ಸಂಪಾದಕೀಯ

ಪರಿಶಿಷ್ಟರ ಅನುದಾನ ವರ್ಷದ ಕೊನೆಯಲ್ಲೇ ಖರ್ಚು ಮಾಡುವುದೇಕೆ?

ದಲಿತರು, ಶೋಷಿತರು, ಸಾಮಾಜಿಕವಾಗಿ ತುಳಿಯಲ್ಪಟ್ಟವರನ್ನು ಆರ್ಥಿಕವಾಗಿ ಮೇಲೆತ್ತುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಸಾಕಷ್ಟು ಅನುದಾನವನ್ನು ಸಮಾಜ ಕಲ್ಯಾಣ ಇಲಾಖೆಯಡಿ ಮೀಸಲಿಟ್ಟಿದೆ. ಅಲ್ಲದೆ, ಆಯಾ ವರ್ಷದ ಅನುದಾನವನ್ನು ಆಯಾ ವರ್ಷವೇ ವೆಚ್ಚ ಮಾಡಬೇಕು. ತಪ್ಪಿದರೆ ಅಧಿಕಾರಿಗಳನ್ನು ಹೊಣೆ ಮಾಡಲಾಗುತ್ತದೆ ಎಂಬ ಕಟ್ಟುನಿಟ್ಟಿನ ಸೂಚನೆಯನ್ನೂ ಸರ್ಕಾರ ನೀಡಿದೆ.

ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮದಲ್ಲಿ ಪ್ರಸಕ್ತ ಆರ್ಥಿಕ ವರ್ಷದಲ್ಲಿಪರಿಶಿಷ್ಟ ಜಾತಿ ಸಮುದಾಯದ ಅಭಿವೃದ್ಧಿಗಾಗಿ ಮೀಸಲಿಟ್ಟಿರುವ ಅನುದಾನದಲ್ಲಿ ೯೦೦ ಕೋಟಿ ರೂ. ವೆಚ್ಚವಾಗದೆ ಹಾಗೇ ಉಳಿದಿದೆ! ಮಾರ್ಚ್ ಅಂತ್ಯದೊಳಗೆ ಇಷ್ಟು ದೊಡ್ಡ ಮೊತ್ತವನ್ನು ಖರ್ಚು ಮಾಡಬೇಕಿದೆ. ಇದು ಸಾಧ್ಯವೇ? ಒಂದು ವೇಳೆ ಹಾಗೆ ವ್ಯಯಿಸಿದರೆ, ಹತ್ತಾರು ಅನುಮಾನಗಳು ಹುಟ್ಟಿಕೊಳ್ಳುತ್ತವೆ. ಇನ್ನು ಕರ್ನಾಟಕ ಬೋವಿ ಅಭಿವೃದ್ಧಿ ನಿಗಮದಲ್ಲಿ ಕೂಡ ೧೦೭ ಕೋಟಿ ರೂ. ಅನುದಾನ ಖರ್ಚಾಗದೆ ಉಳಿದಿದೆ. ಇತ್ತೀಚೆಗೆ ಸಮಾಜ ಕಲ್ಯಾಣ ಇಲಾಖೆ ಅಽಕಾರಿಗಳ ಸಭೆ ನಡೆಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧಿಕಾರಿಗಳ ಈ ಉದಾಸೀನತೆಗೆ ಚಾಟಿ ಬೀಸಿದ್ದಾರೆ.

