ಎಂ.ಕೆ.ಹೆಗಡೆ
ಭಾಷಾವಾರು ರಾಜ್ಯಗಳ ರಚನೆಯಾದ ಬಳಿಕ ಕರ್ನಾಟಕ–ಮಹಾರಾಷ್ಟ್ರ ಗಡಿ ವಿವಾದ ಅತ್ಯಂತ ದೊಡ್ಡ ವಿವಾದವೆಂದು ಪರಿಗಣಿಸಲಾಗಿದೆ. ಕಳೆದ 6 ದಶಕಗಳಿಗೂ ಹೆಚ್ಚಿನ ಕಾಲದಿಂದ ಜೀವಂತವಾಗಿರುವ ಈ ಗಡಿ ವ್ಯಾಜ್ಯ ಆಗಾಗ ಉಲ್ಬಣಗೊಳ್ಳುತ್ತ, ಕೆಲ ಸಮಯ ಬೂದಿ ಮುಚ್ಚಿದ ಕೆಂಡದಂತೆ ಒಳಗೊಳಗೆ ನಿಗಿ ನಿಗಿ ಉರಿಯುತ್ತಿರುತ್ತದೆ.
ಕರ್ನಾಟಕದ ಕಾರವಾರ, ಬೆಳಗಾವಿ, ಬೀದರ್, ಬಾಲ್ಕಿ, ನಿಪ್ಪಾಣಿ ಮೊದಲಾದ ಪ್ರದೇಶಗಳ 865 ಹಳ್ಳಿ–ಪಟ್ಟಣಗಳಲ್ಲಿ ಮರಾಠಿ ಭಾಷಿಕರ ಸಂಖ್ಯೆ ಅಧಿಕವಾಗಿರುವುದರಿಂದ ತನಗೆ ಸೇರಬೇಕೆಂದು ಮಹಾರಾಷ್ಟ್ರ ಪ್ರತಿಪಾದಿಸುತ್ತ ಬಂದಿದೆ. ಭಾಷಾವಾರು ಪ್ರಾಂತ್ಯ ವಿಂಗಡಣೆ ವೇಳೆ ಇವುಗಳನ್ನು ಮಹಾರಾಷ್ಟ್ರಕ್ಕೆ ಸೇರಿಸದೆ ಅನ್ಯಾಯ ಮಾಡಲಾಗಿದೆ ಎನ್ನುವುದು ಅವರ ವಾದ.
ಈ ಪ್ರಕರಣದ ಇತ್ಯರ್ಥದ ಕುರಿತು ಅನೇಕ ಸಭೆ, ಮಾತುಕತೆಗಳೆಲ್ಲ ನಡೆದ ನಂತರ ಮೆಹರ್ಚಂದ್ ಮಹಾಜನ್ ನೇತೃತ್ವದ ಆಯೋಗವನ್ನು ಮಹಾರಾಷ್ಟ್ರದ ಒತ್ತಾಯದ ಮೇರೆಗೆ ರಚಿಸಲಾಗಿತ್ತು. ಮಹಾಜನ್ ಆಯೋಗವು ಎಲ್ಲವನ್ನೂ ಅಧ್ಯಯನ ಮಾಡಿ, ಕರ್ನಾಟಕದ ಕೆಲ ಪ್ರದೇಶಗಳನ್ನು ಮಹಾರಾಷ್ಟ್ರಕ್ಕೂ ಹಾಗೂ ಮಹಾರಾಷ್ಟ್ರದ ಕೆಲ ಭಾಗಗಳನ್ನು ಕರ್ನಾಟಕಕ್ಕೂ ಸೇರಿಸುವ ಮೂಲಕ ಸಮಸ್ಯೆ ಇತ್ಯರ್ಥ ಮಾಡಬೇಕೆಂದು ವರದಿ ನೀಡಿತ್ತು. ಇದೇ ವೇಳೆ ಕೇರಳದ ಕಾಸರಗೋಡನ್ನು ಕರ್ನಾಟಕಕ್ಕೆ ಸೇರಿಸುವಂತೆಯೂ ಆಯೋಗದ ವರದಿಯಲ್ಲಿ ಉಲ್ಲೇಖಿಸಲಾಗಿತ್ತು.
