ಎಡಿಟೋರಿಯಲ್

ಆಂದೋಲನ ಓದುಗರ ಪತ್ರ: 10 ಶುಕ್ರವಾರ 2023

ಆತ್ಮವಿಶ್ವಾಸದಿಂದ ಪರೀಕ್ಷೆ ಎದುರಿಸಿ

ಫೆ.21ರಿಂದ ಮಾ.4ರವರೆಗೆ ವಿವಿಧ ತರಗತಿಯ ವಿದ್ಯಾರ್ಥಿಗಳಿಗೆ ಹಾಗೂ ಮಾ.9ರಿಂದ 29ರವರೆಗೆ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ವಾರ್ಷಿಕ ಪರೀಕ್ಷೆಗಳು ನಡೆಯಲಿವೆ. ವಿದ್ಯಾರ್ಥಿಗಳು ದಿನನಿತ್ಯ ಒಂದು ನೀಲಿನಕ್ಷೆ ತಯಾರಿಸಿ ಅದರಂತೆ ಅಭ್ಯಾಸ ಮಾಡಬೇಕು. ಅಂದಿನ ಪಠ್ಯವನ್ನು ಅಂದೇ ಅಧ್ಯಯನ ಮಾಡುವ ಜೊತೆಗೆ ವಿಷಯಕ್ಕೆ ಸಂಬಂಧಿಸಿದಂತೆ ಕೀ-ಪಾಯಿಂಟ್ಸ್ ಬರೆದುಕೊಳ್ಳಬೇಕು. ಕಠಿಣ ಎನಿಸುವ ವಿಷಯಗಳನ್ನು ಪದೇ ಪದೇ ಗಮನಿಸುತ್ತಾ ಒಮ್ಮೆ ಗಟ್ಟಿಯಾಗಿ ಓದಿ, ಮತ್ತೊಮ್ಮೆ ಬರೆಯಬೇಕು. ನಿಶ್ಶಬ್ದವಾದ ವಾತಾವರಣದಲ್ಲಿ ಓದುವುದು ಬಹಳ ಮುಖ್ಯ. ಬೆಳಗಿನ ಜಾವ ಓದಲು ಪ್ರಶಾಂತವಾದ ಸಮಯವಾಗಿದ್ದು, ಕಠಿಣ ವಿಷಯಗಳನ್ನು ಬೆಳಗಿನ ಜಾವ ಓದಬೇಕು. ಇದರ ನಡುವೆ ಆರೋಗ್ಯದ ಕಡೆಗೂ ಹೆಚ್ಚಿನ ಗಮನವನ್ನು ನೀಡಬೇಕು.

ಪರೀಕ್ಷೆ ವೇಳೆ ಪ್ರಶ್ನೆಗಳನ್ನು ಅರ್ಥ ಮಾಡಿಕೊಂಡು ಮೊದಲು ಸರಳ ಪ್ರಶ್ನೆಗಳಿಗೆ ಉತ್ತರ ನೀಡಿ ನಂತರ ಕಠಿಣ ಪ್ರಶ್ನೆಗಳ ಕಡೆ ಗಮನ ನೀಡಬೇಕು. ಒಟ್ಟಿನಲ್ಲಿ ಆತ್ಮವಿಶ್ವಾಸದಿಂದ ಪರೀಕ್ಷೆಗಳನ್ನು ಎದುರಿಸಬೇಕು. ಧೈರ್ಯದಿಂದ ಧೃತಿಗೆಡದೆ ಪರೀಕ್ಷೆ ಬರೆದರೆ ಮಾತ್ರ ಉತ್ತಮ ಫಲಿತಾಂಶ ಸಿಗಲಿದೆ.

ಎ.ಎಸ್.ಗೋವಿಂದೇಗೌಡ, ಕನ್ನಡ ಉಪನ್ಯಾಸಕ, ಅರೇನಹಳ್ಳಿ, ಪಿರಿಯಾಪಟ್ಟಣ ತಾ.


