ಅಡುಗೆ ತಯಾರಿ ಕಾರ್ಯಕ್ಕೆ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಚಾಲನೆ
* ಫರಿದಾಬಾದ್ನಲ್ಲಿ ವಿಶೇಷವಾಗಿ ಮಾಡಿಸಿರುವ ಕೊಪ್ಪರಿಕೆಗಳು
* ಒಂದು ಕೊಪ್ಪರಿಕೆಯಲ್ಲಿ ನಾಲ್ಕು ಕ್ವಿಂಟಾಲ್ ಅಡುಗೆ ತಯಾರು
ಕೆ.ಬಿ.ರಮೇಶ ನಾಯಕ
ಮೈಸೂರು: ಸುತ್ತೂರು ಜಾತ್ರಾ ಮಹೋತ್ಸವಕ್ಕೆ ಆಗಮಿಸುವವರಿಗೆ ಉಣಬಡಿಸಲು ಮಹಾ ದಾಸೋಹಕ್ಕೆ ಸಿದ್ಧತೆ ನಡೆದಿದೆ. ಬುಧವಾರ ಬೆಳಿಗ್ಗೆಯಿಂದಲೇ ದಾಸೋಹ ಶುರುವಾಗಲಿದ್ದು, ಜ.23ರವರೆಗೆ ನಿರಂತರವಾಗಿ ದಾಸೋಹ ನಡೆಯಲಿದೆ.
ಸುತ್ತೂರು ಕ್ಷೇತ್ರದ ಕರ್ತೃ ಗದ್ದುಗೆ ಸಮೀಪದಲ್ಲಿ ನಿರ್ಮಿಸಿರುವ ದಾಸೋಹ ಭವನದಲ್ಲಿ ಮಂಗಳವಾರ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅವರು ಕೊಪ್ಪರಿಕೆಗೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಅಡುಗೆ ತಯಾರಿ ಕಾರ್ಯಕ್ಕೆ ಚಾಲನೆ ನೀಡಿದರು.
ಫರಿದಾಬಾದ್ನಿಂದ ಕೊಪ್ಪರಿಕೆ: ಸುತ್ತೂರು ಜಾತ್ರೆಗೆ ಬರುವ ಎಲ್ಲರಿಗೂ ನಿಗದಿತ ಸಮಯದಲ್ಲಿ ದಾಸೋಹ ಬಡಿಸಲು ಅನುಕೂಲವಾಗುವಂತೆ ಹರಿಯಾಣ ರಾಜ್ಯದ ಫರಿದಾಬಾದ್ನಲ್ಲಿ ವಿಶೇಷವಾಗಿ ಕೊಪ್ಪರಿಕೆಗಳನ್ನು ಮಾಡಿಸಲಾಗಿದೆ. ನಾಲ್ಕರಿಂದ ಐದು ಕ್ವಿಂಟಾಲ್ನಷ್ಟು ಆಹಾರ ತಯಾರಿಸುವ ಸಾಮರ್ಥ್ಯವನ್ನು ಹೊಂದಿರುವ ಬೃಹತ್ ಕೊಪ್ಪರಿಕೆಗಳಲ್ಲಿ ಅನ್ನ, ಸಾಂಬರ್, ಪಾಯಸ, ಕಳ್ಳೆಹುಳಿಯನ್ನು ಮಾಡಬಹುದಾಗಿದೆ. ಒಂದೊಂದು ಕೊಪ್ಪರಿಕೆಯಲ್ಲಿ ನಾಲ್ಕು ಕ್ವಿಂಟಾಲ್ನಂತೆ 35ರಿಂದ 140 ಕ್ವಿಂಟಾಲ್ನಷ್ಟು ಆಹಾರವನ್ನು ಏಕ ಕಾಲಕ್ಕೆ ತಯಾರಿಸಬಹುದಾಗಿದೆ ಎನ್ನುತ್ತಾರೆ ಆಹಾರ ಸಮಿತಿಯವರು.
