ಬಡ್ಡಿ ಮನ್ನಾ ಮಾಡಿದರೂ ಅಸಲು ಪಾವತಿಸಲು ಹಿಂದೇಟು ; 4 ತಿಂಗಳಲ್ಲಿ 2.50 ಕೋಟಿ ರೂ. ಬಾಕಿ ಹಣ ಪಾವತಿ
ಎಚ್.ಎಸ್.ದಿನೇಶ್ ಕುಮಾರ್.
ಮೈಸೂರು: ಆರ್ಥಿಕವಾಗಿ ಹಿಂದುಳಿದವರ ಹಿತಾಸಕ್ತಿ ಕಾಯುವ ಉದ್ದೇಶದಿಂದ ನಗರಪಾಲಿಕೆ ಆಯುಕ್ತರು ನೀರಿನ ಕರ ಬಾಕಿಯ ಬಡ್ಡಿ ಮನ್ನಾ ಮಾಡುವುದಾಗಿ ಹೇಳಿದರೂ ಜನರು ಅಸಲು ಪಾವತಿಸಲು ನಿರಾಸಕ್ತಿ ತೋರುತ್ತಿದ್ದಾರೆ. ಕಳೆದ ನಾಲ್ಕು ತಿಂಗಳ ಅವಧಿಯಲ್ಲಿ 1731 ಮಂದಿ ಮಾತ್ರ ಬಡ್ಡಿ ಮನ್ನಾಯೋಜನೆಯಲ್ಲಿ ಅಸಲು ಪಾವತಿಸಿದ್ದಾರೆ.
ಜನರ ಒಳಿತಿಗಾಗಿ ರೂಪಿಸುವ ಯೋಜನೆಗಳ ಪ್ರಯೋಜನ ಪಡೆದುಕೊಳ್ಳಬೇಕಾದದು ನಾಗರಿಕರ ಕರ್ತವ್ಯ. ಆದರೆ, ಬಡವರು ನೀರಿನ ಕರ ಬಾಕಿಯ ಜೊತೆಗೆ ಬಡ್ಡಿಯನ್ನೂ ಕಟ್ಟಬೇಕಾದಲ್ಲಿ ಸಂಕಷ್ಟಕ್ಕೀಡಾಗುತ್ತಾರೆ ಎಂಬುದನ್ನು ಮನಗಂಡು ಬಡ್ಡಿ ಮನ್ನಾ ಯೋಜನೆಯನ್ನು ಜಾರಿಗೊಳಿಸಿದರೂ ಜನರು ನೀರಿನ ಕರ ಬಾಕಿಯ ಅಸಲು ಪಾವತಿಸಲು ಮನಸ್ಸು ಮಾಡುತ್ತಿಲ್ಲ ಎಂದು ಅಧಿಕಾರಿಗಳು ಹೇಳುತ್ತಾರೆ.
ನಗರದ ವಿವಿಧ ಬಡಾವಣೆಗಳು, ಆಶ್ರಯ ಬಡಾವಣೆಗಳು, ನಗರಪಾಲಿಕೆ ವ್ಯಾಪ್ತಿಗೆ ಒಳಪಡುವ ಸಾಕಷ್ಟು ಬಡಾವಣೆಗಳಲ್ಲಿನ ಜನರು ಸಾಕಷ್ಟು ವರ್ಷಗಳಿಂದ ನೀರಿನ ಬಾಕಿ ಕಟ್ಟಲು ವಿಫಲರಾಗಿದ್ದಾರೆ. ಅವರಲ್ಲಿ ಬಡವರೇ ಹೆಚ್ಚು. ಇನ್ನು ಮಧ್ಯಮ ವರ್ಗ ಹಾಗೂ ಕೆಲ ಹಣವಂತರೂ ನೀರಿನ ಕರ ಪಾವತಿಸಿಲ್ಲ. ಹೀಗಾಗಿ ೨೨೦ ಕೋಟಿ ರೂ.ನಷ್ಟು ನೀರಿನ ಕರ ಬಾಕಿ ಉಳಿದಿದೆ. ಅದರಲ್ಲಿ ೭೦ ಕೋಟಿ ರೂ. ಬಡ್ಡಿಯೂ ಸೇರಿದೆ. ಹೀಗಾಗಿ ಕಳೆದ ಕೌನ್ಸಿಲ್ ಸಭೆಯಲ್ಲಿ ಈ ಕುರಿತು ಸಾಕಷ್ಟು ಚರ್ಚೆಗಳು ನಡೆದವು. ನೀರಿನ ಕರ ಬಾಕಿ ಮೇಲಿನ ಬಡ್ಡಿ ಮನ್ನಾ ಮಾಡಬೇಕು ಎಂದು ನಗರಪಾಲಿಕೆ ಸದಸ್ಯರು ಒಕ್ಕೊರಲಿನಿಂದ ಮನವಿ ಮಾಡಿದ್ದರು. ಹೀಗಾಗಿ ಆಯುಕ್ತ ಲಕ್ಷ್ಮೀ ಕಾಂತರೆಡ್ಡಿ ಅವರು ನಗರಾಭಿವೃದ್ಧಿ ಇಲಾಖೆಗೆ ಪತ್ರ ಬರೆದಿದ್ದರು. ಈ ಮನವಿಗೆ ಸ್ಪಂದಿಸಿದ ಸರ್ಕಾರ, ನೀರಿನ ಕರ ಬಾಕಿ ಹಣ ಪೂರ್ಣ ಪಾವತಿಸುವವರಿಗೆ ಬಾಕಿ ಮೇಲಿನ ಬಡ್ಡಿ ಮನ್ನಾ ಮಾಡಲು ಆದೇಶ ಹೊರಡಿಸಿತು. ನಗರಪಾಲಿಕೆ ವತಿಯಿಂದ ಈ ಸಂಬಂಧ ಪತ್ರಿಕಾ ಪ್ರಕಟಣೆ ಕೂಡ ಹೊರಡಿಸಲಾಗಿತ್ತು. ಅದರಂತೆ ಮೊದಲಿಗೆ ಕೆಲವರು ಹಣ ಪಾವತಿಸಲು ಮುಂದಾದರು. ನಂತರ ಹಣ ಪಾವತಿಸುವವರ ಸಂಖ್ಯೆ ತೀರಾ ಕಡಿಮೆಯಾಗಿದೆ. ಕಳೆದ ನಾಲ್ಕು ತಿಂಗಳ ಅವಧಿಯಲ್ಲಿ ಸುಮಾರು ೨.೫೦ ಕೋಟಿ ರೂ. ಬಾಕಿ ಹಣವನ್ನು ನಗರಪಾಲಿಕೆಗೆ ಪಾವತಿಸಿದ್ದಾರೆ.
ಅಸಲು ಮನ್ನಾ ಮಾಡಿ: ಇದು ಜನರ ಹೊಸ ಬೇಡಿಕೆ. ಕಳೆದ ಹತ್ತಾರು ವರ್ಷಗಳಿಂದ ನಾನಾ ಕಾರಣಗಳಿಗಾಗಿ ನೀರಿನ ಕರ ಪಾವತಿಸಲಾಗಿಲ್ಲ. ಇದೀಗ ದಿಢೀರ್ ಎಂದು ಸಂಪೂರ್ಣ ಬಾಕಿ ಪಾವತಿಸಿಯೆಂದರೆ ಹಣವನ್ನು ಎಲ್ಲಿಂದ ತರುವುದು ಎಂದು ಪ್ರಶ್ನಿಸುತ್ತಿದ್ದಾರೆ.
ಕೋವಿಡ್ನಿಂದಾಗಿ ನಾವು ಎಲ್ಲವನ್ನೂ ಕಳೆದುಕೊಂಡಿದ್ದೇವೆ. ಇದೀಗ ಒಟ್ಟಿಗೆ ಸಾವಿರಾರು ರೂ. ಬಾಕಿ ಪಾವತಿಸಿ ಎಂದರೆ ನಮ್ಮಿಂದ ಸಾಧ್ಯವಿಲ್ಲ. ಹೀಗಾಗಿ ನೀರಿನ ಬಾಕಿಯ ಶೇ.೫೦ರಷ್ಟು ಹಣವನ್ನು ಮನ್ನಾ ಮಾಡಿ ಎಂದು ನಗರಪಾಲಿಕೆ ಅಧಿಕಾರಿಗಳಲ್ಲಿ ಹೊಸ ಬೇಡಿಕೆಯನ್ನು ಜನರು ಮುಂದಿಡುತ್ತಿದ್ದಾರೆ.
ಸಂಪರ್ಕ ಕಡಿತ: ಜನರ ಈ ಧೋರಣೆಯಿಂದ ಬೇಸತ್ತ ಅಧಿಕಾರಿಗಳು ಇದೀಗ ಕರ ಬಾಕಿ ಪಾವತಿಸದವರ ನೀರಿನ ಸಂಪರ್ಕವನ್ನು ಕಡಿತಗೊಳಿಸುವ ಕೆಲಸಕ್ಕೆ ಮುಂದಾಗಿದ್ದಾರೆ. ಆಯಾ ಬಡಾವಣೆಯ ಇಂಜಿನಿಯರ್ಗಳ ನೇತೃತ್ವದಲ್ಲಿ ನೀರಿನ ಸಂಪರ್ಕ ಕಡಿತಗೊಳಿಸುವ ಕೆಲಸವನ್ನು ಮುಂದುವರಿಸಲಾಗುತ್ತಿದೆ. ಈಗಲೂ ಕಾಲ ಮಿಂಚಿಲ್ಲ ಬಾಕಿ ಹಣವನ್ನು ಪಾವತಿಸಿದಲ್ಲಿ ಬಡ್ಡಿಯನ್ನು ಮನ್ನಾ ಮಾಡುವುದಾಗಿ ಅಧಿಕಾರಿಗಳು ಹೇಳುತ್ತಾರೆ.
