ಸಂಪಾದಕೀಯ

ಬಡವರ ಆರ್ಥಿಕ ಸುಧಾರಣೆಗೆ ನೆರವಾದ ಗ್ಯಾರಂಟಿ ಯೋಜನೆಗಳು

ಸ್ವಾತಂತ್ರ್ಯ ಬಂದು ೭೫ ವರ್ಷಗಳು ಕಳೆದರೂ ಬಡವರು-ಶ್ರೀಮಂತರ ನಡುವಿನ ಅಂತರ ಕಡಿಮೆಯಾಗುವ ಬದಲಿಗೆ ನಾನಾ ಕಾರಣಗಳಿಂದಾಗಿ ಮತ್ತಷ್ಟು ಹೆಚ್ಚಾಗುತ್ತಲೇ ಇದೆ. ಬಡವರ ಆರ್ಥಿಕ ಮಟ್ಟವನ್ನು ಸುಧಾರಿಸಲು ಪಂಚವಾರ್ಷಿಕ ಯೋಜನೆಗಳನ್ನು ಪ್ರತಿ ಐದು ವರ್ಷಗಳಿಗೊಮ್ಮೆ ರೂಪಿಸುತ್ತಿದ್ದರೂ ಬಡತನ ನೀಗಿಲ್ಲ ಎನ್ನುವುದು ಇಂದಿಗೂ ಆರ್ಥಿಕ ತಜ್ಞರ ಆತಂಕವಾಗಿದ್ದರೂ ಕರ್ನಾಟಕದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಜಾರಿಗೆ ತಂದ ಪಂಚ ಗ್ಯಾರಂಟಿ ಯೋಜನೆಗಳು ಬಡವರ ಪಾಲಿಗೆ ಟಾನಿಕ್ ನಂತಾಗಿವೆ. ಕರ್ನಾಟಕದ ಗ್ಯಾರಂಟಿ ಯೋಜನೆಗಳ ಬಗ್ಗೆ ದೇಶದ ಅನೇಕ ರಾಜ್ಯಗಳಲ್ಲಿ ಕುಹಕವಾಡಿದರೂ ನಂತರದಲ್ಲಿ ತಂತಮ್ಮ ರಾಜ್ಯಗಳಲ್ಲಿ ಜನಪರವಾದ ಗ್ಯಾರಂಟಿಗಳನ್ನು ನೀಡುತ್ತಿರುವುದನ್ನು ನೋಡಿದರೆ ಜನಸಾಮಾನ್ಯರ ಮೇಲೆ ಗ್ಯಾರಂಟಿ ಯೋಜನೆಗಳು ಯಾವ ಮಟ್ಟಿಗೆ ಪ್ರಭಾವ ಬೀರಿವೆ ಎಂಬುದು ತಿಳಿಯುತ್ತದೆ. ಹಾಗಾಗಿಯೇ ಕಾಂಗ್ರೆಸ್ ಸರ್ಕಾರ ಎಷ್ಟೇ ಅಡೆತಡೆ ಬಂದರೂ ಅದನ್ನು ಮೀರಿ ಗ್ಯಾರಂಟಿ ಯೋಜನೆಗಳು ಬಡವರ ಮನೆ ಬಾಗಿಲಿಗೆ ತಲುಪುವಂತೆ ನೋಡಿ ಕೊಳ್ಳುವ ಜತೆಗೆ ಅಭಿವೃದ್ಧಿ ಕಾರ್ಯ ಗಳಿಗೂ ಗಮನಹರಿಸಿದೆ. ಹೀಗಾಗಿಯೇ, ಎರಡು ವರ್ಷಗಳನ್ನು ಪೂರೈಸುತ್ತಿರುವ ಕಾಂಗ್ರೆಸ್ ಸರ್ಕಾರ ಸಾಧನಾ ಸಮಾವೇಶದ ಮೂಲಕ ನಾಡಿನ ಏಳು ಕೋಟಿ ಜನರ ಬದುಕಿನ ಭರವಸೆಯ ಬೆಳಕಿನಂತೆ ಕಂಗೊಳಿಸುವುದಕ್ಕೆ ಅಣಿಯಾಗಿದೆ. ೨೦೧೩ ರಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಅಲ್ಪಸಂಖ್ಯಾತರು, ಹಿಂದುಳಿದ ವರ್ಗಗಳಿಗೆ ಹತ್ತಾರು ಭಾಗ್ಯಗಳನ್ನು ಕರುಣಿಸುವ ಜತೆಗೆ, ರೈತರ ಕಲ್ಯಾಣಕ್ಕಾಗಿ ಅನೇಕ ಕಾರ್ಯಕ್ರಮಗಳನ್ನು ಜಾರಿಗೆ ತರುವ ಮೂಲಕ ಗಮನ ಸೆಳೆದಿತ್ತು.

