ಎಡಿಟೋರಿಯಲ್

ಸಂಪಾದಕೀಯ: ಪ್ರವಾಸಿ ತಾಣಗಳಲ್ಲಿ ಪ್ರವಾಸಿಗರಿಗೆ ಸೂಕ್ತ ಭದ್ರತಾ ವ್ಯವಸ್ಥೆ ಮಾಡಬೇಕು

ದಕ್ಷಿಣ ಕಾಶ್ಮೀರ ಎಂದು ಪ್ರಖ್ಯಾತವಾಗಿರುವ ಕೊಡಗಿಗೆ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ. ಹಚ್ಚ ಹಸಿರಿನ ಪರಿಸರದ ಜೊತೆಗೆ ಇಲ್ಲಿನ ಸುಂದರ ತಾಣಗಳನ್ನು ಕಣ್ತುಂಬಿಕೊಳ್ಳುವ ಪ್ರವಾಸಿಗರು, ಹತ್ತಾರು ಸೊಗಸಾದ ನೆನಪುಗಳೊಂದಿಗೆ ಮರಳುತ್ತಾರೆ. ಆದರೆ, ಇತ್ತೀಚಿನ ದಿನಗಳಲ್ಲಿ ಪ್ರವಾಸಿಗರಿಗೆ ಕೆಲವು ಅಹಿತಕರ ಘಟನೆಗಳಿಂದ ಕಹಿ ನೆನೆಪುಗಳೊಂದಿಗೆ ಮರಳುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ.
ಜಿಲ್ಲೆಯ ಕೆಲವು ಪ್ರವಾಸಿ ತಾಣಗಳಲ್ಲಿ ಅಪರಾಧ ಪ್ರಕರಣಗಳು ಹೆಚ್ಚುತ್ತಿದ್ದು, ಇತ್ತೀಚಿನ ದಿನಗಳಲ್ಲಿ ಆಗಾಗ್ಗೆ ಹಲ್ಲೆ, ಗಲಾಟೆ ಹಾಗೂ ಇನ್ನಿತರ ಕಾನೂನು ಭಂಗ ಚಟುವಟಿಕೆಗಳು ಹೆಚ್ಚಾಗುತ್ತಿವೆ.

ಪ್ರವಾಸಿಗರಿಗೆ ಸೂಕ್ತ ಭದ್ರತೆ ಇಲ್ಲದಂತಾಗಿದೆ ಎಂದು ಖುದ್ದು ಪ್ರವಾಸಿಗರೇ ಪೊಲೀಸ್ ಠಾಣೆ ಮೆಟ್ಟಿಲೇರುತ್ತಿದ್ದಾರೆ. ಸೂಕ್ತವಾದ ರಕ್ಷಣೆ ಇಲ್ಲವಾದರೇ, ಯಾವ ಧೈರ್ಯದಿಂದ ಇಲ್ಲಿಗೆ ಭೇಟಿ ನೀಡುವುದು? ಅನಾಹುತಗಳು ಸಂಭವಿಸಿದರೇ ಹೊಣೆ ಯಾರು ಎಂದು ಪ್ರವಾಸಿಗರು ಪ್ರಶ್ನಿಸಲಾರಂಭಿಸಿದ್ದಾರೆ.
ಕಾವೇರಿ ನಿಸರ್ಗಧಾಮದ ವಾಹನ ನಿಲುಗಡೆ ಜಾಗದಲ್ಲಿ ಟ್ಯಾಕ್ಸಿ ಹಾಗೂ ಮಧ್ಯವರ್ತಿಗಳ ಹಾವಳಿ ಹೆಚ್ಚಾಗಿದೆ. ಪ್ರವಾಸಿಗರನ್ನು ಒತ್ತಾಯ ಪೂರ್ವಕವಾಗಿ ಟ್ಯಾಕ್ಸಿ ಹತ್ತುವಂತೆ ಕಿರಿಕಿರಿ ಮಾಡುತ್ತಿದ್ದಾರೆ. ಇದೇ ವಿಷಯಕ್ಕೆ ಕಲಹ ಏರ್ಪಡುತ್ತಿದೆ. ಕೆಲವು ದಿನಗಳ ಹಿಂದೆ ಟ್ಯಾಕ್ಸಿ ಚಾಲಕ, ಪ್ರವಾಸಿಗನೋರ್ವ ಕಾರಿಗೆ ಒರಗಿ ನಿಂತ ಎಂದು ಥಳಿಸಿದ ಘಟನೆ ನಡೆದಿದೆ. ಘಟನೆ ಸಂಬಂಧ ಕುಶಾಲನಗರ ಪಟ್ಟಣ ಪೊಲೀಸರು ಕೂಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಕೆಲವು ತಿಂಗಳ ಹಿಂದೆ ಒಬ್ಬರು ಮಹಿಳೆಯ ಮೇಲೆ ಕಾರು ಚಾಲಕ ಥಳಿಸಿದ ಹಿನ್ನಲೆ ವಿಷಯ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿತ್ತು. ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ಕೂಡ ದಾಖಲಾಗಿತ್ತು. ಕಾರು ಚಾಲಕ ಹಲ್ಲೆ ನಡೆಸಿದ ವೀಡಿಯೋ ನಿಸರ್ಗಧಾಮ ಟೂರಿಸ್ಟ್ ಸೆಂಟರ್‌ನ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿತ್ತು.

