ಎಡಿಟೋರಿಯಲ್

ಹುಲಿ ಸಂತತಿ ಹೆಚ್ಚಳವೇ ಕೊಡಗಿಗೆ ಮುಳುವಾಗಲಿದೆಯೇ?

ದೇಶದೆಲ್ಲೆಡೆ ಹುಲಿ ಸಂತತಿ ಹೆಚ್ಚಾಗಿದೆ. ಈಗಾಗಲೇ ನಶಿಸುತ್ತಿರುವ ಹುಲಿಗಳ ರಕ್ಷಣೆಯಲ್ಲಿ ಸಾಧನೆ ಮಾಡಿರುವುದು ವನ್ಯಜೀವಿ ಪ್ರೇಮಿಗಳಿಗೆ ಸಂತಸ ತಂದಿರುವುದಂತೂ ನಿಜ. ಆದರೆ, ಹುಲಿಗಳ ಸಂಖ್ಯೆ ಹೆಚ್ಚಳದಿಂದ ಅರಣ್ಯದಂಚಿನ ಕೊಡಗು ಜಿಲ್ಲೆಯ ಜನತೆ ಜೀವಭಯದಲ್ಲಿ ಬದುಕುವಂತಾಗಿದೆ.

ಹುಲಿಗಳ ಸಂಖ್ಯೆಯಲ್ಲಿ ಗಣನೀಯ ಏರಿಕೆಯಾದ ಪರಿಣಾಮ ಕೊಡಗಿನ ಅರಣ್ಯದಂಚಿನ ಗ್ರಾಮಗಳು ಸೇರಿದಂತೆ ಜಲ ಮೂಲಗಳಿರುವ ಕಾಫಿ ತೋಟಗಳಲ್ಲಿ ಹುಲಿಗಳು ಪ್ರತ್ಯಕ್ಷವಾಗುತ್ತಿವೆ. ಭತ್ತದ ಗದ್ದೆಗಳ ಏರಿ, ತೋಟದ ನಡುವೆ ಹುಲಿ ಹೆಜ್ಜೆ ಪತ್ತೆಯಾಗುತ್ತಿದೆ. ಮೇಯಲು ಬಿಟ್ಟ ಜಾನುವಾರುಗಳ ಮೇಲೆ ದಾಳಿ ಮಾಡಿ ಅವುಗಳ ಸಾವಿಗೆ ಕಾರಣವಾಗುತ್ತಿರುವುದು ಆತಂಕ ಮೂಡಿಸಿವೆೆ.

ರಾಜೀವ್ ಗಾಂಧಿ ರಾಷ್ಟ್ರೀಯ ಉದ್ಯಾನವನ ನಾಗರಹೊಳೆಗೆ ಹೊಂದಿಕೊಂಡಂತೆ ಇರುವ ವಿರಾಜಪೇಟೆ ತಾಲ್ಲೂಕಿನ ಬಹುತೇಕ ಗ್ರಾಮಗಳು ಈ ಸಮಸ್ಯೆ ಎದುರಿಸುತ್ತಿದೆ. ನಾಗರಹೊಳೆ ಅಂಚಿನಲ್ಲಿರುವ ಕಾರಣ ವಿರಾಜಪೇಟೆ ತಾಲ್ಲೂಕಿನ ಬಾಳುಗೋಡು, ಕಿರುಮಕ್ಕಿ, ಕಲ್ಲುಬಾಣೆ, ಬಾಳೆಲೆ, ನಿಟ್ಟೂರು, ಶ್ರೀಮಂಗಲ, ಬಿಟ್ಟಂಗಾಲ, ಕೆದಮಯಳ್ಳೂರು, ತೋರ, ಬಿರುನಾಣಿ, ಆರ್ಜಿ ಗ್ರಾಮಗಳಲ್ಲಿ ಹುಲಿಕಾಟ ಹೆಚ್ಚಾಗಿದ್ದು ಜಾನುವಾರುಗಳು ಬಲಿಯಾಗಿವೆ.

ಇದೀಗ ಸಿದ್ದಾಪುರ ವ್ಯಾಪ್ತಿಯಲ್ಲಿ ಕಾಣಿಸಿಕೊಳ್ಳುತ್ತಿರುವ ಹುಲಿಯೊಂದು ಅರಣ್ಯ ಇಲಾಖೆಗೆ ತಲೆನೋವಾಗಿ ಪರಿಣಮಿಸಿದೆ.

