ಈಗ ದೇಶದ ಸೇನೆಯ ಕಮಾಂಡರ್ ಮತ್ತು ಅಧ್ಯಕ್ಷರಾಗಿರುವ ಮಿನ್ ಆಂಗ್ ಲಿಯಾಂಗ್ಗೆ ರಾಜಕೀಯ ಆಕಾಂಕ್ಷೆ ಇರುವುದು ಈಗ ಗುಟ್ಟಾಗಿ ಉಳಿದಿಲ್ಲ. ಆದರೆ ಪ್ರಜಾತಂತ್ರ ಮಾರ್ಗದಲ್ಲಿ ಅವರು ಅಧ್ಯಕ್ಷರಾಗುವ ಸಾಧ್ಯತೆ ಇಲ್ಲ. ಹೀಗಾಗಿ ಬಂದೂಕಿನ ಬಲದಿಂದ ಅವರು ಅಧ್ಯಕ್ಷರಾಗಿದ್ದಾರೆ ಮತ್ತು ಮುಂದುವರಿಯಲು ಎಲ್ಲ ಪ್ರಯತ್ನಗಳನ್ನು ನಡೆಸುತ್ತಾರೆ. ಮೊದಲು ಮಿಲಿಟರಿಗೆ ಯುದ್ಧಾಸ್ತ್ರ ಸಿಗದಂತೆ ಮಾಡಬೇಕು. ನಂತರ ಜಗತ್ತಿನ ಎಲ್ಲ ದೇಶಗಳು ಒಂದಾಗಿ ಒತ್ತಡ ಹೇರಿದರೆ ಬಹುಶಃ ಲಿಯಾಂಗ್ ಬದಲಾಗಬಹುದು. ಆದರೆ ಅಂಥ ಒತ್ತಡ ಬರುವ ಸಾಧ್ಯತೆಯೇ ಕಾಣಿಸುತ್ತಿಲ್ಲ.
ಹನೂರು : ತಾಲೂಕಿನ ಶೆಟ್ಟಳ್ಳಿ ಗ್ರಾಮದಲ್ಲಿ ಒಕ್ಕಣೆ ಕಣದಲ್ಲಿ ಹಾಕಲಾಗಿದ್ದ ರಾಗಿ ಫಸಲಿಗೆ ಬೆಂಕಿ ಬಿದ್ದು ಸುಮಾರು 30 ಕ್ವಿಂಟಾಲ್…
ಬೆಳಗಾವಿ : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆರೋಗ್ಯದಲ್ಲಿ ತುಸು ಏರುಪೇರು ಆದ ಕಾರಣ, ಇಂದು (ಡಿಸೆಂಬರ್ 17) ವಿಧಾನಸಭೆ ಅಧಿವೇಶನದಲ್ಲಿ…
ನಂಜನಗೂಡು : ದಕ್ಷಿಣ ಕಾಶಿ ಎಂದೇ ಹೆಸರಾಗಿರುವ, ಆದಾಯದಲ್ಲಿ ರಾಜ್ಯದಲ್ಲಿ ಐದನೇ ಸ್ಥಾನದಲ್ಲಿರುವ ನಂಜನಗೂಡು ಶ್ರೀಕಂಠೇಶ್ವರ ದೇವಾಯದಲ್ಲಿ ಲಕ್ಷಾಂತರ ರೂ.…
ಹೊಸದಿಲ್ಲಿ : ಪ್ರಧಾನಿ ನರೇಂದ್ರ ಮೋದಿ ಅವರಿಗೆ ಇಥಿಯೋಪಿಯಾದ ಅತ್ಯುನ್ನತ ಪ್ರಶಸ್ತಿ ‘ದಿ ಗ್ರೇಟ್ ಆನರ್ ನಿಶಾನ್ ಆಫ್ ಇಥಿಯೋಪಿಯಾ’…
ಮಂಗಳೂರು : ಧರ್ಮಸ್ಥಳ ಗ್ರಾಮದಲ್ಲಿ ನೂರಾರು ಶವ ಹೂತಿಟ್ಟ ಪ್ರಕರಣದಲ್ಲಿ ವಿಶೇಷ ತನಿಖಾ ತಂಡದಿಂದ ಬಂಧನಕ್ಕೆ ಒಳಗಾದ ಚಿನ್ನಯ್ಯ ಕೊನೆಗೂ…