ಅದರಲ್ಲೂ ಅನ್ನಭಾಗ್ಯ ಯೋಜನೆ, ಇಂದಿರಾ ಕ್ಯಾಂಟೀನ್ ಲಕ್ಷಾಂತರ ಬಡವರ ಹಸಿವನ್ನು ನೀಗಿಸುವುದಕ್ಕೆ ದಾರಿಯಾಗಿತ್ತು. ೨೦೨೩ರಲ್ಲಿ ನಿರೀಕ್ಷೆಗೂ ಮೀರಿ ಜನಬೆಂಬಲವನ್ನು ಪಡೆದು ಸಿದ್ದರಾಮಯ್ಯ ಎರಡನೇ ಬಾರಿಗೆ ಮುಖ್ಯಮಂತ್ರಿ ಗದ್ದುಗೆಗೇರುತ್ತಿದ್ದಂತೆ ಜಾರಿಗೆತಂದ ಪಂಚ ಗ್ಯಾರಂಟಿ ಯೋಜನೆಗಳಿಂದಾಗಿ ಕನಿಷ್ಠ ಐದು ಕೋಟಿ ಜನರಿಗೆ ಅನುಕೂಲವಾಗುತ್ತಿದೆ. ವರ್ಷಕ್ಕೆ ೫೨ರಿಂದ ೫೬ ಸಾವಿರ ಕೋಟಿ ರೂ. ಅನುದಾನವನ್ನು ಖರ್ಚು ಮಾಡಲಾಗುತ್ತಿದ್ದು, ಬಡವರು ಇದರ ಪ್ರಯೋಜನ ಪಡೆಯುತ್ತಿದ್ದಾರೆ.

ಮುಂದುವರಿದ ರಾಷ್ಟ್ರಗಳು ವಿಶ್ಲೇಷಿಸುವಂತೆ ಯೂನಿವರ್ಸಲ್ ಬೇಸಿಕ್ ಇನ್ ಕಮ್ ಹೊಂದಿರಬೇಕು ಎನ್ನುವಂತೆ ಕರ್ನಾಟಕದಲ್ಲಿರುವ ಅಶಕ್ತರಿಗೆ ಶಕ್ತಿಯನ್ನು ತುಂಬುವ ಕೆಲಸವಾಗಿದೆ. ಅನ್ನಭಾಗ್ಯ ಯೋಜನೆಯಡಿ ತಲಾ ಒಬ್ಬರಿಗೆ ಹತ್ತು ಕೆಜಿ ಅಕ್ಕಿ ಕೊಡಲು ಕೇಂದ್ರ ಸರ್ಕಾರ ಅಕ್ಕಿಯನ್ನು ಒದಗಿಸಲು ಹಿಂದೇಟು ಹಾಕಿದಾಗ ಸೆಟೆದು ನಿಂತ ಕಾಂಗ್ರೆಸ್ ಸರ್ಕಾರ ಅಕ್ಕಿಯ ಬದಲಿಗೆ ಹಣವನ್ನು ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ಜಮೆ ಮಾಡುವ ಮೂಲಕ ನುಡಿದಂತೆ ನಡೆದುಕೊಂಡಿತ್ತು.

ಅಂದಾಜು ೧.೧೦ ಕೋಟಿ ಫಲಾನುಭವಿಗಳ ಖಾತೆಗಳಿಗೆ ಹಣ ಹಾಕುತ್ತಿದ್ದ ಸರ್ಕಾರ, ಫೆಬ್ರವರಿ ತಿಂಗಳಿನಿಂದ ೧೦ ಕೆಜಿಯಂತೆ ಅಕ್ಕಿಯನ್ನೇ ನೀಡುತ್ತಿರುವುದರಿಂದ ಜನರು ಸಂತೃಪ್ತರಾಗಿ ಮೂರು ಹೊತ್ತು ಅನ್ನದ ಊಟ ಮಾಡುತ್ತಿದ್ದಾರೆ. ಶಕ್ತಿ ಯೋಜನೆಯಂತೂ ಮಹಿಳೆಯರ ಪಾಲಿಗೆ ಸಂಭ್ರಮದ ಯೋಜನೆಯಾಗಿದೆ. ಉಚಿತವಾಗಿ ಬಸ್ ಪ್ರಯಾಣ ಕಲ್ಪಿಸಿರುವುದರಿಂದ ದೂರದ ಪ್ರವಾಸಿ ತಾಣಗಳಿಗೂ ಅಸಂಖ್ಯಾತ ಮಹಿಳೆಯರು ಇಂದು ಭೇಟಿ ನೀಡುತ್ತಿದ್ದಾರೆ.