ಕರ್ನಾಟಕ ವಿಧಾನಮಂಡಲದ ಉಭಯ ಸದನಗಳಲ್ಲಿ ವರದಿಯನ್ನು ಮಂಡಿಸಿ, ತನ್ನ ಒಪ್ಪಿಗೆಯನ್ನು ಸೂಚಿಸಿತ್ತು. ಆದರೆ ಬೆಳಗಾವಿಯನ್ನು ಮಹಾರಾಷ್ಟ್ರಕ್ಕೆ ಸೇರಿಸಬೇಕೆಂದು ಉಲ್ಲೇಖಿಸಲಿಲ್ಲ ಎನ್ನುವ ಕಾರಣಕ್ಕೆ ವರದಿಯನ್ನು ಮಹಾರಾಷ್ಟ್ರವೇ ಒಪ್ಪಲಿಲ್ಲ. ಮಹಾರಾಷ್ಟ್ರ ಪ್ರಮುಖವಾಗಿ ಕಣ್ಣಿಟ್ಟಿರುವುದು ಬೆಳಗಾವಿ ಮೇಲೆ. ಹಾಗಾಗಿ ಮಹಾಜನ್ ವರದಿ ಒಪ್ಪುವುದಿಲ್ಲ ಎಂದು ತಿಳಿಸಿತು. ಗಡಿ ಸಮಸ್ಯೆ ಹಾಗೆಯೇ ಉಳಿಯುವಂತಾಯಿತು. ಜೊತೆಗೆ ಅಲ್ಲಿಂದಲೂ ಗಡಿ ಸಂಬಂಧ ಮಹಾರಾಷ್ಟ್ರ ಏಕೀಕರಣ ಸಮಿತಿ ಸದಾ ಕಿರಿ ಕಿರಿ ಮಾಡುತ್ತಲೇ ಬಂದಿದೆ.
2004ರಲ್ಲಿ ಪ್ರಕರಣವನ್ನು ಸುಪ್ರೀಂ ಕೋರ್ಟಿಗೆ ಮಹಾರಾಷ್ಟ್ರ ಸರ್ಕಾರ ಎಳೆ ತಂದಿತು. ಆದರೆ ಎರಡು ರಾಜ್ಯಗಳ ಗಡಿ ವಿವಾದವನ್ನು ವಿಚಾರಣೆಗೆ ಒಳಪಡಿಸುವುದು ತನ್ನ ವ್ಯಾಪ್ತಿಗೆ ಬರುತ್ತದೆಯೇ ಎಂಬುದನ್ನೇ ಸುಪ್ರೀಂ ಕೋರ್ಟ್ ಇನ್ನೂ ನಿರ್ಧರಿಸಿಲ್ಲ. ಇದಕ್ಕೆ ಪೂರಕವಾದ ಹಲವು ಅರ್ಜಿಗಳನ್ನೂ ಕೇಂದ್ರ ಸರ್ಕಾರ ಮತ್ತು ಕರ್ನಾಟಕ ಸರ್ಕಾರಗಳು ಸಲ್ಲಿಸಿವೆ. ಹಾಗಾಗಿ ಸದ್ಯಕ್ಕೆ ಇದು ಇತ್ಯರ್ಥವಾಗುವ ಯಾವ ಸಾಧ್ಯತೆಯೂ ಕಾಣುತ್ತಿಲ್ಲ.
