ಎಡಿಟೋರಿಯಲ್

ವಿದೇಶ ವಿಹಾರ : ರಷ್ಯಾ-ಯುಕ್ರೇನ್ ಯುದ್ಧದ ಮಧ್ಯೆ ಮರೆಯಾದ ಅಜರ್‌ಬೈಜಾನ್-ಆರ್ಮೇನಿಯಾ ಸಂಘರ್ಷ

ಯುಕ್ರೇನ್ ದೇಶದ ಮೇಲೆ ರಷ್ಯಾದ ಅತಿಕ್ರಮಣ ಜಗತ್ತಿನ ಇತರ ಪ್ರಮುಖ ಬೆಳವಣಿಗೆಗಳನ್ನು ತೆರೆಮರೆಗೆ ಸರಿಸಿದೆ. ಹಾಗೆ ತೆರೆಮರೆಗೆ ಸರಿದುಹೋದ ಬೆಳವಣಿಗೆ ಅಜರ್‌ಬೈಜಾನ್ ಮತ್ತು ಆರ್ಮೆನಿಯಾ ದೇಶಗಳ ನಡುವೆ ನಡೆಯುತ್ತಿರುವ ಯುದ್ಧ. ಸುಮಾರು ಎರಡು ದಶಕಗಳಿಂದಲೂ ಈ ಯುದ್ಧ ಆಗಾಗ್ಗೆ ನಡೆಯುತ್ತಲೇ ಇದೆ. ಈ ತಿಂಗಳ ಎರಡನೆಯ ವಾರದಲ್ಲಿ ಮತ್ತೆ ಸಿಡಿದ ಯುದ್ಧದಲ್ಲಿ ನೂರಕ್ಕೂ ಹೆಚ್ಚು ಮಂದಿ ಸೈನಿಕರು ಸತ್ತು ಸಹಸ್ರಾರು ಜನರು ಗಾಯಗೊಂಡಿದ್ದಾರೆ. ಅಜರ್‌ಬೈಜಾನ್ ಮತ್ತು ಆರ್ಮೇನಿಯಾ ನಡುವೆ ನಗೊರ್ನೊ- ಕರಬಾಕ್ ಪ್ರದೇಶದ ನಿಯಂತ್ರಣಕ್ಕಾಗಿ ಕಳೆದ ಎರಡು ದಶಕಗಳಿಗೂ ಹೆಚ್ಚು ಕಾಲದಿಂದ ನಡೆಯತ್ತಿರುವ ಯುದ್ಧದಲ್ಲಿ ಕನಿಷ್ಠ ನಲ್ವತ್ತು ಸಾವಿರ ಜನರು ಸತ್ತು ಲಕ್ಷಾಂತರ ಜನರು ವಲಸೆಹೋಗಿದ್ದಾರೆಂದು ಅಂದಾಜು ಮಾಡಲಾಗಿದೆ.

