ಜಿಲ್ಲೆಗಳು

ನನ್ನ ಕುಟುಂಬವನ್ನು ಬಲಿ ತೆಗೆದುಕೊಳ್ಳಲು ಹೊರಟರಲ್ಲ ಸರ್? ಸಿದ್ದರಾಮಯ್ಯ ವಿರುದ್ಧ ಪ್ರತಾಪ್‌ ಸಿಂಹ ಆಕ್ರೋಶ

ಮರಗಳನ್ನು ಅಕ್ರಮವಾಗಿ ಕಡಿದು ಸಾಗಿಸುತ್ತಿರುವ ಆರೋಪದ ಮೇಲೆ ಮೈಸೂರು ಸಂಸದ ಪ್ರತಾಪ್‌ ಸಿಂಹ ಅವರ ಸಹೋದರ ವಿಕ್ರಂ ಸಿಂಹ ಅವರನ್ನು ಅರಣ್ಯಾಧಿಕಾರಿಗಳು ಶನಿವಾರ ಬಂಧಿಸಿದರು. ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಪ್ರತಾಪ್‌ ಸಿಂಹ ನೇರವಾಗಿ ಸಿದ್ದರಾಮಯ್ಯ ಅವರ ವಿರುದ್ಧ ಹರಿಹಾಯ್ದಿದ್ದಾರೆ.

ನಿಮ್ಮ ಸಹೋದರನ ಬಂಧನವಾಗಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಪ್ರತಾಪ್ ಸಿಂಹ “ನಾನು ಮಾನ್ಯ ಸಿದ್ದರಾಮಯ್ಯ ಸಾಹೇಬ್ರಿಗೆ ಸಾಷ್ಟಾಂಗ ನಮಸ್ಕಾರ ಮಾಡುತ್ತೇನೆ. ಅವರ ಬಗ್ಗೆ ನನಗೆ ಬಹಳ ಹೆಮ್ಮೆ ಎನಿಸಿಬಿಟ್ಟಿದೆ. ಅವರ ಬಗ್ಗೆ ಬಹಳ ಮೆಚ್ಚುಗೆ ಎನಿಸಿದೆ. ಅವರನ್ನು ಶ್ಲಾಘನೆ ಮಾಡಬೇಕು ಎನಿಸುತ್ತಿದೆ ಎರಡು ಕಾರಣಕ್ಕಾಗಿ. ತನ್ನ ಮಗನ ರಾಜಕೀಯ ಭವಿಷ್ಯಕ್ಕೋಸ್ಕರ, ತನ್ನ ಮಗನನ್ನು ಮೈಸೂರಿನಲ್ಲಿ ಲೋಕಸಭಾ ಕ್ಷೇತ್ರಕ್ಕೆ ಚುನಾವಣೆಗೆ ನಿಲ್ಲಿಸಿ ಗೆಲ್ಲಿಸುವುದಕ್ಕೋಸ್ಕರ ಎಷ್ಟೆಲ್ಲಾ ಶ್ರಮ ಪಡ್ತಾರೆ, ಯಾರನ್ನ ಬೇಕಾದ್ರೂ ತುಳಿಯೋದಕ್ಕೆ, ಹಣಿಯೋದಕ್ಕೆ ಪ್ರಯತ್ನ ಪಡ್ತಾರೆ. ಇದನ್ನ ಸಿದ್ದರಾಮಯ್ಯನವರಿಂದ ನಿಜವಾಗಿಯೂ ಕಲೀಬೇಕು. ನಿಮ್ಮಂತಹ ತಂದೆ ಎಲ್ರಿಗೂ ಸಿಗಲ್ಲ ಸಾರ್..‌ ನೀವೊಂದು ಬ್ರಿಲಿಯಂಟ್‌ ಫಾದರ್‌ ಸರ್.‌ ನಿಜವಾಗೂ ನಿಮ್ಮನ್ನ ಮೆಚ್ಚಿದ್ದೀನಿ, ನಿಮಗೆ ಸಾಷ್ಟಾಂಗ ನಮಸ್ಕಾರಗಳು. ನಿಮ್ಮಂತಹ ತಂದೆ ಎಲ್ಲರಿಗೂ ಸಿಗಲ್ಲ ಸರ್.‌ ಮಗನ ಭವಿಷ್ಯಕ್ಕೋಸ್ಕರ, ಮಗನನ್ನ ಲೋಕಸಭೆ ಚುನಾವಣೆಯಲ್ಲಿ ನಿಲ್ಲಿಸಿ ಗೆಲ್ಲಿಸುವುದಕ್ಕೋಸ್ಕರ ಪ್ರತಾಪ್‌ ಸಿಂಹ ಅಡ್ಡಿಯಾಗಿದ್ದಾನೆ, ಅವನ ಕುಟುಂಬನೇ ಮುಗಿಸೋಣ ಅಂತ ಇಷ್ಟು ಹೋರಾಟ ಮಾಡ್ತೀರಲ್ಲ ಸರ್” ಎಂದು ಹೇಳಿಕೆ ನೀಡಿದರು.

