Andolana originals

ಕೊಡಗು ಜಿಲ್ಲೆಯಲ್ಲಿ ಹೆಚ್ಚುತ್ತಿದೆ ಸೈಬರ್ ವಂಚನೆ..!

ಕೃಷ್ಣ ಸಿದ್ದಾಪುರ

ಪೊಲೀಸರು ಜಾಗೃತಿ ಮೂಡಿಸಿದರೂ ಎಚ್ಚೆತ್ತುಕೊಳ್ಳದ ಜನರು

ಹೂಡಿಕೆ ಹಣ ದೋಚುತ್ತಿರುವ ಖದೀಮರು 

ಸಿದ್ದಾಪುರ: ಸೈಬರ್ ಅಪರಾಧ ಪ್ರಕರಣಗಳ ಕುರಿತು ಪೊಲೀಸರು ಜಾಗೃತಿ ಮೂಡಿಸುತ್ತಿದ್ದರೂ ಜನರು ಮತ್ತೆ ಮತ್ತೆ ಖದೀಮರ ಬಲೆಗೆ ಬೀಳುತ್ತಲೇ ಇದ್ದಾರೆ. ಸಾಮಾಜಿಕ ಮಾಧ್ಯಮ ಗಳಲ್ಲಿ ಹೆಚ್ಚು ಸಕ್ರಿಯರಾಗಿರುವವರಿಗೆ ಸೈಬರ್ ವಂಚಕರು ಗಾಳ ಹಾಕಿ, ಅವರಲ್ಲಿ ನಂಬಿಕೆ ಹುಟ್ಟಿಸಿ ಹಣ ದೋಚುತ್ತಿದ್ದಾರೆ.

ಡಿಜಿಟಲ್ ಅರೆಸ್ಟ್, ಬ್ಯಾಂಕ್ ವಹಿವಾಟಿನ ಒನ್ ಟೈಂ ಪಾಸ್ ವರ್ಡ್(ಒಟಿಪಿ), ಎಪಿಕೆ ಫೈಲ್ ಹಾಗೂ ವಿಶೇಷ ಕೊಡುಗೆ ನೀಡುವುದಾಗಿ ಹೇಳಿ ಇದುವರೆಗೂ ವಂಚನೆ ನಡೆಸುತ್ತಿದ್ದ ಸೈಬರ್ ಕಳ್ಳರು ಇದೀಗ ಹೂಡಿಕೆ ಹೆಸರಿನಲ್ಲಿ ಹೆಚ್ಚು ಹೆಚ್ಚು ಹಣ ದೋಚಲು ಆರಂಭಿಸಿದ್ದಾರೆ. ದುಪ್ಪಟ್ಟು ಹಣ ಸಿಗುವ ಆಸೆಯಿಂದ ಜನರು ಹೂಡಿಕೆಯತ್ತ ಹೆಚ್ಚು ಆಸಕ್ತಿ ತೋರುತ್ತಿದ್ದಾರೆ. ಇದನ್ನೇ ಬಂಡ ವಾಳ ಮಾಡಿಕೊಂಡಿರುವ ಸೈಬರ್ ವಂಚಕರು ಮೋಸ ಮಾಡುತ್ತಿದ್ದಾರೆ.

ವಿರಾಜಪೇಟೆ ತಾಲ್ಲೂಕಿನ ಸಿದ್ದಾಪುರ ಸಮೀಪದ ಪಾಲಿಬೆಟ್ಟ ಖಾಸಗಿ ತೋಟವೊಂದರ ಸಹಾಯಕ ವ್ಯವಸ್ಥಾಪಕ ನಾರಾಯಣ ಎಂಬ ವ್ಯಕ್ತಿಗೆ ಆಮಿಷವೊಡ್ಡಿ ಸೈಬರ್ ವಂಚಕರು ೧.೧೪ ಕೋಟಿ ರೂ. ದೋಚಿದ್ದಾರೆ.

ಹಣ ಕಳೆದುಕೊಂಡ ವ್ಯಕ್ತಿ ಸೈಬರ್ ಅಪರಾಧ ಠಾಣೆಯ ಮೆಟ್ಟಿಲೇ ರಿದ್ದಾರೆ. ಮಾಹಿತಿ ತಂತ್ರಜ್ಞಾನ ಕಾಯ್ದೆ-೨೦೦೦ ಹಾಗೂ ಭಾರತೀಯ ನ್ಯಾಯ ಸಂಹಿತೆ ಅಡಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ದೂರುದಾರ ನಾರಾಯಣ ಅವರು ಸಾಮಾಜಿಕ ಮಾಧ್ಯಮವಾದ ಯೂಟ್ಯೂಬ್ ನೋಡುತ್ತಿರುವಾಗ ಹಣ ಹೂಡಿಕೆ ಮಾಡುವ ಜಾಹೀರಾತನ್ನು ನೋಡಿ ಅದನ್ನು ಕ್ಲಿಕ್ ಮಾಡಿದ್ದಾರೆ. ಕೂಡಲೇ ಅವರಿಗೆ ವಾಟ್ಸಾಪ್ ಕರೆ ಮಾಡಿದ ಅಪರಿಚಿತ ವ್ಯಕ್ತಿ ತನ್ನನ್ನು ಅಮೋಲ್ ರಮಾಕಾಂತ್ ಎಂದು ಪರಿಚಯ ಮಾಡಿಕೊಂಡಿದ್ದಾನೆ.

