ಎಡಿಟೋರಿಯಲ್

ಅನಾಥ ಮಕ್ಕಳಿಗೆ ತಾಯಿ ತಂದೆಯಾದ ರಾಜಲಕ್ಷ್ಮಿ-ಖಾಸೀಂ

 ಧರ್ಮ ಜನರನ್ನು ಒಡೆಯುತ್ತದೆಯೇ ವಿನಃ ಬೆಸೆಯುವುದಿಲ್ಲ ಎಂದು ನಂಬಿ ಅನಾಥ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುತ್ತಿರುವ ದಂಪತಿಗಳು 

ಪಂಜುಗಂಗೊಳ್ಳಿ- ಈ ಜೀವ ಈ ಜೀವನ

ನಲ್ವತ್ತು ವರ್ಷಗಳ ಹಿಂದೆ ಆಂಧ್ರಪ್ರದೇಶದ ಓಂಗೋಲೆಯ ಪಿ ರಾಜಲಕ್ಷ್ಮಿ ಮತ್ತು ಯೆರಾಗೊಂಡಾಪಾಲಂನ ಎಸ್‌ಎಂಡಿ ಖಾಸೀಂ, ಸಿಎಸ್‌ಆರ್ ಕಾಲೇಜಿನಲ್ಲಿ ಕಲಿಯುತ್ತಿರುವಾಗ ಪರಸ್ಪರ ಪ್ರೇಮಿಸಿ ಮದುವೆಯಾದರು. ಆದರೆ, ಅವರದ್ದು ಅಂತರ ಧರ್ಮೀಯ ಮದುವೆಯಾದುದರಿಂದ ಇಬ್ಬರ ಕುಟುಂಬಗಳೂ ಅದಕ್ಕೆ ಸಮ್ಮತಿಸಲಿಲ್ಲ. ಧರ್ಮ ಅಥವಾ ತಮ್ಮ ಕುಟುಂಬಕ್ಕಾಗಿ ತಮ್ಮ ಪ್ರೀತಿಯನ್ನು ಬಿಡಲು ತಯಾರಿಲ್ಲದ ರಾಜಲಕ್ಷ್ಮಿ ಮತ್ತು ಖಾಸೀಂ, ಸಂಬಂಧಿಕರಿಂದ ಪ್ರತ್ಯೇಕಗೊಂಡು ಸಂಸಾರ ಹೂಡಿದರು.

ಏಕಾಏಕೀ ತಮ್ಮ ಆಪ್ತರು, ಬಂಧುಬಳಗದಿಂದ ದೂರವಾಗಿ ಬದುಕುವುದು ಇಬ್ಬರಿಗೂ ಮಾನಸಿಕವಾಗಿ ಕಷ್ಟವಾದರೂ, ಇಬ್ಬರೂ ಸರ್ಕಾರೀ ಉದ್ಯೋಗಸ್ಥರಾದುದರಿಂದ ಬದುಕು ನಡೆಸಲು ಏನೂ ತೊಂದರೆ ಆಗಲಿಲ್ಲ.

ಪ್ರಾರಂಭದಲ್ಲಿ ಬಾಡಿಗೆ ಮನೆಯಲ್ಲಿರಬೇಕಾಗಿ ಬಂದ ಅವರಿಗೆ ಗಂಡ ಮುಸ್ಲಿಂ ಎಂಬ ಕಾರಣಕ್ಕೆ ಮನೆಗಳು ಸುಲಭದಲ್ಲಿ ಸಿಗುತ್ತಿರಲಿಲ್ಲ. ಆಗ ಒಬ್ಬರು ಕಮ್ಯುನಿಸ್ಟ್ ನಾಯಕರು ಅವರಿಗೆ ಬಾಡಿಗೆ ಮನೆ ಕೊಡಿಸಲು ಸಹಾಯ ಮಾಡಿದರು. ಬಂಧುಬಳಗದ ಜೊತೆ ಸ್ನೇಹಿತರೂ ತಮ್ಮಿಂದ ದೂರವಾದ ಕಾರಣಕ್ಕೆ ಮುಂದೆ ಮಕ್ಕಳಾದರೆ ಅವರಿಗೆ ಬದುಕು ದುಸ್ತರವಾಗಬಹುದೆಂದು ಆಲೋಚಿಸಿ ಅವರು ಪ್ರಾರಂಭದಲ್ಲಿ ಮಕ್ಕಳು ಬೇಡವೆಂದು ನಿರ್ಧರಿಸಿದ್ದರು.

