ಮೈಸೂರಿನ ಚಾಮರಾಜಪುರಂ ರೈಲ್ವೆ ನಿಲ್ದಾಣದ ರಸ್ತೆಯಲ್ಲಿರುವ ನಿವಾಸವನ್ನು ವಸ್ತುಸಂಗ್ರಹಾಲಯವಾಗಿಸಲು ಯೋಜನೆ ರೂಪಿಸಿದ ಪುತ್ರಿ
ಗಿರೀಶ್ ಹುಣಸೂರು
ಮೈಸೂರು: ಜನರ ಮನಸ್ಸಿನಲ್ಲಿ ಬೇರೂರಿದ್ದ ಕಂದಾಚಾರ ಹಾಗೂ ಸಾಂಪ್ರದಾಯಿಕ ವಿಚಾರಗಳ ಬೇಲಿಯನ್ನು ಮುರಿದು ಮಹಿಳಾ ಸಬಲೀಕರಣ, ಪ್ರತಿಬಂಧಗಳ ನಿಷೇಧಗಳ ವಿರೋಧ, ಜನರ ಮನಸ್ಸಿನಲ್ಲಿ ನಿಗ್ರಹಿಸಲ್ಪಟ್ಟ ಬಯಕೆಗಳ ಅನಾವರಣ ಮಾಡುವ ಮೂಲಕ ಕನ್ನಡ ಸಾರಸ್ವತ ಲೋಕದಲ್ಲಿ ಬಹಳ ಬೇಗನೇ ಜನಪ್ರಿಯತೆಗಳಿಸಿದ ಕನ್ನಡದ ಖ್ಯಾತ ಕಾದಂಬರಿಗಾರ್ತಿ ತ್ರಿವೇಣಿ ಅವರ ಮನೆಯನ್ನು ಜೀರ್ಣೋದ್ಧಾರಗೊಳಿಸಿ ವಸ್ತುಸಂಗ್ರಹಾಲಯವನ್ನಾಗಿಸಲು ಯೋಜನೆ ರೂಪಿಸಲಾಗುತ್ತಿದ್ದು, ಜೀರ್ಣೋದ್ಧಾರಗೊಂಡ ಮನೆಗೆ ತ್ರಿವೇಣಿಯವರ ಕಾದಂಬರಿ ಆಧರಿಸಿದ ಜನಪ್ರಿಯ ಸಿನಿಮಾ ‘ಬೆಳ್ಳಿಮೋಡ’ ಎಂದು ಹೆಸರಿಡಲು ನಿರ್ಧರಿಸಲಾಗಿದೆ.
ಮೈಸೂರಿನ ಚಾಮರಾಜಪುರಂ ರೈಲ್ವೆ ನಿಲ್ದಾಣದ ರಸ್ತೆಯಲ್ಲಿರುವ ತ್ರಿವೇಣಿಯವರ ಮನೆಯನ್ನು ಅವರ ಪುತ್ರಿ ಮೀರಾ ಕುಮಾರ್ ಅವರು ತಮ್ಮ ತ್ರಿವೇಣಿ ಶಂಕರ್ ಸಾಹಿತ್ಯ ಪ್ರತಿಷ್ಠಾನದ ಮೂಲಕ ವಸ್ತುಸಂಗ್ರಹಾಲಯ ಮಾಡುವ ಕೆಲಸಕ್ಕೆ ಕೈಹಾಕಿದ್ದಾರೆ. ತ್ರಿವೇಣಿಯವರ ಹಳೆ ಮನೆಯ ಜೀರ್ಣೋದ್ಧಾರ ಕಾರ್ಯವನ್ನು ಹಳೆಯ ಕಟ್ಟಡಗಳ ಶಿಲ್ಪಶಾಸ್ತ್ರಜ್ಞರಾದ ಪಂಕಜ್ ಮೋದಿ, ರಘುನಾಥ್ ಹಾಗೂ ಅವರ ತಂಡದವರಿಗೆ ವಹಿಸಲಾಗಿದೆ.
