ಮಂಡ್ಯ ಜಿಲ್ಲೆಯ ಮಳವಳ್ಳಿಯ10 ವರ್ಷದ ವಿದ್ಯಾರ್ಥಿನಿ ಮೇಲೆ ನಡೆದ ಅತ್ಯಾಚಾರ ಘಟನೆ ಖಂಡನೀಯ ಹಾಗೂ ವಿಷಾದನೀಯ ಕೃತ್ಯ. ಈ ಪೈಶಾಚಿಕ ಕೃತ್ಯಕ್ಕೆ ಕ್ಷಮೆಯೇ ಇಲ್ಲ. ಅಪರಾಧಿಗೆ ಕಠಿಣ ಶಿಕ್ಷೆಯಾಗಬೇಕೆಂಬುದರಲ್ಲಿ ಎರಡು ಮಾತಿಲ್ಲ. ಅದು ಎಲ್ಲರ ಏಕಾಭಿಪ್ರಾಯವೂ ಹೌದು.
ಮೊದಲಿಗೆ ಮಂಡ್ಯ ಜಿಲ್ಲೆ, ನಂತರ ರಾಜ್ಯಾದ್ಯಂತ ಅನಧಿಕೃತ ಮನೆ ಪಾಠ ಕೇಂದ್ರಗಳ ಮೇಲೆ ಕಾನೂನು ಕ್ರಮವಹಿಸಿ, ಮುನ್ನೆಚ್ಚರಿಕೆ ಕ್ರಮವಾಗಿ ಮುಚ್ಚಿಸಿರುವ ಸರ್ಕಾರದ ಕ್ರಮ ಶ್ಲಾಘನೀಯ . ಆದರೆ, ಶಿಕ್ಷಣ ಇಲಾಖೆಯವರು ನಡೆಸಿದ ತನಿಖೆಯಲ್ಲಿ ಈ ದುಷ್ಕೃತ್ಯವೆಸಗಿದ ವ್ಯಕ್ತಿ ಶಿಕ್ಷಕನೇ ಅಲ್ಲ ಎಂಬ ಸಂಗತಿ ಬೆಳಕಿಗೆ ಬಂದಿದೆ. ಹಾಗಾಗಿ ಯಾರೋ ಅವಿವೇಕಿ ದುಷ್ಟನೊಬ್ಬ ಮಾಡಿದ ತಪ್ಪಿಗೆ ಇಡೀ ಶಿಕ್ಷಕ ಸಮುದಾಯವನ್ನು ದೂಷಿಸುತ್ತಿರುವುದು ನೋವಿನ ಸಂಗತಿ.
ರಾಜ್ಯದಲ್ಲಿ ಅರ್ಹತೆ ಪಡೆದ ನಿರುದ್ಯೋಗಿ ಶಿಕ್ಷಕರಿದ್ದಾರೆ. ಇಂದಿನ ಜೀವನ ಸಮಸ್ಯೆಗಳ ಸರಮಾಲೆಯಲ್ಲಿ ಶಿಕ್ಷಕರು ಪದವಿ ಪಡೆದು ಅದೆಷ್ಟೋ ವಿಶೇಷ ಚೇತನರು, ವಿಧವೆಯರು, ಅಸಹಾಯಕರು ಮನೆಪಾಠ ನಂಬಿ ಸ್ವಾಭಿಮಾನದ ಬದುಕು ರೂಪಿಸಿಕೊಂಡಿದ್ದಾರೆ.
