ಅಂಕಣಗಳು

ರಾಷ್ಟ್ರೀಯ ಭದ್ರತೆ: ಕಲಾಂ, ವಾಜಪೇಯಿ ಮಾದರಿ

ಬೆಂಗಳೂರು ಡೈರಿ

ಆರ್.ಟಿ.ವಿಠ್ಠಲಮೂರ್ತಿ 

ಇದು ೧೯೯೮ರಲ್ಲಿ ನಡೆದ ಘಟನೆ. ಈ ಸಂದರ್ಭದಲ್ಲಿ ಭಾರತದ ಪ್ರಧಾನಿಯಾಗಿದ್ದವರು ಬಿಜೆಪಿಯ ನಾಯಕ ಅಟಲ್ ಬಿಹಾರಿ ವಾಜಪೇಯಿ.

ದಿಲ್ಲಿ ಗದ್ದುಗೆಯ ಮೇಲೆ ಕುಳಿತಿದ್ದ ಅವರಿಗೆ ಪಾಕಿಸ್ತಾನಕ್ಕಿಂತ ಚೀನಾದ ಮೇಲೆ ಹೆಚ್ಚು ಅನುಮಾನ. ಹೀಗಾಗಿ ತಮ್ಮ ಪ್ರಧಾನ ವೈಜ್ಞಾನಿಕ ಸಲಹೆಗಾರರಾಗಿದ್ದ ಎ.ಪಿ.ಜೆ.ಅಬ್ದುಲ್ ಕಲಾಂ ಅವರನ್ನು ಕರೆಸಿಕೊಂಡ ಅವರು ಮಹತ್ವದ ವಿಷಯವೊಂದನ್ನು ಪ್ರಸ್ತಾಪಿಸಿದರು.

ಕಲಾಂ ಜೀ, ನಮಗೆ ಪಾಕಿಸ್ತಾನಕ್ಕಿಂತ ಹೆಚ್ಚಿನ ಸಮಸ್ಯೆ ಇರುವುದು ಚೀನಾದಿಂದ. ಹೀಗಾಗಿ ಇದನ್ನು ಮನಸ್ಸಿನಲ್ಲಿಟ್ಟುಕೊಂಡು ನಾವು ನಮ್ಮ ಬಲವನ್ನು ಹೆಚ್ಚಿಸಿಕೊಳ್ಳಬೇಕು. ಅಷ್ಟೇ ಅಲ್ಲ, ನಾವು ಬಲಿಷ್ಠರಾಗಿದ್ದೇವೆ ಎಂಬ ಮೆಸೇಜು ಅವರಿಗೆ ತಲುಪುವಂತೆ ಮಾಡಬೇಕು. ಇದಕ್ಕಾಗಿ ನೀವು ಅಣ್ವಸ್ತ್ರಗಳನ್ನು ಅಭಿವೃದ್ಧಿಪಡಿಸಬೇಕು ಎಂದು ಹೇಳಿದರು.

ಪ್ರಧಾನಮಂತ್ರಿ ವಾಜಪೇಯಿ ಅವರ ಮಾತನ್ನು ಕೇಳಿದ ಅಬ್ದುಲ್ ಕಲಾಂ ಅವರು, ನಾವು ಅಣ್ವಸ್ತ್ರಗಳನ್ನು ತಯಾರಿಸುತ್ತಿರುವ ವಿಷಯ ಅಮೆರಿಕಕ್ಕೆ ಗೊತ್ತಾದರೆ ಕಷ್ಟ. ಯಾಕೆಂದರೆ ಅದು ನಮ್ಮ ಮೇಲೆ ಹಲವು ನಿರ್ಬಂಧಗಳನ್ನು ಹೇರುವುದರಿಂದ ಹಿಡಿದು, ಅಣ್ವಸ್ತ್ರಗಳನ್ನು ತಯಾರಿಸದಂತೆ ಜಾಗತಿಕವಾಗಿ ಒತ್ತಡ ಹೇರಬಹುದು ಎಂದು ತಮ್ಮ ಚಿಂತೆ ವ್ಯಕ್ತಪಡಿಸಿದರು.

ಅವರು ಆಡಿದ ಮಾತನ್ನು ಕೇಳಿದ ವಾಜಪೇಯಿ, ಅದಕ್ಕೆಲ್ಲ ಯೋಚಿಸಬೇಡಿ ಕಲಾಂ ಜೀ. ಯಾಕೆಂದರೆ ನಾನೂ ಅವಿವಾಹಿತ. ನೀವೂ ಅವಿವಾಹಿತರು. ಹೀಗಾಗಿ ನಾವು ಈ ವಿಷಯವನ್ನು ಯಾರಿಗೂ ಹೇಳಬೇಕಿಲ್ಲ ಅಥವಾ ಕೇಳಬೇಕಿಲ್ಲ ಎಂದು ತಮಾಷೆ ಮಾಡಿದರು.

ಅಷ್ಟೇ ಅಲ್ಲ, ಈ ವಿಷಯಕ್ಕೆ ಸಂಬಂಽಸಿದಂತೆ ನಾನು ನಿಮಗೆ ಯಾವ ಅಧಿಕೃತ ಆದೇಶವನ್ನೂ ಕೊಡುವುದಿಲ್ಲ. ನೀವೂ ನನ್ನ ಆದೇಶವನ್ನು ಕಾಯಬೇಕಿಲ್ಲ. ಹೀಗಾಗಿ ಎಲ್ಲವೂ ಗುಟ್ಟಾಗಿ ನಡೆಯಲಿ. ಇದಕ್ಕೇನು ಅಗತ್ಯವೋ ಅದೆಲ್ಲವನ್ನೂ ವ್ಯವಸ್ಥೆ ಮಾಡಿ ಎಂದರು.

ಸರಿ, ಅಬ್ದುಲ್ ಕಲಾಂ ಅವರು ಗುಟ್ಟಾಗಿ ಅಣ್ವಸ್ತ್ರ ತಯಾರಿಕೆಯಲ್ಲಿ ತೊಡಗಿಕೊಂಡರು. ಅದನ್ನವರು ಎಷ್ಟು ಗುಟ್ಟಾಗಿಟ್ಟಿದ್ದರೆಂದರೆ ಇಂತಹದೊಂದು ಕೆಲಸ ನಡೆಯುತ್ತಿದೆ ಎಂಬುದು ವಾಜಪೇಯಿ ಅವರ ಸಂಪುಟ ಸದಸ್ಯರಿಂದ ಹಿಡಿದು ಕಲಾಂ ಅವರ ಹತ್ತಿರದಲ್ಲಿದ್ದವರಿಗೂ ಗೊತ್ತಿರಲಿಲ್ಲ.

ಹೀಗೆ ಅಣ್ವಸ್ತ್ರಗಳನ್ನು ಸಿದ್ಧಪಡಿಸಿದ ನಂತರ ಕಲಾಂ ಅವರು ವಾಜಪೇಯಿ ಅವರ ಗಮನಕ್ಕೆ ತಂದರು. ವಿಷಯ ತಮ್ಮ ಗಮನಕ್ಕೆ ಬಂದ ಮೇಲೆ ರಾಜಸ್ತಾನದಲ್ಲಿ ಅದರ ಪರೀಕ್ಷೆ ನಡೆಸಲು ವಾಜಪೇಯಿ ಸೂಚಿಸಿದರು.

ಹೀಗೆ ವಾಜಪೇಯಿ ಅವರ ಸೂಚನೆಯಂತೆ ರಾಜಸ್ತಾನದಲ್ಲಿ ಅಣುಬಾಂಬ್ ಪರೀಕ್ಷೆ ನಡೆಯಿತು. ಈ ಪರೀಕ್ಷೆಯ ಸಂದರ್ಭದಲ್ಲಿ ವಾಜಪೇಯಿ ಅವರು ಹವಾಮಾನ ಇಲಾಖೆಗೂ ಒಂದು ಸೂಚನೆ ಕೊಟ್ಟು: ಅಣುಬಾಂಬ್ ಪರೀಕ್ಷೆ ನಡೆಯುವ ಜಾಗದ ಸುತ್ತಮುತ್ತ ಭಾರೀ ಪ್ರಮಾಣದ ಚಂಡಮಾರುತ ಶುರುವಾಗಿದೆ. ಹೀಗಾಗಿ ಜನ ಮನೆ ಬಿಟ್ಟು ಹೊರಬರಬಾರದು ಎಂದು ಪ್ರಕಟಣೆ ನೀಡಿ ಎಂದಿದ್ದರು.

