ಎಡಿಟೋರಿಯಲ್

ಸಂಪ್ರದಾಯ, ಪಾರದರ್ಶಕತೆಯಿಂದ ನಡೆಯಲಿ ಮಡಿಕೇರಿ ದಸರಾ!

ಪ್ರಕೃತಿ ವಿಕೋಪ, ಕೊರೊನಾದಿಂದ ಸಂಕಷ್ಟದಲ್ಲಿದ್ದ ಕೊಡಗಿನ ಜನತೆ ಈಗ ಚೇತರಿಸಿಕೊಳ್ಳುತ್ತಿದ್ದಾರೆ. ಪ್ರವಾಸೋದ್ಯಮ ಕೂಡ ಉತ್ತಮ ಲಾಭದಲ್ಲಿದೆ. ಈ ನಡುವೆ ೪ ವರ್ಷಗಳ ಬಳಿಕ ಐತಿಹಾಸಿಕ ಮಡಿಕೇರಿ ದಸರಾದ ಅದ್ಧೂರಿ ಆಚರಣೆಗೆ ಸಿದ್ಧತೆಗಳು ನಡೆಯುತ್ತಿವೆ. ಚೇತರಿಕೆಯಲ್ಲಿರುವ ಪ್ರವಾಸೋದ್ಯಮಕ್ಕೆ ಈ ಬಾರಿಯ ಅದ್ಧೂರಿ ದಸರಾ ಮತ್ತಷ್ಟು ಟಾನಿಕ್ ಒದಗಿಸಲಿದೆ. ಆದರೆ, ದಸರಾಕ್ಕೆ ಮಂಜೂರಾಗಿರುವ ಅನುದಾನದ ಸಮರ್ಪಕ ಬಳಕೆ ಆಗಬೇಕಿದೆ.

