ಮಹಿಳೆಯರಿಗಾಗಿ 2 ವರ್ಷಗಳ ಅವಧಿಯ ವಿಶೇಷ ಉಳಿತಾಯ ಯೋಜನೆ
ಗರಿಷ್ಠ 2 ಲಕ್ಷ ರೂ. ಠೇವಣಿಗೆ ವಾರ್ಷಿಕ ಶೇ.7.5ರ ಆಕರ್ಷಕ ಬಡ್ಡಿ
ಆಜಾದಿ ಕಾ ಅಮೃತ ಮಹೋತ್ಸವದ ಅಂಗವಾಗಿ ವಿಶೇಷ ಯೋಜನೆ
ಹಿರಿಯ ನಾಗರಿಕರಿಗೆ ಗರಿಷ್ಠ ಠೇವಣಿ ಮಿತಿ ಹೆಚ್ಚಳದ ಕೊಡುಗೆ
ಗರಿಷ್ಠ ಠೇವಣಿ ಮಿತಿ 15 ಲಕ್ಷದಿಂದ 30 ಲಕ್ಷ ರೂ. ಗಳಿಗೆ ಏರಿಕೆ
60ರ ಮೇಲ್ಪಟ್ಟ ನಾಗರಿಕರ ಹಣದ ಹೂಡಿಕೆಗೆ ಸುರಕ್ಷಿತ ಮಾರ್ಗ
ಹಿರಿಯ ನಾಗರಿಕರ ಮಾಸಿಕ ಆದಾಯ ಯೋಜನೆ ಮಿತಿಯೂ ದುಪ್ಟಟ್ಟು
ಗರಿಷ್ಠ ಠೇವಣಿ ಮೊತ್ತ 9 ಲಕ್ಷಕ್ಕೆ ಏರಿಕೆ, ಜಂಟಿ ಖಾತೆ ಮೊತ್ತ 15 ಲಕ್ಷಕ್ಕೆ ಏರಿಕೆ
ಲೋಕೇಶ್ ಕಾಯರ್ಗ
ತಮ್ಮ ನಿವೃತ್ತಿಯ ನಂತರದ ದಿನಗಳಲ್ಲಿ ಯಾರಿಗೂ ಹೊರೆಯಾಗದೆ ಉಳಿತಾಯ ಯೋಜನೆಗಳಲ್ಲಿ ಹಣ ತೊಡಗಿಸಿ ಮಾಸಿಕ ಬಡ್ಡಿಯಿಂದ ಜೀವನ ನಿರ್ವಹಣೆ ಮಾಡಿಕೊಂಡು ಬರಬೇಕೆನ್ನುವುದು ನಿವೃತ್ತಿದಾರರ ಕನಸು. ಬರುತ್ತಿರುವ ಆದಾಯದಲ್ಲಿ ಅಲ್ಪಸ್ವಲ್ಪ ಹಣವನ್ನು ಕೂಡಿಡಬೇಕೆನ್ನುವುದು ಗೃಹಿಣಿಯರ ಆಸೆ. ಆದರೆ ಕಳೆದ ಕೆಲವು ವರ್ಷಗಳಿಂದ ಉಳಿತಾಯ ಯೋಜನೆಗಳ ಬಡ್ಡಿ ಇಳಿಯುತ್ತಲೇ ಬಂದಿದೆ. 80-90 ರ ದಶಕದಲ್ಲಿ ಶೇ.12ರಷ್ಟಿದ್ದ ಸಾರ್ವಜನಿಕ ಭವಿಷ್ಯನಿಧಿ ಬಡ್ಡಿದರ ಈಗ 7ರ ಆಸುಪಾಸಿನಲ್ಲಿದೆ. ಹಣದುಬ್ಬರದ ಈ ದಿನಗಳಲ್ಲಿ ಇಷ್ಟು ಕಡಿಮೆ ಬಡ್ಡಿಯಲ್ಲಿ ಜೀವನ ನಿರ್ವಹಣೆ ಮಾಡುವುದು ಕಷ್ಟ. ಹೆಚ್ಚು ಬಡ್ಡಿ ಸಿಗುವ ಆಸೆಯಿಂದ ಕೆಲವರು ಖಾಸಗಿ ಸಹಕಾರಿ ಸಂಸ್ಥೆಗಳು ಸೇರಿದಂತೆ ವಿಶ್ವಾಸಾರ್ಹವಲ್ಲದ ಸಂಸ್ಥೆಗಳಲ್ಲಿ ಹೂಡಿಕೆ ಮಾಡಿ ಮೋಸ ಹೋಗಿದ್ದೂ ಇದೆ. ಕೇಂದ್ರ ಬಜೆಟ್ ಮಂಡನೆಯ ಸಂದರ್ಭದಲ್ಲಿ ಉಳಿತಾಯ ಯೋಜನೆಗಳ ಬಡ್ಡಿ ದರ ಏರಿಕೆಯನ್ನು ನಿರೀಕ್ಷಿಸುತ್ತಿದ್ದ ನಾಗರಿಕರಿಗೆ ಕಳೆದ ಕೆಲವು ವರ್ಷಗಳಿಂದ ನಿರಾಶೆಯೇ ಕಾದಿತ್ತು. ಆದರೆ ಈ ಬಾರಿ ಹೂಡಿಕೆಯ ಪ್ರಮಾಣವನ್ನು ಹೆಚ್ಚಿಸುವ ಮೂಲಕ ಕೇಂದ್ರ ಸರಕಾರ ಹಿರಿಯ ನಾಗರಿಕರಿಗೆ ಮತ್ತು ಮಹಿಳೆಯರಿಗೆ ಸ್ವಲ್ಪ ಮಟ್ಟಿಗೆ ಸಾಂತ್ವನ, ಸಮಾಧಾನ ನೀಡಿದೆ.
ಮಹಿಳಾ ಸನ್ಮಾನ ಉಳಿತಾಯ ಪ್ರಮಾಣಪತ್ರ ಯೋಜನೆ
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಹಿಳೆಯರಿಗಾಗಿಯೇ ಪ್ರಕಟಿಸಿರುವ ವಿಶೇಷ ಯೋಜನೆ ಇದು. 75ನೇ ಸ್ವಾತಂತ್ರ್ಯ ಮಹೋತ್ಸವ ಆಚರಣೆ ಅಂಗವಾಗಿ ಘೋಷಿಸಿರುವ ಮಹಿಳಾ ಸನ್ಮಾನ ಉಳಿತಾಯ ಪ್ರಮಾಣಪತ್ರ ಯೋಜನೆಯಡಿ ಮಹಿಳೆ ಅಥವಾ ಹೆಣ್ಣು ಮಕ್ಕಳ ಹೆಸರಿನಲ್ಲಿ ಎರಡು ವರ್ಷಗಳ ಅವಧಿಗೆ 2 ಲಕ್ಷ ರೂ.ವರೆಗೆ ಹೂಡಿಕೆ ಮಾಡಬಹುದು. ಇದರ ಮೇಲೆ ವಾರ್ಷಿಕ ಶೇ.7.5ರ ಬಡ್ಡಿಯನ್ನು ನೀಡಲಾಗುವುದು. ಈ ಯೋಜನೆ ಮಾರ್ಚ್ 2025 ರವರೆಗೆ ಜಾರಿಯಲ್ಲಿರಲಿದೆ. ಈ ಯೋಜನೆಯಲ್ಲಿ ಭಾಗಶಃ ಹಿಂಪಡೆಯುವ ಸೌಲಭ್ಯವನ್ನು ಕಲ್ಪಿಸಲಾಗಿದೆ.