ಅದರ ಪ್ರಕಾರ ಸೂಚನೆ ಹೊರಟ ನಂತರ ಅಣುಬಾಂಬ್ ಪರೀಕ್ಷೆ ನಡೆಯಿತು ಮತ್ತು ಈ ಪರೀಕ್ಷೆಯನ್ನು ಪತ್ತೆ ಮಾಡಲು ಅಮೆರಿಕಕ್ಕೂ ಸಾಧ್ಯವಾಗಲಿಲ್ಲ. ತನ್ನ ಉಪಗ್ರಹಗಳಿಂದ ಜಗತ್ತೇ ತನ್ನ ಕಣ್ಣಳತೆಯಲ್ಲಿದೆ ಎಂದು ನಂಬಿದ್ದ ಅಮೆರಿಕಕ್ಕೇ ಈ ರೀತಿ ಟಕ್ಕರ್ ಕೊಟ್ಟ ವಾಜಪೇಯಿ, ಪುನಃ ಅಣುಬಾಂಬಿನ ಪ್ರಯೋಗ ನಡೆಸುವಂತೆ ಕಲಾಂ ಅವರಿಗೆ ಸೂಚಿಸಿದರು. ಆದರೆ ಈ ಬಾರಿ ಅಮೆರಿಕದ ನಾಸಾ ಇದು ಬಾಂಬು ಸೋಟವಿದ್ದಂತಿದೆ ಎಂದು ಸರ್ಕಾರದ ಮುಖ್ಯಸ್ಥರಿಗೆ ಹೇಳುವ ಪ್ರಯತ್ನ ಮಾಡಿತು.ಆದರೆ ಅಷ್ಟೊತ್ತಿಗಾಗಲೇ ರಾಜಸ್ತಾನದಲ್ಲಿ ಚಂಡಮಾರುತ ಶುರುವಾಗಿದೆ ಎಂದು ಭಾರತದ ಹವಾಮಾನ ಇಲಾಖೆ ಪ್ರಮುಖರು ಹೇಳಿದ್ದರಲ್ಲ ! ಹೀಗಾಗಿ, ನೋ ನೋ, ಇದು ಬಾಂಬಲ್ಲ ಅಂತ ಅಮೆರಿಕ ಸರ್ಕಾರ ಹೇಳಿತು.

ಆದರೆ ಮುಂದಿನ ಕೆಲವೇ ದಿನಗಳಲ್ಲಿ ಇನ್ನೂ ಎರಡು ಬಾರಿ ಪ್ರಯೋಗ ನಡೆದಾಗ ನೆರೆಯ ಪಾಕಿಸ್ತಾನಕ್ಕೆ ಅನುಮಾನ ಬಂತು. ಕಾರಣ ಭಾರತದಲ್ಲಿ ಪ್ರಯೋಗ ನಡೆದರೆ ಪಾಕಿಸ್ತಾನದ ಗಡಿ ಭಾಗದಲ್ಲಿ ಭೂಕಂಪದ ಅನುಭವವಾಗುತ್ತಿತ್ತು. ಹೀಗಾಗಿ ಅದು ತಕ್ಷಣ ಅಮೆರಿಕದ ಗಮನಕ್ಕೆ ಈ ವಿಷಯವನ್ನು ತಂದಿದ್ದಲ್ಲದೆ, ಭಾರತ ಅಣುಬಾಂಬ್ ಪರೀಕ್ಷೆ ನಡೆಸಿದೆ ಎಂದು ದೂರಿತು.