ಶಿಕ್ಷಣ ಕಾಯಿದೆ ನಿಯಮ 36ರಂತೆ ಯಾವುದೇ ಶಿಕ್ಷಣ ಸಂಸ್ಥೆ ಅಥವಾ ಕೋಚಿಂಗ್ ಸೆಂಟರ್ ಇಲಾಖಾ ನೋಂದಣಿ ಇಲ್ಲದೆ ನಡೆಸಲು ಅವಕಾಶವಿರುವುದಿಲ್ಲ. ಈ ಆದೇಶವನ್ನು ಘಟನೆಯ ನಂತರ ಜಾರಿಗೆ ತರಲು ಶಿಕ್ಷಣ ಇಲಾಖೆ ಮುಂದಾಗಿದೆ. ಏಕಾಏಕಿ ಜಾರಿಗೆ ಮುಂದಾಗಿರುವುದರಿಂದ ಸಮಸ್ಯೆ ಉದ್ಭವಿಸಿದೆ. ಪದವಿ ನಿರುದ್ಯೋಗಿಗಳಿಗೆ ಶಿಕ್ಷಣ ಇಲಾಖೆಯ ದಿಢೀರ್ ಆದೇಶ ಆಘಾತ ನೀಡಿದೆ. ನಿರುದ್ಯೋಗಿಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಗಣನೀಯವಾಗಿ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಅತ್ಯಂತ ಕನಿಷ್ಠವಾದ ಮಾಸಿಕ ೩ ಸಾವಿರ ರೂ. ಸಂಬಳಕ್ಕೆ ಖಾಸಗಿ ಶಾಲೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಶಿಕ್ಷಕರ ಸಂಖ್ಯೆ ಕಡಿಮೆಯೇನಿಲ್ಲ. ಅವರು ಸಂಜೆ ಮನೆ ಪಾಠದ ಮೂಲಕ ಬದುಕಿಗೆ ಬೇಕಾದ ಪೂರಕ ವ್ಯವಸ್ಥೆಗಳಿಗೆ ಅನುಕೂಲವಾಗುವಂತೆ ಶ್ರಮಿಸುತ್ತಿದ್ದಾರೆ. ಕೊರೋನಾ ಅವಧಿಯಲ್ಲಿ ಶೈಕ್ಷಣಿಕ ಪ್ರಗತಿ ಕುಂಠಿತವಾಗಿರುವ ವಿಷಯ ಎಲ್ಲರಿಗೂ ತಿಳಿದಿದೆ. ಇಂತಹ ಸಮಯದಲ್ಲಿ ಶೈಕ್ಷಣಿಕ ಚಟುವಟಿಕೆಗೆ ವೇಗ ನೀಡಬೇಕಾಗಿರುವ ಹಿನ್ನೆಲೆಯಲ್ಲಿ ಸಂಜೆಯ ಮನೆಪಾಠ ಪ್ರಸ್ತುತ ಅನಿವಾರ್ಯ ಎಂಬ ಮನೋಭಾವ ಮಕ್ಕಳ ಪೋಷಕರಲ್ಲಿದೆ.
ಹಾಗೊಂದು ವೇಳೆ ಬದಲಿ ವ್ಯವಸ್ಥೆ ಮಾಡುವುದಾದರೆ ಪ್ರಸ್ತುತ ಶಾಲಾ ಪಾಠ ಪ್ರವಚನಗಳ ಸಮಯವನ್ನು ವಿಸ್ತರಿಸಿ ಶೈಕ್ಷಣಿಕ ಚಟುವಟಿಕೆಗೆ ವೇಗ ನೀಡಲು ಸಾಧ್ಯವೇ? ಇಲಾಖೆ ದಿಢೀರ್ ಆದೇಶದಿಂದ ಶಾಲೆ ಅವಧಿ ಮುಗಿದ ನಂತರ ವಿದ್ಯಾರ್ಥಿಗಳು ಪಾನಿಪುರಿ ಅಂಗಡಿ, ಹೋಟೆಲ್ಗಳಲ್ಲಿ , ಗ್ಯಾರೇಜ್, ಹಣ್ಣು ಅಂಗಡಿಗಳಲ್ಲಿ ಕೆಲಸಕ್ಕೆ ಆಸೆಪಟ್ಟು ಸೇರಿದರೆ ಬಾಲ ಕಾರ್ಮಿಕರ ಸಂಖ್ಯೆ ಹೆಚ್ಚಾಗುವ ಹಾಗೂ ಶೈಕ್ಷಣಿಕ ಪ್ರಗತಿ ಕುಂಠಿತವಾಗುವ ಸಾಧ್ಯತೆಗಳು ಇಲ್ಲದಿದ್ದಲ್ಲ.
