ಎರಡು ವಾರಗಳ ಹಿಂದೆ ಈ ಅಂಕಣದಲ್ಲಿ ‘ಹೊಸ ಸರ್ಕಾರದಿಂದ ಕಾಯಕಲ್ಪದ ನಿರೀಕ್ಷೆಯಲ್ಲಿ ಕನ್ನಡ ಚಿತ್ರೋದ್ಯಮ’ ಶೀರ್ಷಿಕೆಯಲ್ಲಿ ಚಿತ್ರನಗರಿಗಾಗಿ ಸಿದ್ದರಾಮಯ್ಯನವರು ಮುಖ್ಯಮಂತ್ರಿಗಳಾಗಿದ್ದ ಕಳೆದ ಅವಽಯಲ್ಲಿ ಮೈಸೂರಿನ ಇಮ್ಮಾವಿನಲ್ಲಿ 110 ಎಕರೆ ಜಮೀನನ್ನು 2015ರಲ್ಲೇ ಕಾಯ್ದಿರಿಸಿದ್ದು, ಅವರ ಅವಧಿ ಪೂರ್ಣಗೊಳ್ಳುವ ಮೊದಲೇ ಅಲ್ಲಿ ಅಡಿಗಲ್ಲು ಹಾಕುವ ಪ್ರಯತ್ನ ನಡೆದದ್ದು, ಅಂಬರೀಶ್ ಹುಟ್ಟುಹಬ್ಬದ ವೇಳೆ ‘ಅಂತ’ ಚಿತ್ರದ ಮರುಬಿಡುಗಡೆಯ ಪತ್ರಿಕಾಗೋಷ್ಠಿಯಲ್ಲಿ ಚಿತ್ರನಗರಿಯ ಕುರಿತ ಪ್ರಸ್ತಾಪ, ಹಿಂದಿನ ಸರ್ಕಾರವನ್ನು ಒತ್ತಾಯಿಸಿದ್ದು ಇವೇ ಮೊದಲಾದ ವಿಷಯಗಳನ್ನು ಹೇಳಲಾಗಿತ್ತು.
ಈ ಹಿಂದೆ ಹೇಳಿದ ಹಾಗೆ ಚಿತ್ರನಗರಿಯ ಯೋಜನೆಗೆ 50 ವರ್ಷಗಳಿಗೂ ಹೆಚ್ಚು ಇತಿಹಾಸ ಇದೆ. 1972ರಲ್ಲೇ ಬೆಂಗಳೂರಿನ ಹೆಸರಘಟ್ಟದಲ್ಲಿ ಇದಕ್ಕಾಗಿಯೇ ಜಾಗ ಕಾದಿರಿಸಲಾಗಿತ್ತು. ಅಂದಿನ ಮುಖ್ಯಮಂತ್ರಿಗಳಾಗಿದ್ದ ದೇವರಾಜ ಅರಸು ಅವರು ಚಿತ್ರನಗರಿಗೆ ಅಡಿಗಲ್ಲು ಹಾಕಿದ್ದರು. ಮೂರು ಹಂತಗಳಲ್ಲಿ ಈ ಯೋಜನೆ ಪೂರ್ಣಗೊಳಿಸುವ ನೀಲಿನಕ್ಷೆಯೂ ಸಿದ್ಧವಾಗಿತ್ತು. ಕರ್ನಾಟಕ ಚಲನಚಿತ್ರೋದ್ಯಮ ಅಭಿವೃದ್ಧಿ ನಿಗಮದ ಮೇಲ್ವಿಚಾರಣೆಯಲ್ಲಿ ಇದು ಕಾರ್ಯಸಾಧ್ಯವಾಗಬೇಕಿತ್ತು.
ಚಲನಚಿತ್ರೋದ್ಯಮ ಅಭಿವೃದ್ಧಿ ನಿಗಮವನ್ನು ಮೊದಲು ಸ್ಥಾಪಿಸಿದ ರಾಜ್ಯ ಕರ್ನಾಟಕ. ಚಿತ್ರನಗರಿ ಯೋಜನೆಯನ್ನು ಕೈಗೆತ್ತಿಕೊಂಡದ್ದೂ ಕರ್ನಾಟಕದಲ್ಲೇ ಮೊದಲು. ಕರ್ನಾಟಕದಲ್ಲಿ ನಿಗಮ ಈಗಿಲ್ಲ. ಅದು ಲಾಭದಾಯಕ ಸಂಸ್ಥೆ ಅಲ್ಲ ಎನ್ನುವ ಶಿಫಾರಸ್ಸಿನ ಮೇಲೆ ಅದನ್ನು ಮುಚ್ಚಲಾಯಿತು. ಚಿತ್ರನಗರಿ ಸ್ಥಾಪನೆಯೂ ಆಗಲಿಲ್ಲ. ಚಿತ್ರನಗರಿಯ ಕುರಿತ ಸುದ್ದಿಗಳೇನೂ ಕಡಿಮೆ ಆಗಲಿಲ್ಲ. ದೇಶದ ಉಳಿದ ಬಹುತೇಕ ರಾಜ್ಯಗಳಲ್ಲಿ ಚಿತ್ರನಗರಿಗಳಿವೆ, ಅವು ಆಯಾ ರಾಜ್ಯಗಳ ಚಲನಚಿತ್ರೋದ್ಯಮ ಅಭಿವೃದ್ಧಿ ನಿಗಮಗಳ ಮೇಲುಸ್ತುವಾರಿಯಲ್ಲಿ ನಡೆಯುತ್ತಿವೆ. ಬಹುತೇಕ ರಾಜ್ಯಗಳು ತಮ್ಮ ಚಲನಚಿತ್ರ ಪ್ರವಾಸೋದ್ಯಮ ನೀತಿಯ ಮೂಲಕ ಅಲ್ಲಿ ಚಿತ್ರೀಕರಿಸುವ ಚಿತ್ರಗಳಿಗೆ ಸಹಾಯಧನವನ್ನು ಕೋಟಿಗಳಲ್ಲಿ ನೀಡುತ್ತಿವೆ. ಅದು ಅಲ್ಲಿನ ಭಾಷೆಯ ಚಿತ್ರಗಳಿಗೆ ಮಾತ್ರವಲ್ಲ, ಭಾರತದ ಎಲ್ಲ ಭಾಷೆಯ ಚಿತ್ರಗಳಿಗೂ.
ಕರ್ನಾಟಕದಲ್ಲೂ ಚಲನಚಿತ್ರ ಪ್ರವಾಸೋದ್ಯಮ ನೀತಿ ಜಾರಿಯಲ್ಲಿದೆ. ಅದು ಕಡತದಲ್ಲಿ ಮಾತ್ರ ಇದ್ದಂತಿದೆ. ಅದಕ್ಕೆ ಸಂಬಂಧಿಸಿದ ಯಾವುದೇ ವಿವರ ಜಾಲತಾಣದಲ್ಲಿ ಲಭ್ಯ ಇದ್ದಂತಿಲ್ಲ. ಎರಡು ಚಿತ್ರಗಳಿಗೆ ತಲಾ ಎರಡೂವರೆ ಕೋಟಿ ರೂ. ಹಾಗೂ ಐದು ಚಿತ್ರಗಳಿಗೆ ತಲಾ ಒಂದು ಕೋಟಿ ರೂ.ಗಳಂತೆ ಈ ನೀತಿಯನ್ವಯ ಸಹಾಯಧನವನ್ನು ರಾಜ್ಯ ಪ್ರವಾಸೋದ್ಯಮ ಇಲಾಖೆ ನೀಡುತ್ತದೆ ಎಂದಿತ್ತು. ಅದರ ವಿವರಗಳು ಯಾವುವೂ ಲಭ್ಯ ಇಲ್ಲ.
