ಎಡಿಟೋರಿಯಲ್

ಆಂದೋಲನ ಓದುಗರ ಪತ್ರ : 15 ಗುರುವಾರ 2022

ಕಲಾಮಂದಿರದಲ್ಲೊಂದು ಸೂಕ್ತ ಶೌಚಾಲಯ ನಿರ್ಮಿಸಿ

ಕಲೆಗಳ ಅನಾವರಣಕ್ಕೆಂದೇ ನಿರ್ಮಾಣವಾಗಿರುವ, ಮೈಸೂರು ನಗರಕ್ಕೆ ಮುಕುಟದಂತಿರುವ ಹಾಗೂ ಸಾಂಸ್ಕ ತಿಕ ಮತ್ತು ಸಾರ್ವಜನಿಕ ಸಮಾರಂಭಗಳನ್ನು ನಡೆಸಲು ಸೂಕ್ತ ವೇದಿಕೆಯನ್ನು ಕಲ್ಪಿಸುವ ಸಲುವಾಗಿ ಕುಕ್ಕರಹಳ್ಳಿ ಕೆರೆಯ ದಂಡೆಯ ಮೇಲೆ ಅಂದಿನ ಮುಖ್ಯಮಂತ್ರಿಯಾಗಿದ್ದ ದಿವಂಗತ ಗುಂಡೂರಾವ್ ಅವರ ನೇತೃತ್ವದಲ್ಲಿ ಕಲಾಮಂದಿರ ಎಂಬ ಸಭಾಂಗಣವನ್ನು ನಿರ್ಮಾಣ ಮಾಡಲಾಯಿತು. ಇತ್ತೀಚೆಗೆ ಪ್ರತಿ ದಿನವೂ ಕಲಾಮಂದಿರಲ್ಲಿ ಒಂದಲ್ಲಾ ಒಂದು ಕಾರ್ಯಕ್ರಮ ನಡೆಯುತ್ತಿದ್ದು, ಕಾಲೇಜು ವಿದ್ಯಾರ್ಥಿಗಳು, ಯುವಕರು, ಹಿರಿಯ ನಾಗರಿಕರು, ಮಹಿಳೆಯರು ಭಾಗಿಯಾಗಿ ಅಲ್ಲಿನ ಕಾರ್ಯಕ್ರಮಗಳನ್ನು ವೀಕ್ಷಣೆ ಮಾಡುತ್ತಿದ್ದಾರೆ. ಸದ್ಯ ಈ ಕಲಾಮಂದಿರದಲ್ಲಿ ಸುಮಾರು ಒಂದೂ ವರೆ ಸಾವಿರದಷ್ಟು ಜನರು ಕುಳಿತುಕೊಳ್ಳಲು ಆಸನಗಳ ವ್ಯವಸ್ಥೆ ಮಾಡ ಲಾಗಿದೆ. ಆದರೆ, ಇಲ್ಲಿ ಸಮರ್ಪಕವಾದ ಒಂದು ಬೃಹತ್ ಶೌಚಾಲಯದ ಅಗತ್ಯ ಇದೆ. ಈಗಿರುವ ಶೌಚಾಲಯವು ಕಾರ್ಯಕ್ರಮ ವೀಕ್ಷಣೆಗೆ ಆಗಮಿಸುವ ಜನಸಂಖ್ಯೆಗೆ ಸಾಕಾಗುವುದಿಲ್ಲ. ಈ ಕಲಾಮಂದಿರಕ್ಕೆ ಮುಖ್ಯ ಮಂತ್ರಿಗಳು ಸೇರಿದಂತೆ ವಿವಿಧ ಸಚಿವರು, ಶಾಸಕರು, ಮಂತ್ರಿಗಳು ಸಿನಿಮಾ ನಟ-ನಟಿಯರು, ಹಿರಿಯ ಕಲಾವಿದರು ಆಗಮಿಸುವ ಸ್ಥಳವಾಗಿದ್ದು, ಇಂತಹ ಸ್ಥಳಕ್ಕೆ ಒಂದು ಸಮರ್ಪಕವಾದ ಶೌಚಾಲಯದ ವ್ಯವಸ್ಥೆ ಯಾಗ ಬೇಕಿದೆ. ಈ ಕಲಾಮಂದಿರದ ಹೊರ ಭಾಗದಲ್ಲಿ ಸಾಕಷ್ಟು ಖಾಲಿ ಜಾಗಗಳು ಇರುವುದರಿಂದ, ಇಲ್ಲಿ ನಾಲ್ಕಾರು ಶೌಚಾಲಯಗಳನ್ನು ನಿರ್ಮಾಣ ಮಾಡಬಹುದಾಗಿದ್ದು, ಈ ಬಗ್ಗೆ ಸಂಬಂಧಪಟ್ಟವರು ಗಮನ ಹರಿಸಬೇಕು.

