ಎಡಿಟೋರಿಯಲ್

ಚಳುವಳಿಗಾರಿಗೆ ಪ್ರಾಣಾಪಾಯದ ಎಚ್ಚರಿಕೆ ಕೊಟ್ಟಿದ್ದ ಆರ್.ಎಸ್.ಕುಲಕರ್ಣಿ

ನೀವೆಲ್ಲಾ ಜೈಲು, ಕೋರ್ಟು, ಲಾಠಿಗೆಲ್ಲ ಹೆದರೋದಿಲ್ಲ ಅನ್ನೋದು ಗೊತ್ತು. ಸರ್ಕಾರದವರು ಫೈನಲ್ಲಾಗಿ ಗೋಲಿಬಾರ್ ಕ್ರಮವನ್ನು ಯೋಚಿಸ್ತಿದ್ದಾರೆ

೨೦೧೯ ರ ಅದೊಂದು ಸಂಜೆ ರಕ್ಷಣಾಮಂತ್ರಿ ನಿರ್ಮಲಾ ಸೀತಾರಾಮನ್ ಟೆರರಿಸಂ ಕುರಿತ ಪುಸ್ತಕ ಬಿಡುಗಡೆ ಮಾಡಲಿದ್ದರು. ಮೈಸೂರು ಬಸ್‌ಸ್ಟ್ಯಾಂಡ್ ಎದುರಿನ ಪೈ ವಿಸ್ಟಾದ ಹೋಟೆಲ್ ಸಭಾಂಗಣದಲ್ಲಿ ಕಾಯುತ್ತಿದ್ದ ಜನ. ಅವರು ಬಿಡುಗಡೆ ಮಾಡಲಿದ್ದ ಪುಸ್ತಕ  Facets of Terrorism in India ಬರೆದವರು ನಿವೃತ್ತ RAW ಅಧಿಕಾರಿ ಆರ್. ಎಸ್.ಕುಲಕರ್ಣಿ.

ಕಾರ್ಯಕ್ರಮ ಶುರುವಾಯಿತು. ನನ್ನ ದೃಷ್ಟಿ ಲೇಖಕರ ಮೇಲೆ ನೆಟ್ಟಿತ್ತು. ಹೌದು ಅವರೇ ಅಲ್ಲವೇ? ಎಂದು ದಿಟ್ಟಿಸಿ ನೋಡಿದೆ. ಇಲ್ಲ ಅವರಿರಲಿಕ್ಕಿಲ್ಲ ಅಂತಲೂ ಅನ್ನಿಸುತ್ತಿತ್ತು. ನಾನು ನೋಡಿದ್ದ ಕುಲಕರ್ಣಿಯವರು ಇಐಆ ಯಲ್ಲಿದ್ದವರು. ಇವರು RAW ಗೂಢಚಾರರಂತೆ. ಇವರಿರಲಿಕ್ಕಿಲ್ಲ ಮನಸ್ಸು ತರ್ಕಿಸುತ್ತಿತ್ತು.

ಕಾರ್ಯಕ್ರಮ ಮುಗಿದ ಮೇಲೆ ಮಾತಾಡಿಸಿದೆ. ಹೌದು ಅದು ಅದೇ ಕುಲಕರ್ಣಿ! ಅಜಗಜಾಂತರ ವ್ಯತ್ಯಾಸವಾಗಿದ್ದ ಮನುಷ್ಯ. ನಾನು ನೆನಪು ಕೊಡುತ್ತಾ ಹೋದಂತೆ ಅವರಿಗೂ ಪತ್ತೆ ಹತ್ತಿತು.

ಓಹ್! ನಿಮ್ಮ ಹಾಸನದ ರೈತಸಂಘದವರು ಹೇಗಿದ್ದಾರೆ? ವಿಚಾರಿಸಿದರು. ಅಲ್ಲಿಗೆ ಭೇಟಿ ಮುಗಿಯಿತು.