ಅದಷ್ಟೇ ಅಲ್ಲ, ಎಸ್.ವಿ.ರಾಜೇಂದ್ರ ಸಿಂಗ್ (ಬಾಬು) ಅವರು ರಾಜ್ಯ ಚಲನಚಿತ್ರ ಅಕಾಡೆಮಿಯ ಅಧ್ಯಕ್ಷರಾಗಿದ್ದ ಅವಧಿಯಲ್ಲಿ, ಸಾಹಿತ್ಯಕೃತಿಗಳನ್ನು ಆಧರಿಸಿ ತಯಾರಾಗುವ ಚಿತ್ರಗಳಿಗೆ ವಿಶೇಷ ಸಹಾಯಧನ ಯೋಜನೆಯ ಪ್ರಸ್ತಾಪ ಮಾಡಲಾಗಿತ್ತು. ಅಕಾಡೆಮಿಯ ‘ಜೇನುಗೂಡು’ ಕಥಾಕಣಜದಿಂದ ಆರಿಸಿದ ಕೃತಿಗಳನ್ನು ಚಿತ್ರಿಸಿದರೆ, ಅವುಗಳಿಗೆ 25 ಲಕ್ಷ ರೂ. ಸಹಾಯಧನ ಮತ್ತು ಅವುಗಳ ಲೇಖಕರಿಗೆ ಐದು ಲಕ್ಷ ರೂ.ಗಳನ್ನು ನೀಡುವ ಪ್ರಸ್ತಾಪವನ್ನು ಸರ್ಕಾರವೂ ಒಪ್ಪಿತ್ತು. ಆದರೆ ಯಾವುದೂ ಈಡೇರಲಿಲ್ಲ. ಸಹಾಯಧನ, ವಾರ್ಷಿಕ ಚಲನಚಿತ್ರ ಪ್ರಶಸ್ತಿಗಳ ಆಯ್ಕೆಯೂ ಕಳೆದ ನಾಲ್ಕು ವರ್ಷಗಳಿಂದ ಆಗಿಲ್ಲ. 2018ರ ಸಾಲಿನದಕ್ಕೆ ನ್ಯಾಯಾಲಯದಿಂದ ತಡೆಯಾಜ್ಞೆ ಇದೆ.
ಇದೀಗ ಚಿತ್ರನಗರಿ ಯೋಜನೆಯ ವಿಷಯ ಮತ್ತೆ ಮುನ್ನೆಲೆಗೆ ಬಂದಿದೆ. ಮೈಸೂರಿನಲ್ಲೇ ಚಿತ್ರನಗರಿ ಆಗಬೇಕು ಎನ್ನುವ ವಿಷಯ. ಈಗಾಗಲೇ ಅದಕ್ಕಾಗಿ ಮೀಸಲಿಟ್ಟ ಜಾಗದಲ್ಲೇ ಸರ್ಕಾರ ಚಿತ್ರನಗರಿ ಸ್ಥಾಪಿಸಬೇಕು ಎನ್ನುವ ಒತ್ತಾಯ. ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಈ ಒತ್ತಾಯವನ್ನು ಮಾಡಲಿದ್ದೇವೆ, ಎನ್ನುವುದನ್ನು ಹೇಳಲು ಪತ್ರಿಕಾಗೋಷ್ಠಿಯೊಂದನ್ನು ಮೊನ್ನೆ ಕರೆಯಲಾಗಿತ್ತು.
ಪತ್ರಿಕಾಗೋಷ್ಠಿಯಲ್ಲಿ ಪ್ರಶಸ್ತಿ ಪುರಸ್ಕೃತ ನಿರ್ದೇಶಕರಾದ ಎಸ್.ವಿ. ರಾಜೇಂದ್ರ ಸಿಂಗ್ (ಬಾಬು), ಪಿ.ಶೇಷಾದ್ರಿ, ಲಿಂಗದೇವರು, ಕೃಷ್ಣೇಗೌಡ, ಸಂಕಲನಕಾರ ಕೆಂಪರಾಜ್ ಮುಂತಾದವರಿದ್ದರು. ಅವರು ಗಂಧದಗುಡಿ ಗೃಹ ನಿರ್ಮಾಣ ಸಹಕಾರ ಸಂಘ ನಿಯಮಿತದ ಪದಾಽಕಾರಿಗಳು ಕೂಡ. ಮೈಸೂರಿನಲ್ಲಿ ಸ್ಥಾಪನೆ ಆಗಬೇಕು ಎನ್ನುವ ಚಿತ್ರನಗರಿಯ ಪಕ್ಕದಲ್ಲೇ ಈ ಸಂಘ ಚಿತ್ರೋದ್ಯಮದ ಮಂದಿಗೆ ಸೂರಿಗಾಗಿ ಜಾಗವನ್ನೂ ಈಗಾಗಲೇ ಗುರು ತಿಸಿದ್ದು, ಸರ್ಕಾರದ ಮುಂದೆ ಈ ಪ್ರಸ್ತಾಪವನ್ನೂ ಇಟ್ಟಿದೆ.
