ಎಡಿಟೋರಿಯಲ್

ಜನಹಿತ ಮರೆತ ಜನಪ್ರತಿನಿಧಿಗಳ ಜಟಾಪಟಿಯಿಂದ ಅಭಿವೃದ್ಧಿಗೆ ಹಿನ್ನಡೆ

ಜನಪ್ರತಿನಿಧಿಗಳು ಜನಹಿತ ಮರೆತರೆ ಏನಾಗುತ್ತದೆ ಎಂಬುದಕ್ಕೆ ಮೈಸೂರು- ಊಟಿ ರಸ್ತೆಯಲ್ಲಿ ಜೆಎಸ್‌ಎಸ್ ಕಾಲೇಜು ಮುಂಭಾಗ ನಿರ್ಮಿಸಲಾಗುತ್ತಿರುವ ಪ್ರಯಾಣಿಕರ ತಂಗುದಾಣದ ವಿವಾದ ಜ್ವಲಂತ ಸಾಕ್ಷಿಯಾಗಿದೆ. ತಂಗುದಾಣದ ಅಂಗಳಕ್ಕೆ ಧರ್ಮದ ಹಂಗು ಮೆತ್ತುವ ಪ್ರಯತ್ನ ನಡೆದಿರುವುದು ದುರದೃಷ್ಟಕರ ಬೆಳವಣಿಗೆ.

ವಾಸ್ತವವಾಗಿ ಸಮಸ್ಯೆ ಪ್ರಯಾಣಿಕರ ತಂಗುದಾಣದ್ದಲ್ಲ. ಪ್ರದೇಶದ ಸರ್ವಾಂಗೀಣ ಅಭಿವೃದ್ಧಿಯ ನೈತಿಕ ಹೊಣೆ ಹೊತ್ತ ಶಾಸಕರು ಮತ್ತು ಸಂಸದರ ನಡುವಿನ ಮುಸುಕಿನ ಗುದ್ದಾಟ ಮತ್ತು ಸ್ವಪ್ರತಿಷ್ಠೆಯೇ ಇಲ್ಲಿ ದೊಡ್ಡ ಸಮಸ್ಯೆಯಾಗಿದೆ. ಸಮಸ್ಯೆ ದೊಡ್ಡದು ಏಕೆಂದರೆ ಜಟಾಪಟಿಗೆ ಇಳಿದಿರುವ ಉಭಯ ನಾಯಕರು ಸ್ವಪಕ್ಷೀಯರೇ! ಅದೂ ಆಡಳಿತಾರೂಢ ಪಕ್ಷವನ್ನು ಪ್ರತಿನಿಧಿಸುತ್ತಿದ್ದಾರೆ.

ದಿನಕ್ಕೊಂದು ರೂಪ ಪಡೆಯುತ್ತಿರುವ ಪ್ರಯಾಣಿಕರ ತಂಗುದಾಣದ ವಿವಾದವು ಮೈಸೂರಿನ ಸ್ಥಳೀಯ ರಾಜಕೀಯ ಸಾಗಿರುವ ದಿಕ್ಕಿನ ಸಂಕೇತವೂ ಆಗಿದೆ.

