‘ಪೆಗಸಸ್’ ಎಂಬ ಇಸ್ರೇಲಿ ಬೇಹುಗಾರಿಕೆ ಸೈಬರಾಸ್ತ್ರ ಮಾರುವೇಷ ಧರಿಸಿ ಮರಳಿ ಬರತೊಡಗಿದೆ. ಮೈಕ್ರೋಸಾಫ್ಟ್ ಮತ್ತು ಡಿಜಿಟಲ್ ಹಕ್ಕು ವೇದಿಕೆಯಾದ ಸಿಟಿಜನ್ ಲ್ಯಾಬ್ ಪ್ರಕಾರ ಉತ್ತರ ಅಮೆರಿಕಾ, ಮಧ್ಯ ಏಷ್ಯಾ, ಯೂರೋಪ್ ಹಾಗೂ ಮಧ್ಯಪ್ರಾಚ್ಯದಲ್ಲಿ ಕಳೆದ ವಾರ ಇಸ್ರೇಲಿ ಬೇಹುಗಾರಿಕೆ ಸಾಧನದ ಬಲಿಪಶುಗಳನ್ನು ಗುರುತಿಸಿದೆ.
ಹೀನಸುಳಿ ಬೋಳಿಸಿದರೆ ಹೋದೀತೇ ಎಂಬ ಗಾದೆ ಮಾತಿದೆ. ಪೆಗಸಸ್ ಎಬ್ಬಿಸಿದ್ದ ಬಿರುಗಾಳಿ ಅಡಗುವ ತನಕ ಕಾದಿತ್ತು ಮೋದಿ ಸರ್ಕಾರ. ಪೆಗಸಸ್ ನಂತಹುದೇ ಮತ್ತೊಂದು ಬೇಹುಗಾರಿಕೆ ಸೈಬರಾಸ್ತ್ರದ ಖರೀದಿಗೆ ಇದೀಗ ಪುನಃ ಮುಂದಾಗಿದೆ. ಬ್ರಿಟನ್ನಿನ ಪ್ರಸಿದ್ಧ ದಿನಪತ್ರಿಕೆ ‘ಫೈನಾನ್ಶಿಯಲ್ ಟೈಮ್ಸ್’ ಈ ಸುದ್ದಿಯನ್ನು ಬಯಲಿಗೆಳೆದಿದೆ’. ಪೆಗಸಸ್ನ ಪರ್ಯಾಯ ಬೇಹುಗಾರಿಕೆ ಸಾಧನಗಳ ಪೂರೈಕೆಗಾಗಿ ಭಾರತ ಸರ್ಕಾರ ವಿದೇಶೀ ಸಂಸ್ಥೆಗಳಿಂದ ‘ಬಿಡ್’ ಕರೆದಿದೆ. ಈ ಹೊಸ ಬೇಹುಗಾರಿಕೆ ಸಾಧನಗಳನ್ನು ‘ಪ್ರಿಡೇಟರ್’, ‘ಕಾಗ್ನೆ ಟ್’, ‘ಕ್ವಾಡ್ರೀಮ್’ ಎಂದು ಗುರುತಿಸಿದೆ.
ವಿದೇಶಗಳಿಗೆ ಬಂದದ್ದು ಭಾರತಕ್ಕೆ ಬರದೆ ಇದ್ದೀತೇ? ಈ ಸಾಧನಗಳಿಗೆ ನಮ್ಮ ಸರ್ಕಾರ ಶಾಪಿಂಗ್ ಮಾಡುತ್ತಿದೆ ಎಂಬ ವರದಿಗಳು ಹದಿನೈದು ದಿನಗಳ ಹಿಂದೆಯೇ ಪ್ರಕಟವಾಗಿದ್ದವು.