೨೦೨೪-೨೫ನೇ ಸಾಲಿನ ಆಯವ್ಯಯದಲ್ಲಿ ಸಮಾಜ ಕಲ್ಯಾಣ ಇಲಾಖೆಗೆ ೫,೩೭೭ ಕೋಟಿ ರೂ. ಅನುದಾನ ಘೋಷಿಸಲಾಗಿದೆ. ಅದರಲ್ಲಿ ೩,೬೩೧ ಕೋಟಿ ರೂ. ಬಿಡುಗಡೆಯಾಗಿದೆ. ಅಂಬೇಡ್ಕರ್ ನಿಗಮ ಮತ್ತು ಬೋವಿ ನಿಗಮಗಳೆರಡಲ್ಲಿ ಒಟ್ಟಾರೆ ೧,೦೦೭ ಕೋಟಿ ರೂ. ಖರ್ಚಾಗದೆ ಉಳಿದಿದೆ. ಸಿದ್ದರಾಮಯ್ಯ ಅವರೇ ಹೇಳಿರುವಂತೆ ಅನುದಾನವನ್ನು ಹಣಕಾಸು ವರ್ಷದ ಕೊನೆಯ ತಿಂಗಳಿನವರೆಗೂ ಇಟ್ಟುಕೊಂಡಿದ್ದು, ನಂತರ ತರಾತುರಿಯಲ್ಲಿ ಫಲಾನುಭವಿಗಳಿಗೆ ನೀಡಲಾಗುತ್ತಿದೆ. ಆದರೆ, ಇದಕ್ಕಾಗಿ ಫಲಾನುಭವಿಗಳು ವರ್ಷಪೂರ್ತಿ ಕಾಯುತ್ತಿರುತ್ತಾರೆ. ಸ್ವಯಂ ಉದ್ಯೋಗದ ಆಶಯದಿಂದ ನಿಗಮಗಳಿಗೆ ಅರ್ಹರು ಸಾಲ ಸೌಲಭ್ಯ ಕೋರಿ ಅರ್ಜಿ ಸಲ್ಲಿಸಿರುತ್ತಾರೆ. ಅಂಗಡಿ, ಹೈನುಗಾರಿಕೆ, ತರಕಾರಿ ಮಾರಾಟ ಇತ್ಯಾದಿ ಉದ್ಯೋಗದ ಮೂಲಕ ಸ್ವಾವಲಂಬಿಗಳಾಗುವ ಕನಸನ್ನು ಹೊತ್ತಿರುತ್ತಾರೆ. ನಿಗಮಕ್ಕೆ ಒದಗಿಸಬೇಕಿರುವ ದಾಖಲೆಗಳನ್ನು ಪಡೆದುಕೊಳ್ಳುವುದೂ ಸಾಹಸವೇ ಆಗಿರುತ್ತದೆ. ಎಲ್ಲ ದಾಖಲೆಗಳನ್ನೂ ಒದಗಿಸಿದರೂ ಅಂತಿಮವಾಗಿ ಅದು ಬ್ಯಾಂಕ್‌ನಲ್ಲಿ ಬಂದು ನಿಲ್ಲುತ್ತದೆ. ಬ್ಯಾಂಕ್‌ನಲ್ಲಿ ಅಷ್ಟು ಸುಲಭವಾಗಿ ಸಾಲ ಕೊಡುವುದಿಲ್ಲ. ಸರ್ಕಾರದಿಂದ ಸಾಕಷ್ಟು ರಿಯಾಯಿತಿ (ಸಬ್ಸಿಡಿ) ನೀಡಲಾಗಿರುತ್ತದೆ. ಅಂದರೆ ೧ ಲಕ್ಷ ರೂ. ಸಾಲ ಪಡೆದರೆ ಅಥವಾ ಆ ಮೌಲ್ಯದ ವಸ್ತು ಪಡೆದರೆ, ಶೇ.೪೦, ೬೦… ಹೀಗೆ ರಿಯಾಯಿತಿ ಇರುತ್ತದೆ. ಉಳಿದ ಹಣವನ್ನು ಫಲಾನುಭವಿ ಬ್ಯಾಂಕ್‌ಗೆ ವಾಪಸ್ ಮರುಪಾವತಿಸಬೇಕಾಗುತ್ತದೆ. ಕಂತಿನ ರೂಪದಲ್ಲಿ ಮರುಪಾವತಿಗೆ ಅವಕಾಶ ಇರುತ್ತದೆ. ಆದರೆ, ಬ್ಯಾಂಕ್‌ನಲ್ಲಿ ಅಷ್ಟು ಸುಲಭವಾಗಿ ಸಾಲ ಕೊಡುವುದಕ್ಕೆ ಒಪ್ಪುವುದಿಲ್ಲ. ಇಲಾಖೆಯ ಅಧಿಕಾರಿಗಳೂ ಈ ಸಂಬಂಧ ತಲೆಕೆಡಿಸಿಕೊಳ್ಳುವುದಿಲ್ಲ. ಹಾಗಾಗಿ ಅನುದಾನ ನಿಷ್ಪ್ರಯೋಜಕವಾಗುತ್ತದೆ.

