ಎಡಿಟೋರಿಯಲ್

ಆಳುವವರ ನಿರ್ಲಕ್ಷ್ಯಕ್ಕೆ ಹಾಳುಹಂಪೆಯಂತಾಗಬೇಕಾ ಮೈಸೂರು?

ಮುತ್ತು-ರತ್ನಗಳನ್ನು ಬೀದಿ ಬದಿಯಲ್ಲಿ ರಾಶಿ ಹಾಕಿಕೊಂಡು ಮಾರಲಾಗುತ್ತಿತ್ತು ಎಂದು ಇತಿಹಾಸದ ಪಾಠಗಳಲ್ಲಿ ಓದುವಾಗ ವಿಜಯ ನಗರ ಸಾಮ್ರಾಜ್ಯದ ಬಗ್ಗೆ ಹೆಮ್ಮೆ ಎನಿಸಿ, ಶ್ರೀ ಕೃಷ್ಣದೇವರಾಯ ಕಟ್ಟಿದ ಆ ವೈಭವದ ಸಾಮ್ರಾಜ್ಯವನ್ನು ಕಣ್ತುಂಬಿಕೊಳ್ಳಬೇಕೆಂಬ ಮಹಾದಾಸೆಯಿಂದ ಹಂಪಿಗೆ ಕಾಲಿಟ್ಟವರಿಗೆ ಅಲ್ಲಿನ ಶಿಲ್ಪಕಲಾ ವೈಭವ ರೋಮಾಂಚನಗೊಳಿಸುವ ಜೊತೆ ಜೊತೆಗೆ ಲೂಟಿಕೋರರಿಂದ ದಾಳಿಗೊಳಗಾಗಿ ಭಗ್ನಗೊಂಡು ನಿಂತಿರುವ ದೇವಾಲಯಗಳು, ದೇವರ ಮೂರ್ತಿಗಳನ್ನು ಹಾಳು ಹಂಪಿಯಲ್ಲಿ ಕಂಡಾಗ ಎಂಥವರಿಗೂ ವ್ಯಥೆ ಉಂಟಾಗದಿರದು. ಹಂಪಿಯನ್ನು ವಿಶ್ವಸಂಸ್ಥೆ ಪಾರಂಪರಿಕ ತಾಣಗಳ ಪಟ್ಟಿಗೆ ಸೇರಿಸಿರುವ ಕಾರಣಕ್ಕೆ ಹಂಪಿಯ ಗತ ವೈಭವವನ್ನು ಜತನದಿಂದ ಕಾಯ್ದುಕೊಳ್ಳಲಾಗುತ್ತಿದೆ.

ಆದರೆ, ಹಳೇ ಮೈಸೂರು ಭಾಗದಲ್ಲಿ ಮೈಸೂರು ಅರಸರು ಅಭಿವೃದ್ಧಿ ಕಾರ್ಯಗಳಿಗೆ ಶ್ರೀಕಾರ ಹಾಕಿ ಬಿಟ್ಟು ಹೋಗಿರುವ ಕುರುಹುಗಳನ್ನು ಕಾಪಿಟ್ಟು ಕಾಯ್ದುಕೊಳ್ಳುವಲ್ಲಿ ನಮ್ಮನ್ನಾಳುವ ಸರ್ಕಾರಗಳು ಎಡವಿವೆ ಎಂದೇ ಹೇಳಬೇಕು.

ಮೈಸೂರು ಅರಸರ ಅಳ್ವಿಕೆಯ ಕಾಲದಲ್ಲಿ ಕಟ್ಟಿಸಲಾಗಿರುವ ನೂರಾರು ಕಟ್ಟಡಗಳು ತಮ್ಮ ಗತ ಇತಿಹಾಸವನ್ನು ಸಾರುತ್ತಾ ನಿಂತಿವೆ. ಪಾರಂಪರಿಕ ಕಟ್ಟಡಗಳೆಂದು ಪಟ್ಟಿ ಮಾಡಲಾಗಿರುವ ಈ ಕಟ್ಟಡಗಳನ್ನು ನಾಡಹಬ್ಬ ದಸರಾ ಸಂದರ್ಭದಲ್ಲಿ ಮೈಸೂರಿಗೆ ಬರುವ ಪ್ರವಾಸಿಗರು ಈ ಕಟ್ಟಡಗಳನ್ನು ಕಣ್ತುಂಬಿಕೊಳ್ಳುವುದಕ್ಕೆ ಮಾತ್ರ ಸರ್ಕಾರದ ಕಾರ್ಯಕ್ರಮಗಳು ಸೀಮಿತವಾಗುತ್ತಿವೆ.