ತ್ರಿವೇಣಿಯವರು ಸಾಮಾಜಿಕ ಹಾಗೂ ಸಾಹಿತ್ಯ ಕ್ಷೇತ್ರದಲ್ಲಿ ಮಹಿಳೆಯರ ಧ್ವನಿಗೆ ಪೂರ್ಣರೂಪದ ಪ್ರತಿಧ್ವನಿಯಾಗಿದ್ದವರು. ಅವರ ಬಹುತೇಕ ಕೃತಿಗಳಲ್ಲಿನ ಪಾತ್ರಗಳು ಪುರುಷ ಪ್ರಧಾನ ವ್ಯವಸ್ಥೆಯ ರೂಢಿಗತ ಕಟ್ಟುಪಾಡುಗಳ ವಿರುದ್ಧ ದೃಢವಾದ ಧ್ವನಿ ಎತ್ತುತ್ತವೆ. ಮಹಿಳೆಯರ ಬಗ್ಗೆ ನಡೆಯುವ ಸಾಮಾಜಿಕ ಅನ್ಯಾಯಗಳು, ಶೋಷಣೆಗಳ ಬಗ್ಗೆ ತ್ರಿವೇಣಿಯವರಿಗೆ ಇದ್ದ ಸಾಮಾಜಿಕ ಬದ್ಧತೆ, ಆಳವಾದ ಕಳಕಳಿ, ಅವರ ಕೃತಿಗಳ ಬಗ್ಗೆ ಈಗಲೂ ಮುಂದುವರಿಯುತ್ತಿರುವ ಜನರ ಆಸಕ್ತಿಯೇ ಸಾಕ್ಷಿಯಾಗಿದೆ. ಇಂದಿಗೂ ಸಹ ಅವರ ಕಾದಂಬರಿಗಳು, ಸಣ್ಣಕತೆಗಳನ್ನು ಓದುವ ಬಳಗ ದೊಡ್ಡದಿದೆ. ಜೊತೆಗೆ ಅವರ ಅನೇಕ ಕೃತಿಗಳು ಶಾಲಾ-ಕಾಲೇಜುಗಳಲ್ಲಿ ಪಠ್ಯಪುಸ್ತಕಗಳಾಗಿವೆ.
ಸಾಂಸಾರಿಕ ಹಾಗೂ ದಾಂಪತ್ಯ ಜೀವನ, ಪ್ರೇಮ-ಪ್ರಣಯ, ಬಾಲ್ಯ ವಿವಾಹ, ಮನೋ ವೈಜ್ಞಾನಿಕ, ವಿಧವಾ ವಿವಾಹ, ಸರಸ-ಸಲ್ಲಾಪಗಳ ಚಿತ್ರಣಗಳ ಕುರಿತು, ಸ್ತ್ರೀಯರ ಪರವಾಗಿ ಅನ್ಯಾಯಗಳನ್ನು ಪ್ರತಿಭಟಿಸುವ ಹಾಗೂ ತೀವ್ರವಾಗಿ ಖಂಡಿಸುವ ಬರಹಗಳು, ಮನೋರೋಗಳ ಬಗ್ಗೆ ಅರಿವು ಮೂಡಿಸುವ ಬರಹಗಳನ್ನು ಅವರ ಕೃತಿಗಳಲ್ಲಿ ಕಾಣಸಿಗುತ್ತವೆ. ತ್ರಿವೇಣಿಯವರ ಕೃತಿಗಳಲ್ಲಿ ಬಿಂಬಿಸಿರುವ ಸ್ತ್ರೀಯರ ಮನಸ್ಸಿನ ಸೂಕ್ಷ್ಮತೆ ಹಾಗೂ ಅನೇಕ ಅಂದಿನ ಸಮಸ್ಯೆಗಳು ಇಂದಿನ ಕಾಲಕ್ಕೂ ಅನ್ವಯಿಸುತ್ತವೆ. ಇದೇ ಕಾರಣದಿಂದ ಅವರ ಕೃತಿಗಳು ಇಂದಿಗೂ ಜನಪ್ರಿಯವಾಗಿ ಸಹಸ್ರಾರು ಮರು ಪ್ರತಿಗಳು ಪ್ರಕಟವಾಗಿ ಓದುಗರಿಂದ ಸ್ವೀಕರಿಸಲ್ಪಟುತ್ತಿವೆ. ತ್ರಿವೇಣಿಯವರ ಹೆಸರು ಶಾಶ್ವತ ಮಿನುಗುತಾರೆಯಾಗಿ ಸಾಹಿತ್ಯ ಲೋಕದಲ್ಲಿ ಧ್ರುವತಾರೆಯಂತೆ ಮಿನುಗುತ್ತಿದೆ.
೧೯೫೦ ರಿಂದ ೧೯೬೩ರವರೆಗೆ ೧೩ ವರ್ಷಗಳ ಅವಧಿಯಲ್ಲಿ ೨೧ ಕಾದಂಬರಿಗಳು, ೪೧ ಸಣ್ಣ ಕತೆಗಳನ್ನು ಬರೆಯುವ ಮೂಲಕ ಕನ್ನಡ ಸಾರಸ್ವತ ಲೋಕದಲ್ಲಿ ಬಹಳ ಬೇಗ ಉತ್ತುಂಗಕ್ಕೇರಿದ್ದರು. ಪುರುಷ ಲೇಖಕರೇ ಕೆಲವು ವಸ್ತು ವಿಷಯಗಳನ್ನು ಬರೆಯಲು ಹಿಂಜರಿಯುತ್ತಿದ್ದ ಕಾಲಘಟ್ಟದಲ್ಲಿ ಸಮಾಜದ ಕಟ್ಟುಪಾಡುಗಳನ್ನು ಪ್ರತಿಭಟಿಸಿ ನಿಲ್ಲುವ ವಸ್ತು ವಿಷಯಗಳನ್ನು ಇಟ್ಟುಕೊಂಡು ಬರೆದ ಅವರ ಬರಹಗಳು ಜನರ ಗಮನ ಸೆಲೆಯುವಲ್ಲಿ ಯಶಸ್ವಿಯಾಗಿದ್ದವು. ಇಷ್ಟು ಮಾತ್ರವಲ್ಲ. ಅವರ ಕೃತಿಗಳನ್ನು ಆಧರಿಸಿ ಕನ್ನಡ ಚಿತ್ರರಂಗದವರು ಶರಪಂಜರ, ಬೆಳ್ಳಿಮೋಡ, ಹೂವು-ಹಣ್ಣು , ಹಣ್ಣೆಲೆ ಚಿಗುರಿದಾಗ, ಕಂಕಣ ಎಂಬ ಜನಪ್ರಿಯ ಸಿನಿಮಾಗಳನ್ನು ನಿರ್ಮಿಸಿ ಕನ್ನಡ ಚಿತ್ರ ರಸಿಕರಿಗೆ ಉಣಬಡಿಸಿದ್ದಾರೆ.
