ಮಂಡ್ಯ

ಸಾಹಿತ್ಯ ಸಮ್ಮೇಳನ| ಸಮ್ಮೇಳನಾಧ್ಯಕ್ಷರ ಮೆರವಣಿಗೆಗೆ ವರ್ಣರಂಜಿತ ಆರಂಭವಿರಲಿ : ಶಾಸಕ ಮಧು ಜಿ.ಮಾದೇಗೌಡ

ಮಂಡ್ಯ: ‘ಸಕ್ಕರೆ ನಗರ’ ಮಂಡ್ಯದಲ್ಲಿ ನಡೆಯಲಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಮ್ಮೇಳನದ ಸರ್ವಾಧ್ಯಕ್ಷರ ಮೆರವಣಿಗೆಗೆ ವರ್ಣರಂಜಿತ ಆರಂಭವಿರಲಿ ಎಂದು ಮೆರವಣಿಗೆ ಸಮಿತಿ ಅಧ್ಯಕ್ಷರೂ ಆದ ವಿಧಾನ ಪರಿಷತ್ತಿನ ಶಾಸಕ ಮಧು ಜಿ.ಮಾದೇಗೌಡ ತಿಳಿಸಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ‘ಮೆರವಣಿಗೆ ಸಮಿತಿ’ ಸಭೆ ನಡೆಸಿ ಮಾತನಾಡಿದ ಅವರು, ಸಮ್ಮೇಳನಾಧ್ಯಕ್ಷರಿಗೆ ಗೌರವ ಸಲ್ಲಿಸುವುದೆಂದರೆ ಕನ್ನಡ ನಾಡು-ನುಡಿ ಸಾಹಿತ್ಯಕ್ಕೆ ಗೌರವ ಸಲ್ಲಿಸಿದಂತೆ. ಹಾಗಾಗಿ, ಮೆರವಣಿಗೆಯನ್ನು ಯಾವುದೇ ಲೋಪವಿಲ್ಲದಂತೆ ಅರ್ಥಪೂರ್ಣ, ಆಕರ್ಷಕ, ಮತ್ತು ವೈಭವಯುತವಾಗಿ ಆಯೋಜಿಸಬೇಕು. ಮೆರವಣಿಗೆಯ ಯಶಸ್ಸು ಸಮ್ಮೇಳನದ ಯಶಸ್ಸು ಕೂಡ ಆಗಲಿದೆ ಎಂದು ಹೇಳಿದರು.
ಮೆರವಣಿಗೆ ಆರಂಭ
ನಗರದ ಸರ್ ಎಂ.ವಿಶ್ವೇಶ್ವರಯ್ಯರವರ ಪ್ರತಿಮೆ ಮುಂಭಾಗದಿಂದ ಸಮ್ಮೇಳನಾಧ್ಯಕ್ಷರ ಮೆರವಣಿಗೆ ಆರಂಭಿಸಬೇಕು. ಆರಂಭ ಸ್ಥಳದಿಂದ ಮುಖ್ಯ ವೇದಿಕೆವರೆಗೆ ಸುಮಾರು 6 ಕಿ.ಮೀ ದೂರವಿದ್ದು, ಕ್ರಮಿಸಲು 3 ರಿಂದ 4 ಗಂಟೆ ಸಮಯ ತೆಗೆದುಕೊಳ್ಳಲಿದೆ. ಕನ್ನಡ ಭಾಷೆಯನ್ನು ಮೆರೆಸುವಂತೆ ಮೆರವಣಿಗೆ ಇರಲಿದ್ದು ಸಂಪೂರ್ಣ ಕನ್ನಡ ಮಯವಾಗಿರಲಿದೆ. ಮೆರವಣಿಗೆ ಸಾಗುವ ದಾರಿಯುದ್ದಕ್ಕೂ ರಸ್ತೆ ಇಕ್ಕೆಲಗಳಲ್ಲಿ ಕನ್ನಡ ಬಾವುಟಗಳಿಂದ ಸಿಂಗಾರ ಮಾಡುವುದು ಹಾಗೂ ಕುಡಿಯುವ ನೀರು, ಕಬ್ಬಿನ ರಸ, ಮಜ್ಜಿಗೆ ಹಾಗೂ ಪಾನಕ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದರು.