ನವರಾತ್ರಿ ಸಂದರ್ಭದಲ್ಲಿ ಈ ಕಟ್ಟಡಗಳಿಗೆ ಸುಣ್ಣ-ಬಣ್ಣ ಬಳಿದು, ವಿದ್ಯುತ್ ದೀಪಗಳಿಂದ ಅಲಂಕೃತಗೊಳಿಸಿ ಪ್ರವಾಸಿಗರಿಗೆ ತೋರಿಸುವುದನ್ನು ಬಿಟ್ಟು ಹೆಚ್ಚಿನ ನಿರ್ವಹಣೆ ಮಾಡುತ್ತಿಲ್ಲ. ಮನುಷ್ಯರು ವೃದ್ಧರಾದಂತೆ ಎದ್ದು ನಿಲ್ಲಲು ಮತ್ತೊಬ್ಬರ ಅಥವಾ ಊರುಗೋಲಿನ ಸಹಾಯ ಬೇಕಾಗುತ್ತದೆ ಹಾಗೆಯೇ ನಮಗೂ ನೂರು ವರ್ಷಗಳಾಗಿದೆಯಪ್ಪ, ಇನ್ನೂ ಒಂದಷ್ಟು ವರ್ಷಗಳ ಕಾಲ ನಮ್ಮನ್ನು ಉಳಿಸಿಕೊಳ್ಳಲು ನಿಮ್ಮ ನೆರವು ಬೇಕು ಎಂದು ಮಾತು ಬಾರದ ಈ ಮೂಕ ಕಟ್ಟಡಗಳು ತಮ್ಮ ನೋವನ್ನು ಯಾರ ಬಳಿ ಹೇಳಿಕೊಂಡಾವು! ಅದಕ್ಕೆಂದೇ ಉಸ್ಸಪ್ಪಾ ಸಾಕಾಯ್ತು ಈ ಹೊರೆ ಎಂದು ಕುಸಿದು ಬೀಳುತ್ತಿವೆ ಎಂದು ಕಾಣುತ್ತಿದೆ.

ಮೈಸೂರಿನಲ್ಲಿ ಪಾರಂಪರಿಕ ಕಟ್ಟಡಗಳು ಕುಸಿದು ಬೀಳುತ್ತಿರುವುದೇನೂ ಹೊಸತಲ್ಲ. ದಶಕಗಳಿಂದ ಕಟ್ಟಡಗಳು ಕುಸಿಯುತ್ತಲೇ ಇವೆ. ಇದಕ್ಕೆ ಹತ್ತಾರು ಜೀವಗಳೂ ಬಲಿಯಾಗಿವೆ. ಆದರೂ ನಮ್ಮನ್ನಾಳುವವರದು ಎಂದಿನಂತೆ ಜಾಣ್ಮೆಯ ನಡೆ ಅನುಸರಿಸುತ್ತಾ ಬಂದಿದ್ದಾರೆ. ಯಾವುದೇ ಪಾರಂಪರಿಕ ಕಟ್ಟಡ ಕುಸಿತವಾದಾಗ ಸ್ಥಳಕ್ಕೆ ಧಾವಿಸಿ, ಪರಿಶೀಲಿಸುವ ನಾಟಕವಾಡಿ, ಅಧಿಕಾರಿಗಳಿಗೆ ವರದಿ ನೀಡುವಂತೆ ಹೇಳಿ ಕೈತೊಳೆದುಕೊಂಡು ಬಿಡುವುದು ವಾಡಿಕೆಯಾಗಿ ಬೆಳೆದುಬಂದಿದೆ. ರಾಜಕಾರಣಿಗಳು ಮತ್ತು ಅಧಿಕಾರಿಗಳ ಆರಂಭಶೂರತ್ವ ಅಲ್ಲಿಗೆ ಮುಗಿಯಿತು. ನಾಲ್ಕಾರು ದಿನಕಳೆದರೆ ಜನರೂ ಆ ಘಟನೆಯನ್ನು ಮರೆತು ಬಿಡುತ್ತಾರೆ. ಮತ್ತೆ ಅಂತಹ ಪ್ರಕರಣ ಮರುಕಳಿಸಿದಾಗಲೇ ಜನರಿಗೆ ಹಿಂದಿನ ಘಟನೆ ನೆನಪಾಗುವುದು.