ಮಹಾರಾಷ್ಟ್ರದ ಕಿರಿಕಿರಿ
ಮಹಾಜನ್ ಆಯೋಗದ ವರದಿ ಅನುಷ್ಠಾನವಾದರೆ ಭೌಗೋಳಿಕ ಪ್ರದೇಶಗಳನ್ನು ಕಳೆದುಕೊಳ್ಳುವ ಪ್ರಮಾಣಕ್ಕೆ ಹೋಲಿಸಿದರೆ ಕರ್ನಾಟಕಕ್ಕೇ ಹೆಚ್ಚು ನಷ್ಟವಾಗುತ್ತಿತ್ತು. ಆದರೂ ಆಯೋಗದ ವರದಿಗೆ ಬೆಲೆ ಕೊಟ್ಟು ಕರ್ನಾಟಕ ಸರ್ಕಾರ ವರದಿಯ ಅನುಷ್ಠಾನಕ್ಕೆ ಒಪ್ಪಿಗೆ ಸೂಚಿಸುತ್ತಲೇ ಬಂದಿದೆ. ಆದರೆ ಮಹಾರಾಷ್ಟ್ರವೇ ವರದಿಯನ್ನು ತಿರಸ್ಕರಿಸುವುದರ ಜತೆಗೆ ಬೆಳಗಾವಿ ಸೇರಿದಂತೆ ಕರ್ನಾಟಕದ ಪ್ರದೇಶದಲ್ಲಿರುವ ಮರಾಠಿ ಸಂಘಟನೆಗಳನ್ನು, ಮುಖ್ಯವಾಗಿ ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್)ಯನ್ನು ಛೂ ಬಿಟ್ಟು ಭಾಷಾ ಸಾಮರಸ್ಯ ಕದಡುತ್ತ ಬಂದಿದೆ.
ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಕರ್ನಾಟಕ ಸರ್ಕಾರದ ವಿಧಾನ ಮಂಡಲದ ಅಧಿವೇಶನ ನಡೆಸುವ ಸಂದರ್ಭಗಳಲ್ಲೆಲ್ಲ ಒಂದಿಲ್ಲೊಂದು ಪ್ರತಿಭಟನೆ ನಡೆಸಿ ಅಧಿವೇಶನವನ್ನು ಸುಸೂತ್ರವಾಗಿ ನಡೆಸಲು ಬಿಡದಂತೆ ಕುತಂತ್ರ ಹೂಡುವುದು ಎಂಇಎಸ್ನ ದುಷ್ಕ ತ್ಯಗಳಲ್ಲಿ ಒಂದಾಗಿದೆ. ಪ್ರತಿ ವರ್ಷ ಕನ್ನಡ ರಾಜ್ಯೋತ್ಸವದ ದಿನವೂ ಕರಾಳ ದಿನ ಆಚರಣೆ ಮೂಲಕ ಕಿರಿ ಕಿರಿ ಮಾಡುತ್ತಲೇ ಬಂದಿದೆ.
ಕೆಲವು ತಿಂಗಳ ಹಿಂದೆ ಮಹಾರಾಷ್ಟ್ರದ ಉಪದ್ರವ ಹೆಚ್ಚಾದಾಗ ಕೇಂದ್ರ ಗೃಹ ಸಚಿವ ಅಮಿತ್ ಶಾ ಎರಡೂ ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ನಡೆಸಿ, ಸುಪ್ರೀಂ ಕೋರ್ಟ್ನಲ್ಲಿ ವಿವಾದ ಇತ್ಯರ್ಥವಾಗುವವರೆಗೂ ಪರಸ್ಪರ ರಾಜ್ಯಗಳಲ್ಲಿ ಯಾವುದೇ ಹಸ್ತಕ್ಷೇಪ ಅಥವಾ ವಿವಾದ ಹುಟ್ಟುಹಾಕದಂತೆ ತಾಕೀತು ಮಾಡಿದ್ದರು. ಇದಕ್ಕಾಗಿ ಎರಡೂ ರಾಜ್ಯಗಳ ಸಚಿವರ, ಅಧಿಕಾರಿಗಳ ಸಮಿತಿ ರಚಿಸುವಂತೆಯೂ ಸೂಚಿಸಿದ್ದರು.
