ಮೈಸೂರು

ಬಾಲಕ ಮತ್ತು ಕಾರಂತಜ್ಜ

ಪ್ರಸನ್ನ ಸಂತೇಕಡೂರು
pksgoldenhelix@gmail.com

ಬಹಳಷ್ಟು ಸಲ ಲೇಖಕನ ಬರಹ ಮತ್ತು ಬದುಕು ಒಂದರ ಪ್ರತಿಬಿಂಬ ಇನ್ನೊಂದು ಅನ್ನುವಷ್ಟರ ಮಟ್ಟಿಗೆ ಬೇರ್ಪಡಿಸಲಾಗದಷ್ಟು ಸಯಾಮಿ ಅವಳಿಗಳ ರೀತಿ ಇರುವುದನ್ನ ಕಾಣಬಹುದು ಅಥವಾ ಗಂಡಭೇರುಂಡ ಪಕ್ಷಿಯ ರೀತಿ ಎರಡು ತಲೆ ಒಂದೇ ದೇಹವಾಗಿರಬಹುದು. ಇದು ಲೇಖಕನ ಸೃಜನಶೀಲ ಮತ್ತು ಕಲ್ಪನಾ ಶಕ್ತಿಯ ಮೇಲೂ ಕೆಲವೊಮ್ಮೆ ಅವಲಂಬಿತವಾಗಿ ಬರಹ ಮತ್ತು ಬದುಕು ಬೇರೆಯೇ ಆಗಿ ರೂಪುಗೊಳ್ಳಬಹುದು. ಸುಮಾರು ವರ್ಷಗಳ ಹಿಂದೆ ಡಾ. ಶಿವರಾಮ ಕಾರಂತರು ನಮ್ಮ ಶಾಲೆಗೆ ಬಂದಿದ್ದರು. ಅವರ ಜೊತೆ ಒಂದು ಫೋಟೋ ತೆಗೆಸಿಕೊಳ್ಳಬೇಕೆಂಬ ಆಸೆ ನನಗೆ ತುಂಬಾ ಇತ್ತು. ಅದು ಸಾಧ್ಯವಾಗಲಿಲ್ಲ. ಆಮೇಲೆ ಶಿವಮೊಗ್ಗದ ಸಹ್ಯಾದ್ರಿ ವಿಜ್ಞಾನ ಕಾಲೇಜಿನಲ್ಲಿ ಓದುತ್ತಿರುವಾಗ ನಮಗೆ ಅವರ ‘ಅರಸಿಕರಲ್ಲ’ ಕಾದಂಬರಿ ಪಠ್ಯದಲ್ಲಿತ್ತು. ನಾನು ಆ ಕಾದಂಬರಿ ಬಿಟ್ಟು ‘ಅಪೂರ್ವ ಪಶ್ಚಿಮ’ ಎಂಬ ಅವರ ಇನ್ನೊಂದು ಕಾದಂಬರಿ ಓದುತ್ತ ಅದರ ಶೀರ್ಷಿಕೆಗೆ ಸೋತು ಹೋದೆ.