ಪ್ರವಾಸಿ ತಾಣಗಳು, ಧಾರ್ಮಿಕ ಕೇಂದ್ರಗಳಿಗೆ ಮಹಿಳೆಯರು ಭೇಟಿ ಕೊಡುತ್ತಿರುವುದರಿಂದ ಸ್ಥಳೀಯ ವ್ಯಾಪಾರಕ್ಕೂ ಅನುಕೂಲವಾದರೆ, ಸಾರಿಗೆ ನಿಗಮಕ್ಕೂ ಆದಾಯ ತಂದುಕೊಟ್ಟಿದೆ. ಗಂಡನ ಸಂಪಾದನೆಯಿಂದ ಮನೆ ನಿರ್ವಹಣೆ ಮಾಡಲಾಗದೆ ಅದೆಷ್ಟೋ ಮಹಿಳೆಯರು ಸರ್ಕಾರ ನೀಡುವ ಗೃಹಲಕ್ಷ್ಮೀ ಯೋಜನೆಯ ೨ ಸಾವಿರ ರೂಪಾಯಿ ಪಡೆದುಕೊಂಡು ಮನೆ ನಿರ್ವಹಣೆ ಮಾಡುತ್ತಿದ್ದಾರೆ. ಕೆಲವರು ಹಣವನ್ನು ಕೂಡಿಟ್ಟು ಹಸು, ಕುರಿ ಸಾಕಾಣಿಕೆ ಮಾಡಿದರೆ, ಅನೇಕರು ತಮ್ಮ ಮಕ್ಕಳಿಗೆ ಸ್ಕೂಟರ್ ಕೊಡಿಸಿದ್ದಾರೆ. ಕೆಲವರು ಕಿವಿಗೆ ಓಲೆ ಮಾಡಿಸಿಕೊಂಡಿದ್ದಾರೆ. ಈ ಯೋಜನೆ ಜಾರಿಗೆ ಬಂದ ಮೇಲಂತೂ ಜನರು ತಮ್ಮ ಖಾತೆಯಲ್ಲಿ ಒಂದಿಷ್ಟು ಹಣ ಇಟ್ಟಿದ್ದೇವೆ ಎನ್ನುವ ಮಾತನ್ನು ಧೈರ್ಯದಿಂದ ಹೇಳಿಕೊಳ್ಳುತ್ತಿದ್ದಾರೆ.

