ಜಿಲ್ಲೆಗಳು

ವಸ್ತು ಸಂಗ್ರಹಾಲಯವಾಗಲಿದೆ ಕಾದಂಬರಿಗಾರ್ತಿ ತ್ರಿವೇಣಿ ಮನೆ

ಚಾಮರಾಜಪುರಂ ರೈಲು ನಿಲ್ದಾಣದ ಬಳಿಯಿರುವ ೧೨೦ ವರ್ಷ ಹಳೆಯದಾದ ತ್ರಿವೇಣಿ ಅವರ ಮನೆಗೆ ಭೂಮಿ ಪೂಜೆ

ಮೈಸೂರು: ಕನ್ನಡದ ಹೆಸರಾಂತ ಕಾದಂಬರಿಗಾರ್ತಿ ತ್ರಿವೇಣಿಯವರು ವಾಸವಿದ್ದ ಮನೆಯನ್ನು ಜೀರ್ಣೋದ್ಧಾರಗೊಳಿಸಿ ವಸ್ತುಸಂಗ್ರಹಾಲಯವಾಗಿಸಲು ತ್ರಿವೇಣಿ ಅವರ ಪುತ್ರಿ ಮೀರಾ ಶಂಕರ್ ಬುಧವಾರ ಭೂಮಿ ಪೂಜೆ ನೆರವೇರಿಸಿದರು.

ನಗರದ ಚಾಮರಾಜಪುರಂ ರೈಲು ನಿಲ್ದಾಣದ ಬಳಿಯಿರುವ ೧೨೦ ವರ್ಷ ಹಳೆಯದಾದ ತ್ರಿವೇಣಿ ಅವರ ಮನೆಯು ಗತಕಾಲದ ವೈಭವದೊಂದಿಗೆ ಹೊಸ ತಲೆಮಾರಿನ ಜನರಿಗೆ ವಸ್ತು ಸಂಗ್ರಹಾಲಯವಾಗಿ ರೂಪುಗೊಂಡು ‘ಬೆಳ್ಳಿಮೋಡ’ವಾಗಿ ಗಮನಸೆಳೆಯಲಿದೆ. ತ್ರಿವೇಣಿಯವರು ಅವರು ಬದುಕಿದ್ದಷ್ಟೂ ದಿನ ಇದೇ ಮನೆಯಲ್ಲಿದ್ದರು. ೧೯೫೦ರಿಂದ ೧೯೬೩ರ ಅವಧಿಯಲ್ಲಿ ಅವರು ರಚಿಸಿದ ೨೪ ಕತೆ, ಕಾದಂಬರಿಗಳು ಇದೇ ಮನೆಯಲ್ಲಿಯೇ ಎಂಬುದು ವಿಶೇಷ. ಹೀಗಾಗಿ ಮನೆಯನ್ನು ಮುಂದಿನ ಪೀಳಿಗೆಗೂ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಪಾರಂಪರಿಕ ಶೈಲಿಯಲ್ಲಿಯೇ ಕಟ್ಟಡವನ್ನು ಪುನರ್ ನಿರ್ಮಾಣ ಮಾಡಲಾಗುವುದು. ಬಳಿಕ ಅಮ್ಮ ಬಳಸಿದ ಎಲ್ಲ ವಸ್ತುಗಳನ್ನು ಈವರೆಗೂ ಜಾಗರೂಕತೆಯಿಂದ ಕಾಪಾಡಿಕೊಂಡಿದ್ದು, ಅವುಗಳನ್ನು ಒಳಗೊಂಡಂತೆ ಇಡೀ ಮನೆಯನ್ನು ವಸ್ತುಸಂಗ್ರಹಾಲಯವನ್ನಾಗಿ ಮಾಡಲು ಉದ್ದೇಶಿಸಲಾಗಿದೆ ಎಂದು ತಿಳಿಸಿದರು.