೨೦೧೮ರಿಂದ ಸತತ ಪ್ರಕೃತಿ ವಿಕೋಪ ಹಾಗೂ ಕಳೆದ ೨ ವರ್ಷಗಳ ಕೊರೊನಾ ಕಾರಣಗಳಿಂದ ಕೊಡಗಿನ ಪ್ರವಾಸೋದ್ಯಮ ನಷ್ಟ ಅನುಭವಿಸುವಂತಾಗಿತ್ತು. ಆದರೆ, ಈ ಬಾರಿ ಬೇಸಿಗೆ ರಜೆಯಲ್ಲಿಯೇ ಪ್ರವಾಸೋದ್ಯಮ ಚೇತರಿಕೆ ಕಂಡಿತ್ತು. ಮಳೆಯಿಂದ ಪ್ರವಾಸಿಗರು ಜಿಲ್ಲೆಯತ್ತ ಆಗಮಿಸಲು ಕೊಂಚ ಹಿಂದೇಟು ಹಾಕಿದರೂ ಪ್ರವಾಸೋದ್ಯಮ ಲಾಭದಲ್ಲಿಯೇ ಮುಂದುವರಿದಿದೆ. ಈ ನಡುವೆ ಈ ಬಾರಿ ಅದ್ಧೂರಿ ದಸರಾ ಆಚರಣೆಗೆ ಸಿದ್ಧತೆ ನಡೆದಿರುವುದು ಪ್ರವಾಸೋದ್ಯಮ ಅವಲಂಬಿತರಲ್ಲಿ ಭರವಸೆ ಮೂಡಿಸಿದೆ.
ಮೈಸೂರಿನಲ್ಲಿ ಹಗಲಿನಲ್ಲಿ ನಡೆಯುವ ಜಂಬೂಸವಾರಿ ಗತ ದಿನಗಳ ರಾಜವೈಭವವನ್ನು ಕಣ್ಮುಂದೆ ತಂದರೆ, ಮಡಿಕೇರಿಯಲ್ಲಿ ರಾತ್ರಿ ನಡೆಯುವ ದಶಮಂಟಪಗಳ ಮೆರವಣಿಗೆ ದೇವಲೋಕಕ್ಕೆ ಕರೆದೊಯ್ಯುತ್ತದೆ. ಹೀಗಾಗಿ ಮೈಸೂರು ದಸರಾ ನೋಡಿಕೊಂಡು ಕೊಡಗಿನತ್ತ ಹೆಚ್ಚಿನ ಪ್ರವಾಸಿಗರು ಭೇಟಿ ನೀಡುತ್ತಾರೆ. ಹೀಗಾಗಿ ಪ್ರವಾಸೋದ್ಯಮಿಗಳೊಂದಿಗೆ ಇತರರೂ ಲಾಭದ ಲೆಕ್ಕಾಚಾರದಲ್ಲಿದ್ದಾರೆ.
ಈ ಬಾರಿ ಮಡಿಕೇರಿ ದಸರಾಕ್ಕೆ ೧ ಕೋಟಿ ರೂ. ಅನುದಾನವನ್ನು ರಾಜ್ಯ ಸರ್ಕಾರ ಮಂಜೂರು ಮಾಡಿರುವುದರಿಂದ ವಿಜೃಂಭಣೆಯಿಂದ ದಸರಾ ಆಚರಿಸಲು ದಸರಾ ಸಮಿತಿ ಹಾಗೂ ದಶಮಂಟಪಗಳ ಸಮಿತಿಗಳು ನಿರ್ಧರಿಸಿವೆ. ಆದರೆ, ಅನುದಾನ ದುರ್ಬಳಕೆಯಾಗದೆ ಸಮರ್ಪಕವಾಗಿ ಬಳಕೆಯಾಗುವಂತೆ ನೋಡಿಕೊಳ್ಳಬೇಕಿದೆ.
ಈ ಹಿಂದೆ ನಡೆದಂತೆ ಮಕ್ಕಳ ದಸರಾ, ಮಹಿಳಾ ದಸರಾ, ಯುವ ದಸರಾಗಳನ್ನು ಅರ್ಥಪೂರ್ಣವಾಗಿ ನಡೆಸಬೇಕಿದೆ.
ಚಲನವಲನಗಳನ್ನೊಳಗೊಂಡ ಕಲಾಕೃತಿಗಳ ಕಥಾ ಹಂದರವನ್ನು ಮಂಟಪಗಳಲ್ಲಿ ಅಳವಡಿಸಿ ನೋಡುಗರನ್ನು ಸೆಳೆಯುವುದು ಮಡಿಕೇರಿ ದಸರಾದ ವಿಶೇಷತೆ. ಹೀಗಾಗಿ ಈ ಬಾರಿಯೂ ಸೊಗಸಾದ ಮಂಟಪಗಳನ್ನು ನಿರ್ಮಿಸುವ ಸಿದ್ಧತೆಯಲ್ಲಿ ದಶ ಮಂಟಪಗಳು ತೊಡಗಿಸಿಕೊಂಡಿವೆ. ಜೊತೆಗೆ ಉತ್ತಮ ಮಂಟಪಗಳಿಗೆ ಪ್ರಶಸ್ತಿ ನೀಡುವುದರಿಂದ ಪಾರದರ್ಶಕ ತೀರ್ಪುಗಾರಿಕೆ ನಡೆಯುವಂತೆ ನೋಡಿಕೊಳ್ಳಬೇಕಿದೆ.
ವಿಜಯದಶಮಿ ದಿನ ರಾತ್ರಿ ಮಡಿಕೇರಿ ನಗರದ ಪ್ರಮುಖ ಬೀದಿಗಳಲ್ಲಿ ನಡೆಯಲಿರುವ ಮಂಟಪಗಳ ಶೋಭಾಯಾತ್ರೆ ವೀಕ್ಷಿಸಲು ಜಿಲ್ಲೆಯ ಜನರೇ ಸಾವಿರಾರು ಸಂಖ್ಯೆಯಲ್ಲಿ ಜಮಾಯಿಸುತ್ತಾರೆ. ಇದರೊಂದಿಗೆ ಪ್ರವಾಸಿಗರು ಆಗಮಿಸಲಿದ್ದು, ಪ್ರವಾಸಿಗರನ್ನು ಅವಲಂಬಿಸಿರುವ ಉದ್ಯಮಗಳಿಗೆ ಲಾಭವಾಗುವ ನಿರೀಕ್ಷೆ ಹೊಂದಲಾಗಿದೆ. ಹೋಟೆಲ್, ಹೋಂಸ್ಟೆ, ರೆಸಾರ್ಟ್,  ಸಾಂಬಾರಪದಾರ್ಥಗಳ ಮಳಿಗೆಗಳು ಸೇರಿದಂತೆ ಕೊಡಗಿನ ಆಟೋ, ಟ್ಯಾಕ್ಸಿ ಮತ್ತಿತರ ಉದ್ಯಮಗಳಿಗೂ ಪ್ರವಾಸಿಗರ ಆಗಮನದಿಂದ ಆರ್ಥಿಕವಾಗಿ ಚೇತರಿಸಿಕೊಳ್ಳಲು ಸಹಕಾರಿಯಾಗಲಿದೆ.