ದೇಶದ ಎಲ್ಲ ಜನತಾಂತ್ರಿಕ ಸ್ತಂಭಗಳ ಮೇಲೆ ‘ಪೆಗಸಸ್’ ಎಂಬ ಕುಖ್ಯಾತ ಇಸ್ರೇಲಿ ಬೇಹುಗಾರಿಕೆ ಸೈಬರ್ ಅಸ್ತ್ರದ ಅನಾಗರಿಕ ದಾಳಿಯನ್ನು ‘ಮೋ–ಶಾ’ ಸರ್ಕಾರ ವರ್ಷಗಳ ಹಿಂದಷ್ಟೇ ನಡೆಸಿತ್ತು. ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗದ ಜೊತೆಗೆ ನಾಲ್ಕನೆಯ ಅಂಗವೆಂದು ಕರೆಯಲಾಗುವ ಪತ್ರಿಕಾಂಗಗಳು ಈ ಅಕ್ರಮ ಅನೈತಿಕ, ಜನತಂತ್ರ ವಿರೋಧಿ ದಾಳಿಗೆ ತುತ್ತಾಗಿದ್ದವು. ಸಾಮಾಜಿಕ ರಾಜಕೀಯ ಹೋರಾಟಗಾರರನ್ನೂ ಬಿಟ್ಟಿರಲಿಲ್ಲ.
ಅತ್ಯಾಧುನಿಕ ಬೇಹುಗಾರಿಕೆಯ ಈ ತಂತ್ರಾಂಶವನ್ನು ಭಯೋತ್ಪಾದಕರು ಮತ್ತು ಪಾತಕಿಗಳ ವಿರುದ್ಧ ಬಳಸಲಾಗುವ ಶಸ್ತ್ರಾಸ್ತ್ರ ಎಂದು ಖುದ್ದು ಇಸ್ರೇಲ್ ಸರ್ಕಾರವೇ ಕರೆದಿದೆ. ಭಾರತವನ್ನು ಜನತಂತ್ರದ ಜನನಿ ಎಂದು ಸಾರುತ್ತಿರುವವರು ಪತ್ರಕರ್ತರು, ನ್ಯಾಯಮೂರ್ತಿಗಳು, ಮಾನವ ಹಕ್ಕುಗಳ ಹೋರಾಟಗಾರರನ್ನು ಭಯೋತ್ಪಾದಕರೆಂದು ಪರಿಗಣಿಸಿದ್ದಾರೆ.
‘ಪೆಗಸಸ್’ ಎಂಬ ಈ ಅಸ್ತ್ರದ ಖರೀದಿಗೆ ಅಧಿಕಾರ ನೀಡಿದವರು ಯಾರು ಎಂಬ ಅಂಶವನ್ನು ಕೇಂದ್ರ ಸರ್ಕಾರ ಬಹಿರಂಗಪಡಿಸಿಲ್ಲ. ಈ ಸೈಬರಾಸ್ತ್ರವನ್ನು ಖರೀದಿ–ಬಳಕೆ ಕುರಿತು ಸುಪ್ರೀಂ ಕೋರ್ಟು ತನಿಖೆಗೆ ಆದೇಶ ನೀಡಿತ್ತು. ತನಿಖೆಗೆ ಕೇಂದ್ರ ಸರ್ಕಾರ ಸಹಕರಿಸಲಿಲ್ಲ. ಆದರೂ ತನಿಖೆ ಪೂರ್ಣಗೊಂಡಿದ್ದು, ವರದಿ ಈಗಲೂ ಮೊಹರು ಮಾಡಿದ ಲಕೋಟೆಯಲ್ಲಿ ‘ಬಂದಿ’ಯಾಗಿದೆ.
ಪ್ರತಿಪಕ್ಷಗಳ ನಾಯಕರು, ನ್ಯಾಯಮೂರ್ತಿಗಳು, ಪತ್ರಕರ್ತರು, ಮಾನವ ಹಕ್ಕುಗಳ ಹೋರಾಟಗಾರರು, ರಾಜಕೀಯ ಎದುರಾಳಿಗಳನ್ನು ಜನತಂತ್ರ ವಿರೋಧಿ ದಾರಿಗಳಿಂದ ಬಗ್ಗು ಬಡಿಯುವ ಚಾಳಿಯನ್ನು ಮೋಶಾ ಸರ್ಕಾರ ಸುಲಭಕ್ಕೆ ಕೈಬಿಡುವುದಿಲ್ಲ ಎಂಬುದಕ್ಕೆ ಇದೊಂದು ಜೀವಂತ ನಿದರ್ಶನ.