ಅಧಿಕೃತ ಮನೆ ಪಾಠಗಳನ್ನು ಮಾಡಲು ಪ್ರಾಥಮಿಕ ಶಾಲೆಗೆ ಇಂತಿಷ್ಟು ಪ್ರಮಾಣ ಹಾಗೂ ಪ್ರೌಢಶಾಲೆಗೆ ಇಂತಿಷ್ಟು ಪ್ರಮಾಣದಲ್ಲಿ ಹಣ ನಿಗದಿಪಡಿಸಿದ್ದು, ಕನಿಷ್ಠ ಸಂಬಳಕ್ಕೆ ಖಾಸಗಿ ಶಾಲೆಗಳಲ್ಲಿ ಹಾಗೂ ತಾತ್ಕಾಲಿಕ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಬಡ ಶಿಕ್ಷಕರು ಲಕ್ಷಗಟ್ಟಲೆ ಹಣ ನೀಡಿ ನೋಂದಾವಣೆ ಮಾಡಿಕೊಳ್ಳಲು ಕಷ್ಟಕರವಾಗಿದೆ. ಹಾಗಾಗಿ ಗ್ರಾಮೀಣ ಪ್ರದೇಶದಲ್ಲಿ ಮನೆಪಾಠ ಮಾಡಿಕೊಂಡು ಲಕ್ಷಗಟ್ಟಲೆ ಹಣಗಳಿಸಲು ಸಾಧ್ಯವಿಲ್ಲ. ಬಡ ಮಕ್ಕಳಿಗೆ ಉಚಿತ ಪಾಠ ಮಾಡುತ್ತಿದ್ದ ಶಿಕ್ಷಕರು ಸೇವೆ ನಿಲ್ಲಿಸಬೇಕೆ? ಶಿಕ್ಷಣ ಇಲಾಖೆಯ ಆದೇಶದಂತೆ ಅಧಿಕೃತ ನೋಂದಣಿ ಮಾಡುವುದಾದರೆ ಒಂದು ಶಾಲೆಯನ್ನೇ ತೆಗೆಯಬಹುದಾದಂತಹ ನಿಯಮಗಳಿವೆ. ಈ ವಿಷಯದಲ್ಲಿ ಪೋಷಕರ ಜವಾಬ್ದಾರಿ ಕೂಡ ದೊಡ್ಡದು.
ಶಿಕ್ಷಕ ಪದವಿ ಪಡೆದ ಅರ್ಹ ವ್ಯಕ್ತಿ ಎಂದು ಗುರುತಿಸಿ ಅವರ ಬಳಿ ಮನೆಪಾಠಕ್ಕೆ ತಮ್ಮ ಮಕ್ಕಳನ್ನು ಕಳುಹಿಸುವ ಜವಾಬ್ದಾರಿಯನ್ನು ಕೂಡ ಪೋಷಕರು ಮೆರೆಯಬೇಕು. ಇತ್ತೀಚೆಗೆ ಕೇಂದ್ರ ಸರ್ಕಾರ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಗೆ ತಂದಿರುವ ಹಿನ್ನೆಲೆಯಲ್ಲಿ ಕ್ಲಿಷ್ಟಕರವಾದ ವಿಷಯಗಳನ್ನು ಅರ್ಥ ಮಾಡಿಕೊಂಡು ಮನೆಪಾಠದ ಅವಶ್ಯಕತೆ ಖಂಡಿತ ಅನಿವಾರ್ಯವಾಗಿದೆ ಎಂಬುದು ಹಲವು ಶಿಕ್ಷಕರ ಮನದಾಳದ ಮಾತು.