ಆದರೆ, ಮುಂದೆ ಅವರಿಗೊಬ್ಬ ಮಗ ಹುಟ್ಟಿದನು. ಆತ ಈಗ ಇಂಗ್ಲೆಂಡಿನಲ್ಲಿ ವೈದ್ಯಕೀಯ ವ್ಯಾಸಂಗ ಮಾಡುತ್ತಿದ್ದಾನೆ. ಮಗ ಚಿಕ್ಕವನಾಗಿದ್ದಾಗ ಅವನು ತನ್ನ ಅಜ್ಜ ಅಜ್ಜಿಯರನ್ನು ಕಾಣದೆ ಬೆಳೆಯಬೇಕಾಯಿತೆಂಬ ಬಗ್ಗೆ ದಂಪತಿಗಳಿಗೆ ತುಂಬಾ ವ್ಯಥೆಯಾಗಿತ್ತು. ಹೀಗೇ ವರ್ಷಗಳು ಕಳೆದವು. ತಮ್ಮ ನಿವೃತ್ತಿಗೆ ಇನ್ನು ಹತ್ತುಗಳಷ್ಟೆ ಬಾಕಿ ಇವೆ ಎಂಬುದು ಅವರ ಗಮನಕ್ಕೆ ಬಂದಾಗ ತಮ್ಮ ನಿವೃತ್ತಿ ಬದುಕು ಕೂಡಾ ಬಂಧುಬಳಗದಿಂದ ಹೀಗೆಯೇ ದೂರವಾಗಿ ಕಳೆಯುತ್ತದಲ್ಲ ಎಂಬ ಆಲೋಚನೆ ಅವರ ಮನಸ್ಸನ್ನು ಕೊರೆಯತೊಡಗಿತು. ತಮ್ಮ ನಿವೃತ್ತಿ ಜೀವನವನ್ನು ಹೀಗೆ ಏಕಾಂಗಿಯಾಗಿ ಕಳೆಯಲಿಚ್ಚಿಸದ ಅವರು ಅದರಿಂದ ಪಾರಾಗಲು ದಾರಿ ಹುಡುಕತೊಡಗಿದರು. ಆಗ ಅವರಿಗೆ ಹೊಳೆದದ್ದು ನಿರ್ಗತಿಕ ಮಕ್ಕಳ ಶಿಕ್ಷಣಕ್ಕೆ ನೆರವಾಗುವುದು.

ಆ ಆಲೋಚನೆ ಬಂದದ್ದೇ ರಾಜಲಕ್ಷ್ಮಿ ಮತ್ತು ಖಾಸೀಂ ತಕ್ಷಣವೇ ಆ ನಿಟ್ಟಿನಲ್ಲಿ ಕೆಲಸ ಆರಂಭಿಸಿದರು.

೨೦೧೧ರಲ್ಲಿ ಅವರು ತಮ್ಮ ಐದು ಎಕರೆ ಜಾಗದಲ್ಲಿ ‘ಮಾನಲೋ ಮಾನಂ’ ಎಂಬ ಹೆಸರಿನ ಒಂದು ಎನ್‌ಜಿಒವನ್ನು ಪ್ರಾರಂಭಿಸಿದರು. ಮಾನಲೋ ಮಾನಂನಲ್ಲಿ ಮೂರು ಮನೆಗಳಿವೆ-‘ಬೊಮ್ಮರಿಲ್ಲು’ ಎಂಬ ಬಾಲಕರ ಮನೆ, ‘ಜಬಿಲ್ಲಿ’ ಎಂಬ ಬಾಲಕಿಯರ ಮನೆ ಮತ್ತು ‘ಪೊಡರಿಲ್ಲು’ ಎಂಬ ಹಿರಿಯರ ಮನೆ. ದಂಪತಿಗಳು ತಮ್ಮ ಉಳಿತಾಯದ ಸಂಪೂರ್ಣ ಹಣ ಮತ್ತು ರಾಜಲಕ್ಷ್ಮಿಯವರಿಗೆ ಬರುತ್ತಿದ್ದ ನಿವೃತ್ತಿ ವೇತನದ ಹಣ ಎಲ್ಲವನ್ನೂ ಅದಕ್ಕೆ ಸುರಿದರು.

