ಎಡಿಟೋರಿಯಲ್

ಅನಾಥ ಮಕ್ಕಳಿಗೆ ತಾಯಿ ತಂದೆಯಾದ ರಾಜಲಕ್ಷ್ಮಿ-ಖಾಸೀಂ

 ಧರ್ಮ ಜನರನ್ನು ಒಡೆಯುತ್ತದೆಯೇ ವಿನಃ ಬೆಸೆಯುವುದಿಲ್ಲ ಎಂದು ನಂಬಿ ಅನಾಥ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುತ್ತಿರುವ ದಂಪತಿಗಳು 

ಪಂಜುಗಂಗೊಳ್ಳಿ- ಈ ಜೀವ ಈ ಜೀವನ

ನಲ್ವತ್ತು ವರ್ಷಗಳ ಹಿಂದೆ ಆಂಧ್ರಪ್ರದೇಶದ ಓಂಗೋಲೆಯ ಪಿ ರಾಜಲಕ್ಷ್ಮಿ ಮತ್ತು ಯೆರಾಗೊಂಡಾಪಾಲಂನ ಎಸ್‌ಎಂಡಿ ಖಾಸೀಂ, ಸಿಎಸ್‌ಆರ್ ಕಾಲೇಜಿನಲ್ಲಿ ಕಲಿಯುತ್ತಿರುವಾಗ ಪರಸ್ಪರ ಪ್ರೇಮಿಸಿ ಮದುವೆಯಾದರು. ಆದರೆ, ಅವರದ್ದು ಅಂತರ ಧರ್ಮೀಯ ಮದುವೆಯಾದುದರಿಂದ ಇಬ್ಬರ ಕುಟುಂಬಗಳೂ ಅದಕ್ಕೆ ಸಮ್ಮತಿಸಲಿಲ್ಲ. ಧರ್ಮ ಅಥವಾ ತಮ್ಮ ಕುಟುಂಬಕ್ಕಾಗಿ ತಮ್ಮ ಪ್ರೀತಿಯನ್ನು ಬಿಡಲು ತಯಾರಿಲ್ಲದ ರಾಜಲಕ್ಷ್ಮಿ ಮತ್ತು ಖಾಸೀಂ, ಸಂಬಂಧಿಕರಿಂದ ಪ್ರತ್ಯೇಕಗೊಂಡು ಸಂಸಾರ ಹೂಡಿದರು.

ಏಕಾಏಕೀ ತಮ್ಮ ಆಪ್ತರು, ಬಂಧುಬಳಗದಿಂದ ದೂರವಾಗಿ ಬದುಕುವುದು ಇಬ್ಬರಿಗೂ ಮಾನಸಿಕವಾಗಿ ಕಷ್ಟವಾದರೂ, ಇಬ್ಬರೂ ಸರ್ಕಾರೀ ಉದ್ಯೋಗಸ್ಥರಾದುದರಿಂದ ಬದುಕು ನಡೆಸಲು ಏನೂ ತೊಂದರೆ ಆಗಲಿಲ್ಲ.

ಪ್ರಾರಂಭದಲ್ಲಿ ಬಾಡಿಗೆ ಮನೆಯಲ್ಲಿರಬೇಕಾಗಿ ಬಂದ ಅವರಿಗೆ ಗಂಡ ಮುಸ್ಲಿಂ ಎಂಬ ಕಾರಣಕ್ಕೆ ಮನೆಗಳು ಸುಲಭದಲ್ಲಿ ಸಿಗುತ್ತಿರಲಿಲ್ಲ. ಆಗ ಒಬ್ಬರು ಕಮ್ಯುನಿಸ್ಟ್ ನಾಯಕರು ಅವರಿಗೆ ಬಾಡಿಗೆ ಮನೆ ಕೊಡಿಸಲು ಸಹಾಯ ಮಾಡಿದರು. ಬಂಧುಬಳಗದ ಜೊತೆ ಸ್ನೇಹಿತರೂ ತಮ್ಮಿಂದ ದೂರವಾದ ಕಾರಣಕ್ಕೆ ಮುಂದೆ ಮಕ್ಕಳಾದರೆ ಅವರಿಗೆ ಬದುಕು ದುಸ್ತರವಾಗಬಹುದೆಂದು ಆಲೋಚಿಸಿ ಅವರು ಪ್ರಾರಂಭದಲ್ಲಿ ಮಕ್ಕಳು ಬೇಡವೆಂದು ನಿರ್ಧರಿಸಿದ್ದರು.