ಸರ್ಕಾರ ಸದ್ಯದಲ್ಲೇ ಸಮಿತಿ ರಚಿಸಿ ಕೆಲವು ನೀತಿ ರೂಪಿಸಿ, ನಿಯಮಗಳನ್ನು ಹಾಗೂ ಸಾಧಕ ಬಾಧಕಗಳನ್ನು ವಿಶ್ಲೇಷಣೆ ಮಾಡಿ ಸೇವಾ ದೃಷ್ಟಿಯಲ್ಲಿ ಕನಿಷ್ಠ ಗುರುಕಾಣಿಕೆ ಹಾಗೂ ಅಂತಹ ಉಚಿತ ಮನೆಪಾಠಗಳು ಹಾಗೂ ಬದುಕಿಗಾಗಿ ಮಾಡುವಂಥ ಮನೆಪಾಠಗಳ ಜೊತೆಗೆ ವಿದ್ಯಾರ್ಥಿಗಳ ರಕ್ಷಣಾ ದೃಷ್ಟಿಯಿಂದ ಹಾಗೂ ಶೈಕ್ಷಣಿಕ ಪ್ರಗತಿಗಾಗಿ ಕೈಗೊಳ್ಳಬೇಕಾದಂತಹ ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ಮಾಹಿತಿ ಪಡೆದುಕೊಂಡು ಶಿಕ್ಷಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಯಾವುದೇ ತೊಂದರೆ ಆಗದಂತೆ ಮುನ್ನೆಚ್ಚರಿಕೆ ವಹಿಸಿ ಸಮಸ್ಯೆಗಳನ್ನು ಸುಖಾಂತ್ಯ ಮಾಡಿ ಮನೆಪಾಠ ಮಾಡುವಂಥ ವ್ಯಾಪ್ತಿಯಲ್ಲೇ ನೋಂದಾವಣಿ ಮಾಡುವ ವ್ಯವಸ್ಥೆ ಮಾಡಬೇಕಾಗಿದೆ.
ಮೈಸೂರು: ಇ-ಸ್ವತ್ತು ಮಾಡಿ ಕೊಡಲು ಅರ್ಜಿದಾರರಿಗೆ ಹಣ ನೀಡುವಂತೆ ಒತ್ತಾಯ ಮಾಡಿದ ಗ್ರಾಮ ಪಂಚಾಯಿತಿ ಪಿಡಿಒ ಕುಳ್ಳೇಗೌಡ ನಾಲ್ಕು ಸಾವಿರ…
ಮೈಸೂರು: ಕಳೆದ ಬಾರಿಯಂತೆ ಈ ಬಾರಿಯೂ ಅರ್ಥಪೂರ್ಣ ಹಾಗೂ ಅದ್ದೂರಿಯಾಗಿ ಕನ್ನಡ ರಾಜ್ಯೋತ್ಸವ ಆಚರಣೆ ಮಾಡಲಾಗುವುದು ಎಂದು ಅಪರ ಜಿಲ್ಲಾಧಿಕಾರಿ…
ಮೈಸೂರು: ನಗರವನ್ನು ಸ್ವಚ್ಛಗೊಳಿಸುವ ಮೂಲಕ ಜನರ ಆರೋಗ್ಯ ಕಾಪಾಡುವ ಪೌರಕಾರ್ಮಿಕರ ಆರೋಗ್ಯವೂ ಮುಖ್ಯ ವಾಗಿದ್ದು, ಅವರು ಈ ವಿಷಯದಲ್ಲಿ ನಿರ್ಲಕ್ಷ್ಯ…
ಹನೂರು: ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಅತಿ ದೊಡ್ಡ ಗ್ರಾಮ ಪಂಚಾಯಿತಿ ಎಂದು ಪ್ರಸಿದ್ಧಿ ಪಡೆದಿರುವ ಮಾರ್ಟಳ್ಳಿ ಗ್ರಾಮ ಪಂಚಾಯಿತಿ ಮುಖ್ಯ…
ಹೊಸದಿಲ್ಲಿ: ತಮಿಳುನಾಡಿನ ಕೊಯಮತ್ತೂರಿನಲ್ಲಿರುವ ಸದ್ಗುರು ಜಗ್ಗಿ ವಾಸುದೇವ್ ಅವರ ಆಶ್ರಮ ಸೇರಲು ತನ್ನ ಇಬ್ಬರು ಹೆಣ್ಣುಮಕ್ಕಳನ್ನು ಬ್ರೈನ್ವಾಶ್ ಮಾಡಲಾಗಿದೆ ಎಂಬ…
ಮಡಿಕೇರಿ: ಮಗನಿಂದಲೇ ತಂದೆ ಹತ್ಯೆಯಾದ ಘಟನೆ ಶ್ರೀಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯ ಚಿಕ್ಕಮಂಡೂರು ಗ್ರಾಮದಲ್ಲಿ ನಡೆದಿದೆ. ಸಿ ಎನ್ ನಾಣಯ್ಯ…