೨೦೨೩ರ ವಿಧಾನಸಭಾ ಚುನಾವಣೆಯಲ್ಲಿ ನೀಡಿದ್ದ ಭರವಸೆಯಂತೆ ಪಂಚ ಗ್ಯಾರಂಟಿ ಯೋಜನೆಗಳನ್ನು ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರು ಜಾರಿಗೊಳಿಸಿದ್ದರು. ಅನ್ನಭಾಗ್ಯ, ಗೃಹಲಕ್ಷ್ಮಿ, ಗೃಹಜ್ಯೋತಿ, ಶಕ್ತಿ ಮತ್ತು ಯುವನಿಧಿ ಯೋಜನೆಗಳು ಜಾರಿಯಾಗಿವೆ.
ವಿರೋಧಪಕ್ಷಗಳು ಈ ಸರ್ಕಾರಿ ಯೋಜನೆಗಳನ್ನು ಕಟುವಾಗಿ ವಿರೋಧಿಸಿದ್ದಲ್ಲದೆ, ಹಣಕಾಸು ಹೊಂದಾಣಿಕೆ ಅಸಾಧ್ಯ ಎಂದು ಟೀಕಿಸಿದ್ದವು; ಈಗಲೂ ಟೀಕಿಸುತ್ತಿವೆ. ಆದರೆ, ಇತರೆ ರಾಜ್ಯಗಳ ಚುನಾವಣೆಯಲ್ಲಿ ಬಿಜೆಪಿ ಕೂಡ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸುವ ಭರವಸೆ ನೀಡಿತ್ತು. ರಾಜ್ಯ ಕಾಂಗ್ರೆಸ್ ಪಕ್ಷದಲ್ಲಿ ನಡೆದ ಬೆಳವಣಿಗೆಯಲ್ಲಿ ಡಿ.ಕೆ.ಶಿವಕುಮಾರ್ ಅವರು ನೂತನ ಮುಖ್ಯ ಮಂತ್ರಿಯಾಗಿದ್ದಾರೆ. ಅವರು ನಡೆಸಿದ ಮೊದಲ ಪ್ರಗತಿಪರಿಶೀಲನಾ ಸಭೆಯಲ್ಲಿ ಗ್ಯಾರಂಟಿ ಯೋಜನೆಗಳ ಪೈಕಿ ಗೃಹಲಕ್ಷಿ ಮತ್ತು ಗೃಹಜ್ಯೋತಿ ಯೋಜನೆಗಳನ್ನು ಪರಿಷ್ಕರಿಸುವ ನಿಟ್ಟಿನಲ್ಲಿ ಅರ್ಹರಿಂದ ಮತ್ತೆ ಅರ್ಜಿ ಆಹ್ವಾನಿಸಲು ನಿರ್ಧಾರ ಕೈಗೊಳ್ಳಲಾಗಿದೆ.
ಗೃಹಲಕ್ಷಿ ಯೋಜನೆಯಡಿ ಪ್ರತಿಬಾರಿ ೧೦೦ ಕೋಟಿ ರೂ. ಅನರ್ಹರಿಗೆ ತಲುಪುತ್ತಿದೆ ಎಂಬುದು ಸರ್ಕಾರದ ಪ್ರತಿಪಾದನೆ. ಅಲ್ಲದೆ, ಹಲವು ಫಲಾನು ಭವಿಗಳು ನಿಧನರಾಗಿದ್ದರೂ ಹಣ ಪಾವತಿಯಾಗುತ್ತಿದೆ, ಒಂದೇ ಮನೆಯಲ್ಲಿ ಇಬ್ಬಿಬ್ಬರು ಫಲಾನುಭವಿಗಳು ಇದ್ದಾರೆ ಎಂಬಿತ್ಯಾದಿ ಅಂಶಗಳು ಚಿಂತಿಸಬೇಕಾದ ವಿಚಾರ. ಬಡವರು, ಬಿಪಿಎಲ್ ಕಾರ್ಡ್ದಾರರ ಮನೆಯ ಗೃಹಿಣಿಯರನ್ನು ಆರ್ಥಿಕವಾಗಿ ಸ್ವಾವಲಂಬಿಗಳಾಗಿಸುವ ದೂರದೃಷ್ಟಿಯಿಂದ ಜಾರಿಯಾದ ಗೃಹಲಕ್ಷಿ ಯೋಜನೆಯು ಹಲವರಿಂದ ದುರುಪಯೋಗವಾಗುತ್ತಿದೆ ಎಂಬ ಆರೋಪಗಳೂ ಇವೆ.