ಆರ್.ಬಿ.ಕೆ.ಬ್ರೋಕಿಂಗ್ ಷೇರು ಮಾರ್ಕೆಟ್ನಲ್ಲಿ ಕಡಿಮೆ ಹಣ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭಾಂಶವನ್ನು ನೀಡುವುದಾಗಿ ನಂಬಿಸಿ, ಎಂ೫ ಆರ್.ಬಿ.ಕೆ. ಗ್ರೂಪಿಗೆ ಸೇರಿಸಿದ್ದಾನೆ. ನಂತರ ಲಾಭಾಂಶದ ವಿವರಗಳನ್ನು ನೀಡಿದ ಮೋಸಗಾರ ಮೊದಲಿಗೆ ೫೦ ಸಾವಿರ ರೂ. ಹೂಡಿಕೆ ಮಾಡುವಂತೆ ಹೇಳಿದ್ದಾನೆ. ಇದನ್ನು ನಂಬಿದ ದೂರುದಾರ ತನ್ನ ಹಾಗೂ ಪತ್ನಿಯ ಬ್ಯಾಂಕ್ ಖಾತೆಗಳಿಂದ ಅಪರಿಚಿತ ನೀಡಿದ ವಿವಿಧ ಬ್ಯಾಂಕ್ ಖಾತೆಗಳಿಗೆ ೯.೧೨.೨೦೨೫ ರಿಂದ ೨೩.೧.೨೦೨೬ರವರೆಗೆ ಹಂತ ಹಂತವಾಗಿ ಆರ್.ಟಿ.ಜಿ.ಎಸ್ ಹಾಗೂ ನೆಫ್ಟ್ ಮೂಲಕ ಒಟ್ಟು೧.೧೪ ಕೋಟಿ ರೂ.ಹಣವನ್ನು ವರ್ಗಾವಣೆ ಮಾಡಿದ್ದಾರೆ.

ಮೊದಲಿಗೆ ಕಡಿಮೆ ಹಣ ಹೂಡಿಕೆ ಮಾಡುತ್ತಿದ್ದ ವ್ಯಕ್ತಿಗೆ ಹೆಚ್ಚಿನ ಲಾಭಾಂಶದ ಆಮಿಷವೊಡ್ಡಿದ ಸೈಬರ್ ವಂಚಕರು ದೊಡ್ಡ ಮೊತ್ತದ ಹಣವನ್ನು ವರ್ಗಾವಣೆ ಮಾಡಿಸಿಕೊಂಡಿದ್ದಾರೆ. ವಂಚಕರು ಕೇವಲ ವಾಟ್ಸಾಪ್ ಕರೆಗಳನ್ನು ಮಾಡುತ್ತಿದ್ದರು. ದೂರುದಾರ ಹಣವನ್ನು ವಾಪಸ್ ಪಡೆಯಲು ಮುಂದಾದ ವೇಳೆ ಸೇವಾ ಶುಲ್ಕದ ಹೆಸರಿನಲ್ಲಿ ಹೆಚ್ಚಿನ ಹಣ ನೀಡುವಂತೆ ವಂಚಕ ಹೇಳಿದ್ದ. ಆಗ ಅವರಿಗೆ ವಂಚನೆಗೆ ಒಳಗಾಗಿರುವ ಬಗ್ಗೆ ಅನುಮಾನ ಬಂದು ದೂರು ನೀಡಿದ್ದಾರೆಂದು ಸೈಬರ್ ಪೊಲೀಸರು ಮಾಹಿತಿ ನೀಡಿದ್ದಾರೆ.

