ಎಡಿಟೋರಿಯಲ್

ಬೆಂಗಳೂರು ಡೈರಿ : ಕರ್ನಾಟಕದ ರಾಜಕಾರಣವನ್ನು ಆವರಿಸಿದ ಕೊರೊನಾ

ಅವಧಿಪೂರ್ವ ಚುನಾವಣಾ ಲೆಕ್ಕಾಚಾರದಲ್ಲಿ ಕಾಂಗ್ರೆಸ್‌ – ಬಿಜೆಪಿ  

ಕರ್ನಾಟಕದ ರಾಜಕಾರಣದ ಸುತ್ತ ಕೊರೊನಾ ಆವರಿಸುತ್ತಿದೆ. ಕಳೆದ ವಾರ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಾಡಿದ ಮಾತುಗಳು ಇದಕ್ಕೆ ಸಾಕ್ಷಿ.

ಅಂದ ಹಾಗೆ ಡಿ.ಕೆ.ಶಿವಕುಮಾರ್ ಹೇಳಿದ್ದೆನು? ಬಿಎಫ್-೭ ಎಂಬ ಕೊರೊನಾ ಸಾಂಕ್ರಾಮಿಕ ರೋಗದ ಹೊಸ ತಳಿ ಚೀನಾದಂತಹ ದೇಶದಲ್ಲಿ ಆರ್ಭಟಿಸುತ್ತಿದ್ದು, ಭಾರತಕ್ಕೂ ಅದು ಕಾಲಿಡಬಹುದು ಎಂಬ ಲೆಕ್ಕಾಚಾರದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಬೇರೆ ಲೆಕ್ಕಾಚಾರಕ್ಕೆ ಮುಂದಾಗಿದೆ. ಅದರ ಪ್ರಕಾರ ಕರ್ನಾಟಕದಲ್ಲಿ ಮುಂದಿನ ವರ್ಷ ಮೇ ತಿಂಗಳಲ್ಲಿ ನಡೆಯಬೇಕಾದ ವಿಧಾನಸಭೆ ಚುನಾವಣೆ ಅವಧಿಗಿಂತ ಮುಂಚಿತವಾಗಿ ನಡೆಯಲಿದೆ. ಇದೇ ಕಾರಣಕ್ಕಾಗಿ ಕೇಂದ್ರದ ಬಿಜೆಪಿ ವರಿಷ್ಠರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಸೂಚನೆ ಕೊಟ್ಟಿದ್ದಾರೆ. ಅವಧಿಪೂರ್ವ ಚುನಾವಣೆಗೆ ತಯಾರಿ ನಡೆಸಲು ಹೇಳಿದ್ದಾರೆ ಎಂಬುದು ಡಿ.ಕೆ.ಶಿವಕುಮಾರ್ ಮಾತು.

ಹೀಗೆ ಡಿ.ಕೆ.ಶಿವಕುಮಾರ್ ಅವರು ನೀಡಿದ ಹೇಳಿಕೆ ದೊಡ್ಡ ಸುದ್ದಿಯಾಗುತ್ತಿದ್ದಂತೆಯೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಅಂತಹ ಸಾಧ್ಯತೆಗಳನ್ನು ನಿರಾಕರಿಸಿದರು. ಆದರೆ ಅವರು ಹೀಗೆ ನಿರಾಕರಿಸಿದರೂ ಸನ್ನಿವೇಶದ ಸಾಕ್ಷ್ಯಾಧಾರಗಳು ಡಿ.ಕೆ.ಶಿವಕುಮಾರ್ ಹೇಳಿರುವುದನ್ನು ಪುಷ್ಟೀಕರಿಸುತ್ತಿವೆ. ಅರ್ಥಾತ್, ಕರ್ನಾಟಕದಲ್ಲಿ ಮತ್ತೊಮ್ಮೆ ಮಾರ್ಚ್ ತಿಂಗಳ ವೇಳೆಗೆ ಕೊರೊನಾ ಸೋಂಕು ಗರಿಷ್ಟ ಮಟ್ಟಕ್ಕೇರಲಿದೆ.