ಬೂಕನಕೆರೆ ವಿಜೇಂದ್ರ, ಕುವೆಂಪು ನಗರ, ಮೈಸೂರು. 


ಕಾಡಾನೆ ಸಾವಿಗೆ ಹೊಣೆ ಯಾರು?

ಬಂಡೀಪುರ ರಾಷ್ಟ್ರೀಯ ಉದ್ಯಾನವನದಲ್ಲಿ ಮಂಗಳವಾರ ತಡರಾತ್ರಿ ಲಾರಿಯೊಂದು ಡಿಕ್ಕಿ ಹೊಡೆದ ಪರಿಣಾಮ ಸುಮಾರು ೩೫ ವರ್ಷದ ಹೆಣ್ಣಾನೆಯೊಂದು ಸುಮಾರು ೧ ಗಂಟೆಗೂ ಅಽಕ ಕಾಲ ನರಳಿ ಮೃತಪಟ್ಟಿದೆ. ಅರಣ್ಯದೊಳಗೆ ವೇಗವಾಗಿ ವಾಹನ ಚಲಾಯಿಸಿ ಅಷ್ಟು ದೊಡ್ಡ ಗಾತ್ರದ ಆನೆ ಅಪಘಾತ ಮಾಡಿ ಸಾವಿಗೀಡಾಗುವಂತೆ ಮಾಡಿದ್ದಕ್ಕೆ ಹೊಣೆ ಯಾರು? ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಮೂಡಿದೆ. ಕಾಡಿನೊಳಗೆ ರಸ್ತೆಯಲ್ಲಿ ನಿಗದಿಯಾಗಿರುವ ವೇಗದಲ್ಲಿ ವಾಹನ ಚಲಾಯಿಸಬೇಕು ಎಂಬ ನಿಯಮವಿದೆ. ಅಲ್ಲದೇ ಬಂಡೀಪುರದ ಮಾರ್ಗದಲ್ಲಿ ಸಂಚರಿಸುವವರಲ್ಲಿ ಸಾಕಷ್ಟು ಮಂದಿ ಪ್ರಾಣಿಗಳಿಗೆ ಕೀಟಲೆ ಮಾಡುತ್ತಿರುವ ಬಗ್ಗೆ ಆಗಾಗ್ಗೆ ಮಾಧ್ಯಮಗಳಲ್ಲಿ ವರದಿಯೂ ಬಿತ್ತರವಾಗುತ್ತಿದೆ. ಇಂತಹದನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಅರಣ್ಯ ಇಲಾಖೆ ಸೂಕ್ತ ಕ್ರಮವಹಿಸಬೇಕಿದೆ. ಅರಣ್ಯದೊಳಗಿನ ರಸ್ತೆಗಳಲ್ಲಿ ಡುಬ್ಬಗಳನ್ನು ನಿರ್ಮಿಸಬೇಕಿದೆ. ಇದರಿಂದ ವಾಹನಗಳ ಅತಿಯಾದ ವೇಗಕ್ಕೆ ಕಡಿವಾಣ ಹಾಕಬಹುದು. ಅಲ್ಲದೆ, ಕುಡಿದು ವಾಹನ ಚಲಾಯಿಸುವವರ ಸಂಖ್ಯೆಯೂ ಹೆಚ್ಚಾಗಿದೆ. ಅರಣ್ಯ ಇಲಾಖೆಯು ಚೆಕ್‌ಪೋಸ್ಟ್‌ನಲ್ಲಿಯೇ ಅವ ರನ್ನು ಪರಿಶೀಲಿಸಿ ನಂತರ ಅರಣ್ಯದ ರಸ್ತೆಯಲ್ಲಿ ಸಂಚರಿಸಲು ಬಿಡಬೇಕಿದೆ. ಹಾಗೂ ಮುಂದೆ ಈ ರೀತಿಯ ಘಟನೆಗಳು ನಡೆಯದಂತೆ ಎಚ್ಚರ ವಹಿಸಬೇಕಿದೆ.

ಎಂ.ಚೈತ್ರ, ಪತ್ರಿಕೋದ್ಯಮ ವಿಭಾಗ, ಮಹಾರಾಜ ಕಾಲೇಜು, ಮೈಸೂರು. 


