ಎಡಿಟೋರಿಯಲ್

ಸಂಪಾದಕೀಯ : ಅಧಿಕಾರಿಗಳು, ಜನಪ್ರತಿನಿಧಿಗಳ ಇಚ್ಛಾಶಕ್ತಿ ಕೊರತೆಯಿಂದ ಕುಂಟುತ್ತಿದೆ ಮಿನಿವಿಧಾನಸೌಧ ಕಟ್ಟಡ..!

ತಾಲೂಕು ಆಡಳಿತ ಒಂದೆ ಸೂರಿನಡಿ ದೊರೆಯಲು ಸರ್ಕಾರ ಯೋಜನೆ ರೂಪಿಸಿ ಪ್ರತಿ ತಾಲೂಕಿನಲ್ಲಿ ಮಿನಿ ವಿಧಾನಸೌಧ ನಿರ್ಮಾಣಕ್ಕೆ ಅಡಿಗಲ್ಲು ಇಟ್ಟಿತ್ತು. ಅದೇ ರೀತಿ ಮಡಿಕೇರಿಯಲ್ಲಿಯೂ ಯೋಜನೆ ಶುರುವಾಯಿತು. ಆದರೆ, ಕೆಲ ಆಡಳಿತದ ತಾಂತ್ರಿಕ ಕಾರಣದಿಂದ ಮಂದಗತಿಯಲ್ಲಿ ಸಾಗುತ್ತಿದ್ದ ಕಾಮಗಾರಿ ಪೂರ್ಣಗೊಳ್ಳದೆ ಅರೆಬರೆ ಸ್ಥಿತಿಯಲ್ಲಿತ್ತು. ಇದೀಗ ೨ನೇ ಹಂತದ ಕಾಮಗಾರಿ ನಡೆಯುತ್ತಿದ್ದು, ಮುಂದಿನ ವರ್ಷದಲ್ಲಾದರೂ ಕಾಮಗಾರಿ ಪೂರ್ಣಗೊಳಿಸಬೇಕಾದ ಅನಿವಾರ್ಯತೆ ಇದೆ.
ಕಾನ್ವೆಂಟ್ ಜಂಕ್ಷನ್ ಬಳಿಯ ೧.೫ ಎಕರೆ ಪ್ರದೇಶದಲ್ಲಿ ಮಿನಿ ವಿಧಾನಸೌಧ ಕಟ್ಟಡ ಕಾಮಗಾರಿ ೨೦೧೬ರಲ್ಲಿ ಆರಂಭಗೊಂಡಿತು. ಮೊದಲ ಹಂತದಲ್ಲಿ ೫ ಕೋಟಿ ರೂ. ವೆಚ್ಚದಲ್ಲಿ ಯೋಜನೆ ಪ್ರಸ್ತಾವನೆ ಪಡೆದುಕೊಂಡು ಕಟ್ಟಡ ತಲೆಎತ್ತಲು ಆರಂಭಿಸಿತು. ಸುತ್ತಲೂ ಗೋಡೆ, ಸ್ಲ್ಯಾಬಿಂಗ್ ಸೇರಿದಂತೆ ಇನ್ನಿತರ ಕೆಲಸಗಳು ನಡೆದಿದ್ದವು. ಉಳಿದ ಕಾಮಗಾರಿ ಕೆಲ ತಾಂತ್ರಿಕ ಸಮಸ್ಯೆಯಿಂದ ಸ್ಥಗಿತಗೊಂಡು ಮಿನಿ ವಿಧಾನಸೌಧ ಕಟ್ಟಡ ಪಾಳು ಬಿದ್ದ ಸ್ಥಿತಿಯಲ್ಲಿತ್ತು. ಇದೀಗ ಗಂಗಾವತಿ ಮೂಲದ ಲಕ್ಷ್ಮಿನಾರಾಯಣ ಗುತ್ತಿಗೆ ಸಂಸ್ಥೆ ೨ನೇ ಹಂತದ ಕಾಮಗಾರಿ ವಹಿಸಿಕೊಂಡು ಕೆಲಸ ನಡೆಸುತ್ತಿದೆ.
ಕಟ್ಟಡ ಕಾಮಗಾರಿಗೆ ಕಂದಾಯ ಇಲಾಖೆಯ ನಿರ್ದೇಶನದಂತೆ ಕರ್ನಾಟಕ ಗೃಹ ನಿರ್ಮಾಣ ಮಂಡಳಿ ಅಧಿಕಾರಿಗಳ ಉಸ್ತುವಾರಿಯಲ್ಲಿ ಬೆಂಗಳೂರಿನ ಖಾಸಗಿ ಕಂಪನಿಯೊಂದು ೨೦೧೬ರಲ್ಲಿ ಕೆಲಸ ಆರಂಭಿಸಿತ್ತು. ಆರಂಭದಲ್ಲಿ ಮಿನಿ ವಿಧಾನಸೌಧಕ್ಕೆ ನೀಡಲಾಗಿರುವ ಜಾಗದ ಬಗ್ಗೆ ಆಕ್ಷೇಪಗಳು ವ್ಯಕ್ತವಾಗಿದ್ದವು. ಕಾಮಗಾರಿ ಆರಂಭಗೊಂಡ ಕೆಲ ಸಮಯದಲ್ಲಿ ನಿವೇಶನದಲ್ಲಿ ನಿರಂತರ ಜಲಮೂಲ ಸಮಸ್ಯೆ, ಮಳೆಗಾಲದಲ್ಲಿ ಇಡೀ ಪ್ರದೇಶ ಕೆಸರುಮಯವಾಗಿ ಪರಿವರ್ತನೆಗೊಂಡ ಪರಿಣಾಮ ಹಲವು ಸಮಯ ಕೆಲಸ ಮುಂದುವರಿಯಲಿಲ್ಲ.
ಇದೆಲ್ಲದರ ನಡುವೆ ಸುಮಾರು ೨೨ ಅಡಿಯಷ್ಟು ಆಳಕ್ಕೆ ನಿವೇಶನದಲ್ಲಿ ಮಣ್ಣು ತೆರವುಗೊಳಿಸಲಾಯಿತು. ಆ ಮುಖಾಂತರ ಆಳದಿಂದ ಕಬ್ಬಿಣದ ಸಲಾಕೆಗಳ ಬಳಕೆಯೊಂದಿಗೆ ನುರಿತರ ಸಲಹೆಯಂತೆ ೨೦ ಅಡಿ ಕಾಂಕ್ರಿಟ್ ಬಿಡ್‌ನಿಂದ ಕೂಡಿದ ಪಿಲ್ಲರ್ ನಿರ್ಮಿಸಲಾಯಿತು. ಹೀಗೆ ನಾಲ್ಕು ಅಡಿಯಷ್ಟು ಮೊದಲ ಹಂತದ ಕಾಂಕ್ರಿಟ್ ಬಿಡ್ ನಿರ್ಮಿಸುವುದರೊಂದಿಗೆ ಮಣ್ಣನ್ನು ತುಂಬಿ ನಿವೇಶನವನ್ನು ಸಮತಟ್ಟುಗೊಳಿಸಲಾಯಿತು.
ಮೊದಲ ಹಂತದಲ್ಲಿ ಕೆಲವು ಕಾಮಗಾರಿ ಮಾತ್ರ ಪೂರ್ಣಗೊಂಡಿದ್ದು, ಎರಡು ಅಂತಸ್ತಿನ ಸ್ಲ್ಯಾಬ್ ಪೂರ್ಣಗೊಂಡು, ಮುಂದಿನ ಕೆಲಸವನ್ನು ಅನುದಾನ ಕೊರತೆಯಿಂದ ಸ್ಥಗಿತಗೊಳಿಸಲಾಯಿತು. ಜತೆಗೆ ಅನುದಾನದ ಪ್ರಮಾಣವೂ ಹೆಚ್ಚಾಯಿತು. ಗುತ್ತಿಗೆ ಪಡೆದವರು ಕೆಲಸವನ್ನು ಅರ್ಧಕ್ಕೆ ಮೊಟಕುಗೊಳಿಸಿ ಯೋಜನೆಯಿಂದ ಹಿಂದೆ ಸರಿದರು. ಕಟ್ಟಡದ ವಿನ್ಯಾಸವನ್ನು ಮಂಗಳೂರು ಮೂಲದ ಕಂಪನಿ ಮಾಡಿಕೊಟ್ಟಿದ್ದು, ಇದರಂತೆ ಕಟ್ಟಡ ಕಾಮಗಾರಿ ನಡೆಸಲಾಗುತ್ತಿದೆ.
ಮೂರು ಅಂತಸ್ತು ಒಳಗೊಂಡಿರುವ ಕಟ್ಟಡ ಕಂದಾಯ ಇಲಾಖೆಗೆ ಸಂಬಂಧಿಸಿದ ಎಲ್ಲ ಕಚೇರಿ ಒಳಗೊಳ್ಳಲಿದೆ. ಮೀಟಿಂಗ್ ಹಾಲ್, ಸಬ್ ರಿಜಿಸ್ಟರ್ ಕಚೇರಿ, ಕಂದಾಯ ಇಲಾಖೆಯ ಖಜಾನೆ, ಪಹಣಿ ಕೇಂದ್ರ, ಶಾಸಕರ ಕಚೇರಿಗಳು, ಆರ್‌ಟಿಸಿ ನೀಡುವ ಸಿಬ್ಬಂದಿಗಳ ಕಚೇರಿ, ಚುನಾವಣೆ ಸಂದರ್ಭ ಸಭೆ ನಡೆಸಲು ಸಭಾಂಗಣ ನಿರ್ಮಾಣದ ಯೋಜನೆಯನ್ನು ಮಿನಿ ವಿಧಾನಸೌಧ ಒಳಗೊಂಡಿದೆ.