ಚೀನಾದಲ್ಲಿ ವ್ಯಾಪಕವಾಗಿ ಹಬ್ಬುತ್ತಿರುವ ಬಿಎಫ್-೭ ಹೆಸರಿನ ತಳಿ ಎಷ್ಟು ಬೇಗ ತನ್ನ ಶಕ್ತಿಯನ್ನು ವೃದ್ಧಿಸಿಕೊಳ್ಳುತ್ತಿದೆಯೆಂದರೆ ಪ್ರತಿ ಗಂಟೆಗೆ ಸೋಂಕಿತರ ಸಂಖ್ಯೆ ದುಪ್ಪಟ್ಟಾಗುತ್ತಿದೆ. ತಜ್ಞರ ಪ್ರಕಾರ, ಬಿಎಫ್-೭ ತಳಿ ಒಬ್ಬ ವ್ಯಕ್ತಿಯನ್ನು ಆವರಿಸಿದರೆ, ಆ ವ್ಯಕ್ತಿಯಿಂದ ಕನಿಷ್ಠ ಹದಿನೆಂಟು ಮಂದಿಗೆ ಪಸರಿಸುತ್ತಿದೆ. ಇಂತಹ ಸ್ಥಿತಿಯಲ್ಲಿ ಚೀನಾ ಸೇರಿದಂತೆ ಬಹುತೇಕ ದೇಶಗಳಿಂದ ಭಾರತಕ್ಕೆ ಬರುವ ಮತ್ತು ಭಾರತದಿಂದ ಹೋಗುವ ವಿಮಾನಗಳನ್ನು ನಿರ್ಬಂಧಿಸಬೇಕು. ಆದರೆ ಕೇಂದ್ರ ಸರ್ಕಾರ ಈವರೆಗೆ ಇದನ್ನು ಮಾಡಿಲ್ಲ. ಹೀಗಾಗಿ ಈ ವರ್ಷದ ಅಂತ್ಯದ ವೇಳೆಗೆ ಕೊರೊನಾ ಹೊಸ ತಳಿ ದೇಶದುದ್ದಗಲಕ್ಕೂ ಹರಡುವುದು ಬಹುತೇಕ ಖಚಿತ. ಒಂದು ಸಲ ಅದು ಹರಡಿದ ಮೇಲೆ ಕೊರೊನಾ ಮತ್ತೊಮ್ಮೆ ಉಲ್ಬಣಿಸಿ ದೇಶವನ್ನು ತತ್ತರಗೊಳಿಸಲಿದೆ. ಹಾಗಂತ ಇದೊಂದು ಸಾಮಾನ್ಯ ಲೆಕ್ಕಾಚಾರ ಎಂದು ಭಾವಿಸಬೇಕಿಲ್ಲ. ಯಾಕೆಂದರೆ ಇಂತಹ ಲೆಕ್ಕಾಚಾರ ಇರುವುದರಿಂದಲೇ ಭಾರತದಲ್ಲಿ ಕೊರೊನಾ ತಳಿಯ ವಿರುದ್ಧ ಔಷಧ ಉತ್ಪಾದಿಸುವ ಕೆಲಸಕ್ಕೆ ಫಾರ್ಮಾಸ್ಯುಟಿಕಲ್ ಇಂಡಸ್ಟ್ರಿಗಳು ಅದಾಗಲೇ ಕೈ ಹಾಕಿವೆ. ಇದಕ್ಕೆ ಪೂರಕವಾಗಿ ಪ್ಯಾಕೇಜಿಂಗ್ ಇಂಡಸ್ಟ್ರಿಯೂ ಕೆಲಸ ಮಾಡುತ್ತಿದೆ. ಅಂದ ಹಾಗೆ ಪ್ಯಾಕೇಜಿಂಗ್ ಇಂಡಸ್ಟ್ರಿಯ ಧೋರಣೆಯಿಂದ ದೊಡ್ಡ ಹೊಡೆತ ಬಿದ್ದಿರುವುದು ಆಹಾರ ಸಂಸ್ಕರಣಾ ಘಟಕಗಳಿಗೆ. ಯಾಕೆಂದರೆ ಈ ಘಟಕಗಳು ಸಂಸ್ಕರಿತ ಆಹಾರವನ್ನು ಸಿದ್ಧಪಡಿಸಿದರೆ, ಅದನ್ನು ಪ್ಯಾಕ್ ಮಾಡುವುದು ಪ್ಯಾಕೇಜಿಂಗ್ ಇಂಡಸ್ಟ್ರಿ. ಆದರೆ, ಕಳೆದ ಕೆಲ ದಿನಗಳಿಂದ ಪ್ಯಾಕೇಜ್ ಇಂಡಸ್ಟ್ರಿಯ ಬಹುತೇಕರು ಆಹಾರ ಸಂಸ್ಕರಣಾ ಘಟಕಗಳ ಬೇಡಿಕೆಗೆ ಪೂರಕವಾಗಿ ಹೆಜ್ಜೆ ಇಡುತ್ತಿಲ್ಲ. ಬದಲಿಗೆ ತಮಗಿರುವ ಹೆಚ್ಚಿನ ಒತ್ತಡದ ಕಾರಣ ಹೇಳಿ ಸಂಸ್ಕರಿತ ಆಹಾರವನ್ನು ಪ್ಯಾಕ್ ಮಾಡುವ ಕೆಲಸವನ್ನು ಒಪ್ಪಿಕೊಳ್ಳುತ್ತಿಲ್ಲ. ಇದರ ಹಿಂದಿರುವ ಬಹುಮುಖ್ಯ ಕಾರಣವೆಂದರೆ ಕೊರೊನಾ ರೋಗದ ವಿರುದ್ಧ ಹೋರಾಡುವ ಔಷಧಗಳನ್ನು ಫಾರ್ಮಾ-ಸ್ಯುಟಿಕಲ್ ಇಂಡಸ್ಟ್ರಿ ವ್ಯಾಪಕವಾಗಿ ಉತ್ಪಾದಿಸುತ್ತಿರುವುದು.