ಆದರೆ, ಮುಂದೆ ಅವರಿಗೊಬ್ಬ ಮಗ ಹುಟ್ಟಿದನು. ಆತ ಈಗ ಇಂಗ್ಲೆಂಡಿನಲ್ಲಿ ವೈದ್ಯಕೀಯ ವ್ಯಾಸಂಗ ಮಾಡುತ್ತಿದ್ದಾನೆ. ಮಗ ಚಿಕ್ಕವನಾಗಿದ್ದಾಗ ಅವನು ತನ್ನ ಅಜ್ಜ ಅಜ್ಜಿಯರನ್ನು ಕಾಣದೆ ಬೆಳೆಯಬೇಕಾಯಿತೆಂಬ ಬಗ್ಗೆ ದಂಪತಿಗಳಿಗೆ ತುಂಬಾ ವ್ಯಥೆಯಾಗಿತ್ತು. ಹೀಗೇ ವರ್ಷಗಳು ಕಳೆದವು. ತಮ್ಮ ನಿವೃತ್ತಿಗೆ ಇನ್ನು ಹತ್ತುಗಳಷ್ಟೆ ಬಾಕಿ ಇವೆ ಎಂಬುದು ಅವರ ಗಮನಕ್ಕೆ ಬಂದಾಗ ತಮ್ಮ ನಿವೃತ್ತಿ ಬದುಕು ಕೂಡಾ ಬಂಧುಬಳಗದಿಂದ ಹೀಗೆಯೇ ದೂರವಾಗಿ ಕಳೆಯುತ್ತದಲ್ಲ ಎಂಬ ಆಲೋಚನೆ ಅವರ ಮನಸ್ಸನ್ನು ಕೊರೆಯತೊಡಗಿತು. ತಮ್ಮ ನಿವೃತ್ತಿ ಜೀವನವನ್ನು ಹೀಗೆ ಏಕಾಂಗಿಯಾಗಿ ಕಳೆಯಲಿಚ್ಚಿಸದ ಅವರು ಅದರಿಂದ ಪಾರಾಗಲು ದಾರಿ ಹುಡುಕತೊಡಗಿದರು. ಆಗ ಅವರಿಗೆ ಹೊಳೆದದ್ದು ನಿರ್ಗತಿಕ ಮಕ್ಕಳ ಶಿಕ್ಷಣಕ್ಕೆ ನೆರವಾಗುವುದು.

ಆ ಆಲೋಚನೆ ಬಂದದ್ದೇ ರಾಜಲಕ್ಷ್ಮಿ ಮತ್ತು ಖಾಸೀಂ ತಕ್ಷಣವೇ ಆ ನಿಟ್ಟಿನಲ್ಲಿ ಕೆಲಸ ಆರಂಭಿಸಿದರು.

೨೦೧೧ರಲ್ಲಿ ಅವರು ತಮ್ಮ ಐದು ಎಕರೆ ಜಾಗದಲ್ಲಿ ‘ಮಾನಲೋ ಮಾನಂ’ ಎಂಬ ಹೆಸರಿನ ಒಂದು ಎನ್‌ಜಿಒವನ್ನು ಪ್ರಾರಂಭಿಸಿದರು. ಮಾನಲೋ ಮಾನಂನಲ್ಲಿ ಮೂರು ಮನೆಗಳಿವೆ-‘ಬೊಮ್ಮರಿಲ್ಲು’ ಎಂಬ ಬಾಲಕರ ಮನೆ, ‘ಜಬಿಲ್ಲಿ’ ಎಂಬ ಬಾಲಕಿಯರ ಮನೆ ಮತ್ತು ‘ಪೊಡರಿಲ್ಲು’ ಎಂಬ ಹಿರಿಯರ ಮನೆ. ದಂಪತಿಗಳು ತಮ್ಮ ಉಳಿತಾಯದ ಸಂಪೂರ್ಣ ಹಣ ಮತ್ತು ರಾಜಲಕ್ಷ್ಮಿಯವರಿಗೆ ಬರುತ್ತಿದ್ದ ನಿವೃತ್ತಿ ವೇತನದ ಹಣ ಎಲ್ಲವನ್ನೂ ಅದಕ್ಕೆ ಸುರಿದರು.