೨೦೧೪ರಲ್ಲಿ ಅವರು ಪುಟ್ ಪಾತ್ ಪಾಲಾಗಿದ್ದ ಐದು ವರ್ಷದ ಒಬ್ಬ ಹುಡುಗನನ್ನು ಕರೆತರುವ ಮೂಲಕ ಮಾನಲೋ ಮಾನಂಗೆ ಕಾರ್ಯ ನಿರ್ವಹಿಸಲು ಪ್ರಾರಂಭಿಸುತ್ತದೆ. ಈಗ ಮಾನಲೋ ಮಾನಂನಲ್ಲಿ ೮-೧೯ ವರ್ಷದ ಅಂತಹ ೮೧ ಅನಾಥ ಮಕ್ಕಳಿದ್ದಾರೆ. ಅವರಲ್ಲಿ ೫೩ ಹೆಣ್ಣು ಮಕ್ಕಳು ಮತ್ತು ೨೮ ಗಂಡುಮಕ್ಕಳು. ೨೦೨೧ರಲ್ಲಿ ಪ್ರಾರಂಭಗೊಂಡ ‘ಪೊಡರಿಲ್ಲು’ ಹಿರಿಯರ ಮನೆಯಲ್ಲಿ ಆರೆಳು ಜನ ನಿರಾಶ್ರಿತ ಹಿರಿಯ ನಾಗರಿಕರಿದ್ದಾರೆ. ಮಾನಲೋ ಮಾನಂನಲ್ಲಿ ‘ಹರಿವಿಲ್ಲು’ ಎಂಬ ಇನ್ನೊಂದು ಮನೆಯಿದ್ದು, ಅದರಲ್ಲಿ ೧೫ ವರ್ಷ ಮೇಲ್ಪಟ್ಟ ಮಕ್ಕಳಿಗೆ ಸ್ವಉದ್ಯೋಗದ ತರಬೇತಿ ನೀಡಲಾಗುತ್ತದೆ.

ಮಾನಲೋ ಮಾನಂನ ಮಕ್ಕಳಲ್ಲಿ ೯೦% ಮಕ್ಕಳು ಪರಿಶಿಷ್ಟ ವರ್ಗಕ್ಕೆ ಸೇರಿದವರು.

ಇವರಲ್ಲಿ ಬಹುತೇಕರು ತಂದೆ ತಾಯಿಯಿಲ್ಲದ ಅನಾಥರಾದರೆ, ಉಳಿದವರು ಅಂತರ್ಧರ್ಮೀಯ ಮದುವೆಯಲ್ಲಿ ಹುಟ್ಟಿದ ಬೇಡದ ಮಕ್ಕಳು, ಎಚ್‌ಐವಿ ಪೀಡಿತರಿಗೆ ಹುಟ್ಟಿದ ಮಕ್ಕಳು ಸೇರಿದ್ದಾರೆ. ೮೦ ಮಕ್ಕಳಲ್ಲಿ ೩೦ ಮಕ್ಕಳು ಕೇಂದ್ರೀಯ ವಿದ್ಯಾಲಯಗಳಲ್ಲಿ ಸೆಕೆಂಡರಿ ಹಂತದಲ್ಲಿ ಕಲಿಯುತ್ತಿದ್ದಾರೆ. ಒಬ್ಬ ಹುಡುಗ ಕಾನೂನು ಅಭ್ಯಾಸ ಮಾಡುತ್ತಿದ್ದಾನೆ. ಇನ್ನೊಬ್ಬ ಬಿಟೆಕ್ ಮುಗಿಸುವ ಹಂತದಲ್ಲಿದ್ದಾನೆ. ಮತ್ತೊಬ್ಬ ಕ್ಯಾರಂ ಚಾಂಪಿಯನ್ ಇದ್ದಾನೆ. ಈ ಕ್ಯಾರಂ ಚಾಂಪಿಯನ್‌ನ ಹೆಸರು ಜೀನ್ ವಲ್ಜಿಯಾನ್. ಇವನು ಐದು ವರ್ಷದವನಿದ್ದಾಗ ತಂದೆತಾಯಿ ಏಡ್ಸ್ ಕಾಯಿಲೆಗೆ ಬಲಿಯಾಗಿ, ಇವನು ಮತ್ತು ಇವನ ತಂಗಿಯರು ತಬ್ಬಲಿಯಾದರು. ತನ್ನನ್ನು ಮತ್ತು ತಂಗಿಯರನ್ನು ಸಾಕಲು ಹಣವಿಲ್ಲದ ಕಾರಣ ಯಾರದ್ದೋ ಸೈಕಲ್ ಕದಿಯಲು ಹೋಗಿ ಪೊಲೀಸರ ಕೈಗೆ ಸಿಕ್ಕಿ ಜೈಲು ಪಾಲಾದನು. ಆಗ ಇವನು ರಾಜಲಕ್ಷ್ಮಿಯವರ ದೃಷ್ಟಿಗೆ ಬಿದ್ದು ಮಾನಲೋ ಮಾನಂ ಸೇರಿದನು. ಈಗ ಜೀನ್ ವಲ್ಜಿಯಾನ್‌ಗೆ ೧೬ ವರ್ಷ ಪ್ರಾಯ.