ಭೀಮಾ ಕೋರೆಗಾಂವ್ ಆಪಾದಿತರ ಪೈಕಿ ಒಬ್ಬರಾದ ರೋನಾ ವಿಲ್ಸನ್ ಅವರ ಕಂಪ್ಯೂಟರಿನಲ್ಲಿ ಅಜ್ಞಾತ ಹ್ಯಾಕರ್ ಒಬ್ಬನು ಮೂವತ್ತು ದಸ್ತಾವೇಜುಗಳನ್ನು ‘ನೆಟ್ಟಿದ್ದ’ ನೆಂದು ‘ವಾಷಿಂಗ್ಟನ್ ಪೋಸ್ಟ್’ 2021ರಲ್ಲಿ ವರದಿ ಮಾಡಿತ್ತು. ಆರ್ಸೆನಾಲ್ ಕನ್ಸಲ್ಟಿಂಗ್ ಎಂಬ ವಿಧಿವಿಜ್ಞಾನ ಸಂಸ್ಥೆಯ ತನಿಖೆಯನ್ನು ಈ ವರದಿ ಆಧರಿಸಿತ್ತು. ಇದೇ ವಿಧಿವಿಜ್ಞಾನ ಸಂಸ್ಥೆಯು ಮತ್ತೊಬ್ಬ ಆಪಾದಿತ ಸುರೇಂದ್ರ ಗಾಡ್ಲಿಂಗ್ ಎಂಬ ದಲಿತ ಹಕ್ಕುಗಳ ಹೋರಾಟಗಾರರ ಕಂಪ್ಯೂಟರಿನ ಹಾರ್ಡ್ ಡ್ರೈವ್ನ್ನು ವಿಶ್ಲೇಷಿಸಿತ್ತು. ಹ್ಯಾಕಿಂಗ್ ಮಾಡಿ ಅವರ ಕಂಪ್ಯೂಟರಿಗೆ ಸುಳ್ಳು ಸಾಕ್ಷ್ಯಗಳನ್ನು ಹೊಗಿಸಿದ ಕುರಿತು ಆರ್ಸೆನಾಲ್ ಕನ್ಸಲ್ಟಿಂಗ್ ಸಂಸ್ಥೆಗೆ ಇನ್ನಷ್ಟು ಆಳವಾದ ಪುರಾವೆ ದೊರೆತಿತ್ತು. 2016ರ ಫೆಬ್ರವರಿಯಿಂದ 2017ರ ನವೆಂಬರ್ ತನಕ 20 ತಿಂಗಳ ಕಾಲ ಗಾಡ್ಲಿಂಗ್ ಅವರ ಕಂಪ್ಯೂಟರನ್ನು ಹ್ಯಾಕಿಂಗ್ ಮೂಲಕ ಸುಳ್ಳು ಸಾಕ್ಷ್ಯ ನೆಡಲು ಗುರಿಯಾಗಿಸಲಾಗಿತ್ತು. ರೋನಾ ವಿಲ್ಸನ್ ಅವರ ಕಂಪ್ಯೂಟರಿನಲ್ಲಿ ೩೦ ದಸ್ತಾವೇಜುಗಳನ್ನು ನೆಟ್ಟಿದ್ದ ಅದೇ ಹ್ಯಾಕರ್, ಗಾಡ್ಲಿಂಗ್ ಅವರ ಕಂಪ್ಯೂಟರಿನಲ್ಲಿ 14 ಸುಳ್ಳು ಸಾಕ್ಷ್ಯದ ದಸ್ತಾವೇಜುಗಳನ್ನು ನೆಟ್ಟಿದ್ದಾನೆ ಎಂದು ಆರ್ಸನಾಲ್ ಹೇಳಿತ್ತು.
ಸುರೇಂದ್ರ ಗಾಡ್ಲಿಂಗ್ ಮತ್ತು ರೋನಾ ವಿಲ್ಸನ್ ಅವರಂತೆ ಸ್ಟ್ಯಾನ್ ಸ್ವಾಮಿ ಮತ್ತು ಎಲ್ಗರ್ ಪರಿಷತ್–ಭೀಮಾ ಕೋರೆಗಾಂವ್ ಪ್ರಕರಣದ ಇತರೆ 13 ಮಂದಿ ಬಂಧಿತರೂ ಹ್ಯಾಕಿಂಗ್ ಸಂಚಿನ ಬಲಿಪಶುಗಳಾಗಿದ್ದರೆ ಆಶ್ಚರ್ಯವಿಲ್ಲ ಎಂದೂ ಆರ್ಸೆನಾಲ್– ವಾಷಿಂಗ್ಟನ್ ಪೋಸ್ಟ್ ವರದಿ ಹೇಳಿದೆ.