ಜಿಲ್ಲೆಯ ಕಲಾತಂಡಗಳಿಗೆ ಆದ್ಯತೆ
ಕನ್ನಡದ ಅಸ್ಮಿತೆ ಸಾರುವಂತೆ ಸಮ್ಮೇಳಾನಾಧ್ಯಕ್ಷರ ರಥ ಅಲಂಕರಿಸಲಾಗುವುದು. ಮೆರವಣಿಗೆಯಲ್ಲಿ ಮಂಡ್ಯ ಜಿಲ್ಲೆ, ಹೊರ ಜಿಲ್ಲೆ, ಗಡಿನಾಡು ಜಿಲ್ಲೆ ಹಾಗೂ ಹೊರ ರಾಜ್ಯಗಳ ಕಲಾತಂಡಗಳಿಗೂ ಅವಕಾಶ ಕಲ್ಪಿಸಲಾಗುವುದು. ಕೀಲು ಕುದುರೆ, ಕರಡಿ ಮಜಲು, ಪೂಜಾ ಕುಣಿತ, ಚಂಡೆ ಕುಣಿತ, ತಮಟೆ, ಡೊಳ್ಳು ಕುಣಿತ, ಕೊಂಬು ಕಹಳೆ ಸೇರಿದಂತೆ ವಿವಿಧ ಪ್ರಕಾರಗಳ ಜನಪದ ಕಲಾವಿದರ ದಂಡು ಮೆರವಣಿಗೆಗೆ ಉತ್ಸಾಹ ಮತ್ತು ಶಕ್ತಿ ತುಂಬಲಿದ್ದು, ಜನಪದ ಶ್ರೀಮಂತಿಕೆಯನ್ನು ಬಿಂಬಿಸಲಿವೆ. ಸ್ಕೌಟ್ಸ್ ಮತ್ತು ಎನ್.ಎಸ್.ಎಸ್. ತಂಡಗಳು ಭಾಗವಹಿಸಲಿವೆ ಎಂದು ಹೇಳಿದರು.
ಸ್ತಬ್ಧಚಿತ್ರ ಮೆರವಣಿಗೆ
ಮೈಸೂರು ದಸರಾ ಮಾದರಿಯಲ್ಲೆ ಸಾಹಿತ್ಯ ಸಮ್ಮೇಳನದ ಮೆರವಣಿಗೆಯಲ್ಲೂ ಸ್ತಬ್ಧಚಿತ್ರಗಳು ಇರಬೇಕು. ಸರ್ಕಾರದ ವಿವಿಧ ಇಲಾಖೆಗಳ ಸ್ತಬ್ಧಚಿತ್ರಗಳು ಹಾಗೂ ಕನ್ನಡ ನಾಡು ನುಡಿ ಸಂಸ್ಕೃತಿ, ಶಿಲ್ಪಕಲೆ, ಸ್ಥಳೀಯ ಸಂಸ್ಕೃತಿ ಬಿಂಬಿಸುವಂತೆ ಸ್ತಬ್ಧಚಿತ್ರಗಳನ್ನು ಕಳುಹಿಸಿಕೊಡುವಂತೆ ವಿವಿಧ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆಯಲಾಗುವುದು. ಅಲ್ಲದೆ, ಪ್ರತಿ ತಾಲ್ಲೂಕುಗಳ ವಿಶೇಷತೆ, ಸಂಸ್ಕೃತಿ ಬಿಂಬಿಸುವಂತೆ ತಲಾ ಒಂದು ಸ್ತಬ್ಧಚಿತ್ರ ಏರ್ಪಾಡು ಮಾಡುವ ಬಗ್ಗೆ ಸಭೆಯಲ್ಲಿ ವಿಸ್ತೃತವಾಗಿ ಚರ್ಚಿಸಲಾಯಿತು.
ಪೂರ್ಣಕುಂಭ
ಪೂರ್ಣಕುಂಭವು ಮೆರವಣಿಗೆಯಲ್ಲಿ 6 ಕಿ.ಮೀ ಕ್ರಮಿಸಬೇಕಿದೆ. ಸುಮಾರು 870 ಮಹಿಳೆಯರು ಪೂರ್ಣಕುಂಭದೊಂದಿಗೆ ಅಷ್ಟೂ ದೂರದವರೆಗೆ ಸಾಗುವುದು ಕಷ್ಟ. ಹಾಗಾಗಿ, ಮೂರು ತಂಡಗಳನ್ನಾಗಿ ವಿಭಾಗಿಸಿ ನಿರ್ದಿಷ್ಟ ದೂರ ಕ್ರಮಿಸದ ನಂತರ ಬೇರೊಂದು ಪೂರ್ಣಕುಂಭ ತಂಡ ಮೆರವಣಿಗೆ ಸೇರುವಂತೆ ಏರ್ಪಾಡು ಮಾಡಬೇಕು ಎಂಬ ಸಲಹೆ ವ್ಯಕ್ತವಾಯಿತು.
ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳೂ ಭಾಗವಹಿಸಲಿ
ಕನ್ನಡ ನಾಡು ನುಡಿ ಸಂಸ್ಕೃತಿ ಬಗ್ಗೆ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳಿಗೆ ತಿಳಿಸಬೇಕಿದೆ. ಹಾಗಾಗಿ, ಈ ಬಾರಿಯ ಸಾಹಿತ್ಯ ಸಮ್ಮೇಳನದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಶಾಲಾ ಮತ್ತು ಕಾಲೇಜುಗಳ ಮಕ್ಕಳ ಹೆಚ್ಚಿನ ಭಾಗವಹಿಸಲು ಅನುಕೂಲ ಆಗುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆ, ಪದವಿ ಪೂರ್ವ ಶಿಕ್ಷಣ, ಶಿಕ್ಷಣ ಇಲಾಖೆ, ಎಂಜಿನಿಯರಿಂಗ್ ಮತ್ತು ಮೈದ್ಯಕೀಯ ಕಾಲೇಜುಗಳ ಮುಖ್ಯಸ್ಥರಿಗೆ ಪತ್ರ ಬರೆಯಲಾಗುವುದು ಶಾಸಕ ಮಧು ಜಿ.ಮಾದೇಗೌಡ ಹೇಳಿದರು.
ಸಮಿತಿಯ ಸಂಚಾಲಕ ಕಾರಸವಾಡಿ ಮಹದೇವು ಮಾತನಾಡಿ, ಜಿಲ್ಲೆ, ಹೊರ ಜಿಲ್ಲೆ, ಹೊರ ರಾಜ್ಯಗಳಿಂದ ಕಲಾ ತಂಡಗಳು ಆಗಮಿಸಲಿದ್ದು, ಸುಮಾರು 1000 ಕಲಾವಿದರು ಭಾಗವಹಿಸಲು ಅವಕಾಶ ಕಲ್ಪಿಸಬೇಕು. ವಿವಿಧ ಪ್ರಕಾರಗಳಲ್ಲಿ ಕಲಾತಂಡಗಳಿಗೆ ಅವಕಾಶ ನೀಡುವ ಬಗ್ಗೆ ಚರ್ಚಿಸಿದರು. ಎಂದರು.
ಸಮಿತಿಯ ಉಪಾಧ್ಯಕ್ಷರಾದ ಡಿ.ಪಿ.ಸ್ವಾಮಿ ಅವರು ಮಾತನಾಡಿ, ಎಲ್ಲಾ ಜಿಲ್ಲೆಗಳಿಂದಲೂ ಪ್ರತಿನಿಧಿಕವಾಗಿ ಒಂದು ಕಲಾತಂಡವಿರಬೇಕು. ಗಡಿನಾಡುಗಳಿಂದ ಒಂದೊಂದು ಉತ್ತಮ  ತಂಡಗಳನ್ನು ಕರೆಸಬೇಕು. 87 ಎತ್ತಿನಗಾಡಿಗಳಲ್ಲಿ 87 ಸಮ್ಮೇಳನಾಧ್ಯಕ್ಷರ ಭಾವಚಿತ್ರವನ್ನು ಮೆರವಣಿಗೆ ಮಾಡಬೇಕು ಎಂದರು.