ಆಡಳಿತ ಶಕ್ತಿ ಕೇಂದ್ರವಾಗಬೇಕಾದ ಈ ಕಟ್ಟಡ ಇಂದಿಗೂ ಮಂದಗತಿಯಲ್ಲಿ ಸಾಗುತ್ತಿರುವುದು ಜನರ ಅಸಮಾಧಾನಕ್ಕೆ ಕಾರಣವಾಗಿದೆ. ಅರೆಬರೆ ಸ್ಥಿತಿಯಲ್ಲಿರುವ ಕಟ್ಟಡ ಎಂದು ಪೂರ್ಣಗೊಳ್ಳುತ್ತೆ ಎಂಬ ಪ್ರಶ್ನೆಯೂ ಉದ್ಭವಿಸಿದೆ. ಆರಂಭಗೊಂಡ ಕಾಮಗಾರಿ ನೆನೆಗುದಿಗೆ ಬೀಳದೆ ಜನಪ್ರತಿನಿಧಿಗಳು ಹಾಗೂ ಸರ್ಕಾರ ಇಚ್ಛಾಶಕ್ತಿ ಮೆರೆದು ಕಟ್ಟಡ ಪೂರ್ಣಗೊಳಿಸಲು ಮುಂದಾಗಬೇಕಾಗಿದೆ.
೨ನೇ ಹಂತದ ಕಾಮಗಾರಿಯನ್ನು ೧೧ ತಿಂಗಳಿನೊಳಗೆ ಮುಗಿಸುವ ಗುರಿ ಹೊಂದಲಾಗಿದೆ. ಪ್ರಸ್ತುತ ಹೆಚ್ಚುವರಿ ರೂ.೪ ಕೋಟಿ ಅನುದಾನದ ಲಭ್ಯತೆ ಇದೆ. ಹೊಸದಾಗಿ ಗುತ್ತಿಗೆ ಪಡೆದ ಕಂಪೆನಿ ರೂ. ೧ ಕೋಟಿ ವೆಚ್ಚದಲ್ಲಿ ಕೆಲಸಗಳು ಮಾಡಿದ್ದು, ಇದರಲ್ಲಿ ಸ್ಲ್ಯಾಬಿಂಗ್, ರೂಫಿಂಗ್ ಕೆಲಸಗಳು ಒಳಗೊಂಡಿವೆ. ಆದರೆ, ಇದುವರೆಗೂ ಸರ್ಕಾರದಿಂದ ೨ನೇ ಹಂತದ ಹಣ ಬಿಡುಗಡೆಗೊಂಡಿಲ್ಲ.
ಕೊಡಗಿನ ಜಿಲ್ಲಾ ಕೇಂದ್ರವಾಗಿರುವ ಮಡಿಕೇರಿ ನಗರದಲ್ಲಿ ಶೀಘ್ರದಲ್ಲಿ ತಲೆಎತ್ತಬೇಕಾಗಿದ್ದ ಮಿನಿ ವಿಧಾನಸೌಧ ಕಟ್ಟಡ ಅಧಿಕಾರಿಗಳು, ಜನಪ್ರತಿನಿಧಿಗಳ ಇಚ್ಛಾಶಕ್ತಿ ಕೊರತೆಯಿಂದಲೂ ಕುಂಟುತ್ತಾ ಸಾಗುತ್ತಿದೆ. ಸದ್ಯ ಈಗಿನ ಗುತ್ತಿಗೆದಾರರು ಶೀಘ್ರದಲ್ಲೇ ಕಟ್ಟಡ ನಿರ್ಮಾಣ ಕಾಮಗಾರಿ ಪೂರ್ಣಗೊಳಿಸುವ ಯೋಜನೆಯಲ್ಲಿದ್ದಾರೆ. ಸರ್ಕಾರದಿಂದ ಬಿಡುಗಡೆಯಾಗಬೇಕಾಗಿರುವ ಅನುದಾನವನ್ನು ದೊರಕಿಸಿಕೊಡುವ ಮೂಲಕ ಕಾಮಗಾರಿ ಶೀಘ್ರ ಪೂರ್ಣಗೊಳಿಸಲು ಅಗತ್ಯ ಸಹಕಾರ ನೀಡಬೇಕಾಗಿದೆ. ಆ ಮೂಲಕ ಒಂದೇ ಕಟ್ಟಡದಲ್ಲಿ ಸಾರ್ವಜನಿಕರಿಗೆ ಸೇವೆ ಒದಗಿಸುವ ಕನಸು ನನಸು ಮಾಡಬೇಕಿದೆ.