ಜನರಿಗೆ ನೀರಿನ ಕರ ಹೊರೆಯಾಬಾರದು ಎಂಬ ಉದ್ದೇಶದಿಂದ ಬಡ್ಡಿ ಮನ್ನಾ ಮಾಡಲಾಗಿದೆ. ಆದರೂ ಜನರು ಯೋಜನೆಯನ್ನು ಸದುಪಯೋಗ ಪಡೆದುಕೊಳ್ಳುತ್ತಿಲ್ಲ. ಕೆಲವರು ಅಸಲು ಪಾವತಿಸಲು ಐದು ಕಂತುಗಳ ಬೇಡಿಕೆ ಇಟ್ಟಿದ್ದಾರೆ. ಆದರೆ, ಅದು ಸಾಧ್ಯವಾಗದ ಮಾತು. ಈಗಲಾದರೂ ಜನರು ಅಸಲು ಪಾವತಿಸಿ ಬಡ್ಡಿಯ ಹೊರೆಯನ್ನು ಕಡಿಮೆ ಮಾಡಿಕೊಳ್ಳಬೇಕು.
ಲಕ್ಷ್ಮೀಕಾಂತ ರೆಡ್ಡಿ, ಆಯುಕ್ತರು, ಮೈಸೂರು ಮಹಾನಗರಪಾಲಿಕೆ.
ನಂಜನಗೂಡು: ಆಳೆತ್ತರ ಬೆಳೆದು ನಿಂತಿದ್ದ ಕಬ್ಬಿನ ಬೆಳೆಗೆ ದುಷ್ಕರ್ಮಿಗಳು ಬೆಂಕಿ ಇಟ್ಟ ಪರಿಣಾಮ ಐದು ಎಕರೆಯಲ್ಲಿ ಬೆಳೆದಿದ್ದ ಕಬ್ಬು ಬೆಂಕಿಗಾಹುತಿಯಾಗಿರುವ…
ಮಹಾದೇಶ್ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ಬಿರುಗಾಳಿ ಸಹಿತ ಮಳೆಗೆ ಹಲವಾರು ರೈತರು ಬೆಳೆದಿದ್ದ 50ಕ್ಕೂ ಹೆಚ್ಚು…
ಮಹೇಂದ್ರ ಹಸಗೂಲಿ: ಗುಂಡ್ಲುಪೇಟೆ ತಾಲ್ಲೂಕು ವರದಿಗಾರರು ಗುಂಡ್ಲುಪೇಟೆ: ತಾಲ್ಲೂಕಿನಲ್ಲಿ ಬುಧವಾರ ಸುರಿದ ಬಿರುಗಾಳಿ ಮಳೆಗೆ ಬಾಲೆ ಬೆಳೆ ನಾಶವಾಗಿರುವ ಘಟನೆ…
ಬೆಂಗಳೂರು: ಬೌರಿಂಗ್ ಆಸ್ಪತ್ರೆ ಬಳಿ ಗೋಡೆ ಕುಸಿದು 7 ಮಂದಿ ಬಲಿಯಾಗಿದ್ದ ಪ್ರಕರಣದಲ್ಲಿ ಸಂಬಂಧಪಟ್ಟ ಎಂಜಿನಿಯರ್ ಅನ್ನು ಕೂಡಲೇ ಅಮಾನತು…
ಮಹೇಂದ್ರ ಹಸಗೂಲಿ: ಗುಂಡ್ಲುಪೇಟೆ ತಾಲ್ಲೂಕು ವರದಿಗಾರರು ಗುಂಡ್ಲುಪೇಟೆ: ತಾಲ್ಲೂಕಿನ ಬೆಳವಾಡಿ ಗ್ರಾಮದಲ್ಲಿ ನಡೆದಿದ್ದ ಮನೆ ಕಳ್ಳತನ ಪ್ರಕರಣವನ್ನು ಭೇದಿಸಿ, ಇಬ್ಬರು…
ಬೆಂಗಳೂರು: ಅಧಿಕಾರ ಹಂಚಿಕೆಯ ಬಗ್ಗೆ ಯಾವುದೇ ಗೊಂದಲ ಇಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ. ರಾಜ್ಯದಲ್ಲಿನ ರಾಜಕೀಯ ಗೊಂದಲಗಳನ್ನು ಆದಷ್ಟು…