ಕಳೆದ ಕೆಲ ತಿಂಗಳ ಹಿಂದೆಯಷ್ಟೇ ಹುಲಿ ದಾಳಿಯಿಂದ ಹಸು ಮೃತಪಟ್ಟಿದ್ದರಿಂದ ಇಲ್ಲಿನ ರೈತರೊಬ್ಬರಿಗೆ ಪರಿಹಾರ ಒದಗಿಸಲಾಗಿತ್ತು. ಆ ಪರಿಹಾರ ಹಣದಲ್ಲಿ ಮತ್ತೊಂದು ಹಸುವನ್ನು ರೈತ ಕೊಂಡುಕೊಂಡಿದ್ದರು. ಇದೀಗ ಆ ಹಸುವನ್ನ್ನೂ ಕೂಡ ಹುಲಿ ಬಲಿ ಪಡೆದಿದೆ. ಹೀಗೆ ಮತ್ತೆ ಮತ್ತೆ ಹುಲಿ ದಾಳಿ ಮಾಡುತ್ತಿದ್ದ್ದರೆ ರೈತರಿಗೆ ಶಾಶ್ವತ ಪರಿಹಾರ ದೊರಕುವುದು ಯಾವಾಗ ಎಂಬುದೇ ಯಕ್ಷಪ್ರಶ್ನೆಯಾಗಿದೆ.

ಒಂದೇ ವಾರದಲ್ಲಿ ೪ ಜಾನುವಾರುಗಳನ್ನು ವ್ಯಾಘ್ರ ಕೊಂದು ಹಾಕಿರುವ ಹಿನ್ನೆಲೆ ಸ್ಥಳೀಯರು ಅರಣ್ಯ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಸರ್ಕಾರ ಜನರಿಗೆ ತೊಂದರೆ ಕೊಡುತ್ತಿರುವ ಹುಲಿ ಯನ್ನು ಹಿಡಿಯಲು ಆದೇಶ ನೀಡಿದೆ. ಅರಣ್ಯ ಇಲಾಖೆ ವತಿಯಿಂದ ೪ ಸಾಕಾನೆಗಳ ಸಹಾಯದಿಂದ ಸುಮಾರು ೫೦ ಮಂದಿ ೧ ವಾರದಿಂದ ಕಾರ್ಯಾಚರಣೆ ನಡೆಸುತ್ತಿದ್ದರೂ ಹುಲಿ ಸೆರೆ ಸಾಧ್ಯವಾಗಿಲ್ಲ.

ಕಾರ್ಯಾಚರಣೆ ನಡೆಸುತ್ತಿರುವ ಸಂದರ್ಭದಲ್ಲೇ ಹುಲಿ ರಸ್ತೆ ಬದಿ ಮೇಯುತ್ತಿದ್ದ ಹಸುವೊಂದನ್ನು ಹೊತ್ತೊಯ್ದಿದೆ. ಇದೇ ರಸ್ತೆಯಲ್ಲಿ ಕಾರ್ಮಿಕರು, ಶಾಲಾ ಮಕ್ಕಳು ಸಂಚರಿಸುತ್ತಿರುವುದರಿಂದ ಪ್ರತಿದಿನ ಜೀವಭಯದಲ್ಲಿ ಸ್ಥಳೀಯರು ದಿನ ಕಳೆಯುವಂತಾಗಿದೆ.

ಇತ್ತೀಚೆಗೆ ಕಾರ್ಯಾಚರಣೆ ತಂಡಕ್ಕೆ ಹುಲಿ ಕಾಣಿಸಿಕೊಂಡಿತ್ತು. ಅರವಳಿಕೆ ಪ್ರಯೋಗ ನಡೆಸಿದರೂ ಹುಲಿ ಚಳ್ಳೆಹಣ್ಣು ತಿನ್ನಿಸಿ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿತ್ತು. ಆದರೆ, ಮತ್ತೆ ಕಾಫಿ ತೋಟಗಳ ನಡುವೆ ಹುಲಿ ಪ್ರತ್ಯಕ್ಷವಾಗುತ್ತಿದ್ದು, ಅರಣ್ಯ ಇಲಾಖೆ ಅಳವಡಿಸಿದ ಸಿಸಿ ಕ್ಯಾಮೆರಾಗಳಲ್ಲಿ ಹುಲಿಯ ಚಹರೆ ಪತ್ತೆಯಾಗುತ್ತಿದೆ. ಅರ್ಧ ತಿಂದಿರುವ ಹಸುವಿನ ಕಳೇಬರ ಬಳಿ ೨ ಬೋನ್ ಇಟ್ಟರೂ ಹುಲಿ ಸೆರೆಯಾಗುತ್ತಿಲ್ಲ.

ಹುಲಿ ದಾಳಿ ಮಾಡುವ ಪ್ರದೇಶದಲ್ಲಿ ಸತ್ತ ಜಾನುವಾರುವಿನ ಕಳೇಬರ ಇಟ್ಟು ಬೋನಲ್ಲಿ ಹಿಡಿಯುವುದು ಕಷ್ಟ ಸಾಧ್ಯವಾಗುತ್ತಿದೆ. ಕಾರಣ ಹೀಗೆ ಮಾಂಸ ಅರಸಿ ಹುಲಿಗಳು ಅದೇ ಸ್ಥಳದಲ್ಲೇ ಅಡ್ಡಾಡುತ್ತವೆ ಅಂದರೆ ಅದು ವಯಸ್ಸಾಗಿರಬೇಕು, ಇಲ್ಲವೇ ಗಾಯವಾಗಿ ಬೇಟೆಯಾಡಲು ಶಕ್ತಿ ಇಲ್ಲದೆಯೂ ಇರಬಹುದು ಅಥವಾ ತಾಯಿಯಿಂದ ಬೇರ್ಪಟ್ಟು ತನ್ನದೇ ಆವಾಸ ತಾಣ ಮಾಡಿಕೊಂಡಿರಬೇಕು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಈಗಾಗಲೇ ಹುಲಿಗಳ ಪತ್ತೆಗೆ ಟೈಗರ್ ಟ್ರಾಪ್ ಕ್ಯಾಮೆರಾಗಳನ್ನು ಅಳವಡಿಸುವ ಕೆಲಸ ಆಗಿದ್ದರೂ ಅವುಗಳ ಸ್ಥಳ(ಲೊಕೇಷನ್) ಪತ್ತೆಗೆ ಕಾಲರ್ ಐಡಿ ಅಳವಡಿಸಿ ಬಳಿಕ ಸೆರೆ ಕಾರ್ಯಾಚರಣೆ ಸೂಕ್ತ ಎನ್ನಲಾಗುತ್ತಿದೆ.

ಇನ್ನು ಅರಣ್ಯದಲ್ಲಿ ಹುಲಿಗಳಿಗೂ ಬೇಟೆಯಾಡಲು ಸೂಕ್ತ ಪ್ರಾಣಿಗಳು ಸಿಗದಿರುವುದು ಕೂಡ ಹುಲಿ ದಾಳಿ ಹೆಚ್ಚಳಕ್ಕೆ ಕಾರಣ. ಇದರಿಂದ ಅರಣ್ಯದಂಚಿನಲ್ಲಿ ಸುಲಭವಾಗಿ ಸಿಗುವ ಜಾನುವಾರುಗಳು ಹುಲಿಗಳಿಗೆ ಆಹಾರವಾಗುತ್ತಿವೆ. ಅರಣ್ಯ ಇಲಾಖೆ ಕಾಡಿನಲ್ಲೇ ಹುಲಿಗಳಿಗೆ ಆಹಾರ ದೊರಕುವಂತಹ ಪೂರಕ ವಾತಾವರಣ ನಿರ್ಮಾಣ ಮಾಡಬೇಕಿದೆ. ಇದಕ್ಕಾಗಿಯೆ ಅರಣ್ಯ ಇಲಾಖೆಯಲ್ಲಿರುವ ಸಿಬ್ಬಂದಿಗಳಿಗೆ ಅಗತ್ಯ ಸೌಲಭ್ಯ ಒದಗಿಸುವುದು ಸೂಕ್ತ ಎಂಬುದು ತಜ್ಞರ ಸಲಹೆ.

ಈ ಎಲ್ಲಾ ವಿಚಾರಗಳ ಬಗ್ಗೆ ಸರ್ಕಾರ ಗಂಭೀರವಾಗಿ ಪರಿಗಣಿಸಬೇಕಾದ ಅವಶ್ಯಕತೆ ಇದೆ. ಕೊಡಗಿನ ಹುಲಿ ಹಾವಳಿ ತಡೆಯಲು ತಜ್ಞರ ಸಲಹೆ ಪಡೆದು ಶಾಶ್ವತ ಪರಿಹಾರ ಒದಗಿಸಬೇಕಿದೆ. ಇಲ್ಲದಿದ್ದಲ್ಲಿ ಅರಣ್ಯದಂಚಿನ ಗ್ರಾಮೀಣ ಭಾಗದ ಜನತೆ ಮನೆಯಿಂದ ಹೊರಬರಲೂ ಹಿಂದೇಟು ಹಾಕಬೇಕಾದ ಪರಿಸ್ಥಿತಿ ನಿರ್ಮಾಣವಾಗಲಿದೆ.