ಸದ್ಯಕ್ಕೆ ಎರಡು ವರ್ಷಗಳ ಅವಧಿಯ ಠೇವಣಿಗೆ ಬ್ಯಾಂಕುಗಳಲ್ಲಿ ಶೇ. 6ರಿಂದ ಶೇ. 6.5 ರಷ್ಟು ಬಡ್ಡಿ ದರವಿದೆ. ಇದಕ್ಕೆ ಹೋಲಿಸಿದರೆ ಇದು ಅತ್ಯಂತ ಆಕರ್ಷಕ ಯೋಜನೆಯಾಗಿದೆ. ತುರ್ತು ಸಮಯದಲ್ಲಿ ಭಾಗಶಃ ವಾಪಸಾತಿ ಸೌಲಭ್ಯ ಸಹ ಇರಲಿದೆ. ಮಹಿಳೆಯರಲ್ಲಿ ಸಣ್ಣ ಉಳಿತಾಯಕ್ಕೆ ಉತ್ತೇಜನ ನೀಡಲು ಈ ಯೋಜನೆ ಜಾರಿಗೆ ತರಲಾಗಿದೆ.
ಹಿರಿಯ ನಾಗರಿಕರಿಗೆ ಗರಿಷ್ಠ ಠೇವಣಿ ಮಿತಿ ಹೆಚ್ಚಳ
ಹಿರಿಯ ನಾಗರಿಕರಿಗೆ ಈ ತನಕ ಗರಿಷ್ಠ 15 ಲಕ್ಷ ರೂ.ಹಣ ಠೇವಣಿ ಇಡಲು ಅವಕಾಶವಿತ್ತು. 2023ರ ಕೇಂದ್ರ ಬಜೆಟ್ನಲ್ಲಿ ಗರಿಷ್ಠ ಠೇವಣಿ ಮಿತಿಯನ್ನು 15 ಲಕ್ಷ ರೂ. ಗಳಿಂದ 30 ಲಕ್ಷಕ್ಕೆ ಹೆಚ್ಚಿಸಲಾಗಿದೆ. ಇದು ಸೇವೆಯಿಂದ ನಿವೃತ್ತರಾದ ನಾಗರಿಕರಿಗೆ ಅನುಕೂಲ ಮಾಡಿಕೊಟ್ಟಿದೆ. ಸದ್ಯ ಕನಿಷ್ಠ ಸಾವಿರ ರೂ. ಗಳ ಹೂಡಿಕೆ ಇರುವ ಈ ಉಳಿತಾಯ ಯೋಜನೆಗೆ ಶೇ. 7.4ರಷ್ಟು ಬಡ್ಡಿ ನೀಡಲಾಗುತ್ತಿದೆ. ಆಂದರೆ ಗರಿಷ್ಟ 15 ಲಕ್ಷ ರೂ. ಠೇವಣಿ ಇಟ್ಟರೂ ತಿಂಗಳಿಗೆ 9250 ರೂ. ಬಡ್ಡಿ ಆದಾಯ ಸಿಗುತ್ತಿತ್ತು. ಇನ್ನು ಮುಂದೆ 30 ಲಕ್ಷ ರೂ. ತನಕ ಠೇವಣಿ ಇಟ್ಟು ಮಾಸಿಕ ದುಪ್ಟಟ್ಟು ಬಡ್ಡಿ ಆದಾಯ ಪಡೆಯಲು ಅವಕಾಶವಿದೆ. ಬ್ಯಾಂಕ್ಗಳಲ್ಲಿ ಅಥವಾ ಅಂಚೆ ಕಚೇರಿಗಳಲ್ಲಿ ಈ ಠೇವಣಿ ತೆರೆಯಲು ಅವಕಾಶವಿದೆ. ಆದರೆ 60 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನ ಜನರು ಮಾತ್ರ ಈ ಯೋಜನೆಯಲ್ಲಿ ಖಾತೆಯನ್ನು ತೆರೆಯಬಹುದು. 55ರ ಬಳಿಕ ವಿಆರ್ಎಸ್ (ಸ್ವಯಂ ನಿವೃತ್ತಿ ಯೋಜನೆ) ತೆಗೆದುಕೊಂಡವರು ಕೂಡ ಈ ಯೋಜನೆಯಲ್ಲಿ ಖಾತೆ ತೆರೆಯಬಹುದು.