ಮೈಸೂರಿನಲ್ಲಿ ಚಿತ್ರನಗರಿ ಆಗಬೇಕು ಎನ್ನುವುದು ಬಹುಜನರ ಬೇಡಿಕೆ. ರಾಜ್ಕುಮಾರ್, ವಿಷ್ಣುವರ್ಧನ್, ಅಂಬರೀಶ್, ದರ್ಶನ್, ಯಶ್ ಸೇರಿದಂತೆ ಬಹಳಷ್ಟು ಮಂದಿ ಮೈಸೂರು ಮೂಲದವರು. ಮಾತ್ರವಲ್ಲ, ಮೈಸೂರಿನ ಸುತ್ತಮುತ್ತ ನೂರಕ್ಕೂ ಹೆಚ್ಚು ಪ್ರಾಕೃತಿಕ ಚಿತ್ರೀಕರಣ ತಾಣಗಳಿವೆ. ಈಗ ಚಿತ್ರನಗರಿಗಾಗಿ ಕಾದಿರಿಸಿದ ಜಾಗ, ವಿಮಾನ ನಿಲ್ದಾಣದ ಬಳಿ ಇದೆ. ಮುಖ್ಯಮಂತ್ರಿಗಳ ಕ್ಷೇತ್ರದಲ್ಲೇ ಇದೆ, ಚಿತ್ರನಗರಿಗೆ ಪ್ರಶಸ್ತ ಜಾಗ ಎಂದು ಬಾಬು ಅವರು ಹೇಳಿದರು. ಅಷ್ಟೇ ಅಲ್ಲ, ಅದರ ಬಳಿಯಲ್ಲಿ ಗಂಧದ ಗುಡಿ ಗೃಹ ನಿರ್ಮಾಣ ಸಂಘಕ್ಕೆ, ಅದು ಗುರುತಿಸಿರುವ ಸುಮಾರು 230 ಎಕರೆ ಸರ್ಕಾರಿ ಜಮೀನನ್ನು ರಿಯಾಯಿತಿ ದರದಲ್ಲಿ ನೀಡಬೇಕು ಎನ್ನುವ ಬೇಡಿಕೆಯ ಕುರಿತೂ ಪ್ರಸ್ತಾಪವಿತ್ತು.
ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಮೈಸೂರಿನಲ್ಲೇ ಚಿತ್ರನಗರಿ ಸ್ಥಾಪನೆಗೆ ಒತ್ತಾಯ ಮಾಡುವ ಮೊದಲು ಈ ಪತ್ರಿಕಾಗೋಷ್ಠಿಯನ್ನು ಕರೆದಿರುವುದರ ಉದ್ದೇಶ ಬೇರೆಯೇ ಇತ್ತು. ಅದರ ಪ್ರಸ್ತಾಪವೂ ಅಲ್ಲಿ ಆಯಿತು. ಸರ್ಕಾರ ಚಿತ್ರನಗರಿ ಸ್ಥಾಪನೆಗೆ ಗುರುತಿಸಿರುವ ಜಾಗವನ್ನು ತಮಗೇ ಕೊಡಿ ಎಂದು ಕಳೆದ ಬಾರಿ ಮುಖ್ಯಮಂತ್ರಿಗಳನ್ನು ಭೇಟಿಯಾಗಲು ಹೋದ ತಂಡದಲ್ಲಿದ್ದ ಪ್ರಮುಖ ನಿರ್ಮಾಪಕರೊಬ್ಬರು ಕೋರಿರುವುದು, ಅವರ ಜೊತೆಗೆ ಸಚಿವರೊಬ್ಬರು ಕೈಜೋಡಿಸಿರುವುದು ಇದಕ್ಕೆ ಕಾರಣ.