ನಿರ್ದಿಷ್ಟ ಮೊಬೈಲ್ ಪೋನ್ ಅಥವಾ ಕಂಪ್ಯೂಟರಿಗೆ ಸುಳಿವೇ ಇಲ್ಲದಂತೆ ನುಗ್ಗಿಸಲಾಗುವ ಈ ಅಸ್ತ್ರ ಸಂಬಂಧಪಟ್ಟ ಫೋನ್ ಅಥವಾ ಕಂಪ್ಯೂಟರನ್ನು ಸಂಪೂರ್ಣ ನಿಯಂತ್ರಣಕ್ಕೆ ತೆಗೆದುಕೊಳ್ಳುತ್ತದೆ. ಅರ್ಥಾತ್ ಆ ಪೋನ್–ಕಂಪ್ಯೂಟರನ್ನು ಬೇಹುಗಾರಿಕೆ ನಡೆಸುವವರ ನಿಯಂತ್ರಣಕ್ಕೆ ಒಪ್ಪಿಸಿಕೊಡುತ್ತದೆ. ಆ ಫೋನಿನ ಮಾಲೀಕ ನಿರ್ದಿಷ್ಟ ಫೋನಿನಲ್ಲಿ ಮಾಡಬಹುದಾದ ಎಲ್ಲ ಕ್ರಿಯೆಗಳನ್ನು ಬೇಹುಗಾರಿಕೆ ನಡೆಸುವವರೂ ಮಾಡಬಹುದು. ಅಷ್ಟೇ ಅಲ್ಲ, ಶಿಕಾರಿಯಾದ ಫೋನಿನ ಆಸುಪಾಸು ನಡೆಯುವ ಮಾತುಕತೆಗಳು, ಚಟುವಟಿಕೆಗಳ ಧ್ವನಿಮುದ್ರಣ ಮಾಡಿಕೊಳ್ಳಬಹುದು. ಫೋನಿನ ಕ್ಯಾಮೆರಾ ತಂತಾನೇ ಚಾಲನೆಯಾಗಿ ಫೋನಿನ ಆಸುಪಾಸು ನಡೆಯುವ ಎಲ್ಲ ದೃಶ್ಯಗಳನ್ನೂ ಚಿತ್ರೀಕರಿಸಿಕೊಂಡು ಬೇಹುಗಾರರಿಗೆ ರವಾನಿಸುತ್ತದೆ. ಬೇಹುಗಾರಿಕೆಗೆ ಶಿಕಾರಿಯಾದ ಫೋನನ್ನು ಸೈಬರಾಸ್ತ್ರ ಪ್ರವೇಶ ಮಾಡುವುದರಿಂದ ಹಿಡಿದು, ಅದು ನಡೆಸುವ ಈ ಯಾವುದೇ ಕ್ರಿಯೆಯು ಫೋನಿನ ಒಡತಿ–ಒಡೆಯನ ಅರಿವಿಗೆ ಬರುವುದೇ ಇಲ್ಲ. ನಾಲ್ಕು ಗೋಡೆಯ ನಡುವೆ ನಡೆಯುವ ತಮ್ಮ ಎಲ್ಲ ಚಟುವಟಿಕೆಗಳನ್ನು ಬಟಾಬಯಲಿನಲ್ಲಿ ನಡೆಸಿದಂತೆ. ಊಹೆಗೂ ನಿಲುಕದ ಭಯಾನಕ ಸ್ಥಿತಿ. ಹೀಗಾಗಿ ಈ ಬೇಹುಗಾರಿಕೆ ಇಲ್ಲಿಯ ತನಕ ನಾವು ಕಂಡು ಕೇಳಿರುವ ಕೇವಲ ಫೋನುಗಳ ಕದ್ದಾಲಿಕೆಯ ಸಾಧಾರಣ ಬೇಹುಗಾರಿಕೆ ಅಲ್ಲ.
