ಚಾಮರಾಜನಗರ

ಸಾಲೂರು ಬೃಹನ್ಮಠದ ಹಿರಿಯ ಶ್ರೀ ಪಟ್ಟದ ಗುರುಸ್ವಾಮಿಗಳು ಇನ್ನಿಲ್ಲ

ಹನೂರು: ತಾಲೂಕಿನ ಪ್ರಸಿದ್ಧ ಧಾರ್ಮಿಕ ಯಾತ್ರಾಸ್ಥಳ ಮಲೆ ಮಹದೇಶ್ವರ ಬೆಟ್ಟದ ಸಾಲೂರು ಬೃಹನ್ ಮಠದ 17ನೇ ಪೀಠಾಧ್ಯಕ್ಷರಾದ ಹಿರಿಯ ಶ್ರೀಗಳಾದ ಶ್ರೀ ಪಟ್ಟದ ಗುರುಸ್ವಾಮಿಗಳು ಮಂಗಳವಾರ ಮುಂಜಾನೆ ನಿಧನರಾಗಿದ್ದಾರೆ.

ಶ್ರೀ ಗುರುಸ್ವಾಮಿ ರವರು ಹನೂರು ತಾಲೂಕಿನ ಜಿ.ಕೆ ಹೊಸೂರು (ಗಂಗಾಧರನ ಕಟ್ಟೆ)ಗ್ರಾಮದ ರುದ್ರಪ್ಪ ಮತ್ತು ಶರಣೆ ಪುಟ್ಟ ಮಾದಮ್ಮ ರವರ ಜೇಷ್ಠ ಪುತ್ರರಾಗಿದ್ದು 1956 ಆಗಸ್ಟ್ 2ರಂದು ಜನ್ಮ ಪಡೆದಿದ್ದರು. ನಂತರ ಸಾಲೂರು ಬ್ರಹನ್ ಮಠಕ್ಕೆ 17ನೇ ಪೀಠಾಧ್ಯಕ್ಷರಾಗಿ ಜನವರಿ.29, 1995 ರಂದು ಅಧಿಕಾರ ವಹಿಸಿಕೊಂಡಿದ್ದರು.

ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದ ಸಾಲೂರು ಮಠಕ್ಕೆ ಅನನ್ಯ ಗಣ್ಯವಾದ ಸ್ಥಾನವಿದೆ. ಅದು ಸಾಮಾನ್ಯವಾದ ಮಠವಲ್ಲ ಶ್ರೀ ಮಲೆಯ ಮಹದೇಶ್ವರ ಅವರಿಗೆ ಅನುಗ್ರಹಿಸಿದ ತಪೋವನ, ಭಕ್ತರನ್ನು ದೇವರಗುಡ್ಡರನ್ನು ಆಧ್ಯಾತ್ಮದತ್ತ ಕರೆದೊಯ್ಯುವ ಪುಣ್ಯಧಾಮವಾಗಿದೆ.

ಶ್ರೀ ಶಾಂತ ಮಲ್ಲಿಕಾರ್ಜುನ ಸ್ವಾಮಿಗಳಿಂದ ಸ್ಥಾಪಿತವಾದ ಶ್ರೀ ಸಾಲೂರು ಸ್ವಾಮಿ ಮಠವು ವಿಶ್ವಮಾನವ ಧೋರಣೆಯುಳ್ಳದ್ದು ಭಕ್ತಿ ಗೌರವ ಭೋದಿಸುವ ಸಂಜೀವಿನಿಗಳಿಂದ ಕೂಡಿದೆ.