ಮೈಸೂರು ಎಲ್ಲರೂ ಅಂದುಕೊಂಡಷ್ಟು ಸುಭಿಕ್ಷವಾಗಿಲ್ಲ. ಸಮಸ್ಯೆಗಳನ್ನೇ ಹಾಸಿ ಹೊದ್ದು ಮಲಗಿದೆ. ಶಾಸಕರು- ಸಂಸದರು ಪ್ರಯತ್ನ ಪಟ್ಟರೆ ಈ ಸಮಸ್ಯೆಗಳಿಗೆ ತಾತ್ಕಾಲಿಕ ಪರಿಹಾರಗಳನ್ನು, ದೀರ್ಘಕಾಲೀನ ಪರಿಹಾರಗಳನ್ನು ಕಂಡುಕೊಳ್ಳುವುದು ಕಷ್ಟವೇನೂ ಅಲ್ಲ. ಆದರೆ, ಅಂತಹ ಪ್ರಯತ್ನಗಳು ನಡೆಯುತ್ತಲೇ ಇಲ್ಲ. ಅವಕಾಶವಾದಾಗಲೆಲ್ಲ ವಿವಾದ ಹುಟ್ಟು ಹಾಕುವ, ಅದಕ್ಕೆ ಧರ್ಮದ ತಳುಕು ಹಾಕುವ ಪ್ರವೃತ್ತಿ ಯಾವತ್ತೂ ಅಭಿವೃದ್ಧಿಗೆ ಮಾರಕ.
ಈಗ ಭುಗಿಲೆದ್ದಿರುವ ಪ್ರಯಾಣಿಕರ ತಂಗುದಾಣದ ನಿರ್ಮಾಣ ವಿವಾದ ವಾಸ್ತವವಾಗಿ ಇಷ್ಟು ದೊಡ್ಡ ವಿವಾದವಾಗುವ ಸಂಗತಿಯೇ ಅಲ್ಲ. ತಂಗುದಾಣದ ಮೇಲಿನ ಗೋಪುರವು ಗುಂಬಜ್ ಮಾದರಿಯಲ್ಲಿದೆ ಎಂಬುದು ಮೈಸೂರು- ಕೊಡಗು ಸಂಸದ ಪ್ರತಾಪ್ ಸಿಂಹ ಅವರ ತಕರಾರು. ಅದು ಗುಂಬಜ್ ಅಲ್ಲ, ಮೈಸೂರು ಅರಮನೆಗಳ ನಗರವಾಗಿರುವುದರಿಂದ ಅದರ ಪ್ರತಿರೂಪವಾಗಿ ಗೋಪುರಗಳನ್ನು ನಿರ್ಮಿಸಲಾಗಿದೆ ಎಂಬುದು ಕೃಷ್ಣರಾಜ ವಿಧಾನಸಭಾ ಕ್ಷೇತ್ರದ ಶಾಸಕ ರಾಮದಾಸ್ ಅವರ ಸಮಜಾಯಿಷಿ.

ಇಬ್ಬರೂ ಕೇಂದ್ರ ಮತ್ತು ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಭಾರತೀಯ ಜನತಾ ಪಕ್ಷವನ್ನು ಪ್ರತಿನಿಧಿಸುತ್ತಿದ್ದಾರೆ. ಇಬ್ಬರೂ ಈ ಭಾಗದ ಜನರ ಮತಗಳನ್ನು ಪಡೆದೇ ತಮ್ಮ ಸ್ಥಾನಗಳನ್ನು ಗಳಿಸಿದ್ದಾರೆ. ಹೀಗಾಗಿ ಒಂದು ಕ್ಷಣ ಜನರ ಹಿತದ ಬಗ್ಗೆ ಚಿಂತಿಸಿದ್ದರೆ ಉಭಯ ನಾಯಕರು ಖುದ್ದು ಮಾತುಕತೆ ನಡೆಸಿ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬಹುದಿತ್ತು. ವಿವಾದಗಳೆದ್ದ ಸಂದರ್ಭದಲ್ಲಿ ಮಾತುಕತೆಯ ಮೂಲಕವೇ ಸಮಸ್ಯೆ ಬಗೆಹರಿಸಿಕೊಳ್ಳಬೇಕಾದ್ದು ಅಪೇಕ್ಷಣೀಯ ಮತ್ತು ಜನಪ್ರತಿನಿಧಿಗಳ ನೈತಿಕ ಕರ್ತವ್ಯ ಕೂಡ.