ಪ್ರಸ್ತುತ ಯೂರೋಪ್ ಮತ್ತು ರಷ್ಯಾದ ಮಧ್ಯಸ್ಥಿಕೆಯಲ್ಲಿ ಸಂಧಾನ ನಡೆದು ಕದನವಿರಾಮ ಘೋಷಿತವಾಗಿದ್ದರೂ ಘರ್ಷಣೆಗಳು ನಡೆಯುತ್ತಲೇ ಇವೆ. ಅಜರ್‌ಬೈಜಾನ್‌ನಲ್ಲಿ ಅಪಾರ ಪ್ರಮಾಣದ ತೈಲ ಮತ್ತು ನೈಸರ್ಗಿಕ ಅನಿಲ ಸಂಪತ್ತಿದೆ. ಇಲ್ಲಿಂದ ಟರ್ಕಿ ಮತ್ತು ಯೂರೋಪಿನ ಹಲವು ದೇಶಗಳಿಗೆ ತೈಲ ಮತ್ತು ನೈಸರ್ಗಿಕ ಅನಿಲ ಹಲವಾರು ದಶಕಗಳಿಂದ ಸಾಗಣೆಯಾಗುತ್ತಿದೆ. ರಷ್ಯಾ ಮತ್ತು ಯುಕ್ರೇನ್ ಯುದ್ಧದಿಂದಾಗಿ ರಷ್ಯಾದ ಇಂಧನ ಪೂರೈಕೆ ಅಸ್ತವ್ಯಸ್ತಗೊಂಡಿದ್ದರೆ ಅಜರ್‌ಬೈಜಾನ್ ಮತ್ತು ಆರ್ಮೇನಿಯಾ ನಡುವಣ ಯುದ್ಧದಿಂದಾಗಿ ಇಂಧನದ ಮತ್ತೊಂದು ಮೂಲವೂ ಅಸ್ತವ್ಯಸ್ತಗೊಳ್ಳಬಹುದಾದ ಭೀತಿ ಎದುರಾಗಿದೆ.
ಈ ಎರಡೂ ದೇಶಗಳು ಹಿಂದೆ ಸೋವಿಯತ್ ಒಕ್ಕೂಟದ ಭಾಗವಾಗಿದ್ದು ೧೯೯೧ರಲ್ಲಿ ಒಕ್ಕೂಟ ಛಿದ್ರವಾದ ನಂತರ ಯುಕ್ರೇನ್‌ನಂತೆ ಸ್ವತಂತ್ರದೇಶಗಳಾಗಿ ಘೋಷಿಸಿಕೊಂಡಿವೆ ಕ್ರಿಶ್ಚಿಯನ್ ಧರ್ಮೀಯರ ಪ್ರಾಬಲ್ಯದ ಆರ್ಮೇನಿಯಾ ದೇಶ ರಷ್ಯಾದ ಮೈತ್ರಿ ದೇಶವಾಗಿಯೇ ಉಳಿಯಲು ಬಯಸಿತು. ಮುಸ್ಲಿಮ್ ಪ್ರಾಬಲ್ಯದ ಅಜರ್‌ಬೈಜಾನ್ ದೇಶ ಟರ್ಕಿ, ಯೂರೋಪ್ ಮತ್ತು ಪಶ್ಚಿಮ ದೇಶಗಳ ಜೊತೆ ವಾಣಿಜ್ಯ ಬಾಂಧ್ಯವ್ಯ ಪಡೆಯಿತು. ಆದರೆ ಮಿಲಿಟರಿ ಶಸ್ತ್ರಾಸ್ತ್ರಗಳನ್ನು ರಷ್ಯಾದಿಂದಲೇ ಪಡೆಯುತ್ತ ಬಂತು. ಒಂದು ರೀತಿಯಲ್ಲಿ ಎಲ್ಲ ದೇಶಗಳ, ಕೂಟಗಳ ಜೊತೆ ಸ್ನೇಹ ಬೆಳೆಸಿದ ದೇಶ ಅಜರ್‌ಬೈಜಾನ್. ಅಪಾರ ತೈಲ ಮತ್ತು ನೈಸರ್ಗಿಕ ಅನಿಲ ಸಂಪನ್ಮೂಲ ಹೊಂದಿದೆ. ಹೀಗಾಗಿ ಯೂರೋಪ್ ಸೇರಿದಂತೆ ವಿಶ್ವದ ಹಲವು ಭಾಗಗಳಿಗೆ ಅಧಿಕ ಪ್ರಮಾಣದಲ್ಲಿ ತೈಲ ಸರಬರಾಜು ಮಾಡುತ್ತಿರುವ ದೇಶ ಇದು. ರಷ್ಯಾದ ತೈಲ ಪೂರೈಕೆ ಅಸ್ತವ್ಯಸ್ತಗೊಂಡ ನಂತರ ಅಜರ್‌ಬೈಜಾನ್‌ನ ತೈಲಕ್ಕೆ ಭಾರಿ ಬೇಡಿಕೆ ಬಂದಿದೆ. ರಷ್ಯಾ ತನ್ನದೇ ಗೋಜಲಿನಲ್ಲಿ ಸಿಕ್ಕಿಕೊಂಡಿರುವ ಈ ಸಂದರ್ಭವನ್ನು ಬಳಸಿಕೊಂಡು ಅಜರ್‌ಬೈಜಾನ್, ಆರ್ಮೇನಿಯನ್ನರೇ ಬಹುಸಂಖ್ಯಾತರಿರುವ ನಗೊರ್ನೋ ಕರಬಾಕ್ ಪ್ರದೇಶದ ಮೇಲೆ ಮುಗಿಬಿದ್ದಿದೆ. ತನ್ನ ಸುತ್ತಲ ಪ್ರದೇಶವನ್ನು ಅತಿಕ್ರಮಿಸಿಕೊಂಡು ಪ್ರತ್ಯೇಕತೆಯ ದನಿ ಎತ್ತಿರುವ ನಗೊರ್ನೊ ಕರಬಾಕ್ ಪ್ರದೇಶದ ಆರ್ಮೇನಿಯನ್‌ರನ್ನು ಸದೆಬಡಿಯುವುದು ಈ ದಾಳಿಯ ಉದ್ದೇಶ.
ಎರಡೂ ದೇಶಗಳು ಸಂಘರ್ಷಕ್ಕೆ ಇಳಿದಿರುವುದು ನಗೊರ್ನೋ-ಕರಬಾಕ್ ಎಂಬ ಪ್ರದೇಶಕ್ಕಾಗಿ. ಈ ಪ್ರದೇಶದಲ್ಲಿ ಆರ್ಮೇನಿಯನ್ನರು ಬಹುಸಂಖ್ಯಾತರು. ಆದರೆ ಈ ಪ್ರದೇಶ ಇರುವುದು ಅಜರ್‌ಬೈಜಾನ್‌ನಲ್ಲಿ. ಸೋವಿಯತ್ ಒಕ್ಕೂಟದ ಕಮ್ಯೂನಿಸ್ಟ್ ಸರ್ವಾಧಿಕಾರಿ ಜೋಸೆಫ್ ಸ್ಟಾಲಿನ್ ೧೯೨೦ರಲ್ಲಿ ಕಾಕಸಸ್ ವಲಯ ಗೆದ್ದ ನಂತರ ಇಡೀ ಒಕ್ಕೂಟದ ಜನರನ್ನು ವಿಂಗಡಿಸಿ ಪುನರ್ ನೆಲೆವಾಸ ಕಲ್ಪಿಸುತ್ತಾರೆ. ಈ ಪ್ರಕ್ರಿಯೆಯಲ್ಲಿ ಲಕ್ಷಾಂತರ ಜನರು ಪ್ರಾಣ ಕಳೆದುಕೊಂಡದ್ದು ಈಗ ಇತಿಹಾಸ. ವಿವಿಧ ಪ್ರದೇಶ, ಜನಾಂಗವನ್ನು ಮಿಶ್ರಗೊಳಿಸಿ ಒಂದು ರಷ್ಯಾ ಸೃಷ್ಟಿಸುವ ಉದ್ದೇಶ ಸ್ಟಾಲಿನ್ ಅವರದಾಗಿತ್ತು. ಉದ್ದೇಶಪೂರ್ವಕವಾಗಿಯೇ ನಗೊರ್ನೋ ಕರಬಾಖ್‌ನಲ್ಲಿದ್ದ ಆರ್ಮೇನಿಯನ್ನರನ್ನು ಅಜರ್‌ಬೈಜಾನ್‌ನಲ್ಲಿಯೇ ಉಳಿಸಲಾಗುತ್ತದೆ. ಆರ್ಮೇನಿಯನ್ನರು ಬಂಡೆದ್ದು ಸ್ವತಂತ್ರ ದೇಶ ಘೋಷಿಸಿಕೊಳ್ಳುತ್ತಾರೆ. ನಂತರ ಪಾರ್ಲಿಮೆಂಟಿನಲ್ಲಿ ಆರ್ಮೇನಿಯಾದಲ್ಲಿ ವಿಲೀನಗೊಳ್ಳುವ ನಿರ್ಣಯ ಅಂಗೀಕರಿಸುತ್ತಾರೆ, ಆದರೂ ಬದಲಾವಣೆ ಆಗುವುದಿಲ್ಲ. ಹತಾಶ ಜನರು ರೊಚ್ಚಿಗೆದ್ದು ಚಳವಳಿಗಿಳಿಯುತ್ತಾರೆ. ಗಡಿಯಲ್ಲಿ ಎರಡೂ ದೇಶಗಳ ನಡುವೆ ಗುಂಡಿನ ಚಕಮಕಿ ನಡೆಯುತ್ತದೆ. ಕಳೆದ ಎರಡು ವರ್ಷಗಳಿಂದಲೂ ಎರಡೂ ದೇಶಗಳ ಗಡಿಯಲ್ಲಿ ಸೇನೆಯ ನಡುವೆ ಘರ್ಷಣೆಗಳು ನಡೆಯುತ್ತಲೇ ಇವೆ. ಒಮ್ಮೊಮ್ಮೆ ಘರ್ಷಣೆ ವಿಕೋಪಕ್ಕೆ ತಿರುಗಿ ಯುದ್ಧಕ್ಕೆ ದಾರಿ ಮಾಡಿಕೊಟ್ಟಿದ್ದೂ ಇದೆ. ಈ ಬಾರಿ ಅಜರ್‌ಬೈಜಾನ್ ಸೈನಿಕರು ನಗೊರ್ನೋ ಕರಬಾಕ್ ಪ್ರದೇಶದ ಸುತ್ತಲ ಹಲವು ಜಿಲ್ಲೆಗಳನ್ನು ವಶಕ್ಕೆ ಪಡೆದಿರುವುದು ಆರ್ಮೇನಿಯನ್ನರನ್ನು ಕೆರಳಿಸಿದೆ. ಭೀಕರ ಯುದ್ಧದಲ್ಲಿ ನೂರಾರು ಜನರು ಸೈನಿಕರ ಗುಂಡಿಗೆ ಬಲಿಯಾಗಿದ್ದಾರೆ. ಇದು ಈಗ ಎರಡು ದೇಶಗಳ ನಡುವಣ ಯುದ್ಧವಾಗಿ ಉಳಿದಿಲ್ಲ. ಆರ್ಮೇನಿಯಾದ ಬೆಂಬಲಕ್ಕೆ ರಷ್ಯಾ ನಿಂತಿದ್ದರೆ, ಅಜರ್‌ಬೈಜಾನ್ ಜೊತೆಗೆ ಟರ್ಕಿ ನಿಂತಿದೆ. ಟರ್ಕಿಯ ಅಧ್ಯಕ್ಷ ರಿಸೆಪ್ ತಯ್ಯಿಪ್ ಎರ್ಡೋಗನ್ ಈ ಪ್ರಕರಣದಲ್ಲಿ ಮಧ್ಯಪ್ರವೇಶಿಸಲು ಕಾರಣವಿದೆ. ತಮ್ಮ ದೇಶಕ್ಕೆ ಸರಬರಾಜಾಗುವ ತೈಲ ಮತ್ತು ನೈಸರ್ಗಿಕ ಅನಿಲ ಪೈಪುಗಳು ಅಜರ್‌ಬೈಜಾನ್ ಹಾಗೂ ಆರ್ಮೇನಿಯಾದ ಗಡಿ ಮುಖಾಂತರ ಹೋಗಿವೆ. ಯುದ್ಧ ತಡೆಯದಿದ್ದರೆ ತೈಲ ಪೂರೈಕೆಯಲ್ಲಿ ಸಮಸ್ಯೆಯಾಗುತ್ತದೆ. ಯೂರೋಪ್ ದೇಶಗಳು ಅಜರ್‌ಬೈಜಾನ್‌ನಿಂದ ಇದೇ ಕೊಳವೆಗಳ ಮೂಲಕ ಇಂಧನ ಪಡೆಯುತ್ತಿವೆ. ರಷ್ಯಾದಿಂದ ತೈಲ ಮತ್ತು ಅನಿಲ ಸರಬರಾಜು ಕಡಿಮೆಯಾದ ಮೇಲೆ ಯೂರೋಪ್ ದೇಶಗಳು ಅಜರ್‌ಬೈಜಾನ್‌ನಿಂದ ಹೆಚ್ಚು ಇಂಧನ ಪಡೆಯುತ್ತಿವೆ. ಬೇಡಿಕೆ ಹೆಚ್ಚಾದ ಹಿನ್ನೆಲೆಯಲ್ಲಿ ಅಜರ್‌ಬೈಜಾನ್ ತೈಲ ಉತ್ಪಾದನೆಯನ್ನು ಹೆಚ್ಚಿಸಿದೆ. ಅಜರ್‌ಬೈಜಾನ್ ಮತ್ತು ಆರ್ಮೇನಿಯಾದ ಮಧ್ಯೆ ನಡೆಯುತ್ತಿರುವ ಯುದ್ಧ ಮುಂದುವರಿದರೆ ತೈಲ ಮತ್ತು ನೈಸರ್ಗಿಕ ಅನಿಲ ಪೂರೈಕೆ ಸ್ಥಗಿತಗೊಳ್ಳಲಿದೆ ಎಂಬ ಭೀತಿಯಿಂದ ಟರ್ಕಿ ಮತ್ತು ಯೂರೋಪ್ ದೇಶಗಳು ಎರಡೂ ದೇಶಗಳ ನಡುವೆ ಮಾತುಕತೆ ನಡೆಸಿ ಕದನ ವಿರಾಮ ಘೋಷಿಸುವಂತೆ ಮಾಡಿವೆ.
ಈ ಯತ್ನದಲ್ಲಿ ರಷ್ಯಾ ಕೂಡ ಭಾಗವಹಿಸಿರುವುದು ಅಚ್ಚರಿ. ಕದನ ವಿರಾಮವೇನೋ ಜಾರಿಯಲ್ಲಿದೆ. ಆದರೆ ಘರ್ಷಣೆಗಳು ಮಾತ್ರ ನಿಂತಿಲ್ಲ. ನಗೊರ್ನೊ ಕರಬಾಕ್ ಪ್ರದೇಶ ಅಜರ್‌ಬೈಜಾನ್ ದೇಶದ ಒಳಗಡೆಯೇ ಇರುವುದು ದೊಡ್ಡ ಸಮಸ್ಯೆ. ಆರ್ಮೇನಿಯನ್ನರು ನಗೊರ್ನೊ ಕರಬಾಕ್ ಒಳಗಡೆಯಿಂದ ದಾಳಿ ನಡೆಸಿ ತನ್ನ ಪ್ರದೇಶವನ್ನು ವಿಸ್ತರಣೆ ಮಾಡಿಕೊಳ್ಳುತ್ತಿರುವುದು ಘರ್ಷಣೆಗಳು ನಿಲ್ಲದಿರಲು ಕಾರಣ. ಯುಕ್ರೇನ್ ಅತಿಕ್ರಮಣ ರಷ್ಯಾದ ಅಧ್ಯಕ್ಷ ಪುಟಿನ್ ಅವರನ್ನು ವಿಶ್ವದಲ್ಲಿ ಒಂಟಿಯಾಗಿಸಿದೆ. ಈ ಮಧ್ಯೆಯೂ ಸಂಧಾನದಲ್ಲಿ ಯೂರೋಪ್ ಜೊತೆಗೂಡಿ ರಷ್ಯಾ ಭಾಗವಹಿಸಿ ಕದನ ವಿರಾಮ ಘೋಷಣೆಯಾಗುವಂತೆ ಮಾಡಲಾಗಿದೆ. ಆದರೆ ಈ ಕದನ ವಿರಾಮ ಎಷ್ಟು ಕಾಲ ಉಳಿಯುತ್ತದೆ ಎನ್ನುವುದು ಪ್ರಶ್ನೆಯಾಗಿಯೇ ಉಳಿಯಲಿದೆ. ಬಹುಶಃ ನಗೊರ್ನೋ ಕರಬಾಕ್‌ನಲ್ಲಿರುವ ಆರ್ಮೇನಿಯನ್ನರನ್ನು ಆರ್ಮೇ–ನಿಯಾಕ್ಕೆ ಸ್ಥಳಾಂತರಿಸುವವರೆಗೆ ಘರ್ಷಣೆ ಅಥವಾ ನಗೊರ್ನೋ ಕರಬಾಕ್ ಆರ್ಮೇನಿಯಾ ಜೊತೆ ವಿಲೀನ ಆಗುವವರೆಗೆ ಘರ್ಷಣೆಗಳು ನಿಲ್ಲುವ ಹಾಗೆ ಕಾಣುತ್ತಿಲ್ಲ.
ಯುಕ್ರೇನ್ ಮತ್ತು ರಷ್ಯಾ ನಡುವಣ ಯುದ್ಧವೂ ಅಂತ್ಯಗೊಳ್ಳುವ ಸಾಧ್ಯತೆಗಳು ಈಗ ಕಾಣಿಸುತ್ತಿವೆ. ಯುಕ್ರೇನನ್ನು ಆಕ್ರಮಿಸಿಕೊಳ್ಳುವಲ್ಲಿ ರಷ್ಯಾ ವಿಫಲವಾಗಿದೆ. ಒಂದು ರೀತಿಯಲ್ಲಿ ಪುಟಿನ್‌ಗೆ ಆದ ದೊಡ್ಡ ಸೋಲು