andolana

Recent Posts

ಲೋಕಾಯುಕ್ತ ಬಲೆಗೆ ಬಿದ್ದ ಪಿಡಿಒ

ಮೈಸೂರು: ಇ-ಸ್ವತ್ತು ಮಾಡಿ ಕೊಡಲು ಅರ್ಜಿದಾರರಿಗೆ ಹಣ ನೀಡುವಂತೆ ಒತ್ತಾಯ ಮಾಡಿದ ಗ್ರಾಮ ಪಂಚಾಯಿತಿ ಪಿಡಿಒ ಕುಳ್ಳೇಗೌಡ ನಾಲ್ಕು ಸಾವಿರ…

4 hours ago

ಅರ್ಥಪೂರ್ಣವಾಗಿ ಕನ್ನಡ ರಾಜ್ಯೋತ್ಸವ ಆಚರಣೆ – ಡಾ. ಪಿ ಶಿವರಾಜ್

ಮೈಸೂರು: ಕಳೆದ ಬಾರಿಯಂತೆ ಈ ಬಾರಿಯೂ ಅರ್ಥಪೂರ್ಣ ಹಾಗೂ ಅದ್ದೂರಿಯಾಗಿ ಕನ್ನಡ ರಾಜ್ಯೋತ್ಸವ ಆಚರಣೆ ಮಾಡಲಾಗುವುದು ಎಂದು ಅಪರ ಜಿಲ್ಲಾಧಿಕಾರಿ…

5 hours ago

ನಗರದ ಆರೋಗ್ಯ ಕಾಪಾಡುವ ಪೌರಕಾರ್ಮಿಕರ ಆರೋಗ್ಯವೂ ಮುಖ್ಯ: ಜಿ ಟಿ ದೇವೇಗೌಡ

ಮೈಸೂರು: ನಗರವನ್ನು ಸ್ವಚ್ಛಗೊಳಿಸುವ ಮೂಲಕ ಜನರ ಆರೋಗ್ಯ ಕಾಪಾಡುವ ಪೌರಕಾರ್ಮಿಕರ ಆರೋಗ್ಯವೂ ಮುಖ್ಯ ವಾಗಿದ್ದು, ಅವರು ಈ ವಿಷಯದಲ್ಲಿ ನಿರ್ಲಕ್ಷ್ಯ…

6 hours ago

ಹನೂರು: ಗುಂಡಿಮಯವಾದ ರಸ್ತೆ, ಸಾಮಾಜಿಕ ಜಾಲತಾಣ ಮೂಲಕ ಯುವಕ ವ್ಯಂಗ್ಯ

ಹನೂರು: ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಅತಿ ದೊಡ್ಡ ಗ್ರಾಮ ಪಂಚಾಯಿತಿ ಎಂದು ಪ್ರಸಿದ್ಧಿ ಪಡೆದಿರುವ ಮಾರ್ಟಳ್ಳಿ ಗ್ರಾಮ ಪಂಚಾಯಿತಿ ಮುಖ್ಯ…

6 hours ago

ಇಶಾ ಫೌಂಡೇಶನ್‌ ವಿರುದ್ಧದ ಪ್ರಕರಣ ವಜಾಗೊಳಿಸಿದ ಸುಪ್ರೀಂಕೋರ್ಟ್‌

ಹೊಸದಿಲ್ಲಿ: ತಮಿಳುನಾಡಿನ ಕೊಯಮತ್ತೂರಿನಲ್ಲಿರುವ ಸದ್ಗುರು ಜಗ್ಗಿ ವಾಸುದೇವ್‌ ಅವರ ಆಶ್ರಮ ಸೇರಲು ತನ್ನ ಇಬ್ಬರು ಹೆಣ್ಣುಮಕ್ಕಳನ್ನು ಬ್ರೈನ್‌ವಾಶ್‌ ಮಾಡಲಾಗಿದೆ ಎಂಬ…

7 hours ago

ಮಡಿಕೇರಿ: ಮಗನಿಂದಲೇ ತಂದೆಯ ಹತ್ಯೆ..

ಮಡಿಕೇರಿ: ಮಗನಿಂದಲೇ ತಂದೆ ಹತ್ಯೆಯಾದ ಘಟನೆ ಶ್ರೀಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯ ಚಿಕ್ಕಮಂಡೂರು ಗ್ರಾಮದಲ್ಲಿ ನಡೆದಿದೆ. ಸಿ ಎನ್ ನಾಣಯ್ಯ…

8 hours ago