ಎಡಿಟೋರಿಯಲ್

ಎಲ್‌ಪಿಜಿ ಕೊರತೆ; ಜನರ ಆತಂಕ ದೂರ ಮಾಡಬೇಕಿದೆ

ಅಮೆರಿಕ-ಇಸ್ರೇಲ್ ಹಾಗೂ ಇರಾನ್ ನಡುವಿನ ಯುದ್ಧಕ್ಕಿಂತಲ್ಲೂ ಹೆಚ್ಚು ಸದ್ದು ಮಾಡುತ್ತಿರುವುದು ಭಾರತದಲ್ಲಿನ ಎಲ್‌ಪಿಜಿ ಪೂರೈಕೆ ವಿಚಾರ. ಯುದ್ಧೋನ್ಮಾದ ವೈರತ್ವ ಹೊಂದಿರುವ ಎರಡು ರಾಷ್ಟ್ರಗಳ ಮೇಲಷ್ಟೇ ಪರಿಣಾಮ ಬೀರುವುದಿಲ್ಲ. ನೆರೆಹೊರೆಯ ರಾಷ್ಟ್ರಗಳ ಮೇಲೂ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಎಂಬುದಕ್ಕೆ ಅಮೆರಿಕ- ಇಸ್ರೇಲ್ ಮತ್ತು ಇರಾನ್ ನಡುವಿನ ಯುದ್ಧ ಸಾಕ್ಷಿಯಾಗಿದೆ. ಪ್ರತಿಯೊಂದು ರಾಷ್ಟ್ರವೂ ಭೌಗೋಳಿಕವಾಗಿ ಒಂದರ ಮೇಲೆ ಇನ್ನೊಂದು ಅವಲಂಬಿತ. ವ್ಯಾಪಾರ ವಹಿವಾಟುಗಳಲ್ಲಿ, ಕೊಡು ಕೊಳ್ಳುವಿಕೆಯಲ್ಲಿ ಒಂದು ರಾಷ್ಟ್ರ ಮತ್ತೊಂದು ರಾಷ್ಟ್ರದೊಂದಿಗೆ ಸಂಬಂಧ ಹೊಂದಿರಲೇಬೇಕಾಗುತ್ತದೆ.

ನಮಗೆ ಯಾರ ಹಂಗೂ ಇಲ್ಲ ಎನ್ನುವ ಸ್ಥಿತಿಯಲ್ಲಿ ಪ್ರಸ್ತುತ ಯಾವ ದೇಶವೂ ಇಲ್ಲ. ಹಾಗಾಗಿ ಎಂದು ರಾಷ್ಟ್ರ ಮತ್ತೊಂದು ರಾಷ್ಟ್ರದ ಮೇಲೆ ಹಗೆ ಕಟ್ಟಿಕೊಂಡರೆ ಅದರ ಪರಿಣಾಮ ಆಯಾ ರಾಷ್ಟ್ರಗಳ ನಾಗರಿಕರ ಮೇಲೆ ಉಂಟಾಗುತ್ತದೆ. ಆದ್ದರಿಂದ ಶಾಂತಿ-ಸಹಬಾಳ್ವೆ ಎಲ್ಲ ದೇಶಗಳ ಮೂಲಮಂತ್ರವಾಗಬೇಕಿದೆ. ಯುದ್ಧದ ಪರಿಣಾಮ ಅನಿಲ ವಾಹಕ ಹಡಗುಗಳು ಬರುವುದು ಕಡಿಮೆ ಆಗಿದೆ. ವಿದೇಶಗಳ ಅನಿಲ ಪೂರೈಕೆಯಿಂದಲೇ ದೇಶದ ಬೇಡಿಕೆ ಹೆಚ್ಚು ಈಡೇರುತ್ತಿವೆ. ಇರಾನ್ ಈಗ ಹಾರ್ಮುಜ್ ಜಲಸಂಽಯನ್ನು ಬಂದ್ ಮಾಡಿದೆ. ಸೌದಿ ಅರೇಬಿಯಾ, ಕುವೈತ್, ಯುಎಇಯಿಂದ ಅತಿ ಹೆಚ್ಚು ಅಡುಗೆ ಅನಿಲ ಪೂರೈಕೆಯಾಗುತ್ತದೆ. ಈಗ ಅಲ್ಲಿಂದ ಅಡುಗೆ ಅನಿಲ ಬರುತ್ತಿಲ್ಲ.