ಸಂಸದರು ಗುಂಬಜ್ ಮಾದರಿಯಲ್ಲಿರುವುದರಿಂದ ಗೋಪುರ ತೆರವುಗೊಳಿಸದಿದ್ದರೆ ಹೊಡೆದು ಹಾಕುವುದಾಗಿ ಹೇಳಿಕೆ ನೀಡಿದ್ದಾರೆ. ಈ ಹೇಳಿಕೆ ನೀಡುವ ಅಗತ್ಯವಿರಲಿಲ್ಲ. ಈ ಕ್ಷೇತ್ರದ ಜನಪ್ರತಿನಿಧಿಯಾಗಿ ಸಾರ್ವಜನಿಕ ಸ್ಥಳಗಳಲ್ಲಿನ ಕಟ್ಟಡಗಳ ರೂಪುರೇಷೆಗಳು ಹೇಗಿರಬೇಕೆಂಬ ಬಗ್ಗೆ ಸಂಸದರು ನಿಲುವು ನಿರ್ಧಾರ ಕೈಗೊಳ್ಳುವುದರಲ್ಲಿ ತಪ್ಪೇನೂ ಇಲ್ಲ. ಆದು ಅವರ ಕರ್ತವ್ಯವೂ ಹೌದು, ಹಕ್ಕೂ ಹೌದು. ಆದರೆ, ನಮ್ಮ ಕರ್ತವ್ಯ ಪಾಲಿಸಲು, ಹಕ್ಕುಗಳನ್ನು ಪ್ರತಿಪಾದಿಸಲು ನೀತಿ ನಿಯಮಗಳಿವೆ. ಕಾನೂನು ಕಟ್ಟಳೆಗಳಿವೆ. ಅವುಗಳಿಗೆ ಅನಗುಣವಾಗಿಯೇ ನಮ್ಮ ನಡೆ, ನುಡಿಗಳಿರಬೇಕು. ಅದರಲ್ಲೂ ಜನಪ್ರತಿನಿಧಿಗಳಾಗಿದ್ದಾಗ ನಡೆ- ನುಡಿಯಲ್ಲಿ ಹೆಚ್ಚೆಚ್ಚು ಎಚ್ಚರಿಕೆ ವಹಿಸುವುದು ಅಗತ್ಯ. ಹೊತ್ತಿಉರಿಯುವ ಮನೆಯಲ್ಲಿ ಗಳ ಇರಿಯುವ ಕೆಲಸ ಯಾರಿಗೂ ಶೋಭೆ ತರುವುದಿಲ್ಲ.

ಒಂದೇ ಪಕ್ಷದ ಸಂಸದರು ಮತ್ತು ಶಾಸಕರು ಒಂದೇ ಒಂದು ಬಾರಿ ಮಾತನಾಡಿಕೊಂಡಿದ್ದರೆ ವಿವಾದ ಈ ಮಟ್ಟಕ್ಕೆ ಭುಗಿಲೇಳುತ್ತಿರಲಿಲ್ಲ. ಶಾಸಕರು ಮತ್ತು ಸಂಸದರ ನಡುವೆ ಸಮನ್ವಯ, ಸಂವಹನ, ಸಂಪರ್ಕ ಈ ಯಾವುದೂ ಇಲ್ಲವೆಂಬುದು ಈ ಘಟನೆಯಿಂದ ದೃಢ ಪಟ್ಟಿದೆ. ಸಂಸದರು ಹಾಗೂ ಶಾಸಕರು ಬೇರೆ ಬೇರೆ ಪಕ್ಷಗಳನ್ನು ಪ್ರತಿನಿಧಿಸುತ್ತಿದ್ದರೆ ಅದು ಬೇರೆಯ ಮಾತಾಗುತ್ತಿತ್ತು.

ಸಂಸದರು- ಶಾಸಕರ ನಡುವೆ ಸಮನ್ವಯ- ಸಂವಹನ- ಸಂಪರ್ಕ ತೀರಾ ಅಗತ್ಯ ಮತ್ತು ಅನಿವಾರ್ಯ. ವೈಯಕ್ತಿಕವಾಗಿ ಸಂಸದರಿಗೆ ಮತ್ತು ಶಾಸಕರಿಗೆ ಇವುಗಳ ಅಗತ್ಯ ಮತ್ತು ಅನಿವಾರ್ಯತೆ ಇಲ್ಲದೇ ಇರಬಹುದು. ಆದರೆ, ಕ್ಷೇತ್ರ ಜನತೆಯ ಹಿತದೃಷ್ಟಿಯಿಂದ, ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿ ದೃಷ್ಟಿಯಿಂದ ಇರಲೇಬೇಕು.