ಇನ್ನು ಅಪಘಾತದಂತಹ ಪ್ರಕರಣಗಳಲ್ಲಿ ಪ್ರವಾಸಿಗರ ವಾಹನವೆಂದು ತಿಳಿದರೆ ಹಲ್ಲೆ ನಡೆಸಿದ ಮೇಲೆಯೇ ಇತರ ವಿಚಾರದ ಮಾತುಕತೆ ಆರಂಭವಾಗುತ್ತದೆ.

ಪ್ರವಾಸಿ ತಾಣಗಳಲ್ಲಿ ಗಲಾಟೆ, ಹಲ್ಲೆಗಳು ಸಾಮಾನ್ಯವಾದಂತಿದೆ. ಇತ್ತೀಚಿನ ಕೆಲವು ತಿಂಗಳ ಬೆಳವಣಿಗೆಗಳನ್ನು ಗಮನಿಸಿದರೆ, ಕಾವೇರಿ ನಿಸರ್ಗಧಾಮದಲ್ಲಿ ಯುವಕನೋರ್ವ ಪ್ರೇಯಸಿಗೆ ಚೂರಿ ಹಾಕಿದ್ದು, ಪ್ರವಾಸಿ ಮಹಿಳೆಯ ಮೇಲೆ ಕಾರು ಚಾಲಕ ಹಲ್ಲೆ ನಡೆಸಿದ್ದು, ನಿಸರ್ಗಧಾಮ ಟೂರಿಸ್ಟ್ ಸೆಂಟರ್‌ಗೆ ಆಗಮಿಸಿದ ಕೇರಳದ ಪ್ರವಾಸಿಗರೊಂದಿಗೆ ಎನ್‌ಟಿಸಿ ಕಾರ್ಮಿಕರ ದುರ್ನಡತೆ, ಹಿಂದೆ ಮಾಂದಲ್‌ಪಟ್ಟಿಗೆ ಆಗಮಿಸಿದ ಪ್ರವಾಸಿಗರಿಗೆ ಸ್ಥಳೀಯರು ಹಲ್ಲೆ ನಡೆಸಿರುವುದು, ಕೆಲವು ದಿನಗಳ ಹಿಂದೆ ಕಾರು ಚಾಲಕ ಪ್ರವಾಸಿಗನ ಮೇಲೆ ನಡೆಸಿದ ಹಲ್ಲೆ, ಹೀಗೆ ಹಲವು ಅಹಿತಕರ ಘಟನೆ ನಡೆಯುತ್ತಲೇ ಇವೆ.

ಕಾವೇರಿ ನಿಸರ್ಗಧಾಮ, ನಿಸರ್ಗಧಾಮ ಟೂರಿಸ್ಟ್ ಸೆಂಟರ್, ದುಬಾರೆ, ಮಾಂದಲ್‌ಪಟ್ಟಿ ಹಾಗೂ ಇನ್ನಿತರ ಪ್ರವಾಸಿ ತಾಣಗಳಲ್ಲಿ ಪ್ರವಾಸಿಗರ ಮೇಲೆ ನಡೆಯುವ ದೌರ್ಜನ್ಯಕ್ಕೆ ಸಂಬಂಧಪಟ್ಟಂತೆ ಪ್ರವಾಸಿಗರು ಪೊಲೀಸ್ ಮೆಟ್ಟಿಲೇರಿದ್ದಾರೆ. ಆದರೆ, ಹಲ್ಲೆ ನಡೆಸಿದವರು ಪ್ರಭಾವ ಬಳಸಿ, ರಾಜಿ ಸಂದಾನ ಮಾಡಿಕೊಳ್ಳುತ್ತಿದ್ದಾರೆ. ಇದರಿಂದ ಘಟನೆಗಳು ಮರುಕಳಿಸುತ್ತಿದೆ.

