ಜಿಲ್ಲೆಗಳು

ಸುತ್ತೂರು ಜಾತ್ರೆ : ನಿತ್ಯ ಲಕ್ಷಾಂತರ ಮಂದಿಗೆ ಮಹಾದಾಸೋಹ

ಅಡುಗೆ ತಯಾರಿ ಕಾರ್ಯಕ್ಕೆ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಚಾಲನೆ

* ಫರಿದಾಬಾದ್‌ನಲ್ಲಿ ವಿಶೇಷವಾಗಿ ಮಾಡಿಸಿರುವ ಕೊಪ್ಪರಿಕೆಗಳು

* ಒಂದು ಕೊಪ್ಪರಿಕೆಯಲ್ಲಿ ನಾಲ್ಕು ಕ್ವಿಂಟಾಲ್ ಅಡುಗೆ ತಯಾರು


ಕೆ.ಬಿ.ರಮೇಶ ನಾಯಕ

ಮೈಸೂರು: ಸುತ್ತೂರು ಜಾತ್ರಾ ಮಹೋತ್ಸವಕ್ಕೆ ಆಗಮಿಸುವವರಿಗೆ ಉಣಬಡಿಸಲು ಮಹಾ ದಾಸೋಹಕ್ಕೆ ಸಿದ್ಧತೆ ನಡೆದಿದೆ. ಬುಧವಾರ ಬೆಳಿಗ್ಗೆಯಿಂದಲೇ ದಾಸೋಹ ಶುರುವಾಗಲಿದ್ದು, ಜ.23ರವರೆಗೆ ನಿರಂತರವಾಗಿ ದಾಸೋಹ ನಡೆಯಲಿದೆ.

ಸುತ್ತೂರು ಕ್ಷೇತ್ರದ ಕರ್ತೃ ಗದ್ದುಗೆ ಸಮೀಪದಲ್ಲಿ ನಿರ್ಮಿಸಿರುವ ದಾಸೋಹ ಭವನದಲ್ಲಿ ಮಂಗಳವಾರ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅವರು ಕೊಪ್ಪರಿಕೆಗೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಅಡುಗೆ ತಯಾರಿ ಕಾರ್ಯಕ್ಕೆ ಚಾಲನೆ ನೀಡಿದರು.

ಫರಿದಾಬಾದ್‌ನಿಂದ ಕೊಪ್ಪರಿಕೆ: ಸುತ್ತೂರು ಜಾತ್ರೆಗೆ ಬರುವ ಎಲ್ಲರಿಗೂ ನಿಗದಿತ ಸಮಯದಲ್ಲಿ ದಾಸೋಹ ಬಡಿಸಲು ಅನುಕೂಲವಾಗುವಂತೆ ಹರಿಯಾಣ ರಾಜ್ಯದ ಫರಿದಾಬಾದ್‌ನಲ್ಲಿ ವಿಶೇಷವಾಗಿ ಕೊಪ್ಪರಿಕೆಗಳನ್ನು ಮಾಡಿಸಲಾಗಿದೆ. ನಾಲ್ಕರಿಂದ ಐದು ಕ್ವಿಂಟಾಲ್‌ನಷ್ಟು ಆಹಾರ ತಯಾರಿಸುವ ಸಾಮರ್ಥ್ಯವನ್ನು ಹೊಂದಿರುವ ಬೃಹತ್ ಕೊಪ್ಪರಿಕೆಗಳಲ್ಲಿ ಅನ್ನ, ಸಾಂಬರ್, ಪಾಯಸ, ಕಳ್ಳೆಹುಳಿಯನ್ನು ಮಾಡಬಹುದಾಗಿದೆ. ಒಂದೊಂದು ಕೊಪ್ಪರಿಕೆಯಲ್ಲಿ ನಾಲ್ಕು ಕ್ವಿಂಟಾಲ್‌ನಂತೆ 35ರಿಂದ 140 ಕ್ವಿಂಟಾಲ್‌ನಷ್ಟು ಆಹಾರವನ್ನು ಏಕ ಕಾಲಕ್ಕೆ ತಯಾರಿಸಬಹುದಾಗಿದೆ ಎನ್ನುತ್ತಾರೆ ಆಹಾರ ಸಮಿತಿಯವರು.

