ಜಿಲ್ಲೆಗಳು

ಬಾಳೆಲೆ ಕೈನಾಟಿಯಲ್ಲಿ 66 ಕೆ.ವಿ. ವಿದ್ಯುತ್ ಉಪಕೇಂದ್ರ..!

ಸುಮಾರು ೧೫ ವರ್ಷದ ಹೋರಾಟಕ್ಕೆ ದೊರೆತ ಫಲ: ಕೆಪಿಟಿಸಿಎಲ್‌ನಿಂದ ೧.೫೦ ಎಕರೆ ಜಾಗ ಖರೀದಿ

ಗೋಣಿಕೊಪ್ಪಲು: ದಕ್ಷಿಣ ಕೊಡಗಿನ ಗಡಿಭಾಗ ಬಾಳೆಲೆ ವ್ಯಾಪ್ತಿಯ ಸುಮಾರು ೧೫ ವರ್ಷಗಳ ವಿದ್ಯುತ್ ಸಮಸ್ಯೆಗೆ ಕಡೆಗೂ ಮುಕ್ತಿ ದೊರೆಯುವ ದಿನಗಳು ಹತ್ತಿರವಾಗಿದ್ದು, ಕೈನಾಟಿಯಲ್ಲಿ ೬೬ ಕೆ.ವಿ. ವಿದ್ಯುತ್ ಉಪಕೇಂದ್ರ ಸ್ಥಾಪನೆಗೆ ನಿರ್ಧರಿಸಲಾಗಿದೆ.

ಬಾಳೆಲೆ ಕಳೆದ ಹಲವು ವರ್ಷಗಳಿಂದ ಬೇಸಿಗೆಯಲ್ಲಿಯೂ ನಿರಂತರ ವಿದ್ಯುತ್ ಕಡಿತದಿಂದ ಆ ಭಾಗದ ಸುಮಾರು ೭ ಸಾವಿರಕ್ಕೂ ಅಧಿಕ ವಿದ್ಯುತ್ ಗ್ರಾಹಕರು ತೊಂದರೆ ಅನುಭವಿಸುತ್ತಾ ಬಂದಿದ್ದರು. ಬೇಸಿಗೆಯಲ್ಲಿಯೂ ಓಲ್ಟೇಜ್ ಡ್ರಾಪ್ ಸಮಸ್ಯೆಯಿಂದಾಗಿ ಕಾಫಿ ತೋಟಕ್ಕೆ ಪಂಪ್‌ಸೆಟ್ ಮೂಲಕ ನೀರು ಹಾಯಿಸಲೂ ರೈತರು ಬವಣೆ ಅನುಭವಿಸುತ್ತಿದ್ದರು. ಬಾಳೆಲೆಗೆ ಪ್ರತ್ಯೇಕ ವಿದ್ಯುತ್ ಉಪಕೇಂದ್ರ ಸ್ಥಾಪನೆಯಾದಲ್ಲಿ ಈ ಎಲ್ಲ ಸಮಸ್ಯೆಗಳಿಗೂ ಮುಕ್ತಿ ದೊರಕಲಿದೆ ಎಂದು ಹೇಳಲಾಗಿತ್ತು. ಇದೀಗ ಬಾಳೆಲೆಯಲ್ಲಿ ೬೬ ಕೆ.ವಿ. ಸಾಮರ್ಥ್ಯದ ವಿದ್ಯುತ್ ಉಪಕೇಂದ್ರ ಸ್ಥಾಪಿಸಲು ಸುಮಾರು ೧.೫೦ ಎಕರೆ ನಿವೇಶನವನ್ನು ಕರ್ನಾಟಕ ವಿದ್ಯುತ್ ಸರಬರಾಜು ನಿಗಮ ನಿಯಮಿತದ ವತಿಯಿಂದ ಸುಮಾರು ರೂ.೬೦ ಲಕ್ಷ ಮೊತ್ತಕ್ಕೆ ಖರೀದಿಸಲಾಗಿದೆ.

