ಎಡಿಟೋರಿಯಲ್

ಆಂದೋಲನ ಓದುಗರ ಪತ್ರ : 26 ಸೋಮವಾರ 2022

ಬೂಸ್ಟರ್ ಡೋಸ್ ಪಡೆದು ಕೋವಿಡ್ ಓಡಿಸೋಣ

ಚೀನಾದಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿದ್ದು, ದೇಶದಲ್ಲಿಯೂ ಮುಂಜಾಗ್ರತಾ ಕ್ರಮಗಳನ್ನು ವಹಿಸಲು ಕೇಂದ್ರ ಸರ್ಕಾರ ತೀರ್ಮಾನಿಸಿದೆ. ಈಗಾಗಲೇ ಸಾಕಷ್ಟು ಕಡೆ ಮಾಸ್ಕ್ ಕಡ್ಡಾಯಗೊಳಿಸಲಾಗಿದೆ. ಬೂಸ್ಟರ್ ಡೋಸ್ ನೀಡುವ ಅಭಿಯಾನವನ್ನು ಚುರುಕುಗೊಳಿಸಲಾಗಿದೆ. ಈ ನಡುವೆ ನೂತನವಾಗಿ ಮೂಗಿನ ಮೂಲಕ ನೀಡುವ ಇಂಟ್ರಾ ನೇಸಲ್ ಲಸಿಕೆಯನ್ನು ವಿತರಿಸಲು ಕೇಂದ್ರ ಸರ್ಕಾರ ಅನುಮತಿ ನೀಡಿದ್ದು, ಇದನ್ನು ಮೂರನೇ ಲಸಿಕೆಯಾಗಿ ಯುವಜನತೆಗೆ ನೀಡಲು ತಯಾರಿ ನಡೆಸಲಾಗುತ್ತಿದೆ. ಈ ಲಸಿಕೆ ದೇಶದ ಜನರಿಗೆ ಹೊಸದು. ಹಾಗಾಗಿ ಇದರ ಕುರಿತು ಸೂಕ್ತ ಮಾಹಿತಿಯನ್ನು ನೀಡಿದರೆ ಒಳಿತು ಎನಿಸುತ್ತದೆ. ಹೈದರಾಬಾದ್ ಮೂಲದ ಭಾರತ್ ಬಯೋಟೆಕ್ ಸಂಸ್ಥೆ ಇದನ್ನು ಅಭಿವೃದ್ಧಿ ಪಡಿಸಿದ್ದು, ನಮ್ಮ ಸ್ಥಳೀಯ ಆರೋಗ್ಯ ಕಾರ್ಯಕರ್ತರು ಇದರ ಬಗ್ಗೆ ಹೆಚ್ಚು ಪ್ರಚಾರವನ್ನು ಮಾಡಬೇಕಿದೆ. ಮತ್ತೇ ದೇಶದಲ್ಲಿ ಕೋವಿಡ್ ಹರಡುವ ಮುನ್ನವೇ ದೇಶದ ಪ್ರತಿಯೊಬ್ಬ ಪ್ರಜೆಯೂ ಬೂಸ್ಟರ್ ಡೋಸ್ ಪಡೆದುಕೊಂಡು ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು. ಜೊತೆಗೆ ಇಂಜೆಕ್ಷನ್ ಬದಲು ಮೂಗಿನ ಮೂಲಕ ಈ ಲಸಿಕೆಯನ್ನು ಯಾವುದೇ ಭಯವಿಲ್ಲದೆ ಪಡೆದು ಕೋವಿಡ್‌ನಿಂದ ರಕ್ಷಣೆಯನ್ನು ಪಡೆದುಕೊಳ್ಳಬೇಕಿದೆ. ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕನ್ನು ಕಡ್ಡಾಯವಾಗಿ ಬಳಸಿ ಕೋವಿಡ್ ಮುಕ್ತ ಭಾರತಕ್ಕಾಗಿ ಶ್ರಮಿಸೋಣ.

-ಎಂ.ಚೈತ್ರ, ಪತ್ರಿಕೋದ್ಯಮ ವಿಭಾಗದ ವಿದ್ಯಾರ್ಥಿನಿ, ಮಹಾರಾಜ ಕಾಲೇಜು.