ಇನ್ನೂ ಮುಂದುವರಿದು ಮಾತನಾಡಿದ ಪ್ರತಾಪ್ ಸಿಂಹ “ಎರಡನೇ ಕಾರಣಕ್ಕೆ ನಿಮ್ಮನ್ನು ನಾನು ಶ್ಲಾಘನೆ ಮಾಡುವುದು ಯಾಕೆಂದರೆ ನೀವೊಬ್ಬ ಬ್ರಿಲಿಯಂಟ್‌ ಪಾಲಿಟಿಷಿಯನ್.‌ ಬೆಳಗಾವಿಯಲ್ಲಿ ಒಬ್ಬ ಹಿಂದುಳಿದ ಜಾತಿ ಜನಾಂಗಕ್ಕೆ ಸೇರಿದ ಮಹಿಳೆಯನ್ನು ಬೆತ್ತಲು ಮಾಡಿ ಮೆರವಣಿಗೆ ಮಾಡ್ತಾರೆ. ಅದರ ಬಗ್ಗೆ ನೀವು ಮಾತನಾಡಲ್ಲ. ಇಡೀ ಮಾಧ್ಯಮದವರ ಗಮನವನ್ನು ಬೇರೆಡೆ ಸೆಳೆಯಬೇಕು ಅಂತ ಪ್ರತಾಪ್‌ ಸಿಂಹನ ತನಿಖೆ ಆಗಬೇಕು ಅಂತ ನೀವು, ನಿಮ್ಮ ಉಪಮುಖ್ಯಮಂತ್ರಿ, ಮಂತ್ರಿ ವಲಯದವರೆಲ್ಲರೂ ಪಾರ್ಲಿಮೆಂಟ್‌ ಪಾಸ್‌ ಇಟ್ಕೊಂಡು ಮಾತಾಡ್ತೀರಿ. 40 ವರ್ಷದ ರಾಜಕೀಯ ಅನುಭವ ಇದೆ. ಯಾವ ಒಂದು ನಿರ್ದಿಷ್ಟ ಸಭೆಯ ಸದಸ್ಯರಲ್ಲದವರು ಹೆಸರನ್ನೇ ಹೇಳುವ ಹಾಗಿಲ್ಲ. ನನ್ನ ಹೆಸರನ್ನು ಎಳೆದು ನನ್ನ ಮೇಲೆ ತನಿಖೆ ಆಗಬೇಕು ಅಂತ ಹೇಳ್ತೀರಿ. ಇಲ್ಲಿ ನಿಮ್ಮ ಮಗ ಸುಪುತ್ರ ಪ್ರತಾಪ್‌ ಸಿಂಹ ವಿರುದ್ಧ ತನಿಖೆ ಆಗಬೇಕು ಅಂತ ಹೇಳ್ತಾರೆ” ಎಂದರು.

