ಎಡಿಟೋರಿಯಲ್

ತರೀಕೆರೆ ಏರಿಮೇಲೆ – ನನ್ನ ಬರೆಹದ ಪರಿ: ಕೌದಿಯ ನೆನಪು

ರಹಮತ್ ತರೀಕೆರೆ

ಕರ್ನಾಟಕದ ವಾಙ್ಮಯ ಬಯಲಿನಲ್ಲಿ ಎಷ್ಟೊಂದು ಹೊಳೆಗಳು! ಅವುಗಳಲ್ಲಿ ಮೀಯುತ್ತೇನೆ, ಬೊಗಸೆಯಿಂದ ಹೆಕ್ಕಿ ಕುಡಿಯುತ್ತೇನೆ!!

ಪಂಪ ತನ್ನನ್ನು ವ್ಯಾಸನ ಮಹಾಭಾರತವೆಂಬ ಕಡಲ ಈಜುಗಾರನೆಂದೂ, ಹಿತಮಿತ ಚತುರನೆಂದೊ ಕರೆದುಕೊಂಡಿರುವುದುಂಟು. ಹೆದ್ದೆರೆಗಳಲ್ಲಿ ಈಜುವ ಕಸುವಿನ ಆತ್ಮವಿಶ್ವಾಸವೂ ವಿಸ್ತಾರದಲ್ಲಿ ಕಳೆದುಹೋಗದಂತೆ ಇರಬಲ್ಲೆ ಎಂಬ ಸ್ವನಿಯಂತ್ರಣ ಪ್ರಜ್ಞೆಯೂ ಈ ಮಾತಲ್ಲಿವೆ. ಬರೆಹದ ಪರಿಯನ್ನು ಕೂಡ ಸೂಚಿಸುತ್ತಿರುವ ಈ ಆತ್ಮವರ್ಣನೆಯನ್ನು ಅವನ ಕೃತಿಗಳೂ ಪ್ರಮಾಣಿಸುತ್ತವೆ. ಇದರಂತೆ, ಕನ್ನಡದ ಪ್ರಾಚೀನ-ಆಧುನಿಕ ಲೇಖಕರೆಲ್ಲರೂ ತಾವೇಕೆ ಮತ್ತು ಹೇಗೆ ಬರೆಯುತ್ತೇವೆ ಎಂದು ವಿವರಿಸಿದ್ದಾರೆ. ಲಂಕೇಶ್ ತಮ್ಮ ಬರೆಹದ ಕ್ರಮವನ್ನು ಗುಬ್ಬಚ್ಚಿ ಗೂಡು ಕಟ್ಟುವುದಕ್ಕೆ ಸಮೀಕರಿಸಿಕೊಳ್ಳುವುದುಂಟು. ಈ ವಿವರಣೆಗಳಲ್ಲಿರುವ ರೂಪಕಗಳು ಮಾರ್ಮಿಕವಾಗಿವೆ.