ಆನಂದ, ಬುದ್ಧಿ ತಿಳಿಯುವ ಮೊದಲೇ ತಂದೆ ತಾಯಿಯನ್ನು ಕಳೆದುಕೊಂಡು ಯಾರೋ ನೆರೆಹೊರೆಯವರೊಂದಿಗೆ ವಾಸಿಸುತ್ತಿದ್ದನು. ೨೦೧೮ರಲ್ಲಿ ರಾಜಲಕ್ಷ್ಮಿಯವರು ಒಂದು ಉಚಿತ ವೈದ್ಯಕೀಯ ಕ್ಯಾಂಪ್ ನಡೆಸುತ್ತಿದ್ದಾಗ ಆನಂದನ ಬಗ್ಗೆ ತಿಳಿದು ಅವನನ್ನು ಬೊಮ್ಮರಿಲ್ಲು ಮನೆಗೆ ತಂದರು. ಅವನೀಗ ಕೇಂದ್ರೀಯ ವಿದ್ಯಾಲಯದಲ್ಲಿ ಒಂಭತ್ತನೇ ತರಗತಿಯಲ್ಲಿ ಕಲಿಯುತ್ತಿದ್ದಾನೆ.

ಮಾನಲೋ ಮಾನಂ ನಡೆಸಲು ಪ್ರತಿ ತಿಂಗಳು ಎರಡೂವರೆ ಲಕ್ಷ ರುಪಾಯಿ ಖರ್ಚಾಗುತ್ತದೆ. ಕೆಲವು ದಾನಿಗಳು ನೀಡುವ ದವಸಧಾನ್ಯಗಳ ಹೊರತಾಗಿ ಅಷ್ಟೂ ಖರ್ಚನ್ನು ದಂಪತಿಗಳು ತಮ್ಮ ನಿವೃತ್ತಿ ವೇತನ ಮತ್ತು ಉಳಿತಾಯ ಹಣದಿಂದಲೇ ನಿಭಾಯಿಸುತ್ತಾರೆ. ಯಾವುದೇ ರೀತಿಯ ಸರ್ಕಾರೀ ಸಹಾಯವನ್ನೂ ಪಡೆಯುವುದಿಲ್ಲ. ಮಾನಲೋ ಮಾನಂನ ಎಲ್ಲಾ ಮಕ್ಕಳಿಗೆ ರಾಜಲಕ್ಷ್ಮಿ ಮತ್ತು ಖಾಸೀಂ ತಾಯಿತಂದೆಯಂತಿದ್ದರೆ, ದೊಡ್ಡ ಮಕ್ಕಳು ಚಿಕ್ಕ ಮಕ್ಕಳ ಅಣ್ಣ ಅಕ್ಕಂದಿರಾಗಿ ಅವರನ್ನು ನೋಡಿಕೊಳ್ಳುತ್ತಾರೆ.

ಧರ್ಮ ಜನರನ್ನು ಒಡೆಯುತ್ತದೆಯೇ ವಿನಃ ಬೆಸೆಯುವುದಿಲ್ಲ. ಈ ಮಕ್ಕಳಿಗೆ ಒಳ್ಳೆಯ ಶಿಕ್ಷಣ ನೀಡುವ ಮೂಲಕ ಅವರು ಮುಂದೆ ಜಾತಿಧರ್ಮಗಳನ್ನು ಮೀರಿ ಬದುಕಿ ಸಮಾಜದಲ್ಲಿ ಪರಿವರ್ತನೆಗೆ ಕಾರಣರಾಗಲಿ ಎಂಬುದು ನಮ್ಮ ಆಶಯ ಎನ್ನುವ, ಕೆಲವು ವರ್ಷಗಳ ಹಿಂದೆ ತಾನು ಒಬ್ಬಂಟಿ ಎಂದು ಕೊರಗುತ್ತಿದ್ದ ರಾಜಲಕ್ಷ್ಮಿ ಈಗ ೮೮ ಸದಸ್ಯರಿರುವ ತುಂಬ ಸಂಸಾರದ ಯಜಮಾನಿ.