ಯುದ್ಧದ ಕಾರಣದಿಂದ ಭಾರತದಲ್ಲಿ ಎಲ್‌ಪಿಜಿ ಕೊರತೆ ಕಂಡು ಬಂದಿದೆ. ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳು ಸಿಗುತ್ತಿಲ್ಲ. ಇದರಿಂದ ಹೋಟೆಲ್‌ಗಳು ಮುಚ್ಚುತ್ತಿವೆ. ಇರುವ ಹೋಟೆಲ್‌ಗಳಲ್ಲಿ ಊಟ, ತಿಂಡಿ ಬೆಲೆ ಜಾಸ್ತಿಯಾಗಿದೆ. ಇದರಿಂದ ನಿಜಕ್ಕೂ ಆತಂಕಕ್ಕೆ ಒಳಗಾಗಿರುವವರು ನಗರಪ್ರದೇಶಗಳಲ್ಲಿ ಪಿಜಿಗಳಲ್ಲಿ ಉಳಿದುಕೊಂಡಿರುವ ಹಾಗೂ ಬಾಡಿಗೆ ರೂಂಗಳಲ್ಲಿ ವಾಸಿಸುವ ಯುವಜನತೆ ಹಾಗೂ ಹಾಸ್ಟೆಲ್‌ಗಳಲ್ಲಿರುವ ವಿದ್ಯಾರ್ಥಿಗಳು. ಏಕೆಂದರೆ ಈ ವರ್ಗದವರೇ ವಾಣಿಜ್ಯ ಸಿಲಿಂಡರ್‌ಗಳ ಮೇಲೆ ಅವಲಂಬಿತವಾಗಿರುವುದು. ಕಾರಣ ಸಿಲಿಂಡರ್ ಕೊರತೆ ಉಂಟಾಗಿರುವುದರಿಂದ ಸಮಯಕ್ಕೆ ಸರಿಯಾಗಿ ಊಟ ತಿಂಡಿ ಸಿಗದಿರುವುದು, ಊಟ ತಿಂಡಿಯ ದರ ಹೆಚ್ಚಳದ ಪರಿಣಾಮ ಎದುರಿಸಬೇಕಾಗುತ್ತದೆ. ಹಾಗಾಗಿ ಸರ್ಕಾರಗಳು ಆದಷ್ಟು ಬೇಗ ವಾಣಿಜ್ಯ ಸಿಲಿಂಡರ್ ಕೊರತೆಯನ್ನು ನೀಗಿಸಬೇಕಿದೆ.