ಯಾವಾಗ ಪಾಕಿಸ್ತಾನ ದೂರು ನೀಡಿತೋ ಆಗ ಪತ್ತೆ ಕಾರ್ಯಕ್ಕಿಳಿದ ಅಮೆರಿಕಕ್ಕೆ ಆಘಾತ ಕಾದಿತ್ತು. ಯಾಕೆಂದರೆ ಪಾಕಿಸ್ತಾನ ಹೇಳಿದಂತೆ ಭಾರತ ಅಣುಬಾಂಬ್ ಪರೀಕ್ಷೆ ನಡೆಸಿರುವುದು ಸ್ಪಷ್ಟವಾಗಿತ್ತು. ಇಂತಹ ಪರೀಕ್ಷೆಯ ಫಲವಾಗಿ ಸುತ್ತಮುತ್ತಲಿನ ಮೂವತ್ತೈದು ಸಾವಿರ ಎಕರೆಯಷ್ಟು ಭೂ ಪ್ರದೇಶದಲ್ಲಿ ಅದರ ಕುರುಹುಗಳು ಕಾಣಿಸಿದ್ದವು. ಹೀಗಾಗಿ ಕೆರಳಿದ ಅಮೆರಿಕದ ಮುಖ್ಯಸ್ಥರು ಸುದ್ದಿಗೋಷ್ಠಿ ನಡೆಸಿ:ನಾವು ಭಾರತದ ನಿಲುವನ್ನು ಖಂಡಿಸುತ್ತೇವೆ. ಯಾವ ಕಾರಣಕ್ಕೂ ಅದು ಪರಮಾಣು ಸಂಪನ್ನ ರಾಷ್ಟ್ರ ಎಂದು ನಾವು ಮಾನ್ಯತೆ ಕೊಡುವುದಿಲ್ಲ ಎಂದು ಗುಡುಗಿದರು. ಅದರೆ ಅಮೆರಿಕದ ಈ ಮಾತಿಗೆ ಕ್ಯಾರೇ ಎನ್ನದ ವಾಜಪೇಯಿ ಅವರು ನಮ್ಮ ಬಳಿ ಪರಮಾಣು ಅಸ್ತ್ರಗಳಿವೆ ಎಂದ ಮೇಲೆ, ಅದಕ್ಕೆ ಬೇರೆ ಯಾರ ಮಾನ್ಯತೆಯನ್ನೂ ಕಾಯಬೇಕಾದ ಅಗತ್ಯವಿಲ್ಲ ಎಂದರು. ಮುಂದೆ ಭಾರತ ದೊಡ್ಡ ಮಟ್ಟದಲ್ಲಿ ಅಣ್ವಸ್ತ್ರ ತಯಾರಿಸಿತು ಎಂಬುದು ಬೇರೆ ಮಾತು.ಆದರೆ ಇಂತಹ ಮಹತ್ವದ ಕಾರ್ಯವೊಂದನ್ನು ವಾಜಪೇಯಿ ಮತ್ತು ಅಬ್ದುಲ್ ಕಲಾಂ ಜಗತ್ತಿನ ಕಣ್ಣಿಗೆ ಕಾಣದಂತೆ ಗುಟ್ಟಾಗಿ ಪೂರ್ಣಗೊಳಿಸಿದ್ದರು.

ಈ ಘಟನೆಯನ್ನೇಕೆ ನೆನಪಿಸಬೇಕೆಂದರೆ ರಾಷ್ಟ್ರೀಯ ಭದ್ರತೆಯ ವಿಚಾರ ಎಷ್ಟು ರಹಸ್ಯವಾಗಿರಬೇಕು ಎಂಬುದನ್ನು ಅವತ್ತು ವಾಜಪೇಯಿ ಮತ್ತು ಕಲಾಂ ಸಾಬೀತುಪಡಿಸಿದ್ದರು. ಆದರೆ ಇತ್ತೀಚೆಗೆ ನಡೆದ ಭಾರತ-ಪಾಕಿಸ್ತಾನದ ನಡುವಣ ಸಂಘರ್ಷದ ಇಂಚಿಂಚು ವಿವರವೂ ಈಗ ನಮಗೆ ಗೊತ್ತಾಗುತ್ತಿದೆ. ಅದರಲ್ಲೂ ಮುಖ್ಯವಾಗಿ ಪಾಕಿಸ್ತಾನದ ಅಡಗುತಾಣಗಳ ಮೇಲೆ ಭಾರತ ನಿಖರವಾಗಿ ಗುರಿ ಇಡಲು ನೆರವು ನೀಡಿದ್ದೇ ಇಸ್ರೋ ಎಂಬ ಸತ್ಯ ಜಗತ್ತಿಗೇ ಗೊತ್ತಾಗಿದೆ. ಇದನ್ನು ನೋಡುತ್ತಿದ್ದರೆ ಮುಂದಿನ ದಿನಗಳಲ್ಲಿ ಪಾಕಿಸ್ತಾನದ ವಿರುದ್ಧ ಹೋರಾಡಿದ ಭಾರತೀಯ ಸೈನಿಕರು ಯಾರು? ಈ ಸೈನಿಕರ ಪೈಕಿ ಎಷ್ಟು ಜನರ ಸಂಸಾರದ ವಿವರಗಳು ಹೇಗಿವೆ? ಎಂಬುದೂ ಬಹಿರಂಗವಾಗುವ ಪರಿಸ್ಥಿತಿ ಇದೆ.