ಕೆಲವೊಮ್ಮೆ ಶಿವಮೊಗ್ಗದ ಗೋಪಾಳ, ಅನುಪಿನಕಟ್ಟೆಯ ಕೆರೆಯ ಹತ್ತಿರ ಕುಳಿತು ಪಶ್ಚಿಮದಲ್ಲಿ ಸೂರ್ಯ ಮುಳುಗುವುದನ್ನ ನೋಡುತ್ತ ಪಾಶ್ಚಾತ್ಯ ದೇಶಗಳು ಅದೆಷ್ಟೂ ಅಪೂರ್ವವಾಗಿರಬಹುದು ಎಂದು ಯೋಚಿಸುತ್ತಿದ್ದೆ. ಇನ್ನು ಕೆಲವೊಮ್ಮೆ ಶಿವಮೊಗ್ಗದ ಗುಡ್ಡೆ ಮರಡಿಯ ಮೇಲೆ ಕುಳಿತು ಶಾಂತವಾಗಿ ಹರಿಯುವ ತುಂಗಾ ನದಿಯನ್ನ ನೋಡುತ್ತ ಪಾಶ್ಚಾತ್ಯ ದೇಶಗಳ ಸೌಂದರ್ಯವನ್ನ ಕಲ್ಪಿಸಿಕೊಳ್ಳುತ್ತಿದ್ದೆ. ಅಲ್ಲಿ ನದಿಯ ತಿರುವಿನಲ್ಲಿ ಹಾರುವ ಬೆಳ್ಳಕ್ಕಿಗಳ ಸಾಲು ರಾಷ್ಟ್ರಕವಿ ಕುವೆಂಪುರವರ ‘ದೇವರು ರುಜು ಮಾಡಿದನು’ ಕವಿತೆಯನ್ನು ಜ್ಞಾಪಕಕ್ಕೆ ತರುತಿತ್ತು. ಕೆಲವು ಸಲ ನಮ್ಮ ಸಂತೇಕಡೂರಿನ ಕೆರೆಯ ಹತ್ತಿರ ಇರುವ ಹಳೆಯ ಈಶ್ವರನ ಗುಡಿಯ ಹಿಂದೆ ಅಡಿಕೆ ಮರಗಳ ಸಂದಿಯಲ್ಲಿ ಮುಳುಗುವ ಕೆಂಪಾದ ಸೂರ್ಯನ ಕಿರಣಗಳನ್ನು ನೋಡುತ್ತ ಅಮೇರಿಕಾದ ಬಗ್ಗೆ ಯೋಚಿಸುತ್ತಿದ್ದೆ.
ಮುಂದೆ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಎಂ.ಎಸ್ಸಿ, ಪಿಎಚ್.ಡಿ. ಮುಗಿಸಿಕೊಂಡು ಉನ್ನತ ಸಂಶೋಧನೆಗೆ ಅಮೆರಿಕಾಗೆ ಹೋದಾಗ ಅಲ್ಲಿ ವರ್ಜಿನೀಯಾ ಸಂಸ್ಥಾನದ ರಿಚ್ಮಂಡ್ ನಗರದಲ್ಲಿ ಸಹೋದ್ಯೋಗಿ ಆಗಿ ಸಿಕ್ಕವನೇ ನನ್ನ ಕಾದಂಬರಿಯ ಕಥಾನಾಯಕ ‘ಸು’. ಇಲ್ಲಿ ‘ಸು’ ನನ್ನ ಬದುಕಿನಲ್ಲಿ ಬಂದು ಹೋದವನು. ಅದೇ ರಿಚ್ಮಂಡ್ ನಗರದ ಮಾನ್ಯುಮೆಂಟ್ ರಸ್ತೆಯಲ್ಲಿ ಕಾರಿನಲ್ಲಿ ಹೋಗುವಾಗ ಅರ್ಥರ್ ಆಶ್ ಎಂಬ ಜಗದ್ವಿಖ್ಯಾತ ಟೆನಿಸ್ ಆಟಗಾರನ ಪ್ರತಿಮೆ ನನ್ನ ಅಸ್ಥಿಪಂಜರದ ಬಾಲಕ ಕತೆಗೆ ಪ್ರೇರಣೆಯಾಯಿತು. ಟೆಕ್ಸಾಸ್ ಸಂಸ್ಥಾನದ ಡಲ್ಲಾಸ್ ನಗರದಲ್ಲಿ ಒಂದು ವರ್ಷ ಇದ್ದೆ. ಅಲ್ಲಿ ನನ್ನ ಅಪಾರ್ಟ್ಮೆಂಟ್ ಸಂಕೀರ್ಣದಲ್ಲಿದ್ದ ಇನ್ನೊಬ್ಬ ಪರಿಚಿತ ವ್ಯಕ್ತಿ ನನ್ನ ಒಲವೇ ಜೀವನ ಸಾಕ್ಷಾತ್ಕಾರ ಕತೆಯ ನಾಯಕನಾದ. ಅದಕ್ಕೆ ಉತ್ತರ ಕ್ಯಾಲಿಫೋರ್ನಿಯಾ ಸ್ವರ್ಣಸೇತು ಕನ್ನಡ ಬಳಗದ ಕಥಾಸ್ಪರ್ಧೆಯಲ್ಲಿ ಮೊದಲ ಬಹುಮಾನ ಕೂಡ ಬಂತು.
ನಾನು ಅಮೆರಿಕಾದಿಂದ ವಾಪಸು ಮೈಸೂರಿಗೆ ಬಂದ ಮೇಲೆ ಬಾಲ್ಯದಲ್ಲಿ ಕಾರಂತರ ಜೊತೆ ಫೋಟೋ ತೆಗೆಸಿಕೊಳ್ಳಲಾಗದ ವಿಷಯ ನನ್ನನ್ನು ತುಂಬಾ ಕಾಡುತಿತ್ತು. ಅದೇ ಸಮಯದಲ್ಲಿ ನನ್ನ ಬಾಲ್ಯದ ಗೆಳತಿಯೊಬ್ಬಳು ಕಾರಂತರು ನಮ್ಮ ಶಾಲೆಗೆ ಬಂದಾಗ ತೆಗೆಸಿಕೊಂಡಿದ್ದ ಆ ಫೋಟೋವನ್ನು ಕಳಿಸದಳು. ಆ ಫೋಟೋದಲ್ಲಿ ಅವಳನ್ನು ಸೇರಿ ನನ್ನ ಕೆಲವು ಸಹಪಾಠಿಗಳು, ಶಿಕ್ಷಕಿಯರು ಇದ್ದರು. ನಾನಿಲ್ಲದ ಆ ಫೋಟೋವನ್ನ ನೋಡುತ್ತ ‘ಬಾಲಕ ಮತ್ತು ಕಾರಂತಜ್ಜ’ ಕತೆ ಬರೆದು ಫೇಸ್ಬುಕ್ ಗೋಡೆಗೆ ಹಾಕಿದೆ. ತಕ್ಷಣವೇ ಆ ಕತೆಯನ್ನ ಓದಿ ಹಲವಾರು ಜನ ಕರೆ ಮಾಡಲು ಆರಂಭಿಸಿದರು. ಆ ಬಾಲಕ ಯಾರು? ಎಂದು ಕೇಳಲು ಶುರು ಮಾಡಿದರು. ಚಾಮರಾಜನಗರದ ಸಹೃದಯ ಸಮಾಜಮುಖಿ ಹಿರಿಯರಾದ ವೆಂಕಟರಾಜು ಕೃಷ್ಣಮೂರ್ತಿಯವರು ಈ ಕತೆಯನ್ನ ಚಲನಚಿತ್ರ ಮಾಡಿಸಿದರೆ ತುಂಬಾ ಒಳ್ಳೆಯದಾಗುತ್ತದೆ ಎಂದು ತಿಳಿಸಿ ತಮ್ಮ ರಂಗವಾಹಿನಿ ಪತ್ರಿಕೆಯಲ್ಲಿ ಅದನ್ನ ಪ್ರಕಟಿಸಿದರು. ಈಗ ಆ ಬಾಲಕ ಬೆಳೆದು ದೊಡ್ಡವನಾಗಿದ್ದಾನೆ. ಕಾರಂತಜ್ಜ ಮಣ್ಣಿಗೆ ಮರಳಿದ್ದಾರೆ. ಇಲ್ಲಿ ಬರಹ ಮತ್ತು ಬದುಕು ಬೇರೆಯಲ್ಲ ಎಂಬುದು ತಿಳಿಯುತ್ತದೆ.