ಜಿಲ್ಲೆಯಲ್ಲಿ ಇಂತಹ ಹಲವು ಪ್ರಕರಣಗಳು ನಡೆಯುತ್ತಿವೆ. ಅಪರಿಚಿತ ಸಂಖ್ಯೆಯಿಂದ ಕರೆ ಮಾಡಿ ವಂಚನೆ, ಒಟಿಪಿ ಮೂಲಕ ಹಣ ಪಡೆಯುವುದು, ಎಪಿಕೆ ಫೈಲ್ ಮೂಲಕ ಹಣ ಕಳೆದುಕೊಳ್ಳುತ್ತಿರುವಂತಹ ಪ್ರಕರಣಗಳು ಹೆಚ್ಚುತ್ತಿವೆ. ಸಾರ್ವಜನಿಕರು ಅಗತ್ಯ ಎಚ್ಚರಿಕೆ ವಹಿಸುವ ಮೂಲಕ ಇಂತಹ ವಂಚನೆಯಿಂದ ದೂರ ಇರುವಂತೆ ಪೊಲೀಸ್ ಇಲಾಖೆ ಮನವಿ ಮಾಡಿದೆ.

೨೦೨೩ ಜನವರಿಯಿಂದ ೨೦೨೫ರ ಡಿಸೆಂಬರ್ ವರೆಗೆ ರಾಜ್ಯದಲ್ಲಿ ೫೭,೭೩೩ ವಿವಿಧ ಮಾದರಿಯ ಸೈಬರ್ ವಂಚನೆಗಳು ವರದಿಯಾಗಿವೆ. ಮೂರು ವರ್ಷಗಳಲ್ಲಿ ಸೈಬರ್ ವಂಚಕರು ೩೧೨.೪೭ ಕೋಟಿ ರೂ. ದೋಚಿದ್ದಾರೆ. ಈ ಪ್ರಕರಣಗಳ ತನಿಖೆ ನಡೆಸುತ್ತಿರುವ ಪೊಲೀಸರಿಗೆ ಸಿಕ್ಕಿದ್ದು ಮಾತ್ರ ೨೪.೮೫ ಕೋಟಿ ರೂ., ಉಳಿದ ೨೮೭.೬೨ ಕೋಟಿ ರೂ.ಎಲ್ಲಿಗೆ ಹೋಗಿದೆ ಎಂಬುದು ಪತ್ತೆಯೇ ಆಗಿಲ್ಲ ಎಂದು ವರದಿಯಾಗಿದೆ.

ಏನು ಮಾಡಬೇಕು..?:  ಸಾಮಾಜಿಕ ಜಾಲತಾಣದ ಮೂಲಕ ವಂಚಿಸುವ ಡಿಜಿಟಲ್ ಅರೆಸ್ಟ್‌ನಂತಹ ಪ್ರಕರಣಗಳಲ್ಲಿ ಸಿಲುಕುವ ಬಹುತೇಕ ಮಂದಿ ಶಿಕ್ಷಣವಂತರೇ ಆಗಿದ್ದಾರೆ. ಯಾವುದೇ ಕಾರಣಕ್ಕೂ ನಿಮ್ಮ ವಾಟ್ಸಾಪ್, ಫೇಸ್ ಬುಕ್ ಸೇರಿದಂತೆ ಯಾವುದೇ ಸಾಮಾಜಿಕ ಜಾಲತಾಣಗಳ ಮೂಲಕ ಬರುವ ಅನಾಮಧೇಯ ಲಿಂಕ್‌ಗಳನ್ನು ಬಳಸುವ ಪ್ರಯತ್ನ ಮಾಡಬೇಡಿ. ಇಂತಹ ಯಾವುದೇ ಸಂಕಷ್ಟಕ್ಕೆ ಸಿಲುಕಿದಲ್ಲಿ ತಕ್ಷಣವೇ ಪೊಲೀಸ್ ಇಲಾಖೆಯ ೧೯೩೦ಕ್ಕೆ ದೂರನ್ನು ದಾಖಲಿಸಿ

” ಪ್ರಸ್ತುತ ಸಾಮಾಜಿಕ ಜಾಲತಾಣಗಳ ಮೂಲಕ ಹಣಕಾಸಿನ ವಂಚನೆ ಪ್ರಕರಣಗಳು, ಪ್ರಮುಖವಾಗಿ ಹಿರಿಯರು, ನಿವೃತ್ತ ಉದ್ಯೋಗಿಗಳನ್ನೇ ಗುರಿಯಾಗಿಸಿಕೊಂಡು ನಡೆಯುತ್ತಿವೆ. ಹಣವನ್ನು ದುಪ್ಪಟ್ಟು ಮಾಡಿಕೊಡುವ ಆಮಿಷವೊಡ್ಡಿ, ದೊಡ್ಡ ಮೊತ್ತದ ಹಣವನ್ನು ಹೂಡುವಂತೆ ಪ್ರೇರೇಪಿಸಿ ವಂಚಿಸುತ್ತಾರೆ. ನಮ್ಮೊಳಗಿನ ದೌರ್ಬಲ್ಯವನ್ನು ಬಳಸಿಕೊಂಡು, ಆಧುನಿಕ ಸಾಮಾಜಿಕ ಜಾಲತಾಣಗಳ ಮೂಲಕ ನಡೆಯುವ ಸೈಬರ್ ಕ್ರೈಂ, ಡಿಜಿಟಲ್ ಅರೆಸ್ಟ್ ಮೊದಲಾದ ಆರ್ಥಿಕ ವಂಚನೆ ಪ್ರಕರಣಗಳ ಬಗ್ಗೆ ಸದಾ ಜಾಗೃತರಾಗಿರಬೇಕು. ಜೊತೆಗೆ ಇತರರಲ್ಲಿ ಅರಿವು ಮೂಡಿಸಬೇಕು.”