೨೦೧೪ರಲ್ಲಿ ಅವರು ಪುಟ್ ಪಾತ್ ಪಾಲಾಗಿದ್ದ ಐದು ವರ್ಷದ ಒಬ್ಬ ಹುಡುಗನನ್ನು ಕರೆತರುವ ಮೂಲಕ ಮಾನಲೋ ಮಾನಂಗೆ ಕಾರ್ಯ ನಿರ್ವಹಿಸಲು ಪ್ರಾರಂಭಿಸುತ್ತದೆ. ಈಗ ಮಾನಲೋ ಮಾನಂನಲ್ಲಿ ೮-೧೯ ವರ್ಷದ ಅಂತಹ ೮೧ ಅನಾಥ ಮಕ್ಕಳಿದ್ದಾರೆ. ಅವರಲ್ಲಿ ೫೩ ಹೆಣ್ಣು ಮಕ್ಕಳು ಮತ್ತು ೨೮ ಗಂಡುಮಕ್ಕಳು. ೨೦೨೧ರಲ್ಲಿ ಪ್ರಾರಂಭಗೊಂಡ ‘ಪೊಡರಿಲ್ಲು’ ಹಿರಿಯರ ಮನೆಯಲ್ಲಿ ಆರೆಳು ಜನ ನಿರಾಶ್ರಿತ ಹಿರಿಯ ನಾಗರಿಕರಿದ್ದಾರೆ. ಮಾನಲೋ ಮಾನಂನಲ್ಲಿ ‘ಹರಿವಿಲ್ಲು’ ಎಂಬ ಇನ್ನೊಂದು ಮನೆಯಿದ್ದು, ಅದರಲ್ಲಿ ೧೫ ವರ್ಷ ಮೇಲ್ಪಟ್ಟ ಮಕ್ಕಳಿಗೆ ಸ್ವಉದ್ಯೋಗದ ತರಬೇತಿ ನೀಡಲಾಗುತ್ತದೆ.

ಮಾನಲೋ ಮಾನಂನ ಮಕ್ಕಳಲ್ಲಿ ೯೦% ಮಕ್ಕಳು ಪರಿಶಿಷ್ಟ ವರ್ಗಕ್ಕೆ ಸೇರಿದವರು.

ಇವರಲ್ಲಿ ಬಹುತೇಕರು ತಂದೆ ತಾಯಿಯಿಲ್ಲದ ಅನಾಥರಾದರೆ, ಉಳಿದವರು ಅಂತರ್ಧರ್ಮೀಯ ಮದುವೆಯಲ್ಲಿ ಹುಟ್ಟಿದ ಬೇಡದ ಮಕ್ಕಳು, ಎಚ್‌ಐವಿ ಪೀಡಿತರಿಗೆ ಹುಟ್ಟಿದ ಮಕ್ಕಳು ಸೇರಿದ್ದಾರೆ. ೮೦ ಮಕ್ಕಳಲ್ಲಿ ೩೦ ಮಕ್ಕಳು ಕೇಂದ್ರೀಯ ವಿದ್ಯಾಲಯಗಳಲ್ಲಿ ಸೆಕೆಂಡರಿ ಹಂತದಲ್ಲಿ ಕಲಿಯುತ್ತಿದ್ದಾರೆ. ಒಬ್ಬ ಹುಡುಗ ಕಾನೂನು ಅಭ್ಯಾಸ ಮಾಡುತ್ತಿದ್ದಾನೆ. ಇನ್ನೊಬ್ಬ ಬಿಟೆಕ್ ಮುಗಿಸುವ ಹಂತದಲ್ಲಿದ್ದಾನೆ. ಮತ್ತೊಬ್ಬ ಕ್ಯಾರಂ ಚಾಂಪಿಯನ್ ಇದ್ದಾನೆ. ಈ ಕ್ಯಾರಂ ಚಾಂಪಿಯನ್‌ನ ಹೆಸರು ಜೀನ್ ವಲ್ಜಿಯಾನ್. ಇವನು ಐದು ವರ್ಷದವನಿದ್ದಾಗ ತಂದೆತಾಯಿ ಏಡ್ಸ್ ಕಾಯಿಲೆಗೆ ಬಲಿಯಾಗಿ, ಇವನು ಮತ್ತು ಇವನ ತಂಗಿಯರು ತಬ್ಬಲಿಯಾದರು. ತನ್ನನ್ನು ಮತ್ತು ತಂಗಿಯರನ್ನು ಸಾಕಲು ಹಣವಿಲ್ಲದ ಕಾರಣ ಯಾರದ್ದೋ ಸೈಕಲ್ ಕದಿಯಲು ಹೋಗಿ ಪೊಲೀಸರ ಕೈಗೆ ಸಿಕ್ಕಿ ಜೈಲು ಪಾಲಾದನು. ಆಗ ಇವನು ರಾಜಲಕ್ಷ್ಮಿಯವರ ದೃಷ್ಟಿಗೆ ಬಿದ್ದು ಮಾನಲೋ ಮಾನಂ ಸೇರಿದನು. ಈಗ ಜೀನ್ ವಲ್ಜಿಯಾನ್‌ಗೆ ೧೬ ವರ್ಷ ಪ್ರಾಯ.

