ಮೈಸೂರು

ಬಾಲಕ ಮತ್ತು ಕಾರಂತಜ್ಜ

ಪ್ರಸನ್ನ ಸಂತೇಕಡೂರು
pksgoldenhelix@gmail.com

ಬಹಳಷ್ಟು ಸಲ ಲೇಖಕನ ಬರಹ ಮತ್ತು ಬದುಕು ಒಂದರ ಪ್ರತಿಬಿಂಬ ಇನ್ನೊಂದು ಅನ್ನುವಷ್ಟರ ಮಟ್ಟಿಗೆ ಬೇರ್ಪಡಿಸಲಾಗದಷ್ಟು ಸಯಾಮಿ ಅವಳಿಗಳ ರೀತಿ ಇರುವುದನ್ನ ಕಾಣಬಹುದು ಅಥವಾ ಗಂಡಭೇರುಂಡ ಪಕ್ಷಿಯ ರೀತಿ ಎರಡು ತಲೆ ಒಂದೇ ದೇಹವಾಗಿರಬಹುದು. ಇದು ಲೇಖಕನ ಸೃಜನಶೀಲ ಮತ್ತು ಕಲ್ಪನಾ ಶಕ್ತಿಯ ಮೇಲೂ ಕೆಲವೊಮ್ಮೆ ಅವಲಂಬಿತವಾಗಿ ಬರಹ ಮತ್ತು ಬದುಕು ಬೇರೆಯೇ ಆಗಿ ರೂಪುಗೊಳ್ಳಬಹುದು. ಸುಮಾರು ವರ್ಷಗಳ ಹಿಂದೆ ಡಾ. ಶಿವರಾಮ ಕಾರಂತರು ನಮ್ಮ ಶಾಲೆಗೆ ಬಂದಿದ್ದರು. ಅವರ ಜೊತೆ ಒಂದು ಫೋಟೋ ತೆಗೆಸಿಕೊಳ್ಳಬೇಕೆಂಬ ಆಸೆ ನನಗೆ ತುಂಬಾ ಇತ್ತು. ಅದು ಸಾಧ್ಯವಾಗಲಿಲ್ಲ. ಆಮೇಲೆ ಶಿವಮೊಗ್ಗದ ಸಹ್ಯಾದ್ರಿ ವಿಜ್ಞಾನ ಕಾಲೇಜಿನಲ್ಲಿ ಓದುತ್ತಿರುವಾಗ ನಮಗೆ ಅವರ ‘ಅರಸಿಕರಲ್ಲ’ ಕಾದಂಬರಿ ಪಠ್ಯದಲ್ಲಿತ್ತು. ನಾನು ಆ ಕಾದಂಬರಿ ಬಿಟ್ಟು ‘ಅಪೂರ್ವ ಪಶ್ಚಿಮ’ ಎಂಬ ಅವರ ಇನ್ನೊಂದು ಕಾದಂಬರಿ ಓದುತ್ತ ಅದರ ಶೀರ್ಷಿಕೆಗೆ ಸೋತು ಹೋದೆ.