ಏಕಾಂತದಲ್ಲಿ ನಾನೂ ನನ್ನ ಬರೆಹದ ಪರಿ ಎಂಥದ್ದು ಎಂದು ಕೇಳಿಕೊಂಡೆ. ಸ್ಪಷ್ಟ ಜವಾಬು ಸಿಗಲಿಲ್ಲ. ಬರೆಹವನ್ನು ಜೀವನ್ಮರಣದ ಪ್ರಶ್ನೆಯಾಗಿಸಿಕೊಂಡು, ಶ್ರೇಷ್ಠವಾದುದನ್ನೇ ಸೃಷ್ಟಿಸಬೇಕೆಂಬ ಮಹತ್ವಾಕಾಂಕ್ಷಿ ಪಂಥ ನನ್ನದಲ್ಲ. ಹಾಗೆ ದೊಡ್ಡದನ್ನು ಸೃಷ್ಟಿಸಲು ಬೇಕಾದ ಕಸುವಿಲ್ಲದಿರುವುದೂ ಇದಕ್ಕೆ ಇನ್ನೊಂದು ಕಾರಣ. ಬಹುಶಃ ನನ್ನ ಬರೆಹವು, ಸ್ಮೃತಿಯ ಗೋದಾಮಿನ ಗುಜರಿಯಲ್ಲಿ ಬಿದ್ದಿರುವ ಅನುಭವ, ತಿರುಗಾಟದಲ್ಲಿ ಕಂಡ ನೋಟ, ಓದಿದ ಕೇಳಿದ ಸಂಗತಿಗಳಲ್ಲಿ ಕೆಲವನ್ನು ಎತ್ತಿಕೊಂಡು, ಒಲೆಯಲ್ಲಿಟ್ಟು ಕಾಸಿ, ಅಡಿಗಲ್ಲ ಮೇಲೆ ಬಡಿದು ಕತ್ತಿಯನ್ನೊ ಕುಡಗೋಲನ್ನೊ ಕುಳಕುಡವನ್ನೊ ಮಾಡುವಂತಿರಬಹುದು; ಮನೆಯಲ್ಲಿದ್ದ ಹಳೆಬಟ್ಟೆಯ ಚೂರುಗಳನ್ನು ಸೇರಿಸಿ ಕೌದಿ ಹೊಲಿಯುತ್ತಿದ್ದ ಅಮ್ಮನಿಗೆ ಇನ್ನೂ ಹತ್ತಿರವೆನಿಸುತ್ತದೆ. ಅಮ್ಮನಿಗೆ ಕಸೂತಿ-ಕೌದಿ ಹೊಲಿಯುವ ಕುಶಲತೆ ಬಂದಿದ್ದು, ಅವಳ ಅಜ್ಜಿಯಿಂದ. ಅಜ್ಜಿ, ಹೊಸದುರ್ಗ ಸೀಮೆಯ ಹಳ್ಳಿಗಳಲ್ಲಿ ಸೂಜಿ-ದಾರಗಳಿದ್ದ ಸಂಚಿ ಹಿಡಿದು, ಕೌದಿ ಹೊಲೆಯುವ ಕಾಯಕ ಮಾಡುತ್ತಿದ್ದವಳಂತೆ.
ಗುಜರಿಯ ಅಥವಾ ಕೌದಿಯ ಪ್ರಾಥಮಿಕ ಗುಣ ಚೆಲ್ಲಿಬಿದ್ದ ಸಾಮಗ್ರಿಯನ್ನು ಹೆಕ್ಕುವುದು ಮತ್ತು ಜೋಡಿಸುವುದು. ಅದೆಂತೊ, ಬಾಲ್ಯದಲ್ಲಿ ಹೆಕ್ಕುವ ಕೆಲಸಗಳೇ ನನ್ನ ಮೇಲೆ ಬಿದ್ದವು. ಕೆರೆಯಂಗಳದಲ್ಲಿ ಬಿದ್ದ ಕುಳ್ಳು ಆರಿಸುವುದು, ಕೊಯಿಲು ಮುಗಿದ ಹೊಲಗಳಲ್ಲಿ ಹಂಕಲು ಹುಡುಕುವುದು, ಕಾಡಿಗೆ ಹೋಗಿ ಸೀಗೇಸೊಪ್ಪು ಕೊಯ್ಯುವುದು, ಬಾವಲಿಗಳು ಹಿಪ್ಪೆಯ ಹಣ್ಣನ್ನು ತಿಂದುಗಿದ ಬೀಜಗಳನ್ನು ತಿರಿಯುವುದು ಇತ್ಯಾದಿ. ನಮ್ಮ ಕುಲುಮೆಯ ಮುಂದಿದ್ದ ಬೃಹದಾಕಾರದ ಮಾವಿನಮರದಿಂದ ಬೆಳಗಿನ ಜಾವವೆದ್ದು ಬಿದ್ದ ಹಣ್ಣು ಹುಡುಕಲು ಹೋಗುತ್ತಿದ್ದೆ. ಸೀಜನ್ನಿನಲ್ಲಿ ಮರದಡಿಯೇ ಮಲಗುತ್ತಿದ್ದೆ. ನಾವು ಸೋದರರು ಕಟ್ಟಿಗೆ ಹೆಕ್ಕಲು ಅಡವಿಗೆ ಹೋಗುತ್ತಿದ್ದೆವು. ಶ್ಮಶಾನಕ್ಕೆ ಸಮೀಪವಿದ್ದ ಕುಲುಮೆಯ ಮುಂದೆ ಹೆಣಗಳು ಸಾಗುವಾಗ ಎಸೆಯುತ್ತಿದ್ದ -ಗ್ರಹಣಹಿಡಿದ ಚಂದ್ರನಂತಿದ್ದ, ಧೂಳಿನಲ್ಲಿ ಬಿದ್ದು ರಕ್ಷಿಸಿರಿ ಎಂದು ಬೇಡುತ್ತಿದ್ದ- ತಾಮ್ರದ ಒಂದು ಪೈಸೆಗಳನ್ನು ಎತ್ತಿಕೊಳ್ಳುತ್ತಿದ್ದೆವು. ಅವನ್ನು ಅಂಗಡಿಗೆ ಹಾಕಿ ಕೊಬ್ಬರಿ ಮಿಠಾಯಿ ತಿನ್ನುತ್ತಿದ್ದೆವು. ಫಲ ಇಳಿಸಿದ ಮಾವಿನತೋಪುಗಳಲ್ಲಿ ದಟ್ಟವಾದ ಎಲೆಸಂದಿನಲ್ಲಿ ಕದ್ದು ಅಡಗಿರುತ್ತಿದ್ದ ಮಾವಿನ ಕಾಯಿ ಹುಡುಕಿ ಕೀಳುತ್ತಿದ್ದೆವು; ಮೆರವಣಿಗೆಯಲ್ಲಿ ಈಡುಗಾಯಿ ಒಡೆದಾಗ, ಪರಿಣತ ಫೀಲ್ಡರನು ಹಾರಿಹೋಗುವ ಚೆಂಡನ್ನು ನೆಗೆದು ಹಿಡಿವಂತೆ ಹೋಳನ್ನು ಹಿಡಿಯುತ್ತಿದ್ದೆವು; ಹಳೆಯ ಎಕ್ಸೈಜುಗಳಲ್ಲಿದ್ದ ಖಾಲಿಹಾಳೆಗಳನ್ನು ಹರಿದು ಜೋಡಿಸಿ ಹೊಲಿದು ಬೈಂಡು ಮಾಡಿ ಹೊಸ ಎಕ್ಸೈಜ್ ತಯಾರಿಸುತ್ತಿದ್ದೆವು. ನಲ್ಲಿಯ ಮುಂದೆ ಉದ್ದನೆಯ ಪಾಳಿಯಲ್ಲಿ ಕಾಯುವ ಬದಲು, ಒಡೆದ ಕೊಳಾಯಿಯಿಂದ ಸಣ್ಣಗೆ ಚಿಮ್ಮುವ ಜಾಗದಲ್ಲಿ ಕೊಡವನ್ನಿಟ್ಟು ಹನಿಗಳಿಂದ ಕೊಡ ತುಂಬಿಸುತ್ತಿದ್ದೆವು. ಕಲ್ಯಾಣದ ಆಯ್ದಕ್ಕಿ ರಾಮಯ್ಯ ನಮ್ಮ ಪೂರ್ವಜನಿರಬೇಕು.
ಬಾಲ್ಯದಲ್ಲಿ ಬಿದ್ದ ಹೆಕ್ಕುಬುದ್ಧಿ ಬೆಳೆದಮೇಲೂ ಬಿಡಲಿಲ್ಲ. ಶಿವಮೊಗ್ಗೆಯಲ್ಲಿದ್ದಾಗ, ನಮ್ಮ ಬೀದಿಯಲ್ಲಿ ಹಾಕಿದ್ದ ಸಾಲುಮರಗಳಿಗೆ ಸಗಣಿಯನ್ನು ಎತ್ತಿಕೊಂಡು ಬರುತ್ತಿದ್ದೆ. ಚೆಲ್ಲಿಬಿದ್ದ ಎಲೆಗಳನ್ನೆಲ್ಲ ಹೆಕ್ಕಿ ಅದರ ಬುಡಕ್ಕೆ ದೂಡುತ್ತಿದ್ದೆ. ಬಾನು `ನೀನು ಕೆಲಸ ಮಾಡುವ ಕಾಲೇಜಿಗಾದರೂ ಮರ್ಯಾದೆ ಕೊಡು ಮಾರಾಯ. ಎಲ್ಲಿಹೋಗುತ್ತೇ ಬಾಲ್ಯದಲ್ಲಿ ಬಿದ್ದ ದುರಭ್ಯಾಸ!’ ಎಂದು ಝಂಕಿಸುತ್ತಿದ್ದಳು. ನಿಜ, ಕೆಲವು ಅಭ್ಯಾಸಗಳು ಬೇಗ ಕೈಬಿಡುವುದಿಲ್ಲ. ಒಮ್ಮೆ ಒಬ್ಬ ಭಿಕ್ಷುಕಿ ಸುಂದರವಾಗಿದ್ದಾಳೆಂದು ರಾಜ ಆಕೆಯನ್ನು ರಾಣಿಯಾಗಿಸಿದನಂತೆ. ಅರಮನೆಯ ಸುಖಜೀವನದ ಹೊಡೆತ ತಾಳಲಾರದೆ ಆಕೆ ಸಾಯುವಂತೆ ಕೃಶವಾದಳಂತೆ. ಕಡೆಗೆ ಅಡುಗೆ ಮನೆಗೆ ಹೋಗಿ ಪ್ರತಿಪಾತ್ರೆಯ ಮುಂದೆ ನಿಂತು ಬೇಡಿದಂತೆ ಮಾಡಿ ನೀಡಿಕೊಂಡು ಉಣ್ಣಲಾರಂಭಿಸಿದ ಮೇಲೆ ಅವಳ ಆರೋಗ್ಯ ಸುಧಾರಿಸಿತಂತೆ.
ನೆಲಕ್ಕೆ ಬಿದ್ದದ್ದನ್ನು ಹೆಕ್ಕುವ ಸ್ವಭಾವದಿಂದ ನನ್ನ ದಿಟ್ಟಿ ಸೂರ್ಯ ಚಂದ್ರತಾರೆ ಮೋಡಗಳಿರುವ ಗಗನಕ್ಕಿಂತ ನೆಲದ ಮೇಲಿನ ಕಲ್ಲುಮಣ್ಣು ಹುಲ್ಲು ಕಸಗಳ ಕಡೆಯೇ ಹೆಚ್ಚು ದೃಷ್ಟಿ ಹರಿಯಿತು. ಈಗಲೂ ಹುಲ್ಲಿನ ಹೂವು, ಹರಿವ ಇರುವೆಗೊದ್ದ ಸಗಣಿಹುಳ ಬೇಗನೆ ಗೋಚರಿಸುತ್ತವೆ. ಆನೆಯಂತೆ ಸೊಂಡಿಲನ್ನು ಮೆಲಕ್ಕಳಿಸಿ ಕೊಂಬೆಯನ್ನು ಕೆಡವಿ ಸೊಪ್ಪು ತಿನ್ನುವ ಆನೆಗಿಂತ, ತಮ್ಮ ಮುಸುಡಿಯಿಂದ ಮಣ್ಣುಸರಿಸಿ ನೆಲಕ್ಕೆ ಹತ್ತಿದ ಗರಿಕೆಯನ್ನು ಕಡಿದು ತಿನ್ನುವ ಕತ್ತೆ ಕುದುರೆ ಕುರಿಗಳು ಬೆರಗು ಹುಟ್ಟಿಸುತ್ತವೆ. ಸೊಪ್ಪು ತಿನ್ನುತ್ತ ಬೇಲಿಗುಂಟ ಚಕಚಕನೆ ಚಲಿಸುವ ಮೇಕೆಯ ಗುಣವಂತೂ ನನಗೆ ಆದರ್ಶ. ಮಹಾರಾಣಿಯೊಬ್ಬಳು, ಸಂತಾನಪ್ರಾಪ್ತಿಗಾಗಿ ಋಷಿ ಮಂತ್ರಿಸಿಕೊಟ್ಟ ಹಣ್ಣಿನ ತಿರುಳು ತಿಂದು ಓಟೆಯನ್ನು ಆಚೆ ಎಸೆಯಲು, ಅದನ್ನು ಹೆಕ್ಕಿ ತಿಂದ ಮೇಕೆ ರಾಜಕುವರನನ್ನು ಹಡೆವ ಕತೆಯಿದೆಯಷ್ಟೆ. ಸೃಜನಶೀಲತೆಯನ್ನು ವಿವರಿಸಲು ರಾಮಾನುಜನ್ ಹೇಳುವ ಈ ಕತೆ ನನಗೆ ಪಸಂದಾಯಿತು. ಲಂಕೇಶರ ಗುಬ್ಬಚ್ಚಿಯ ಗೂಡು ಕಟ್ಟುವ ರೂಪಕದಲ್ಲೂ ಹೆಕ್ಕುವ ಹೆಣೆಯುವ ಕ್ರಿಯೆಗಳಿವೆ. ಒಮ್ಮೆ ವಾಕ್ ಮಾಡುತ್ತ ತುಂಗಭದ್ರಾ ಕಾಲುವೆ ದಂಡೆಯಲ್ಲಿ ಬೆಳೆದ ಮರದಿಂದ ಗಾಳಿಗೆ ಬಿದ್ದ ಕಾಗೆಗೂಡನ್ನು ಎತ್ತಿಕೊಂಡು ಪರಿಶೀಲಿಸಿದೆ. ಅದು ಬೈಂಡಿಗ್ ವೈರು, ಪ್ಲಾಸ್ಟಿಕ್‍ಸಿಬಿರು ಒಳಗೊಂಡಂತೆ ಏನೆಲ್ಲ ಹೆಕ್ಕಿತಂದು ಜೋಡಿಸಿಕೊಂಡಿದೆ! ಹಲವು ದಿಕ್ಕಿನಿಂದ ಒದಗಿಬಂದ ಸಾಮಗ್ರಿಗಳು, ಸಂದರ್ಭ ಬಂದಾಗ ಒಟ್ಟಿಗೆ ಕಲೆತು ಹೊಸಹುಟ್ಟು ಸಂಭವಿಸುವುದು ಒಂದು ವಿಸ್ಮಯ. ಹಲವು ಪದಾರ್ಥಗಳು ಸೇರಿ ಸೃಷ್ಟಿಯಾಗುವ ಸಾರು ಮೂಲವಸ್ತು ಗುರುತಿಸುವುದೇ ಕಷ್ಟ.