andolanait

Recent Posts

ಮಡಿಕೇರಿ | ಟ್ರಾಕ್ಟರ್ ಮಗುಚಿ ಕಾರ್ಮಿಕ ಸಾವು

ಸಿದ್ದಾಪುರ : ವಾಹನ ಚಲಾಯಿಸುವ ಆಸೆಯಿಂದ ಟ್ರಾಕ್ಟರ್ ಚಲಾಯಿಸಿದ ಕಾರ್ಮಿಕ ನಿಯಂತ್ರಣ ತಪ್ಪಿ ಹಳ್ಳಕ್ಕೆ ಮಗುಚಿದ ಪರಿಣಾಮ ಸ್ಥಳದಲ್ಲೆ ಮೃತ…

9 mins ago

ಬುದನೂರು ಉತ್ಸವ | ಹೆಲಿಕಾಪ್ಟರ್‌ ಜಾಯ್‌ ರೈಡ್‌ಗೆ ಚಾಲನೆ

ಮಂಡ್ಯ : ಜಿಲ್ಲೆಯ ಯುವ ಜನತೆಗೆ ನಗರದ ಚಿತ್ರಣವನ್ನು ಪ್ರದರ್ಶಿಸುವ ನಿಟ್ಟಿನಲ್ಲಿ ಹೆಲಿಕಾಪ್ಟರ್‌ ಜಾಯ್‌ ರೈಡ್‌ಅನ್ನು ಆಯೋಜಿಸಲಗಿದ್ದು, ಮೂರು ದಿನಗಳ…

26 mins ago

ಟಾಕ್ಸಿಕ್ ಟೀಸರ್ ಬಿಡುಗಡೆ : ಡಬಲ್‌ ಲುಕ್‌ನಲ್ಲಿ ಅಬ್ಬರಿಸಿದ ರಾಕಿಂಗ್‌ ಸ್ಟಾರ್ ರಾಯ‌

ಬೆಂಗಳೂರು : ರಾಕಿಂಗ್ ಸ್ಟಾರ್ ಯಶ್ ಅಭಿನಯದ ಟಾಕ್ಸಿಕ್ ಚಿತ್ರದ ಟೀಸರ್ ಇಂದು(ಫೆ.20) ಬಿಡುಗಡೆಯಾಗಿದೆ. 2 ನಿಮಿಷಗಳ ಈ ಟೀಸರ್…

47 mins ago

ಓದುಗರ ಪತ್ರ: ಶಾಲಾ ದಾಖಲಾತಿ ವಯೋಮಿತಿ ಸಮಸ್ಯೆ ನಿವಾರಿಸಿ

ಮಕ್ಕಳನ್ನು ಒಂದನೇ ತರಗತಿಗೆ ಪ್ರಸಕ್ತ ಸಾಲಿಗೆ ದಾಖಲಿಸುವ ವಯೋಮಿತಿಯನ್ನು ಆರು ವರ್ಷಗಳಿಗೆ ನಿಗದಿಗೊಳಿಸಿ ಶಾಲಾ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ.…

5 hours ago

ಓದುಗರ ಪತ್ರ: ಡ್ರಗ್ಸ್ ಜಾಲ ಪತ್ತೆಗೆ ಡ್ರೋನ್ ಕಾರ್ಯಾಚರಣೆ ಶ್ಲಾಘನೀಯ

ಮೈಸೂರಿನಲ್ಲಿ ಸಮಾಜಘಾತುಕ ಶಕ್ತಿಗಳ ದುಷ್ಕೃತ್ಯ ಮತ್ತು ಡ್ರಗ್ಸ್ ಜಾಲ ಪ್ರಕರಣಗಳ ಪತ್ತೆಗೆ ಡ್ರೋನ್ ಕಾರ್ಯಾಚರಣೆ ನಡೆಸಲು ಮೈಸೂರು ನಗರ ಪೊಲೀಸರು…

5 hours ago

ಬಾ.ನಾ.ಸುಬ್ರಹ್ಮಣ್ಯ ಅವರ ವಾರದ ಅಂಕಣ: ಸರ್ಕಾರ ಗುಣಮಟ್ಟದ ಚಲನಚಿತ್ರಗಳಿಗೆ ನೀಡುವ ಸಹಾಯಧನದ ಆಚೆ ಈಚೆ

ಗುಣಮಟ್ಟದ ಕನ್ನಡ ಮತ್ತು ಪ್ರಾದೇಶಿಕ ಭಾಷಾ ಚಿತ್ರಗಳಿಗೆ ಸರ್ಕಾರ ನೀಡುತ್ತಿರುವ ಸಹಾಯಧನವನ್ನು ೨೦೨೬ನೇ ಸಾಲಿನಿಂದ ರದ್ದುಪಡಿಸಲು ಸರ್ಕಾರ ನಿರ್ಧರಿಸಿದೆ ಎನ್ನುವುದು…

5 hours ago