ಹೀಗೆ ಉತ್ಪಾದನೆಯಾಗುವ ಕೊರೊನಾ ವಿರುದ್ಧದ ಔಷಧವನ್ನು ಪ್ಯಾಕ್ ಮಾಡುವುದು ಪ್ಯಾಕೇಜಿಂಗ್ ಇಂಡಸ್ಟ್ರಿಯ ಈಗಿನ ಆದ್ಯತೆ. ಅರ್ಥಾತ್, ಕೊರೊನಾ ಇಲ್ಲಿಗೆ ಕಾಲಿಡಲಿದೆ ಮತ್ತು ಜನ ತತ್ತರಿಸುವಂತೆ ಮಾಡಲಿದೆ ಎಂಬುದು ಹಲವರಿಗೆ ಈಗಾಗಲೇ ಗೊತ್ತಿದೆ. ಹೀಗಿರುವಾಗ ಇದು ಕೇಂದ್ರ ಸರ್ಕಾರಕ್ಕೆ ಗೊತ್ತಾಗದೆ ಇರಲು ಸಾಧ್ಯವೇ? ಹೀಗಾಗಿ ಅದು ಸಹಜ ಲೆಕ್ಕಾಚಾರಕ್ಕಿಳಿದಿದೆ. ಈಗಿನ ಲೆಕ್ಕಾಚಾರದ ಪ್ರಕಾರ ಮಾರ್ಚ್ ವೇಳೆಗೆ ಕೊರೊನಾ ರೋಗ ತಾರಕಕ್ಕೇರಲಿದೆ ಎಂದರೆ ಮೇ ತಿಂಗಳಲ್ಲಿ ಕರ್ನಾಟಕದ ವಿಧಾನಸಭೆ ಚುನಾವಣೆ ನಡೆಸುವುದು ಹೇಗೆ? ಯಾಕೆಂದರೆ ಕೊರೊನಾ ರೋಗ ಮಾರ್ಚ್ ವೇಳೆಗೆ ತಾರಕಕ್ಕೇರಿದರೆ ಅದರ ಝಳ ಮೇ-ಜೂನ್ ತಿಂಗಳವರೆಗೆ ಇರುತ್ತದೆ. ಹೀಗಾಗಿ ಆ ಸಂದರ್ಭದಲ್ಲಿ ಚುನಾವಣೆ ನಡೆಸುವುದು ಕಷ್ಟ. ಆದ್ದರಿಂದ ಮಾರ್ಚ್ ಆರಂಭದ ವೇಳೆಗೆ ಚುನಾವಣೆ ನಡೆಸಿದರೆ, ಕೊರೊನಾ ಉಲ್ಬಣಿಸಿದ ಕಾಲಕ್ಕೆ ಅದರ ವಿರುದ್ಧದ ಹೋರಾಟಕ್ಕೆ ಗಮನ ಕೊಡಬಹುದು ಎಂದು ಕೇಂದ್ರ ಸರ್ಕಾರ ಭಾವಿಸಿದರೆ ಅದು ಅಸಹಜವೇನೂ ಅಲ್ಲ.

