ಎಡಿಟೋರಿಯಲ್

ತಾಯಿ ಹೃದಯದ ಡಾ.ಜೆ.ಕಮಲ ರಾಮನ್

ಡಾ.ಕೆ. ಸೌಭಾಗ್ಯವತಿ

ಮೈಸೂರು ನಗರದ ಖ್ಯಾತ ಸ್ತ್ರೀರೋಗ ತಜ್ಞರಾದ ಡಾ.ಜೆ.ಕಮಲ ರಾಮನ್ ನಿಧನರಾದರು ಎಂಬ ಸುದ್ದಿಯನ್ನು ಕೇಳಿ ಮನಸ್ಸಿಗೆ ಬಹಳ ಬೇಸರವಾಯಿತು. ಅವರು ಬಹೂಪಯೋಗಿ ಕಲ್ಪವೃಕ್ಷದ ಹಾಗೆ. ತಾವು ಇರುವಷ್ಟು ದಿನ ತಮ್ಮ ಕೈಲಾದ ಸಮಾಜ ಸೇವೆಯನ್ನು ನಿರಂತರವಾಗಿ, ಸುದೀರ್ಘವಾಗಿ ಮಾಡುತ್ತಾ ಬಂದವರು. ಸುಮಾರು ೧೯೬೫ -೬೬ ಆಸುಪಾಸಿನಲ್ಲಿ ಕೃಷ್ಣಮೂರ್ತಿಪುರಂನಲ್ಲಿ ಕಮಲ ರಾಮನ್ ಕ್ಲಿನಿಕ್ ಎಂಬ ಆಸ್ಪತ್ರೆಯನ್ನು ಶುರು ಮಾಡಿದರು. ಇವರು ಬಹಳ ಚಿಕ್ಕವಯಸ್ಸಿನಲ್ಲಿ ವೈದ್ಯ ವೃತ್ತಿಗೆ ಬಂದವರು. ಕೃಷ್ಣಮೂರ್ತಿಪುರಂ ಅಶೋಕಪುರಂಗೆ ಬಹಳ ಹತ್ತಿರವಿತ್ತು. ಹಾಗಾಗಿ ಅಲ್ಲಿಯ ಜನರೆಲ್ಲ ಕಮಲ ರಾಮನ್ ಅವರ ಕ್ಲಿನಿಕ್‌ಗೆ ಬರುತ್ತಿದ್ದರು. ಆ ಕ್ಲಿನಿಕ್ ಬೆಳೆಯಲು ಅಶೋಕಪುರಂ ಜನರ ಕೊಡುಗೆ ಅಪಾರವಾಗಿದೆ. ಕಮಲ ರಾಮನ್ ಬಡಜನರ ಸೇವೆಗಾಗಿ ತಮ್ಮ ಇಡೀ ಬದುಕನ್ನೇ ಮುಡುಪಾಗಿಟ್ಟರು.
ಅಶೋಕಪುರಂ ಕಮಲ ರಾಮನ್ ಅವರ ಪ್ರಾಯೋಗಿಕ ವೇದಿಕೆಯಾಗಿತ್ತು. ಅವರ ಪತಿ ಡಾ.ಜೆ.ಎಸ್.ರಾಮನ್ ಕೂಡ ವೈದ್ಯರು. ಅಶೋಕಪುರಂನಲ್ಲಿದ್ದ ಬಡ ಜನತೆ ಕಮಲ ರಾಮನ್ ಅವರನ್ನು ದೇವರಂತೆ ಕಾಣುತ್ತಿದ್ದರು. ಅದಕ್ಕೆ ಕಾರಣವೂ ಇಲ್ಲದಿಲ್ಲ. ಬಡವರ ಬಳಿ ಅವರೆಂದೂ ದುಡ್ಡು ಪಡೆದು ಚಿಕಿತ್ಸೆಯನ್ನು ಕೊಡುತ್ತಿರಲಿಲ್ಲ. ಇತರರಿಗೂ ಅತಿ ಕಡಿಮೆ ದರದಲ್ಲಿ ಚಿಕಿತ್ಸೆ ಕೊಡುತ್ತಿದ್ದರು.
ಕಮಲ ರಾಮನ್ ಅವರ ಆಸ್ಪತ್ರೆಯಲ್ಲಿ ನನ್ನ ತಾಯಿ ಹೆರಿಗೆಗಾಗಿ ದಾಖಲಾಗಿದ್ದರಂತೆ. ಹೆರಿಗೆ ತುಂಬಾ ಕಷ್ಟವಾಗಿ ಅತಿಯಾದ ನೋವು ಅನುಭವಿಸುವಂತಾಗಿತ್ತು. ಆಗ ನನ್ನ ತಾಯಿಗೆ ಕಮಲ ರಾಮನ್ ಅವರು ಪ್ರೀತಿಯಿಂದ ಆತ್ಮಸ್ಥೈರ್ಯ ತುಂಬಿ, ಸರಾಗವಾಗಿ ಹೆರಿಗೆ ಮಾಡಿಸಿದರಂತೆ. ಆಗ ಹುಟ್ಟಿದ್ದೇ ನಾನು. ಆದರೆ, ನನ್ನ ತೂಕ ಕಡಿಮೆಯಾಗಿದ್ದು, ಆ ಬಗ್ಗೆ ನಮ್ಮ ತಾಯಿ ಆತಂಕಪಟ್ಟಾಗ, ಏನು ಯೋಚಿಸಬೇಡಿ ಮಗು ಚೆನ್ನಾಗಿ ಬೆಳವಣಿಗೆ ಆಗುತ್ತದೆ. ಅವಳಿಗೆ ಒಳ್ಳೆಯ ಸಂಸ್ಕಾರ ಕಲಿಸಿ, ಸದ್ಗುಣಿಯನ್ನಾಗಿ ಮಾಡಿ ಎಂದು ಹೇಳಿ ಕಳುಹಿಸಿದರಂತೆ.
ನನ್ನ ಅಕ್ಕನ ಇಬ್ಬರು ಮಕ್ಕಳು ಅದೇ ಆಸ್ಪತ್ರೆಯಲ್ಲಿ ಹುಟ್ಟಿದ್ದರು. ಆ ಸಂದರ್ಭದಲ್ಲಿ ನನಗೆ ಬಹುಶಃ ೧೦ ವರ್ಷ ವಯಸ್ಸಿದ್ದಿರಬಹುದು. ನನ್ನ ತಾಯಿ ವೈದ್ಯರನ್ನು ಕಂಡೊಡನೆ, ನನಗೆ ಅವರ ಕಾಲಿಗೆ ಬಿದ್ದು ಆಶೀರ್ವಾದ ಪಡೆಯಲು ಸೂಚಿಸಿದರು. ಆದರೆ ಕಮಲ ರಾಮನ್ ಅವರು ನಾನು ಕಾಲಿಗೆ ಬೀಳುವುದನ್ನು ಒಪ್ಪಲಿಲ್ಲ. ಬದಲಿಗೆ ಕೆನ್ನೆ ಹಿಂಡಿ, ತಲೆನೇವರಿಸಿ ಚೆನ್ನಾಗಿ ಓದು ಎಂದು ಹರಸಿದರು.
ಕಮಲ ರಾಮನ್ ಸಹಜ ಹೆರಿಗೆಗೆ ಪ್ರಸಿದ್ಧರಾಗಿದ್ದರು. ಸಿಸೇರಿಯನ್ ಎಂಬ ಪದದ ಪರಿಚಯವೇ ನಮಗಿರಲಿಲ್ಲ. ಅವರ ಆಸ್ಪತ್ರೆಗೆ ಕಾಲಿಟ್ಟು ಹೆರಿಗೆ ನೋವು ಬಂದ ಹೆಂಗಸಿನ ಬಳಿ ಅವರೇ ಖುದ್ದಾಗಿ ಬಂದು ತಲೆನೇವರಿಸಿ, ಧೈರ್ಯ ಹೇಳಿ, ಸಾಂತ್ವನ ಹೇಳಿ ಹೆರಿಗೆ ವಾರ್ಡಿಗೆ ಕರೆದುಕೊಂಡು ಹೋಗಿ ಹೆರಿಗೆ ಮಾಡಿಸುತ್ತಿದ್ದರು. ಅವರ ಆತ್ಮೀಯತೆ ಅವಿಸ್ಮರಣೀಯವಾಗಿತ್ತು. ಜಾತಿ, ಧರ್ಮ, ಮತ ಭೇದವಿಲ್ಲದೆ ಎಲ್ಲ ಧರ್ಮಗಳ ಜನರನ್ನೂ ತುಂಬು ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದರು. ಆ ಸಂದರ್ಭದಲ್ಲಿ ನಮಗೆ ಬಸವಣ್ಣನವರ
‘ದಯವೇ ಧರ್ಮದ ಮೂಲವಯ್ಯ
ದಯವೆ ಬೇಕು ಸಕಲ ಜೀವಿಗಳಲ್ಲಿ ..’ ಎಂಬ ವಚನ ನೆನಪಾಗುತ್ತಿತ್ತು.