ಲಂಡನ್ ಪ್ರವಾಸದಲ್ಲಿದ್ದಾಗ ನಾಟಕಕಾರ ವಿಲಿಯಂ ಷೇಕ್ಸ್‌ಪಿಯರ್ ಅವರ ಮನೆಗೆ ಭೇಟಿ ನೀಡಿದಾಗ ಆ ಮನೆಯನ್ನು ವಸ್ತುಸಂಗ್ರಹಾಲಯವನ್ನಾಗಿ ರೂಪಿಸಲಾಗಿದೆ. ಅದರಂತೆ ನಮ್ಮ ತಾಯಿ ತ್ರಿವೇಣಿ ಅವರ ಮನೆಯನ್ನೂ ಸ್ಮಾರಕ ಮಾಡಬೇಕೆಂಬ ಬಯಕೆ ಮೂಡಿತ್ತು. ಆದರೆ ಮನೆ ದುರಸ್ತಿಗೆ ಅಗತ್ಯವಿರುವ ಅನುದಾನದ ಕೊರತೆಯಿಂದ ಸುಮ್ಮನಾಗಿದ್ದೆವು ಎಂದು ಹೇಳಿದರು.

ಪುನರ್ ನವೀಕರಣ: ತ್ರಿವೇಣಿ ಅವರ ಅಭಿಮಾನಿಯೊಬ್ಬರು ಮನೆಯನ್ನು ಪುನರ್ ನಿರ್ಮಾಣ ಮಾಡಿಕೊಡಲು ಮುಂದೆ ಬಂದಿದ್ದಾರೆ. ೭೫*೧೦೦ ಅಡಿ ಅಳತೆಯ ನಿವೇಶನದಲ್ಲಿ ಎರಡು ಮನೆಗಳಿದ್ದು, ಒಂದಕ್ಕೊಂದು ಹೊಂದಿಕೊಂಡಂತಿವೆ. ಒಂದು ಮನೆ ೧೨೦ ವರ್ಷ ಹಳೆಯದಾದರೆ, ಮತ್ತೊಂದು ೯೦ ವರ್ಷ ಹಳೆಯದು. ಎರಡನೇ ಮನೆಯನ್ನು ಅಮ್ಮನವರೆ ತಂದೆಗೆ ಹೇಳಿ ಕಟ್ಟಿಸಿಕೊಂಡಿದ್ದರು. ಈಗ ಎರಡೂ ಶಿಥಿಲವಾಗಿರುವುದರಿಂದ ಹಳೆಯ ಕಟ್ಟಡ ಶಿಲ್ಪಶಾಸ್ತ್ರಜ್ಞರಾದ ಪಂಕಜ್ ಮೋದಿ ಮತ್ತು ರಘುನಾಥ್ ತಂಡ ಕಟ್ಟಡವನ್ನು ಪರಿಶೀಲಿಸಿ ದುರಸ್ತಿಕಾರ್ಯ ಆರಂಭಿಸಲಿದ್ದಾರೆ ಎಂದು ಮಾಹಿತಿ ನೀಡಿದರು.

ವಸ್ತುಸಂಗ್ರಹಾಲಯದ ವಿಶೇಷ: ತಾಯಿಯವರ ಸೀರೆ, ಮೇಕಪ್ ಬಾಕ್ಸ್, ಪೆನ್ನುಗಳು, ಡೈರಿ, ಅವರು ಬರೆದ ಪತ್ರಗಳು, ಪಡೆದ ಪ್ರಶಸ್ತಿಗಳು, ಅಪರೂಪದ ಛಾಯಾಚಿತ್ರಗಳು, ಬಳಸಿದ ಪೀಠೋಪಕರಣಗಳು ಇರಲಿವೆ. ಜತೆಗೆ ಇನ್ನೊಂದು ಮನೆಯಲ್ಲಿ ಮಹಿಳೆ ಮತ್ತು ಮಕ್ಕಳು, ಕಾಲೇಜು ವಿದ್ಯಾರ್ಥಿಗಳು, ಹಿರಿಯ ನಾಗರಿಕರಿಗೆ ಅನುಕೂಲವಾಗಲು ಆಪ್ತಸಲಹಾ ಕೇಂದ್ರ ತೆರೆದು ಅವರಿಗೆ ಅಗತ್ಯ ಸಲಹೆ ನೀಡಲಾಗುತ್ತದೆ ಎಂದರು.