ಬಾಬು ಮತ್ತು ಅಲ್ಲಿದ್ದ ಇತರರು ಸರ್ಕಾರವೇ ಚಿತ್ರನಗರಿ ಸ್ಥಾಪಿಸಲಿ ಎಂದು ಒತ್ತಾಯಿಸುತ್ತಿದ್ದಾರೆ. ಯಡಿಯೂರಪ್ಪನವರು ಮುಖ್ಯಮಂತ್ರಿಗಳಾಗಿದ್ದ ವೇಳೆ ಅವರು ಮಂಡಿಸಿದ್ದ ಮುಂಗಡಪತ್ರದಲ್ಲಿ ಮೈಸೂರಿನಲ್ಲಿ ಚಿತ್ರನಗರಿಗಾಗಿ ೫೦೦ ಕೋಟಿ ರೂಪಾಯಿಗಳನ್ನು ಕಾದಿರಿಸಲಾಗಿತ್ತು. ಖಾಸಗಿಯವರ ಸಹಯೋಗದೊಂದಿಗೆ ಚಿತ್ರನಗರಿ ಸ್ಥಾಪನೆ ಆಗಲಿದೆ ಎಂದು ಅಲ್ಲಿ ಪ್ರಸ್ತಾಪಿಸಿದ್ದಾಗಿ ಹೇಳಲಾಗುತ್ತಿದೆ.
ತಮ್ಮ ಜೊತೆಗಿದ್ದ, ಚಿತ್ರನಗರಿಯ ಕುರಿತಂತೆ ಆಸಕ್ತಿ ಹೊಂದಿರುವ ನಿರ್ಮಾಪಕರ ಹೆಸರು ಹೇಳದೆಯೇ, ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಬಾಬು ಅವರು, ಖಾಸಗಿಯವರು ಚಿತ್ರನಗರಿ ಸ್ಥಾಪಿಸುವುದಾದರೆ ಸ್ಥಾಪಿಸಲಿ, ಆದರೆ ಇದಕ್ಕೆ ಅಡ್ಡಿಪಡಿಸುವುದು ಬೇಡ, ಕರ್ನಾಟಕದಲ್ಲಿ ಒಂದೇ ಚಿತ್ರನಗರಿ ಇರಬೇಕು ಎಂದೇನೂ ಇಲ್ಲ ಎಂದರು.
ಚಿತ್ರನಗರಿ ಯೋಜನೆಯ ಒತ್ತಾಯದ ಜೊತೆಜೊತೆಯಲ್ಲೇ ಇಡಲಿರುವ ಗೃಹ ನಿರ್ಮಾಣ ಸಂಘದ ಬೇಡಿಕೆ ಅದಕ್ಕೆ ಪೂರಕವಾಗಲಿದೆಯೇ ಎನ್ನುವು ದನ್ನು ಮುಂದಿನ ದಿನಗಳು ಹೇಳಲಿವೆ. ಸಂಘದಲ್ಲಿ ಪ್ರಶಸ್ತಿ ವಿಜೇತ ನಿರ್ಮಾಪಕ, ನಿರ್ದೇಶಕರಿದ್ದಾರೆ. ಈಗಾಗಲೇ ಕೃಷ್ಣೇಗೌಡರ ಪ್ರಕಾರ ಸುಮಾರು 630ಕ್ಕೂ ಹೆಚ್ಚು ಮಂದಿ ಸದಸ್ಯರು ಈ ಸಂಘದ ಸದಸ್ಯರಾಗಿದ್ದಾರೆ. ನಿಯಮಾನು ಸಾರವೇ ಇದು ಕೆಲಸ ಮಾಡುತ್ತಿದೆ ಎನ್ನುವುದು ಅವರ ಅಂಬೋಣ.