ಸಮಾಜವೇಕೆ ಕ್ರೂರತ್ವದ ಕಡೆ ಸಾಗುತ್ತಿದೆ?

ಪ್ರತಿನಿತ್ಯ ಪತ್ರಿಕೆಗಳನ್ನು, ಸುದ್ದಿವಾಹಿನಿಗಳನ್ನು ನೋಡುತ್ತಿದ್ದರೆ ಆತಂಕವಾಗುತ್ತದೆ. ತಾಯಿಯೇ ತನ್ನ ಮಗುವನ್ನು ಕೊಂದಳು, ತನ್ನ ಪ್ರೇಯಸಿಯನ್ನೇ ಕತ್ತರಿಸಿದ ಪ್ರೇಮಿ, ಗಂಡ ಹೆಂಡತಿಯನ್ನು, ಹೆಂಡತಿ ಗಂಡನನ್ನು, ಮಕ್ಕಳು ತಂದೆ ತಾಯಿಯನ್ನು ಕೊಲ್ಲುವ ಮನಸ್ಥಿತಿಗೆ ಬಂದಿದ್ದಾರೆ ಎನ್ನುವ ಬಗ್ಗೆ ವರದಿಗಳು ಪ್ರಕಟಗೊಳ್ಳುತ್ತಲೇ ಇವೆ. ಅಪ್ರಾಪ್ತ ಮಕ್ಕಳ ಮೇಲೆ ಅತ್ಯಾಚಾರ, ಕೆಲ ಶಿಕ್ಷಕರಿಂದ ವಿದ್ಯಾರ್ಥಿಗಳ ಮೇಲೆ ಅತ್ಯಾಚಾರ ಇವು ಪ್ರತಿನಿತ್ಯದ ಸುದ್ದಿಗಳಾಗಿ ಹೋಗಿವೆ. ಇಂದಿನ ಯುವಜನತೆಯ ಮನಸ್ಥಿತಿ ಏಕಿಷ್ಟು ಕ್ರೂರತೆಯ ಕಡೆ ಸಾಗುತ್ತಿದೆ? ಕಾನೂನು ಸುವ್ಯವಸ್ಥೆ ಎಷ್ಟೇ ಬಿಗಿಯಾಗಿದ್ದರೂ ಇಂತಹ ಹೇಯ ಕೃತ್ಯಗಳನ್ನು ತಡೆಗಟ್ಟಲು ಸಾಧ್ಯವಾಗುತ್ತಿಲ್ಲ. ಇವುಗಳನೆಲ್ಲ ಗಮನಿಸಿದರೆ ಬಹುಶಃ ಮಕ್ಕಳಿಗೆ ಶಾಲಾ ಕಾಲೇಜು ಹಂತದಲ್ಲೇ ಶಾಂತಿ, ಸೌಹಾರ್ದತೆಯ ಕಡೆ ಒಲವು ಮೂಡುವಂತೆ ಮಾಡಬೇಕಿದೆ. ಅದಕ್ಕಾಗಿ ಶಾಲಾ ಕಾಲೇಜುಗಳಲ್ಲೇ ಮಾನಸಿಕ ತಜ್ಞರಿಂದ ಆಪ್ತ ಸಮಾಲೋಚನೆ ನಡೆಸಿ ಮಕ್ಕಳು ತಮ್ಮ ಮನಸ್ಥಿತಿಯನ್ನು ಹೇಗೆ ಸಮತೋಲನದಲ್ಲಿ ಇಟ್ಟುಕೊಳ್ಳುಬೇಕು ಎಂಬುದರ ಬಗ್ಗೆ ತರಬೇತಿ ನೀಡಬೇಕು. ಜೊತೆಗೆ ಯುವಪೀಳಿಗೆಗೆ ಹೆಚ್ಚಾಗಿ ಸಾಹಿತ್ಯ, ಮಹನೀಯರ ಪುಸ್ತಕಗಳನ್ನು ಓದುವುದರತ್ತ ಹವ್ಯಾಸಗಳನ್ನು ಬೆಳೆಸಿಕೊಳ್ಳಲು ಪ್ರೋತ್ಸಾಹ ನೀಡಬೇಕು. ಆಗ ಮಾತ್ರ ಸಮಾಜದಲ್ಲಿ ಶಾಂತಿ ನೆಲೆಸಲು ಸಾಧ್ಯ. ಪ್ರತಿಯೊಬ್ಬರೂ ಮತ್ತೊಬ್ಬರಿಗೆ ಮಾದರಿಯಾಗುವಂತೆ ಬದುಕುವ ಕುರಿತು ಯುವ ಶಕ್ತಿಗೆ ಮನನ ಮಾಡಬೇಕಾಗಿದೆ.