ಈಗಲೂ ಕಾಲ ಮಿಂಚಿಲ್ಲ. ಸಂಸದರು ಮತ್ತು ಶಾಸಕರು ಸಾರ್ವಜನಿಕವಾಗಿ ಪರೋಕ್ಷವಾಗಿ ಟೀಕಿಸುವ, ಹಂಗಿಸುವ ಹೇಳಿಕೆಗಳನ್ನು ನೀಡುವ ಬದಲು ಒಟ್ಟಿಗೆ ಕುಳಿತು ಪರಸ್ಪರ ವಿಚಾರ ವಿನಿಮಯ ಮಾಡಿಕೊಂಡು ವಿವಾದಕ್ಕೆ ತೆರೆಎಳೆಯಬೇಕಿದೆ. ಹಾಗೆ ಮಾಡುವ ಮೂಲಕ ಸಾರ್ವಜನಿಕರ ದೃಷ್ಟಿಯಲ್ಲಿ, ಮಿಗಿಲಾಗಿ ಆಯ್ಕೆಮಾಡಿದ ಮತದಾರರ ದೃಷ್ಟಿಯಲ್ಲಿ ಮತ್ತಷ್ಟು ಕೆಳಮಟ್ಟಕ್ಕೆ ಇಳಿಯುವುದು ತಪ್ಪುತ್ತದೆ. ಜತೆಗೆ ನಮ್ಮ ಬದ್ಧತೆ ಸಾರ್ವಜನಿಕ ಹಿತಾಸಕ್ತಿಯೇ ಹೊರತು ವೈಯಕ್ತಿಕ ಪ್ರತಿಷ್ಠೆಯಲ್ಲ ಎಂಬುದನ್ನು ಜನತೆಗೆ ಮನದಟ್ಟು ಮಾಡಿಕೊಟ್ಟಂತಾಗುತ್ತದೆ.

ಚುನಾವಣೆ ಸಮೀಪಿಸುತ್ತಿರುವುದರಿಂದ ವಿವಾದಗಳನ್ನು ಹುಟ್ಟು ಹಾಕುವುದು, ಆ ವಿವಾದಗಳಿಂದಲೇ ‘ಮತ ಬೆಳೆ’ ತೆಗೆಯಲು ಮುಂದಾಗುವ ಇರಾದೆ ಯಾರಿಗಾದರೂ ಇದ್ದರೆ ಅದು ಅಕ್ಷಮ್ಯ. ಕ್ಷೇತ್ರದಲ್ಲಿ ಆದ ಅಭಿವೃದ್ಧಿ, ಕ್ಷೇತ್ರದಲ್ಲಿನ ಕಾನೂನು ಸುವ್ಯವಸ್ಥೆ, ಸಹಬಾಳ್ವೆ, ಸಹಿಷ್ಣುತೆಯ ಆಧಾರದ ಮೇಲೆ ಮತ ಯಾಚಿಸುವುದು ನ್ಯಾಯಸಮ್ಮತ, ಸರ್ವಒಪ್ಪಿತ.

andolana

Recent Posts

ಮುಡಾ: ಇಡಿ ದಾಳಿಗೆ ರಾಜಕೀಯ ಕಾರಣವಲ್ಲ; ಅಶೋಕ್

ಜಾರಿ ನಿರ್ದೇಶನಾಲಯದ ದಾಳಿಗೆ ರಾಜಕೀಯ ಕಾರಣವಲ್ಲ, 3-4 ಸಾವಿರ ಕೋಟಿ ರೂ. ಅಕ್ರಮ ನಡೆದಿದೆ ಎಂದು ಹೇಳಿದ್ದೇ ಕಾಂಗ್ರೆಸ್‌ನವರು: ಪ್ರತಿಪಕ್ಷ…