ಓಆರ್‌ಎಫ್ ವೈರಾಣುಗಳ ಬಗ್ಗೆ ಎಚ್ಚರವಿರಲಿ

ಇತ್ತೀಚೆಗೆ ಓಆರ್‌ಎಫ್ ಎಂಬ ವೈರಾಣು ಕುರಿ-ಮೇಕೆಗಳಿಗೆ ಕಂಟಕವಾಗಿದೆ. ಈ ವೈರಾಣು ಮನುಷ್ಯರಿಗೂ ಹರಡುವ ಸಾಧ್ಯತೆ ಇದೆ ಎನ್ನುವುದು ಮತ್ತೊಂದು ಆತಂಕಕಾರಿ ವಿಚಾರ. ಮೂರು ತಿಂಗಳ ಹಿಂದಷ್ಟೇ ಈ ಸೋಂಕು ನಮ್ಮ ರಾಜ್ಯದಲ್ಲಿ ಕುರಿಗಳಲ್ಲಿ ಪತ್ತೆಯಾಗಿದ್ದು, ಎಲ್‌ಎಸ್‌ಡಿ ಎಂಬ ವೈರಾಣುವಿನ ಜೊತೆಗೆ ಈ ಓಆರ್‌ಎಫ್ ಎಂಬ ವೈರಾಣುವು ಪತ್ತೆಯಾಗಿದೆ.

ಇದು ಮಿಶ್ರ ತಳಿ ಕುರಿ-ಮೇಕೆಗಳಲ್ಲಿ ಅಧಿಕ ಪ್ರಮಾಣದಲ್ಲಿ ಜೀವ ಹಾನಿಯನ್ನು ಉಂಟು ಮಾಡುವ ಅಪಾಯವಿದೆ. ವೈರಾಣು ತಗುಲಿದ ಕುರಿ-ಮೇಕೆಗಳಿಗೆ ಬಾಯಿ ಊದಿ ಕೊಳ್ಳುತ್ತದೆ. ಆ ಊತ ಒಡೆದ ಬಳಿಕ ಅದರ ಬಾಯಿಯಲ್ಲಿ ದಪ್ಪ ದಪ್ಪ ಹುಳುಗಳು ಕಾಣಿಸಿಕೊಳ್ಳುತ್ತವೆ. ಈ ಸಂದರ್ಭದಲ್ಲಿ ಕುರಿಯ ಬಾಯಿ ಕೊಳೆತಂ ತಾಗಿ ಬಳಿಕ ಅದು ಒಣಗಿ ಗುಣವಾಗಲು ಸಾಕಷ್ಟು ಸಮಯ ಹಿಡಿಯುತ್ತದೆ. ಅಲ್ಲಿಯವರೆಗೂ ಪ್ರತಿನಿತ್ಯ ಅದರ ಬಾಯಿಯನ್ನು ಸ್ವಚ್ಛಗೊಳಿಸಬೇಕು. ಪದೇ ಪದೇ ಔಷಧಿಯನ್ನು ಹಚ್ಚಬೇಕು. ಒಂದು ದಿನ ಔಷಧಿಯನ್ನು ಹಚ್ಚು ವುದು ತಪ್ಪಿದರೂ ನೊಣಗಳು ಮೊಟ್ಟೆ ಇಟ್ಟು ಅಲ್ಲಿ ಹುಳುಗಳಾಗಿ ದೊಡ್ಡ ಗಾಯವನ್ನು ಉಂಟು ಮಾಡುತ್ತವೆ. ಆದ್ದರಿಂದ ಈ ಓಆರ್‌ಎಫ್ ಎಂಬ ವೈರಾಣುಗಳು ಕುರಿ-ಮೇಕೆಗಳಿಗೆ ತಗುಲದಂತೆ ಎಚ್ಚರವಹಿಸುವ ಜೊತೆಗೆ ನಾವು ಕೂಡ ಅದರ ಬಗ್ಗೆ ಜಾಗೃತರಾಗುವುದು ಉತ್ತಮ. ಈ ವೈರಾಣುವಿನ ಲಕ್ಷಣ ಕಂಡುಬಂದಲ್ಲಿ ವೈದ್ಯರನ್ನು ಸಂಪರ್ಕಿ ಸುವುದು ಸೂಕ್ತ.

ಮಹಾದೇವಸ್ವಾಮಿ, ಮಹಾರಾಜ ಕಾಲೇಜು, ಮೈಸೂರು.


ಆನೆ ಹಾವಳಿ ತಡೆಗೆ ರೈಲ್ವೆಕಂಬಿ ಬ್ಯಾರಿಕೇಡ್ ಬಿಗಿಗೊಳಿಸಿ

ಸರಗೂರು ಭಾಗದ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ ವ್ಯಾಪ್ತಿಯ ಹೆಡಿಯಾಲ, ಮೊಳೆಯೂರು, ನುಗು ವಲಯಗಳಲ್ಲಿನ ಕಾಡಂಚಿನ ಗ್ರಾಮಗಳಲ್ಲಿ ಕಾಡಾನೆಗಳ ಹಾವಳಿ ಹೆಚ್ಚಾಗುತ್ತಿದೆ.

