ವೀರಶೈವ ಲಿಂಗಾಯತ ಮಹಾಸಭಾ ಅಧ್ಯಕ್ಷರ ರಾಜೀನಾಮೆಗೆ ಬಿಗಿಪಟ್ಟು
• ಮಹೇಂದ್ರ ಹಸಗೂಲಿ
ಗುಂಡ್ಲುಪೇಟೆ : ತಾಲ್ಲೂಕು ವೀರಶೈವ ಲಿಂಗಾಯತ ಮಹಾ ಸಭಾ ಅಧ್ಯಕ್ಷರು ರಾಜೀನಾಮೆ ನೀಡಬೇಕೆಂಬ ಕೂಗು ಕೇಳಿಬಂದಿದೆ. ಈ ಹಿಂದೆ ಚುನಾವಣೆ ನಡೆಸಿ ಸಮುದಾಯದಲ್ಲಿ ಗೊಂದಲ ಸೃಷ್ಟಿಸುವುದು ಬೇಡ ಎಂದು ಸಮಾಜದ ಮುಖಂಡರು ನಾಲ್ಕು ಜನರನ್ನು ಐದು ವರ್ಷಗಳ ಅವಧಿಗೆ ಇಂತಿಷ್ಟು ತಿಂಗಳು ಎಂದು ಅಧ್ಯಕ್ಷರಾಗಲು ಸೂಚಿಸಿದ ನಂತರ ಚುನಾವಣೆ ನಡೆದಿರಲಿಲ್ಲ.
ಮೊದಲ ಅವಧಿಗೆ ರವಿ ಕಮರಹಳ್ಳಿ, ನಂತರದ ಅವಧಿಗೆ ಕಡಬೂರು ಮಂಜು, ಹಂಗಳ ನಟೇಶ್, ಮಂಚಹಳ್ಳಿ ಬಾಬುರವರಿಗೆ ತಾಲ್ಲೂಕು ಅಧ್ಯಕ್ಷ ಸ್ಥಾನ ನೀಡಲು ಮಾತುಕತೆ ನಡೆದಿತ್ತು. ಮೊದಲ ಇಪ್ಪತ್ತು ತಿಂಗಳ ಅವಧಿಗೆ ಅಧ್ಯಕ್ಷರಾಗಿದ್ದ ಕಮರಹಳ್ಳಿ ರವಿ ಅವರ ಅಧಿಕಾರ ಅವಧಿ ಮುಗಿದಿದ್ದು, ರಾಜೀನಾಮೆ ನೀಡಬೇಕಿತ್ತು. ಆದರೆ ಇನ್ನೂ ನೀಡಿಲ್ಲ, ಕೂಡಲೆ ರಾಜೀನಾಮೆ ಸಲ್ಲಿಸಬೇಕು ಎಂದು ವೀರಶೈವ ಲಿಂಗಾಯತ ಮಹಾಸಭಾದ ಮಾಜಿ ಅಧ್ಯಕ್ಷ, ಸಮಾಜದ ಮುಖಂಡ ಹಂಗಳ ನಂಜಪ್ಪ ಒತ್ತಾಯಿಸಿದ್ದಾರೆ.
ಕಮರಹಳ್ಳಿ ರವಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡದಿದ್ದರೆ ನಿರ್ದೇಶಕರು ಅವಿಶ್ವಾಸ ನಿರ್ಣಯ ತರಲು ಸಾಧ್ಯವಿಲ್ಲ. ಆದರೆ ಯಾವ ನಿರ್ದೇಶಕರೂ ರವಿ ಮುಂದುವರಿಯಲು ಆಸಕ್ತಿ ಹೊಂದಿಲ್ಲ. ಎಲ್ಲರ ವಿರೋಧದ ನಡುವೆಯೂ ಅಧಿಕಾರದಲ್ಲಿ ಮುಂದುವರೆಯುವುದು ಸರಿಯಲ್ಲ. ಆದ್ದರಿಂದ 20 ತಿಂಗಳ ಅವಧಿ ಮುಗಿದಿರುವುದರಿಂದ ರಾಜೀನಾಮೆ ನೀಡಿ ಸಮುದಾಯದ ಬೆಳವಣಿಗೆಗೆ ಸಹಕರಿಸಲಿ ಎಂಬುದು ಕೆಲವು ನಿರ್ದೇಶಕರ ಒತ್ತಾಯವಾಗಿದೆ.
