ಎಡಿಟೋರಿಯಲ್

ಯೂರಿಯಾ ಅಕ್ರಮ ದಾಸ್ತಾನು; ಸಮಗ್ರ ತನಿಖೆಯಾಗಿ ಸತ್ಯಾಂಶ ಹೊರಬರಲಿ

ಚಾಮರಾಜನಗರ ಜಿಲ್ಲೆಯಲ್ಲಿ ರಸಗೊಬ್ಬರಗಳ ಕೊರತೆಯಿಂದ ರೈತರು ಸಂಕಷ್ಟ ಪಡುತ್ತಿರುವ ಹೊತ್ತಿನಲ್ಲೇ ಗುಂಡ್ಲುಪೇಟೆ ತಾಲ್ಲೂಕಿನ ಶಿವಪುರದ ಹೊರವಲಯದ ಜಮೀನೊಂದರಲ್ಲಿ ಅಕ್ರಮವಾಗಿ ಸಂಗ್ರಹಿಸಿದ್ದ ಯೂರಿಯಾ ರಸ ಗೊಬ್ಬರದ ೫೧೦ ಚೀಲಗಳನ್ನು ಪೊಲೀಸರು ಹಾಗೂ ಕೃಷಿ ಇಲಾಖೆ ಅಧಿಕಾರಿಗಳು ಜಂಟಿ ಕಾರ್ಯಾಚರಣೆ ನಡೆಸಿ ವಶಕ್ಕೆ ಪಡೆದಿದ್ದಾರೆ. ಜಮೀನಿನಲ್ಲಿ ಅಕ್ರಮವಾಗಿ ಯೂರಿಯಾವನ್ನು ಸಂಗ್ರಹಿಸಿ ನೆರೆಯ ತಮಿಳುನಾಡು ರಾಜ್ಯಕ್ಕೆ ಲಾರಿ ಮೂಲಕ ಸಾಗಿಸಲು ಸಿದ್ದತೆ ನಡೆಸುತ್ತಿದ್ದ ವೇಳೆ ದಾಳಿ ಮಾಡಿ ವಶಪಡಿಸಿಕೊಳ್ಳಲಾಗಿದೆ. ಗೊಬ್ಬರದ ಅಕ್ರಮ ದಾಸ್ತಾನು ಕುರಿತು ಪೊಲೀಸರು ಹೆಚ್ಚಿನ ಮಾಹಿತಿ ಸಂಗ್ರಹಿಸುತ್ತಿದ್ದಾರೆ.

ಗುಂಡ್ಲುಪೇಟೆ ತಾಲ್ಲೂಕು ಕೇರಳ ಮತ್ತು ತಮಿಳುನಾಡಿನ ಗಡಿಯಾಗಿದ್ದು ಕರ್ನಾಟಕ ರಾಜ್ಯದಿಂದ
ನಿರಂತರವಾಗಿ ರಸಗೊಬ್ಬರಗಳು ಅಕ್ರಮವಾಗಿ ತಮಿಳುನಾಡಿಗೆ ಸಾಗಣೆಯಾಗುತ್ತಿದೆ. ನಮ್ಮಲ್ಲಿ ಕಡಿಮೆ
ಬೆಲೆಗೆ ಗೊಬ್ಬರ ತೆಗೆದುಕೊಂಡು ತಮಿಳುನಾಡಿನಲ್ಲಿ ದುಪ್ಪಟ್ಟು ಬೆಲೆಗೆ ಮಾರಾಟ ಮಾಡಲಾಗುತ್ತಿದೆ. ಇದರ ಹಿಂದೆ ದೊಡ್ಡ
ಜಾಲವಿದೆ ಎಂಬ ಆರೋಪ ಕೇಳಿಬಂದಿದೆ. ಗೊಬ್ಬರದ ಕಳ್ಳ ಸಾಗಾಟದ ಹಿಂದೆ ‘ಪ್ರಬಲ’ರ ಕಾಣದ ಕೈಗಳು ಕೆಲಸ ಮಾಡುತ್ತಿವೆ. ಕೆಲವು ರಾಜಕೀಯ ಮುಖಂಡರು ಪ್ರಕರಣ ಮುಚ್ಚಿಹಾಕಲು ಹಣ ಪಡೆದಿದ್ದಾರೆ ಎಂಬ ಅನುಮಾನವಿದೆ. ಸೂಕ್ತ ತನಿಖೆಯಾದರೆ
ಆರೋಪಿಗಳು ಸಿಕ್ಕಿ ಬೀಳಲಿದ್ದಾರೆ. ಅಕ್ರಮ ದಾಸ್ತಾನು ಮಾಡಿದ್ದ ರಸಗೊಬ್ಬರವನ್ನು ವಶಪಡಿಸಿಕೊಂಡು ಕೃಷಿ ಇಲಾಖೆಗೆ ಒಪ್ಪಿಸಲಾಗಿದೆ. ಈ ಸಂಬಂಧ ಪ್ರಕರಣ ದಾಖಲಿಸಿ ತನಿಖೆ ನಡೆಯುತ್ತಿದೆ.