-ಆರ್.ಎನ್.ಬಿಂದುಮಣಿ, ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ

 

 

ಆಂದೋಲನ ಡೆಸ್ಕ್

Recent Posts

ರಾಜ್ಯದಲ್ಲಿ ಎಸ್‌ಐಆರ್‌ ಪ್ರಕ್ರಿಯೆ ಅಂತ್ಯ

5,54,32,314 ಎನ್ಯುಮರೇಷನ್ ಫಾರಂ ಹಂಚಿಕೆ ; ಶೇ.100 ರಷ್ಟು ಡಿಜಿಟಲೀಕರಣ ಬೆಂಗಳೂರು: ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್)…

34 mins ago

ಮೈಸೂರು | ದಸರಾ ವೇಳೆಗೆ ಫುಟ್‌ಪಾತ್‌ಗಳ ದುರಸ್ತಿಗೆ ಸೂಚನೆ

ಮೈಸೂರು‌ : ದಸರಾ ಮಹೋತ್ಸವದ ಹಿನ್ನೆಲೆಯಲ್ಲಿ ನಗರದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗಾಗಿ ಸರ್ಕಾರ 6 ಕೋಟಿ ರೂ. ಬಿಡುಗಡೆ ಮಾಡಿದ್ದು,…

54 mins ago

ಪ.ಬಂಗಾಳ | ಬೆಂಕಿ ಅವಘಡದಲ್ಲಿ ಏಳು ಮಂದಿ ಸಾವು, ಹಲವರು ಗಂಭೀರ

ತಾರಾಪಿತ್ (ಪಶ್ಚಿಮ ಬಂಗಾಳ) : ಬೆಂಕಿ ಅವಘಡದಲ್ಲಿ ಕನಿಷ್ಠ ಏಳು ಜನರು ಸಾವನ್ನಪ್ಪಿದ್ದು, ಹಲವರು ಗಂಭೀರ ಗಾಯಗೊಂಡಿರುವ ಘಟನೆ ಪಶ್ಚಿಮ…

2 hours ago

ಯಳಂದೂರು | ಚಿರತೆ ದಾಳಿಗೆ ಕರು ಬಲಿ

ಯಳಂದೂರು : ಚಿರತೆ ದಾಳಿಗೆ ಕರು ಮೃತಪಟ್ಟಿರುವ ಘಟನೆ ತಾಲ್ಲೂಕಿನ ಯರಗಂಬಳ್ಳಿ ಗ್ರಾಮದಲ್ಲಿ ನಡೆದಿದೆ. ಯರಗಂಬಳ್ಳಿ ಗ್ರಾಮದ ಶೋಭಾ ಕೋಂ…

2 hours ago

ಸಿಡಬ್ಲ್ಯುಎಂಎ ಆದೇಶ ಪಾಲಿಸಿ ; ಕರ್ನಾಟಕಕ್ಕೆ ಸುಪ್ರೀಂ ಸೂಚನೆ

ಹೊಸದಿಲ್ಲಿ : ತಮಿಳುನಾಡಿಗೆ ಕಾವೇರಿ ನೀರು ಹರಿಸುವ ಸಂಬಂಧದ ವಿವಾದ ಮತ್ತೆ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಕಾವೇರಿ ನೀರು ನಿರ್ವಹಣಾ…

3 hours ago

ಬೆಂಗಳೂರಿನ ಖಾಸಗಿ ಶಾಲೆಯಲ್ಲಿ ಎಚ್1ಎನ್1‌ ಸೋಂಕು ದೃಢ

ಬೆಂಗಳೂರು : ನಗರದ ಖಾಸಗಿ ಶಾಲೆಯೊಂದರ ಇಬ್ಬರು ಶಿಕ್ಷಕರಿಗೆ ಹೆಚ್1ಎನ್1 (H1N1) ದೃಢಪಟ್ಟಿದ್ದು ಆತಂಕ ಮೂಡಿಸಿದೆ. ಸದ್ಯಕ್ಕೆ ಹೈಸ್ಕೂಲ್ ಮಾತ್ರ…

4 hours ago