ಅಲ್ಲದೇ ಮಧು ಬಂಗಾರಪ್ಪ ಅವರನ್ನೂ ಸಹ ಹೇಳಿಕೆಯಲ್ಲಿ ಉಲ್ಲೇಖಿಸಿದ ಪ್ರತಾಪ್‌ ಸಿಂಹ “ನಿನ್ನೆ ಘಟನೆಯನ್ನೇ ತೆಗೆದುಕೊಳ್ಳಿ ಸರ್. ಆರೂವರೆ ಕೋಟಿ ಚೆಕ್‌ ಬೌನ್ಸ್‌ ಮಾಡಿದ್ದು ನಿಮ್ಮ ಸಂಪುಟದಲ್ಲಿ ಸಚಿವರಾಗಿರುವ ಮಧು ಬಂಗಾರಪ್ಪನವರು. ಆರು ತಿಂಗಳು ಜೈಲು ಸಜೆಗೊಳಗಾಗಿರುವವರು ಮಧು ಬಂಗಾರಪ್ಪನವರು. ಆದರೆ ಪ್ರತಾಪ್‌ ಸಿಂಹನ ತಮ್ಮ ಅರೆಸ್ಟ್‌, ಸಿನಿಮೀಯ ರೀತಿಲಿ ಹಿಡಿದುಬಿಟ್ಟಿದ್ದಾರೆ ಅಂತ ಸುದ್ದಿ ಬರುತ್ತೆ. ನಿಜವಾಗಿಯೂ ನೀವೊಬ್ಬ ಬ್ರಿಲಿಯಂಟ್‌ ಪಾಲಿಟಿಷಿಯನ್.‌ ನಾನು ನಿಮ್ಮನ್ನ ಇಷ್ಟೇ ಕೇಳೋದು ಸರ್.‌ ಈ ತಿಂಗಳು 16ನೇ ತಾರೀಖು ಬೇಲೂರು ಹತ್ರ ಜಯಮ್ಮ ಅವರ ಜಮೀನಿನಲ್ಲಿ ಮರ ಕಡಿದಿದ್ದಾರೆ ಅಂತ ಹೇಳಿ ಎಫ್‌ಐಆರ್‌ ಆಗುತ್ತೆ. ಅದರಲ್ಲಿ ರಾಕೇಶ್‌ ಶೆಟ್ಟಿ, ಜಯಮ್ಮ ಅನ್ನೋರ ಮೇಲೆ ಎಫ್‌ಐಆರ್‌ ಆಗುತ್ತೆ. ತಲೆ ಮರೆಸಿಕೊಳ್ತಾರೆ. ಇನ್ನೊಬ್ಬ ರವಿ ಎಂಬಾತ ಮರ ತೆಗೆದುಕೊಂಡುಹೋದವನು ಕೂಡ ತಲೆ ಮರೆಸಿಕೊಳ್ತಾನೆ. ಇನ್ನೂ ಕೂಡ ಅವನನ್ನು ಹಿಡಿಯೋಕೆ ಆಗಿಲ್ಲ ನಿಮಗೆ. ಮರನೆಲ್ಲಾ ತೆಗೆದುಕೊಂಡು ಹೋಗಿ ಹಾಸನದ ಡಿಪೋದಲ್ಲಿ ಇಡ್ತೀರ. 24ನೇ ತಾರೀಖು ನಾನು ಮೈಸೂರಿಗೆ ಬಂದು ಹನುಮಾನ್‌ ಜಯಂತಿ ಸಂದರ್ಭದಲ್ಲಿ ಹೇಳಿಕೆ ಕೊಡ್ತೀನಿ. ಇದಾದ ಎರಡೇ ಗಂಟೆಯಲ್ಲಿ ನಿಮ್ಮ ಕಾಂಗ್ರೆಸ್‌ ಫೇಸ್‌ಬುಕ್‌ನಲ್ಲಿ ಪ್ರತಾಪ್‌ ಸಿಂಹನ ತಮ್ಮ ಮರಗಳ್ಳತನ ಮಾಡಿದ್ದಾನೆ ಅಂತ ಪೋಸ್ಟ್‌ ಹಾಕ್ತೀರ. ಯಾರಿಗೂ ಗೊತ್ತಿಲ್ಲ. ನಿಮ್ಮ ಕಾಂಗ್ರೆಸ್‌ ಸೋಷಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಬರುತ್ತೆ. ಎಫ್‌ಐಆರ್‌ ಇರೋದು ಬೇರೆಯವರ ಮೇಲೆ, ಪ್ರತಾಪ್‌ ಸಿಂಹನ ಸೋದರನಿಗೂ ಈ ಎಫ್‌ಐಆರ್‌ಗೂ ಏನು ಸಂಬಂಧವಿದೆ? ಅದಕ್ಕೂ ನಾನು ಸ್ಪಷ್ಟನೆ ಕೊಟ್ಟಾಯಿತು. 