ಎಲ್‌ಪಿಜಿ ಕೊರತೆಯನ್ನು ನೆಪವಾಗಿಸಿಕೊಂಡು ಕಾಳಸಂತೆಯಲ್ಲಿ ಎಲ್‌ಪಿಜಿ ಮಾರಾಟ ಮಾಡುತ್ತಿರುವ ಆರೋಪಗಳು ಕೇಳಿ ಬಂದಿವೆ. ದೇಶದ ಕೆಲವೆಡೆ ಕಾಳಸಂತೆಯಲ್ಲಿ ಸಿಲಿಂಡರ್ ಮಾರಾಟ ಮಾಡುತ್ತಿರುವವರ ಮೇಲೆ ಅಽಕಾರಿಗಳು ದಾಳಿ ನಡೆಸಿ ಸಿಲಿಂಡರ್ ಜಪ್ತಿ ಮಾಡಿರುವುದು ಇದಕ್ಕೆ ಉದಾಹರಣೆಯಾಗಿದೆ. ಮನೆ ಬಳಕೆ ಅನಿಲ ಪೂರೈಸುವುದು ಸರ್ಕಾರದ ಆದ್ಯತೆ ಆಗಿದೆ. ಜನರು ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ ಎಂದು ಕೇಂದ್ರ ಸರ್ಕಾರ ಹೇಳಿದೆ. ಆದರೆ ವಾಣಿಜ್ಯ ಬಳಕೆ ಸಿಲಿಂಡರ್ ಕೊರತೆಯಿಂದಾಗಿ ಲಾಭಕೋರರು ಮನೆ ಬಳಕೆಯ ಸಿಲಿಂಡರ್ ಬಳಸಿಕೊಳ್ಳಲು\ಮುಂದಾಗುವುದು ಸಹಜ. ವಾಣಿಜ್ಯ ಸಿಲಿಂಡರ್ ಕೊರತೆ ಇಲ್ಲದಿದ್ದಾಗಲೂ ಹೋಟೆಲ್ ಉದ್ಯಮದ ಹಲವು ಮಂದಿ ಮನೆಬಳಕೆ ಸಿಲಿಂಡರ್ ಬಳಸುತ್ತಿರುವುದು ಮಾಮೂಲಿಯಾಗಿದೆ. ಇನ್ನು ವಾಣಿಜ್ಯ ಸಿಲಿಂಡರ್ ಕೊರತೆ ಉಂಟಾದಾಗ ಸುಮ್ಮನಿರುತ್ತಾರೆ. ಹಾಗಾಗಿ ಸ್ಥಳೀಯ ಆಡಳಿತ ಇದಕ್ಕೆ ಕಡಿವಾಣ ಹಾಕಬೇಕಿದೆ. ದೇಶದಲ್ಲಿ ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್ ವಿತರಣೆ ಪುನರಾರಂಭವಾಗಿದೆ.

ದೇಶದಲ್ಲಿ ಗೃಹಬಳಕೆಗೆ ಬೇಕಾಗುವಷ್ಟು ದಾಸ್ತಾನು ಇದೆ. ಜನರು ಧಾವಂತಕ್ಕೆ ಒಳಗಾಗಿ ಎಲ್‌ಪಿಜಿ ಗ್ಯಾಸ್ ಬುಕ್ ಮಾಡುತ್ತಿದ್ದಾರೆ. ಈವರೆಗೂ ೫೫ ಲಕ್ಷವಿದ್ದ ಎಲ್‌ಪಿಜಿ ಬುಕಿಂಗ್ ಈಗ ೮೫ ಲಕ್ಷಕ್ಕೆ ಏರಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ. ಈ ಯುದ್ಧ ತಕ್ಷಣಕ್ಕೆ ನಿಲ್ಲುವುದಿಲ್ಲ. ಹಾಗಾಗಿ ಸಿಲಿಂಡರ್ ಪೂರೈಕೆ ಸಮಸ್ಯೆ ಸದ್ಯಕ್ಕೆ ಬಗೆಹರಿಯುವುದಿಲ್ಲ. ಪರಿಸ್ಥಿತಿ ಹೀಗೆಯೇ ಮುಂದುವರಿದರೆ ನಮಗೆ ಸಿಲಿಂಡರ್ ಯಾವ ಕಾಲಕ್ಕೆ ಸಿಗುತ್ತದೆಯೋ ಎಂದು ಭಾವಿಸಿರುವ ಜನ ಸಹಜವಾಗಿ ಆತಂಕಕ್ಕೆ ಒಳಗಾಗಿ ಸಿಲಿಂಡರ್ ಸ್ಟಾಕ್ ಮಾಡಿಕೊಳ್ಳುವ ಭರದಲ್ಲಿ ಬುಕಿಂಗ್ ಮಾಡುತ್ತಿರಬಹುದು. ಇದು ಸಮೂಹ ಸನ್ನಿಯಂತಾಗಿರಬಹುದು. ಆದರೆ ಜನರ ಈ ಆತಂಕ ದೂರ ಮಾಡಬೇಕಾಗಿರುವುದು ಸರ್ಕಾರಗಳ ಜವಾಬ್ದಾರಿಯಲ್ಲವೆ? ಜನರಿಗೆ ಅಗತ್ಯ ಸಿಲಿಂಡರ್ ಸಿಗುತ್ತಿದೆ ಎಂಬ ಭರವಸೆ ಮೂಡಿಸುವುದು ಮುಖ್ಯವಲ್ಲವೆ? ಇದರೊಂದಿಗೆ ಮಾಧ್ಯಮಗಳೂ ಕೂಡ ವಾಸ್ತವಾಂಶಗಳನ್ನು ಹೇಳುವ ಮೂಲಕ ಜನರಲ್ಲಿನ ಆತಂಕ ದೂರ ಮಾಡಬೇಕಿದೆ. ಅಲ್ಲದೆ ಗ್ಯಾಸ್ ಏಜೆನ್ಸಿಗಳು ಕೃತಕ ಅಭಾವ ಸೃಷ್ಟಿಸದೆ ಗ್ರಾಹಕರಿಗೆ ಸಮಯಕ್ಕೆ ಸರಿಯಾಗಿ ಸಿಲಿಂಡರ್ ಪೂರೈಸಬೇಕಿದೆ. ಜೊತೆಗೆ ಅಧಿಕಾರಿಗಳೂ ಕೂಡ ಬುಕಿಂಗ್, ಸಿಲಿಂಡರ್ ಪೂರೈಕೆ ಮತ್ತು ದುರ್ಬಳಕೆ ತಡೆಯಲು ಮಾನಿಟರಿಂಗ್ ಮಾಡಬೇಕಿದೆ