ಸಮಿತಿಯ ಸದಸ್ಯ ವೆಂಕಟಗಿರಿಯ್ಯ ಮಾತನಾಡಿ, ಸಮ್ಮೇಳನದ ದಿನವೇ ಸಮ್ಮೇಳನಾಧ್ಯಕ್ಷರ ಮೆರವಣಿಗೆ ನಡೆಯಬೇಕು. ಮೆರವಣಿಗೆ ವೈಭವಯುತವಾಗಿ ಇರಬೇಕು. ಮುಖ್ಯ ವೇದಿಕೆಗೆ ಮೆರವಣಿಗೆ ಸುಮಾರು 11 ಗಂಟೆ ವೇಳೆಗೆ ತಲುಪುವುದನ್ನು ದೃಷ್ಟಿಯಲ್ಲಿಟ್ಟುಕೊಂಡು ಮೆರವಣಿಗೆ ಆರಂಭದ ಸಮಯವನ್ನು ನಿರ್ಧರಿಸುವುದು ಸೂಕ್ತ ಎಂದರು. ಜಿಲ್ಲೆಗೆ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಕೊಡುಗೆ ದೊಡ್ಡದಿರುವುದರಿಂದ ಸ್ತಬ್ಧಚಿತ್ರವಿರುವುದು ಸೂಕ್ತ ಎಂದು ಹೇಳಿದರು.
ಡಿ.ದೇವರಾಜ ಅರಸು ಸಂಘಟನೆಯ ಸಂದೇಶ್ ಮಾತನಾಡಿ, ಮೆರವಣಿಗೆಯು ನಗರದಲ್ಲಿ ಸಾಂಸ್ಕೃತಿಕ ವಾತಾವರಣ, ಕನ್ನಡದ ವಾತಾವರಣವನ್ನು ನಿರ್ಮಿಸುವಂತಿರಬೇಕು. ಮೆರವಣಿಗೆ ವೈಭಯುತವಾಗಿ ಇರಬೇಕು. ಕನ್ನಡ ರಥ ಎಲ್ಲಾ ತಾಲ್ಲೂಕು ಕೇಂದ್ರಗಳಲ್ಲಿ ಸಂಚರಿಸುವ ಮೂಲಕ ಪ್ರಚಾರ ನಡೆಸಬೇಕು ಎಂದು ಹೇಳಿದರು.
ಜಯ ಕರ್ನಾಟಕ ಸಂಘಟನೆಯ ಪರಿಷತ್ತಿನ ನಾರಾಯಣ್ ಮಾತನಾಡಿ, ಪ್ಲಾಸ್ಟಿಕ್ ಮುಕ್ತ ಮೆರವಣಿಗೆ ಮಾಡುವ ಮೂಲಕ ಪರಿಸರ ಸ್ನೇಹಿ ಸಂದೇಶವನ್ನು ತಲುಪಿಸುವಂತೆ ಆಗಬೇಕು.
ಸಭೆಯಲ್ಲಿ ಐದು ಉಪ ಸಮಿತಿಗಳ ರಚನೆಗೆ ತೀರ್ಮಾನಿಸಲಾಯಿತು
1.ಕಲಾತಂಡಗಳ ಆಯ್ಕೆ ಸಮಿತಿ
2.ಸ್ತಬ್ಧಚಿತ್ರ ಆಯ್ಕೆ ಉಪ ಸಮಿತಿ
3.ಪೂರ್ಣಕುಂಭ ಉಪ ಸಮಿತಿ
4.ದೈಹಿಕ ಶಿಕ್ಷಣ ಶಿಕ್ಷರ ಉಪ ಸಮಿತಿ
5.ಶಾಲಾ-ಕಾಲೇಜು ವಿದ್ಯಾರ್ಥಿಗಳನ್ನು ಕರೆತರುವ ಉಪ ಸಮಿತಿ
ಸಮ್ಮೇಳನದ ಸಮನ್ವಯ ಸಮಿತಿ ಅಧ್ಯಕ್ಷರಾದ ಮೀರಾ ಶಿವಲಿಂಗಯ್ಯ, ಸಮಿತಿಯ ಸದಸ್ಯ ಕಾರ್ಯದರ್ಶಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ನಂದೀಶ್, ಕನ್ನಡ ಸೇನೆ ಮಂಜುನಾಥ್, ಜಿಲ್ಲಾ ಕಸಾಪದ ಹುಸ್ಕೂರು ಕೃಷ್ಣೇಗೌಡ, ಹರ್ಷ, ಅಪ್ಪಾಜಪ್ಪ ಹಾಗೂ ಕೀಲಾರ ಕೃಷ್ಣೇಗೌಡ, ಯೋಗಣ್ಣ, ನಾಗಮ್ಮ, ಕುಬೇರಪ್ಪ ಸೇರಿದಂತೆ ಹಲವರು ಹಾಜರಿದ್ದರು
ಚಂದು ಸಿಎನ್