ಅರ್ಥ ಸಚಿವರೂ ಆಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮುಂದಿನ ತಿಂಗಳ 7ನೇ ತಾರೀಕಿನಂದು ಈ ಸಾಲಿನ ಮುಂಗಡಪತ್ರ ಮಂಡಿಸಲಿದ್ದಾರೆ. ಚುನಾವಣೆಯ ಪೂರ್ವದಲ್ಲಿ ನೀಡಿದ ಆಶ್ವಾಸನೆಗಳನ್ನು ಈಡೇರಿಸಲು ಆಗುವ ವೆಚ್ಚವನ್ನು ಸರಿದೂಗಿಸಲು ಇತರ ವೆಚ್ಚಗಳಲ್ಲಿ ಸಾಕಷ್ಟು ಕಡಿತದ ಸಾಧ್ಯತೆ ಹೆಚ್ಚು ಎನ್ನಲಾಗಿದ್ದು, ಸಿನಿಮಾ ಕ್ಷೇತ್ರದ ಬೇಡಿಕೆಗಳಲ್ಲಿ ಯಾವುದು ಈಡೇರುತ್ತದೆ ಎನ್ನುವುದನ್ನು ಕಾದು ನೋಡಬೇಕು.
‘ಮಾರ್ಚ್ 22’ ಚಿತ್ರದಲ್ಲಿ ಅತಿಥಿಯಾಗಿ ಹಾಡೊಂದರಲ್ಲಿ ಕಾಣಿಸಿಕೊಂಡ ಉದ್ಯಮಿ ಬಿ.ಆರ್.ಶೆಟ್ಟಿಯವರು, ?ಸರ್ಕಾರ 50 ಎಕರೆ ಜಾಗ ಕೊಟ್ಟರೆ ಅಲ್ಲಿ ಚಿತ್ರನಗರಿ ನಿರ್ಮಿಸುತ್ತೇನೆ, ಉಚಿತವಾಗಿ ಬೇಡ’ ಎಂದಿದ್ದರು. ಕಂಠೀರವ ಸ್ಟುಡಿಯೊದಲ್ಲಿ ಹಾಡಿನ ಚಿತ್ರೀಕರಣ ನಡೆದಿತ್ತು. ಅಲ್ಲಿನ ವಾತಾವರಣ ನೋಡಿ ಅವರ ಈ ಮಾತುಗಳಿದ್ದವು.
ನಟ, ನಿರ್ಮಾಪಕ, ಪ್ರದರ್ಶಕ, ಸ್ಟುಡಿಯೊ ಮಾಲೀಕ ಹಾಗೂ ಕಲಾವಿದರ ಸಂಘದ ಕಾರ್ಯದರ್ಶಿಗಳೂ ಆಗಿರುವ ರಾಕ್ಲೈನ್ ವೆಂಕಟೇಶ್ ಅವರು ಸರ್ಕಾರ ಜಾಗ ನೀಡಿದರೆ ತಾವು ಚಿತ್ರನಗರಿ ಸ್ಥಾಪಿಸುವ ಕುರಿತಂತೆ ನಿರ್ಧರಿಸಿದಂತಿದೆ. ಈಗಾಗಲೇ, ಅವರ ಸ್ಟುಡಿಯೊ ಬೆಂಗಳೂರಿನಲ್ಲಿ ಇದೆ.
ಹ್ಞಾಂ, ಮೈಸೂರಿನಲ್ಲಿ ಚಿತ್ರನಗರಿಯ ನಿರ್ಮಾಣವನ್ನು ಮಾಡುವುದಾ ಗಿಯೂ ಅದಕ್ಕೆ ಪುನೀತ್ ರಾಜ್ಕುಮಾರ್ ಅವರ ಹೆಸರನ್ನು ಇಡುವುದಾ ಗಿಯೂ, ಭಾಜಪ ತನ್ನ ಪ್ರಣಾಳಿಕೆಯಲ್ಲಿ ಹೇಳಿತ್ತು. ಚಿತ್ರನಗರಿಗೆ ರಾಜ್ಕುಮಾರ್ ಅವರ ಹೆಸರನ್ನು ಇಡಬೇಕು ಎಂದು ಒತ್ತಾಯವಿತ್ತು. ಮೊನ್ನೆ ಪತ್ರಿಕಾಗೋಷ್ಠಿ ಯಲ್ಲಿ ಮಾತನಾಡಿದ ಬಾಬು ಅವರು ಚಿತ್ರನಗರಿಗೆ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಹೆಸರನ್ನು ಇಡಬೇಕು, ಅವರು ಕರ್ನಾಟಕದಲ್ಲಿ ಸಿನಿಮಾ ಪರಂಪರೆಗೆ ನಾಂದಿ ಹಾಡಿದ ಮೊದಲಿಗರು, ಅವರು 1920ರ ದಶಕದ ಆರಂಭದಲ್ಲಿಯೇ ಕ್ಯಾಮೆರಾ ತರಿಸಿ, ತಜ್ಞರನ್ನು ಕರೆಸಿ, ನಾಟಕವೊಂದನ್ನು ಚಿತ್ರಿಸಿದ್ದರು ಎಂದು ಹೇಳಿದರು.