ರೈತನನ್ನು ಬಡವನನ್ನಾಗಿಸಿರುವುದೇ ಒಂದು ದುರಂತ

ರೈತ ಎಂದರೆ ದೇಶದ ಬೆನ್ನೆಲುಬು, ಅನ್ನದಾತ ಎಂದು ಹೇಳುವ ನಾವುಗಳು ದೇಶದಲ್ಲಿ ರೈತರ ಸಂಕಷ್ಟಗಳೇನು? ಅವರ ಆತ್ಮಹತ್ಯೆಗಳಿಗೆ ಕಾರಣಗಳೇನು? ಎಂಬುದರ ಬಗ್ಗೆ ಅವಲೋಕಿಸಬೇಕಾಗಿದೆ. ತಂತ್ರಜ್ಞಾನ ಇಂದು ಸಾಕಷ್ಟು ಮುಂದುವರಿದಿದ್ದು, ಹೊಸ ಹೊಸ ಆವಿಷ್ಕಾರಗಳನ್ನು ಮಾಡುವ ಮಟ್ಟಿಗೆ ನಾವು ಬೆಳೆದಿರಬಹುದು. ಆದರೆ ಕೃತಕವಾಗಿ ಯಾವುದೇ ಆಹಾರವನ್ನು ಬೆಳೆಯಲು ಸಾಧ್ಯವಿಲ್ಲ. ಆಹಾರ ಪದಾರ್ಥಗಳಿಗೆ ರೈತರನ್ನೇ ಆಶ್ರಯಿಸಬೇಕಿದೆ. ರೈತರು ವ್ಯವಸಾಯ ಮಾಡದೆ, ಬೆಳೆ ಬೆಳೆಯದೆ ಹೋಗಿದ್ದರೆ ಇಂದು ನಮ್ಮ ಪರಿಸ್ಥಿತಿ ಏನಾಗಿರುತ್ತಿತ್ತು ಎಂಬುದನ್ನು ಚಿಂತಿಸಬೇಕಿದೆ. ಇಂದು ಪ್ರತಿಯೊಂದಕ್ಕೂ ನಿಗದಿತ ಬೆಲೆ ಇದೆ. ಆದರೆ ರೈತರು ಬೆಳೆದ ಬೆಳೆಗಳಿಗೆ ನಿಖರವಾದ ಬೆಲೆಯನ್ನು ನೀಡುವಲ್ಲಿ ಸರ್ಕಾರಗಳು ವಿಫಲವಾಗಿವೆ. ಇಂದು ಅವರು ಸಾಲ ಮಾಡಿ ಬೆಳೆದ ಬೆಳೆಗೆ ಸರಿಯಾದ ಬೆಲೆ ಸಿಗದೆ, ಬೆಳೆದ ಬೆಳೆಯಿಂದ ಸಾಲ ತೀರಿಸಲಾಗದೆ, ಬದುಕು ಕಟ್ಟಿಕೊಳ್ಳಲಾಗದೆ ಗೋಳಾಡುವ ಪರಿಸ್ಥಿತಿಗೆ ಬಂದು ತಲುಪಿದ್ದಾರೆ. ನಮ್ಮ ದೇಶದ ಆರ್ಥಿಕತೆ ಭದ್ರತೆಗೆ, ಜನರ ಜೀವದ ಭದ್ರತೆಗೆ ರೈತರು ಶ್ರಮಿಸುತ್ತಿದ್ದಾರೆ. ಆದರೆ, ದೇಶದ ರೈತನ ಜೀವನವೇ ಭದ್ರತೆ ಇಲ್ಲದಂತಾಗಿದೆ. ಈಗಿರುವಾಗ ರೈತರ ಅಭಿವೃದ್ಧಿ ಹೇಗೆ ಎಂಬಂತಾಗಿದೆ. ಒಂದು ದೇಶದ ಅಭಿವೃದ್ಧಿ ಎಂದರೆ ಆ ದೇಶದ ರೈತರ ಸಂಕಷ್ಟದ ಸ್ಥಿತಿ ದೂರವಾಗಿ ರೈತರ ಜೀವನ ಅಭಿವೃದ್ಧಿಯತ್ತ ಸಾಗುವುದಾಗಿದೆ. ಮುಂದೆ ಅನ್ನದಾತನೇ ಹಸಿವು ಎಂದು ಕೂತರೆ ದೇಶದ ಸ್ಥಿತಿ ಏನಾಗಬಹುದು? ಅನ್ನ ಹಾಕುವವರನ್ನೇ ಸಾಲಗಾರರನ್ನಾಗಿ ಮಾಡಿರುವ ದೇಶದ ಭವಿಷ್ಯ ಎತ್ತ ಸಾಗುತ್ತಿದೆ? ಇಂದಿನ ವ್ಯವಸ್ಥೆಯೇ ರೈತರನ್ನು ಬಡವರನ್ನಾಗಿಸಿದೆ.