20 ಸಾವಿರ ಸ್ಟೀಲ್ ಪ್ಲೇಟ್: ಜಾತ್ರೆಯನ್ನು ಪ್ಲಾಸ್ಟಿಕ್ ಮತ್ತು ಪೇಪರ್ ಮುಕ್ತ ಮಾಡಲು ದಾನಿಯೊಬ್ಬರು 20 ಸಾವಿರ ಸ್ಟೀಲ್ ತಟ್ಟೆಗಳನ್ನು ಕೊಡಿಸಿದ್ದಾರೆ. ಆ ಮೂಲಕ ಏಕ ಕಾಲದಲ್ಲಿ 20 ಸಾವಿರ ಜನರಿಗೆ ಊಟ ನೀಡಬಹುದು. ಊಟದ ಬಳಿಕ ಸ್ವಯಂಸೇವಕರು ಆ ತಟ್ಟೆಗಳನ್ನು ಶುಚಿಗೊಳಿಸಿ ಕೌಂಟರ್‌ಗೆ ಸಾಗಸಲಿದ್ದಾರೆ. ಅದೇ ರೀತಿ ಮಹಾ ದಾಸೋಹದ ಜಾಗದಿಂದ ಅತಿಥಿ ಗೃಹ, ವಿದ್ಯಾರ್ಥಿನಿಲಯಗಳು, ಕುಟೀರಗಳಿಗೆ ತಿಂಡಿ, ಊಟ ಸರಬರಾಜು ಮಾಡಲಾಗುತ್ತದೆ. ಅಲ್ಲದೆ ಪ್ರತ್ಯೇಕ ಕೌಂಟರ್‌ಗಳ ವ್ಯವಸ್ಥೆ ಮಾಡಲಾಗಿದೆ. ಆ ಮೂಲಕ ಸಾರ್ವಜನಿಕರು ಊಟಕ್ಕಾಗಿ ಕಾಯದಂತೆ ಮಾಡಲು ಒಂದು ತಂಡಕ್ಕೆ ಜವಾಬ್ದಾರಿ ವಹಿಸಲಾಗಿದೆ.

ನುರಿತ ಬಾಣಸಿಗರು: ಕೊಪ್ಪರಿಕೆಯಲ್ಲಿ ಅನ್ನ, ಸಾಂಬಾರ್, ಹುಳಿ ಮಾಡುವುದಕ್ಕೆ ಪ್ರತ್ಯೇಕ ಬಾಣಸಿಗರು ಇದ್ದರೆ, ತರಕಾರಿ ಹಚ್ಚುವುದು, ತೆಂಗಿನಕಾಯಿ ತುರಿಯುವುದು ಸೇರಿದಂತೆ ಇನ್ನಿತರ ಕೆಲಸಕ್ಕಾಗಿ 500 ಮಂದಿ ಕಾರ್ಯ ನಿರ್ವಹಿಸಲಿದ್ದಾರೆ. ಇದಲ್ಲದೆ ಹಳ್ಳಿಗಳಲ್ಲಿ ಮದುವೆ, ಗೃಹಪ್ರವೇಶಗಳಲ್ಲಿ ಅಡುಗೆ ಕೆಲಸ ಮಾಡುವವರೂ ಆರು ದಿನಗಳ ಕಾಲ ಸೇವೆ ಸಲ್ಲಿಸಲು ಬಂದಿದ್ದಾರೆ. ಗುಂಡ್ಲುಪೇಟೆ, ಚಾಮರಾಜನಗರ, ನಂಜನಗೂಡು, ತಿ.ನರಸೀಪುರ ತಾಲ್ಲೂಕಿನ ಅಡುಗೆಯವರು ಕೈ ಜೋಡಿಸಲಿದ್ದಾರೆ ಎಂದು ದಾಸೋಹ ಸಮಿತಿ ಸಂಚಾಲಕ ಪ್ರೊ.ಸುಬ್ಬಪ್ಪ ತಿಳಿಸಿದರು.

1,500 ಸ್ವಯಂಸೇವಕರು: ದಾಸೋಹದಲ್ಲಿ ಯಾವ ವ್ಯತ್ಯಾಸ ಆಗದಂತೆ ನಿಗಾ ಇಡಲು ಮತ್ತು ಸಾರ್ವಜನಿಕರನ್ನು ನಿಯಂತ್ರಿಸಲು 1,500  ಸ್ವಯಂಸೇವಕರನ್ನು ನೇಮಿಸಲಾಗಿದೆ. ವಿವಿಧ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ಪದವಿ ವಿದ್ಯಾರ್ಥಿಗಳು, ಎನ್‌ಎಸ್‌ಎಸ್ ಸ್ವಯಂಸೇವಕರನ್ನು ಬರಮಾಡಿಕೊಳ್ಳಲಾಗಿದೆ.