ಒಬ್ಬ ವೈದ್ಯೆ ಕಾಯಾ, ವಾಚಾ, ಮನಸಾ ತಮ್ಮ ವೃತ್ತಿಯಲ್ಲಿ ಪ್ರಾಮಾಣಿಕವಾಗಿ ತಮ್ಮನ್ನು ತೊಡಗಿಸಿಕೊಂಡರೆ, ಇಡೀ ಪರಿಸರ ಎಷ್ಟು ಆರೋಗ್ಯದಿಂದ ಇರುತ್ತದೆ ಎಂಬುದಕ್ಕೆ ಕಮಲ ರಾಮನ್ ಅವರು ಅತ್ಯುತ್ತಮ ಉದಾಹರಣೆಯಾಗಿದ್ದಾರೆ. ನಗುಮುಖದಿಂದ ಅವರು ಜನರನ್ನು ಮಾತನಾಡಿಸುತ್ತಿದ್ದ ರೀತಿ ಅನನ್ಯವಾದದ್ದು. ಅಶೋಕಪುರಂ ಜನರಿಗೆ ಅವರೆಂದರೆ ಅಚ್ಚುಮೆಚ್ಚು.
ಕಮಲ ರಾಮನ್ ಅವರು ನಾನು ಓದಿದ ಶಾಲೆ ವನಿತಾ ಸದನದ ಅಧ್ಯಕ್ಷರಾಗಿದ್ದರು. ಆ ಸಂದರ್ಭದಲ್ಲಿ ಅಲ್ಲಿಗೆ ಬಂದು ಮಕ್ಕಳನ್ನು ಕಂಡು ಪ್ರೀತಿಯಿಂದ ಮಾತನಾಡಿಸಿ ಸಂತೋಷಪಡುತ್ತಿದ್ದರು.
ಮೈಸೂರು ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಸದಸ್ಯರಾಗಿದ್ದಾಗಲೂ, ಹಲವಾರು ಜನೋಪಯೋಗಿ ಕಾರ್ಯಗಳನ್ನು ಮಾಡಿದ್ದರು. ಹಣ ಸಂಪಾದನೆ, ಪ್ರಚಾರಕ್ಕಾಗಿ ಅವರು ಎಂದೂ ಆಸೆ ಪಟ್ಟವರಲ್ಲ. ತಮ್ಮ ಕಾಯಕವನ್ನು ಬಹಳ ನಿಷ್ಠೆಯಿಂದ ಮಾಡುತ್ತಾ ಕ್ರಿಯಾಶೀಲರಾಗಿದ್ದು, ಹೃದಯವಂತರಾಗಿದ್ದರು. ಪ್ರಸ್ತುತ ಕಾಲಘಟ್ಟದಲ್ಲಿ ಅವರಂತಹ ವೈದ್ಯರ ಸಂಖ್ಯೆ ಹೆಚ್ಚಾಗಬೇಕಾಗಿದೆ.
ಆ ಕಾಲದಲ್ಲಿ ಇಡೀ ಮೈಸೂರಿನಲ್ಲಿ ಉತ್ತಮ ಸ್ತ್ರೀ ರೋಗ ತಜ್ಞೆ ಎಂಬ ಹೆಸರು ಅವರಿಗಿತ್ತು. ಬೇರೆ ಊರುಗಳಿಂದ ಜನರು ಬಂದು ಅವರ ಸೇವೆಯನ್ನು ಪಡೆಯುತ್ತಿದ್ದರು. ಪುಟ್ಟಮನೆಯಲ್ಲಿ ಶುರು ಮಾಡಿದ ಆಸ್ಪತ್ರೆಯು ಈಗ ವಿಸ್ತಾರವಾಗಿ ಬೆಳೆದಿದೆ. ಅದಕ್ಕೆ ಕಾರಣ ಅವರೊಂದಿಗೆ ಕೆಲಸ ಮಾಡಿದ ವೈದ್ಯರು, ಸಿಬ್ಬಂದಿ ವರ್ಗ. ಅವರಷ್ಟೇ ಪ್ರಾಮಾಣಿಕವಾಗಿ ಕೆಲಸವನ್ನು ನಿರ್ವಹಿಸುತ್ತಿದ್ದಾರೆ. ವೈದ್ಯರೆಂದರೆ ಹೀಗಿರಬೇಕು ಎಂಬ ಭೂಮಿಕೆಗೆ ಅವರು ಜ್ವಲಂತ ಸಾಕ್ಷಿಯಾಗಿದ್ದಾರೆ. ಇತ್ತೀಚಿನ ದಿನಗಳಲ್ಲಿ ಬಹುತೇಕ ವೈದ್ಯರ ಜನ ವಿರೋಧಿ ವರ್ತನೆ ಗಮನಿಸಿದರೆ, ನಮಗೆ ಕಮಲ ರಾಮನ್ ಅವರು ವಿಭಿನ್ನವಾಗಿ ಮಾನವತೆಯ ಶಿಖರವಾಗಿ ಕಾಣುತ್ತಿದ್ದರು. ಅವರೀಗ ನಮ್ಮೊಡನಿಲ್ಲ. ಆದರೆ ಅವರ ಬದುಕು ಯುವ ವೈದ್ಯರಿಗೆ ಆದರ್ಶಪ್ರಾಯವಾಗಿದೆ.