ಆದರೆ, ರಾಜ್ಯ ಸರ್ಕಾರದ ಈ ನಿರ್ಧಾರದಿಂದ ವಿಪಕ್ಷಗಳಿಗೆ ಮತ್ತಷ್ಟು ಆಹಾರ ಸಿಕ್ಕಿದಂತಾಗಿದೆ. ರಾಜ್ಯ ಸರ್ಕಾರ ಮಾತ್ರ ಯಾವುದೇ ಕಾರಣಕ್ಕೂ ಪಂಚ ಗ್ಯಾರಂಟಿ ಯೋಜನೆಗಳನ್ನು ಸ್ಥಗಿತಗೊಳಿಸುವುದಿಲ್ಲ. ಆದರೆ, ಅನರ್ಹರನ್ನು ಈ ಯೋಜನೆಗಳಿಂದ ಹೊರಗಿಡುವುದು ಖಚಿತ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ. ಇದಲ್ಲದೆ, ಗೃಹಜ್ಯೋತಿ ಯೋಜನೆಯಲ್ಲೂದುರ್ಬಳಕೆ ಕಂಡುಬಂದಿದೆ. ಒಬ್ಬೊಬ್ಬರ ಹೆಸರಿನಲ್ಲೇ ಐದಾರು ವಿದ್ಯುತ್ ಮೀಟರ್ಗಳಿವೆ. ಯೋಜನೆ ಲಾಭ ಪಡೆಯುವ ಮನೆಯಲ್ಲಿ ಫಲಾನುಭವಿಗಳೇ ಇದ್ದಾರೆಯೇ? ಅಥವಾ ಬೇರೆಯವರು ಇದ್ದಾರೆಯೇ? ಯೋಜನೆ ನಮ್ಮ ರಾಜ್ಯದವರಿಗೆ ಸಿಗುತ್ತಿದೆಯೇ? ಅಥವಾ ಬೇರೆ ರಾಜ್ಯದವರ ಪಾಲಾಗುತ್ತಿದೆಯೇ? ಎಂಬ ಅಂಶಗಳ ಲೆಕ್ಕಾಚಾರದಲ್ಲಿ ಗೃಹಜ್ಯೋತಿಯ ಪರಿಷ್ಕರಣೆಗೆ ನಿರ್ಧಾರ ಕೈಗೊಳ್ಳಲಾಗಿದೆ ಎಂಬುದು ರಾಜ್ಯ ಸರ್ಕಾರದ ಸಮರ್ಥನೆ.
ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದ ರಾಜ್ಯ ಸರ್ಕಾರ, ಅಧಿಕಾರಿಗಳು ಗ್ಯಾರಂಟಿ ಯೋಜನೆಗಳ ಪರಿಷ್ಕರಣೆಯಲ್ಲಿ ಬಹಳ ಸೂಕ್ಷ ವಾಗಿ ಯೋಚಿಸಿ ನಿರ್ಧಾರಗಳನ್ನು ಕೈಗೊಳ್ಳಬೇಕಾಗುತ್ತದೆ. ‘ನೂರಾರು ಕಳ್ಳರು ತಪ್ಪಿಸಿಕೊಂಡರೂ, ಒಬ್ಬ ನಿರಪರಾಧಿಗೆ ಶಿಕ್ಷೆಯಾಗಬಾರದು’ ಎಂಬುದು ಸಂವಿಧಾನದ ಆಶಯ. ಸರ್ಕಾರ ಇದನ್ನು ಗಮನದಲ್ಲಿಟ್ಟುಕೊಂಡು ಅನರ್ಹರನ್ನು ಯೋಜನೆಯಿಂದ ಹೊರಗಿಡುವ ಪ್ರಕ್ರಿಯೆ ನಡೆಸಬೇಕು. ಆ ಮೂಲಕ ನಿಜವಾದ ಅರ್ಹರು ಸೌಲಭ್ಯಗಳಿಂದ ವಂಚಿತರಾಗದಂತೆ ಎಚ್ಚರಿಕೆ ವಹಿಸಬೇಕು. ಬಯೋಮೆಟ್ರಿಕ್ ಹಾಗೂ ಮತ್ತೆ ಅರ್ಜಿ ಸಲ್ಲಿಸಬೇಕಾದ ಸಂದರ್ಭದಲ್ಲಿ ಅನೇಕ ಮಂದಿ ಅರ್ಹರು ತೊಡಕಿಗೆ ಸಿಲುಕಬಹುದು. ಏಕೆಂದರೆ ಸಾಕಷ್ಟು ಮಂದಿಗೆ ಅಕ್ಷರ ಜ್ಞಾನ ಇರುವುದಿಲ್ಲ ಅಥವಾ ಆಧುನಿಕ ತಂತ್ರಜ್ಞಾನದ ಅರಿವು ಇರುವುದಿಲ್ಲ. ಹಾಗಾಗಿ ನಿಗದಿತ ಅವಧಿಯಲ್ಲಿ ಅರ್ಜಿ ಸಲ್ಲಿಸಲು ಸಾಧ್ಯವಾಗದಿರಬಹುದು. ಇಂತಹ ಸಂಕಷ್ಟಗಳನ್ನೂ ಸರ್ಕಾರ ಗಮನಿಸಬೇಕಾಗುತ್ತದೆ.
ಅದರಲ್ಲಿಯೂ ಗೃಹಲಕ್ಷಿ ಫಲಾನುಭವಿಗಳು ಪ್ರತಿ ತಿಂಗಳು ದೊರೆಯುವ ೨,೦೦೦ ರೂ.ಗಳಿಂದ ಆಯಾ ತಿಂಗಳು ಏನೇನು ಖರ್ಚುಗಳು ಇವೆ? ಎಷ್ಟೆಷ್ಟು ಖರ್ಚುಮಾಡಬೇಕಾಗುತ್ತದೆ? ಹಣ ಉಳಿಯದಿದ್ದರೂ ಖರ್ಚಿಗೆ ಸರಿಹೋದರೆ ಸಾಕು ಎಂಬಂತಹ ಸ್ಥಿತಿಯಲ್ಲಿದ್ದಾರೆ. ಯಾರೋ ಕೆಲವರು ಮಾತ್ರ ಆ ಹಣವನ್ನು ಉಳಿಸಿ ಮಕ್ಕಳ ಶಿಕ್ಷಣ ಅಥವಾ ಆರೋಗ್ಯಕ್ಕೆ ಬಳಸಬಹುದು. ಆದರೆ, ಶೇ.೯೦ರಷ್ಟು ಫಲಾನುಭವಿಗಳಿಗೆ ನಿತ್ಯ ಜೀವನದ ಹೊರತಾಗಿ ದೊಡ್ಡ ಆಸೆಗಳನ್ನು ಪೂರೈಸಿಕೊಳ್ಳುವುದು ಕಷ್ಟಸಾಧ್ಯ. ಮಹಿಳಾ ಸ್ವಸಹಾಯ ಸಂಘಗಳಿಂದ ಪಡೆದ ಸಾಲದ ಕಂತು ಪಾವತಿಗೂ ಈ ಗೃಹಲಕ್ಷಿ ಹಣವನ್ನೇ ಕಾಯುತ್ತಾರೆ ಎಂಬುದು ದಿಟ. ಇದೆಲ್ಲದರ ನಡುವೆ ಸರ್ಕಾರ ಗ್ಯಾರಂಟಿ ಯೋಜನೆಗಳನ್ನು ಸ್ಥಗಿತಗೊಳಿಸುವುದಿಲ್ಲ ಎಂದು ಹೇಳಿರುವುದು, ಕಷ್ಟಕರ ಜೀವನ ನಡೆಸುತ್ತಿರುವ ಅರ್ಹ ಫಲಾನುಭವಿಗಳಿಗೆ ತುಸು ನೆಮ್ಮದಿ ತಂದಿದೆ.
” ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ರಾಜ್ಯ ಸರ್ಕಾರ, ಅಧಿಕಾರಿಗಳು ಗ್ಯಾರಂಟಿ ಯೋಜನೆಗಳ ಪರಿಷ್ಕರಣೆಯಲ್ಲಿ ಬಹಳ ಸೂಕ್ಷ ವಾಗಿ ಯೋಚಿಸಿನಿರ್ಧಾರಗಳನ್ನು ಕೈಗೊಳ್ಳಬೇಕಾಗುತ್ತದೆ. ‘ನೂರಾರು ಕಳ್ಳರು ತಪ್ಪಿಸಿಕೊಂಡರೂ, ಒಬ್ಬ ನಿರಪರಾಧಿಗೆ ಶಿಕ್ಷೆಯಾಗಬಾರದು’ ಎಂಬುದು ಸಂವಿಧಾನದ ಆಶಯ. ಸರ್ಕಾರ ಇದನ್ನು ಗಮನದಲ್ಲಿಟ್ಟುಕೊಂಡು ಅನರ್ಹರನ್ನು ಯೋಜನೆಯಿಂದ ಹೊರಗಿಡುವ ಪ್ರಕ್ರಿಯೆ ನಡೆಸಬೇಕು.”
ಬೆಂಗಳೂರು ಡೈರಿ ಆರ್.ಟಿ.ವಿಠ್ಠಲಮೂರ್ತಿ ಮುಂಬರುವ ವಿಧಾನಸಭಾ ಚುನಾವಣೆಗೆ ತಂತಮ್ಮ ಪಕ್ಷದ ವೈಯಕ್ತಿಕ ಬಲ ಹೆಚ್ಚಿಸಿಕೊಳ್ಳಲೂ ಕೂಡ ತಂತ್ರ ರಾಜ್ಯ ಕಾಂಗ್ರೆಸ್ನ…
ಲಕ್ಷ್ಮೀಕಾಂತ್ ಕೊಮಾರಪ್ಪ ಎಚ್ಚರಿಕೆ ಫಲಕ, ಕಾವಲು ಸಿಬ್ಬಂದಿ ಇಲ್ಲ; ಪ್ರವಾಸಿಗರಿಗೆ ಇಲ್ಲಿಲ್ಲ ರಕ್ಷಣೆ ಸೋಮವಾರಪೇಟೆ: ಕೊಡಗಿನ ಪ್ರಮುಖ ಪ್ರವಾಸಿ ತಾಣಗಳಲ್ಲಿ ಒಂದಾದ…
ಮಂಜು ಕೋಟೆ ಕೋಟೆ ಸರ್ಕಾರಿ ಹಿರಿಯ ಪ್ರಾಥಮಿಕ ಬಾಲಕರ ಮಾದರಿ ಶಾಲೆ; ಮಕ್ಕಳ ದಾಖಲಾತಿಯೇ ಇಲ್ಲದೆ ೧, ೨ನೇ ತರಗತಿಗಳು…
ಪ್ರಶಾಂತ್ ಎಸ್. ಮೈಸೂರು : ಇಲ್ಲಿ ಕುಡಿಯಲು ನೀರಿಲ್ಲ... ಕುಳಿತುಕೊಳ್ಳಲು ಕುರ್ಚಿ ಇಲ್ಲ... ನಿಸರ್ಗ ಕರೆಗೆ ತುರ್ತಾದರೆ ಪರಿಸ್ಥಿತಿ ಏನೋ…
ಬೆಂಗಳೂರು: ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ನೀರಾನೆಯೊಂದು ಮುದ್ದಾದ ಮರಿಗೆ ಜನ್ಮ ನೀಡಿದೆ. ಉದ್ಯಾನದಲ್ಲಿದ್ದ 17 ವರ್ಷ ವಯಸ್ಸಿನ ದಶ್ಯ ಎಂಬ…