ದಾನಿಗಳಿಂದ ಹರಿದು ಬಂದ ದಿನಸಿ

ಆರು ದಿನಗಳ ದಾಸೋಹಕ್ಕಾಗಿ ಸಾರ್ವಜನಿಕರಿಂದ ದಿನಸಿ ಪದಾರ್ಥಗಳು ಹರಿದುಬಂದಿದೆ. ಬಣ್ಣಾರಿ ಅಮ್ಮನ್ ಸಕ್ಕರೆ ಕಾರ್ಖಾನೆಯವರು 150 ಕ್ವಿಂಟಾಲ್ ಸಕ್ಕರೆ ಕಳುಹಿಸಿದ್ದಾರೆ. ಶಾಸಕ ಎಸ್.ಎ.ರಾಮದಾಸ್ ಸಹೋದರ ಶ್ರೀಕಾಂತ ದಾಸ್ ಒಂದು ಲೋಡ್ ಕಮರ್ಷಿಯಲ್ ಸಿಲಿಂಡರ್, 100 ಕ್ವಿಂಟಾಲ್ ಅಕ್ಕಿ ಕಳುಹಿಸಿಕೊಟ್ಟಿದ್ದಾರೆ. ಬೆಂಗಳೂರು, ಗುಂಡ್ಲುಪೇಟೆ, ಮೈಸೂರು, ಚಾಮರಾಜನಗರ, ಪಾಂಡವಪುರದಿಂದ ಐದು ಲೋಡ್ ತರಕಾರಿ ಬಂದಿದೆ. ಗುಂಡ್ಲುಪೇಟೆ ಮತ್ತು ಚಾಮರಾಜನಗರ ತಾಲ್ಲೂಕಿನಿಂದಲೇ 50 ಸಾವಿರ ತೆಂಗಿನ ಕಾಯಿ ಬಂದಿದೆ. ನಿವೃತ್ತ ಪೊಲೀಸ್ ಅಧಿಕಾರಿ ಶಂಕರ್ ಬಿದರಿ ಅವರು 30 ಟನ್ ಬೆಲ್ಲ, ಮಂಡ್ಯ ರೈತರಿಂದ 250 ಟನ್ ಬೆಲ್ಲವನ್ನು ತಲುಪಿಸಲಾಗಿದೆ. ರಾಯಚೂರು ಜಿಲ್ಲೆಯ ಸಿಂಧನೂರಿನಿಂದ 1 ಸಾವಿರ ಕ್ವಿಂಟಾಲ್ ಅಕ್ಕಿಯನ್ನು ಖರೀದಿಸಲಾಗಿದೆ. ಭಕ್ತರಿಂದ 500 ಕ್ವಿಂಟಾಲ್ ಅಕ್ಕಿ ಸಂಗ್ರಹವಾಗಿದೆ.


ಏನೇನು ವಿಶೇಷ ತಿಂಡಿಗಳು?

ಬೆಳಿಗ್ಗೆ ಬಿಸಿಬೇಳೆಬಾತ್, ಖಾರಾ ಪೊಂಗಲ್, ಉಪ್ಪಿಟ್ಟು, ರೈಸ್‌ಬಾತ್, ಮಧ್ಯಾಹ್ನ ಮತ್ತು ರಾತ್ರಿ ಕಳ್ಳೆಹುಳಿ, ಪಾಯಸ, ಅನ್ನ ಸಾಂಬಾರ್, ಸಿಹಿ ಬೂಂದಿ, ಕೊಬ್ಬರಿ ಮಿಠಾಯಿ, ಮೈಸೂರು ಪಾಕ್. ಗಣ್ಯರಿಗಾಗಿ ಅತಿಥಿಗೃಹದಲ್ಲಿ ಪ್ರತ್ಯೇಕವಾದ ವ್ಯವಸ್ಥೆಯನ್ನು ಮಾಡಲಾಗಿದೆ. ಗಣ್ಯರಿಗಾಗಿ ಪಲ್ಯ, ಹುರಳಿ ಕಟ್ ಸಾಂಬಾರ್, ಕೋಸಂಬರಿ, ಹಪ್ಪಳ, ಉಪ್ಪಿನಕಾಯಿ, ಸಿಹಿ ಇನ್ನಿತರ ತಿನಿಸುಗಳು ಇರುತ್ತದೆ.