ಭಯೋತ್ಪಾದನೆ ಮತ್ತಿತರೆ ಘೋರ ಪಾತಕಗಳನ್ನು ಮುಂಚಿತವಾಗಿಯೇ ತಿಳಿದು ತಡೆಯಲು ಮತ್ತು ಅಪರಾಧಗಳ ತನಿಖೆಯ ಕಾನೂನಾತ್ಮಕ ಬಳಕೆಗೆ ಈ ತಂತ್ರಾಂಶ ಮೀಸಲು. ಕೇವಲ ಸರ್ಕಾರಗಳಿಗೆ ಮಾತ್ರವೇ ಈ ಸೈಬರ್ ಅಸ್ತ್ರವನ್ನು ಮಾರಾಟ ಮಾಡಲಾಗುವುದು ಎಂದು ಇಸ್ರೇಲ್ ಸರ್ಕಾರ ಮತ್ತು ಪೆಗಸಸ್ ತಯಾರಿಸುವ ಎನ್.ಎಸ್.ಒ. ಸ್ಪಷ್ಟಪಡಿಸಿದ್ದವು. ಆದರೆ ಈ ಅಸ್ತ್ರವನ್ನು ಭಾರತವೂ ಸೇರಿದ 50 ದೇಶಗಳ ಪತ್ರಕರ್ತರು, ಹೋರಾಟಗಾರರು, ಪ್ರತಿಪಕ್ಷಗಳ ರಾಜಕಾರಣಿಗಳು ಹಾಗೂ ಭಿನ್ನಮತೀಯರ ಮೇಲೆ ಬೇಹುಗಾರಿಕೆ ನಡೆಸಲು ದುರುಪಯೋಗ ಮಾಡಲಾಗಿತ್ತು. ಜಗತ್ತಿನ ಬಹುತೇಕ ದೇಶಗಳು ‘ಪೆಗಸಸ್’ನ್ನು ಕಪ್ಪು ಪಟ್ಟಿಗೆ ಸೇರಿಸಿವೆ.
ಬೇಹುಗಾರಿಕೆ ಎಂಬುದು ರಾಜ್ಯಾಡಳಿತದ ಅವಿಭಾಜ್ಯ ಅಂಗವೇ ಆಗಿ ಹೋಗಿದೆ. ಈ ಕ್ರಿಯೆಗೆ ಧರ್ಮ– ಕರ್ಮದ ನೈತಿಕ ತಳಹದಿ ಇರಬೇಕು. ನೀತಿ ಸಂಹಿತೆ ಹೊಂದಿರಬೇಕು.ಎಂದು ಮೋಶಾ ಮೆಚ್ಚುವ ಕೌಟಿಲ್ಯನ ಅರ್ಥ ಶಾಸ್ತ್ರವೇ ವಿಧಿಸಿದೆ.
ದೇಶದ ಸಮಗ್ರತೆ ಮತ್ತು ಭದ್ರತೆಯನ್ನು ಕಾಪಾಡಲು, ಸಾರ್ವಜನಿಕ ಒಳಿತು ಸಾಧಿಸಲು ಸಂಬಂಧಪಟ್ಟ ವ್ಯಕ್ತಿಗಳ ಮೇಲೆ ಗೋಪ್ಯ ನಿಗಾ ಇರಿಸಿ ಅವರ ದೂರವಾಣಿ ಮಾತುಕತೆಗಳು ಮತ್ತು ಡಿಜಿಟಲ್ ಗೌಪ್ಯ ಮಾಹಿತಿಗಳನ್ನು ವಶಕ್ಕೆ ತೆಗೆದುಕೊಂಡು ಕಾನೂನು ಕ್ರಮ ಜರುಗಿಸುವ ಅಽಕಾರ ಸರ್ಕಾರಗಳಿಗೆ ಇದೆ. ಭಾರತೀಯ ಟೆಲಿಗ್ರಾಫ್ ಕಾಯಿದೆ, ಭಾರತೀಯ ಮಾಹಿತಿ ತಂತ್ರಜ್ಞಾನ ಕಾಯಿದೆಯಲ್ಲಿ ಈ ಅವಕಾಶ ಕಲ್ಪಿಸಲಾಗಿದೆ. ಆದರೆ ಹಾಗೆ ಮಾಡಲು ಕಾನೂನು ವಿಧಿ ವಿಧಾನಗಳಿವೆ. ಬೇಕಾಬಿಟ್ಟಿ ನಡೆಸಲಾಗುವುದಿಲ್ಲ..
