ಎಡಿಟೋರಿಯಲ್

ಸಂಪಾದಕೀಯ: ಪ್ರವಾಸಿ ತಾಣಗಳಲ್ಲಿ ಪ್ರವಾಸಿಗರಿಗೆ ಸೂಕ್ತ ಭದ್ರತಾ ವ್ಯವಸ್ಥೆ ಮಾಡಬೇಕು

ದಕ್ಷಿಣ ಕಾಶ್ಮೀರ ಎಂದು ಪ್ರಖ್ಯಾತವಾಗಿರುವ ಕೊಡಗಿಗೆ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ. ಹಚ್ಚ ಹಸಿರಿನ ಪರಿಸರದ ಜೊತೆಗೆ ಇಲ್ಲಿನ ಸುಂದರ ತಾಣಗಳನ್ನು ಕಣ್ತುಂಬಿಕೊಳ್ಳುವ ಪ್ರವಾಸಿಗರು, ಹತ್ತಾರು ಸೊಗಸಾದ ನೆನಪುಗಳೊಂದಿಗೆ ಮರಳುತ್ತಾರೆ. ಆದರೆ, ಇತ್ತೀಚಿನ ದಿನಗಳಲ್ಲಿ ಪ್ರವಾಸಿಗರಿಗೆ ಕೆಲವು ಅಹಿತಕರ ಘಟನೆಗಳಿಂದ ಕಹಿ ನೆನೆಪುಗಳೊಂದಿಗೆ ಮರಳುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ.
ಜಿಲ್ಲೆಯ ಕೆಲವು ಪ್ರವಾಸಿ ತಾಣಗಳಲ್ಲಿ ಅಪರಾಧ ಪ್ರಕರಣಗಳು ಹೆಚ್ಚುತ್ತಿದ್ದು, ಇತ್ತೀಚಿನ ದಿನಗಳಲ್ಲಿ ಆಗಾಗ್ಗೆ ಹಲ್ಲೆ, ಗಲಾಟೆ ಹಾಗೂ ಇನ್ನಿತರ ಕಾನೂನು ಭಂಗ ಚಟುವಟಿಕೆಗಳು ಹೆಚ್ಚಾಗುತ್ತಿವೆ.

ಪ್ರವಾಸಿಗರಿಗೆ ಸೂಕ್ತ ಭದ್ರತೆ ಇಲ್ಲದಂತಾಗಿದೆ ಎಂದು ಖುದ್ದು ಪ್ರವಾಸಿಗರೇ ಪೊಲೀಸ್ ಠಾಣೆ ಮೆಟ್ಟಿಲೇರುತ್ತಿದ್ದಾರೆ. ಸೂಕ್ತವಾದ ರಕ್ಷಣೆ ಇಲ್ಲವಾದರೇ, ಯಾವ ಧೈರ್ಯದಿಂದ ಇಲ್ಲಿಗೆ ಭೇಟಿ ನೀಡುವುದು? ಅನಾಹುತಗಳು ಸಂಭವಿಸಿದರೇ ಹೊಣೆ ಯಾರು ಎಂದು ಪ್ರವಾಸಿಗರು ಪ್ರಶ್ನಿಸಲಾರಂಭಿಸಿದ್ದಾರೆ.
ಕಾವೇರಿ ನಿಸರ್ಗಧಾಮದ ವಾಹನ ನಿಲುಗಡೆ ಜಾಗದಲ್ಲಿ ಟ್ಯಾಕ್ಸಿ ಹಾಗೂ ಮಧ್ಯವರ್ತಿಗಳ ಹಾವಳಿ ಹೆಚ್ಚಾಗಿದೆ. ಪ್ರವಾಸಿಗರನ್ನು ಒತ್ತಾಯ ಪೂರ್ವಕವಾಗಿ ಟ್ಯಾಕ್ಸಿ ಹತ್ತುವಂತೆ ಕಿರಿಕಿರಿ ಮಾಡುತ್ತಿದ್ದಾರೆ. ಇದೇ ವಿಷಯಕ್ಕೆ ಕಲಹ ಏರ್ಪಡುತ್ತಿದೆ. ಕೆಲವು ದಿನಗಳ ಹಿಂದೆ ಟ್ಯಾಕ್ಸಿ ಚಾಲಕ, ಪ್ರವಾಸಿಗನೋರ್ವ ಕಾರಿಗೆ ಒರಗಿ ನಿಂತ ಎಂದು ಥಳಿಸಿದ ಘಟನೆ ನಡೆದಿದೆ. ಘಟನೆ ಸಂಬಂಧ ಕುಶಾಲನಗರ ಪಟ್ಟಣ ಪೊಲೀಸರು ಕೂಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಕೆಲವು ತಿಂಗಳ ಹಿಂದೆ ಒಬ್ಬರು ಮಹಿಳೆಯ ಮೇಲೆ ಕಾರು ಚಾಲಕ ಥಳಿಸಿದ ಹಿನ್ನಲೆ ವಿಷಯ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿತ್ತು. ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ಕೂಡ ದಾಖಲಾಗಿತ್ತು. ಕಾರು ಚಾಲಕ ಹಲ್ಲೆ ನಡೆಸಿದ ವೀಡಿಯೋ ನಿಸರ್ಗಧಾಮ ಟೂರಿಸ್ಟ್ ಸೆಂಟರ್‌ನ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿತ್ತು.