andolanait

Recent Posts

ಕೊಡಗು ಜಿಲ್ಲೆಯಲ್ಲಿ ಹೆಚ್ಚುತ್ತಿದೆ ಸೈಬರ್ ವಂಚನೆ..!

ಕೃಷ್ಣ ಸಿದ್ದಾಪುರ ಪೊಲೀಸರು ಜಾಗೃತಿ ಮೂಡಿಸಿದರೂ ಎಚ್ಚೆತ್ತುಕೊಳ್ಳದ ಜನರು ಹೂಡಿಕೆ ಹಣ ದೋಚುತ್ತಿರುವ ಖದೀಮರು  ಸಿದ್ದಾಪುರ: ಸೈಬರ್ ಅಪರಾಧ ಪ್ರಕರಣಗಳ…

3 mins ago

ಫೆ.6ರಂದು ಮಹದೇಶ್ವರ ದೇವಾಲಯದ ಉದ್ಘಾಟನೆ

ಎಂ.ಯೋಗಾನಂದ್ ಹಿರಿಕ್ಯಾತನಹಳ್ಳಿಯಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ದೇಗುಲ; ಭಕ್ತರಿಂದ ಅನ್ನಸಂತರ್ಪಣೆ  ಹುಣಸೂರು: ತಾಲ್ಲೂಕಿನ ಗಾವಡಗೆರೆ ಹೋಬಳಿಯ ಹಿರಿಕ್ಯಾತನಹಳ್ಳಿ ಗ್ರಾಮದಲ್ಲಿ ನಿರ್ಮಾಣಗೊಂಡಿರುವ ಮಹದೇಶ್ವರ…

7 mins ago

ರೈಲ್ವೆ ಕಂಬಿಗಳಿಗೆ ತಂತಿ ಜಾಲರಿ ಅಳವಡಿಕೆ ಪ್ರಯೋಗ ಯಶಸ್ವಿ

ಮಂಜು ಕೋಟೆ ಕಾಡುಪ್ರಾಣಿಗಳ ಹಾವಳಿ ನಿಯಂತ್ರಣ; ರೈತರು, ಸಾರ್ವಜನಿಕರು ನಿರಾಳ  ಎಚ್.ಡಿ.ಕೋಟೆ: ಮಾನವ ಮತ್ತು ವನ್ಯ ಪ್ರಾಣಿಗಳ ಸಂಘರ್ಷ ತಡೆಗಟ್ಟಲು…

10 mins ago

ಕ್ಯಾನ್ಸರ್ ಚಿಂತೆ ಬಿಡಿ, ಚಿಕಿತ್ಸೆ ಬಗ್ಗೆ ಗಮನ ಕೊಡಿ

ಫೋನ್ ಇನ್ ಕಾರ್ಯಕ್ರಮಲ್ಲಿ ಭಾರತ್ ಕ್ಯಾನ್ಸರ್ ಆಸ್ಪತ್ರೆ ವೈದ್ಯರಿಂದ ಹಲವು ಸಲಹೆ  ಕುಮಾರ್, ಬೆಂಗಳೂರು: ರೊಬೊಟಿಕ್ಸ್ ಶಸಚಿಕಿತ್ಸೆಗೂ, ಸಾಮಾನ್ಯ ಶಸ್ತ್ರಚಿಕಿತ್ಸೆಗೂ ಇರುವ…

14 mins ago

ಕೇರಳ ಮಾದರಿಯಲ್ಲಿ ವಿದ್ಯಾರ್ಥಿಗಳಿಗೆ ವಿಮೆ ಯೋಜನೆಗೆ ಬೇಡಿಕೆ

ಗಿರೀಶ್ ಹುಣಸೂರು ಅವಘಡಗಳು ಹೆಚ್ಚುತ್ತಿರುವ ಹಿನ್ನೆಲೆ; ರಾಜ್ಯದಲ್ಲೂ ಯೋಜನೆ ಜಾರಿಗೆ ಮಕ್ಕಳ ಹಕ್ಕು ಗಳ ರಕ್ಷಣಾ ಆಯೋಗ ಮನವಿ ಮೈಸೂರು: ಇತ್ತೀಚಿನ…

22 mins ago