ಅರ್ಥಾತ್, ರಾಷ್ಟ್ರೀಯ ಭದ್ರತೆಯಂತಹ ವಿಷಯಕ್ಕೆ ನಮ್ಮಲ್ಲಿ ಯಾವ ಪ್ರಮಾಣದ ನಿರ್ಲಕ್ಷ ವಿದೆ ಎಂಬುದು ಇದರಿಂದ ಗೊತ್ತಾಗುತ್ತದೆ. ಅಂದ ಹಾಗೆ ಇವತ್ತು ಭಾರತದಲ್ಲಿ ಅಮೆರಿಕ,ರಷ್ಯಾ,ಚೀನಾದಂತಹ ದೇಶಗಳು ಮಾತ್ರವಲ್ಲ,ಅಸಂಖ್ಯಾತ ದೇಶಗಳು ತಮ್ಮ ಗೂಢಚಾರರನ್ನಿಟ್ಟಿವೆ. ಭಾರತದಲ್ಲಿ ಏನಾಗುತ್ತಿದೆ ಎಂಬ ಇಂಚಿಂಚು ವಿವರವನ್ನೂ ಸಂಗ್ರಹಿಸಿ ತಮ್ಮ ದೇಶಕ್ಕೆ ರವಾನಿಸುವುದೇ ಈ ಗೂಢಚಾರರ ಕೆಲಸ. ಅವರ ಈ ಕೆಲಸವನ್ನು ನಮ್ಮವರು ಎಷ್ಟು ಹಗುರಗೊಳಿಸುತ್ತಿದ್ದಾರೆಂದರೆ, ಭಾರತೀಯ ಸೈನ್ಯದ ಪ್ರತಿಯೊಂದು ವಿವರಗಳೂ ಈ ಗೂಢಚಾರರಿಗೆ ಸುಲಭವಾಗಿ ಸಿಗುತ್ತಿದೆ.

ಹೀಗೆ ದೇಶದ ಭದ್ರತೆಯ ವಿಷಯವನ್ನು ಗೋಪ್ಯವಾಗಿಡುವ ಬದಲು ಟಾಮ್ ಟಾಮ್ ಮಾಡಿ ಹೇಳುವ ಕೆಲಸದಲ್ಲಿ ಕರ್ನಾಟಕವೂ ಹಿಂದೆ ಬಿದ್ದಿಲ್ಲ. ಪರಿಣಾಮ ನಮ್ಮ ಶಕ್ತಿಯ ಬಗ್ಗೆ ಕೊಚ್ಚಿಕೊಳ್ಳುವ ಭರದಲ್ಲಿ ನಮ್ಮ ರಾಷ್ಟ್ರದ ಭದ್ರತೆಯನ್ನು ನಿರ್ಲಕ್ಷಿಸುವಂತಹ ಹೀನಾಯ ಮನಃಸ್ಥಿತಿ ಇಲ್ಲಿ ಮೆರೆಯುತ್ತಿದೆ. ಇದಕ್ಕೆ ಕಡಿವಾಣ ಬೀಳದಿದ್ದರೆ ಮುಂದಿನ ದಿನಗಳಲ್ಲಿ ಯಾವ ಆಪತ್ತು ಕಾದಿದೆ ಎಂದು ಪ್ರತ್ಯೇಕವಾಗಿ ಹೇಳಬೇಕಿಲ್ಲ.

” ರಾಷ್ಟ್ರೀಯ ಭದ್ರತೆಯ ವಿಷಯ ಎಷ್ಟು ರಹಸ್ಯವಾಗಿರಬೇಕು ಎಂಬುದನ್ನು ಅಂದು ವಾಜಪೇಯಿ ಮತ್ತು ಕಲಾಂ ಅವರು ಅಣ್ವಸ್ತ್ರ ಪರೀಕ್ಷೆ ಸಂದರ್ಭದಲ್ಲಿ ಸಾಬೀತುಪಡಿಸಿದ್ದರು. ಆದರೆ ಇತ್ತೀಚೆಗೆ ನಡೆದ ಭಾರತ-ಪಾಕಿಸ್ತಾನದ ನಡುವಣ ಸಂಘರ್ಷದ ಇಂಚಿಂಚು ವಿವರವೂ ಈಗ ನಮಗೆ ಗೊತ್ತಾಗುತ್ತಿದೆ. ಅದರಲ್ಲೂ ಮುಖ್ಯವಾಗಿ ಪಾಕಿಸ್ತಾನದ ಅಡಗುತಾಣಗಳ ಮೇಲೆ ಭಾರತ ನಿಖರವಾಗಿ ಗುರಿ ಇಡಲು ನೆರವು ನೀಡಿದ್ದೇ ಇಸ್ರೋ ಎಂಬ ಸತ್ಯ ಜಗತ್ತಿಗೇ ಗೊತ್ತಾಗಿದೆ.”