andolana

Recent Posts

ಅಲೆಮಾರಿ ಜನಾಂಗ ನಾಡಿನ ಸಂಸ್ಕೃತಿಯ ಜೀವಂತಿಕೆ

ಟಿ.ಕೆ.ಹರೀಶ್ ಸಮುದಾಯಗಳಿಗೆ ಸೂರು, ಶಿಕ್ಷಣ ಒದಗಿಸುವುದು ಅತ್ಯಗತ್ಯ ಭಾರತೀಯ ಅಲೆಮಾರಿ ಜನಾಂಗಗಳು ಕೇವಲ ಸಂಚಾರಿಗಳಲ್ಲ; ಅವರು ನಮ್ಮ ಶ್ರೀಮಂತ ಸಾಂಸ್ಕೃತಿಕ…

58 mins ago

ಓದುಗರ ಪತ್ರ: ನೆಮ್ಮದಿ ಕೇಂದ್ರಕ್ಕೆ ಹೆಚ್ಚುವರಿ ಸಿಬ್ಬಂದಿ ನಿಯೋಜಿಸಿ

ಮೈಸೂರು ಜಿಲ್ಲೆಯ ಹೆಚ್.ಡಿ.ಕೋಟೆ ತಾಲ್ಲೂಕು ಕಚೇರಿ ಆಡಳಿತ ಸೌಧದಲ್ಲಿ ಇರುವ ನೆಮ್ಮದಿ ಕೇಂದ್ರದ ಮೂಲಕ ಜಾತಿ ಪ್ರಮಾಣ ಪತ್ರ, ಆದಾಯ…

1 hour ago

ಓದುಗರ ಪತ್ರ: ಆಹಾರ ಸರಬರಾಜಿಗೆ ಕಪ್ಪು ಪ್ಲಾಸ್ಟಿಕ್ ಡಬ್ಬಿಗಳನ್ನು ನಿಷೇಧಿಸಿ

ನಗರ ಪ್ರದೇಶಗಳ ಹೋಟೆಲ್‌ಗಳಲ್ಲಿ ನೀಡಲಾಗುವ ಆಹಾರ ಪಾರ್ಸೆಲ್‌ಗಳು ಹಾಗೂ ಆನ್ ಲೈನ್ ಮೂಲಕ ಸರಬರಾಜಾಗುವ ಶೇ.೯೦ ಕ್ಕಿಂತ ಹೆಚ್ಚು ಆಹಾರ…

1 hour ago

ಓದುಗರ ಪತ್ರ: ಅಧಿಕಾರಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ಕ್ರಿಯಾಶೀಲವಾಗಲಿ

ಸಾಮಾಜಿಕ ಮಾಧ್ಯಮ ಬಳಕೆದಾರರು ಬೆಂಗಳೂರಿನ ನಂತರ ಅತಿ ಹೆಚ್ಚು ಕ್ರಿಯಾಶೀಲರಾಗಿರುವುದು ಮೈಸೂರು ನಗರದಲ್ಲಿ. ಆದರೆ ಬೇಸರದ ಸಂಗತಿ ಎಂದರೆ ಇಲ್ಲಿನ…

1 hour ago

ಓದುಗರ ಪತ್ರ: ಎಸ್‌ಐಆರ್: ಸಂಪೂರ್ಣ ಮಾಹಿತಿ ನೀಡಿ

ರಾಜ್ಯದಲ್ಲಿ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ಐಆರ್)ಪ್ರಕ್ರಿಯೆ ಜೂ.೩೦ರಿಂದ ಆರಂಭವಾಗಿದೆ. ಆದರೆ ಮತದಾರರು ಈ ಪ್ರಕ್ರಿಯೆಯಲ್ಲಿ ಯಾವ ದಾಖಲೆಗಳನ್ನು…

1 hour ago

ಅನನ್ಯಾಳ ಬದುಕು ಬದಲಾಯಿಸಿದ 20 ರೂಪಾಯಿ ನೋಟು

ಪಂಜು ಗಂಗೊಳ್ಳಿ  ಬಡಕಟ್ಟು ಜನರಿಗೆ ಅಕ್ಷರ ಕಲಿಸಿ ಬದುಕು ರೂಪಿಸಿದ ಕರುಣಾಮಯಿ ೧೯೯೦ರಲ್ಲಿ ಅಸ್ಸಾಮಿನ ಹೊಜಾಯ್ ಜಿಲ್ಲೆಯ ಲುಮ್ಡಿಂಗ್ ಗ್ರಾಮದ…

1 hour ago