ಇದೇ ವೇಳೆ, ಮಾಸಿಕ ಆದಾಯ ಯೋಜನೆಯ ಮಿತಿಯನ್ನೂ ದ್ವಿಗುಣಗೊಳಿಸಲಾಗಿದೆ. ಇದುವರೆಗೆ ಮಾಸಿಕ ಆದಾಯ ಖಾತೆ ಯೋಜನೆಯಡಿ ಒಂದು ಖಾತೆಯಲ್ಲಿ ಗರಿಷ್ಠ 4.5 ರೂ. ಠೇವಣಿ ಇಡಲು ಅವಕಾಶವಿತ್ತು. ಈ ಮೊತ್ತವನ್ನು 9 ಲಕ್ಷ ರೂ. ಗಳಿಗೆ ಏರಿಸಲಾಗಿದೆ. ಪತಿ-ಪತ್ನಿಯರ ಹೆಸರಿನ ಜಂಟಿ ಖಾತೆ ಠೇವಣಿ ಮಿತಿಯನ್ನು 9 ಲಕ್ಷದಿಂದ 15 ಲಕ್ಷ ರೂ.ಗಳಿಗೆ ಹೆಚ್ಚಿಸಲಾಗಿದೆ. ಪ್ರಸ್ತುತ ಈ ಠೇವಣಿಗೆ ಶೇ.6ರ ಆಸುಪಾಸಿನಲ್ಲಿ ಬಡ್ಡಿ ನೀಡಲಾಗುತ್ತಿದೆ.
ಬೆಂಗಳೂರು: ಸಿಎಂ ಸಿದ್ದರಾಮಯ್ಯ ಅವರಿಂದು ದಾಖಲೆಯ 17ನೇ ಬಜೆಟ್ ಅನ್ನು ಮಂಡಿಸಿದರು. ವಿಧಾನಸೌಧದಲ್ಲಿ ಬಜೆಟ್ ಮಂಡಿಸಿದ ಸಿಎಂ ಸಿದ್ದರಾಮಯ್ಯ ಅವರು,…
ಬೆಂಗಳೂರು: ರಾಜ್ಯ ಬಜೆಟ್ನಲ್ಲಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಹೆಸರು ಬದಲಾವಣೆ ಮಾಡಲಾಗಿದ್ದು, ಶಾಂತವೇರಿ ಗೋಪಾಲಗೌಡ ಆಸ್ಪತ್ರೆ ಎಂದು ಹೆಸರು ಬದಲಾವಣೆ…
ಬೆಂಗಳೂರು: ಇಂದು ಮಂಡನೆ ಆದ ರಾಜ್ಯ ಬಜೆಟ್ನಲ್ಲಿ ಬೆಂಗಳೂರು ಅಭಿವೃದ್ಧಿಗೆ 7 ಸಾವಿರ ಕೋಟಿ ಅನುದಾನ ಘೋಷಣೆ ಮಾಡಲಾಗಿದೆ. ರಾಜ್ಯ…
ಬೆಂಗಳೂರು: ಸಿಎಂ ಸಿದ್ದರಾಮಯ್ಯ ಅವರು ಇಂದು ರಾಜ್ಯ ಬಜೆಟ್ ಮಂಡಿಸಿದ್ದಾರೆ. ವಿಧಾನಸೌಧದಲ್ಲಿ ಬಜೆಟ್ ಮಂಡಿಸಿದ ಸಿಎಂ ಸಿದ್ದರಾಮಯ್ಯ ಅವರು, 83…
ಬೆಂಗಳೂರು: ರಾಜ್ಯ ಸರ್ಕಾರ ಈ ವರ್ಷ ಪ್ರಮುಖ ಇಲಾಖೆಗಳ ಹುದ್ದೆಗಳ ಭರ್ತಿಗೆ ಕ್ರಮ ಕೈಗೊಂಡಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.…
ಬೆಂಗಳೂರು: ಸಿಎಂ ಸಿದ್ದರಾಮಯ್ಯ ಅವರಿಂದು ದಾಖಲೆಯ 17ನೇ ಬಜೆಟ್ ಅನ್ನು ಮಂಡಿಸುತ್ತಿದ್ದಾರೆ. ವಿಧಾನಸೌಧದಲ್ಲಿ ರಾಜ್ಯ ಬಜೆಟ್ ಮಂಡಿಸುತ್ತಿರುವ ಸಿಎಂ ಸಿದ್ದರಾಮಯ್ಯ…