ಇದೇ ಕಾರಣಕ್ಕಾಗಿ ಅದು ಈ ಸಾಧ್ಯತೆಗಳ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತಿತರ ಪ್ರಮುಖರ ಜತೆ ಚರ್ಚಿಸುತ್ತಿದೆ. ಆದರೆ ಈ ಲೆಕ್ಕಾಚಾರ ಪಕ್ಷಕ್ಕೆ ಲಾಭ ತರಬಹುದೇ ಅಂತ ಅದು ಯೋಚಿಸುತ್ತದೆ. ಯಾಕೆಂದರೆ ಯಾವುದೇ ಕೆಲಸಕ್ಕೆ ಕೈ ಹಾಕಿದರೂ ಅದು ನಿರ್ದಿಷ್ಟ ಲಾಭ ನೀಡಬೇಕಲ್ಲ? ಅದು ಸಾಧ್ಯವೇ ಎಂಬುದು ಅದರ ಸದ್ಯದ ಯೋಚನೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಧಡಬಡಿಸಿ ಅವಧಿಪೂರ್ವ ಚುನಾವಣೆಯ ಸಾಧ್ಯತೆ ಕುರಿತು ಮಾತನಾಡಿದ್ದು ಇದೇ ಕಾರಣಕ್ಕಾಗಿ. ಅಂದ ಹಾಗೆ ಹೀಗೆ ಮಾತನಾಡುವುದರಿಂದ ಅವಽಪೂರ್ವ ಚುನಾವಣೆಯ ಲೆಕ್ಕಾಚಾರದಲ್ಲಿರುವ ಬಿಜೆಪಿಗೆ ಶಾಕ್ ಆಗುತ್ತದೆ. ಅದೇ ಕಾಲಕ್ಕೆ ಅವಽಪೂರ್ವ ಚುನಾವಣೆಯ ಬಗ್ಗೆ ಎಚ್ಚರಿಕೆ ನೀಡಿದರೆ ಕಾಂಗ್ರೆಸ್ ಪಕ್ಷವೂ ಮೈ ಕೊಡವಿ ನಿಲ್ಲಲು ಸಾಧ್ಯವಾಗುತ್ತದೆ ಎಂಬುದು ಡಿ.ಕೆ.ಶಿವಕುಮಾರ್ ಯೋಚನೆ. ಆ ದೃಷ್ಟಿಯಿಂದ ಕರ್ನಾಟಕದ ರಾಜ ಕಾರಣವನ್ನು ಕೊರೊನಾ ಆವರಿಸಿಕೊಂಡಿರುವುದು ನಿಜ.

ಮುಂದೇನೋ?

andolanait

Recent Posts

ಓದುಗರ ಪತ್ರ: ಮೇಕೆದಾಟು ಯೋಜನೆ ಶೀಘ್ರ ಅನುಷ್ಠಾನವಾಗಲಿ

ಮೇಕೆದಾಟು ಯೋಜನೆಗೆ ಸಂಬಂಧಿಸಿದಂತೆ ೨೦೧೪ರ ಸುಪ್ರೀಂ ಕೋರ್ಟ್ ತೀರ್ಪಿನ ಪ್ರಕಾರ ಕರ್ನಾಟಕವು ಮೇಕೆದಾಟು ಜಲಾಶಯ ನಿರ್ಮಿಸಲು ತಮಿಳುನಾಡು ಸೇರಿದಂತೆ ಯಾವುದೇ…