ಇನ್ನು ಅಪಘಾತದಂತಹ ಪ್ರಕರಣಗಳಲ್ಲಿ ಪ್ರವಾಸಿಗರ ವಾಹನವೆಂದು ತಿಳಿದರೆ ಹಲ್ಲೆ ನಡೆಸಿದ ಮೇಲೆಯೇ ಇತರ ವಿಚಾರದ ಮಾತುಕತೆ ಆರಂಭವಾಗುತ್ತದೆ.

ಪ್ರವಾಸಿ ತಾಣಗಳಲ್ಲಿ ಗಲಾಟೆ, ಹಲ್ಲೆಗಳು ಸಾಮಾನ್ಯವಾದಂತಿದೆ. ಇತ್ತೀಚಿನ ಕೆಲವು ತಿಂಗಳ ಬೆಳವಣಿಗೆಗಳನ್ನು ಗಮನಿಸಿದರೆ, ಕಾವೇರಿ ನಿಸರ್ಗಧಾಮದಲ್ಲಿ ಯುವಕನೋರ್ವ ಪ್ರೇಯಸಿಗೆ ಚೂರಿ ಹಾಕಿದ್ದು, ಪ್ರವಾಸಿ ಮಹಿಳೆಯ ಮೇಲೆ ಕಾರು ಚಾಲಕ ಹಲ್ಲೆ ನಡೆಸಿದ್ದು, ನಿಸರ್ಗಧಾಮ ಟೂರಿಸ್ಟ್ ಸೆಂಟರ್‌ಗೆ ಆಗಮಿಸಿದ ಕೇರಳದ ಪ್ರವಾಸಿಗರೊಂದಿಗೆ ಎನ್‌ಟಿಸಿ ಕಾರ್ಮಿಕರ ದುರ್ನಡತೆ, ಹಿಂದೆ ಮಾಂದಲ್‌ಪಟ್ಟಿಗೆ ಆಗಮಿಸಿದ ಪ್ರವಾಸಿಗರಿಗೆ ಸ್ಥಳೀಯರು ಹಲ್ಲೆ ನಡೆಸಿರುವುದು, ಕೆಲವು ದಿನಗಳ ಹಿಂದೆ ಕಾರು ಚಾಲಕ ಪ್ರವಾಸಿಗನ ಮೇಲೆ ನಡೆಸಿದ ಹಲ್ಲೆ, ಹೀಗೆ ಹಲವು ಅಹಿತಕರ ಘಟನೆ ನಡೆಯುತ್ತಲೇ ಇವೆ.

ಕಾವೇರಿ ನಿಸರ್ಗಧಾಮ, ನಿಸರ್ಗಧಾಮ ಟೂರಿಸ್ಟ್ ಸೆಂಟರ್, ದುಬಾರೆ, ಮಾಂದಲ್‌ಪಟ್ಟಿ ಹಾಗೂ ಇನ್ನಿತರ ಪ್ರವಾಸಿ ತಾಣಗಳಲ್ಲಿ ಪ್ರವಾಸಿಗರ ಮೇಲೆ ನಡೆಯುವ ದೌರ್ಜನ್ಯಕ್ಕೆ ಸಂಬಂಧಪಟ್ಟಂತೆ ಪ್ರವಾಸಿಗರು ಪೊಲೀಸ್ ಮೆಟ್ಟಿಲೇರಿದ್ದಾರೆ. ಆದರೆ, ಹಲ್ಲೆ ನಡೆಸಿದವರು ಪ್ರಭಾವ ಬಳಸಿ, ರಾಜಿ ಸಂದಾನ ಮಾಡಿಕೊಳ್ಳುತ್ತಿದ್ದಾರೆ. ಇದರಿಂದ ಘಟನೆಗಳು ಮರುಕಳಿಸುತ್ತಿದೆ.