ತನ್ನ ಪ್ರಜೆಗಳ ನಾಗರಿಕ ಹಕ್ಕುಗಳು ಮತ್ತು ಖಾಸಗಿತನವನ್ನು ಗೌರವಿಸಿ ರಕ್ಷಿಸುವುದು ಆಯಾ ದೇಶದ ಸರ್ಕಾರಗಳ ಆದ್ಯ ಕರ್ತವ್ಯ.
ನಂಜನಗೂಡು: ದಕ್ಷಿಣ ಕಾಶಿ ನಂಜನಗೂಡಿನಲ್ಲಿ ಕಪಿಲಾ ನದಿ ಪಕ್ಕದಲ್ಲೇ ಇದ್ದರೂ ಜನತೆಗೆ ಕುಡಿಯುವ ನೀರಿನ ಅಭಾವ ಎದುರಾಗಿದೆ. ಹಳ್ಳಿಗಳಿಗೆ ನದಿ…
ಬೆಂಗಳೂರು: ರಾಜ್ಯದಲ್ಲಿ ಇನ್ನೂ ಒಂದು ವಾರಗಳ ಕಾಲ ಧಾರಾಕಾರ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಪೂರ್ವವ ಮಧ್ಯ…
ಇತ್ತೀಚೆಗೆ ಮೈಸೂರಿನಲ್ಲಿ ಸರಗಳ್ಳತನ ಪ್ರಕರಣಗಳು ವರದಿಯಾಗುತ್ತಿದ್ದು, ಮಹಿಳೆಯರು ಒಂಟಿಯಾಗಿ ರಸ್ತೆಯಲ್ಲಿ ಓಡಾಡಲು ಹೆದರುವಂತಾಗಿದೆ. ಎರಡು ದಿನಗಳ ಹಿಂದಷ್ಟೇ ನಮ್ಮ ಸಂಬಂಧಿಕರೊಬ್ಬರು…
ಕನ್ನಡದ ಖಾಸಗಿ ಚಾನೆಲ್ವೊಂದರಲ್ಲಿ ಪ್ರಸಾರವಾಗುತ್ತಿರುವ ಬಿಗ್ಬಾಸ್ ಸೀಸನ್-11 ವಿವಾದಗಳಿಂದಲೇ ಸುದ್ದಿಯಾಗುತ್ತಿದ್ದು, ಸ್ಪರ್ಧಿಗಳು ನಿತ್ಯ ಜಗಳವಾಡುತ್ತಿರುವುದರಿಂದ ಕಾರ್ಯಕ್ರಮ ವೀಕ್ಷಿಸುವವರಿಗೆ ಕಿರಿಕಿರಿಯಾಗುತ್ತಿದೆ. ವಿವಿಧ…
ನಾಡಹಬ್ಬ ದಸರಾ ಮಹೋತ್ಸವದಲ್ಲಿ ಈ ಬಾರಿ ಜನ ಸಾಗರವೇ ಹರಿದು ಬಂದಿತ್ತು. ದಸರಾ ಅಂಗವಾಗಿ ಆಯೋಜಿಸಿದ್ದ ಯುವ ಸಂಭ್ರಮ, ಯುವ…
ಸರ್ಕಾರವೇ ನಮ್ಮ ದೇವರಾಗಿದೆ ಮೇಲಾಧಿಕಾರಿಗಳ ಮೇಲೆ ಗೌರವವಿದೆ ಜನರ ಸಮಸ್ಯೆಗಳ ಅರಿವಿದೆ ಅವರಿಗಾದ ಅಡಚಣೆಗೆ ವಿಷಾದವಿದೆ ನಮಗೂ ಬದುಕಿದೆ. ನಮ್ಮದೂ…