ಕಟ್ಟಡ ಅಲ್ಲಲ್ಲಿ ಶಿಥಿಲವಾಗಿದ್ದು, ಕೆಲ ಭಾಗಗಳನ್ನು ತೆಗೆದು ಮೊದಲಿದ್ದಂತೆಯೇ ನಿರ್ಮಿಸಬೇಕಿದೆ. ಇದಕ್ಕೆ ಒಂದು ವರ್ಷ ಕಾಲಾವಕಾಶ ಅಗತ್ಯವಿದೆ. ತ್ರಿವೇಣಿ ಅವರು ಬದುಕಿದ್ದ ಮನೆಯಾದ್ದರಿಂದ ಬದುಕಿನ ಚಿತ್ರಣಗಳನ್ನು ಮನೆಯಲ್ಲಿ ಕಟ್ಟಿಕೊಡುವ ಕೆಲಸ ಮಾಡಲಾಗುವುದು. ಹಿಂದೆ ಕಟ್ಟಡ ನಿರ್ಮಾಣ ಮಾಡುವಾಗ ಬಳಸಿದ್ದ ವಸ್ತುಗಳನ್ನೇ ಬಳಿಸಿ, ದುರಸ್ತಿ ಮಾಡಲಾಗವುದು.
ಪಂಕಜ್ ಮೋದಿ, ಹಳೆಯ ಕಟ್ಟಡಗಳ ಶಿಲ್ಪಶಾಸ್ತ್ರಜ್ಞ.


ತಾಯಿ ತ್ರಿವೇಣಿ ಅವರು ಕನ್ನಡ ಸಾಹಿತ್ಯಕ್ಕೆ ನೀಡಿರುವ ಕೊಡುಗೆ ಅಪಾರ. ಅವರ ೨೧ ಕಾದಂಬರಿಗಳಲ್ಲಿ ೫ ಚಲನಚಿತ್ರಗಳಾದವು. ಅದರಲ್ಲಿ ಬೆಳ್ಳಿಮೋಡ ಚಿತ್ರ ಅಮೋಘ ಯಶಸ್ಸು ಕಂಡಿತು. ಹಾಗಾಗಿ ಮನೆಯನ್ನು ಜೀರ್ಣೋದ್ಧಾರ ಮಾಡಿದ ಬಳಿಕ ‘ಬೆಳ್ಳಿ ಮೋಡ’ ಎಂಬ ಹೆಸರನ್ನು ಇಡಲಾಗುವುದು. ಅವರು ಬಾಳಿ ಬದುಕಿದ ಮನೆಯನ್ನು ಪುನರ್ ನವೀಕರಣಗೊಳಿಸಿ, ವಸ್ತುಸಂಗ್ರಹಾಲಯವನ್ನಾಗಿ ಮಾಡಿ ಸಾಹಿತ್ಯಿಕ ಚಟುವಟಿಕೆಗಳಿಗೆ ವೇದಿಕೆ ಒದಗಿಸಲು ತ್ರಿವೇಣಿ ಶಂಕರ್ ಸಾಹಿತ್ಯ ಪ್ರತಿಷ್ಠಾನದಿಂದ ಯೋಜನೆ ರೂಪಿಸಲಾಗಿದೆ.
ಮೀರಾ ಶಂಕರ್, ತ್ರಿವೇಣಿ ಪುತ್ರಿ.


ತ್ರಿವೇಣಿ ಅವರ ಮ್ಯೂಸಿಯಂ ಪಕ್ಕದಲ್ಲೇ ಒಂದು ಕೌನ್ಸಿಲಿಂಗ್ ಸೆಂಟರ್ ಮಾಡಲಾಗುವುದು. ಸೆಂಟರ್‌ನಲ್ಲಿ ಹಿರಿಯ ತಲೆಮಾರಿನ ಕವಿಗಳಿಂದ ಕಿರಿಯ ತಲೆಮಾರಿನವರಿಗೆ ಸಲಹೆ ಕೊಡಿಸಲಾಗುವುದು.