ಕೊಡಗಿಗೆ ಭೇಟಿ ನೀಡುವ ಪ್ರವಾಸಿಗರಿಗೆ ಸೂಕ್ತ ಭದ್ರತೆ ಒದಗಿಸುವ ಕೆಲಸ ಜಿಲ್ಲಾಡಳಿತ ಹಾಗೂ ಜಿಲ್ಲಾ ಪೊಲೀಸ್ ಇಲಾಖೆಯಿಂದ ಆಗಬೇಕಾಗಿದೆ. ಇಲ್ಲದಿದ್ದಲ್ಲಿ ಪ್ರವಾಸಿಗರು ಕೊಡಗಿಗೆ ಬರಲು ಹಿಂದೇಟು ಹಾಕುವ ಪರಿಸ್ಥಿತಿ ನಿರ್ಮಾಣವಾಗಲಿದೆ. ಇದರಿಂದ ಪ್ರವಾಸೋದ್ಯಮ ಅವಲಂಬಿತರು ಮತ್ತಷ್ಟು ಸಮಸ್ಯೆ ಎದುರಿಸಬೇಕಾಗುತ್ತದೆ.

ಕ್ಷುಲ್ಲಕ ಕಾರಣಕ್ಕೆ ನಡೆಯುವ ಗಲಾಟೆಗಳಿಂದ ಭಾರೀ ದೊಡ್ಡ ಅನಾಹುತ ಸಂಭವಿಸುವ ಸಾಧ್ಯತೆಯೂ ಇದೆ. ಕೆಲವು ವರ್ಷಗಳ ಹಿಂದೆ ದುಬಾರೆಗೆ ಭೇಟಿ ನೀಡಿದ ಕೇರಳದ ೧೯ ವರ್ಷದ ಯುವಕನೋರ್ವ ಸ್ಥಳೀಯರಿಂದ ಹಲ್ಲೆಗೊಳಗಾದ ಆರೋಪದಲ್ಲಿ ಮರಣ ಹೊಂದಿದ ಘಟನೆ ಇದಕ್ಕೆ ಸೂಕ್ತ ಉದಾಹರಣೆ. ಪ್ರವಾಸಿಗರಿಗೆ ಅಗತ್ಯ ಭದ್ರತೆ ಒದಗಿಸುವ ಮೂಲಕ ಇಂತಹ ಘಟನೆಗಳು ಮರುಕಳಿಸದಂತೆ ಸಂಬಂಧಪಟ್ಟವರು ಕಾರ್ಯೋನ್ಮುಖರಾಗಬೇಕಾಗಿದೆ.
ಪ್ರವಾಸಿಗರ ಮೇಲೆ ಆಗುವ ದೌರ್ಜನ್ಯಕ್ಕೆ ಸಂಬಂಧಪಟ್ಟಂತೆ ಪ್ರತಿಯೊಂದು ಘಟನೆಗಳ ಮೇಲೂ ಪ್ರಕರಣ ದಾಖಲಿಸಬೇಕು. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಆ ಮೂಲಕ ಅತಿಥಿ ಸತ್ಕಾರಕ್ಕೆ ಹೆಸರುವಾಸಿಯಾಗಿರುವ ಕೊಡಗಿನ ಹಿರಿಮೆ ಮತ್ತಷ್ಟು ಹೆಚ್ಚಿಸಬೇಕಿದೆ. ಪ್ರವಾಸೋದ್ಯಮ ಇಲಾಖೆ ಹಾಗೂ ಪೊಲೀಸ್ ಇಲಾಖೆ ಪ್ರವಾಸಿ ತಾಣಗಳಲ್ಲಿ ಸಿಬ್ಬಂದಿಗಳ ಮೂಲಕ ಸೂಕ್ತ ರಕ್ಷಣೆ ಒದಗಿಸುವ ಕೆಲಸ ಮಾಡಬೇಕಿದೆ. ಪ್ರವಾಸಿಗರು ಪೊಲೀಸ್ ಠಾಣೆ ಮೆಟ್ಟಿಲೇರಿದ ಸಂದರ್ಭದಲ್ಲಿ ತ್ವರಿತವಾಗಿ ಸೂಕ್ತ ನ್ಯಾಯ ಒದಗಿಸುವ ಕಾರ್ಯ ಪೊಲೀಸ್ ಇಲಾಖೆಯಿಂದ ಆಗಬೇಕಿದೆ.