ಆನಂದ, ಬುದ್ಧಿ ತಿಳಿಯುವ ಮೊದಲೇ ತಂದೆ ತಾಯಿಯನ್ನು ಕಳೆದುಕೊಂಡು ಯಾರೋ ನೆರೆಹೊರೆಯವರೊಂದಿಗೆ ವಾಸಿಸುತ್ತಿದ್ದನು. ೨೦೧೮ರಲ್ಲಿ ರಾಜಲಕ್ಷ್ಮಿಯವರು ಒಂದು ಉಚಿತ ವೈದ್ಯಕೀಯ ಕ್ಯಾಂಪ್ ನಡೆಸುತ್ತಿದ್ದಾಗ ಆನಂದನ ಬಗ್ಗೆ ತಿಳಿದು ಅವನನ್ನು ಬೊಮ್ಮರಿಲ್ಲು ಮನೆಗೆ ತಂದರು. ಅವನೀಗ ಕೇಂದ್ರೀಯ ವಿದ್ಯಾಲಯದಲ್ಲಿ ಒಂಭತ್ತನೇ ತರಗತಿಯಲ್ಲಿ ಕಲಿಯುತ್ತಿದ್ದಾನೆ.

ಮಾನಲೋ ಮಾನಂ ನಡೆಸಲು ಪ್ರತಿ ತಿಂಗಳು ಎರಡೂವರೆ ಲಕ್ಷ ರುಪಾಯಿ ಖರ್ಚಾಗುತ್ತದೆ. ಕೆಲವು ದಾನಿಗಳು ನೀಡುವ ದವಸಧಾನ್ಯಗಳ ಹೊರತಾಗಿ ಅಷ್ಟೂ ಖರ್ಚನ್ನು ದಂಪತಿಗಳು ತಮ್ಮ ನಿವೃತ್ತಿ ವೇತನ ಮತ್ತು ಉಳಿತಾಯ ಹಣದಿಂದಲೇ ನಿಭಾಯಿಸುತ್ತಾರೆ. ಯಾವುದೇ ರೀತಿಯ ಸರ್ಕಾರೀ ಸಹಾಯವನ್ನೂ ಪಡೆಯುವುದಿಲ್ಲ. ಮಾನಲೋ ಮಾನಂನ ಎಲ್ಲಾ ಮಕ್ಕಳಿಗೆ ರಾಜಲಕ್ಷ್ಮಿ ಮತ್ತು ಖಾಸೀಂ ತಾಯಿತಂದೆಯಂತಿದ್ದರೆ, ದೊಡ್ಡ ಮಕ್ಕಳು ಚಿಕ್ಕ ಮಕ್ಕಳ ಅಣ್ಣ ಅಕ್ಕಂದಿರಾಗಿ ಅವರನ್ನು ನೋಡಿಕೊಳ್ಳುತ್ತಾರೆ.

ಧರ್ಮ ಜನರನ್ನು ಒಡೆಯುತ್ತದೆಯೇ ವಿನಃ ಬೆಸೆಯುವುದಿಲ್ಲ. ಈ ಮಕ್ಕಳಿಗೆ ಒಳ್ಳೆಯ ಶಿಕ್ಷಣ ನೀಡುವ ಮೂಲಕ ಅವರು ಮುಂದೆ ಜಾತಿಧರ್ಮಗಳನ್ನು ಮೀರಿ ಬದುಕಿ ಸಮಾಜದಲ್ಲಿ ಪರಿವರ್ತನೆಗೆ ಕಾರಣರಾಗಲಿ ಎಂಬುದು ನಮ್ಮ ಆಶಯ ಎನ್ನುವ, ಕೆಲವು ವರ್ಷಗಳ ಹಿಂದೆ ತಾನು ಒಬ್ಬಂಟಿ ಎಂದು ಕೊರಗುತ್ತಿದ್ದ ರಾಜಲಕ್ಷ್ಮಿ ಈಗ ೮೮ ಸದಸ್ಯರಿರುವ ತುಂಬ ಸಂಸಾರದ ಯಜಮಾನಿ.

andolana

Recent Posts

ಹೋಟೆಲ್,ರೆಸ್ಟೋರೆಂಟ್‌ಗಳ ಮೇಲೆ ಮುಂದುವರೆದ ದಾಳಿ

ಬೆಂಗಳೂರು ನಂತರ ಮೈಸೂರು, ಮಂಗಳೂರಿನಲ್ಲೂ ಕಾರ್ಯಾಚರಣೆ ಬೆಂಗಳೂರು : ರಾಜ್ಯದಲ್ಲಿ ಆಹಾರದ ಗುಣಮಟ್ಟ ಮತ್ತು ನೈರ್ಮಲ್ಯದ ಕುರಿತು ಸಾರ್ವಜನಿಕರಿಂದ ಹೆಚ್ಚುತ್ತಿರುವ…