ಮೊನ್ನೆ ಗಂಗೋತ್ರಿಯಲ್ಲಿ ವಾಕಿಂಗ್ ಮಾಡುವಾಗ ಕೊಲೆಯಾದರಲ್ಲಾ? ಅದೇ ಆರ್.ಎಸ್.ಕುಲಕರ್ಣಿ. ನಲವತ್ತು ವರ್ಷದ ಹಿಂದೆ ಕೇಂದ್ರ ಗುಪ್ತಚಾರ ದಳ CIB ನಲ್ಲಿದ್ದರು. ನಂತರದಲ್ಲಿ RAW ಅಧಿಕಾರಿಯಾಗಿ ದೇಶ ವಿದೇಶಗಳಲ್ಲಿ ಗೂಢಚಾರಿಯಾಗಿ ಕೆಲಸ ನಿರ್ವಹಿಸಿದ್ದರು. ನಿವೃತ್ತರಾಗಿ ಮೈಸೂರಿನಲ್ಲೇ ನೆಲೆಸಿದ್ದರೂ ಒಮ್ಮೆಯೂ ಸಿಕ್ಕಿರಲಿಲ್ಲ.

ಇಪ್ಪತ್ತೈದು ವರ್ಷಗಳಲ್ಲಿ ಅವರು ಹೊರತಂದಿದ್ದ ಪುಸ್ತಕಗಳು ನಾಲ್ಕಾರು. conscience; Islam terrorism ; Facets of Terrorism in India; And yet God Smiles ಮುಂತಾದವು. ದೇಶವಿದೇಶಗಳಲ್ಲಿದ್ದು ಉಗ್ರಗಾಮಿ ಚಟುವಟಿಕೆಗಳನ್ನು ಕಣ್ಣಾರೆ ಕಂಡವರು ಅವರು. ಬೇಹುಗಾರರಾಗಿ ಉಗ್ರರ ಬಗ್ಗೆ ಅವರಲ್ಲದೆ ಮತ್ತಾರು ಅಧಿಕೃತವಾಗಿ ಬರೆಯಬಲ್ಲವರು!

* * *

೧೯೮೦ರ ದಶಕ. ಕರ್ನಾಟಕದಲ್ಲಿ ರೈತ ಚಳುವಳಿ ಉಗ್ರ ಸ್ವರೂಪ ತಳೆದಿತ್ತು. ಹತ್ತಾರು ಕಡೆ ಗೋಲೀಬಾರುಗಳಾಗಿ ನೂರಾರು ರೈತರು ಬಲಿಯಾಗಿದ್ದರು. ಮಂಡ್ಯದ ಗೆಜ್ಜಲಗೆರೆ ಬಳಿ ಮುಷ್ಕರ ನಿರತ ರೈತರ ಮೇಲೆ ಗೋಲೀಬಾರ್ ಆಗಿ ೨೧ ಜನ ರೈತರು ಹುತಾತ್ಮರಾಗಿದ್ದರು. ಎಲ್ಲೆಲ್ಲೂ ಹರಡಿದ್ದ ಪ್ರಕ್ಷುಬ್ದ ವಾತಾವರಣ.

ಹಾಸನ ಜಿಲ್ಲೆಯ ರೈತ ಚಳುವಳಿ ಸಹ ತಾಂಡವ ಸ್ವರೂಪ ತಳೆದಿತ್ತು. ರೈತರಿಗೆ ನ್ಯಾಯವಾದ ಬೆಲೆ ಕೊಡದೆ ನೇರಾ ನೇರ ವಂಚಿಸುತ್ತಿದ್ದ ಸಂತೆ ವ್ಯಾಪಾರಿಗಳು, ದಲ್ಲಾಳಿಗಳಿಗೆ ಬಾರುಕೋಲಿನಿಂದ ಬಾರಿಸಿ ಮೈ ಚಳಿ ಬಿಡಿಸಿದ್ದರು ಹಾಸನ ಮತ್ತು ಚನ್ನರಾಯಪಟ್ಟಣದ ರೈತರು. ಆ ಹೊಡೆತ ರಾಜ್ಯಾದ್ಯಂತ ಬಾರುಕೋಲು ಚಳುವಳಿಯಾಗಿ ಹಬ್ಬಿತ್ತು.