ದಶಕಗಳಿಂದಲೂ ಈ ಭಾಗದ ಕಾಡಂಚಿನ ಗ್ರಾಮಗಳಲ್ಲಿ ಆನೆಗಳ ಉಪಟಳ ನಿರಂತರವಾಗಿ ಮುಂದುವರಿದಿದೆ. ಈ ಬಗ್ಗೆ ಕ್ರಮವಹಿಸಿ ಆನೆಗಳು ಕಾಡಿನಿಂದ ಹೊರಬಾರದಂತೆ ಬಿಗಿ ರೈಲ್ವೆಕಂಬಿ ಬ್ಯಾರಿಕೇಡ್‌ಗಳನ್ನು ಅಳವಡಿಸುವಂತೆ ಈ ಭಾಗದ ರೈತರು ಹಾಗೂ ಸಾರ್ವಜನಿಕರು ಅರಣ್ಯ ಇಲಾಖೆಗೆ ಮನವಿ ಮಾಡುತ್ತಲೇ ಇದ್ದರೂ ಯಾವುದೇ ಪ್ರಯೋಜನವಾಗುತ್ತಿಲ್ಲ. ರೈತರು ಹಗಲು ರಾತ್ರಿ ಎನ್ನದೆ ತಮ್ಮ ಬೆಳೆಗಳನ್ನು ಕಾಯಬೇಕು. ಈ ವೇಳೆ ಸಾಕಷ್ಟು ಬಾರಿ ಕಾಡಾನೆಗಳ ದಾಳಿಗಳು ನಡೆದು ರೈತರ ಕೈಗೆ ಬರಬೇಕಾದ ಬೆಳೆಗಳು ಕಾಡಾನೆಗಳ ಕಾಲ್ತುಳಿತಕ್ಕೆ ಸಿಲುಕಿ ನಾಶವಾಗಿವೆ. ಆನೆಗಳ ದಾಳಿಯಿಂದ ರೈತರು ಜೀವ ಕಳೆದುಕೊಂಡಿರುವ ಉದಾಹರಣೆಗಳೂ ಸಾಕಷ್ಟಿವೆ.

ಇನ್ನು ನುಗು ಜಲಾಶಯಕ್ಕೆ ನೀರು ಕುಡಿಯಲು ಬರುವ ಆನೆಗಳು ಒಮ್ಮೊಮ್ಮೆ ಗ್ರಾಮಗಳತ್ತ ಮುಖ ಮಾಡುತ್ತವೆ. ಅಲ್ಲದೇ ರಾತ್ರಿಯ ವೇಳೆಯೂ ಆನೆಗಳು ಬಂದುಬಿಡುತ್ತವೋ ಏನೋ ಎಂಬ ಆತಂಕದೊಂದಿಗೆ ಜನರು ಓಡಾಡ ಬೇಕಿದೆ. ಆದ್ದರಿಂದ ಇಂತಹ ಸಮಸ್ಯೆಯನ್ನು ಸರ್ಕಾರ ಗಂಭೀರವಾಗಿ ಪರಿ ಗಣಿಸಿ ಈ ಭಾಗದ ಕಾಡಂಚಿನ ಗ್ರಾಮಗಳು ಹಾಗೂ ನುಗು ಜಲಾಶಯದ ವ್ಯಾಪ್ತಿಯಲ್ಲಿ ಬಿಗಿಯಾದ ಬ್ಯಾರಿಕೇಡ್‌ಗಳನ್ನು ಅಳವಡಿಸಬೇಕಿದೆ.

ಸಂಜಯ್, ಸರಗೂರು


ಜೋಶಿ ಮಠದ ಸ್ಥಿತಿ ಚಾಮುಂಡಿಬೆಟ್ಟಕ್ಕೆ ಬಾರದಿರಲಿ

ಇತ್ತೀಚೆಗೆ ಉತ್ತರಖಂಡದ ಜೋಶಿ ಮಠದಲ್ಲಿ ಭೂಮಿ ಬಿರುಕು ಬಿಟ್ಟ ಪರಿಣಾಮ ಅಲ್ಲಿನ ನೂರಾರು ಕಟ್ಟಡಗಳು ನೆಲಸಮಗೊಂಡವು. ಅಲ್ಲಿನ ಜನರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರ ಮಾಡಲಾಯಿತು.