ಪಾರ್ವತಿ ವಟ್ಟಂ, ಮೈಸೂರು


ಆಡಿಯೋ ಬುಕ್, ಇ ಬುಕ್‌ನಲ್ಲಿ ತ್ರಿವೇಣಿ ಸಾಹಿತ್ಯ
ಮೈಸೂರು: ತ್ರಿವೇಣಿ ಎಂಬ ಬರಹನಾಮದಿಂದ ಪ್ರಸಿದ್ಧರಾದ ಶ್ರೀಮತಿ ಅನಸೂಯ ಶಂಕರ್ ಅವರ ಸಾಹಿತ್ಯವನ್ನು ಗಡಿಯಾಚೆಗೂ ದಾಟಿಸುವ ಸಲುವಾಗಿ ಇ-ಬುಕ್ ಮತ್ತು ಆಡಿಯೋ ಬುಕ್ ತಯಾರಿ ಕಾರ್ಯ ನಡೆಯುತ್ತಿದೆ.
ತ್ರಿವೇಣಿ ಅವರು ‘ಬೆಳ್ಳಿ ಮೋಡ’, ‘ಹಣ್ಣೆಲೆ ಚಿಗುರಿದಾಗ’, ‘ಶರಪಂಜರ’, ‘ದೂರದ ಬೆಟ್ಟ’, ‘ಬೆಕ್ಕಿನ ಕಣ್ಣು’ ಸೇರಿದಂತೆ ೨೧ ಕಾದಂಬರಿ, ೩ ಸಣ್ಣ ಕಥೆಗಳನ್ನು ಕನ್ನಡ ಸಾಹಿತ್ಯ ಲೋಕಕ್ಕೆ ನೀಡಿದ್ದಾರೆ. ಇವರ ಎಲ್ಲ ಕೃತಿಗಳನ್ನು ಇ-ಬುಕ್ ರೂಪಕ್ಕೆ ಇಳಿಸಲಾಗಿದ್ದು, ಜನವರಿ ವೇಳೆಗೆ ಲೋಕಾರ್ಪಣೆಗೊಳ್ಳುವ ಸಾಧ್ಯತೆಗಳಿವೆ. ಹಾಗೆಯೇ ವಿದೇಶಗಳಲ್ಲಿರುವ ಕನ್ನಡಿಗರಿಗೆ ಅನುಕೂಲವಾಗುವ ದೃಷ್ಟಿಯಿಂದ ಎಲ್ಲ ೨೪ ಕೃತಿಗಳನ್ನು ಧ್ವನಿ ಮುದ್ರಿಕೆ ಮಾಡುವ ಕಾರ್ಯ ಆರಂಭಿಸಿದ್ದು, ಶೀಘ್ರದಲ್ಲಿಯೇ ಆಡಿಯೋ ಬುಕ್ ರೂಪದಲ್ಲಿ ಬಿಡಗಡೆಯಾಗಲಿದೆ ಎಂದು ಮೀರಾ ಶಂಕರ್ ತಿಳಿಸಿದರು.

 

andolanait

Recent Posts

ಮಂಗಳೂರು ಬಂದರಿಗೆ ಬಂದ ಎಲ್‌ಪಿಜಿ ಹೊತ್ತ ಎರಡು ಹಡಗು

ಮಂಗಳೂರು : ಅಮೆರಿಕ, ಇಸ್ರೇಲ್ ಹಾಗೂ ಇರಾನ್ ನಡುವಿನ ಯುದ್ಧದ ನಡುವೆ ರಷ್ಯಾದಿಂದ 96 ಸಾವಿರ ಮೆಟ್ರಿಕ್ ಟನ್ ಕಚ್ಚಾತೈಲ…