ಮುಂಗಾರು ಹಾಗೂ ಹಿಂಗಾರು ಹಂಗಾಮಿನಲ್ಲಿ ರೈತರಿಗೆ ಸರಿಯಾಗಿ ಗೊಬ್ಬರ ಸಿಗುತ್ತಿಲ್ಲ. ಜಿಲ್ಲೆಯ ಉಸ್ತುವಾರಿ ಸಚಿವರು, ಶಾಸಕರು, ಸಂಸದರು ರೈತರಿಗೆ ಬೇಕಾದ ರಸಗೊಬ್ಬರವನ್ನು ಸಕಾಲದಲ್ಲಿ ಒದಗಿಸಲು ವಿಫಲವಾಗಿದ್ದಾರೆ. ಶಾಸಕ ಸಿ.ಎಸ್. ನಿರಂಜನಕುಮಾರ್ ಬೆಂಬಲಿಗ ಕಲ್ಲಿಗೌಡನಹಳ್ಳಿ ಸುರೇಶ್ ಎಂಬವರು ಅಕ್ರಮ ದಾಸ್ತಾನು ಪ್ರಕರಣವನ್ನು ಮುಚ್ಚಿ ಹಾಕಿಸುವುದಾಗಿ ಹೇಳಿ ಕೇರಳ ಮೂಲದ ವ್ಯಕ್ತಿಯಿಂದ ೫೦ ಸಾವಿರ ಹಣವನ್ನು ಫೋನ್ ಪೇ ಮೂಲಕ ಪಡೆದಿದ್ದಾನೆ ಎಂಬ ಆರೋಪ ಕೇಳಿಬಂದಿತ್ತು. ಸುರೇಶ್ ಈ ಆರೋಪವನ್ನು ನಿರಾಕರಿಸಿದ್ದಾರೆ.

ಅಕ್ರಮವಾಗಿ ದಾಸ್ತಾನು ಮಾಡಿ ಸಾಗಾಣೆ ಮಾಡಲು ಯೂರಿಯಾ ಗೊಬ್ಬರ ಎಲ್ಲಿಂದ ಬಂತು? ಇದನ್ನು ತರಿಸಿದ್ದವರು ಯಾರು?
ಇದರ ಹಿಂದೆ ಯಾರ ಕೈವಾಡವಿದೆ ಎಂಬುದನ್ನು ಪತ್ತೆ ಹಚ್ಚಬೇಕಿದೆ. ಆರೋಪ ಮತ್ತು ಪ್ರತ್ಯಾರೋಪ ಮಾಡಿ ಪ್ರಕರಣದ ತನಿಖೆಯನ್ನು ದಿಕ್ಕು ತಪ್ಪಿಸುವ ಪ್ರಯತ್ನವನ್ನು ಯಾರು ನಡೆಸಬಾರದು.