ಅಲ್ಲಿ ಈ ಘಟನೆಗೆ ಅತಿಯಾದ ಅಭಿವೃದ್ಧಿ ಮತ್ತು ಅಧಿಕ ಪ್ರಮಾಣದಲ್ಲಿ ಅರಣ್ಯನಾಶ ಕಾರಣ ಎಂಬುದು ತಜ್ಞರ ಅಭಿಪ್ರಾಯವಾಗಿದೆ. ಅದೇ ರೀತಿ ಕರ್ನಾಟಕದ ಪ್ರಸಿದ್ಧ ಪ್ರವಾಸಿ ಕೇಂದ್ರ ವಾದ ಚಾಮುಂಡಿಬೆಟ್ಟದಲ್ಲಿಯೂ ಇಂತಹದ್ದೇ ಸನ್ನಿವೇಶ ಎದುರಾಗಬಹುದು ಎಂದು ತಜ್ಞರು ಎಚ್ಚರಿಸಿದ್ದರು. ಕಳೆದ ಬಾರಿ ಬೆಟ್ಟದ ಒಂದು ರಸ್ತೆ ಕುಸಿದು ಆತಂಕ ಸೃಷ್ಟಿಸಿತ್ತು. ಇದಕ್ಕೆ ಪ್ರಮುಖ ಕಾರಣ ಅಲ್ಲಿ ರೂಪುಗೊಳ್ಳು ತ್ತಿರುವ ಅನೇಕ ಅಭಿವೃದ್ಧಿ ಹೆಸರಿನ ಯೋಜನೆಗಳು ಎನ್ನಬಹುದಾಗಿದೆ. ಸದ್ಯ ಬೆಟ್ಟಕ್ಕೆ ರೂಪ್ ವೇ ನಿರ್ಮಿಸಲು ಯೋಜಿಸಲಾಗುತ್ತಿದೆ. ಇದಕ್ಕೂ ಮುನ್ನ ಬೆಟ್ಟದ ಮೇಲ್ಭಾಗದಲ್ಲಿ ಸಂಪೂರ್ಣ ಕಾಂಕ್ರಿಟೀಕರಣಗೊಳಿಸಿ ಬಹು ಅಂತಸ್ತಿನ ಪಾರ್ಕಿಂಗ್ ಕಟ್ಟವನ್ನು ನಿರ್ಮಿಸುವ ಮೂಲಕ ಬೆಟ್ಟಕ್ಕೆ ಪೆಟ್ಟು ನೀಡಲಾಗಿದೆ. ಈಗ ಮತ್ತಷ್ಟು ಅಭಿವೃದ್ಧಿ ಕೆಲಸಕ್ಕೆ ಮುಂದಾಗಿದ್ದು, ಬೆಟ್ಟ ಮತ್ತೊಂದು ಜೋಶಿ ಮಠದಂತಾಗುವ ಆತಂಕ ಮೂಡಿಸಿದೆ. ಪ್ರಸ್ತುತ ಚಾಮುಂಡಿಬೆಟ್ಟದಲ್ಲಿ ಸಾಕಷ್ಟು ಕುಟುಂಬಗಳು ವಾಸಿಸುತ್ತಿದ್ದು, ಅವರು ಸುರಕ್ಷಿತವಾಗಿರಬೇಕಾದರೆ ಬೆಟ್ಟದಲ್ಲಿ ಬೃಹತ್ ಪ್ರಮಾಣದ ಅಭಿ ವೃದ್ಧಿ ಕಾಮಗಾರಿ ಕೈಗೊಳ್ಳುವುದನ್ನು ಕೈಬಿಡಬೇಕು. ಬೆಟ್ಟವನ್ನು ನೈಸರ್ಗಿಕ ವಾಗಿರಿಸಿ ಅಲ್ಲಿನ ನಿವಾಸಿಗಳು ನಿಶ್ಚಿಂತೆಯಿಂದ ಬದುಕಲು ಬಿಡಬೇಕು.