5 hours ago

ನಂ.ಗೂಡು | ಮತ್ತೆ ಕಳಚಿ ಬೀಳುತ್ತಿರುವ ಸೇತುವೆಯ ಸೀಲಿಂಗ್ ಕಾಂಕ್ರೀಟ್

ಮೂರೂ ದಿನಗಳಿಂದಲೂ ಸೇತುವೆಯತ್ತ ಮುಖ ಮಾಡದ ರೈಲ್ವೆ ಇಲಾಖೆ ನಂಜನಗೂಡು : ಮಹಾತ್ಮಾಗಾಂಧಿ ಶತಾಬ್ಧಿ ರಸ್ತೆಗೆ ನಿರ್ಮಿಸಿರುವ ರೈಲ್ವೆ ಕೆಳ…

7 hours ago

ರಾವಣನ ಪಾತ್ರವನ್ನ ನನಗಿಂತ ಉತ್ತಮವಾಗಿ ಯಾರೂ ಮಾಡಲು ಸಾಧ್ಯವಿಲ್ಲ : ಯಶ್

ಮುಂಬೈ : ‘ಟಾಕ್ಸಿಕ್’ ಮತ್ತು ‘ರಾಮಾಯಣ’ ಸಿನಿಮಾಗಳ ಕೆಲಸಗಳಲ್ಲಿ ನಿರತರಾಗಿರುವ ಯಶ್, ‘ರಾಮಾಯಣ’ ಸಿನಿಮಾದಲ್ಲಿ ಕೇವಲ ಸಹ-ನಿರ್ಮಾಪಕರಾಗಿ ಮಾತ್ರವಲ್ಲದೆ ʻರಾವಣʼನ…

7 hours ago

ರಾಜ್ಯಗಳಿಗೆ ನೀಡುವ ವಿಪತ್ತು ಪರಿಹಾರದಲ್ಲೂ ಕೇಂದ್ರದಿಂದ ವಂಚನೆ : ಸಿಎಜಿ ವರದಿ

ಬೆಂಗಳೂರು : ಭೂಕುಸಿತ, ಬರದಂತಹ ಭೀಕರ ಪ್ರಕೃತಿ ವಿಕೋಪಗಳಿಂದ ಕಂಗಾಲಾಗಿರುವ ರಾಜ್ಯಗಳಿಗೆ ಕೇಂದ್ರ ಸರ್ಕಾರದಿಂದ ಸಿಗಬೇಕಾದ ವಿಪತ್ತು ಪರಿಹಾರ ಅನುದಾನದಲ್ಲಿ…

8 hours ago

ಶಾಸಕರ ಭರವಸೆ ಬಳಿಕ ಪ್ರತಿಭಟನೆ ಹಿಂಪಡೆತ : ಮೃತರ ಕುಟುಂಬಕ್ಕೆ ತಲಾ ₹15 ಲಕ್ಷ ಪರಿಹಾರ

ಹನೂರು: ಕಾವೇರಿ ವನ್ಯಜೀವಿಧಾಮದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳ ದಾಳಿಗೆ ಮೃತಪಟ್ಟ ಕುಟುಂಬಗಳಿಗೆ ಸರ್ಕಾರಿ ಉದ್ಯೋಗ, ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸ ಹಾಗೂ ಸೂಕ್ತ…

11 hours ago

ವಾರಣಾಸಿ ಏರ್‌ಫೋರ್ಟ್‌ | ಶಸ್ತ್ರಾಸ್ತ್ರ ತಪಾಸಣೆ ವೇಳೆ ಆಕಸ್ಮಿಕ ಗುಂಡಿನ ದಾಳಿ ; ಇಬ್ಬರಿಗೆ ಗಾಯ

ವಾರಣಾಸಿ : ವಾರಣಾಸಿಯ ಲಾಲ್ ಬಹದ್ದೂರ್ ಶಾಸ್ತ್ರಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭಾನುವಾರ ಬೆಳಿಗ್ಗೆ ನಡೆದ ಆಘಾತಕಾರಿ ಘಟನೆಯೊಂದರಲ್ಲಿ, ಶಸ್ತ್ರಾಸ್ತ್ರ ತಪಾಸಣೆಯ…

11 hours ago