ಕಳೆದ ಐದಾರು ತಿಂಗಳಿಂದ ತಾಲ್ಲೂಕಿನ ರೈತರು ಯೂರಿಯಾ ಗೊಬ್ಬರಕ್ಕೆ ಪರದಾಡುವಂಥ ಸ್ಥಿತಿಯಿದೆ. ಮುಸುಕಿನ ಜೋಳ, ಭತ್ತ, ಹತ್ತಿ, ಆಲೂಗಡ್ಡೆ, ಅರಿಶಿಣ, ಬಾಳೆ, ಎಲೆಕೋಸು, ಸೂರ್ಯಕಾಂತಿ ಬೆಳೆಗಳ ಬೆಳವಣಿಗೆಗೆ ಯೂರಿಯಾ ಅವಶ್ಯಕತೆಯಿದೆ. ತಾಲ್ಲೂಕಿನ ರೈತರು ಯೂರಿಯಾ ಗೊಬ್ಬರ ಖರೀದಿಸಲು ಅಂಗಡಿಗಳಲ್ಲಿ ಕೇಳಿದರೆ ‘ಯೂರಿಯಾ ಗೊಬ್ಬರ ಸರ್ಕಾರದಿಂದ ಸರಬರಾಜಾಗುತ್ತಿಲ್ಲ’ ಎಂದು ಮಾಲೀಕರು ಅಲೆದಾಡಿಸಿದ್ದಾರೆ. ಗೊಬ್ಬರ ಹಾಕಲೇಬೇಕು ಎಂಬ ಹಂಬಲದಿಂದ ಚಾಮರಾಜನಗರ, ಕೊಳ್ಳೆಗಾಲ ಹಾಗೂ ದೂರದ ನಗರಗಳಿಂದ ಯೂರಿಯಾವನ್ನು ಖರೀದಿಸಿ ತಂದು ಬೆಳೆದ ಫಸಲಿಗೆ ಹಾಕುತ್ತಿದ್ದಾರೆ. ರೈತರಿಗೆ ೧ ಮೂಟೆ ಯೂರಿಯಾ ಸಿಗದಿದ್ದ ಸಂದರ್ಭದಲ್ಲಿ ಶಿವಪುರದ ಜಮೀನಿನಲ್ಲಿ ೫೧೦ ಯೂರಿಯಾ ಗೊಬ್ಬರ ಮೂಟೆ ಹೇಗೆ ಶೇಖರಣೆ ಮಾಡಲು ಸಾಧ್ಯವಾಯಿತು?

ಹಿಂದೆ ತಾಲ್ಲೂಕಿನಲ್ಲಿ ನಕಲಿ ಗೊಬ್ಬರದ ದಂಧೆ ಕೂಡ ಬೆಳಕಿಗೆ ಬಂದಿತ್ತು. ಗುಂಡ್ಲುಪೇಟೆ ಕ್ಷೇತ್ರದಲ್ಲಿ ಪ್ರತಿಪಕ್ಷವಾಗಿರುವ ಕಾಂಗ್ರೆಸ್ ಈ ಅಕ್ರಮ ದಾಸ್ತಾನು ಬಗ್ಗೆ ತುಟಿ ಬಿಚ್ಚಿಲ್ಲ. ರೈತರ ಬಗ್ಗೆ ಕಾಳಜಿ ಇದ್ದರೆ ಆರೋಪಿಗಳ ಮೇಲೆ ಕಠಿಣ ಕ್ರಮ ಕೈಗೊಳ್ಳಿ ಎಂದು ಕನಿಷ್ಠ ಒಂದು ಹೇಳಿಕೆ ನೀಡಬಹುದಿತ್ತು ಇಲ್ಲವೇ ಪ್ರತಿಭಟನೆ ಮಾಡಬೇಕಿತ್ತು. ಇದಾವುದನ್ನು ಪ್ರತಿಪಕ್ಷದವರು ಮಾಡುತ್ತಿಲ್ಲ. ಯಾವ ಆಂಗಡಿಯಿಂದ ಖರೀದಿ ಮಾಡಿದ್ದಾರೆ. ಯಾರು ಖರೀದಿ ಮತ್ತು ಸಾಗಣೆ ಮಾಡಲು ಯತ್ನಿಸಿದ್ದಾರೆ. ಎಷ್ಟು ದಿನದಿಂದ ಈ ಕಳ್ಳಸಾಗಣೆ ನಡೆಯುತ್ತಿತ್ತು ಎಂಬುದರ ಬಗ್ಗೆ ಸಮಗ್ರ ತನಿಖೆ ಆಗಬೇಕಿದೆ. ಜತೆಗೆ ಅಕ್ರಮ ಸಾಗಣೆಗೆ ಸರಬರಾಜು ಮಾಡಿದ ಅಂಗಡಿ ಲೈಸನ್ಸ್ ರದ್ದು ಪಡಿಸಬೇಕು.