” ಎಲ್‌ಪಿಜಿ ಕೊರತೆಯನ್ನು ನೆಪವಾಗಿಸಿಕೊಂಡು ಕಾಳಸಂತೆಯಲ್ಲಿ ಎಲ್‌ಪಿಜಿ ಮಾರಾಟ ಮಾಡುತ್ತಿರುವ ಆರೋಪಗಳು ಕೇಳಿ ಬಂದಿವೆ. ದೇಶದ ಕೆಲವೆಡೆ ಕಾಳಸಂತೆಯಲ್ಲಿ ಸಿಲಿಂಡರ್ ಮಾರಾಟ ಮಾಡುತ್ತಿರುವವರ ಮೇಲೆ ಅಧಿಕಾರಿಗಳು ದಾಳಿ ನಡೆಸಿ ಸಿಲಿಂಡರ್ ಜಪ್ತಿ ಮಾಡಿರುವುದು ಇದಕ್ಕೆ ಉದಾಹರಣೆಯಾಗಿದೆ.”

 

 

ಆಂದೋಲನ ಡೆಸ್ಕ್

Share
Published by
ಆಂದೋಲನ ಡೆಸ್ಕ್

Recent Posts

ಶಾಸಕರ ಭರವಸೆ ಬಳಿಕ ಪ್ರತಿಭಟನೆ ಹಿಂಪಡೆತ : ಮೃತರ ಕುಟುಂಬಕ್ಕೆ ತಲಾ ₹15 ಲಕ್ಷ ಪರಿಹಾರ

ಹನೂರು: ಕಾವೇರಿ ವನ್ಯಜೀವಿಧಾಮದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳ ದಾಳಿಗೆ ಮೃತಪಟ್ಟ ಕುಟುಂಬಗಳಿಗೆ ಸರ್ಕಾರಿ ಉದ್ಯೋಗ, ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸ ಹಾಗೂ ಸೂಕ್ತ…

2 hours ago

ವಾರಣಾಸಿ ಏರ್‌ಫೋರ್ಟ್‌ | ಶಸ್ತ್ರಾಸ್ತ್ರ ತಪಾಸಣೆ ವೇಳೆ ಆಕಸ್ಮಿಕ ಗುಂಡಿನ ದಾಳಿ ; ಇಬ್ಬರಿಗೆ ಗಾಯ