30ನೇ ತಾರೀಖು ಮಧು ಬಂಗಾರಪ್ಪನವರ ಘಟನೆ ನಡೀತಿದೆ. ನೀವು ನನ್ನ ತಮ್ಮನ್ನ ಚೇಸ್‌ ಮಾಡಿ ಹಿಡಿಯೋಕೆ ಹೋಗ್ತೀರಿ. ಏನು ನನ್ನ ತಮ್ಮ ತಲೆ ಮರೆಸಿಕೊಂಡಿದ್ನಾ? ಎರಡು ದಿನ ಮೊದಲೇ ಹೋಗಿ ಅರಣ್ಯ ಇಲಾಖೆಯವರು ಕೇಳಿದಾಗ ಹೇಳಿಕೆ ಕೊಟ್ಟು ಬಂದಿದಾನೆ. ನೀವು ಅವನ ಮೊಬೈಲ್‌ ಟ್ರ್ಯಾಕ್‌ ಮಾಡಿಕೊಂಡೇ ಹೋಗಿ ಹಿಡಿದಿದ್ದೀರಿ. ತಲೆ ಮರೆಸಿಕೊಂಡವರು ಮೊಬೈಲ್‌ ಆಫ್‌ ಮಾಡ್ಕೊತಾರಾ? ಯಾಕೆ ಈ ರೀತಿ ದಾರಿ ತಪ್ಪಿಸುವ ಕೆಲಸ ಮಾಡ್ತೀರಿ? ನೀವು ಇಷ್ಟಕ್ಕೆ ನಿಲ್ಲಲ್ಲ ಸರ್.‌ ಪ್ರತಾಪ್‌ ಸಿಂಹನ್ನ ನಿಮ್ಮ ಮಗನ ರಾಜಕೀಯ ಭವಿಷ್ಯಕ್ಕೋಸ್ಕರ ಎಲ್ಲಾ ರೀತಿಲೂ ತುಳಿಯೋ ಪ್ರಯತ್ನ ಮಾಡ್ತೀರಿ. ನನ್ನ ಚಾರಿತ್ರ್ಯ ವಧೆ ಮಾಡ್ತಾ ಇದೀರಿ, ನನ್ನ ಕುಟುಂಬವನ್ನು ಎಳೀತಾ ಇದ್ದೀರಿ. ನನ್ನ ತಮ್ಮನನ್ನು ಫಿಕ್ಸ್‌ ಮಾಡೋದಕ್ಕೆ ನೋಡ್ರಾ ಇದ್ದೀರಿ. ಈ ಹಿಂದೆ ನನ್ನ ವಿರುದ್ಧವೂ ಎರಡು ಕ್ರಿಮಿನಲ್‌ ಪ್ರಕರಣ ದಾಖಲಿಸಿ ನನ್ನ ರಾಜಕೀಯ ಜೀವನ ಮುಗಿಸೋಕೆ ನೋಡಿದ್ರಿ. ಆಗಲಿಲ್ಲ, ಮೈಸೂರು, ಕೊಡಗು ಜನ ನನ್ನ ಕೈಹಿಡಿದು ಗೆಲ್ಲಿಸಿದ್ರು. ಸರ್‌ ನಿಮ್ಮ ಮಗನ ಭವಿಷ್ಯಕ್ಕೋಸ್ಕರ ನನ್ನ ಕುಟುಂಬವನ್ನೂ ನೀವು ಮುಗಿಸೋಕೆ ಹೊರಟಿದ್ದೀರಿ. ಸರ್‌ ಮನೆನಲ್ಲಿ ವಯಸ್ಸಾದ ತಾಯಿ ಇದ್ದಾರೆ ಅವರನ್ನೂ ಬಂಧಿಸಿ. ನನ್ನ ತಂಗಿ ಇದಾಳೆ, ಅವಳನ್ನೂ ಸಹ ಬಂಧಿಸಿ. ನಮ್ಮ ಕುಟುಂಬನ ಮುಗಿಸಬೇಕು ಅಂತ ಹೊರಟಿದ್ದೀರಿ. ಆಯ್ತು ಬಿಡಿ, ನಿಮ್ಮ ಕುಟುಂಬ ರಾಜಕಾರಣನೇ ಮುಂದುವರಿಯಲಿ. ನಿಮ್ಮ ಮಗನ ಭವಿಷ್ಯಕ್ಕೋಸ್ಕರ ಎಲ್ಲಾರನ್ನೂ ಮುಗಿಸಿಬಿಡಿ ಸರ್.‌ ಆದರೆ ನಿಮಗೆ ಇಷ್ಟು ಹೇಳೋಕೆ ಇಷ್ಟ ಪಡ್ತೀನಿ ಸರ್.‌ ನಿಮಗೆ ಮುಂದೆ ಬಹಳಷ್ಟು ದಾರಿ ಇಲ್ಲ ಸರ್.‌ ನನ್ನನ್ನು ಸೋಲಿಸೋದಕ್ಕೆ ಆ ಕೊಡಗು ಮೈಸೂರು ಜನತೆ ಬಿಡಲ್ಲ ಸರ್.‌ ಆ ತಾಯಿ ಚಾಮುಂಡಿ, ಕಾವೇರಿ ತಾಯಿ ಬಿಡಲ್ಲ ಸರ್.‌ ನೀವು ನನ್ನ ಮುಗಿಸೋದಕ್ಕೆ, ಜೀವನ ತೆಗೆಯೋದಕ್ಕೆ ಪ್ರಯತ್ನ ಪಡಬಹುದು, ಅದನ್ನ ಬಿಟ್ಟು ನಿಮಗೆ ಬೇರೆ ದಾರಿ ಇಲ್ಲ. ಆಲ್‌ ದ ಬೆಸ್ಟ್‌, ಒಳ್ಳೆದಾಗಲಿ. ಆದರೆ ನಾನು ಜಗ್ಗೋ ಮಗ ಅಲ್ಲ ಸರ್” ಎಂದು ಕಿಡಿಕಾರಿದರು.