20 ಸಾವಿರ ಸ್ಟೀಲ್ ಪ್ಲೇಟ್: ಜಾತ್ರೆಯನ್ನು ಪ್ಲಾಸ್ಟಿಕ್ ಮತ್ತು ಪೇಪರ್ ಮುಕ್ತ ಮಾಡಲು ದಾನಿಯೊಬ್ಬರು 20 ಸಾವಿರ ಸ್ಟೀಲ್ ತಟ್ಟೆಗಳನ್ನು ಕೊಡಿಸಿದ್ದಾರೆ. ಆ ಮೂಲಕ ಏಕ ಕಾಲದಲ್ಲಿ 20 ಸಾವಿರ ಜನರಿಗೆ ಊಟ ನೀಡಬಹುದು. ಊಟದ ಬಳಿಕ ಸ್ವಯಂಸೇವಕರು ಆ ತಟ್ಟೆಗಳನ್ನು ಶುಚಿಗೊಳಿಸಿ ಕೌಂಟರ್ಗೆ ಸಾಗಸಲಿದ್ದಾರೆ. ಅದೇ ರೀತಿ ಮಹಾ ದಾಸೋಹದ ಜಾಗದಿಂದ ಅತಿಥಿ ಗೃಹ, ವಿದ್ಯಾರ್ಥಿನಿಲಯಗಳು, ಕುಟೀರಗಳಿಗೆ ತಿಂಡಿ, ಊಟ ಸರಬರಾಜು ಮಾಡಲಾಗುತ್ತದೆ. ಅಲ್ಲದೆ ಪ್ರತ್ಯೇಕ ಕೌಂಟರ್ಗಳ ವ್ಯವಸ್ಥೆ ಮಾಡಲಾಗಿದೆ. ಆ ಮೂಲಕ ಸಾರ್ವಜನಿಕರು ಊಟಕ್ಕಾಗಿ ಕಾಯದಂತೆ ಮಾಡಲು ಒಂದು ತಂಡಕ್ಕೆ ಜವಾಬ್ದಾರಿ ವಹಿಸಲಾಗಿದೆ.
ನುರಿತ ಬಾಣಸಿಗರು: ಕೊಪ್ಪರಿಕೆಯಲ್ಲಿ ಅನ್ನ, ಸಾಂಬಾರ್, ಹುಳಿ ಮಾಡುವುದಕ್ಕೆ ಪ್ರತ್ಯೇಕ ಬಾಣಸಿಗರು ಇದ್ದರೆ, ತರಕಾರಿ ಹಚ್ಚುವುದು, ತೆಂಗಿನಕಾಯಿ ತುರಿಯುವುದು ಸೇರಿದಂತೆ ಇನ್ನಿತರ ಕೆಲಸಕ್ಕಾಗಿ 500 ಮಂದಿ ಕಾರ್ಯ ನಿರ್ವಹಿಸಲಿದ್ದಾರೆ. ಇದಲ್ಲದೆ ಹಳ್ಳಿಗಳಲ್ಲಿ ಮದುವೆ, ಗೃಹಪ್ರವೇಶಗಳಲ್ಲಿ ಅಡುಗೆ ಕೆಲಸ ಮಾಡುವವರೂ ಆರು ದಿನಗಳ ಕಾಲ ಸೇವೆ ಸಲ್ಲಿಸಲು ಬಂದಿದ್ದಾರೆ. ಗುಂಡ್ಲುಪೇಟೆ, ಚಾಮರಾಜನಗರ, ನಂಜನಗೂಡು, ತಿ.ನರಸೀಪುರ ತಾಲ್ಲೂಕಿನ ಅಡುಗೆಯವರು ಕೈ ಜೋಡಿಸಲಿದ್ದಾರೆ ಎಂದು ದಾಸೋಹ ಸಮಿತಿ ಸಂಚಾಲಕ ಪ್ರೊ.ಸುಬ್ಬಪ್ಪ ತಿಳಿಸಿದರು.