ಗೊಬ್ಬರವನ್ನು ಅಕ್ರಮವಾಗಿ ಸಂಗ್ರಹಿಸಿ ತಮಿಳುನಾಡಿಗೆ ಸಾಗಣೆ ಮಾಡುತ್ತಿದ್ದರೂ ಗುಂಡ್ಲುಪೇಟೆಯಲ್ಲಿರುವ ಆರ್‌ಟಿಒ ಚೆಕ್‌ಪೋಸ್ಟ್ ನಲ್ಲಿರುವ ಅಧಿಕಾರಿಗಳು ಮತ್ತು ಸಿಬ್ಬಂದಿ ಏನು ಮಾಡುತ್ತಿದ್ದರು? ಬಂಡೀಪುರ ಅರಣ್ಯದೊಳಗಿನಿಂದ ತಮಿಳುನಾಡಿಗೆ ಸಂಪರ್ಕ ಕಲ್ಪಿಸುವ ಕೆಕ್ಕನಹಳ್ಳ ಚೆಕ್‌ಪೋಸ್ಟ್‌ನಲ್ಲಿ ಅರಣ್ಯ ಇಲಾಖೆಯ ಚೆಕ್‌ಪೋಸ್ಟ್ ಇದೆ. ಇಲ್ಲಿರುವ ಅಧಿಕಾರಿಗಳು ತಪಾಸಣೆ ಮಾಡುವುದಿಲ್ಲವೇ? ತಮಿಳುನಾಡಿಗೆ ಬರುವ ಮತ್ತು ಹೋಗುವ ವಾಹನಗಳ ತಪಾಸಣೆಯೇ ನಡೆಯುವುದಿಲ್ಲ, ರಾತ್ರಿ ವೇಳೆ ಚೆಕ್‌ಪೋಸ್ಟ್ ಸಿಬ್ಬಂದಿ ಹಣ ಪಡೆದು ಬಿಟ್ಟು ಬಿಡುತ್ತಾರೆ ಎಂದು ಕೇಳಿಬರುವ ಆರೋಪದಲ್ಲಿ ಮೇಲ್ನೋಟಕ್ಕೆ ಸತ್ಯಾಂಶವಿದೆ ಎನಿಸದಿರದು. ಚೆಕ್‌ಪೋಸ್ಟ್‌ಗಳಲ್ಲಿ ಕಟ್ಟುನಿಟ್ಟಾಗಿ ವಾಹನಗಳ ತಪಾಸಣೆ ನಡೆದರೆ ಕಳ್ಳ ಸಾಗಣೆ ತಡೆಗಟ್ಟಬಹುದು. ಈ ನಿಟ್ಟಿನಲ್ಲಿ ಚೆಕ್‌ಪೋಸ್ಟ್ ಗಳಲ್ಲಿ ತಪಾಸಣೆ ಬಿಗಿಗೊಳಿಸಬೇಕು. ಅಗತ್ಯ ಸಿಬ್ಬಂದಿ ನಿಯೋಜಿಸಬೇಕು, ಸಿಬ್ಬಂದಿ ಸೂಕ್ತ ಶಸ್ತ್ರಾಸ್ತ
ನೀಡಬೇಕಿದೆ. ಮುಖ್ಯವಾಗಿ ರೈತರಿಗೆ ಸಕಾಲದಲ್ಲಿ ರಸಗೊಬ್ಬರಗಳು ಲಭ್ಯವಾಗುವಂತೆ ಕ್ರಮಕೈಗೊಳ್ಳಬೇಕಿದೆ.