ಶ್ರೀ ಪಟ್ಟದ ಗುರುಸ್ವಾಮಿಗಳು ತಮ್ಮ 12ನೇ ವಯಸ್ಸಿನಲ್ಲಿ ಶ್ರೀಮಠಕ್ಕೆ ಬಂದು ಕಾಯ, ವಾಚ, ಮನಸ ತ್ರಿಕರಣ ಶುದ್ದಿಯಿಂದ ಎಲೆಮರಿ ಕಾಯಿಯಂತೆ ದುಡಿದರು. 1957ರಲ್ಲಿ ಶ್ರೀಮಠಕ್ಕೆ ಬಂದಾಗ ಮುದ್ದು ವೀರ ಸ್ವಾಮಿಗಳು, ಕೆಂಪನಂಜಸ್ವಾಮಿಗಳು, ಮಹಾದೇವಸ್ವಾಮಿಗಳು, ಹಾಗೂ ಗುಂಡೇಗಾಲದ ಮಲ್ಲಿಕಾರ್ಜುನ ಸ್ವಾಮಿರವರು ಶ್ರೀಮಠದ ಸೇವೆಯಲ್ಲಿ ನಿರತರಾಗಿದ್ದರು. ಇವರೆಲ್ಲರ ಸೇವೆಯನ್ನು ಭಕ್ತಿ ಗೌರವದಿಂದ ಭಕ್ತರ ಹೃದಯವನ್ನು ಗೆದ್ದವರು ಶ್ರೀ ಪಟ್ಟದ ಗುರು ಸ್ವಾಮಿಗಳು.

ಶ್ರೀ ಪಟ್ಟದ ಗುರುಸ್ವಾಮಿಗಳ‌ ಅಧಿಕಾರ ಅವಧಿಯಲ್ಲಿ ಶ್ರೀಮಠದಲ್ಲಿ ನಿತ್ಯ ದಾಸೋಹ ಸೇವೆ, ಶ್ರೀ ಮಹದೇಶ್ವರ ದೇವಸ್ಥಾನದ ಅಭಿವೃದ್ಧಿ, ಶ್ರೀ ಮಠದ ಅಭಿವೃದ್ಧಿ, ಅರ್ಚಕರ ಜೀವನದ ಉದ್ದಾರ ಜೊತೆಗೆ ಶ್ರೀ ಸಾಲೂರು ಸ್ವಾಮಿ ಟ್ರಸ್ಟ್ ವತಿಯಿಂದ ಪೂನ್ನಾಚಿ ಗ್ರಾಮದಲ್ಲಿ ಗಿರಿಜನ ದಿನದಲಿತರ ಹಿಂದುಳಿದವರ ಉಳಿವಿಗಾಗಿ ಪ್ರೌಢಶಾಲೆ ಮತ್ತು ಉಚಿತ ಹಾಸ್ಟೆಲ್ ಸ್ಥಾಪನೆ, 1999ರಲ್ಲಿ ಕೊಳ್ಳೇಗಾಲ ತಾಲೂಕಿನ ಕೆಂಪನಪಾಳ್ಯದಲ್ಲಿ ಪ್ರೌಢಶಾಲೆ, ಹನೂರು ಹೊರವಲಯದಲ್ಲಿ ವೃದ್ಧರಿಗೆ ಆಶ್ರಯ ನೀಡಲು ೧೦ ಎಕರೆ ಪ್ರದೇಶದಲ್ಲಿ ವಿಸ್ತೀರ್ಣದಲ್ಲಿ ವೃದ್ಧಾಶ್ರಮವನ್ನು ಸ್ಥಾಪಿಸಿ , ನೂರಾರು ನಿರಾಶ್ರಿತರಿಗೆ ಆಶ್ರಯದಾತರಾಗಿದ್ದಾರೆ. ಗ್ರಾಮೀಣ ಮಕ್ಕಳಿಗೆ ಅನುಕೂಲವಾಗಲು ಹಲವಾರು ಸಂಸ್ಕೃತ ಪಾಠ ಶಾಲೆಗಳನ್ನು ತೆರೆದಿದ್ದಾರೆ. ಹಬ್ಬ ಜಾತ್ರೆ ಸಂದರ್ಭದಲ್ಲಿ ಸಹಸ್ರಾರು ಮಂದಿ ಭಕ್ತರು ಇಲ್ಲಿ ದಾಸೋಹ ಸ್ವೀಕರಿಸಲು ಅನುವು ಮಾಡಿಕೊಟ್ಟಿದ್ದರು.

ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದಲ್ಲಿ ನಡೆಯುವ ಶಿವರಾತ್ರಿ, ಯುಗಾದಿ, ಕಾರ್ತಿಕ ಸೋಮವಾರ, ಎಣ್ಣೆ ಮಜ್ಜನ ಸೇವೆ, ವಿಜಯದಶಮಿ, ದೀಪಾವಳಿ ಮುಂತಾದ ವಿಶೇಷ ದಿನಗಳಲ್ಲಿ ಉಪಸ್ಥಿತರಿದ್ದು, ಭಕ್ತಾದಿಗಳಿಗೆ ದರ್ಶನ ಆಶೀರ್ವಾದ ನೀಡುತ್ತಾ ಬಂದಿದ್ದರು, ಶ್ರೀ ಕ್ಷೇತ್ರಕ್ಕೆ ಧರ್ಮದರ್ಶಿಯಾಗಿದ್ದ ಶ್ರೀ ಗುರುಸ್ವಾಮಿಗಳರವರು ದೇವಸ್ಥಾನದ ಎಲ್ಲಾ ಧಾರ್ಮಿಕ ಸಭೆ ಸಮಾರಂಭಗಳಲ್ಲಿ, ಅಭಿವೃದ್ಧಿ ಕ್ರಿಯಾ ಯೋಜನೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದರು. ಜಿಲ್ಲೆಯ ಎಲ್ಲಾ ರಾಜಕಾರಣಿಗಳ ಜೊತೆ ಉತ್ತಮ ಒಡನಾಟ ಇಟ್ಟುಕೊಂಡಿದ್ದರು.

ಕಳೆದ ನಾಲ್ಕು ವರ್ಷಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಇವರು ಶಿಷ್ಯರಾದ ಶಾಂತ ಮಲ್ಲಿಕಾರ್ಜುನ ಸ್ವಾಮಿ (ನಾಗೇಂದ್ರ) ರವರನ್ನು ಕಿರಿಯ ಶ್ರೀಗಳನ್ನಾಗಿ ಪಟ್ಟಾಭಿಷೇಕ ಮಾಡಿಸಿದ್ದರು. ಕಳೆದ ಕೊರೋನಾ ಸಂದರ್ಭದಲ್ಲಿ ಹಾಸಿಗೆ ಹಿಡಿದು ಇವರು ಬದುಕುವುದೇ ಇಲ್ಲ ಎಂದು ಅಷ್ಟರಮಟ್ಟಿಗೆ ಬಳಲುತ್ತಿದ್ದರು. ಆದರೆ ಕಿರಿಯ ಶ್ರೀಗಳ ಹಾರೈಕೆಯಿಂದ ನಾಲ್ಕು ವರ್ಷಗಳ ಕಾಲ ಚೇತರಿಸಿಕೊಂಡಿದ್ದರು. ಆದರೆ ಒಂದು ವಾರದಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಮಂಗಳವಾರ ಮುಂಜಾನೆ ನಿಧನರಾಗಿದ್ದಾರೆ.

ಸುತ್ತೂರು ಶ್ರೀ, ತುಮಕೂರು ಸಿದ್ದಗಂಗಾ ಮಠದ ಶ್ರೀಗಳ ಸಮ್ಮುಖದಲ್ಲಿ ಸಾಲೂರು ಬೃಹನ್ ಮಠದ ಆವರಣದಲ್ಲಿ ಸಂಜೆ 5 ಗಂಟೆಗೆ ಅಂತ್ಯಕ್ರಿಯೆ ನೆರವೇರಲಿದೆ.