ಈಗ ಆರೋಗ್ಯ ಸೇವೆಯ ನೆಪ
ಅಮಿತ್ ಶಾ ಸೂಚನೆಯ ಹೊರತಾಗಿಯೂ ಮಹಾರಾಷ್ಟ್ರ ಸರ್ಕಾರ ತನ್ನದೆಂದು ಪ್ರತಿಪಾದಿಸುವ ಗಡಿ ಭಾಗದಲ್ಲಿರುವ ಕರ್ನಾಟಕದ 865 ಹಳ್ಳಿ, ಪಟ್ಟಣಗಳ ಜನರಿಗೆ ತನ್ನ ಜ್ಯೋತಿರಾವ್ ಫುಲೆ ಜನ ಆರೋಗ್ಯ ಯೋಜನೆಯನ್ನು ಜಾರಿಗೊಳಿಸುವುದಾಗಿ ಕಳೆದ ಮಾರ್ಚ್ 15ಕ್ಕೂ ಪೂರ್ವದಲ್ಲಿ ಘೋಷಣೆ ಮಾಡಿತ್ತು. ಮಹಾರಾಷ್ಟ್ರದ ಈ ಕ್ರಮವು ಕರ್ನಾಟಕದ ಆಡಳಿತದಲ್ಲಿ ನೇರವಾಗಿ ಹಸ್ತಕ್ಷೇಪ ಮಾಡಿದಂತಾಗುತ್ತಿದೆ ಎಂದು ಕನ್ನಡಪರ ಸಂಘಟನೆಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದವು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಈ ಯೋಜನೆಯನ್ನು ಕರ್ನಾಟಕದಲ್ಲಿ ಜಾರಿಗೊಳಿಸುವುದನ್ನು ತಡೆಯುವುದಾಗಿ ಹೇಳಿಕೆ ನೀಡಿದ್ದರು. ಮಹಾರಾಷ್ಟ್ರ ಸರ್ಕಾರ ಪಟ್ಟು ಬಿಡದೆ ಏ.೩ರಿಂದ ಯೋಜನೆಯನ್ನು ಜಾರಿಗೊಳಿಸಿದೆ. ಮೇಲ್ನೋಟಕ್ಕೆ ಜನರಿಗೆ ಆರೋಗ್ಯ ಸೇವೆ ಒದಗಿಸುವ ಯೋಜನೆ ಇದಾಗಿದ್ದರೂ ಆಳದಲ್ಲಿ ಮಹಾರಾಷ್ಟ್ರ ಸರ್ಕಾರದ ಕುತಂತ್ರವೂ ಇದರಲ್ಲಿ ಅಡಗಿರುವುದು ಸ್ಪಷ್ಟವಾಗಿದೆ.
ಜ್ಯೋತಿರಾವ್ ಫುಲೆ ಯೋಜನೆಯ ಲಾಭ ಪಡೆಯಲು ಇಚ್ಛಿಸುವ ಪ್ರತಿ ವ್ಯಕ್ತಿ ಒಂದು ಅರ್ಜಿ ನಮೂನೆಯನ್ನು ಭರ್ತಿ ಮಾಡಿಕೊಡಬೇಕಿದೆ. ಮರಾಠಿ ಭಾಷೆಯಲ್ಲಿರುವ ಈ ಅರ್ಜಿಯಲ್ಲಿ ಪ್ರತಿ ವ್ಯಕ್ತಿಯು ಮಹಾರಾಷ್ಟ್ರ ಸರ್ಕಾರವು ತನ್ನದೆಂದು ಪ್ರತಿಪಾದಿಸುವ ಕರ್ನಾಟಕದ ಇಂಥ ಗ್ರಾಮ, ತಾಲ್ಲೂಕು, ಜಿಲ್ಲೆಯಲ್ಲಿ ಇಂತಿಷ್ಟು ವರ್ಷಗಳಿಂದ ಕುಟುಂಬ ಸಮೇತನಾಗಿ ವಾಸಿಸುತ್ತಿದ್ದು, ತಾವು ಮರಾಠಿ ಭಾಷಿಕರಾಗಿದ್ದೇವೆ ಎಂಬ ಅಂಶಗಳನ್ನು ಭರ್ತಿ ಮಾಡಿಕೊಡಬೇಕಿದೆ. ಯೋಜನೆಯ ಲಾಭ ಪಡೆಯಲು ಕನ್ನಡಿಗರೂ ಈ ಅರ್ಜಿಯನ್ನು ಭರ್ತಿ ಮಾಡಿಕೊಡಬಹುದಾದ ಅಪಾಯವೂ ಇದೆ.