ರಾಜಕೀಯ ಹಿತಾಸಕ್ತಿ ಇರುವವರು ಮಹಾಸಭಾಗೆ ಬರಬೇಡಿ. ಇಲ್ಲಿ ರಾಜಕೀಯ ಮಾಡುವವರೇ ಹೆಚ್ಚಿರುವ ಕಾರಣ ಎಲ್ಲವೂ ರಾಜಕೀಯವಾಗುತ್ತಿದೆ. ಇದನ್ನು ಬಿಟ್ಟು ಸಮಾಜದ ಏಳಿಗೆ ಬಯಸಿ ಕೊಡುಗೆ ನೀಡುವ ಮನಸ್ಸಿನಿಂದ ಬನ್ನಿ. ಅಧಿಕಾರ ಯಾರಿಗೂ ಶಾಶ್ವತವಲ್ಲ. ಬಸವ ಭವನ ನಿರ್ಮಾಣಕ್ಕೆ ಜಾಗ ಖರೀದಿಸಲು ಮುಂದಾದರೆ ನಾನು ಕೂಡ ಕೈಜೋಡಿಸುತ್ತೇನೆ. ಸಮುದಾಯದ ಗೌರವಕ್ಕೆ ಧಕ್ಕೆಯಾಗದಂತೆ ನಡೆದುಕೊಳ್ಳಿ. -ನಂದೀಶ್ ಮೂಡ್ಲುಪುರ, ವೀ.ಲಿಂ. ಮಹಾಸಭಾ ಜಿಲ್ಲಾಧ್ಯಕ್ಷ ಸಮಾಜದ ಮುಖಂಡರು
ಸಮಾಜದ ಮುಖಂಡರು ಕಮರಹಳ್ಳಿ ರವಿಗೆ ಅವಕಾಶ ನೀಡುವಾಗ ಸಮ್ಮತಿಸಿದ್ದೆ. ನನಗೆ ಅಧ್ಯಕ್ಷನಾಗಬೇಕು ಎಂಬ ಸ್ವಾರ್ಥವಿಲ್ಲ. ಆದರೆ, ಯಾರೂ ಮಾತಿಗೆ ತಪ್ಪಿ ವಚನಭ್ರಷ್ಟರಾಗಬಾರದು. ನನಗೆ ಅಧ್ಯಕ್ಷ ಸ್ಥಾನ ನೀಡಿದರೆ ನಿಭಾಯಿಸುತ್ತೇನೆ. ಭವನದ ಜಾಗ ಖರೀದಿ ವಿಳಂಬವಾಗುತ್ತಿದ್ದು, ಆದಷ್ಟು ಬೇಗ ಜಾಗ ಖರೀದಿಸಬೇಕು. –ಮಂಜು ಕಡಬೂರು, ಮುಖಂಡ
ಎಲ್ಲರೂ ಕುಳಿತು ಚರ್ಚಿಸಿ, ಅಧ್ಯಕ್ಷರ ಆಯ್ಕೆ ವೇಳೆ ಇಪ್ಪತ್ತು ತಿಂಗಳು ಅವಧಿ ಎಂದು ನಿರ್ಧರಿಸಿದ ಮೇಲೆ ಅವಧಿ ಮುಗಿದ ಮೇಲೆ ರಾಜೀನಾಮೆ ನೀಡಬೇಕು. ಮುಂದಿನ ಅವಧಿಯನ್ನು ಬೇರೆಯವರಿಗೆ ಬಿಟ್ಟುಕೊಡಲು ಮಾತುಕೊಟ್ಟ ಮೇಲೆ ಅವರಿಗೆ ನೀಡಬೇಕಿದೆ. ಬಸವ ಭವನ ಜಾಗ ಖರೀದಿಗೆ ಎಲ್ಲರೂ ಒಟ್ಟಾಗಿ ಹಣ ಸಂಗ್ರಹ ಮಾಡೋಣ. -ಎಚ್.ಎಸ್.ನಂಜಪ್ಪ,
ವೀ.ಲಿಂ.ಮಹಾಸಭಾ ಮಾಜಿ ತಾಲ್ಲೂಕು ಅಧ್ಯಕ್ಷ
ನನ್ನ ಅಧಿಕಾರ ಅವಧಿ 20 ತಿಂಗಳು ಎಂದು ನಿರ್ಧರಿಸಿದ್ದು ನಿಜ. ಆದರೆ ಬಸವ ಭವನ ಜಾಗ ಖರೀದಿ ಮಾಡಲು ತೀರ್ಮಾನಿಸಿದ್ದು, ನಮ್ಮ ವಿರುದ್ಧ ಆರೋಪ ಮಾಡುವವರು ಸಹಕಾರ ನೀಡಿಲ್ಲ. ಇವರು ನಾಳೆಯಿಂದ ಜಾಗ ಖರೀದಿಗೆ ಹಣ ಸಂಗ್ರಹಕ್ಕೆ ಕೈಜೋಡಿಸಲಿ. ಎರಡು ತಿಂಗಳ ಒಳಗೆ ಹಣ ಸಂಗ್ರಹವಾಗಲಿದೆ. ಆದಾದ ಎರಡೇ ದಿನಕ್ಕೆ ರಾಜೀನಾಮೆ ನೀಡುತ್ತೇನೆ. ಇಪ್ಪತ್ತು ವರ್ಷ ಅಧ್ಯಕ್ಷರಾದವರು ಯಾಕೆ ಭವನ ನಿರ್ಮಾಣ ಮಾಡಲಿಲ್ಲ, ಕನಿಷ್ಠ ಜಾಗವನ್ನೂ ಖರೀದಿಸಲಿಲ್ಲ? ಈಗ ತಮ್ಮ ಮಗ ಅಧ್ಯಕ್ಷರಾಗಲಿ ಎಂದು ಮತ್ತೊಬ್ಬರ ಅಧಿಕಾರ ಕಸಿದುಕೊಳ್ಳುವುದು ಸರಿಯೇ?