andolanait

Share
Published by
andolanait

Recent Posts

ಲೋಕಾಯುಕ್ತ ಬಲೆಗೆ ಬಿದ್ದ ಪಿಡಿಒ

ಮೈಸೂರು: ಇ-ಸ್ವತ್ತು ಮಾಡಿ ಕೊಡಲು ಅರ್ಜಿದಾರರಿಗೆ ಹಣ ನೀಡುವಂತೆ ಒತ್ತಾಯ ಮಾಡಿದ ಗ್ರಾಮ ಪಂಚಾಯಿತಿ ಪಿಡಿಒ ಕುಳ್ಳೇಗೌಡ ನಾಲ್ಕು ಸಾವಿರ…

8 mins ago

ಅರ್ಥಪೂರ್ಣವಾಗಿ ಕನ್ನಡ ರಾಜ್ಯೋತ್ಸವ ಆಚರಣೆ – ಡಾ. ಪಿ ಶಿವರಾಜ್

ಮೈಸೂರು: ಕಳೆದ ಬಾರಿಯಂತೆ ಈ ಬಾರಿಯೂ ಅರ್ಥಪೂರ್ಣ ಹಾಗೂ ಅದ್ದೂರಿಯಾಗಿ ಕನ್ನಡ ರಾಜ್ಯೋತ್ಸವ ಆಚರಣೆ ಮಾಡಲಾಗುವುದು ಎಂದು ಅಪರ ಜಿಲ್ಲಾಧಿಕಾರಿ…

35 mins ago

ನಗರದ ಆರೋಗ್ಯ ಕಾಪಾಡುವ ಪೌರಕಾರ್ಮಿಕರ ಆರೋಗ್ಯವೂ ಮುಖ್ಯ: ಜಿ ಟಿ ದೇವೇಗೌಡ

ಮೈಸೂರು: ನಗರವನ್ನು ಸ್ವಚ್ಛಗೊಳಿಸುವ ಮೂಲಕ ಜನರ ಆರೋಗ್ಯ ಕಾಪಾಡುವ ಪೌರಕಾರ್ಮಿಕರ ಆರೋಗ್ಯವೂ ಮುಖ್ಯ ವಾಗಿದ್ದು, ಅವರು ಈ ವಿಷಯದಲ್ಲಿ ನಿರ್ಲಕ್ಷ್ಯ…

2 hours ago

ಹನೂರು: ಗುಂಡಿಮಯವಾದ ರಸ್ತೆ, ಸಾಮಾಜಿಕ ಜಾಲತಾಣ ಮೂಲಕ ಯುವಕ ವ್ಯಂಗ್ಯ

ಹನೂರು: ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಅತಿ ದೊಡ್ಡ ಗ್ರಾಮ ಪಂಚಾಯಿತಿ ಎಂದು ಪ್ರಸಿದ್ಧಿ ಪಡೆದಿರುವ ಮಾರ್ಟಳ್ಳಿ ಗ್ರಾಮ ಪಂಚಾಯಿತಿ ಮುಖ್ಯ…

2 hours ago

ಇಶಾ ಫೌಂಡೇಶನ್‌ ವಿರುದ್ಧದ ಪ್ರಕರಣ ವಜಾಗೊಳಿಸಿದ ಸುಪ್ರೀಂಕೋರ್ಟ್‌

ಹೊಸದಿಲ್ಲಿ: ತಮಿಳುನಾಡಿನ ಕೊಯಮತ್ತೂರಿನಲ್ಲಿರುವ ಸದ್ಗುರು ಜಗ್ಗಿ ವಾಸುದೇವ್‌ ಅವರ ಆಶ್ರಮ ಸೇರಲು ತನ್ನ ಇಬ್ಬರು ಹೆಣ್ಣುಮಕ್ಕಳನ್ನು ಬ್ರೈನ್‌ವಾಶ್‌ ಮಾಡಲಾಗಿದೆ ಎಂಬ…

3 hours ago

ಮಡಿಕೇರಿ: ಮಗನಿಂದಲೇ ತಂದೆಯ ಹತ್ಯೆ..

ಮಡಿಕೇರಿ: ಮಗನಿಂದಲೇ ತಂದೆ ಹತ್ಯೆಯಾದ ಘಟನೆ ಶ್ರೀಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯ ಚಿಕ್ಕಮಂಡೂರು ಗ್ರಾಮದಲ್ಲಿ ನಡೆದಿದೆ. ಸಿ ಎನ್ ನಾಣಯ್ಯ…

4 hours ago