ದಿನ ದಿನಕ್ಕೂ ಚಳುವಳಿ ಉಗ್ರ ಸ್ವರೂಪ ತಾಳುತ್ತಿತ್ತು. ರೈತರು ಗುಂಡೂರಾವ್ ಸರ್ಕಾರದ ವಿರುದ್ಧ ಕ್ರುದ್ಧರಾಗಿದ್ದರು.

೧೯೮೨ ಇರಬೇಕು. ನಾನು ರಜೆಯ ಮೇಲೆ ನನ್ನೂರು ಹಾಸನಕ್ಕೆ ಹೋಗಿದ್ದೆ. ರೈತ ಚಳುವಳಿಯ ಮುಂಚೂಣಿ ಹೋರಾಟಗಾರರೆಲ್ಲ ನನ್ನ ಕಾಲೇಜು ಸಹಪಾಠಿಗಳು ಮತ್ತು ಜೆಪಿ ಚಳುವಳಿಯ ಒಡನಾಡಿಗಳು. ಹಾಸನಕ್ಕೆ ಹೋದರೆ ನನ್ನ ಓಡಾಟ ಮಾತುಕತೆ ಸದಾ ಇವರೊಂದಿಗೇ.

ಅದೊಂದು ದಿನ ಬಸ್‌ಸ್ಟ್ಯಾಂಡ್ ರಸ್ತೆಯಲ್ಲಿ ಇದೇ ಆರ್.ಎಸ್.ಕುಲಕರ್ಣಿ ಸಿಕ್ಕರು. ಅವರಾಗ ಮೈಸೂರು CBI ಯಲ್ಲಿದ್ದರು. ಉತ್ಸಾಹದ ಸ್ನೇಹಿವ್ಯಕ್ತಿತ್ವ. ಒಂದಷ್ಟು ಮಾತಾಡಿದ ಮೇಲೆ ಅವರೆಂದರು: ‘ಒಂದು ಮುಖ್ಯವಾದ ಕೆಲಸವಿತ್ತು. ನಿಮ್ಮ ಕಾಮ್ರೇಡ್ ಗಳ ಜೊತೆಗೆ ಪ್ರೈವೇಟಾಗಿ ಮಾತಾಡಬೇಕಿತ್ತಲ್ಲಾ?. ಅವರನ್ನು ಎಲ್ಲಿಗೆ ಕರೆದುಕೊಂಡು ಬರ್ತೀರಾ?’

‘ನೀವು ಎಲ್ಲಿಗೆ ಅಂದ್ರೆ ಅಲ್ಲಿಗೇ ಕರೆದುಕೊಂಡು ಬರ್ತೀನಿ ಸರ್’ ನಾನೆಂದೆ. ‘
ಎಲ್ಲೆಲ್ಲೋ ಆಗಲ್ಲ. ಸ್ವಲ್ಪ ಕಾನ್ಫಿಡೆನ್ಷಿಯಲ್ಲಾಗಿ ಮಾತಾಡಬೇಕಿತ್ತು’.

‘ಹಾಗಿದ್ರೆ ನಮ್ಮನೇಗೆ ಬನ್ನಿ ಸಾರ್. ಅವರನ್ನು ಅಲ್ಲಿಗೇ ಕರೆಸುತ್ತೇನೆ’.

‘ಮನೆ, ಆಫೀಸು , ಟೀಬಿ , ಹೋಟೆಲ್ ಯಾವುದೂ ಬೇಡ. ಬೇರೆ ಯಾವುದಾದರೂ ಜಾಗ ಹೇಳಿ’.

ನಮ್ಮ ಮನೆ ಹತ್ತಿರದಲ್ಲೇ ಸರ್ಕಾರಿ ಕಾಲೇಜಿನ ವಿಶಾಲ ಮೈದಾನವಿತ್ತು. ನಡುವೆ ಸುಂದರವಾಗಿ ಕಟ್ಟಿದ್ದ ಒಂದು ಭಾವಿ ಕಟ್ಟೆ. ಅದನ್ನೇ ಸೂಚಿಸಿದೆ. ‘
ಹಾಗಿದ್ರೆ ಒಂದು ಕೆಲಸ ಮಾಡಿ. ಸಂಜೆ ಏಳು ಗಂಟೆ ವೇಳೆಗೆ ನಾನಲ್ಲಿಗೆ ಬರ್ತೀನಿ. ನಿಮ್ಮ ರೈತ ಸಂಘದ ಗೆಳೆಯರನ್ನು ಅಲ್ಲಿಗೆ ಕರೆದುಕೊಂಡು ಬನ್ನಿ. ಅರ್ಜೆಂಟ್ ಮಾತಾಡುವುದಿದೆ’.

ಹೋರಾಟಗಾರರಾಗಿದ್ದ ಮಂಜುನಾಥ ದತ್ತ , ಜನತಾ ಮಾಧ್ಯಮದ ಆರ್.ಪಿ.ವೆಂಕಟೇಶಮೂರ್ತಿ, ಪೀಟರ್, ಪಾಂಡುರಂಗ ವಿಠಲರನ್ನು ಕರೆದು ಕೊಂಡು ಭಾವಿಕಟ್ಟೆ ಬಳಿ ಬಂದೆ. ಬಹುಶಃ ಆ ದಿನ ಹುಣ್ಣಿಮೆ ತಿಳಿಬೆಳಕು ಹರಡಿತ್ತು. ೨೫-೩೦ ಅಡಿ ದೂರಕ್ಕೆ ನಿಂತವರೂ ಕಾಣಿಸುವಂತಿದ್ದರು.
ಈ ಗೆಳೆಯರನ್ನು ಹರ ಸಾಹಸಪಟ್ಟು ಮನವೊಲಿಸಿ ಕರೆತಂದಿದ್ದೆ.

ಕೊಂಚ ಹೊತ್ತಿಗೆ ಕುಲಕರ್ಣಿಯವರು ತಮ್ಮವನೊಂದಿಗೆ ಬಂದರು. ಹೋರಾಟಗಾರರಿಗೆ ಮುಖ ಪರಿಚಯವಿದ್ದವರೇ. ಹೊಸದಾಗಿ ಪರಿಚಯಿಸುವ ಅಗತ್ಯವಿರಲಿಲ್ಲ.

ಅವರೆಂದರು : ‘ನೋಡಿ ನಾನಿರೋದು ಸೆಂಟ್ರಲ್ ಇಂಟಲಿಜೆನ್ಸಿಯಲ್ಲಿ. ಸ್ಟೇಟ್ ಗುಪ್ತಚಾರ ದಳಕ್ಕೂ ನಮಗೂ ಸಂಬಂಧವಿಲ್ಲ. ನಾವು ಸಂಗ್ರಹಿಸೋ ಮಾಹಿತಿಯೇ ಬೇರೆ. ನಿಮಗೆ ಕೆಲವು ವಿಷಯ ಹೇಳಿರ್ತೀನಿ. ಅದನ್ನು ನೀವು ಯಾರೊಂದಿಗೂ ಚರ್ಚಿಸಕೂಡದು. ನಿಮ್ಮ ನಿಮ್ಮಲ್ಲೇ ಗುಟ್ಟಾಗಿ ಇರಲಿ. ಯಾಕೆಂದರೆ ನಾನು ಹೇಳ್ತಿರೋದು ನಿಮ್ಮ ವೈಯಕ್ತಿಕ ಸುರಕ್ಷತೆಗೆ ಸಂಬಂಧಿಸಿದ್ದು. ನೋಡಿ ನಿಮ್ಮನ್ನೆಲ್ಲಾ ಐದಾರು ವರ್ಷದಿಂದ ಗಮನಿಸುತ್ತಾ ಇದ್ದೇವೆ. ನೀವೆಲ್ಲಾ ಲಾ ಸ್ಟೂಡೆಂಟ್ಸ್. ತುಂಬ ಗೌರವಸ್ಥ ಕುಟುಂಬಗಳಿಂದ ಬಂದವರು. ನಿಮ್ಮಲ್ಲಿ ಯಾರಿಗೂ ಮದುವೆಯಾಗಿಲ್ಲ. ಇನ್‌ಫ್ಯಾಕ್ಟ್ ನೀವೆಲ್ಲಾ ನನ್ನ ಸ್ವಂತ ತಮ್ಮಂದಿರಂತೆ ಅನ್ನೋ ಭಾವನೆ ಇಟ್ಟುಕೊಂಡು ಈ ವಿಷಯ ಹೇಳ್ತಿದ್ದೇನೆ. ನನ್ನ ಮಾತನ್ನು ನೀವು ನಂಬಬೇಕು .