ಕೊಡಗಿಗೆ ಭೇಟಿ ನೀಡುವ ಪ್ರವಾಸಿಗರಿಗೆ ಸೂಕ್ತ ಭದ್ರತೆ ಒದಗಿಸುವ ಕೆಲಸ ಜಿಲ್ಲಾಡಳಿತ ಹಾಗೂ ಜಿಲ್ಲಾ ಪೊಲೀಸ್ ಇಲಾಖೆಯಿಂದ ಆಗಬೇಕಾಗಿದೆ. ಇಲ್ಲದಿದ್ದಲ್ಲಿ ಪ್ರವಾಸಿಗರು ಕೊಡಗಿಗೆ ಬರಲು ಹಿಂದೇಟು ಹಾಕುವ ಪರಿಸ್ಥಿತಿ ನಿರ್ಮಾಣವಾಗಲಿದೆ. ಇದರಿಂದ ಪ್ರವಾಸೋದ್ಯಮ ಅವಲಂಬಿತರು ಮತ್ತಷ್ಟು ಸಮಸ್ಯೆ ಎದುರಿಸಬೇಕಾಗುತ್ತದೆ.

ಕ್ಷುಲ್ಲಕ ಕಾರಣಕ್ಕೆ ನಡೆಯುವ ಗಲಾಟೆಗಳಿಂದ ಭಾರೀ ದೊಡ್ಡ ಅನಾಹುತ ಸಂಭವಿಸುವ ಸಾಧ್ಯತೆಯೂ ಇದೆ. ಕೆಲವು ವರ್ಷಗಳ ಹಿಂದೆ ದುಬಾರೆಗೆ ಭೇಟಿ ನೀಡಿದ ಕೇರಳದ ೧೯ ವರ್ಷದ ಯುವಕನೋರ್ವ ಸ್ಥಳೀಯರಿಂದ ಹಲ್ಲೆಗೊಳಗಾದ ಆರೋಪದಲ್ಲಿ ಮರಣ ಹೊಂದಿದ ಘಟನೆ ಇದಕ್ಕೆ ಸೂಕ್ತ ಉದಾಹರಣೆ. ಪ್ರವಾಸಿಗರಿಗೆ ಅಗತ್ಯ ಭದ್ರತೆ ಒದಗಿಸುವ ಮೂಲಕ ಇಂತಹ ಘಟನೆಗಳು ಮರುಕಳಿಸದಂತೆ ಸಂಬಂಧಪಟ್ಟವರು ಕಾರ್ಯೋನ್ಮುಖರಾಗಬೇಕಾಗಿದೆ.
ಪ್ರವಾಸಿಗರ ಮೇಲೆ ಆಗುವ ದೌರ್ಜನ್ಯಕ್ಕೆ ಸಂಬಂಧಪಟ್ಟಂತೆ ಪ್ರತಿಯೊಂದು ಘಟನೆಗಳ ಮೇಲೂ ಪ್ರಕರಣ ದಾಖಲಿಸಬೇಕು. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಆ ಮೂಲಕ ಅತಿಥಿ ಸತ್ಕಾರಕ್ಕೆ ಹೆಸರುವಾಸಿಯಾಗಿರುವ ಕೊಡಗಿನ ಹಿರಿಮೆ ಮತ್ತಷ್ಟು ಹೆಚ್ಚಿಸಬೇಕಿದೆ. ಪ್ರವಾಸೋದ್ಯಮ ಇಲಾಖೆ ಹಾಗೂ ಪೊಲೀಸ್ ಇಲಾಖೆ ಪ್ರವಾಸಿ ತಾಣಗಳಲ್ಲಿ ಸಿಬ್ಬಂದಿಗಳ ಮೂಲಕ ಸೂಕ್ತ ರಕ್ಷಣೆ ಒದಗಿಸುವ ಕೆಲಸ ಮಾಡಬೇಕಿದೆ. ಪ್ರವಾಸಿಗರು ಪೊಲೀಸ್ ಠಾಣೆ ಮೆಟ್ಟಿಲೇರಿದ ಸಂದರ್ಭದಲ್ಲಿ ತ್ವರಿತವಾಗಿ ಸೂಕ್ತ ನ್ಯಾಯ ಒದಗಿಸುವ ಕಾರ್ಯ ಪೊಲೀಸ್ ಇಲಾಖೆಯಿಂದ ಆಗಬೇಕಿದೆ.