1,500 ಸ್ವಯಂಸೇವಕರು: ದಾಸೋಹದಲ್ಲಿ ಯಾವ ವ್ಯತ್ಯಾಸ ಆಗದಂತೆ ನಿಗಾ ಇಡಲು ಮತ್ತು ಸಾರ್ವಜನಿಕರನ್ನು ನಿಯಂತ್ರಿಸಲು 1,500 ಸ್ವಯಂಸೇವಕರನ್ನು ನೇಮಿಸಲಾಗಿದೆ. ವಿವಿಧ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ಪದವಿ ವಿದ್ಯಾರ್ಥಿಗಳು, ಎನ್ಎಸ್ಎಸ್ ಸ್ವಯಂಸೇವಕರನ್ನು ಬರಮಾಡಿಕೊಳ್ಳಲಾಗಿದೆ.
ದಾನಿಗಳಿಂದ ಹರಿದು ಬಂದ ದಿನಸಿ
ಆರು ದಿನಗಳ ದಾಸೋಹಕ್ಕಾಗಿ ಸಾರ್ವಜನಿಕರಿಂದ ದಿನಸಿ ಪದಾರ್ಥಗಳು ಹರಿದುಬಂದಿದೆ. ಬಣ್ಣಾರಿ ಅಮ್ಮನ್ ಸಕ್ಕರೆ ಕಾರ್ಖಾನೆಯವರು 150 ಕ್ವಿಂಟಾಲ್ ಸಕ್ಕರೆ ಕಳುಹಿಸಿದ್ದಾರೆ. ಶಾಸಕ ಎಸ್.ಎ.ರಾಮದಾಸ್ ಸಹೋದರ ಶ್ರೀಕಾಂತ ದಾಸ್ ಒಂದು ಲೋಡ್ ಕಮರ್ಷಿಯಲ್ ಸಿಲಿಂಡರ್, 100 ಕ್ವಿಂಟಾಲ್ ಅಕ್ಕಿ ಕಳುಹಿಸಿಕೊಟ್ಟಿದ್ದಾರೆ. ಬೆಂಗಳೂರು, ಗುಂಡ್ಲುಪೇಟೆ, ಮೈಸೂರು, ಚಾಮರಾಜನಗರ, ಪಾಂಡವಪುರದಿಂದ ಐದು ಲೋಡ್ ತರಕಾರಿ ಬಂದಿದೆ. ಗುಂಡ್ಲುಪೇಟೆ ಮತ್ತು ಚಾಮರಾಜನಗರ ತಾಲ್ಲೂಕಿನಿಂದಲೇ 50 ಸಾವಿರ ತೆಂಗಿನ ಕಾಯಿ ಬಂದಿದೆ. ನಿವೃತ್ತ ಪೊಲೀಸ್ ಅಧಿಕಾರಿ ಶಂಕರ್ ಬಿದರಿ ಅವರು 30 ಟನ್ ಬೆಲ್ಲ, ಮಂಡ್ಯ ರೈತರಿಂದ 250 ಟನ್ ಬೆಲ್ಲವನ್ನು ತಲುಪಿಸಲಾಗಿದೆ. ರಾಯಚೂರು ಜಿಲ್ಲೆಯ ಸಿಂಧನೂರಿನಿಂದ 1 ಸಾವಿರ ಕ್ವಿಂಟಾಲ್ ಅಕ್ಕಿಯನ್ನು ಖರೀದಿಸಲಾಗಿದೆ. ಭಕ್ತರಿಂದ 500 ಕ್ವಿಂಟಾಲ್ ಅಕ್ಕಿ ಸಂಗ್ರಹವಾಗಿದೆ.
ಏನೇನು ವಿಶೇಷ ತಿಂಡಿಗಳು?