ತ್ರಿವೇಣಿಯವರು ಬಾಳಿ ಬದುಕಿದ್ದ ಹಳೇ ಮನೆಯನ್ನು ಜೀರ್ಣೋದ್ಧಾರಗೊಳಿಸಿ, ಆ ಮನೆಯನ್ನು ವಸ್ತು ಸಂಗ್ರಹಾಲಯ ಮಾಡಿ, ಸಾಹಿತ್ಯಿಕ ಚಟುವಟಿಕೆಗಳಿಗೆ ವೇದಿಕೆ ಒದಗಿಸಲು ತ್ರಿವೇಣಿ ಶಂಕರ್ ಸಾಹಿತ್ಯ ಪ್ರತಿಷ್ಠಾನದಿಂದ ಯೋಜನೆ ರೂಪಿಸಲಾಗಿದ್ದು, ಇನ್ನೆರಡು ದಿನಗಳಲ್ಲಿ ವಾಸ್ತುಶಿಲ್ಪಿಗಳು ಸ್ಥಳಕ್ಕೆ ಭೇಟಿ ನೀಡಿ ವಿನ್ಯಾಸ ರೂಪುಗೊಳಿಸಲಿದ್ದಾರೆ.
-ಮೀರಾ ಕುಮಾರ್, ತ್ರಿವೇಣಿಯವರ ಮಗಳು
ನಂಜನಗೂಡು : ಜಾತೀಯತೆ ಎಂಬುದು ಸಂಪೂರ್ಣವಾಗಿ ತೊಲಗಬೇಕು. ಎಲ್ಲ ಸಮುದಾಯದವರು ನಮ್ಮವರೇ ಎಂದು ತಿಳಿದಾಗ ಮಾತ್ರ ಜಾತೀಯತೆ ದೂರವಾಗಲು ಸಾಧ್ಯ…
ಮೈಸೂರು : ನಿರಂತರ ರಂಗ ತಂಡದ ‘ನಿರಂತರ ರಂಗ ಉತ್ಸವ-2025-26’ರ ಐದು ದಿನಗಳ ರಂಗೋತ್ಸವದ ಕೊನೆಯ ದಿನ ‘ಕೊಡಲ್ಲ ಅಂದ್ರೆ…
ಬೆಂಗಳೂರು : ನಗರದ ಹೊರವಲಯದ ಆನೇಕಲ್ನಲ್ಲಿ ಭಾನುವಾರ ಭೀಕರ ಸರಣಿ ಅಪಘಾತವಾಗಿದೆ. ವೇಗವಾಗಿ ನುಗ್ಗಿ ಬಂದ ಬೃಹತ್ ಕಂಟೈನರ್ ಲಾರಿಯೊಂದು…
ಮಂಡ್ಯ : ಮೌಢ್ಯಗಳನ್ನು ಜನರು ತಿರಸ್ಕರಿಸಿ ಬಸವಾದಿ ಶರಣರು ತಿಳಿಸಿರುವುದನ್ನು ಪಾಲನೆ ಮಾಡಬೇಕು. ವಿದ್ಯಾವಂತರಲ್ಲಿ ಕಂದಾಚಾರ ಹಾಗೂ ಮೌಢ್ಯತೆ ಇರುವುದು…
ಮೈಸೂರು : ನಗರದ ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರದ ಆವರಣದಲ್ಲಿ ಲಲಿತ ಕಲೆ ಮತ್ತು ಕರಕುಶಲ ಹಾಗೂ ಮಹಿಳಾ ಉದ್ದಿಮೆ ಉಪ…
ಬೆಂಗಳೂರು : ರೌಡಿಶೀಟರ್ ಬಿಕ್ಲು ಶಿವ ಕೊಲೆ ಪ್ರಕರಣದಲ್ಲಿ ಬಂಧನ ಭೀತಿ ಎದುರಿಸುತ್ತಿರುವ ಬಿಜೆಪಿ ಶಾಸಕ ಬೈರತಿ ಬಸವರಾಜು, ಕಳೆದೆರಡು…