ಮಹಾದೇವಿಯಕ್ಕ, `ಮೊರಡಿಯಲ್ಲಾಡುವುದೇ ನವಿಲು? ಕಿರುವಳ್ಳಕ್ಕೆಳಸುವುದೇ ಹಂಸ?’ ಎಂದು ಕೇಳುವುದುಂಟು. ಸತ್ಯಾಸತ್ಯತೆ ಏನೇ ಇರಲಿ, ಸಣ್ಣಪುಟ್ಟ ಕುಂಟೆಗಳಲ್ಲಿ ಈಸುತ್ತ ಮೀನುಹೆಕ್ಕುವ ಕಾಡುಬಾತುಗಳ ಅಥವಾ ನೆಲದ ಮೇಲೆ ವೇಷಮರೆಸಿ ಗೂಡುಕಟ್ಟುವ ನತ್ತಿಂಗ ಹಕ್ಕಿಗಳ ಬದುಕನ್ನೂ ಮಾನ್ಯ ಮಾಡಬೇಕಷ್ಟೆ. ಕಡಲಲ್ಲಿ ಈಜುವವರಿಗೆ ಹಳ್ಳದ ಸಣ್ಣಮಡು ತಾತ್ಸಾರ ಹುಟ್ಟಿಸಬಹುದು. ಆದರೆ ಆಳುದ್ದ ನೀರಲ್ಲಿ ಮುಳುಗುವ ಭಯವಿಲ್ಲದೆ ಜಲಕೇಳಿ ಅಲ್ಲಿ ಸಾಧ್ಯವಿದೆ. ನಾನು ಚಾರಣಿಗನಾಗಿ ಹಿಮಾಲಯ ಪರ್ವತಗಳ ಆರೋಹಣ ಮಾಡುವುದುಂಟು. ಆದರೂ ಊರಬದಿಯ ಸಣ್ಣಬೆಟ್ಟಗಳು ಇಷ್ಟವಾಗುತ್ತವೆ. ಅವನ್ನೇರಿ ಚಿತ್ರಬರೆದಂತೆ ಸುತ್ತ ಕಾಣುವ ಊರು ಬಯಲು ಹೊಲಗದ್ದೆಗಳನ್ನು ಗಮನಿಸುವೆ. ಆ ದೃಶ್ಯ ಅಮ್ಮ ಪುರುಸೊತ್ತಿನಲ್ಲಿ ಹಾಕುತ್ತಿದ್ದ ಕಸೂತಿಯನ್ನು ಹೋಲುತ್ತದೆ. ನಮ್ಮೂರ ಸಂತೆಯಲ್ಲಿ ಮಣಿಸರದವರನ್ನು ಯಾರೂ ಲೆಕ್ಕಿಸುತ್ತಿರಲಿಲ್ಲ. ಅವರು ಒಂದು ಬ್ಯಾಗಿನಲ್ಲಿ ತುಂಬಬಹುದಾದ ಸರಕನ್ನು ಚಾಪೆಯಗಲ ಹರಡಿ ಕೂತಿರುತಿದ್ದರು. ಅಗ್ಗದ ದೀರ್ಘಕಾಲ ಬಾಳದ ಪಿನ್ನು ಟೇಪು ಬಾಚಣಿಗೆ ಬೇಕಾದ ಮಹಿಳೆಯರು ಅವರ ಎದುರುಕೂತು, ನಾಕಾಣೆ ಬೆಲೆಬಾಳುವ ಅವನ್ನು ರತ್ನಪರೀಕ್ಷಕರ ಗಾಂಭೀರ್ಯದಲ್ಲಿ ಪರಿಶೀಲಿಸಿ ಖರೀದಿಸುತ್ತಿದ್ದರು. ನನ್ನದು ಮಣಿಸರದವರ ರೀತಿಯ ಬರೆಹಗಾರಿಕೆ ಇದ್ದೀತು.