ಕರ್ನಾಟಕ–ಮಹಾರಾಷ್ಟ್ರ ಗಡಿ ವಿವಾದವು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದು, ಸರ್ವೋಚ್ಚ ನ್ಯಾಯಾಲಯವು ಈ ಪ್ರಕರಣದ ವಿಚಾರಣೆ ನಡೆಸಬೇಕೇ ಬೇಡವೇ ಎಂಬ ಬಗ್ಗೆಯೇ ಇನ್ನೂ ತೀರ್ಮಾನಕ್ಕೆ ಬಂದಿಲ್ಲ. ಒಮ್ಮೆ ವಿಚಾರಣೆ ನಡೆದರೂ ಈ ಹಳ್ಳಿ–ಪಟ್ಟಣಗಳನ್ನು ಮಹಾರಾಷ್ಟ್ರಕ್ಕೆ ಸೇರಿದ್ದೆಂದು ಸಾಬೀತು ಮಾಡುವ ಯಾವುದೇ ಬಲವಾದ ಆಧಾರಗಳೂ ಮಹಾರಾಷ್ಟ್ರ ಸರ್ಕಾರದ ಬಳಿ ಇಲ್ಲ.
ಈ ಹಿನ್ನೆಲೆಯಲ್ಲಿ ಆರೋಗ್ಯ ಸೇವೆ ನೀಡುವ ನೆಪದಲ್ಲಿ 865 ಹಳ್ಳಿ, ಪಟ್ಟಣಗಳ ಪ್ರತಿ ವ್ಯಕ್ತಿಯಿಂದಲೂ ತಾವು ಮರಾಠಿ ಭಾಷಿಕರು ಮತ್ತು ಮಹಾರಾಷ್ಟ್ರ ಪ್ರತಿಪಾದಿಸುವ ಕರ್ನಾಟಕದ ಭಾಗದಲ್ಲಿ ವಾಸಿಸುತ್ತಿದ್ದೇವೆ ಎಂಬ ಸ್ವಯಂ ಘೋಷಣಾ ಪತ್ರ ಪಡೆದುಕೊಳ್ಳಲು ಮಹಾರಾಷ್ಟ್ರ ಸರ್ಕಾರ ಹೊಂಚು ಹಾಕಿದೆ. ಇದರಿಂದ ಮುಂದೆ ಸುಪ್ರೀಂ ಕೋರ್ಟಿನಲ್ಲಿ ತನ್ನ ವಾದಕ್ಕೆ ಬಲ ಸಿಗುವ ಆಶಯ ಮಹಾರಾಷ್ಟ್ರ ಸರ್ಕಾರದ್ದು ಎನ್ನಬಹುದು.
ವಿಮೆ ಯೋಜನೆಯ ವಿವರ
ಜ್ಯೋತಿರಾವ್ ಫುಲೆ ಜನ ಆರೋಗ್ಯ ವಿಮಾ ಯೋಜನೆಯಡಿ ಪ್ರತಿ ಕುಟುಂಬವೂ ಮಹಾರಾಷ್ಟ್ರ ಸರ್ಕಾರ ಗುರುತಿಸಿರುವ ೩೪ ಆಸ್ಪತ್ರೆಗಳ ಪೈಕಿ ಯಾವುದೇ ಆಸ್ಪತ್ರೆಯಲ್ಲಿ 1.50 ಲಕ್ಷ ರೂ.ವರೆಗಿನ ಚಿಕಿತ್ಸೆಯನ್ನು ಉಚಿತವಾಗಿ ಪಡೆಯಬಹುದು. ಒಂದು ರಾಜ್ಯದ ಯೋಜನೆಯನ್ನು ಮತ್ತೊಂದು ರಾಜ್ಯದೊಳಗೆ ಜಾರಿ ಮಾಡುವುದು ಭಾರತದ ಒಕ್ಕೂಟ ವ್ಯವಸ್ಥೆಗೆ ಮಾಡುವ ದ್ರೋಹವಾಗಿದೆ ಎಂದೇ ಪರಿಗಣಿಸಲಾಗುತ್ತದೆ.