ವಾರಣಾಸಿ : ವಾರಣಾಸಿಯ ಲಾಲ್ ಬಹದ್ದೂರ್ ಶಾಸ್ತ್ರಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭಾನುವಾರ ಬೆಳಿಗ್ಗೆ ನಡೆದ ಆಘಾತಕಾರಿ ಘಟನೆಯೊಂದರಲ್ಲಿ, ಶಸ್ತ್ರಾಸ್ತ್ರ ತಪಾಸಣೆಯ…

3 hours ago

ನೈಸ್ ಯೋಜನೆ ಸರ್ಕಾರದ ವಶಕ್ಕೆ ; ಮುಖ್ಯಮಂತ್ರಿ ಡಿಕೆಶಿಗೆ ಪತ್ರ ಬರೆದು ಒತ್ತಾಯಿಸಿದ ಹೆಚ್.ಡಿ.ಕುಮಾರಸ್ವಾಮಿ

ತಕ್ಷಣವೇ ನೈಸ್ ರಸ್ತೆ ಟೋಲ್ ಸಂಗ್ರಹಕ್ಕೆ ತಡೆ ಹಾಕಬೇಕು ಎಂದು ಕೇಂದ್ರ ಸಚಿವರ ಅಗ್ರಹ ಹೈಕೋರ್ಟ್ ಅಭಿಪ್ರಾಯದಂತೆ ನೈಸ್ ಯೋಜನೆಯನ್ನು…

3 hours ago

ಚಾಮರಾಜನಗರ ಶೂಟೌಟ್‌ ಪ್ರಕರಣ: ಸಿಎಂ ಡಿ.ಕೆ.ಶಿವಕುಮಾರ್‌ ಪ್ರತಿಕ್ರಿಯೆ

ಕೊಡಗು: ಚಾಮರಾಜನಗರದ ಹನೂರಿನಲ್ಲಿ ನಡೆದ ಶೂಟೌಟ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಎಂ ಡಿ.ಕೆ.ಶಿವಕುಮಾರ್‌ ಪ್ರತಿಕ್ರಿಯೆ ನೀಡಿದ್ದಾರೆ. ಈ ಕುರಿತು ಕೊಡಗಿನಲ್ಲಿ ಮಾಧ್ಯಮದವರು…

4 hours ago

ಸಿಎಂ ಆದ ಬಳಿಕ ಮೊದಲ ಬಾರಿಗೆ ಕೊಡಗಿಗೆ ಡಿಕೆಶಿ ಭೇಟಿ

ಕೊಡಗು: ಸಿಎಂ ಡಿ.ಕೆ.ಶಿವಕುಮಾರ್‌ ಅವರಿಂದು ಕೊಡಗಿಗೆ ಭೇಟಿ ನೀಡಿದ್ದಾರೆ. ಕೊಡಗಿಗೆ ಆಗಮಿಸುತ್ತಿದ್ದಂತೆ ಕೊಡವ ಸಂಪ್ರದಾಯದಂತೆ ಸಿಎಂ ಡಿ.ಕೆ.ಶಿವಕುಮಾರ್‌ ಅವರಿಗೆ ಕೊಡವತಿಯರು…

5 hours ago

ಕೊಲೆ ಆರೋಪಿ ಪವಿತ್ರಾಗೌಡ ಬೇರೆ ಸೆಲ್‌ಗೆ ಶಿಫ್ಟ್‌

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ಪವಿತ್ರಾಗೌಡರನ್ನು ಪರಪ್ಪನ ಅಗ್ರಹಾರದಲ್ಲಿ ಬೇರೆ ಸೆಲ್‌ಗೆ ಶಿಫ್ಟ್‌ ಮಾಡಲಾಗಿದೆ. ಇಬ್ಬರ ಬ್ಯಾರಕ್‌ನಲ್ಲಿದ್ದ…

5 hours ago