ನನ್ನ ಬರೆಹವನ್ನು ಮಿತ್ರರೊಬ್ಬರು, ಓದುಗರನ್ನು ದಿಗ್ಭ್ರಮೆಗೊಳಿಸಬಲ್ಲ ದಟ್ಟಕಾಡಲ್ಲ. ನೀಟಾಗಿ ರೂಪಿಸಿದ ಉದ್ಯಾನವನ ಎಂದು ಗುರುತಿಸಿದ್ದುಂಟು. ಮನಸಾರೆ ಒಪ್ಪಿದೆ. ಪ್ರತಿನಾಡಿಗೂ ಗಿಡಮರ ಖಗಮೃಗ ಬೆಟ್ಟ ಕಣಿವೆ ನದಿಗಳಿಂದ ಕೂಡಿದ ಕಾನನದ ಅಗತ್ಯವಿದೆ. ಆದರೆ ಪಟ್ಟಣಗಳಲ್ಲಿ ನಾಗರಿಕರಿಗೆ ವಾಯುವಿಹಾರ, ಮನೆಯ ವಿಷಯ ಹರಟಿಕೊಂಡು ಕೂರಲು, ಮಾಡಲು ಪಾರ್ಕುಗಳ ಜರೂತ್ತೂ ಇದೆ. ಹಿತ್ತಲಜಗತ್ತು ನನಗೆ ಪ್ರಿಯವಾಗಿರಲು, ಅದರ ಕಿರಿಯಾಕಾರವೂ ಕಾರಣವಿದ್ದೀತು. ಬಹುಶಃ ನಾನು ದಿವಾನಖಾನೆಯಲ್ಲಿ ಹಾಸುವ ದೊಡ್ಡ ರತ್ನಗಂಬಳಿ ರಚಿಸಲಾರೆ. ಆದರೆ ನೆಗಡಿಯಾದಾಗ ಮುಖ ಬೆವರಿದಾಗ ತೊಡೆದುಕೊಳ್ಳಲು ಕರವಸ್ತ್ರಗಳನ್ನು ನೇಯಲು ಬಯಸುತ್ತೇನೆ. ಗುಜರಿಯೊಳಗಿನ ಸಾಮಗ್ರಿಯಿಂದ ಭವ್ಯವಾದ ಐಫೆಲ್ ಟವರನ್ನು ಕಟ್ಟಲಾಗದು, ದಿಟ. ಆದರೆ ಕಳೆಕೀಳುವ ಕುರ್ಪಿ ರೊಟ್ಟಿಚುಂಚಕ ಮುದ್ದೆಕೆರೆವ ಬಿಲ್ಲೆ ಮಾಡಬಹುದು. ಗಂಟೆಗಟ್ಟಲೆ ಖಯಾಲ್ ಗಾಯನ ಮಾಡಲು ಬೇಕಾದ ಕಂಠತ್ರಾಣ-ರಿಯಾಜ್ ಇಲ್ಲದವರು, ಅಪಸ್ವರ ಹೊರಡಿಸುವುದಕ್ಕೆ ಬದಲಾಗಿ, ಮಿಶ್ರರಾಗಗಳಲ್ಲಿ ಮಂದ್ರಸ್ವರದಲ್ಲಿ ಲಹರಿಯಲ್ಲಿ ಹರಿಯುವ ಗಜಲನ್ನೊ ಠುಮ್ರಿಯನ್ನೊ ಗುನುಗುವುದು ಉಚಿತ.
ಕುಮಾರವ್ಯಾಸ ಹಲಗೆ ಬಳಪವ ಹಿಡಿಯದೊಂದಗ್ಗಳಿಕೆಯಲ್ಲಿ ಬರೆದವನು. ಅವನ ಪರಂಪರೆಗೆ ಸೇರಿದ ಕೆಲವರು ಒಮ್ಮೆ ಮಾತ್ರ ಬರೆದುಬಿಡುತ್ತಾರೆ. ಅವರನ್ನು ನೋಡಿದರೆ ಹೊಟ್ಟೆ ಉರಿಯುತ್ತದೆ. ನನ್ನದು ಬರೆದು, ಬರೆದಿದ್ದನ್ನು ಹೊಡೆದುಹಾಕಿ, ಕಿತ್ತಿದ್ದನ್ನು ಮತ್ತೆಲ್ಲೊ ಸೇರಿಸುವ ವಿಧಾನ. ಕಂಪ್ಯೂಟರ್ ಬಂದ ಬಳಿಕ ಈ ಕೆತ್ತೆಬಜಿ ಸುಲಭವಾಗಿದೆ. ನಾನು ಲೇಖನಿ ಹಿಡಿದು ಹಸ್ತಪ್ರತಿ ಸಿದ್ಧಪಡಿಸಿದ ಕೊನೆಯ ಪುಸ್ತಕ `ಕರ್ನಾಟಕದ ಸೂಫಿಗಳು’. ಅದನ್ನು ಈಚೆಗೆ ನೋಡಿದೆ: ಫಕೀರರ ಗುದಡಿಯಂತಿದೆ. ಅನುಭವದ ತುಣುಕುಗಳನ್ನು ಮಾತ್ರವಲ್ಲ, ಶಬ್ದಗಳನ್ನೂ ಹೆಕ್ಕಿ, ಜೋಡಿಸಿ, ಹೊಲಿಯಲು ಯತ್ನಿಸುತ್ತೇನೆ-ಬಳಕೆದಪ್ಪಿದ ಗ್ರಾಮೀಣ ಶಬ್ದಗಳು, ಹಳಗನ್ನಡದ ಪದಗಳು, ಕನ್ನಡದ್ದೇ ಆಗಿರುವ ಉರ್ದುಫಾರಸಿ ಶಬ್ದಗಳು, ಬೇರೆಬೇರೆ ಕಸುಬುದಾರ ಪರಿಭಾಷೆಗಳು ಇತ್ಯಾದಿ. ನನ್ನ ಪಾಲಿಗೆ ಬರೆಹದ ಕಸುಬು, ಕೌದಿಹೊಲಿಕೆ, ನೇಕಾರಿಕೆ, ಕಮ್ಮಾರಿಕೆ, ಚಮ್ಮಾರಿಕೆಗಿಂತ ಬಹಳ ಭಿನ್ನವಲ್ಲ.