ಆದರೆ, ಆರ್ಥಿಕ ವರ್ಷ ಕೊನೆಯಾಗುವ ವೇಳೆಗೆ ಅದು ಹೇಗೋ ಅಡ್ಜಸ್ಟ್‌ಮೆಂಟ್ ಮಾಡಿ, ಒಂದಷ್ಟು ಫಲಾನುಭವಿಗಳಿಗೆ ಸಾಲ ಸೌಲಭ್ಯ ಒದಗಿಸಲಾಗುತ್ತದೆ. ಆದರೆ, ಸಾಕಷ್ಟು ಅನುದಾನ ಉಳಿದುಕೊಳ್ಳುತ್ತದೆ. ಹಾಗಂತ ಅರ್ಜಿ ಸಲ್ಲಿಸಿದ ಎಲ್ಲ ಅರ್ಹ ಫಲಾನುಭವಿಗಳಿಗೂ ಸೌಲಭ್ಯ ದೊರೆತಿರುವುದಿಲ್ಲ. ಅಲ್ಲದೆ, ರಾಜಕೀಯ ನಾಯಕರ ಪ್ರಭಾವ ಬಳಸುವವರಿಗೆ, ಅಧಿಕಾರಿ ವರ್ಗದ ಕೃಪಾಕಟಾಕ್ಷ ಹೊಂದಿರುವವರಿಗೆ ಮಾತ್ರವೇ ಈ ಸಾಲ ಸೌಲಭ್ಯ ದೊರೆಯುತ್ತವೆ ಎನ್ನುವ ಆರೋಪಗಳೂ ಇವೆ. ಇದಕ್ಕೆ ವರ್ಷದ ಕೊನೆಯಲ್ಲಿ ಅನುದಾನ ಖರ್ಚು ಮಾಡುವ ಪರಿಪಾಠ ಇಂಬು ನೀಡುತ್ತದೆ.

ಸರ್ಕಾರದ ಈ ನಡೆಯಿಂದ ಜನರಿಗೆ ಅಸಮಾಧಾನ ಮೂಡಬಹುದು. ಇದಕ್ಕೆ ಪರಿಹಾರ ಎಂದರೆ, ಸರ್ಕಾರ ಅಥವಾ ಸಮಾಜ ಕಲ್ಯಾಣ ಇಲಾಖೆ ಮಾಸಿಕವಾರು ಅನುದಾನ ವೆಚ್ಚವನ್ನು ವಿಂಗಡಿಸಬೇಕು. ವರ್ಷಕ್ಕೆ ಅಂದಾಜು ೩,೦೦೦ ಕೋಟಿ ರೂ. ಅನುದಾನ ಖರ್ಚು ಮಾಡಬೇಕಿದ್ದರೆ, ಅದನ್ನು ೧೨ ತಿಂಗಳಿಗೆ ಹಂಚಿಕೆ ಮಾಡಿ, ಪಾರದರ್ಶಕವಾಗಿ ಫಲಾನುಭವಿಗಳಿಗೆ ತಲುಪುವಂತೆ ಮಾಡಬೇಕಿದೆ. ಅಲ್ಲದೆ, ಬ್ಯಾಂಕ್ ಅಧಿಕಾರಿಗಳಿಗೂ ಇದನ್ನು ಅರ್ಥಮಾಡಿಸಬೇಕಾಗಿದೆ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಯೋಚಿಸಿ ಸೂಕ್ತ ನಿರ್ಧಾರ ಕೈಗೊಳ್ಳಬೇಕಿದೆ.

” ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮದಲ್ಲಿ ಪರಿಶಿಷ್ಟ ಜಾತಿ ಸಮುದಾಯದ ಅಭಿವೃದ್ಧಿಗಾಗಿ ಪ್ರಸಕ್ತ ಆರ್ಥಿಕ ವರ್ಷದಲ್ಲಿಪರಿಶಿಷ್ಟ ಜಾತಿ ಸಮುದಾಯದ ಅಭಿವೃದ್ಧಿಗಾಗಿ ಮೀಸಲಿಟ್ಟಿರುವ ಅನುದಾನದಲ್ಲಿ ೯೦೦ ಕೋಟಿ ರೂ. ವೆಚ್ಚವಾಗದೆ ಉಳಿದಿದೆ! ಮಾರ್ಚ್ ಅಂತ್ಯದೊಳಗೆ ಇಷ್ಟು ದೊಡ್ಡ ಮೊತ್ತವನ್ನು ಖರ್ಚು ಮಾಡಬೇಕಿದೆ. ಇದು ಸಾಧ್ಯವೆ? ಒಂದು ವೇಳೆ ಹಾಗೆ ವ್ಯಯಿಸಿದರೆ, ಹತ್ತಾರು ಅನುಮಾನಗಳು ಹುಟ್ಟಿಕೊಳ್ಳುತ್ತವೆ.”