ಮೊದಲು ಚಿತ್ರನಗರಿ ಆಗಲಿ, ಆ ಮೇಲೆ ಹೆಸರು ಅಲ್ಲವೇ?
ಬೆಂಗಳೂರು : 2026-31ನೇ ಸಾಲಿನ ಗ್ರಾಮ ಪಂಚಾಯ್ತಿಗಳ ಚುನಾವಣೆಗೆ ಪೂರ್ವ ಸಿದ್ಧತೆ ಮಾಡಿಕೊಳ್ಳುವಂತೆ ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಗ್ರಾಮೀಣಾಭಿವೃದ್ಧಿ ಹಾಗೂ…
ಬೆಂಗಳೂರು : ಹಳ್ಳಿಯಿಂದ ದಿಲ್ಲಿಯೇ ಹೊರತು, ದಿಲ್ಲಿಯಿಂದ ಹಳ್ಳಿ ಅಲ್ಲ ಎಂದು ಪ್ರತಿಪಾದಿಸಿದ ಮಹಾತ್ಮಾ ಗಾಂಧೀಜಿಯವರು ಗ್ರಾಮ ಸ್ವರಾಜ್ಯದ ಕಲ್ಪನೆಗೆ…
ಕೊಳ್ಳೇಗಾಲ : ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ಪಟ್ಟಣದಲ್ಲಿ ಮದುವೆಯ ಆರತಕ್ಷತೆಗೆ ತೆರಳುತ್ತಿದ್ದ ವರನ ಮೇಲೆ ದುಷ್ಕರ್ಮಿಗಳು ಚಾಕುವಿನಿಂದ ಏಕಾಏಕಿ ದಾಳಿ…
ಗುಂಡ್ಲುಪೇಟೆ : ತಾಲ್ಲೂಕಿನ ಬೊಮ್ಮನಹಳ್ಳಿ ಗ್ರಾಮದ ರಾಜಶೇಖರ ಮೂರ್ತಿ ಎಂಬುವವರ ಮೇಲೆ ಚಿರತೆ ದಾಳಿ ನಡೆಸಿ ಗಾಯಗೊಳಿಸಿದ್ದು, ಅದೃಷ್ಟವಶಾತ್ ರೈತ…
ಹೊಸದಿಲ್ಲಿ : ರಾಷ್ಟ್ರಪಿತಿ ಮಹಾತ್ಮ ಗಾಂಧಿ ಅವರ 78ನೇ ಪುಣ್ಯತಿಥಿ ಹಿನ್ನೆಲೆಯಲ್ಲಿ ಇಂದು ರಾಷ್ಟ್ರಪತಿ ಮುರ್ಮು, ಪ್ರಧಾನಮಂತ್ರಿ ನರೇಂದ್ರ ಮೋದಿ…
ಮೈಸೂರು : ಮೈಸೂರಿನಲ್ಲಿ ಡ್ರಗ್ಸ್ ತಯಾರು ಮಾಡುವ ಯಾವ ವಸ್ತುಗಳ ಸಹ ಸಿಕ್ಕಿಲ್ಲ. ಎನ್.ಸಿ.ಬಿ ಅಧಿಕಾರಿಗಳು ದಾಳಿ ಮಾಡಿರುವುದು ಫಾಲೋಅಪ್…