ಸುದೀರ್ಘ ೧೫ ವರ್ಷದ ಹೋರಾಟದ ಫಲವಾಗಿ ಇದೀಗ ಮುಂದಿನ ಒಂದು ವರ್ಷ ಅವಧಿಗೂ ಮುನ್ನ ಕಾಮಗಾರಿ ಆರಂಭವಾಗಲಿದೆ. ಬಾಳೆಲೆ ಸಮೀಪ ಕೈನಾಟಿ ಎಂಬಲ್ಲಿ ಸಮಾಜಸೇವಕಿ ಸ್ವಾತಿ ಕುಟ್ಟಯ್ಯ ಅವರು ಸರ್ವೆ.ನಂ.೭೬/೧೭ರಲ್ಲಿ ಒಟ್ಟು ೪.೨೫ ಎಕರೆ ಕಾಫಿ ತೋಟದಲ್ಲಿ ಒಂದೂವರೆ ಎಕರೆ ಜಾಗವನ್ನು ಕೆಪಿಟಿಸಿಎಲ್‌ಗೆ ಮಾರಾಟ ಮಾಡಿದ್ದಾರೆ. ಕೈನಾಟಿ ಜಂಕ್ಷನ್‌ನಿಂದ ೩೦೦ ಮೀಟರ್ ಅಂತರದಲ್ಲಿ ರಸ್ತೆ ಬದಿಯ ಜಾಗದಲ್ಲಿ ವಿದ್ಯುತ್ ಉಪಕೇಂದ್ರ ಸ್ಥಾಪನೆಯಾಗಲಿದೆ.

ಈ ಹಿಂದೆ ನಿಟ್ಟೂರು ಹಾಗೂ ಬಾಳೆಲೆ-ಗೋಣಿಕೊಪ್ಪಲು ಮುಖ್ಯರಸ್ತೆಯ ಬದಿಯಲ್ಲಿಯೇ ನಿವೇಶನ ಗುರುತಿಸಲಾಗಿತ್ತಾದರೂ ತಾಂತ್ರಿಕ ಕಾರಣದಿಂದ ತಿರಸ್ಕ್ರತಗೊಂಡಿತ್ತು. ಪ್ರಮುಖವಾಗಿ ಇಬ್ಬರು ಗ್ರಾಮಸ್ಥರ ನಿರಂತರ ಪರಿಶ್ರಮದಿಂದ ಉಪಕೇಂದ್ರಕ್ಕೆ ಸ್ಥಳ ಲಭ್ಯವಾಗಿದೆ. ಜಿಲ್ಲೆಯ ಜನಪ್ರತಿನಿಧಿಗಳ ಸಹಕಾರ ಇಲ್ಲದೆ ಗ್ರಾಮಸ್ಥರೇ ಹೋರಾಟದ ಮೂಲಕ ಬಾಳೆಲೆ ಹೋಬಳಿಯ ವಿದ್ಯುತ್ ಅಭಾವ ನೀಗಲು ಪಣತೊಟ್ಟು ಯಶಸ್ವಿಯಾಗಿದ್ದಾರೆ.

ಬಾಳೆಲೆಯ ಬೆಳೆಗಾರರಾದ ಮಲ್ಚೀರ ವಿಠಲ್ ಹಾಗೂ ಅರಮಣಮಾಡ ಜೀವನ್ ಸತತ ಪ್ರಯತ್ನ ಇದರ ಹಿಂದೆ ಇದೆ. ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ್ ಅವರ ಮೂಲಕ ಕೆಪಿಟಿಸಿಎಲ್ ವ್ಯವಸ್ಥಾಪಕ ನಿರ್ದೇಶಕರಾದ ಮಂಜುಳಾ ಅವರಿಗೆ ಪತ್ರ ಬರೆದು ಒತ್ತಡ ಹಾಕಿದ ನಂತರ ಜಾಗ ಖರೀದಿಗೆ ನಿರ್ಧರಿಸಲಾಯಿತು. ಇದೇ ಜಾಗ ಈ ಹಿಂದೆ ಕೆಪಿಟಿಸಿಎಲ್ ನಿಂದ ನಿರಾಕರಣೆಯಾಗಿತ್ತು.