ಆಂದೋಲನ ಡೆಸ್ಕ್

Share
Published by
ಆಂದೋಲನ ಡೆಸ್ಕ್

Recent Posts

ಮೇಕೆದಾಟು ಯೋಜನೆಗೆ ಶೀಘ್ರದಲ್ಲೇ ಕೇಂದ್ರದಿಂದ ಅನುಮತಿ ಸಿಗುವ ಸಾಧ್ಯತೆ: ಸಚಿವ ರಾಮಲಿಂಗಾರೆಡ್ಡಿ

ನವದೆಹಲಿ: ಮೇಕೆದಾಟು ಯೋಜನೆಗೆ ಇರುವ ಅಡೆತಡೆಗಳು ನಿವಾರಣೆಯಾಗುತ್ತಿದ್ದು, ಶೀಘ್ರದಲ್ಲೇ ಕಾಮಗಾರಿಗೆ ಚಾಲನೆ ನೀಡುವ ಸಾಧ್ಯತೆ ಇದೆ ಎಂದು ಕರ್ನಾಟಕದ ಜಲಸಂಪನ್ಮೂಲ…

2 hours ago

ಉಡುಪಿ, ಉತ್ತರ ಕನ್ನಡ ಜಿಲ್ಲೆಯಲ್ಲಿ ಭಾರೀ ಮಳೆ ಮುನ್ಸೂಚನೆ

ಬೆಂಗಳೂರು: ಮುಂದಿನ 24 ಗಂಟೆ ಅವಧಿಯಲ್ಲಿ ಕರಾವಳಿ ಭಾಗದಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.…

2 hours ago

ಅಪ್ರಾಪ್ತರನ್ನು ಬಿಡುಗಡೆ ಮಾಡಿ, ಕ್ರಿಮಿನಲ್‌ಗಳ ವಿರುದ್ಧ ತನಿಖೆ ನಡೆಸಿ: ಸುಪ್ರೀಂಕೋರ್ಟ್‌

ನವದೆಹಲಿ: ಜಂತರ್‌ ಮಂತರ್‌ ಹಾಗೂ ದೇಶದ ವಿವಿಧ ಭಾಗಗಳಲ್ಲಿ ವಿದ್ಯಾರ್ಥಿಗಳು ನಡೆಸಿದ ಪ್ರತಿಭಟನೆಗಳ ಮೇಲೆ ನಡೆದ ಪೊಲೀಸರ ದೌರ್ಜನ್ಯ ಮತ್ತು…

2 hours ago

ತಮಿಳುನಾಡಿಗೆ ನಿತ್ಯ 3500 ಕ್ಯೂಸೆಕ್ಸ್‌ ನೀರು ಬಿಡಲು CWRC ಆದೇಶ: ಮಂಡ್ಯದಲ್ಲಿ ಭುಗಿಲೆದ್ದ ಆಕ್ರೋಶ

ಮಂಡ್ಯ: ಕಾವೇರಿ ನೀರು ಹಂಚಿಕೆ ವಿವಾದಕ್ಕೆ ಸಂಬಂಧಿಸಿದಂತೆ ಕಾವೇರಿ ನೀರು ನಿಯಂತ್ರಣ ಸಮಿತಿಯು ತಮಿಳುನಾಡಿಗೆ ನಿತ್ಯ 3500 ಕ್ಯೂಸೆಕ್‌ನಂತೆ 15…

3 hours ago

ಓದುಗರ ಪತ್ರ: ಭ್ರಷ್ಟಾಚಾರ ಬಗ್ಗು ಬಡಿಯಲು ಸಿಎಂ ಮುಂದಾಗುವರೇ?

ರಾಜ್ಯದಲ್ಲಿ ಭ್ರಷ್ಟಾಚಾರ ನಿಯಂತ್ರಣಕ್ಕಾಗಿ ಲೋಕಾಯುಕ್ತರು ಆಗಾಗ್ಗೆ ದಾಳಿ ನಡೆಸುವುದು ಮಾಧ್ಯಮಗಳಲ್ಲಿ ವರದಿಯಾಗುತ್ತವೆ. ಈಗಿನ ಪತ್ರಿಕಾ ವರದಿಗಳ ಪ್ರಕಾರ, ಮೂರೂವರೆ ವರ್ಷಗಳಲ್ಲಿ…

12 hours ago

ಓದುಗರ ಪತ್ರ: ಸದ್ದು ಮಾಡದ ತುಪ್ಪ, ಬೆಣ್ಣೆ ಬೆಲೆ ಏರಿಕೆ!

ನಂದಿನಿ ಉತ್ಪನ್ನಗಳಾದ, ತುಪ್ಪ ಕೆ.ಜಿಗೆ ರೂ.೧೫ ಮತ್ತು ಬೆಣ್ಣೆ ಕೆ.ಜಿಗೆ ರೂ.೫೦ ಅನ್ನು ಇದೇ ತಿಂಗಳ ೨೪ ರಿಂದಲೇ ಗ್ರಾಹಕರಿಗೆ…

12 hours ago