ನಿಮ್ಮ ಚಳುವಳಿ ಬೆಳಿತಿರೋ ವೇಗ ನೋಡಿ ಸರ್ಕಾರದವರು ತುಂಬಾ ಡಿಸ್ಟರ್ಬ್ ಆಗಿದ್ದಾರೆ. ನೀವೆಲ್ಲಾ ರಾಜ್ಯಾದ್ಯಂತ ಜೈಲು ಭರೋ ಚಳುವಳಿ ಮಾಡಲು ಸಜ್ಜಾಗಿದ್ದೀರಿ. ಇದು ಎಲ್ಲೆಲ್ಲಿಗೆ ಹೋಗಿ ಮುಟ್ಟುತ್ತೋ ಗೊತ್ತಿಲ್ಲ. Strict ಅಗಿ ಹ್ಯಾಂಡಲ್ ಮಾಡ್ಬೇಕೂ ಅಂತಿದ್ದಾರೆ. ಹಾಗೇನಾದ್ರೂ ಆದ್ರೆ ಸಿಕ್ಕಾಪಟ್ಟೆ ಗೋಲಿಬಾರ್ ಆಗ್ತವೇ . ನೀವೆಲ್ಲಾ ಜೈಲು, ಕೋರ್ಟು, ಲಾಠಿ ಇವಕ್ಕೆಲ್ಲ ಹೆದರೋದಿಲ್ಲ ಅನ್ನೋದು ಅವರಿಗೂ ಗೊತ್ತು. ಆದ್ದರಿಂದ ಫೈನಲ್ಲಾಗಿ ಗೋಲಿಬಾರ್ ಕ್ರಮವನ್ನು ಯೋಚಿಸ್ತಿದ್ದಾರೆ. ಒಂದು ಸಾರಿ ಆರ್ಡರ್ ಕೊಟ್ಟರೆ ಮುಗಿಯಿತು.

ನಂಗೊತ್ತು. ನೀವು ಯಾವುದಕ್ಕೂ ಕೇರ್ ಮಾಡೋದಿಲ್ಲ ಅಂತ . ಅದಕ್ಕಾಗೆ ನಿಮ್ಮ ಬಗ್ಗೆ ನನಗೆ ಕಾಳಜಿ. ಒಂದು ಸಾರಿ ಪೊಲೀಸ್ನೋರಿಗೆ free hand ಕೊಟ್ಟರೆ ಮುಗಿಯಿತು. ಯಾರನ್ನು ಬೇಕಾದರೂ ಉಡಾಯಿಸಿಬಿಡುತ್ತಾರೆ. ನಿಮ್ಮೆದುರು ರೈಫಲ್ ಹಿಡಿದು ಬರುವವನಿಗೆ ಯಾವ ಬಗೆಯ ಮೈಂಡ್ ಇರುತ್ತೋ? ಏನು ಕ್ರಮ ತೆಗೆದುಕೊಳ್ತಾನೋ ಯಾರಿಗೆ ಗೊತ್ತು?

ಈ ಬಗ್ಗೆ ನಿಮಗೊಂದು ಮುಂಜಾಗ್ರತೆ ಇರಲಿ. ನೀವೇನು ಚಳುವಳಿ ಕೈ ಬಿಡಿ ಅಂತ ನಾನು ಹೇಳ್ತಿಲ್ಲ. slow pace ನಲ್ಲಿ ಎಚ್ಚರಿಕೆಯಿಂದ ಹೋಗಿ. ನೀವುಗಳು ಚಳುವಳಿ ಮಾಡ್ತಿರೋದು ಸಾಯುವುದಕ್ಕಲ್ಲ. ಬದುಕುವುದಕ್ಕೆ . ಜೀವ ಅನ್ನೋದು ಬಹು ಮುಖ್ಯ’.