andolana

Recent Posts

ಸ್ವಚ್ಛ ನಗರಿ ಮೈಸೂರಿನಲ್ಲಿ ಅಶುಚಿತ್ವ ತಾಂಡವ: ಸಂಜೆಯಾಗುತ್ತಿದ್ದಂತೆ ಸೊಳ್ಳೆಗಳ ಕಾಟ

ಮೈಸೂರು: ಸಾಂಸ್ಕೃತಿಕ ನಗರಿ, ಸ್ವಚ್ಛ ನಗರಿ ಹಾಗೂ ಮಲ್ಲಿಗೆ ನಗರಿ ಎಂದೆಲ್ಲಾ ಕರೆಯಿಸಿಕೊಳ್ಳುವ ಮೈಸೂರಿನಲ್ಲಿ ಒಂದೆಡೆ ಸ್ವಚ್ಛತಾ ಸರ್ವೇಕ್ಷಣಾ ಅಭಿಯಾನ…

12 mins ago

ಮೈಸೂರಿನಲ್ಲಿ ಮರಗಳ ಹನನ ಪ್ರಕರಣ: ಮುಡಾ ಆಯುಕ್ತರ ಅಧ್ಯಕ್ಷತೆಯಲ್ಲಿ ಸಮಿತಿ ರಚನೆ

ಮೈಸೂರು: ರಸ್ತೆ ಅಗಲೀಕರಣದ ಹೆಸರೇಳಿ ಹೈದರ್‌ ಅಲಿ ರಸ್ತೆಯಲ್ಲಿ 40 ಮರಗಳನ್ನು ಕಡಿದಿರುವ ಪ್ರಕರಣದ ವಾಸ್ತವತೆ ಪರಿಶೀಲನೆ ನಡೆಸಲು ಜಿಲ್ಲಾಡಳಿತ…

40 mins ago

ರೇಣುಕಾಸ್ವಾಮಿ ಕೊಲೆ ಪ್ರಕರಣ: ಸುಪ್ರೀಂನಲ್ಲಿ ನಟ ದರ್ಶನ್‌ ಜಾಮೀನು ರದ್ದು ಅರ್ಜಿ ವಿಚಾರಣೆ ಮುಂದೂಡಿಕೆ

ನವದೆಹಲಿ: ಚತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್‌ ಜಾಮೀನು ರದ್ದು ಅರ್ಜಿ ವಿಚಾರಣೆಯನ್ನು ಸುಪ್ರೀಂಕೋರ್ಟ್‌ ಮೇ.14ಕ್ಕೆ ಮುಂದೂಡಿಕೆ…

43 mins ago

UPSC ಫಲಿತಾಂಶ ಪ್ರಕಟ: ಪ್ರಯಾಗ್‌ರಾಜ್‌ ನಿವಾಸಿ ಶಕ್ತಿ ದುಬೆ ದೇಶಕ್ಕೆ ನಂ.1

ನವದೆಹಲಿ: ಕೇಂದ್ರ ಲೋಕಸಭಾ ಆಯೋಗ 2024ರ ನಾಗರಿಕ ಸೇವೆಗಳ ಪರೀಕ್ಷೆ ಫಲಿತಾಂಶ ಪ್ರಕಟಿಸಿದೆ. ಪ್ರಯಾಗ್‌ರಾಜ್‌ ನಿವಾಸಿ ಶಕ್ತಿ ದುಬೆ ಎಂಬುವವರು…

60 mins ago

ಸಾರ್ವಕಾಲಿಕ ದಾಖಲೆ ಕಂಡ ಚಿನ್ನದ ಬೆಲೆ: 10 ಗ್ರಾಂಗೆ ಬರೋಬ್ಬರಿ 1 ಲಕ್ಷ ರೂ

ನವದೆಹಲಿ: ಆಭರಣ ಪ್ರಿಯರಿಗೆ ಬಿಗ್‌ ಶಾಕ್‌ ಎದುರಾಗಿದ್ದು, 10 ಗ್ರಾಂಗೆ ಬರೋಬ್ಬರಿ 1 ಲಕ್ಷ ರೂಪಾಯಿ ದಾಟಿದೆ. ಜಾಗತಿಕ ಮಾರುಕಟ್ಟೆಯಲ್ಲಿನ…

1 hour ago

ಧಾರ್ಮಿಕ ಪದ್ಧತಿ ದೇಶದ ಪರಂಪರೆ: ಕೃಷಿ ಸಚಿವ ಎನ್.ಚಲುವರಾಯಸ್ವಾಮಿ

ಮಂಡ್ಯ: ವಿವಿಧ ಧರ್ಮಗಳು ಆಚರಿಸುವ ಧಾರ್ಮಿಕ ಪದ್ಧತಿಗಳು ಸಮುದಾಯವನ್ನು ಒಟ್ಟುಗೂಡಿಸುತ್ತದೆ. ಧಾರ್ಮಿಕ ಪದ್ಧತಿಗಳು ದೇಶದ ಪರಂಪರೆ ಕೂಡ ಆಗಿದೆ ಎಂದು…

1 hour ago