ಗ್ರಾಮೀಣ ಪ್ರದೇಶದ ಜನರು ತಿಂಗಳ ಮೊದಲ ವಾರ ಬಂತೆಂದರೆ ವಿದ್ಯುತ್ ಬಿಲ್ ಕಟ್ಟಲು ಹಣ ರೆಡಿಮಾಡಿಕೊಳ್ಳಬೇಕಿತ್ತು. ಒಂದು ತಿಂಗಳು ಬಿಲ್ ಕಟ್ಟದಿದ್ದರೆ ಸಂಪರ್ಕ ಎಲ್ಲಿ ಕಡಿತ ಮಾಡಿಬಿಡುವರೋ ಎನ್ನುವ ಆತಂಕದಲ್ಲೇ ಕಳೆಯುತ್ತಿದ್ದ ಜನರು ಇಂದು ನೆಮ್ಮದಿಯಿಂದ ಇದ್ದಾರೆ. ೧೦೦ ಯೂನಿಟ್ ಉಚಿತ ಕರೆಂಟ್ ಕೊಡುತ್ತಿರುವುದರಿಂದ ವಿದ್ಯುತ್ ಬಿಲ್ ಹಣ ಉಳಿತಾಯವಾಗಿದ್ದು, ಇದನ್ನು ತಮ್ಮ ಮಕ್ಕಳ ವಿದ್ಯಾಭ್ಯಾಸಕ್ಕೆ ವಿನಿಯೋಗಿಸುತ್ತಿದ್ದಾರೆ. ಹೀಗಾಗಿ, ಪಂಚ ಗ್ಯಾರಂಟಿ ಯೋಜನೆಗಳಿಂದ ಬಡವರನ್ನು ಆರ್ಥಿಕ ಸ್ಥಿತಿಯಿಂದ ಮೇಲೆತ್ತುವ ಕೆಲಸವಾಗುತ್ತಿದ್ದರೆ, ಇದರ ಅನುಷ್ಠಾನದಲ್ಲಿ ಕೊಂಚವೂ ಹಿನ್ನಡೆಯಾಗದಂತೆ ನೋಡಿಕೊಳ್ಳಲು ಆರ್ಥಿಕ ತಜ್ಞರೂ ಆದ ಮುಖ್ಯಮಂತ್ರಿ ಸಿದ್ದರಾಮಯ್ಯ ವಿಶೇಷ ಗಮನಹರಿಸಿದ್ದಾರೆ. ತಮ್ಮೆಲ್ಲಾ ಅನುಭವವನ್ನು ಧಾರೆ ಎರೆದು ಗ್ಯಾರಂಟಿ ಯೋಜನೆಗಳಿಗೆ ಹಣ ಮೀಸಲಿಟ್ಟಿರುವ ಸಿಎಂ, ಅಭಿವೃದ್ದಿ ಕಾರ್ಯಗಳಿಗೂ ವೇಗ ಕೊಡುವ ಮೂಲಕ ತಮ್ಮ ಎದುರಾಳಿಗಳ ಬಾಯಿ ಮುಚ್ಚಿಸಿದ್ದಾರೆ. ಗ್ಯಾರಂಟಿ ಯೋಜನೆಗಳಿಂದ ಹಣಕಾಸಿನ ಸ್ಥಿತಿ ಹದಗೆಟ್ಟಿದೆ ಎಂದು ಟೀಕಿಸುತ್ತಿದ್ದ ಬಿಜೆಪಿಯೇ ತನ್ನ ಪಕ್ಷ ಆಡಳಿತ ನಡೆಸುತ್ತಿರುವ ರಾಜ್ಯಗಳಲ್ಲೇ ವಿವಿಧ ಉಚಿತ ಯೋಜನೆಗಳನ್ನು ಜಾರಿಗೆ ತಂದಿರುವುದರಿಂದ ಕರ್ನಾಟಕದ ಗ್ಯಾರಂಟಿ ಯೋಜನೆಗಳು ಜನರ ವಿಶ್ವಾಸವನ್ನು ಇಮ್ಮಡಿಗೊಳಿಸಿವೆ.

” ೨೦೨೩ರಲ್ಲಿ ನಿರೀಕ್ಷೆಗೂ ಮೀರಿ ಜನಬೆಂಬಲವನ್ನು ಪಡೆದು ಸಿದ್ದರಾಮಯ್ಯ ಅವರೇ ಎರಡನೇ ಬಾರಿಗೆ ಮುಖ್ಯಮಂತ್ರಿ ಗದ್ದುಗೆಗೇರುತ್ತಿದ್ದಂತೆ ಜಾರಿಗೆ ತಂದ ಪಂಚ ಗ್ಯಾರಂಟಿ ಯೋಜನೆಗಳಿಂದಾಗಿ ಕನಿಷ್ಠ ಐದು ಕೋಟಿ ಜನರಿಗೆ ಅನುಕೂಲವಾಗುತ್ತಿದೆ. ವರ್ಷಕ್ಕೆ ೫೨ರಿಂದ ೫೬ ಸಾವಿರ ಕೋಟಿ ರೂ. ಅನುದಾನವನ್ನು ಖರ್ಚು ಮಾಡಲಾಗುತ್ತಿದ್ದು, ಬಡವರು ಇದರ ಪ್ರಯೋಜನ ಪಡೆಯುತ್ತಿದ್ದಾರೆ.”