ದಸರಾ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಸೆ.೨೬ರಿಂದ ಮಡಿಕೇರಿಯ ಗಾಂಧಿ ಮೈದಾನದಲ್ಲಿ ನಡೆಸಲು ಸಿದ್ಧತೆ ನಡೆಸಲಾಗಿದೆ. ಈಗಾಗಲೇ ಕಲಾತಂಡಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಸ್ಥಳೀಯ ಕಲಾವಿದರಿಗೆ ಹೆಚ್ಚು ಅವಕಾಶ ಕಲ್ಪಿಸಿದರೆ ಅನುಕೂಲವಾಗಲಿದೆ. ಜೊತೆಗೆ ಸ್ಥಳೀಯ ವಿಭಿನ್ನ ಕಲೆಗಳಿಗೆ ಆದ್ಯತೆ ನೀಡಬೇಕಾಗಿದೆ.
ಕಳೆದ ಬಾರಿ ದಸರಾ ಉತ್ಸವಕ್ಕೆ ೧ ಕೋಟಿ ರೂ. ಅನುದಾನ ಬಿಡುಗಡೆ ಯಾಗಿತ್ತು. ಅದರಲ್ಲಿ ೨೫ ಲಕ್ಷ ರೂ. ದಸರಾ ಉತ್ಸವಕ್ಕೆ ಬಳಸಿ ಉಳಿದ ೭೫ ಲಕ್ಷ ರೂ.ಗಳನ್ನು ಅಭಿವೃದ್ಧಿ ಕಾರ್ಯಕ್ಕೆ ಬಳಸಲಾಗಿತ್ತು. ಈ ಬಾರಿ ೧ ಕೋಟಿ ರೂ. ಅನುದಾನ ಮಂಜೂರಾಗಿದ್ದು, ಎಲ್ಲಾ ಅನುದಾನವನ್ನು ದಸರಾಕ್ಕೆ ಬಳಸ ಲಾಗುತ್ತಿದೆ. ಹಾಗಾಗಿ ಕಲಾವಿದರಿಗೂ ಸೂಕ್ತ ವ್ಯವಸ್ಥೆಯನ್ನು ಕಲ್ಪಿಸಬೇಕಿದೆ. ಮಳೆ ಬರುವ ಸಾಧ್ಯತೆ ಇರುವುದರಿಂದ ಸುಸಜ್ಜಿತ ವೇದಿಕೆ ನಿರ್ಮಾಣದ ಅವಶ್ಯಕತೆ ಇದೆ. ಕಲಾಪ್ರಿಯರಿಗೆ ಸೂಕ್ತ ಆಸನ ವ್ಯವಸ್ಥೆ ಕಲ್ಪಿಸಬೇಕಿದೆ.
ದಸರಾಕ್ಕೆ ಸ್ಥಳೀಯ ಆಡಳಿತ ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕಿದೆ. ನಗರದ ಸ್ವಚ್ಛತಾ ಕಾರ್ಯ ನಡೆಸುವುದರೊಂದಿಗೆ ರಸ್ತೆಗಳಲ್ಲಿರುವ ಗುಂಡಿ ಮುಚ್ಚುವ ಕೆಲಸ ಆಗಬೇಕಿದೆ. ದಸರಾ ದಿನದಂದು ಸಾವಿರಾರು ಸಂಖ್ಯೆಯ ವಾಹನಗಳು ನಗರದತ್ತ ಆಗಮಿಸುವುದರಿಂದ ಸೂಕ್ತ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಬೇಕಿದೆ.
ಕೊಡಗು ಸೂಕ್ಷ್ಮ ಜಿಲ್ಲೆಯಾಗಿದ್ದು, ಇತ್ತೀಚೆಗಷ್ಟೇ ಕೋಮು ಸಂಘರ್ಷ ಉಂಟಾಗುವ ಭೀತಿ ಎದುರಾಗಿತ್ತು. ಆದರೆ, ದಸರಾ ಉತ್ಸವದಲ್ಲಿ ಎಲ್ಲಾ ಧರ್ಮೀಯರು ಪಾಲ್ಗೊಳ್ಳುವುದರಿಂದ ಪರಿಸ್ಥಿತಿ ಸಹಜ ಸ್ಥಿತಿಗೆ ತರಲೂ ದಸರಾ ಸಹಕಾರಿಯಾಗಲಿದೆ. ಆದ್ದರಿಂದ ಯಾವುದೇ ಗೊಂದಲಗಳಿಗೆ ಎಡೆಮಾಡದೆ ಈ ಬಾರಿಯ ಮಡಿಕೇರಿ ದಸರಾವನ್ನು ಅರ್ಥಪೂರ್ಣ ಹಾಗೂ ಪಾರದರ್ಶಕವಾಗಿ ಆಚರಿಸಬೇಕಿದೆ. ಸ್ನೇಹ ಸೌಹಾರ್ದತೆ ಸಾರುವ ಕೊಡಗಿನ ಸಂಪ್ರದಾಯಕ್ಕೆ ಹೆಚ್ಚಿನ ಮಹತ್ವ ನೀಡಬೇಕಿದೆ.
andolana