‘ಅಷ್ಟು ಎಚ್ಚರಿಕೆ ನಮಗಿದೆ ಕಣ್ರೀ ಕುಲಕರ್ಣಿಯವರೇ ನೀವು ಏನು ಹೇಳಬೇಕೂ ಅಂತಿದ್ದೀರಾ. ಅದನ್ನು ನೇರವಾಗಿ ಹೇಳಿ ಬಿಡಿ’ ಎಂದರು ದತ್ತ ನಿಷ್ಠೂರವಾಗಿ.

ಕುಲಕರ್ಣಿಯವರ ತಾಳ್ಮೆ ಆರಿರಲಿಲ್ಲ. ‘first of all ನಾನು ಈ ವಿಷಯವನ್ನೇ ನಿಮ್ಮತ್ರ ಮಾತಾಡಬಾರದಿತ್ತು. ಇದು ನನ್ನ ವ್ಯಾಪ್ತಿಗೆ ಸಂಬಂಧಿಸಿದ ವಿಷಯವಲ್ಲ. ಪೊಲೀಸ್ ಮತ್ತು ಸರ್ಕಾರದ ಮಟ್ಟದಲ್ಲಿ ನಡೀತಿರೋ ಬೆಳವಣಿಗೆ ಗಮನಿಸುತ್ತಿರುವುದರಿಂದರಿಂದ , ಮುಂದಿನ ಡೆವಲಪ್‌ಮೆಂಟ್ ಏನಾಗಬಹುದು ಅನ್ನೋ ಐಡಿಯಾ ನನಗಿದೆ. ಪೊಲೀಸ್ನೋರೆಲ್ಲಾ ಶತ್ರುಗಳು ಅಂತ ನೀವು ಅಂದು ಕೊಂಡಿರೋದ್ರಿಂದ ನೀವು ಹೀಗೆ ಮಾತಾಡ್ತೀರಿ. ನೀವೆಲ್ಲರೂ unmarried gentlemen ಬದುಕಿನಲ್ಲಿ ಏನೇನೋ ಸಾಧಿಸುವುದಿದೆ. ನಿಷ್ಕಳಂಕವಾಗಿ ಚಳುವಳಿ ಮಾಡ್ತಿದ್ದೀರಿ. ನಿಮಗ್ಯಾವ ರಾಜಕೀಯ ಆಕಾಂಕ್ಷೆಗಳೂ ಇಲ್ಲವೆಂಬುದನ್ನು ಬಲ್ಲೆ. ಆದ್ದರಿಂದ ಮುಂದಾಗಬಹುದಾದ ಒಂದು ಸಾಧ್ಯತೆಯನ್ನು ಹೇಳಿದ್ದೇನೆ. ಮುಂಜಾಗ್ರತೆಯಾಗಿರೋದು ನಿಮಗೆ ಸೇರಿದ್ದು. ಗುಂಡು ಹೊಡೆಯ ಬೇಕು ಅಂದಾಗ ನಿಮ್ಮನ್ನೇ ಟಾರ್ಗೆಟ್ ಮಾಡಿ ಉಡಾಯಿಸಬಹುದು. ಅನ್ಯಾಯವಾಗಿ ಸಾಯಕೂಡದು. Mob ಹೇಗೆಲ್ಲಾ ಬದಲಾಗುತ್ತೆ ಅಂತ ಯಾರಿಗೂ ಹೇಳೋದಿಕ್ಕೆ ಆಗೋದಿಲ್ಲ. Better be careful. ನೀವು ಬೇರೆ ರೀತಿಯ ಹುಡುಗರು ಅಂತ ಇಷ್ಟು ಹೇಳಿದೆ’ ಎಂದರು.

ಹೋರಾಟಗಾರರು ಇನ್ನೂ ಅಸಮಧಾನದಲ್ಲೇ ಇದ್ದರು. ಇನ್ನು ಇವರಿಗೇ ಮಾತಾಡಲು ಬಿಟ್ಟರೆ ಲಂಗು ಲಗಾಮಿಲ್ಲದೆ ಧಿಕ್ಕಾರ ಕೂಗಿಯಾರು. ಅಲ್ಲೇ ಒಂದು ಚಳುವಳಿ ಮಾಡಿಬಿಟ್ಟಾರು ! ಎಂದು ನನಗೆ ಆತಂಕವಾಯಿತು.