ಆಂದೋಲನ ಡೆಸ್ಕ್

Share
Published by
ಆಂದೋಲನ ಡೆಸ್ಕ್

Recent Posts

ಬೆಂಗಳೂರಿನಲ್ಲಿ ದಾಖಲೆ ಪ್ರಮಾಣದ ಉಷ್ಣಾಂಶ: ಜನತೆಗೆ ಆರೋಗ್ಯ ಇಲಾಖೆ ಸೂಚನೆ

ಬೆಂಗಳೂರು: ಸಿಲಿಕಾನ್‌ ಸಿಟಿ ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ಬಿಸಿಲಿನ ತಾಪಮಾನ ಏರಿಕೆಯಾಗುತ್ತಿದ್ದು, ಭಾರತೀಯ ಹವಾಮಾನ ಇಲಾಖೆ ಹೀಟ್‌ ವೇವ್‌ ಎಚ್ಚರಿಕೆ…

1 hour ago

ಆರು ಹಸುಗಳ ಸಜೀವ ದಹನ ಪ್ರಕರಣ: ಆರೋಪಿ ಬಂಧನ

ಬೆಂಗಳೂರು: ಇಲ್ಲಿನ ಡಿ.ಜೆ.ಹಳ್ಳಿ ಬಳಿಯ ಶಾಂಪುರ ರಸ್ತೆಯಲ್ಲಿ ಕಿಡಿಗೇಡಿಯೊಬ್ಬ ಬೆಂಕಿ ಹಚ್ಚಿ ಆರು ಹಸುಗಳನ್ನು ಸಜೀವ ದಹನ ಮಾಡಿದ್ದ ಪ್ರಕರಣಕ್ಕೆ…

1 hour ago

ಅಮರನಾಥ ಯಾತ್ರೆಗೆ ಏಪ್ರಿಲ್.15ರಿಂದ ನೋಂದಣಿ‌

ನವದೆಹಲಿ: ಇದೇ ಏಪ್ರಿಲ್.‌15ರಿಂದ ಈ ವರ್ಷದ ಅಮರನಾಥ ಯಾತ್ರೆಗೆ ಮುಂಗಡ ನೋಂದಣಿ ಆರಂಭವಾಗಲಿದೆ. ಭಾರತದಾದ್ಯಂತ ಒಂದೇ ಸಮಯಕ್ಕೆ ಬುಕಿಂಗ್ ಪ್ರಾರಂಭವಾಗಲಿದ್ದು,…

2 hours ago

ಕಾಫಿ ತೋಟದಲ್ಲಿ ನವಜಾತ ಹೆಣ್ಣು ಶಿಶು ಪತ್ತೆ

ಕೊಡಗು: ಕಾಫಿ ತೋಟದಲ್ಲಿ ನವಜಾತ ಹೆಣ್ಣು ಶಿಶು ಪತ್ತೆಯಾಗಿರುವ ಘಟನೆ ಕೊಡಗು ಜಿಲ್ಲೆ ವಿರಾಜಪೇಟೆ ತಾಲ್ಲೂಕಿನ ಬೇತ್ರಿ ಗ್ರಾಮದಲ್ಲಿ ನಡೆದಿದೆ.…

2 hours ago

ಪ್ರಧಾನಿ ಮೋದಿ-ರಾಹುಲ್ ಗಾಂಧಿ ಮಾತುಕತೆ: ವಿಡಿಯೋ ವೈರಲ್

ನವದೆಹಲಿ: ಸಂಸತ್ತಿನ ಆವರಣದಲ್ಲಿ ಕಾರಿನಿಂದ ಇಳಿದು ಬಂದ ಪ್ರಧಾನಿ ನರೇಂದ್ರ ಮೋದಿ ಅವರು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್‌ಗಾಂಧಿ…

2 hours ago

ಮಂಡ್ಯ: ರಸಗೊಬ್ಬರ ಖರೀದಿಗೆ ಎಫ್‌ಐಡಿ ಕಡ್ಡಾಯ

ಮಂಡ್ಯ: ಮುಂಬರುವ ಮುಂಗಾರು ಹಂಗಾಮಿನ ಕೃಷಿ ಚಟುವಟಿಕೆಗಳಿಗೆ ರೈತರಿಗೆ ಅನುಕೂಲವಾಗುವಂತೆ ಯಾವುದೇ ಅಡಚಣೆಯಿಲ್ಲದೇ ವಿವಿಧ ಬೆಳೆಗಳಿಗೆ ಅವಶ್ಯಕವಾದ ರಸಗೊಬ್ಬರಗಳನ್ನು ನಿಯಮಾನುಸಾರ…

2 hours ago