ಕೆಲವೊಮ್ಮೆ ಶಿವಮೊಗ್ಗದ ಗೋಪಾಳ, ಅನುಪಿನಕಟ್ಟೆಯ ಕೆರೆಯ ಹತ್ತಿರ ಕುಳಿತು ಪಶ್ಚಿಮದಲ್ಲಿ ಸೂರ್ಯ ಮುಳುಗುವುದನ್ನ ನೋಡುತ್ತ ಪಾಶ್ಚಾತ್ಯ ದೇಶಗಳು ಅದೆಷ್ಟೂ ಅಪೂರ್ವವಾಗಿರಬಹುದು ಎಂದು ಯೋಚಿಸುತ್ತಿದ್ದೆ. ಇನ್ನು ಕೆಲವೊಮ್ಮೆ ಶಿವಮೊಗ್ಗದ ಗುಡ್ಡೆ ಮರಡಿಯ ಮೇಲೆ ಕುಳಿತು ಶಾಂತವಾಗಿ ಹರಿಯುವ ತುಂಗಾ ನದಿಯನ್ನ ನೋಡುತ್ತ ಪಾಶ್ಚಾತ್ಯ ದೇಶಗಳ ಸೌಂದರ್ಯವನ್ನ ಕಲ್ಪಿಸಿಕೊಳ್ಳುತ್ತಿದ್ದೆ. ಅಲ್ಲಿ ನದಿಯ ತಿರುವಿನಲ್ಲಿ ಹಾರುವ ಬೆಳ್ಳಕ್ಕಿಗಳ ಸಾಲು ರಾಷ್ಟ್ರಕವಿ ಕುವೆಂಪುರವರ ‘ದೇವರು ರುಜು ಮಾಡಿದನು’ ಕವಿತೆಯನ್ನು ಜ್ಞಾಪಕಕ್ಕೆ ತರುತಿತ್ತು. ಕೆಲವು ಸಲ ನಮ್ಮ ಸಂತೇಕಡೂರಿನ ಕೆರೆಯ ಹತ್ತಿರ ಇರುವ ಹಳೆಯ ಈಶ್ವರನ ಗುಡಿಯ ಹಿಂದೆ ಅಡಿಕೆ ಮರಗಳ ಸಂದಿಯಲ್ಲಿ ಮುಳುಗುವ ಕೆಂಪಾದ ಸೂರ್ಯನ ಕಿರಣಗಳನ್ನು ನೋಡುತ್ತ ಅಮೇರಿಕಾದ ಬಗ್ಗೆ ಯೋಚಿಸುತ್ತಿದ್ದೆ.
ಮುಂದೆ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಎಂ.ಎಸ್ಸಿ, ಪಿಎಚ್.ಡಿ. ಮುಗಿಸಿಕೊಂಡು ಉನ್ನತ ಸಂಶೋಧನೆಗೆ ಅಮೆರಿಕಾಗೆ ಹೋದಾಗ ಅಲ್ಲಿ ವರ್ಜಿನೀಯಾ ಸಂಸ್ಥಾನದ ರಿಚ್ಮಂಡ್ ನಗರದಲ್ಲಿ ಸಹೋದ್ಯೋಗಿ ಆಗಿ ಸಿಕ್ಕವನೇ ನನ್ನ ಕಾದಂಬರಿಯ ಕಥಾನಾಯಕ ‘ಸು’. ಇಲ್ಲಿ ‘ಸು’ ನನ್ನ ಬದುಕಿನಲ್ಲಿ ಬಂದು ಹೋದವನು. ಅದೇ ರಿಚ್ಮಂಡ್ ನಗರದ ಮಾನ್ಯುಮೆಂಟ್ ರಸ್ತೆಯಲ್ಲಿ ಕಾರಿನಲ್ಲಿ ಹೋಗುವಾಗ ಅರ್ಥರ್ ಆಶ್ ಎಂಬ ಜಗದ್ವಿಖ್ಯಾತ ಟೆನಿಸ್ ಆಟಗಾರನ ಪ್ರತಿಮೆ ನನ್ನ ಅಸ್ಥಿಪಂಜರದ ಬಾಲಕ ಕತೆಗೆ ಪ್ರೇರಣೆಯಾಯಿತು. ಟೆಕ್ಸಾಸ್ ಸಂಸ್ಥಾನದ ಡಲ್ಲಾಸ್ ನಗರದಲ್ಲಿ ಒಂದು ವರ್ಷ ಇದ್ದೆ. ಅಲ್ಲಿ ನನ್ನ ಅಪಾರ್ಟ್ಮೆಂಟ್ ಸಂಕೀರ್ಣದಲ್ಲಿದ್ದ ಇನ್ನೊಬ್ಬ ಪರಿಚಿತ ವ್ಯಕ್ತಿ ನನ್ನ ಒಲವೇ ಜೀವನ ಸಾಕ್ಷಾತ್ಕಾರ ಕತೆಯ ನಾಯಕನಾದ. ಅದಕ್ಕೆ ಉತ್ತರ ಕ್ಯಾಲಿಫೋರ್ನಿಯಾ ಸ್ವರ್ಣಸೇತು ಕನ್ನಡ ಬಳಗದ ಕಥಾಸ್ಪರ್ಧೆಯಲ್ಲಿ ಮೊದಲ ಬಹುಮಾನ ಕೂಡ ಬಂತು.
ನಾನು ಅಮೆರಿಕಾದಿಂದ ವಾಪಸು ಮೈಸೂರಿಗೆ ಬಂದ ಮೇಲೆ ಬಾಲ್ಯದಲ್ಲಿ ಕಾರಂತರ ಜೊತೆ ಫೋಟೋ ತೆಗೆಸಿಕೊಳ್ಳಲಾಗದ ವಿಷಯ ನನ್ನನ್ನು ತುಂಬಾ ಕಾಡುತಿತ್ತು. ಅದೇ ಸಮಯದಲ್ಲಿ ನನ್ನ ಬಾಲ್ಯದ ಗೆಳತಿಯೊಬ್ಬಳು ಕಾರಂತರು ನಮ್ಮ ಶಾಲೆಗೆ ಬಂದಾಗ ತೆಗೆಸಿಕೊಂಡಿದ್ದ ಆ ಫೋಟೋವನ್ನು ಕಳಿಸದಳು. ಆ ಫೋಟೋದಲ್ಲಿ ಅವಳನ್ನು ಸೇರಿ ನನ್ನ ಕೆಲವು ಸಹಪಾಠಿಗಳು, ಶಿಕ್ಷಕಿಯರು ಇದ್ದರು. ನಾನಿಲ್ಲದ ಆ ಫೋಟೋವನ್ನ ನೋಡುತ್ತ ‘ಬಾಲಕ ಮತ್ತು ಕಾರಂತಜ್ಜ’ ಕತೆ ಬರೆದು ಫೇಸ್ಬುಕ್ ಗೋಡೆಗೆ ಹಾಕಿದೆ. ತಕ್ಷಣವೇ ಆ ಕತೆಯನ್ನ ಓದಿ ಹಲವಾರು ಜನ ಕರೆ ಮಾಡಲು ಆರಂಭಿಸಿದರು. ಆ ಬಾಲಕ ಯಾರು? ಎಂದು ಕೇಳಲು ಶುರು ಮಾಡಿದರು. ಚಾಮರಾಜನಗರದ ಸಹೃದಯ ಸಮಾಜಮುಖಿ ಹಿರಿಯರಾದ ವೆಂಕಟರಾಜು ಕೃಷ್ಣಮೂರ್ತಿಯವರು ಈ ಕತೆಯನ್ನ ಚಲನಚಿತ್ರ ಮಾಡಿಸಿದರೆ ತುಂಬಾ ಒಳ್ಳೆಯದಾಗುತ್ತದೆ ಎಂದು ತಿಳಿಸಿ ತಮ್ಮ ರಂಗವಾಹಿನಿ ಪತ್ರಿಕೆಯಲ್ಲಿ ಅದನ್ನ ಪ್ರಕಟಿಸಿದರು. ಈಗ ಆ ಬಾಲಕ ಬೆಳೆದು ದೊಡ್ಡವನಾಗಿದ್ದಾನೆ. ಕಾರಂತಜ್ಜ ಮಣ್ಣಿಗೆ ಮರಳಿದ್ದಾರೆ. ಇಲ್ಲಿ ಬರಹ ಮತ್ತು ಬದುಕು ಬೇರೆಯಲ್ಲ ಎಂಬುದು ತಿಳಿಯುತ್ತದೆ.