-ಪಿ.ಸಿ.ಕಂಗಾಣಿ ಸೋಮು, ಕ್ಯಾತಮಾರನಹಳ್ಳಿ, ಮೈಸೂರು


ಮೈಸೂರಿನ ಪ್ರವಾಸೋದ್ಯಮಕ್ಕೆ ಹೆಚ್ಚಿನ ಒತ್ತು ನೀಡಬೇಕಿದೆ

ಮೈಸೂರಿನ ಅರಮನೆ ಆವರಣದಲ್ಲಿ ಚಳಿಗಾಲದ ಉತ್ಸವ ಆರಂಭವಾಗಿದ್ದು, ಕ್ರಿಸ್‌ಮಸ್ ರಜಾದಿನಗಳು ಮತ್ತು ಹೊಸ ವರ್ಷದ ಹಿನ್ನೆಲೆಯಲ್ಲಿ ಈ ಉತ್ಸವಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಭೇಟಿ ನೀಡುವ ನಿರೀಕ್ಷೆಯಿದೆ. ಉತ್ಸವದ ಅಂಗವಾಗಿ ಅರಮನೆ ಆವರಣದಲ್ಲಿ -ಲಪುಷ್ಪ ಪ್ರದರ್ಶನವನ್ನು ಆಯೋಜಿಸಲಾಗಿದ್ದು, ಹೂವಿನಿಂದ ಅಲಂಕೃತಗೊಂಡ ವಿವಿಧ ಪ್ರತಿಕೃತಿಗಳನ್ನು ಕಣ್ತುಂಬಿಕೊಂಡ ಪ್ರವಾಸಿಗರು ಮೈಸೂರಿನ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಪ್ರಮುಖ ಆಕರ್ಷಣೆಯಾದ ಕಾಶಿ ವಿಶ್ವನಾಥ ದೇವಸ್ಥಾನದ ಮಾದರಿ ೨೫,೦೦೦ಕ್ಕೂ ಹೆಚ್ಚು ಹೂಕುಂಡಗಳು ಪ್ರವಾಸಿಗರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿವೆ. ಅರಮನೆ ಆವರಣದಲ್ಲಿ ಮತ್ತಷ್ಟು ಕಾರ್ಯಕ್ರಮಗಳನ್ನು ಆಯೋಜನೆ ಮಾಡುವ ಸಲುವಾಗಿ ಸರ್ಕಾರ ತಯಾರಿ ನಡೆಸಿದ್ದು, ಇಲ್ಲಿಗೆ ಬರುವ ಪ್ರವಾಸಿಗರಿಗೆ ಇನ್ನೂ ಹೆಚ್ಚಿನ ಸೌಕರ್ಯಗಳನ್ನು ಒದಗಿಸಿ, ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಮೈಸೂರನ್ನು ಪ್ರವಾಸೋದ್ಯಮ ತಾಣವಾಗಿ ಮುಂದುವರಿಸಲು ಪ್ರತಿಯೊಬ್ಬರು ಶ್ರಮಿಸಬೇಕಿದೆ.

-ಸಿಂಚನ ಸಿರಿ ಗೌರಿ, ಮಹಾರಾಜ ಕಾಲೇಜು, ಮೈಸೂರು


ಪರಸಯ್ಯನಹುಂಡಿ ವೃತ್ತದ ಬಳಿ ಸಿಗ್ನಲ್ ದೀಪ ಅಳವಡಿಸಿ 

ಮೈಸೂರಿನ ಹೊರವರ್ತುಲ ರಸ್ತೆಯ(ಹೆಚ್.ಡಿ.ಕೋಟೆ ರಸ್ತೆ) ಪರಸಯ್ಯನ ಹುಂಡಿಯ ವೃತ್ತದ ಬಳಿ ಟ್ರಾಫಿಕ್ ಸಿಗ್ನಲ್ ಇಲ್ಲದ ಕಾರಣ ವಾಹನ ಹಾಗೂ ಜನಸಂದಣಿಯಿಂದಾಗಿ ಅಲ್ಲಿ ಆಗಾಗ್ಗೆ ಸಾಕಷ್ಟು ಟ್ರಾಫಿಕ್ ಸಮಸ್ಯೆಯಾಗುತ್ತಿದೆ. ವಾಹನ ಸವಾರರು ಪ್ರತಿನಿತ್ಯ ತೊಂದರೆ ಅನುಭವಿಸುತ್ತಿದ್ದಾರೆ. ಇದು ಮೈಸೂರು ನಗರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯಾಗಿರುವುದರಿಂದ ಹಾಗೂ ಹೊರವರ್ತುಲ ರಸ್ತೆಗಳು ನಗರದ ರಸ್ತೆಗಳಿಗೆ ಸಂಪರ್ಕ ಕಲ್ಪಿಸುವುದರಿಂದ ಇಲ್ಲಿ ವಾಹನ ದಟ್ಟಣೆ ಹೆಚ್ಚು, ಸದಾ ಜನರಿಂದ ತುಂಬಿರುವ ಸ್ಥಳವಾಗಿದೆ. ಅಲ್ಲದೇ ಮೈಸೂರು ಸುತ್ತಮುತ್ತಲಿನ ಹಳ್ಳಿಯ ಜನರು ನಗರಕ್ಕೆ ಪ್ರತಿನಿತ್ಯ ಕೆಲಸಕ್ಕೆ ತೆರಳುವುದರಿಂದ ಬೆಳಿಗ್ಗೆಯ ವೇಳೆ ಹಾಗೂ ಸಂಜೆಯ ಸಮಯ ಇಲ್ಲಿ ಮತ್ತಷ್ಟು ವಾಹನ ದಟ್ಟಣೆ ಹೆಚ್ಚಾಗುತ್ತಿದೆ. ಆದರೆ ಇಲ್ಲಿ ಸಿಗ್ನಲ್ ವ್ಯವಸ್ಥೆ ಇಲ್ಲದಿರುವ ಕಾರಣ ವಾಹನ ಗಳ ಸಂಚಾರಕ್ಕೆ ಸಾಕಷ್ಟು ತೊಂದರೆಯಾಗುತ್ತಿದೆ. ಅಲ್ಲದೆ ಆಗಾಗ್ಗೆ ಅಪಘಾತಗಳೂ ಸಂಭವಿಸುತ್ತಿದ್ದು, ಇವುಗಳನ್ನು ತಡೆಗಟ್ಟಲು ಇಲ್ಲಿ ಸಿಗ್ನಲ್ ಲೈಟ್ ಅಳವಡಿಸಬೇಕಿದೆ. ಇಲ್ಲಿ ಬಸ್ ತಂಗು ದಾಣವೂ ಇಲ್ಲದೆ ಪ್ರಯಾಣಿಕರು ಬಿಸಿಲು, ಮಳೆಗೆ ಅಕ್ಕಪಕ್ಕದ ಅಂಗಡಿಗಳನ್ನು ಆಶ್ರಯಿಸುವಂತ ಪರಿಸ್ಥಿತಿ ನಿರ್ಮಾಣವಾಗಿರುವುದರಿಂದ ಸಂಬಂಧಪಟ್ಟ ಜನಪ್ರತಿನಿಽಗಳು ಹಾಗೂ ಅಽಕಾರಿಗಳು ಇತ್ತ ಗಮನಹರಿಸಿ ಸುಗಮ ಸಂಚಾರಕ್ಕೆ ಸಿಗ್ನಲ್ ಲೈಟ್ ಅಳವಡಿಸಬೇಕು ಹಾಗೂ ಪ್ರಯಾಣಿಕರ ಅನುಕೂಲಕ್ಕೆ ಬಸ್ ತಂಗುದಾಣ ನಿರ್ಮಿಸಬೇಕೆಂಬುದು ಸಾರ್ವಜನಿಕರ ಮನವಿಯಾಗಿದೆ.