ಓದುಗನಾಗಿ ಮಾತ್ರ, ನಾನು ದೊಡ್ಡ ಕಲಾವಿದರ ಹೆಗ್ಗಾಡು, ಸಾಗರ ಪರ್ವತಗಳಂತಹ ಬರೆಹ-ಸಂಗೀತ-ಸಿನಿಮಾಗಳಲ್ಲಿ ಅಜ್ಞಾತನಾಗಿ ಕಳೆದುಹೋಗ ಬಯಸುತ್ತೇನೆ. ಅವರ ಸೃಜನಶೀಲತೆ ಕುಶಲತೆ ಕುಸುರಿಗೆಲಸದ ತಾಳ್ಮೆ ಜಾಣ್ಮೆಗಳನ್ನು ಆಸ್ವಾದಿಸುತೇನೆ. ಲಯ ಮತ್ತು ಅರ್ಥಗೆಡದಂತೆ ಬಳ್ಳಿಯಂತಹ ವಾಕ್ಯಗಳನ್ನು ಕಟ್ಟುವ ಕುವೆಂಪು ಗದ್ಯ; ಡಿವಿಜಿಯವರ ವ್ಯಕ್ತಿಚಿತ್ರಗಳಲ್ಲಿರುವ ಸರಳ ನೇರ ಆಪ್ತ ಗದ್ಯಶೈಲಿ; ಆಳವಾದ ಚಿಂತನೆಯಿರದ ಹಾಮಾನಾ ಅವರ ಹ್ರಸ್ವವಾಕ್ಯಗಳು; ಜಿ. ರಾಜಶೇಖರ ಆಳವಾದ ಚಿಂತನೆ ಮತ್ತು ತಾತ್ವಿಕ ಖಚಿತತೆ; ಲಂಕೇಶರ ಸರಳತೆ ಮತ್ತು ವೈರುಧ್ಯಗಳನ್ನು ಏಕಕಾಲಕ್ಕೆ ಹಿಡಿವ ದಾರ್ಶನಿಕತೆ; ಡಿ.ಆರ್. ನಾಗರಾಜರ ಪಾಂಡಿತ್ಯ ಮತ್ತು ಪ್ರಮೇಯ ಕಟ್ಟುವ ಕುಶಲತೆ; ನವರತ್ನ ರಾಮರಾಯರ ಆಕರ್ಷಕ ನಿರೂಪಣೆ; ಬೊಳುವಾರರ ವ್ಯಂಗ್ಯಪ್ರಜ್ಞೆಯಿಂದ ಹೊಸದನಿ ಹುಟ್ಟಿಸುವ ಜಾಣ್ಮೆ; ಸವೆದ ಪದವನ್ನು ಸಂದರ್ಭಾನುಸಾರ ಮುರಿದು ಹೊಸಾರ್ಥ ಬೆಳಗಿಸುವ ಚಂಪಾರ ವಿಡಂಬನೆ; ಮೂರ್ತಿರಾಯರಲ್ಲಿ ಹರಿವ ಆಪ್ತತೆ; ಗಂಗಾಧರ ಚಿತ್ತಾಲರ ಮೃತ್ಯುಕವಿತೆಗಳಲ್ಲಿರುವ ಉತ್ಕಟತೆ, ಶಂಬಾರ ಜಿಜ್ಞಾಸಾ ಶೈಲಿ- ಕರ್ನಾಟಕದ ವಾಙ್ಮಯ ಬಯಲಿನಲ್ಲಿ ಎಷ್ಟೊಂದು ಹೊಳೆಗಳು. ಅವುಗಳಲ್ಲಿ ಮೀಯುತ್ತೇನೆ. ಬೊಗಸೆಯಿಂದ ಹೆಕ್ಕಿ ಕುಡಿಯುತ್ತೇನೆ. ಹೊಳೆಯ ಸಂಗ ಮಾಡಿದವರು ಸ್ವತಃ ಹೊಳೆಯಾಗಬೇಕಿಲ್ಲ.
ಇಷ್ಟಕ್ಕೂ ಲೇಖಕರು ತಾವೇಕೆ ಮತ್ತು ಹೇಗೆ ಬರೆಯುತ್ತೇವೆ ಎಂದು ಏನೇ ಹೇಳಿಕೊಂಡರೂ, ಅದು ಏನಾಗಿದೆ ಎಂಬುದನ್ನು ಕೊನೆಗೂ ಹೇಳಬೇಕಾದವರು ಓದುಗರು.