andolanait

Recent Posts

ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್‌ ಸೇರಿದ ಟೇಲ್ಸ್ ಬೈ ಪರಿ ಕೃತಿಯ ಪುಟ್ಟ ಲೇಖಕಿ ಪರಿಣಿತಾ

ಬೆಂಗಳೂರು: ಸಣ್ಣ ವಯಸ್ಸಿನಿಂದಲೇ ಬರವಣಿಗೆ ರೂಢಿಸಿಕೊಂಡು 9ನೇ ವಯಸ್ಸಿಗೆ 'ಟೇಲ್ಸ್ ಬೈ ಪರಿ' ಪುಸ್ತಕವನ್ನು ಬರೆದು ಹೆಸರು ಮಾಡಿರುವ ನಮ್ಮ…

14 mins ago

ಅಕ್ರಮ ನಿವಾಸಿಗಳಿಗೆ ಮನೆ: ಸರ್ಕಾರದ ವಿರುದ್ಧ ವಿ.ಸೋಮಣ್ಣ ಆಕ್ರೋಶ

ನವದೆಹಲಿ: ಕೋಗಿಲು ಲೇಔಟ್‌ನಲ್ಲಿ ಅಕ್ರಮ ನಿವಾಸಿಗಳಿಗೆ ಮನೆ ನೀಡುತ್ತಿದ್ದಾರೆ. ಇದು ರಾಜ್ಯ ಸರ್ಕಾರದ ದಡ್ಡತನದ ಪರಮಾವಧಿ ಎಂದು ಕೇಂದ್ರ ಸಚಿವ…

32 mins ago

ಗುಂಡ್ಲುಪೇಟೆ: ಬರಗಿ ಗ್ರಾಮದಲ್ಲಿ ಕಾಡು ಬೆಕ್ಕು ಪತ್ತೆ

ಗುಂಡ್ಲುಪೇಟೆ: ತಾಲ್ಲೂಕಿನ ಬರಗಿ ಗ್ರಾಮದಲ್ಲಿ ಕಾಣಿಸಿಕೊಂಡಿ ಕಾಡುಬೆಕ್ಕನ್ನು ಅರಣ್ಯಾಧಿಕಾರಿಗಳು ಸುರಕ್ಷಿತವಾಗಿ ರಕ್ಷಣೆ ಮಾಡಿ ಕಾಡಿಗೆ ಬಿಟ್ಟಿದ್ದಾರೆ. ತಾಲ್ಲೂಕಿನ ಬರಗಿ ಗ್ರಾಮದಲ್ಲಿ…

38 mins ago

ಗುಂಡ್ಲುಪೇಟೆ: ಚಿರತೆ ದಾಳಿಗೆ ಮೇಕೆ ಹಾಗೂ ಕರು ಬಲಿ

ಗುಂಡ್ಲುಪೇಟೆ: ಚಿರತೆ ದಾಳಿಗೆ ಮೇಕೆ ಬಲಿಯಾಗಿರುವ ಘಟನೆ ತಾಲ್ಲೂಕಿನ ಬೆಟ್ಟದಮಾದಳ್ಳಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಶಂಕರ್‌ ಎಂಬುವವರು ತಮಗೆ ಸೇರಿದ…

41 mins ago

ಹೊಸ ವರ್ಷಾಚರಣೆ ನಡುವೆಯೇ ರಾಜ್ಯದ ಈ ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ

ಬೆಂಗಳೂರು: ಹೊಸ ವರ್ಷಾಚರಣೆ ನಡುವೆಯೇ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.…

52 mins ago

ಚಿತ್ರದುರ್ಗ ಬಸ್‌ ದುರಂತ ಪ್ರಕರಣ: ಮತ್ತೋರ್ವ ಗಾಯಾಳು ಸಾವು

ಚಿತ್ರದುರ್ಗ: ಚಿತ್ರದುರ್ಗ ಬಸ್‌ ದುರಂತದಲ್ಲಿ ಗಾಯಗೊಂಡಿದ್ದ ಮತ್ತೋರ್ವ ಗಾಯಾಳು ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದು, ಸಾವಿನ ಸಂಖ್ಯೆ 8ಕ್ಕೇ ಏರಿಕೆಯಾಗಿದೆ. ಮೃತರನ್ನು…

55 mins ago