ಹೀಗಾಗಿ ರಾಜರು ಕಟ್ಟಿರುವ ಮೈಸೂರು ನಗರವನ್ನು ಸರ್ಕಾರಗಳು ಅಭಿವೃದ್ಧಿ ಹೆಸರಲ್ಲಿ ಮತ್ತೊಂದು ಕಾಂಕ್ರೀಟ್ ಕಾಡನ್ನಾಗಿಸದೆ, ಇಲ್ಲಿನ ಪರಂಪರೆಯನ್ನು ಉಳಿಸಿ-ಬೆಳಸಿಕೊಂಡು ಹೋಗುವ ಕೆಲಸವಾಗಬೇಕಿದೆ.

ಮೈಸೂರು ನಗರದಲ್ಲಿನ ಜನಾಕರ್ಷಣೆಯ ಕೇಂದ್ರ ಬಿಂದು ಅಂಬಾವಿಲಾಸ ಅರಮನೆ ಸೇರಿದಂತೆ ಶತಮಾನ ಪೂರೈಸಿರುವ ೧೨೫ ಕಟ್ಟಡಗಳನ್ನು ಪಟ್ಟಿ ಮಾಡಲಾಗಿದೆ. ಆದರೆ, ಈ ೧೨೫ ಕಟ್ಟಡಗಳ ಪೈಕಿ ಮೈಸೂರು ವಿಶ್ವವಿದ್ಯಾನಿಲಯದ ಆಡಳಿತ ವ್ಯಾಪ್ತಿಗೊಳಪಟ್ಟಿರುವ ಜಯಲಕ್ಷ್ಮೀವಿಲಾಸ ವ್ಯಾನ್‌ಷನ್ ಸೇರಿದಂತೆ ಸುವಾರು ೨೫ ಕಟ್ಟಡಗಳು ಅತ್ಯಂತ ಕೆಟ್ಟ ಪರಿಸ್ಥಿತಿುಂಲ್ಲಿವೆ ಎಂದು ಇವುಗಳ ಸಂರಕ್ಷಣೆ ದೃಷ್ಟಿಯಿಂದ ವಿವಿಧ ಕ್ಷೇತ್ರದ ತಜ್ಞರನ್ನು ಸೇರಿಸಿ ರಚಿಸಲಾಗಿರುವ ಪಾರಂಪರಿಕ ಕಟ್ಟಡಗಳ ಸಂರಕ್ಷಣಾ ಸಮಿತಿ ಹೇಳುತ್ತಾ ಬಂದಿದೆ. ಆದರೆ, ಸಮಿತಿಯ ಈ ಕೂಗು ಆಳುವವರ ಕಿವಿಗೆ ಮುಟ್ಟುತ್ತಿಲ್ಲ!