22 mins ago

ನಮ್ಮ ವೈರಿಗಳಿಗೆ ಮಾತ್ರ ಹೊರ್ಮುಜ್‌ ಮುಚ್ಚಿದೆ : ಇರಾನ್‌

ವಿಶ್ವಸಂಸ್ಥೆ : ಇರಾನ್‌ ವೈರಿಗಳು ಹಾಗೂ ಅವರೊಂದಿಗೆ ನಂಟು ಹೊಂದಿರುವ ರಾಷ್ಟ್ರಗಳಿಗೆ ಮಾತ್ರ ಹೊರ್ಮುಜ್‌ ಜಲಸಂಧಿ ಮುಚ್ಚಲಾಗಿದೆ ಎಂದು ವಿಶ್ವಸಂಸ್ಥೆಯ…

1 hour ago

ಹುಬ್ಬೆ ಹುಣಸೆ ಜಲಾಶಯಕ್ಕೂ ಕಾವೇರಿ ನೀರು : ಶಾಸಕ ಮಂಜುನಾಥ್‌ ಭರವಸೆ

ಹನೂರು : ವಿಧಾನಸಭಾ ಕ್ಷೇತ್ರದ ಪ್ರಮುಖ ಜಲಾಶಯಗಳ ಪೈಕಿ ರಾಮನ ಗುಡ್ಡ ಜಲಾಶಯಕ್ಕೆ ಕಳೆದ ಎರಡು ತಿಂಗಳ ಹಿಂದೆ ಕಾವೇರಿ…

2 hours ago

ಕತಾರ್‌ನಲ್ಲಿ ತಾಂತ್ರಿಕ ದೋಷದಿಂದ ಹೆಲಿಕಾಪ್ಟರ್‌ ಪತನ: 6 ಜನರು ಸಾವು

ಕೈರೋ: ತಾಂತ್ರಿಕ ದೋಷದಿಂದಾಗಿ ಕತಾರ್‌ ಹೆಲಿಕಾಪ್ಟರ್‌ ಅಪಘಾತವಾಗಿ ಆರು ಜನರು ಸಾವನ್ನಪ್ಪಿದ್ದಾರೆ ಎಂದು ಸಚಿವಾಲಯ ಹೇಳಿದೆ. ಕತಾರ್‌ನ ಪ್ರಾದೇಶಿಕ ನೀರಿನಲ್ಲಿ…

3 hours ago

ಬೆಂಗಳೂರಿಗೆ ಕುಡಿಯುವ ನೀರಿನ ಸಮಸ್ಯೆ ನಿವಾರಿಸಲು ಕ್ರಮ: ಡಿಸಿಎಂ ಡಿ.ಕೆ.ಶಿವಕುಮಾರ್‌

ಬೆಂಗಳೂರು: ಬೆಂಗಳೂರಿಗೆ ಕುಡಿಯುವ ನೀರಿನ ಸಮಸ್ಯೆಯನ್ನು ಶಾಶ್ವತವಾಗಿ ನಿವಾರಿಸಲು ತಮ್ಮ ಸರ್ಕಾರ ಕ್ರಮ ಕೈಗೊಂಡಿದ್ದು, 6ನೇ ಹಂತದ ಕಾವೇರಿ ನೀರು…

3 hours ago

ನಿಮ್ಮ ಸುಪ್ರೀಂ ಲೀಡರ್‌ ಬದುಕಿದ್ದಾರಾ?: ಅಮೇರಿಕಾ ಪ್ರಶ್ನೆ

ವಾಷಿಂಗ್ಟನ್:‌ ಸಾರ್ವಜನಿಕವಾಗಿ ಕಾಣಿಸಿಕೊಳ್ಳದ ಇರಾನ್‌ನ ನೂತನ ಸುಪ್ರೀಂ ಲೀಡರ್‌ ಮೊಜ್ತಾಬಾ ಖಮೇನಿ ಎಲ್ಲಿದ್ದಾರೆ? ಬದುಕಿದ್ದಾರಾ? ಎಂದು ಅಮೇರಿಕಾ ಪ್ರಶ್ನೆ ಮಾಡಿದೆ.…

3 hours ago