andolana

Recent Posts

ಅಸ್ಸಾಂನಲ್ಲಿ ಘೋರ ದುರಂತ: ರೈಲು ಡಿಕ್ಕಿಯಾಗಿ 7 ಆನೆಗಳು ಸಾವು

ಗುವಾಹಟಿ: ರೈಲು ಡಿಕ್ಕಿ ಹೊಡೆದ ಪರಿಣಾಮ ಏಳು ಆನೆಗಳು ಸ್ಥಳದಲ್ಲೇ ಮೃತಪಟ್ಟಿದ್ದು, ಒಂದು ಆನೆ ಗಂಭೀರವಾಗಿ ಗಾಯಗೊಂಡಿರುವ ಘಟನೆ ಅಸ್ಸಾಂನ…

10 mins ago

ಬುರುಡೆ ಗ್ಯಾಂಗ್‌ನಲ್ಲಿ ಬಿರುಕು: ಏನಾಗಿದೆ ಗೊತ್ತಾ?

ಮಂಗಳೂರು: ಧರ್ಮಸ್ಥಳ ಷಡ್ಯಂತ್ರ ಪ್ರಕರಣದ ಪ್ರಮುಖ ಆರೋಪಿ ಮಾಸ್ಕ್‌ ಮ್ಯಾನ್‌ ಚಿನ್ನಯ್ಯ ಇದೀಗ ಬುರುಡೆ ಗ್ಯಾಂಗ್‌ ವಿರುದ್ಧವೇ ತಿರುಗಿ ಬಿದ್ದಿದ್ದಾನೆ.…

28 mins ago

ದ್ವೇಷ ಭಾಷಣ ಪ್ರತಿಬಂಧನ ಮಸೂದೆಗೆ ಅಂಕಿತ ಹಾಕದಂತೆ ರಾಜ್ಯಪಾಲರಿಗೆ ಪತ್ರ ಬರೆದ ಶೋಭಾ ಕರಂದ್ಲಾಜೆ

ಬೆಂಗಳೂರು: ಬೆಳಗಾವಿ ವಿಧಾನಮಂಡಲ ಅಧಿವೇಶನದಲ್ಲಿ ಅಂಗೀಕರಿಸಲಾದ ಕರ್ನಾಟಕ ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳ ಪ್ರತಿಬಂಧಕ ಮಸೂದೆಗೆ ಅಂಕಿತ ಹಾಕಬಾರದು…

32 mins ago

ಓದುಗರ ಪತ್ರ: ಕಾನೂನು ಎಷ್ಟರ ಮಟ್ಟಿಗೆ ಕೆಲಸ ಮಾಡುತ್ತೆ?

ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳ ವಿಧೇಯಕವನ್ನು ರಾಜ್ಯ ಕಾಂಗ್ರೆಸ್ ಸರ್ಕಾರ ಡಿ.೧೮ರಂದು ಬೆಳಗಾವಿ ಸುವರ್ಣ ವಿಧಾನಸೌಧದಲ್ಲಿ ನಡೆಯುತ್ತಿರುವ ಅಧಿವೇಶನದಲ್ಲಿ…

1 hour ago

ಓದುಗರ ಪತ್ರ:  ಸಾಮಾಜಿಕ ಬಹಿಷ್ಕಾರ ನಿಷೇಧ ಕಾನೂನು ಸ್ವಾಗತಾರ್ಹ

ರಾಜ್ಯದಲ್ಲಿ ‘ಸಾಮಾಜಿಕ ಬಹಿಷ್ಕಾರ ನಿಷೇಧ ’ ಕಾನೂನನ್ನು ಜಾರಿಗೊಳಿಸಲು ಮುಂದಾಗಿರುವ ರಾಜ್ಯಸರ್ಕಾರದ ಕ್ರಮ ಶ್ಲಾಘನೀಯ. ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವ, ಸಾರ್ವಭೌಮತೆ,…

1 hour ago

ಓದುಗರ ಪತ್ರ:  ‘ರಾಮ ಜಪ’ ಮಸೂದೆ ತಿರಸ್ಕರಿಸಿ

ಬುದ್ಧನ ಚಿಂತನೆಗಳನ್ನು ಭಾರತದಿಂದ ಓಡಿಸಿದಂತೆ, ಮಹಾತ್ಮ ಗಾಂಧೀಜಿಯವರನ್ನು ಭಾರತೀಯರ ಮನಸ್ಸಿನಿಂದಿಂದಲೇ ತೆಗೆದುಹಾಕುವ ಬಿಜೆಪಿ ಹಾಗೂ ಕೇಂದ್ರ ಸರ್ಕಾರದ ಕುತಂತ್ರ ಬಯಲಾಗಿದೆ.…

1 hour ago