–ರವಿ ಕಮರಹಳ್ಳಿ, ವೀ.ಲಿಂ.ಮಹಾಸಭಾ ತಾಲ್ಲೂಕು ಅಧ್ಯಕ್ಷ
ಮೈಸೂರು: ದಕ್ಷಿಣ ಭಾರತದ ಗಾನ ಕೋಗಿಲೆ ಎಂದೇ ಹೆಸರಾದ ಖ್ಯಾತ ಗಾಯಕಿ ಎಸ್.ಜಾನಕಿ ವಿಧಿವಶರಾಗಿದ್ದಾರೆ. ಅವರಿಗೆ 88 ವರ್ಷ ವಯಸ್ಸಾಗಿತ್ತು.…
ಗುಂಡ್ಲುಪೇಟೆ: ತಾಲ್ಲೂಕಿನ ಕಗ್ಗಳದಹುಂಡಿ ಗ್ರಾಮದ ಮನೆಯೊಳಗೆ ನುಗ್ಗಿದ್ದ ನಾಗರಹಾವನ್ನು ಉರಗಪ್ರೇಮಿ ಸ್ವಾಮಿ ಅವರು ಸುರಕ್ಷಿತವಾಗಿ ರಕ್ಷಿಸಿ ಅರಣ್ಯ ಪ್ರದೇಶಕ್ಕೆ ಬಿಟ್ಟಿದ್ದಾರೆ.…
ಮಡಿಕೇರಿ: ತಾಲ್ಲೂಕಿನ ಕೆದಕಲ್ ಸಮೀಪದ ಕೋಟೆಕಾಡು ಪ್ರದೇಶದಲ್ಲಿ ಬೈಕ್ ಸವಾರನ ಮೇಲೆ ಕಾಡುಕೋಣ ದಾಳಿ ನಡೆಸಿದ ಘಟನೆ ನಡೆದಿದೆ. ಕಕ್ಕಬ್ಬೆ…
ಮಹಾದೇಶ್ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ಪಟ್ಟಣದ ಮಹದೇಶ್ವರಬೆಟ್ಟ ಮುಖ್ಯರಸ್ತೆಯ ಸಮೀಪ ಶನಿವಾರ ಬೆಳಿಗ್ಗೆ ಹುಚ್ಚು ನಾಯಿಯೊಂದು…
ಹಾಸನ: ಜಿಲ್ಲೆಯ ಸಕಲೇಶಪುರ ಗವಿಬೆಟ್ಟದಲ್ಲಿ ಪ್ರವಾಸಿಗರು ರೀಲ್ಸ್ಗಾಗಿ ಥಾರ್ ಕಾರನ್ನು ಡ್ರಿಫ್ಟಿಂಗ್ ಮಾಡಿದ್ದಾರೆ. ಇದರಿಂದ ಜಾನುವಾರುಗಳ ಮೇವು ಹಾಗೂ ರಸ್ತೆಗೆ…
ಹನೋಯ್: ವಿಯೆಟ್ನಾಂ ಫು ಕ್ವಾಕ್ ದ್ವೀಪದ ಬಳಿ 32 ಮಂದಿ ಭಾರತೀಯ ಪ್ರವಾಸಿಗರನ್ನು ಹೊತ್ತೊಯ್ಯುತ್ತಿದ್ದ ಸ್ಪೀಡ್ ಬೋಟ್ ಮುಳುಗಡೆಯಾಗಿದ್ದು, ಕನಿಷ್ಠ…