ಬೆಳಿಗ್ಗೆ ಬಿಸಿಬೇಳೆಬಾತ್, ಖಾರಾ ಪೊಂಗಲ್, ಉಪ್ಪಿಟ್ಟು, ರೈಸ್ಬಾತ್, ಮಧ್ಯಾಹ್ನ ಮತ್ತು ರಾತ್ರಿ ಕಳ್ಳೆಹುಳಿ, ಪಾಯಸ, ಅನ್ನ ಸಾಂಬಾರ್, ಸಿಹಿ ಬೂಂದಿ, ಕೊಬ್ಬರಿ ಮಿಠಾಯಿ, ಮೈಸೂರು ಪಾಕ್. ಗಣ್ಯರಿಗಾಗಿ ಅತಿಥಿಗೃಹದಲ್ಲಿ ಪ್ರತ್ಯೇಕವಾದ ವ್ಯವಸ್ಥೆಯನ್ನು ಮಾಡಲಾಗಿದೆ. ಗಣ್ಯರಿಗಾಗಿ ಪಲ್ಯ, ಹುರಳಿ ಕಟ್ ಸಾಂಬಾರ್, ಕೋಸಂಬರಿ, ಹಪ್ಪಳ, ಉಪ್ಪಿನಕಾಯಿ, ಸಿಹಿ ಇನ್ನಿತರ ತಿನಿಸುಗಳು ಇರುತ್ತದೆ.
ಮೈಸೂರು: ಇ-ಸ್ವತ್ತು ಮಾಡಿ ಕೊಡಲು ಅರ್ಜಿದಾರರಿಗೆ ಹಣ ನೀಡುವಂತೆ ಒತ್ತಾಯ ಮಾಡಿದ ಗ್ರಾಮ ಪಂಚಾಯಿತಿ ಪಿಡಿಒ ಕುಳ್ಳೇಗೌಡ ನಾಲ್ಕು ಸಾವಿರ…
ಮೈಸೂರು: ಕಳೆದ ಬಾರಿಯಂತೆ ಈ ಬಾರಿಯೂ ಅರ್ಥಪೂರ್ಣ ಹಾಗೂ ಅದ್ದೂರಿಯಾಗಿ ಕನ್ನಡ ರಾಜ್ಯೋತ್ಸವ ಆಚರಣೆ ಮಾಡಲಾಗುವುದು ಎಂದು ಅಪರ ಜಿಲ್ಲಾಧಿಕಾರಿ…
ಮೈಸೂರು: ನಗರವನ್ನು ಸ್ವಚ್ಛಗೊಳಿಸುವ ಮೂಲಕ ಜನರ ಆರೋಗ್ಯ ಕಾಪಾಡುವ ಪೌರಕಾರ್ಮಿಕರ ಆರೋಗ್ಯವೂ ಮುಖ್ಯ ವಾಗಿದ್ದು, ಅವರು ಈ ವಿಷಯದಲ್ಲಿ ನಿರ್ಲಕ್ಷ್ಯ…
ಹನೂರು: ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಅತಿ ದೊಡ್ಡ ಗ್ರಾಮ ಪಂಚಾಯಿತಿ ಎಂದು ಪ್ರಸಿದ್ಧಿ ಪಡೆದಿರುವ ಮಾರ್ಟಳ್ಳಿ ಗ್ರಾಮ ಪಂಚಾಯಿತಿ ಮುಖ್ಯ…
ಹೊಸದಿಲ್ಲಿ: ತಮಿಳುನಾಡಿನ ಕೊಯಮತ್ತೂರಿನಲ್ಲಿರುವ ಸದ್ಗುರು ಜಗ್ಗಿ ವಾಸುದೇವ್ ಅವರ ಆಶ್ರಮ ಸೇರಲು ತನ್ನ ಇಬ್ಬರು ಹೆಣ್ಣುಮಕ್ಕಳನ್ನು ಬ್ರೈನ್ವಾಶ್ ಮಾಡಲಾಗಿದೆ ಎಂಬ…
ಮಡಿಕೇರಿ: ಮಗನಿಂದಲೇ ತಂದೆ ಹತ್ಯೆಯಾದ ಘಟನೆ ಶ್ರೀಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯ ಚಿಕ್ಕಮಂಡೂರು ಗ್ರಾಮದಲ್ಲಿ ನಡೆದಿದೆ. ಸಿ ಎನ್ ನಾಣಯ್ಯ…