ಎಂ.ಎಸ್.ಉಷಾ ಪ್ರಕಾಶ್, ಎಸ್.ಬಿ.ಎಂ.ಕಾಲೋನಿ, ಮೈಸೂರು.


ಹೆಚ್ಚುವರಿ ಬಸ್ ಸೌಲಭ್ಯ ಕಲ್ಪಿಸಿ

ಮೈಸೂರಿನ ರಾಮಕೃಷ್ಣನಗರದಿಂದ ಆಂದೋಲನ ವೃತ್ತದ ಮಾರ್ಗವಾಗಿ ಬೆಳಿಗ್ಗೆ ೭.೩೦ ರಿಂದ ೯.೩೦ ರವರೆಗೆ ತೀರಾ ಕಡಿಮೆ ಸಂಖ್ಯೆಯಲ್ಲಿ ನಗರ ಸಾರಿಗೆ ಬಸ್‌ಗಳು ಸಂಚರಿಸುತ್ತಿದ್ದು, ನೂಕುನುಗ್ಗುಲಿನಲ್ಲಿ ಪ್ರಯಾಣಿಸುವ ಸಂಕಟ ಎದುರಾಗಿದೆ. ಒಂದೇ ಬಸ್ಸಿನಲ್ಲಿ ಎರಡು ಬಸ್ಸಿಗಾಗವಷ್ಟು ಜನರು ಪ್ರಯಾಣಿಸುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದಾಗಿ ಶಾಲಾ ಕಾಲೇಜು ವಿದ್ಯಾರ್ಥಿನಿಯರು, ಮಹಿಳೆಯರು, ಮಕ್ಕಳು ಹಾಗೂ ಹಿರಿಯ ನಾಗರಿಕರು ಬಸ್‌ನಲ್ಲಿ ಪ್ರಯಾಣ ಮಾಡುವುದು ತ್ರಾಸದಾಯಕವಾಗಿದೆ. ಅಲ್ಲದೆ ಬರುವ ಎಲ್ಲ ಬಸ್‌ಗಳೂ ಅಗತ್ಯ ಮೀರಿ ತುಂಬುತ್ತಿದ್ದು, ಇದರಿಂದ ಬಸ್ ಹತ್ತುವುದು ಕಷ್ಟಕರವಾಗಿದೆ. ಅಲ್ಲದೆ ಬೆಳಿಗ್ಗೆ ವೇಳೆ ಬಸ್‌ಗಳನ್ನೇ ನಂಬಿ ಈ ಭಾಗದಿಂದ ನಗರದ ವಿವಿಧ ಭಾಗಗಳಿಗೆ ಕೆಲಸಕ್ಕೆಂದು ತೆರಳುವವರು ಕೂಡ ಬಸ್‌ಗಳು ಕಡಿಮೆ ಇರುವುದರಿಂದ ಸರಿ ಯಾದ ಸಮಯಕ್ಕೆ ಬಸ್ ಸಿಗದೆ, ಸಿಕ್ಕಿದರೂ ಬಸ್‌ನಲ್ಲಿ ಜಾಗ ಇರದ ಕಾರಣ ಹತ್ತಲು ಸಾಧ್ಯವಾಗದೆ ಪರದಾಡುವಂತಾಗಿದೆ. ಈಗಲಾದರೂ ಸಂಬಂಧಪಟ್ಟ ಅಽಕಾರಿಗಳು ಗಮನ ಹರಿಸಿ ಈ ಮಾರ್ಗವಾಗಿ ಬೆಳಿಗ್ಗೆ ೭.೩೦ ರಿಂದ ೯.೩೦ ರವರೆಗೆ ಹೆಚ್ಚುವರಿ ಬಸ್ಸುಗಳ ಸಂಚಾರಕ್ಕೆ ಅವಕಾಶ ಕಲ್ಪಿಸಬೇಕು.