-ಎಚ್.ಎಂ.ಮಹದೇವಸ್ವಾಮಿ, ಹಂಪಾಪುರ, ಎಚ್.ಡಿ.ಕೋಟೆ ತಾ.

andolanait

Share
Published by
andolanait

Recent Posts

ಲೋಕಾಯುಕ್ತ ಬಲೆಗೆ ಬಿದ್ದ ಪಿಡಿಒ

ಮೈಸೂರು: ಇ-ಸ್ವತ್ತು ಮಾಡಿ ಕೊಡಲು ಅರ್ಜಿದಾರರಿಗೆ ಹಣ ನೀಡುವಂತೆ ಒತ್ತಾಯ ಮಾಡಿದ ಗ್ರಾಮ ಪಂಚಾಯಿತಿ ಪಿಡಿಒ ಕುಳ್ಳೇಗೌಡ ನಾಲ್ಕು ಸಾವಿರ…

2 hours ago

ಅರ್ಥಪೂರ್ಣವಾಗಿ ಕನ್ನಡ ರಾಜ್ಯೋತ್ಸವ ಆಚರಣೆ – ಡಾ. ಪಿ ಶಿವರಾಜ್

ಮೈಸೂರು: ಕಳೆದ ಬಾರಿಯಂತೆ ಈ ಬಾರಿಯೂ ಅರ್ಥಪೂರ್ಣ ಹಾಗೂ ಅದ್ದೂರಿಯಾಗಿ ಕನ್ನಡ ರಾಜ್ಯೋತ್ಸವ ಆಚರಣೆ ಮಾಡಲಾಗುವುದು ಎಂದು ಅಪರ ಜಿಲ್ಲಾಧಿಕಾರಿ…

3 hours ago

ನಗರದ ಆರೋಗ್ಯ ಕಾಪಾಡುವ ಪೌರಕಾರ್ಮಿಕರ ಆರೋಗ್ಯವೂ ಮುಖ್ಯ: ಜಿ ಟಿ ದೇವೇಗೌಡ

ಮೈಸೂರು: ನಗರವನ್ನು ಸ್ವಚ್ಛಗೊಳಿಸುವ ಮೂಲಕ ಜನರ ಆರೋಗ್ಯ ಕಾಪಾಡುವ ಪೌರಕಾರ್ಮಿಕರ ಆರೋಗ್ಯವೂ ಮುಖ್ಯ ವಾಗಿದ್ದು, ಅವರು ಈ ವಿಷಯದಲ್ಲಿ ನಿರ್ಲಕ್ಷ್ಯ…

4 hours ago

ಹನೂರು: ಗುಂಡಿಮಯವಾದ ರಸ್ತೆ, ಸಾಮಾಜಿಕ ಜಾಲತಾಣ ಮೂಲಕ ಯುವಕ ವ್ಯಂಗ್ಯ

ಹನೂರು: ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಅತಿ ದೊಡ್ಡ ಗ್ರಾಮ ಪಂಚಾಯಿತಿ ಎಂದು ಪ್ರಸಿದ್ಧಿ ಪಡೆದಿರುವ ಮಾರ್ಟಳ್ಳಿ ಗ್ರಾಮ ಪಂಚಾಯಿತಿ ಮುಖ್ಯ…

4 hours ago

ಇಶಾ ಫೌಂಡೇಶನ್‌ ವಿರುದ್ಧದ ಪ್ರಕರಣ ವಜಾಗೊಳಿಸಿದ ಸುಪ್ರೀಂಕೋರ್ಟ್‌

ಹೊಸದಿಲ್ಲಿ: ತಮಿಳುನಾಡಿನ ಕೊಯಮತ್ತೂರಿನಲ್ಲಿರುವ ಸದ್ಗುರು ಜಗ್ಗಿ ವಾಸುದೇವ್‌ ಅವರ ಆಶ್ರಮ ಸೇರಲು ತನ್ನ ಇಬ್ಬರು ಹೆಣ್ಣುಮಕ್ಕಳನ್ನು ಬ್ರೈನ್‌ವಾಶ್‌ ಮಾಡಲಾಗಿದೆ ಎಂಬ…

5 hours ago

ಮಡಿಕೇರಿ: ಮಗನಿಂದಲೇ ತಂದೆಯ ಹತ್ಯೆ..

ಮಡಿಕೇರಿ: ಮಗನಿಂದಲೇ ತಂದೆ ಹತ್ಯೆಯಾದ ಘಟನೆ ಶ್ರೀಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯ ಚಿಕ್ಕಮಂಡೂರು ಗ್ರಾಮದಲ್ಲಿ ನಡೆದಿದೆ. ಸಿ ಎನ್ ನಾಣಯ್ಯ…

6 hours ago