26 mins ago

BJP ಟಿಕೆಟ್‌ ವಂಚನೆ: ಆರೋಪ ತಳ್ಳಿ ಹಾಕಿದ ಕೇಂದ್ರ ಸಚಿವ ಪ್ರಲ್ಹಾದ ಜೋಶಿ

ನವದೆಹಲಿ: ನನಗೆ ಸಹೋದರಿಯೇ ಇಲ್ಲ ಮತ್ತು ಗೋಪಾಲ್ ಜೋಶಿ ಮೇಲಿನ ಪ್ರಕರಣಕ್ಕೂ ತಮಗೂ ಯಾವುದೇ ಸಂಬಂಧವಿಲ್ಲ ಎಂದು ಕೇಂದ್ರ ಸಚಿವ…

31 mins ago

ಮಂಡ್ಯ ಟೂ ಇಂಡಿಯಾ: ಬೃಹತ್‌ ಉದ್ಯೋಗ ಮೇಳಕ್ಕೆ ಮೊದಲ ದಿನ ಅಭೂತಪೂರ್ವ ಸ್ಪಂದನೆ

ಮಂಡ್ಯ ಟೂ ಇಂಡಿಯಾ; ಸಕ್ಕರೆ ನಾಡಿನಲ್ಲಿ 2 ದಿನಗಳ ಬೃಹತ್ ಉದ್ಯೋಗ ಮೇಳ 150ಕ್ಕೂ ಹೆಚ್ಚು ಕಂಪನಿಗಳ ಭಾಗಿ, ಸಾವಿರಾರು…

41 mins ago

ಮುಡಾ ಮೇಲೆ ಇಡಿ ದಾಳಿ: ಸಿಬಿಐ ತನಿಖೆ ನಡೆಸುವರೆಗೂ ಹೋರಾಟ ಮುಂದುವರಿಕೆ: ಸ್ನೇಹಮಯಿ ಕೃಷ್ಣ

ಮೈಸೂರು: ಮುಡಾ ಮೇಲಿನ ಇಡಿ ಕಾರ್ಯಾಚರಣೆ ಕೇವಲ ಸಿಎಂ ಸಿದ್ದರಾಮಯ್ಯ ಅವರ ಕುಟುಂಬದವರ ಪ್ರಕರಣವಲ್ಲ. ಸಂಪೂರ್ಣ ಮುಡಾ ಅಕ್ರಮದ ಬಗ್ಗೆ…

1 hour ago

ಮುಡಾ ಮೇಲೆ ಇ.ಡಿ.ದಾಳಿ: ದಾಖಲೆಗಳನ್ನು ತಿದ್ದಲು ಯಾರಿಂದಲೂ ಸಾಧ್ಯವಿಲ್ಲ: ಡಿಸಿಎಂ ʼಡಿಕೆಶಿʼ

ಬೆಂಗಳೂರು: ಮುಡಾ ಕಚೇರಿ ಮೇಲೆ ಇ.ಡಿ. ಅಧಿಕಾರಿಗಳು ದಾಳಿ ಮಾಡಿ ದಾಖಲೆ ಪರಿಶೀಲಿಸಿದ್ದಾರೆ. ಕಚೇರಿಯಲ್ಲಿಯೇ ದಾಖಲೆಗಳನ್ನು ತಿದ್ದಲು ಯಾರಿಂದಲೂ ಸಾಧ್ಯವಿಲ್ಲ…

2 hours ago

ಮುಡಾ ಕಚೇರಿ ಮೇಲೆ ಇ.ಡಿ.ದಾಳಿ: ಸಿಎಂ ಸಿದ್ದರಾಮಯ್ಯ ಫಸ್ಟ್‌ ರಿಯಾಕ್ಷನ್‌

ಬೆಂಗಳೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಕಚೇರಿ ಮೇಲೆ ಶುಕ್ರವಾರ ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳು ದಾಳಿ ನಡೆಸಿದ್ದು, ಈ ಬಗ್ಗೆ…

2 hours ago