ಇದು. ಆಕ್ರಮಿತ ಪ್ರದೇಶಗಳಿಂದ ರಷ್ಯಾ ತನ್ನ ಸೇನೆಯನ್ನು ವಾಪಸ್ ಪಡೆಯುತ್ತಿದೆ. ಯುಕ್ರೇನ್ ಈ ಸಂದರ್ಭದಲ್ಲಿ ಯಾವ ರೀತಿಯ ಪ್ರತಿಕ್ರಿಯೆ ನೀಡುತ್ತದೆ ಎನ್ನುವುದರ ಮೇಲೆ ಯುದ್ಧ ನಿಲುಗಡೆ ಸಾಧ್ಯತೆ ಅಡಗಿದೆ. ಇಲ್ಲಿ ಸೋಲು ಗೆಲುವಿನ ಪ್ರಶ್ನೆ ಉದ್ಭವವಾಗುವುದಿಲ್ಲ.
ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಕಳೆದ ವಾರ ನಡೆದ ಶಾಂಗೈ ಸಹಕಾರ ಆಂದೋಲನದ ಸಮಾವೇಶದ ಸಂದರ್ಭದಲ್ಲಿ ರಷ್ಯಾ ಅಧ್ಯಕ್ಷ ವ್ಲಾಡಮಿರ್ ಪುಟಿನ್ ಜೊತೆ ಮಾತುಕತೆ ನಡೆಸಿದ್ದಾರೆ. ಈ ಮಾತುಕತೆಯಲ್ಲಿ ಪುಟಿನ್ ಆಡಿದ ಮಾತುಗಳು ಮುಖ್ಯವಾಗಿವೆ. ‘ಸಾಧ್ಯವಾದಷ್ಟು ಬೇಗ ಯುದ್ಧ ಅಂತ್ಯವಾಗಬೇಕೆಂಬುದು ರಷ್ಯಾದ ಆಶಯವೇ ಆಗಿದ್ದರೂ ವಿರೋಧಿಗಳು (ಯುಕ್ರೇನ್) ಈ ಸಂಘರ್ಷ ಯುದ್ಧದಲ್ಲಿಯೇ ಅಂತ್ಯವಾಗಲಿ ಎಂದು ಬಯಸಿದಂತಿದೆ’ ಎಂದು ಪುಟಿನ್ ಹೇಳಿರುವುದು ಮಹತ್ವದ ಬೆಳವಣಿಗೆಯಾಗಿದೆ. ಯುಕ್ರೇನ್ ಯುದ್ಧ ವಿಶ್ವವನ್ನು ದುರ್ಬಲಗೊಳಿಸಿದೆ. ಹಿಂದೆಂದೂ ಕಾಣದಂಥ ಇಂಧನ ಬಿಕ್ಕಟ್ಟನ್ನು ಸೃಷ್ಟಿಸಿದೆ. ಅಷ್ಟೇ ಅಲ್ಲ ಆರ್ಥಿಕ ಹಿಂಜರಿತದ ಭೀತಿ ಎದುರಾಗಿದೆ. ಈ ಹಿನ್ನೆಲೆಯಲ್ಲಿ ರಷ್ಯಾ- ಯುಕ್ರೇನ್ ಯುದ್ಧ ಅಂತ್ಯವಾಗಲು ಸಾಧ್ಯವಾದ ಎಲ್ಲ ಮಾರ್ಗಗಳನ್ನು ಶೋಧಿಸಬೇಕು.
ಸಂಧಾನದ ಮಾರ್ಗದಿಂದ ದೂರ ಸರಿದರೆ ಎಂಥ ಸಂಕಷ್ಟ ಎದುರಿಸಬೇಕಾದೀತು ಎಂಬುದನ್ನು ರಷ್ಯಾ, ಅಂತೆಯೇ ಯುಕ್ರೇನ್ ಮನವರಿಕೆ ಮಾಡಿಕೊಳ್ಳಬೇಕು. ವಿಶ್ವ ಸಮುದಾಯ ಕೂಡ ಇಂಧನ ಪೂರೈಕೆ ಹಿಂದಿನ ಸ್ಥಿತಿಗೆ ಮರಳುವಂತಾಗಲು ಪ್ರಯತ್ನಿ–ಬೇಕು. ಸೇಡು ತೀರಿಸಿಕೊಳ್ಳುವ ಧೋರಣೆಯನ್ನು ಎಲ್ಲರೂ ಬಿಡಬೇಕು.