ಹಳೇ ಮೈಸೂರು ಭಾಗದ ಜನರ ಬಾಯಲ್ಲಿ ಇಂದಿಗೂ ದೊಡ್ಡಾಸ್ಪತ್ರೆ ಎಂದು ಕರೆಸಿಕೊಳ್ಳುವ ಕೆ.ಆರ್. ಆಸ್ಪತ್ರೆ ಸಮುಚ್ಚಯದಲ್ಲಿನ ಆಸ್ಪತ್ರೆ ಕಟ್ಟಡಗಳೂ ಸಹ ನಿರ್ವಹಣೆ ಕಾಣದೆ ಅಲ್ಲಲ್ಲಿ ಕಾಂಕ್ರೀಟ್ ಕಿತ್ತು ಬಂದು ಅಸ್ತಿಪಂಜರದಂತೆ ಕಾಣುತ್ತವೆ. ಪಾರಂಪರಿಕ ಕಟ್ಟಡಗಳೆಂಬ ಹಣೆಪಟ್ಟಿ ಹೊತ್ತು ನಿರ್ವಹಣೆ ಕಾಣದೆ ಶಿಥಿಲಗೊಂಡು ನಿಂತಿರುವ ಹಲವು ಕಟ್ಟಡಗಳಲ್ಲಿ ಶಾಲಾ-ಕಾಲೇಜುಗಳು, ಸರ್ಕಾರಿ ಕಚೇರಿಗಳು ಕಾರ್ಯನಿರ್ವಹಿಸುತ್ತಿದ್ದು, ಅಲ್ಲಿನ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿ ಜೀವ ಭಯದಲ್ಲೇ ದಿನದೂಡುವಂತಹ ಸ್ಥಿತಿ ಇದೆ.

ಹಾಡಹಗಲೇ ಕಾಲೇಜು ಆರಂಭವಾಗಬೇಕಿದ್ದ ಸಮಯದಲ್ಲೇ ಧರಾಶಾಹಿಯಾದ ಮಹಾರಾಣಿ ವಿಜ್ಞಾನ ಕಾಲೇಜಿನ ಕಟ್ಟಡ ಕುಸಿತ ಪ್ರಕರಣ ಆಳುವವರಿಗೆ ಪಾಠವಾಗಬೇಕು. ಆ ವಿಷಯದಲ್ಲೂ ಪರಿಶೀಲನೆ, ವರದಿ ತರಸಿಕೊಳ್ಳುತ್ತೇವೆ ಎಂಬ ನಾಟಕ ನಿಲ್ಲಬೇಕು.

ಇಂದಿನ ಕಾಲದ ಇಂಜಿನಿಯರುಗಳು ರಾಜರ ಕಾಲದ ಕಟ್ಟಡಗಳ ನವೀಕರಣಕ್ಕಿಂತ ನೆಲಸಮಗೊಳಿಸಿ ಹೊಸ ಕಟ್ಟಡ ನಿರ್ಮಿಸುವುದು ಸೂಕ್ತ ಎಂಬ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. ಆದರೆ, ರಾಜಮನೆತನದವರು ತಮ್ಮ ಸುಪರ್ದಿಯಲ್ಲಿರುವ ಜಗನ್ಮೋಹನ ಅರಮನೆುಂನ್ನು ನವೀಕರಣಗೊಳಿಸಿರುವುದು ಕಣ್ಣಮುಂದೆಯೇ ಇದೆ. ಹೀಗಾಗಿ ರಾಜಮನೆತದವರು, ಪಾರಂಪರಿಕ ತಜ್ಞರ ಸಲಹೆ ಪಡೆದು ಮೈಸೂರು ಜನರ ಒತ್ತಾಸೆಯಂತೆ ನಗರದ ಪಾರಂಪರಿಕ ಕಟ್ಟಡಗಳನ್ನು ಉಳಿಸುವ ಕೆಲಸವಾಗಬೇಕಿದೆ.

andolana

Recent Posts

ಶತಕ ಬಾರಿಸಿದ ಸಿಎಂ ಎದುರು ಸವಾಲುಗಳೂ ಇವೆ

ಡಿ.ಕೆ.ಶಿವಕುಮಾರ್ ಅವರು ಮುಖ್ಯಮಂತ್ರಿಯಾಗಿ ೧೦೦ ದಿನಗಳನ್ನು ಪೂರ್ಣಗೊಳಿಸಿದ್ದಾರೆ. ರಾಜ್ಯದ ಜನತೆಗೆ ಹಲವಾರು ಯೋಜನೆಗಳನ್ನು ಘೋಷಿಸಿದ್ದಾರೆ. ಬಡವರು, ರೈತರು, ಮಹಿಳೆಯರು, ವಿದ್ಯಾರ್ಥಿಗಳ…

2 hours ago

ಎಐ; ಮನುಕುಲದ ವಿನಾಶಕ್ಕೆ ಕಾರಣವಾಗಲಿದೆಯೇ?