ನಂತರ ವಿದ್ಯುತ್ ಮಂತ್ರಿ ಸುನಿಲ್‌ಕುಮಾರ್ ಅವರನ್ನು ವಿಠಲ್ ಹಾಗೂ ಜೀವನ್ ಖುದ್ದು ಭೇಟಿ ಮಾಡಿ ಉಪಕೇಂದ್ರದ ಅಗತ್ಯವನ್ನು ಮನವರಿಕೆ ಮಾಡಲಾಯಿತು. ಕರ್ನಾಟಕ ಕೃಷಿ ಮೋರ್ಚಾದ ಅಧ್ಯಕ್ಷ ನಾರಾಯಣ ಸ್ವಾಮಿ ವಿದ್ಯುತ್ ಮಂತ್ರಿಯನ್ನು ಭೇಟಿ ಮಾಡಲು ಸಹಕರಿಸಿದ್ದರು. ಕೆಪಿಟಿಸಿಎಲ್ ಜಾಗ ಖರೀದಿಸಬೇಕಾದರೆ ಸುಮಾರು ೧೪ ಭೂ ದಾಖಲೆ ಇತ್ಯಾದಿಯನ್ನು ಒದಗಿಸಬೇಕಿತ್ತು. ವಿಠಲ್ ಹಾಗೂ ಜೀವನ್ ಶ್ರಮವಹಿಸಿ ಭೂ ದಾಖಲೆಯನ್ನೂ ಒದಗಿಸಿದ್ದೇ ಅಲ್ಲದೆ ಸ್ವಾತಿ ಕುಟ್ಟಯ್ಯ ಅವರ ಇಬ್ಬರು ಪುತ್ರರಿಗೆ ಮನವರಿಕೆ ಮಾಡುವ ಮೂಲಕ ರೂ.೬೦ ಲಕ್ಷ ಮೊತ್ತಕ್ಕೆ ಒಂದೂವರೆ ಎಕರೆ ಆಸ್ತಿ ಮಾರಾಟ ಮಾಡಲು ಒಪ್ಪಿಸಲಾಯಿತು.

ಯೋಜನಾ ವೆಚ್ಚದ ಅಂದಾಜು ಪಟ್ಟಿ(ಡಿಪಿಆರ್) ಇನ್ನಷ್ಟೇ ಸಿದ್ಧವಾಗಬೇಕಿದೆ. ಸರ್ವೆ ಕಾರ್ಯ ನಡೆದು ಇ ಟೆಂಡರ್ ಮೂಲಕ ಗುತ್ತಿಗೆದಾರನಿಗೆ ಕಾಮಗಾರಿ ವಹಿಸಲು ೬ ತಿಂಗಳಿಗೂ ಹೆಚ್ಚು ಸಮಯಾವಕಾಶ ತೆಗೆದುಕೊಳ್ಳಬಹುದು ಎನ್ನಲಾಗಿದೆ.

ಹುಣಸೂರು ಮಾರ್ಗ ಪೊನ್ನಂಪೇಟೆ ಉಪಕೇಂದ್ರಕ್ಕೆ ಇದೀಗ ಸರಬರಾಜಾಗುತ್ತಿರುವ ೬೬ ಕೆ.ವಿ. ವಿದ್ಯುತ್ ಲೈನ್‌ನನ್ನು ಬಾಳೆಲೆಗೆ ಸಮೀಪ ಅಂದರೆ ಕೋಣನಕಟ್ಟೆ ಅಥವಾ ಮಾಯಮುಡಿಯಲ್ಲಿ ವಿಭಜಿಸಲಾಗುತ್ತದೆ. ಇದೀಗ ಕೈನಾಟಿ ಗುಂಡಿಗದ್ದೆ ಬಳಿ ನೂತನ ಉಪಕೇಂದ್ರ ಸ್ಥಾಪಿಸಿ ೬೬ ಕೆ.ವಿ. ವಿದ್ಯುತ್ ಲೈನ್ ಸಂಪರ್ಕ ಕಲ್ಪಿಸಲಾಗುವುದು. -ಮಾದೇಶ್, ಕಾರ್ಯಪಾಲಕ ಅಭಿಯಂತರರು, ಕೆಪಿಟಿಸಿಎಲ್ ಬೃಹತ್ ಕಾಮಗಾರಿ ವಿಭಾಗ

ರಾಜಕೀಯ ರಹಿತವಾಗಿ ಗ್ರಾಮಗಳ ಏಳಿಗೆಗೆಗಾಗಿ ಶ್ರಮವಹಿಸಿದ್ದೇವೆ. ಉದ್ದೇಶಿತ ಉಪಕೇಂದ್ರ ಸ್ಥಾಪನೆಯಾದರೆ ಯಾವುದೇ ವಿದ್ಯುತ್ ಸಮಸ್ಯೆ ಉಂಟಾಗದೆ ಬಾಳೆಲೆ ಹೋಬಳಿ, ಕಾನೂರು, ಪೊನ್ನಪ್ಪಸಂತೆ, ನಲ್ಲೂರು, ಬಿಳೂರು, ಬೆಕ್ಕೆಸೊಡ್ಲೂರು ಮುಂತಾದ ಗ್ರಾಮಗಳ ಅಂದಾಜು ೮೦೦೦ ಗ್ರಾಹಕರಿಗೆ ವಿದ್ಯುತ್ ಅಭಾವ ನೀಗಲಿದೆ. -ಮಲ್ಚೀರ ವಿಠಲ್, ಅರಮಣಮಾಡ ಜೀವನ್, ಉಪಕೇಂದ್ರ ಸ್ಥಾಪನೆಗೆ ಶ್ರಮಿಸಿದವರು