andolanait

Recent Posts

ಓದುಗರ ಪತ್ರ: ಕೊರಿಯನ್ ಗೇಮ್ಸ್ ನಿಷೇಧಿಸಿ

ಕೊರಿಯನ್ ಗೇಮ್ಸ್ ವ್ಯಸನದಿಂದ ಮಕ್ಕಳು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದು ಆತಂಕಕಾರಿ ಸಂಗತಿಯಾಗಿದೆ. ಇಂದು ನಮ್ಮ ಯುವಜನತೆ ಕೆ ಪಾಪ್ ಮತ್ತು ಕೆ…

4 hours ago

ಓದುಗರ ಪತ್ರ: ಖಾಲಿ ನಿವೇಶನದಲ್ಲಿರುವ ಕಸ ತೆರವುಗೊಳಿಸಿ

ಮೈಸೂರಿನ ಶ್ರೀರಾಂಪುರ ೨ನೇ ಹಂತದಲ್ಲಿ ನಿವೇಶನನವೊಂದು ಕಳೆದ ೨೬ ವರ್ಷಗಳಿಂದ ಖಾಲಿಬಿದ್ದಿದೆ. ಈ ಖಾಲಿ ನಿವೇಶನದಲ್ಲಿ ಅಕ್ಕಪಕ್ಕದ ಮನೆಯ ನಿವಾಸಿಗಳು…

4 hours ago

ಓದುಗರ ಪತ್ರ: ಬೆಳವಾಡಿ ಕೆರೆ ಸ್ವಚ್ಛಗೊಳಿಸಿ

ಮೈಸೂರು ತಾಲ್ಲೂಕಿನ ಬೆಳವಾಡಿ ಗ್ರಾಮದಲ್ಲಿ ಮೂಲಭೂತ ಸೌಕರ್ಯಗಳ ಅಭಿವೃದ್ಧಿಯಾಗಿರುವುದು ಸ್ವಾಗತಾರ್ಹ ಸಂಗತಿ. ಆದರೆ ಗ್ರಾಮದ ನೈಸರ್ಗಿಕ ಸಂಪತ್ತಾದ ‘ಬೆಳವಾಡಿ ಕೆರೆ’ಗೆ…

4 hours ago

‘ಮಾದಕ ವಸ್ತು ಮಾರಾಟ ಮಾಡಿದರೆ ಕ್ರಮ’

ನವೀನ್ ಡಿಸೋಜ ಜನವರಿಯಲ್ಲಿ ೬೩ ಎನ್‌ಡಿಪಿಎಸ್ ಪ್ರಕರಣಗಳು ದಾಖಲು; ಪೊಲೀಸರ ಕಾರ್ಯಕ್ಕೆ ಸಾರ್ವಜನಿಕರ ಮೆಚ್ಚುಗೆ ಮಡಿಕೇರಿ: ಮಾದಕ ವಸ್ತುಗಳ ಮಾರಾಟ…

4 hours ago

ಆಶ್ರಮ ಶಾಲೆಯಲ್ಲಿ ಅಡುಗೆ ಸಿಬ್ಬಂದಿಯವರ ಸರಸ ಸಲ್ಲಾಪ

ಮಂಜು ಕೋಟೆ ಜಕ್ಕಹಳ್ಳಿ ಆಶ್ರಮ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಮುಜುಗರ; ಸಿಬ್ಬಂದಿ ವಿರುದ್ಧ ಕ್ರಮಕ್ಕೆ ಪೋಷಕರ ಆಗ್ರ ಎಚ್.ಡಿ.ಕೋಟೆ: ಗಿರಿಜನ ಮಕ್ಕಳ…

4 hours ago

ಮಾನಂದವಾಡಿ ರಸ್ತೆಯಲ್ಲಿ ಅಪಘಾತಕ್ಕೆ ಬೀಳಬೇಕಿದೆ ಬ್ರೇಕ್…

ಪ್ರಶಾಂತ್ ಎಸ್. ವೇಗ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳದಿದ್ದರೆ ಅನಾಹುತಕ್ಕೆ ಹಾದಿ ಎನ್.ಎಚ್.ಪಾಳ್ಯ,ಟೋಲ್‌ಗೇಟ್, ಶಿವಪುರ ತಿರುವಿನಲ್ಲಿ ರಿಫ್ಲೆಕ್ಟರ್,ಬ್ಯಾರಿಕೇಡ್ ಅಳವಡಿಕೆ ಅಗತ್ಯ ಮೈಸೂರು:…

5 hours ago