andolana

Recent Posts

ಮಹಾಶಿವರಾತ್ರಿ ಜಾತ್ರೆ; ೩.೩೫ ಕೋಟಿ ರೂ.ಆದಾಯ

ಮಹಾದೇಶ್ ಎಂ.ಗೌಡ ಮಲೆ ಮಹದೇಶ್ವರ ಬೆಟ್ಟಕೆ ಆಗಮಿಸಿದ ಲಕ್ಷಾಂತರ ಭಕ್ತಾದಿಗಳಿಂದ ಕಾಣಿಕೆ ಅರ್ಪಣೆ  ಹನೂರು: ತಾಲ್ಲೂಕಿನ ಮಲೆ ಮಹದೇಶ್ವರ ಬೆಟ್ಟದಲ್ಲಿ…

3 mins ago

ಪಿಯುಸಿ ಪರೀಕ್ಷೆ ಅಕ್ರಮ ತಡೆಗೆ ವೆಬ್ ಕಾಸ್ಟಿಂಗ್ ಕಣ್ಗಾವಲು

ಕೆ.ಬಿ.ರಮೇಶನಾಯಕ ಮೈಸೂರು ಜಿಲ್ಲೆಯಲ್ಲಿ ೫೧ ಪರೀಕ್ಷಾ ಕೇಂದ್ರಗಳಲ್ಲಿ ಸಿಸಿಟಿವಿ ಅಳವಡಿಕೆ ಪರೀಕ್ಷಾ ಕೇಂದ್ರಗಳ ವೀಕ್ಷಣೆಗೆ ೧೦ ಉಪನ್ಯಾಸಕರ ತಂಡ ರಚನೆ…

7 mins ago

ವಾಹನ ಸವಾರರ ಗಮನಕ್ಕೆ ; ಏಪ್ರಿಲ್‌ 1 ರಿಂದ ಟೋಲ್‌ಗಳಲ್ಲಿ ಇಲ್ಲ ನಗದು ಪಾವತಿ

ಹೊಸದಿಲ್ಲಿ : ಮುಂಬರುವ ಏಪ್ರಿಲ್‌ನಿಂದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ರಸ್ತೆಗಳ ಟೋಲ್ ಪ್ಲಾಜಾಗಳಲ್ಲಿ ನಗದು ವಹಿವಾಟುಗಳನ್ನು ಸ್ವೀಕರಿಸುವುದಿಲ್ಲ ಎಂದು ರಸ್ತೆ…

11 hours ago

ಕಾಡಾನೆ ದಾಳಿಗೆ ಕಾರ್ಮಿಕ ಮಹಿಳೆ ಗಂಭೀರ ; ಅರಣ್ಯ ಇಲಾಖೆ ಸಿಬ್ಬಂದಿಗೂ ಗಾಯ

ಸಿದ್ದಾಪುರ : ವಿರಾಜಪೇಟೆ ತಾಲ್ಲೂಕಿನ ಮಾಲ್ದಾರೆ ಸಮೀಪದ ತಟ್ಟಳ್ಳಿಯಲ್ಲಿ ಕಾಫಿ ತೋಟದಲ್ಲಿ ಕೆಲಸ ನಿರ್ವಹಿಸುತ್ತಿದ್ದ ಕಾರ್ಮಿಕರ ಮೇಲೆ ಕಾಡಾನೆ ದಾಳಿ…

13 hours ago

ಫೆ.28ರಿಂದ ಪಿಯುಸಿ ಪರೀಕ್ಷೆ : ಪರೀಕ್ಷಾ ಕೇಂದ್ರಗಳ ಸುತ್ತಲೂ ನಿಷೇಧಾಜ್ಞೆ ಜಾರಿ

ಮೈಸೂರು : ಫೆ.28ರಿಂದ ಮಾ.17ರವರೆಗೆ ಮೈಸೂರು ನಗರದ 28 ಪರೀಕ್ಷಾ ಕೇಂದ್ರಗಳಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆ ನಡೆಯಲಿದ್ದು, ಸದರಿ ಪರೀಕ್ಷೆಗಳನ್ನು…

13 hours ago