ವಿ.ನಿರ್ಮಲ್ ಕುಮಾರ್, ವಿದ್ಯಾರ್ಥಿ, ಮಹಾರಾಜ ಕಾಲೇಜು, ಮೈಸೂರು.

andolanait

Recent Posts

ಅಗತ್ಯ ಸುರಕ್ಷತಾ ಕ್ರಮಗಳೊಂದಿಗೆ ಬಂಡೀಪುರ-ನಾಗರಹೊಳೆ ಸಫಾರಿ ಆರಂಭಿಸಿ: ಸಿಎಂ ಡಿ.ಕೆ.ಶಿವಕುಮಾರ್‌ ಸೂಚನೆ

ಬೆಂಗಳೂರು: ಅಗತ್ಯ ಸುರಕ್ಷತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ ಬಂಡೀಪುರ ಹಾಗೂ ನಾಗರಹೊಳೆ ಉದ್ಯಾನಗಳಲ್ಲಿ ಸಫಾರಿ ಆರಂಭಿಸಿ ಎಂದು ಸಿಎಂ ಡಿ.ಕೆ.ಶಿವಕುಮಾರ್‌…

7 hours ago

ವೆನೆಜುವೆಲಾ ಭೂಕಂಪ: ಮೃತರ ಸಂಖ್ಯೆ 1700ಕ್ಕೆ ಏರಿಕೆ

ವೆನೆಜುವೆಲಾ: ಇಲ್ಲಿ ಬುಧವಾರ ಸಂಜೆ ಸಂಭವಿಸಿದ ಎರಡು ಪ್ರಬಲ ಭೂಕಂಪಗಳಲ್ಲಿ ಮೃತಪಟ್ಟವರ ಸಂಖ್ಯೆ 1700ಕ್ಕೆ ಏರಿಕೆಯಾಗಿದೆ. ಈ ದುರಂತದಲ್ಲಿ 5000ಕ್ಕೂ…

8 hours ago

ರಾಜಸ್ಥಾನದಲ್ಲಿ ಪ್ಯಾರಾಮೆಡಿಕಲ್‌ ಪರೀಕ್ಷೆ ಪ್ರಶ್ನೆ ಪತ್ರಿಕೆ ಸೋರಿಕೆ: ನಾಲ್ವರು ಅರೆಸ್ಟ್‌

ಜೈಪುರ: ರಾಜಸ್ಥಾನ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ ಪ್ಯಾರಾಮೆಡಿಕಲ್‌ ಪರೀಕ್ಷೆಯಲ್ಲಿ ಸಾಮೂಹಿಕ ನಕಲು ನಡೆಯುತ್ತಿದ್ದ ವೇಳೆಯೇ ಪರೀಕ್ಷೆ ಹಾಲ್‌ ಮೇಲೆ ಪೊಲೀಸರು…

8 hours ago

ಎಸ್‌ಐಆರ್‌ ಬಗ್ಗೆ ಗಾಬರಿ ಬೇಡ: ಬಾನು ಮುಷ್ತಾಕ್‌

ಹಾಸನ: ರಾಜ್ಯದಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಪ್ರಕ್ರಿಯೆಯು ಆರಂಭವಾಗಿದೆ. ಹಾಸನದಲ್ಲಿ ಬೂಕರ್‌ ಪ್ರಶಸ್ತಿ ವಿಜೇತೆ ಬಾನು ಮುಷ್ತಾಕ್‌…

9 hours ago

ನಾಡಿನ ಖ್ಯಾತ ಕಲಾವಿದ ಕೆ.ಟಿ.ಶಿವಪ್ರಸಾದ್‌ ನಿಧನ

ಬೆಂಗಳೂರು: ನಾಡಿನ ಖ್ಯಾತ ಹಾಗೂ ಅಂತರಾಷ್ಟ್ರೀಯ ಖ್ಯಾತಿಯ ಕಲಾವಿದರಾದ, ದಲಿತ ಸಂಘರ್ಷ ಸಮಿತಿಯ ಕಾರ್ಯಕರ್ತ ‌ಕೆ.ಟಿ. ಶಿವಪ್ರಸಾದ್(77) ಬೆಂಗಳೂರಿನಲ್ಲಿ ನಿಧನರಾಗಿದ್ದಾರೆ.…

9 hours ago

ಕೈಕೊಟ್ಟ ಮುಂಗಾರು: 126 ವರ್ಷಗಳಲ್ಲೇ ಮೂರನೇ ಬಾರಿ ದೇಶದಲ್ಲಿ ಮಳೆ ಕೊರತೆ

ನವದೆಹಲಿ: ದೇಶದಲ್ಲಿ ಈ ಬಾರಿ ಮುಂಗಾರು ಮಳೆ ಸಂಪೂರ್ಣವಾಗಿ ಕೈಕೊಟ್ಟಿದ್ದು, ಕಳೆದ 126 ವರ್ಷಗಳ ಇತಿಹಾಸದಲ್ಲೇ ಜೂನ್‌ ತಿಂಗಳಿನಲ್ಲಿ ಮೂರನೇ…

10 hours ago