andolanait

Recent Posts

ಮಂಡ್ಯ | ಕೊಬ್ಬರಿ ಶೆಡ್‌ಗೆ ಬೆಂಕಿ : ಲಕ್ಷಾಂತರ ರೂ.ಮೌಲ್ಯದ ಕೊಬ್ಬರಿ ನಾಶ

ಮಂಡ್ಯ : ಕೊಬ್ಬರಿ ಶೆಡ್ ಗೆ ಬೆಂಕಿ ಬಿದ್ದು ಲಕ್ಷಾಂತರ ರೂ. ಮೌಲ್ಯದ ಕೊಬ್ಬರಿ ನಾಶವಾಗಿರುವ ಘಟನೆ ತಾಲೂಕಿನ ಗುನ್ನಾಯಕನಹಳ್ಳಿಯಲ್ಲಿ…

5 hours ago

ಹನೂರು | ಅಲಗುಮೂಲೆ ಅರಣ್ಯದಲ್ಲಿ ಬೆಂಕಿ ; ಧಗಧಗಿಸಿದ ಕಾಡು

ಹನೂರು : ತಾಲೂಕಿನ ಕಾವೇರಿ ವನ್ಯಜೀವಿಧಾಮ ವ್ಯಾಪ್ತಿಯ ಅಲಗುಮೂಲೆ ಅರಣ್ಯ ಪ್ರದೇಶದಲ್ಲಿ ಬುಧವಾರ ರಾತ್ರಿ ಏಕಾಏಕಿ ಎರಡು ಮೂರು ಕಡೆ…

6 hours ago

ತಂಬಾಕು ಮುಕ್ತ ಗ್ರಾಮಕ್ಕಾಗಿ ಗುಲಾಬಿ ಚಳುವಳಿ

ಶ್ರೀರಂಗಪಟ್ಟಣ : ಸಿಗರೇಟ್ ಮತ್ತು ತಂಬಾಕು ಉತ್ಪನ್ನಗಳ ಸೇವನೆಯಿಂದ ಕ್ಯಾನ್ಸರ್, ಹೃದಯ, ಶ್ವಾಸಕೋಶ ಸಂಬಂಧಿತ ಮಾರಣಾಂತಿಕ ಕಾಯಿಲೆಗಳು ಬರುತ್ತವೆಂದು ಕ್ಷೇತ್ರ…

6 hours ago

ಆಂಬುಲೆನ್ಸ್‌ ತುರ್ತು ಮೀಸಲು ಮಾರ್ಗಕ್ಕೆ ಜಯಾ ಬಚ್ಚನ್‌ ಒತ್ತಾಯ

ಹೊಸದಿಲ್ಲಿ : ದೇಶದ ಎಲ್ಲ ನಗರಗಳ ರಸ್ತೆಗಳಲ್ಲಿ ಆಂಬ್ಯುಲೆನ್ಸ್‌ಗಳ ಸಂಚಾರಕ್ಕಾಗಿ ಪ್ರತ್ಯೇಕ ಮೀಸಲು ಮಾರ್ಗಗಳನ್ನು ಒದಗಿಸುವಂತೆ ಸಮಾಜವಾದಿ ಪಕ್ಷದ ಸಂಸದೆ…

7 hours ago

ಗುಂಡ್ಲುಪೇಟೆ | ದನಗಾಹಿ ಮೇಲೆ ಹುಲಿ ದಾಳಿ ; ಪ್ರಾಣಾಪಾಯದಿಂದ ಪಾರು

ಗುಂಡ್ಲುಪೇಟೆ : ಜಾನುವಾರು ಹಾಗೂ ಜಾನುವಾರು ಮೇಯಿಸುತ್ತಿದ್ದ ರೈತರೊಬ್ಬರ ಮೇಲೆ ಹುಲಿ ದಾಳಿ ನಡೆಸಿದೆ. ಪರಿಣಾಮ ರೈತ ಗಾಯಗೊಂಡಿದ್ದಾನೆ. ಘಟನೆ…

7 hours ago

ಏಕತಾ ಮಾಲ್‌ ನಿರ್ಮಾಣಕ್ಕೆ ಹೈಕೋರ್ಟ್ ತಡೆ‌

ಮೈಸೂರು : ರಾಜ್ಯದ ಪ್ರತಿಯೊಂದೂ ಜಿಲ್ಲೆಗಳ ವಿಶೇಷ ಉತ್ಪನ್ನಗಳ ಪರಿಚಯ, ಮಾರಾಟಕ್ಕೆ ಅವಕಾಶ ಕಲ್ಪಿಸಿಕೊಡುವ ಉದ್ದೇಶದಿಂದ ಕೇಂದ್ರ ಸರ್ಕಾರ ನಿರ್ಮಿಸುತ್ತಿರುವ…

7 hours ago