ಬಿ.ಎಂ.ಜಗದೀಶ್, ಪತ್ರಿಕೋದ್ಯಮ ವಿಭಾಗ, ಮಹಾರಾಜ ಕಾಲೇಜು.

andolanait

Recent Posts

ಓದುಗರ ಪತ್ರ: ಮುತ್ತತ್ತಿ ನದಿ ಬಳಿ ಪೊಲೀಸರನ್ನು ನಿಯೋಜಿಸಿ

ಮಂಡ್ಯ ಜಿಲ್ಲೆಯ ಮುತ್ತತ್ತಿಯಲ್ಲಿ ಕಾವೇರಿ ನದಿ ನೀರಿಗೆ ಇಳಿದು ಸೆಲ್ಛಿ ತೆಗೆದುಕೊಳ್ಳಲು ಹೋದ ಒಂದೇ ಕುಟುಂಬದ ನಾಲ್ವರು ಹಾಗೂ ಕಾರು…

3 hours ago

ಓದುಗರ ಪತ್ರ: ಚಪ್ಪಲಿ ಎಸೆತ ಪ್ರಕರಣ ಎಳೆದಾಡುವುದು ಬೇಡ

ಚಿಕ್ಕಬಳ್ಳಾಪುರ ಶಾಸಕರಾದ ಪ್ರದೀಪ್ ಈಶ್ವರ್ ಅವರ ಮೇಲೆ ಜಾ.ದಳ ಕಾರ್ಯಕರ್ತರೊಬ್ಬರು ಚಪ್ಪಲಿಯನ್ನು ಎಸೆದಿದ್ದು, ಈಗಾಗಲೇ ಆ ಕಾರ್ಯಕರ್ತನನ್ನು ಪೊಲೀಸರು ಬಂಧಿಸಿದ್ದಾರೆ.…

3 hours ago

ಓದುಗರ ಪತ್ರ: ತರಬೇತಿಗೆ ಅರ್ಜಿ ಏಕೆ ಕರೆದಿಲ್ಲ?

ಸರ್ಕಾರದ ಯಾವುದೇ ಯೋಜನೆ, ಕಾರ್ಯಕ್ರಮ, ಸವಲತ್ತು ಮೊದಲು ದಲಿತ, ದಮನಿತ, ಶೋಷಿತ ವರ್ಗಕ್ಕೆ ತಲುಪಬೇಕು. ಅವರು ಸಾಮಾಜಿಕವಾಗಿ, ಆರ್ಥಿಕವಾಗಿ ಮೇಲೆ…

3 hours ago

ಓದುಗರ ಪತ್ರ: ಬಿಡದಿ ಟೌನ್ ಶಿಪ್: ಎಲ್ಲರೊಂದಿಗೆ ಚರ್ಚಿಸಿ ತೀರ್ಮಾನಕ್ಕೆ ಬರಬೇಕು

ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಬಿಡದಿ ಟೌನ್ ಶಿಪ್ ನಿರ್ಮಾಣ ಮಾಡುವ ಮೊದಲು ಮತ್ತೊಮ್ಮೆ ಅದರ ಸಾಧಕ ಬಾಧಕಗಳ ಬಗ್ಗೆ ಯೋಚಿಸಿ…

3 hours ago

‘ರಾಮ ರಾಜಕಾರಣಕ್ಕೆ ಅಗ್ನಿ ಪರೀಕ್ಷೆ..!

ಅಯೋಧ್ಯೆಯ ಶ್ರೀರಾಮ ಮಂದಿರದಲ್ಲಿ ಭಕ್ತರು ನೀಡಿದ ಸಾವಿರಾರು ಕೋಟಿ ರೂಪಾಯಿ ದೇಣಿಗೆ ಹಣ, ಆಭರಣಗಳ ಕಳ್ಳತನ ಪ್ರಕರಣ ರಾಮಭಕ್ತರ ವಿಶ್ವಾಸವನ್ನು…

3 hours ago

ಇದು ಶೌಚಾಲಯ… ಈಗ ಅನುಪಯುಕ್ತ ವಸ್ತುಗಳ ಗೋದಾಮು!

ಎಚ್.ಎಸ್.ದಿನೇಶ್ ಕುಮಾರ್ ಮೈಸೂರಿನ ಶ್ರೀರಾಂಪುರದ ಉದ್ಯಾನದಲ್ಲಿರುವ ಶೌಚಾಲಯದ ದುಸ್ಥಿತಿ ಮೈಸೂರು: ಜನರ ಲಕ್ಷಾಂತರ ರೂ. ತೆರಿಗೆ ಹಣವನ್ನು ವ್ಯಯಿಸಿ ಕಟ್ಟಿಸಿರುವ…

3 hours ago