ಮೈಸೂರು ಜಿಲ್ಲೆಯ ಹುಣಸೂರಿನ ಚಲ್ಲಹಳ್ಳಿ ಗ್ರಾಮದವನಾದ ನಾನು ಒಂದು ದಶಕದಿಂದ ಮೈಸೂರಿನಲ್ಲಿ ನೆಲೆಸಿದ್ದೇನೆ. ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಪತ್ರಿಕೋದ್ಯಮ ಪದವಿ ಪಡೆದು ಅಂದಿನಿಂದಲೇ ಹವ್ಯಾಸಿ ಪತ್ರಕರ್ತನಾಗಿ ವೃತ್ತಿ ಆರಿಸಿಕೊಂಡೆ. ನಂತರ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ವಿಷಯದಲ್ಲಿ ಸ್ನಾತಕೋತ್ತರ ಪದವಿ ಮುಗಿಸಿದ ಬಳಿಕ ಪತ್ರಿಕೋದ್ಯಮ ಕ್ಷೇತ್ರದಲ್ಲಿ 2 ವರ್ಷಗಳ ಕಾಲ ಅನುಭವ ಪಡೆದಿದ್ದೇನೆ. ಸದ್ಯ ಮೈಸೂರಿನ ಪ್ರತಿಷ್ಠಿತ ಆಂದೋಲನ ಪತ್ರಿಕೆಯ ಡಿಜಿಟಲ್‌ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಪ್ರಾಚೀನ ಪಳಿಯುಳಿಕೆ ಹಾಗೂ ಇತಿಹಾಸದ ಕಡೆ ಎಲ್ಲಿಲ್ಲದ ಒಲವು. ಪ್ರವಾಸ, ಪುಸ್ತಕ ಓದುವುದು ನೆಚ್ಚಿನ ಹವ್ಯಾಸಗಳಾಗಿವೆ. ಮೊಬೈಲ್‌ ಸಂಖ್ಯೆ: 9164535321.