‘ಸಾರ್ ಇವರುಗಳ well wisher ಆಗಿ ತಾವು ಹೇಳಿದ್ದೀರಿ. ನಿಮ್ಮ ಒಂದು ಮಾತೂ ತಪ್ಪಿಲ್ಲ. ನಿಮ್ಮ ಪ್ರಾಮಾಣಿಕ ಕಳಕಳಿಯನ್ನೂ ಇವರು ಪ್ರಶ್ನಿಸೋದಿಲ್ಲ. ತುಂಬ ಥ್ಯಾಂಕ್ಸ್ . ನಾನು ಇವರತ್ರ ಮಾತಾಡ್ತೀನಿ ಸಾರ್’ ಎಂದೆ.

ಕುಲಕರ್ಣಿಯವರು ಹೊರಟರು. ನಮ್ಮ ಚಳುವಳಿಗಾರರಿಗೆ ಕುಲಕರ್ಣಿಯವರ ಮಾತಿನ ಬಗ್ಗೆ ಒಂದಿಷ್ಟೂ ನಂಬಿಕೆ ಇರಲಿಲ್ಲ. ನಮ್ಮನ್ನು ಹೆದರಿಸೋದಿಕ್ಕೆ ಹಿತೈಷಿಯಂತೆ ಪೊಲೀಸ್ ಹುಳ ಬಿಟ್ಟಿದ್ದಾನೆ ಇತ್ಯಾದಿ ಮಾತಾಡಿಕೊಂಡರು.

ಊಟವಾದ ಮೇಲೆ ನಾನೆಂದೆ: ‘ಅವರ ಮಾತನ್ನು ಲಘುವಾಗಿ ತಗೊಳ್ಳೋದು ಬೇಡ. ಅವರ ಉದ್ದೇಶ ನಿಮ್ಮಗಳ ಸೇಫ್ಟಿ. ನಿಮ್ಮ ಜೀವದ ಎಚ್ಚರಿಕೆ ನಿಮ್ಮದೇ. ಅಂತಹ ಪ್ರಾಣಾಪಾಯ ಯಾವುದೇ ಕ್ಷಣದಲ್ಲೂ ಎದುರಾಗಬಹುದು ಎಂಬ ಮುಂಜಾಗ್ರತೆ ಇಟ್ಕೊಂಡು ಕೆಲಸ ಮಾಡೋದು ಉತ್ತಮ’.ಗೆಳೆಯರು ನಿರ್ಗಮಿಸಿದರು.

ಕುಲಕರ್ಣಿಯವರ ಎಚ್ಚರಿಕೆ ಗಂಟೆಯ ಮಾತುಗಳು ಮುಂದಿನ ದಿನಗಳಲ್ಲಿ ಒಂದಿಲ್ಲೊಂದು ಬಾರಿ ಉಪಯೋಗಕ್ಕೆ ಬಂದಿತು. ಅನೇಕ ರೈತ ನಾಯಕರು ಅಪಾಯದಿಂದ ಪಾರಾದರು. ಚಳುವಳಿ ಹದ್ದು ಮೀರದಂತೆ ಕಾಪಾಡಿಕೊಂಡರು. ಅವರ ಎಚ್ಚರಿಕೆ ಮಾತುಗಳನ್ನು ಗೆಳೆಯರು ಆಗಾಗ್ಗೆ ನೆನೆದು ಕೊಳ್ಳುತ್ತಿದ್ದರು.