ಆಂದೋಲನ ಡೆಸ್ಕ್

Recent Posts

ದಸರಾ ಯಶಸ್ವಿಗೆ 17 ಉಪಸಮಿತಿಗಳ ರಚನೆ

ಮೈಸೂರು: ಮೈಸೂರು ದಸರಾ ಮಹೋತ್ಸವದ ಯಶಸ್ವಿ ಆಯೋಜನೆಗಾಗಿ 17 ಉಪಸಮಿತಿಗಳನ್ನು ರಚಿಸಲಾಗಿದ್ದು, ಕಾರ್ಯಾಧ್ಯಕ್ಷರಿಗೆ ಜವಾಬ್ದಾರಿ ವಹಿಸಲಾಗಿದೆ ಎಂದು ನಗರಾಭಿವೃದ್ಧಿ ಸಚಿವರಾದ…

8 hours ago

ಶಿಕ್ಷಣ ವ್ಯವಸ್ಥೆ ಸುಧಾರಣೆಗೆ ಸರ್ಕಾರ ಮಣಿಸಿದ ಜೆನ್ ಝೀ ಚಳವಳಿ

ದೇಶ ಆಳುವ ವರ್ಗದ ಏಕಚಕ್ರಾಧಿಪತ್ಯವನ್ನು ವಿರೋಧಿಸಿ ನಡೆದ ಚಳವಳಿ ಸರ್ಕಾರವನ್ನು ಮಂಡಿಯೂರುವಂತೆ ಮಾಡಿದೆ. ದೇಶಾದ್ಯಂತ ಕಾಕ್ರೋಚ್ ಜನತಾ ಪಾರ್ಟಿ ನೇತೃತ್ವದಲ್ಲಿ…

21 hours ago

ಸಂಪುಟ ವಿಸ್ತರಣೆ ವಿಳಂಬ; ಡಿಕೆಶಿ ಅಸಮಾಧಾನ

ಆರ್.ಟಿ.ವಿಠ್ಠಲಮೂರ್ತಿ ಅವರ ವಾರದ ಅಂಕಣ  ಸರ್ಕಾರ ಟೇಕಾಫ್ ಆಗಲು ಪೂರ್ಣ ಪ್ರಮಾಣದ ಸಚಿವ ಸಂಪುಟ ರಚನೆ ಅನಿವಾರ್ಯ ಕಳೆದ ವಾರ…

21 hours ago

ಕೃಷಿಗೆ ನೀರಿಲ್ಲ ಎಂಬ ಆದೇಶದಿಂದ ರೈತರು ಕಂಗಾಲು

ಆನಂದ್ ಹೊಸೂರು ಚುಂಚನಕಟ್ಟೆ ಹೋಬಳಿಯಲ್ಲಿ ಭತ್ತ ಬೆಳೆಯುತ್ತಿದ್ದ ರೈತರಿಗೆ ಈಗ ಸಂಕಷ್ಟದ ಸ್ಥಿತಿ ಹೊಸೂರು: ಕಾವೇರಿ ನೀರು ಕುಡಿಯಲು ಮಾತ್ರ,…

21 hours ago

ರಸ್ತೆ ಬದಿ ಅಗೆದು ಹಾಗೆಯೇ ಬಿಟ್ಟ ಗುತ್ತಿಗೆದಾರರು

ಮಹೇಂದ್ರ ಹಸಗೂಲಿ ಸಂಚಾರಕ್ಕೆ ಅಡಚಣೆ; ಬಿಎಸ್‌ಎನ್‌ಎಲ್ ಗುತ್ತಿಗೆದಾರರ ವಿರುದ್ಧ ಕ್ರಮಕ್ಕೆ ಸಾರ್ವಜನಿಕರ ಒತ್ತಾಯ ಗುಂಡ್ಲುಪೇಟೆ: ಬಿಎಸ್‌ಎನ್‌ಎಲ್‌ನಿಂದ ನೇಮಿಸಲ್ಪಟ್ಟಿರುವ ಗುತ್ತಿಗೆದಾರರು ಕೇಬಲ್…

21 hours ago