Recent Posts

ರಾಜ್ಯ ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ: ತುಟ್ಟಿ ಭತ್ಯೆ ಹೆಚ್ಚಳ

ಬೆಂಗಳೂರು: ರಾಜ್ಯ ಸರ್ಕಾರಿ ನೌಕರರ ತುಟ್ಟಿಭತ್ಯೆ(ಡಿಎ)ಯನ್ನು ಶೇ.1.50ರಷ್ಟು ಹೆಚ್ಚಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. 2026 ಜನವರಿ 1ರಿಂದ ಅನ್ವಯವಾಗುವಂತೆ…

7 hours ago

ಮೇ.13ರಂದು ಬೆಂಗಳೂರು ಜನತೆಗೆ ಬಿಗ್‌ ಗಿಫ್ಟ್:‌ ಡಿಸಿಎಂ ಡಿ.ಕೆ.ಶಿವಕುಮಾರ್‌

ಬೆಂಗಳೂರು: ಮೇ.13ಕ್ಕೆ ಬೆಂಗಳೂರು ಜನತೆಗೆ ಬಿಗ್‌ ಗಿಫ್ಟ್‌ ನೀಡಲಿದ್ದೇವೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರು ತಿಳಿಸಿದ್ದಾರೆ. ಈ ಬಗ್ಗೆ ಮಾಧ್ಯಮದವರೊಂದಿಗೆ…

7 hours ago

ದೇವರಾಜ ಮಾರುಕಟ್ಟೆಗೆ ಸಂಸದ ಯದುವೀರ್‌ ಒಡೆಯರ್‌ ಭೇಟಿ

ಮೈಸೂರು: ಮೈಸೂರಿನ ಪಾರಂಪರಿಕ ಕಟ್ಟಡದಲ್ಲಿ ಒಂದಾಗಿರುವ ದೇವರಾಜ ಮಾರುಕಟ್ಟೆಗೆ ಸಂಸದ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌ ಅವರಿಂದು ಭೇಟಿ ನೀಡಿ…

7 hours ago

ಪಂಚಭೂತಗಳಲ್ಲಿ ಲೀನರಾದ ಸಚಿವ ಡಿ.ಸುಧಾಕರ್‌

ಚಿತ್ರದುರ್ಗ: ಸಕಲ ಸರ್ಕಾರಿ ಗೌರವಗಳೊಂದಿಗೆ ಚಳ್ಳಕೆರೆಯ ಚಿತಾಗಾರದಲ್ಲಿ ಹಿರಿಯೂರು ಶಾಸಕ ಡಿ.ಸುಧಾಕರ್‌ ಅವರ ಅಂತ್ಯಕ್ರಿಯೆ ನೆರವೇರಿತು. ಬೆಳಿಗ್ಗೆಯಿಂದ ಸುಧಾಕರ್‌ ಅವರ…

8 hours ago

ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ರೈತನ ಮೇಲೆ ಕಾಡಾನೆ ದಾಳಿ: ಗಂಭೀರ ಗಾಯ

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು  ಹನೂರು: ಜಮೀನಿನಲ್ಲಿದ್ದ ರೈತನೋರ್ವನ ಮೇಲೆ ಕಾಡಾನೆ ದಾಳಿ ಮಾಡಿದ ಪರಿಣಾಮ ತೀವ್ರ…

8 hours ago

ಎಂ.ಕೆ.ಸ್ಟಾಲಿನ್‌ ಭೇಟಿಯಾದ ತಮಿಳುನಾಡು ನೂತನ ಸಿಎಂ ವಿಜಯ್‌

ಚೆನ್ನೈ: ತಮಿಳುನಾಡಿನ ನೂತನ ಸಿಎಂ ವಿಜಯ್‌ ಅವರಿಂದು ಮಾಜಿ ಸಿಎಂ ಎಂ.ಕೆ.ಸ್ಟಾಲಿನ್‌ ಅವರನ್ನು ಭೇಟಿಯಾದರು. ಸದ್ಯ ಇಂದಿನ ಸಭೆಯಲ್ಲಿ ಇಬ್ಬರು…

9 hours ago