11 hours ago

ಓದುಗರ ಪತ್ರ: ಫುಟ್‌ಪಾತ್ ಒತ್ತುವರಿ ತೆರವು ಕಾರ್ಯಾಚರಣೆ ಚುರುಕುಗೊಳ್ಳಲಿ

ಮೈಸೂರು ನಗರದಲ್ಲಿ ಅನೇಕ ಕಡೆ ಪಾದಚಾರಿಗಳಿಗೆ ಅಡಚಣೆಯಾಗಿದ್ದ ಫುಟ್‌ಪಾತ್ ವ್ಯಾಪಾರಿಗಳ ಒತ್ತುವರಿ ತೆರವು ಕಾರ್ಯಾಚರಣೆ ನಡೆಯುತ್ತಿದೆ. ಆದರೆ ಬಹುತೇಕ ಕಡೆ…

11 hours ago

ಓದುಗರ ಪತ್ರ: ಕೂಡ್ಲಾಪುರ ಗ್ರಾಮಕ್ಕೆ ಕಬಿನಿ ನೀರು ಕೊಡಿ

ನಂಜನಗೂಡು ತಾಲ್ಲೂಕಿನ ಕೂಡ್ಲಾಪುರ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಬರ ಪರಿಸ್ಥಿತಿಯಿಂದಾಗಿ ಕೆರೆಗಳು ಬತ್ತಿಹೋಗಿದ್ದು, ಕುಡಿಯುವ ನೀರು ಸಿಗದೆ ತೊಂದರೆಯಾಗಿದೆ. ನಂಜನಗೂಡು…

11 hours ago

ಗಾಮೀಣ ಜನರ ಏಳಿಗೆಗೆ IHDUA ಪಣ

ಪ್ರಸನ್ನ ಎಂ.ಕೆ. ಖ್ಯಾತ ಕ್ಯಾನ್ಸರ್ ರೋಗ ತಜ್ಞರು, ಭಾರತ್ ಕ್ಯಾನ್ಸರ್ ಹಾಸ್ಪಿಟಲ್ ಹಾಗೂ ಎಚ್‌ಸಿಜಿ ಆಸ್ಪತ್ರೆ ಛೇರ್ಮನ್ ಮತ್ತು ಸಂಸ್ಥಾಪಕರು,…

11 hours ago

ಸತ್ಯಮಂಗಲ-ಮೀಣ್ಯಂ ರಸ್ತೆಯಲ್ಲಿ ಸಂಚಾರ ದುಸ್ತರ

ಮಾದೇಶ್ ಗೌಡ ಹದಗೆಟ್ಟ ರಸ್ತೆ ಅಭಿವೃದ್ಧಿಗೆ ಸವಾರರ ಆಗ್ರಹ; ಅಭಿವೃದ್ಧಿಯಾಗದಿದ್ದರೆ ಪ್ರತಿಭಟನೆ ಎಚ್ಚರಿಕೆ ಹನೂರು: ತಾಲ್ಲೂಕಿನ ಮೀಣ್ಯಂ ಗ್ರಾಪಂ ವ್ಯಾಪ್ತಿಯ…

11 hours ago

ಪಿರಿಯಾಪಟ್ಟಣ: ಗರಿಗೆದರಿದ ತಂಬಾಕು ಕೃಷಿ ಚಟುವಟಿಕೆ

ನವೀನ್‌ಕುಮಾರ್ ತಂಬಾಕು ಹದಗೊಳಿಸುವ ಕಾರ್ಯ ಚುರುಕು; ಉತ್ತಮ ಬೆಲೆ ನಿರೀಕ್ಷೆಯಲ್ಲಿ ರೈತರು ಪಿರಿಯಾಪಟ್ಟಣ: ತಾಲ್ಲೂಕಿನಾದ್ಯಂತ ತಂಬಾಕು ಕೃಷಿ ಚಟುವಟಿಕೆಗಳು ಗರಿಗೆದರಿವೆ.…

11 hours ago