Share
Published by
andolana

Recent Posts

ತಿ.‌ ನರಸೀಪುರ: ಬೈಕ್ ಡಿಕ್ಕಿ ಚಿರತೆ ಸಾವು

ತಿ. ನರಸೀಪುರ: ತಾಲೂಕಿನ ಬನ್ನೂರು ಹೋಬಳಿಯ ಬಸವನಹಳ್ಳಿ ಗ್ರಾಮದ ಸಮೀಪದ ಮುಖ್ಯರಸ್ತೆಯಲ್ಲಿ ದ್ವಿಚಕ್ರ ವಾಹನ ಚಿರತೆಗೆ ಡಿಕ್ಕಿ ಹೊಡೆದ ಪರಿಣಾಮ…

6 hours ago

ತಿರುಪತಿ ಲಡ್ಡು: ತುಪ್ಪದಲ್ಲಿ ಪ್ರಾಣಿ ಕೊಬ್ಬು ಬಳಕೆ

ಅಮರಾವತಿ: ಜಗತ್‌ ಪ್ರಸಿದ್ಧ ತಿರುಪತಿ ಲಡ್ಡು ಪ್ರಸಾದದಲ್ಲಿ ಪ್ರಾಣಿಗಳ ಕೊಬ್ಬು ಹಾಗೂ ಕಳಪೆ ಗುಣಮಟ್ಟದ ಪದಾರ್ಥಗಳು ಪತ್ತೆಯಾಗಿದೆ ಎಂದು ತೆಲುಗು…

8 hours ago

ಬುರ್ಖಾಧಾರಿ ಮಹಿಳೆಯಿಂದ ಸಲ್ಮಾನ್‌ ಖಾನ್‌ ತಂದೆಗೆ ಜೀವ ಬೆದರಿಕೆ: ಮಹಿಳೆ ಸೇರಿ ಇಬ್ಬರ ಬಂಧನ

ಮುಂಬೈ:‌ ಬಾಲಿವುಡ್‌ನ ಭಾಯಿಜಾನ್ ಸಲ್ಮಾನ್‌ ಖಾನ್‌ ಅವರ ತಂದೆಗೆ ಬುರ್ಖಾ ಧರಿಸಿದ್ದ ಮಹಿಳೆ ಹಾಗೂ ಇನ್ನೊರ್ವ ವ್ಯಕ್ತಿ ಜೀವ ಬೆದರಿಕೆ…

8 hours ago

ಶಾಸಕ ಮುನಿರತ್ನಗೆ ಜಾಮೀನು: ಅತ್ಯಾಚಾರ ಪ್ರಕರಣದಲ್ಲಿ ಮತ್ತೆ ಬಂಧನ ಸಾಧ್ಯತೆ

ಬೆಂಗಳೂರು: ಗುತ್ತಿಗೆದಾರರೊಬ್ಬರಿಗೆ ಜಾತಿನಿಂದನೆ ಹಾಗೂ ಪ್ರಾಣ ಬೆದರಿಕೆ ಹಾಕಿದ ಪ್ರಕರಣದಲ್ಲಿ ಬೆಂಗಳೂರಿನ ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಮುನಿರತ್ನಗೆ…

9 hours ago

ನುಡಿ ಹಬ್ಬಕ್ಕೆ ಆಹ್ವಾನಿಸಲು ಸಿದ್ಧವಾಗಿದೆ ಕನ್ನಡ ರಥ

ಮಂಡ್ಯ: ಜಿಲ್ಲೆಯಲ್ಲಿ ಡಿಸೆಂಬರ್ 20, 21, 22 ರಂದು ನಡೆಯಲಿರುವ 87 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ…

9 hours ago

ಬಸ್‌ನಲ್ಲಿ ಪ್ರಯಾಣ: ಮಹಿಳೆಯರಿಂದ ಶಕ್ತಿಯೋಜನೆಯ ಅಭಿಪ್ರಾಯ ಪಡೆದ ಪುಷ್ಪ ಅಮರನಾಥ್‌

ಮೈಸೂರು: ರಾಜ್ಯ ಸರ್ಕಾರದ ಮಹತ್ವಕಾಂಕ್ಷೆ ಯೋಜನೆಗಳಲ್ಲಿ ಒಂದಾದ ಶಕ್ತಿಯೋಜನೆ ಫಲಾನುಭವಿಗಳ ಅಭಿಪ್ರಾಯ ಸಂಗ್ರಹಿಸಲು ಗ್ಯಾರಂಟಿ ಅನುಷ್ಠಾನ ಸಮಿತಿ ಉಪಾಧ್ಯಕ್ಷೆಯಾದ ಡಾ…

10 hours ago