 

andolana

Recent Posts

ಯಾಲಕ್ಕೂರು, ಸುತ್ತಲಿನ ಗ್ರಾಮಗಳಿಗೆ ಬಂತು ಸಾರಿಗೆ ಬಸ್ಸು!

ಚಾಮರಾಜನಗರ: ತಾಲ್ಲೂಕಿನ ಯಾಲಕ್ಕೂರು ಹಾಗೂ ಸುತ್ತಮುತ್ತಲಿನ ಆರು ಗ್ರಾಮಗಳಿಗೆ ಸಾರಿಗೆ ಬಸ್ಸೇ ಇಲ್ಲ ಎಂದು ‘ಆಂದೋಲನ ಪತ್ರಿಕೆ’ಯಲ್ಲಿ ಈಚೆಗೆ ಪ್ರಕಟವಾಗಿದ್ದ…

2 hours ago

ಓದುಗರ ಪತ್ರ: ಬಿಸಿಲಲ್ಲೋ ಅಣ್ಣಾ..!

ಬಿಸಿಲಲ್ಲೋ ಅಣ್ಣ ಇದು ಬರಿ ಬಿಸಿಲಲ್ಲೋ ! ಯಾರು ಹೆಸರಿಟ್ಟರೋ? ಇದಕ್ಕೆ ‘ನಿಲ್ಲೋ ಎಲ್ಲೋ’ ನಿಂತಲ್ಲಿ ನಿಲ್ಲಲು, ಕುಂತಲ್ಲಿ ಕೂರಲು…

2 hours ago

ಓದುಗರ ಪತ್ರ: ಸರ್ಕಾರಿ ಶಾಲೆಗಳ ಅಭಿವೃದ್ಧಿ ಸ್ವಾಗತಾರ್ಹ

ರಾಜ್ಯದ ಸರ್ಕಾರಿ ಶಾಲೆಗಳು ಮತ್ತು ಪದವಿಪೂರ್ವ ಕಾಲೇಜುಗಳ ಬಲವರ್ಧನೆಗೆ ಸರ್ಕಾರ ಮುಂದಾಗಿರುವುದು ಅತ್ಯಂತ ಸಂತೋಷ ಮತ್ತು ಹೆಮ್ಮೆಯ ಸಂಗತಿ. ಮೂಲಸೌಕರ್ಯದ…

2 hours ago

ಓದುಗರ ಪತ್ರ: ವಿದ್ಯಾರ್ಥಿಗಳ ಭವಿಷ್ಯಕ್ಕೆ ಮಾರಕವಾಗುವ ಇಂಟರ್ನಲ್ಸ್ ಅಂಕಗಳು

ಮಕ್ಕಳು ಬೋರ್ಡ್ ಪರೀಕ್ಷೆಗಳಲ್ಲಿ ಅಂಕಗಳನ್ನು ತೆಗೆಯುವ ಅರ್ಹತೆ ಇದ್ದರೂ, ಇಂಟರ್ನಲ್ಸ್ ಮಾರ್ಕ್ಸ್(ಆಂತರಿಕ ಅಂಕ) ಎಂಬ ಭೂತದಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಇತ್ತೀಚೆಗೆ…

2 hours ago

ನಾವಿಕನೇ ಇಲ್ಲದ ಕೊಡಗು ಪ್ರವಾಸೋದ್ಯಮ ಇಲಾಖೆ..!

ಪುನೀತ್ ಮಡಿಕೇರಿ ಇಲಾಖೆಯಲ್ಲಿ ಸಿಬ್ಬಂದಿ ನೇಮಕಕ್ಕೆ ಪ್ರವಾಸೋದ್ಯಮಿಗಳ ಆಗ್ರಹ  ಮಡಿಕೇರಿ: ಕೊಡಗಿನಲ್ಲಿ ಪ್ರವಾಸೋದ್ಯಮ ಇಲಾಖೆಯನ್ನು ಮುನ್ನಡೆಸಲು ನಾವಿಕನೇ ಇಲ್ಲದಾಗಿದ್ದು, ಕಳೆದ ಒಂದು ವರ್ಷದಿಂದ…

3 hours ago