ಆಂದೋಲನ ಡೆಸ್ಕ್

Recent Posts

ವಿಧಾನಸಭೆಯಲ್ಲಿ ಹನೂರು ಎನ್‌ಕೌಂಟರ್‌ ಸದ್ದು: ಗದ್ದಲ ಕೋಲಾಹಲ

ಬೆಂಗಳೂರು: ವಿಧಾನಸಭೆಯ ಕಲಾಪದಲ್ಲಿಂದು ಹನೂರು ಎನ್‌ಕೌಂಟರ್‌ ಪ್ರಕರಣ ಭಾರೀ ಚರ್ಚೆಗೆ ಕಾರಣವಾಯಿತು. ಕಲಾಪ ಆರಂಭವಾದ ತಕ್ಷಣವೇ ವಿಷಯ ಪ್ರಸ್ತಾಪಿಸಿದ ಆರ್.ಅಶೋಕ್‌,…

1 hour ago

ಕಾರ್ಮಿಕರ ಮೇಲೆ ಕಾಡಾನೆ ದಾಳಿ: ಒಬ್ಬ ಸಾವು, ಮತ್ತೊಬ್ಬನ ಸ್ಥಿತಿ ಗಂಭೀರ

ಕೊಡಗು: ಸಿದ್ದಾಪುರ ವ್ಯಾಪ್ತಿಯ ಶಿಲ್ಪ ಎಸ್ಟೇಟ್‌ನಲ್ಲಿ ಕೆಲಸ ನಿರ್ವಹಿಸುತ್ತಿದ್ದ ಕಾರ್ಮಿಕರ ಮೇಲೆ ಕಾಡಾನೆ ಏಕಾಏಕಿ ದಾಳಿ ನಡೆಸಿದೆ. ಬಂಗಾಳ ಮೂಲದ…

3 hours ago

ಕಾವೇರಿ ವನ್ಯಜೀವಿಧಾಮದಲ್ಲಿ ಎನ್‌ಕೌಂಟರ್: ಮೃತ 3 ಕುಟುಂಬಗಳಿಗೆ ಶಾಸಕ ಎಂ.ಆರ್. ಮಂಜುನಾಥ್ 15 ಲಕ್ಷ ಪರಿಹಾರ

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ಕಾವೇರಿ ವನ್ಯಜೀವಿಧಾಮದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳ ಗುಂಡಿನ ದಾಳಿಗೆ ಬಲಿಯಾಗಿದ್ದ…

3 hours ago

ಹನೂರಿನಲ್ಲಿ ಮೂವರ ಎನ್‌ಕೌಂಟರ್ ಪ್ರಕರಣ: ಘಟನಾ ಸ್ಥಳಕ್ಕೆ ತನಿಖಾ ತಂಡ ಭೇಟಿ

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ತಾಲ್ಲೂಕಿನ ಕಾವೇರಿ ವನ್ಯಜೀವಿ ಧಾಮ ವ್ಯಾಪ್ತಿಯಲ್ಲಿ ನಡೆದ ಎನ್‌ಕೌಂಟರ್ ಘಟನೆಯ…

5 hours ago

ವಿಚಾರಣೆ ಇಲ್ಲದೆ ಶಿಕ್ಷೆ ಕೊಡಲು ಸಂವಿಧಾನ ಒಪ್ಪುವುದಿಲ್ಲ

ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನ ಕಾವೇರಿ ವನ್ಯಜೀವಿಧಾಮದ ಹನೂರು ವಲಯದ ಶಾಗ್ಯ ಬೀಟ್ ವ್ಯಾಪ್ತಿಯ ಹೊಳೆಮುರಿ ದಟ್ಟಿ ಅರಣ್ಯ ಪ್ರದೇಶದಲ್ಲಿ…

8 hours ago

ಆ ಮೂರು ಜೀವಗಳಿಗೂ ಬೆಲೆಯೇ ಇರಲಿಲ್ಲವೇ?

ಅನ್ಬುರಾಜ್ ಅರಣ್ಯ ಇಲಾಖೆ ಮತ್ತೆ ತನ್ನ ಇತಿಹಾಸವನ್ನು ಹಿಂದಕ್ಕೆ ಕೊಂಡೊಯ್ಯುತ್ತಿರುವಂತೆ ಕಾಣುತ್ತಿದೆ. ಜನವಿರೋಧಿ ಧೋರಣೆಯನ್ನು ಅನುಸರಿಸಿ, ಅರಣ್ಯದ ಅಂಚಿನಲ್ಲಿ ವಾಸಿಸುವ…

8 hours ago