andolanait

Recent Posts

ಓದುಗರ ಪತ್ರ: ಕೆರೆ, ಕಟ್ಟೆಗಳ ಹೂಳೆತ್ತಿಸಿ

ಮಳೆಗಾಲದಲ್ಲಿ ಕೆರೆ ಕಟ್ಟೆಗಳು ತುಂಬಿ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ಅನಾಹುತಗಳೇ ಸೃಷ್ಟಿಯಾಗುತ್ತವೆ. ನಗರ ಪ್ರದೇಶಗಳಲ್ಲಿ ಇರುವ ಕೆರೆಗಳ ಹೂಳೆತ್ತಿ…

15 mins ago

ಓದುಗರ ಪತ್ರ: ಪ್ರಜಾಪ್ರಭುತ್ವ ಎಂಬ ಮೃಷ್ಟಾನ್ನ ಭೋಜನ ಶಾಲೆ!

ಭ್ರಷ್ಟಾಚಾರವೇ ಇಲ್ಲದ ವ್ಯವಸ್ಥೆ ನಿರ್ಮಾಣ ಮಾಡುವುದು ಇನ್ನು ತುಂಬಾ ಕಷ್ಟಕರವಾದ ಕೆಲಸ ಎಂದು ನಿವೃತ್ತ ಲೋಕಾಯುಕ್ತ ನ್ಯಾಯ ಮೂರ್ತಿ ಎನ್.ಸಂತೋಷ್…

17 mins ago

ಓದುಗರ ಪತ್ರ: ಡಿಜಿಟಲ್ ತಂತ್ರಜ್ಞಾನ ಸದ್ಬಳಕೆಯಾಗಲಿ

ಇಂದು ಡಿಜಿಟಲ್ ತಂತ್ರಜ್ಞಾನ ಹೆಚ್ಚಾಗಿ ಬಳಕೆಯಾಗುತ್ತಿದ್ದು, ಇದರಿಂದಾಗಿ ಶಿಕ್ಷಣ ಕ್ಷೇತ್ರದಲ್ಲಿ ದೊಡ್ಡ ಬದಲಾವಣೆ ಕಂಡುಬಂದಿದೆ. ಆನ್ಲೈನ್ ತರಗತಿಗಳು, ಯೂಟ್ಯೂಬ್ ಶಿಕ್ಷಣ…

19 mins ago

ಬಾ.ನಾ.ಸುಬ್ರಹ್ಮಣ್ಯ ಅವರ ವಾರದ ಅಂಕಣ: ಪೈರೆಸಿ ವಿರುದ್ಧ ಚಿತ್ರೋದ್ಯಮ ಯುದ್ಧ ಸನ್ನದ್ಧ!?

ವೈಡ್‌ ಆಂಗಲ್‌  ಬಾ.ನಾ.ಸುಬ್ರಹ್ಮಣ್ಯ  ೨೦೨೬ರ ಆರಂಭದ ವೇಳೆ ಹಲವು ಬೆಳವಣಿಗೆಗಳು. ೨೦೨೫ರ ಕೊನೆಯ ಶುಕ್ರವಾರ ತೆರೆ ಕಂಡ ೨ ಚಿತ್ರಗಳ…

21 mins ago

ಸಿದ್ದಾಪುರ ವ್ಯಾಪ್ತಿಯಲ್ಲಿ ಹೆಚ್ಚುತ್ತಿರುವ ಅಪರಾಧ ಪ್ರಕರಣ

ಕೃಷ್ಣ ಸಿದ್ದಾಪುರ ಸಿಬ್ಬಂದಿ ಕೊರತೆ, ಜನಸಂಖ್ಯೆ ಆಧಾರದಲ್ಲಿ ಹೊಸ ಠಾಣೆ ಸ್ಥಾಪನೆ, ಹೆಚ್ಚಿನ ಸಿಬ್ಬಂದಿ ನಿಯೋಜನೆಗೆ ಆಗ್ರಹ  ಸಿದ್ದಾಪುರ:ಸಿದ್ದಾಪುರ ಪೊಲೀಸ್…

27 mins ago

ಮೈಮುಲ್ ಆಡಳಿತ ಮಂಡಳಿ ಚುನಾವಣೆಯತ್ತ ಎಲ್ಲರ ಚಿತ್ತ

ಕೆ.ಬಿ.ರಮೇಶನಾಯಕ ಮೈಸೂರು: ಮೈಸೂರು ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ(ಮೈಮುಲ್) ಆಡಳಿತ ಮಂಡಳಿಯ ಐದು ವರ್ಷಗಳ ಆಡಳಿತ ಮುಂದಿನ…

32 mins ago