ಮಹಾರಾಷ್ಟ್ರ ಯೋಜನೆಯನ್ನು ಹಿಂದಕ್ಕೆ ಪಡೆಯದಿದ್ದರೆ ಮಹಾರಾಷ್ಟ್ರದಲ್ಲಿರುವ ಕನ್ನಡಿಗರಿಗಾಗಿ ಕರ್ನಾಟಕವೂ ಯೋಜನೆ ಜಾರಿಗೊಳಿಸಲಿದೆ ಎಂದು ಮುಖ್ಯಮಂತ್ರಿಗಳು ಎಚ್ಚರಿಕೆ ನೀಡಿದ್ದಾರೆ. ಜೊತೆಗೆ ಕೇಂದ್ರ ಗೃಹ ಸಚಿವರಿಗೂ ದೂರು ನೀಡುವುದಾಗಿ ಹೇಳಿದ್ದಾರೆ. ಆದರೆ ಕರ್ನಾಟಕದಲ್ಲಿ ಸದ್ಯ ನಡೆಯುತ್ತಿರುವ ವಿಧಾನಸಭೆ ಚುನಾವಣೆಯ ಗಡಿಬಿಡಿಯಲ್ಲಿ ಗಡಿಯಲ್ಲಿನ ಈ ಸಮಸ್ಯೆ ಅನಾಥವಾಗಿದೆ.
ತುಮಕೂರು : ಈಗಾಗಲೇ ಮದುವೆಯಾಗಿ ಹೆಂಡತಿಯಿದ್ದರೂ 2ನೇಯ ಮದುವೆಗೆ ತಯಾರಿ ನಡೆಸಿ ಕಲ್ಯಾಣ ಮಂಟಪದಲ್ಲಿ ಇನ್ನೇನು ಮಾಂಗಲ್ಯ ಧಾರಣೆ ನಡೆಯಬೇಕು…
ಬೆಂಗಳೂರು : ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್ಸುಗಳ ಮೇಲಿನ ಜಾಹೀರಾತುಗಳಲ್ಲಿ ತಂಬಾಕು ಉತ್ಪನ್ನಗಳ ಸೇವನೆಗೆ ಪ್ರಚೋದಿಸುವ ನೇರವಾದ ಅಥವಾ…
ಬೆಂಗಳೂರು : ಮೆಟ್ರೋ ದರ ಏರಿಕೆಗೆ ಬಿಎಂಆರ್ಸಿಎಲ್ ಬ್ರೇಕ್ ಹಾಕಿದೆ. ಸೋಮವಾರದಿಂದ ಶೇ.5ರಷ್ಟು ದರ ಏರಿಕೆಗೆ ಬಿಎಂಆರ್ಸಿಎಲ್ ಮುಂದಾಗಿತ್ತು. ಆದರೆ…
ಮೈಸೂರು : ಸಜಾ ಬಂಧಿಗಳು ಕಾರಾಗೃಹದಿಂದ ಬಿಡುಗಡೆಯಾಗುವುದರೊಳಗೆ ಉತ್ತಮ ನಡತೆಯನ್ನು ಹೊಂದಿ ಹೊರಗೆ ಹೋದ ಬಳಿಕ ಸಮಾಜಮುಖಿ ಜೀವನ ಆರಂಭಿಸಬೇಕು…
ಹುಣಸೂರು : 2028ರ ವಿಧಾನಸಭೆ ಚುನಾವಣೆಯಲ್ಲಿ ಮೈತ್ರಿ ಸರ್ಕಾರದಲ್ಲಿ ಎಚ್.ಡಿ.ಕುಮಾರಸ್ವಾಮಿ ಅವರು ಮತ್ತೆ ಮುಖ್ಯಮಂತ್ರಿ ಆಗಲಿದ್ದಾರೆ ಎಂದು ಶಾಸಕ ಜಿ.ಡಿ.ಹರೀಶ್ಗೌಡ…
ಮಳವಳ್ಳಿ : ತಾಯಿ ಮತ್ತು ಮಗಳು ಇಬ್ಬರು ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಸಮೀಪದ ದಳವಾಯಿ ಕೋಡಿಹಳ್ಳಿ…