ಈಗಿನ ಸುದ್ದಿ ವಿದ್ರಾವಕ. RAW ಬೇಹುಗಾರ ಅಧಿಕಾರಿಯಾಗಿ ಅವರು ದೇಶ ವಿದೇಶಗಳಲ್ಲಿ ಕೆಲಸ ಮಾಡಿದ್ದರು. ಅದೆಷ್ಟೋ ಉಗ್ರರನ್ನು ಬಲಿಹಾಕುವ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು. ದೇಶ ಕಾಯುವ ಮಹತ್ವದ ಕಾರ್ಯ ಮಾಡಿದ್ದರು. ಅವರಿಗೆ
ಈ ದಾರುಣ ಅಂತ್ಯ ಬರಬಾರದಿತ್ತು.

andolana

Recent Posts

ಸ್ಥಳೀಯ ಸಂಸ್ಥೆಗಳಲ್ಲಿ ಖಾಲಿ ಹುದ್ದೆಗಳೇ ಅಧಿಕ!

ಜಿಲ್ಲೆಯಾದ್ಯಂತ ಸ್ಥಳೀಯ ಸಂಸ್ಥೆಗಳಲ್ಲಿ 1,504 ಮಂಜೂರಾತಿ, 816 ಹುದ್ದೆಗಳು ಖಾಲಿ - ಕೆ.ಬಿ.ರಮೇಶ ನಾಯಕ ಮೈಸೂರು: ಜನಸಾಮಾನ್ಯರಿಗೆ ತ್ವರಿತಗತಿಯಲ್ಲಿ ಕೆಲಸ…

2 hours ago

ತಾಯಂದಿರ ಮರಣ; ಬಿಪಿ, ಶುಗರ್‌ ಕಾರಣ

ತಾಯಂದಿರ ಮರಣದ ಮಧ್ಯಂತರ ವಿಶ್ಲೇಷಣಾ ವರದಿಯಲ್ಲಿ ಆತಂಕಕಾರಿ ಅಂಶಗಳು ಪತ್ತೆ -ಕೆ.ಬಿ.ರಮೇಶನಾಯಕ ಮೈಸೂರು: ಎಂಡೋಟಾಕ್ಸಿನ್‌ಗಳಿಂದಾಗಿ ಶಂಕಿತ ತಾಯಂದಿರ ಮರಣ ಪ್ರಕರಣಗಳು…

2 hours ago

ಕೊಡಗು: ಸ್ಥಳೀಯ ಸಂಸ್ಥೆಗಳಲ್ಲಿ ಸಿಬ್ಬಂದಿ ಕೊರತೆ!

ಸಾರ್ವಜನಿಕ ಕೆಲಸಗಳಲ್ಲಿ ವಿಳಂಬ ಧೋರಣೆ -ನವೀನ್ ಡಿಸೋಜ ಮಡಿಕೇರಿ: ಕೊಡಗು ಜಿಲ್ಲೆಯ ಮಡಿಕೇರಿ ನಗರಸಭೆ ಸೇರಿದಂತೆ ನಗರ, ಪಟ್ಟಣ ಸ್ಥಳೀಯ…

3 hours ago

ಬಡ್ಡಿ ದರಗಳು ಇನ್ನಷ್ಟು ಕಡಿಮೆಯಾಗಲಿವೆಯೇ?

-ಪ್ರೊ.ಆರ್.ಎಂ.ಚಿಂತಾಮಣಿ ಭಾರತೀಯ ರಿಸರ್ವ್ ಬ್ಯಾಂಕಿನ ಹಣಕಾಸು ನೀತಿ ಸಮಿತಿಯ ದ್ವೈಮಾಸಿಕ ಸಭೆ ಈಗ ನಡೆಯುತ್ತಿದ್ದು (ಏಪ್ರಿಲ್ 7,8,9) ನಿರ್ಣಯಗಳು ಬುಧವಾರ…

3 hours ago

ಓದುಗರ ಪತ್ರ: ನೀರು ಪೋಲಾಗುವುದನ್ನು ತಡೆಗಟ್ಟಿ

ಮೈಸೂರಿನ ರಾಮಸ್ವಾಮಿ ಸರ್ಕಲ್‌ನಿಂದ ಮಹಾರಾಜ ಕಾಲೇಜಿನ ಕಡೆಗೆ ಹೋಗುವ ರಸ್ತೆಯ (ಕೆಆರ್ ಎಸ್ ರೋಡ್) -ಟ್‌ಪಾತ್‌ನಲ್ಲಿ ಹಲವಾರು ದಿನಗಳಿಂದ ಕುಡಿಯುವ…

4 hours ago