ಶುಭಾ ಖಟಾವಕರ ಮ್ಹೆತ್ರಸ್ “ಕೇವಲ ಒಂದು ದಶಕದಲ್ಲಿ ಕೃತ್ರಿಮ ಬುದ್ಧಿಮತ್ತೆಯು (ಎಐ) ಮನುಕುಲವನ್ನು ನಾಶಪಡಿಸಲಿದೆ" ಎಂದು ಎಐನ ದೈತ್ಯ ಸಂಸ್ಥೆಯಾದ…

2 hours ago

ರಾಜ್ಯದಲ್ಲಿ ೧೯೮೩ರ ಇತಿಹಾಸ ಮರುಕಳಿಸುತ್ತದೆಯೇ?

ಆರ್‌.ಟಿ.ವಿಠ್ಠಲಮೂರ್ತಿ ಅವರ ವಾರದ ಅಂಕಣ  ರಾಜ್ಯ ರಾಜಕೀಯದಲ್ಲಿ ೧೯೮೩ರ ರಾಜಕೀಯ ಸನ್ನಿವೇಶ ರೂಪುಗೊಳ್ಳುತ್ತಿದೆಯೇ ಎಂಬ ಅನುಮಾನಗಳು ಶುರುವಾಗಿವೆ. ಅಂದ ಹಾಗೆ…

2 hours ago

ಕೆಎಚ್‌ಬಿ ಕಾಲೋನಿ ನಿವಾಸಿಗಳ ಜೀವನ ಹೈರಾಣ

ಎಂ.ಕೇಶವ ಎರಡು ವರ್ಷಗಳಿಂದ ನಡೆಯುತ್ತಿರುವ ಕಾಮಗಾರಿಯಿಂದ ಕಂಗಾಲು; ಹಿರಿಯರು, ಮಹಿಳೆಯರು, ಸವಾರರಿಗೆ ಓಡಾಟವೇ ಸವಾಲು ಮೈಸೂರು: ಒಂದರ ಮೇಲೊಂದರಂತೆ ಎರಡು…

2 hours ago

ಗಣೇಶೋತ್ಸವಕ್ಕೆ ಡಿಜೆ ನಿಷೇಧ: ಮಿಶ್ರ ಪ್ರತಿಕ್ರಿಯೆ

ಪ್ರಶಾಂತ್ ಎನ್.ಮಲ್ಲಿಕ್ ಸಾರ್ವಜನಿಕರಿಗೆ ತೊಂದರೆ ತಪ್ಪುತ್ತದೆ: ಸಮರ್ಥನೆ ಡಿಜೆಗೆ ಕಡಿವಾಣ ಸರಿಯಲ್ಲ: ಅಸಮಾಧಾನ ಮೈಸೂರು: ರಾಜ್ಯದಲ್ಲಿ ಗೌರಿ ಗಣೇಶ ಹಬ್ಬದ…

2 hours ago

50 ವರ್ಷಗಳ ನಂತರ ಮೊದಲ ಬಾರಿ ಬರಿದಾದ ಕಾರಿಗನಹಳ್ಳಿ ಅಣೆಕಟ್ಟೆ

ಆರ್.ಶ್ರೀನಿವಾಸ್ ೪೦೦೦ ಕೊಳವೆಬಾವಿಗಳಲ್ಲಿ ಅಂತರ್ಜಲ ಕುಸಿತ, ಕುಡಿಯುವ ನೀರಿಗೂ ಹಾಹಾಕಾರ  ಕೆ.ಆರ್.ಪೇಟೆ: ಸುಮಾರು ೫೦ ವರ್ಷಗಳ ಅವಧಿಯಲ್ಲಿ ಮೊದಲ ಬಾರಿಗೆ…

2 hours ago