 

 

andolana

Recent Posts

ಜಾತಿ ಜತೆಗೆ ಕನಸು ಕಾಣುವ ಅಸಮಾನತೆಯೂ ಸೃಷ್ಟಿ : ನಾಗಭೂಷಣಸ್ವಾಮಿ ವಿಷಾದ

ಮೈಸೂರು : ಸುಧಾರಣೆ ನೆಪದಲ್ಲಿ ಕ್ರೌರ್ಯ ನಡೆಯುತ್ತಿದೆ. ಜೈಲಲ್ಲಿರುವ ಕೈದಿಗಳಿಗೆ ಕನಸು ಕಾಣುವ ಸ್ವಾತಂತ್ರ್ಯವೂ ಇಲ್ಲದಾಗಿದೆ. ಆರ್ಥಿಕ, ಅಧಿಕಾರ ಮತ್ತು…

3 mins ago

ನೆತನ್ಯಾಹು ಬದುಕಿದ್ದಾರೆ, ಹತ್ಯೆ ವದಂತಿ ಸುಳ್ಳು ; ಇಸ್ರೇಲ್‌

ಜೆರುಸಲೆಮ್‌ : ಪಶ್ಚಿಮ ಏಷ್ಯಾದ ಸಂಘರ್ಷ ದಿನೇ ದಿನೇ ಹೆಚ್ಚುತ್ತಿದೆ. ಈ ವೇಳೆ ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಅವರನ್ನು…

22 mins ago

ಕೆರೆ ಅಭಿವೃದ್ಧಿಪಡಿಸಿ ರೈತರಿಗೆ ಅನುಕೂಲ ಕಲ್ಪಿಸಲಾಗುವುದು : ಹನೂರು ಶಾಸಕ ಮಂಜುನಾಥ್‌

ಹನೂರು : ಹನೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿರುವ ಕೆರೆಗಳನ್ನು ಅಭಿವೃದ್ಧಿಪಡಿಸಿ ನೀರಾವರಿ ವ್ಯವಸ್ಥೆ ಕಲ್ಪಿಸುವುದರ ಮೂಲಕ ರೈತರಿಗೆ ವ್ಯವಸಾಯಕ್ಕೆ ಹೆಚ್ಚಿನ…

1 hour ago

ಹನೂರು | ಸುಗಮ ಸಂಚಾರಕ್ಕೆ 4.5ಕೋಟಿ ವೆಚ್ಚದಲ್ಲಿ 2 ಸೇತುವೆ ನಿರ್ಮಾಣ

ಹನೂರು : ಮಳೆಗಾಲದ ಸಂದರ್ಭದಲ್ಲಿ ರೈತರು ಹಾಗೂ ನೆರೆಯ ತಮಿಳುನಾಡಿಗೆ ತರಕಾರಿ ತೆಗೆದುಕೊಂಡು ಹೋಗುತ್ತಿದ್ದ ವಾಹನ ಸವಾರರಿಗೆ ತೊಂದರೆಯಾಗುತ್ತಿದ್ದ ಹಿನ್ನೆಲೆ,…

1 hour ago

ರಾಜ್ಯದ 2 ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ : ಇಲ್ಲಿದೆ ಮಾಹಿತಿ

ಬೆಂಗಳೂರು : ಭಾರತೀಯ ಚುನಾವಣಾ ಆಯೋಗವು(ಇಸಿಐ) ರಾಜ್ಯದ ಎರಡು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ದಿನಾಂಕವನ್ನು ಭಾನುವಾರ ಪ್ರಕಟಿಸಿದೆ. ಈ ಕುರಿತು…

2 hours ago

ಪಂಚ ರಾಜ್ಯಗಳ ಚುನಾವಣೆಗೆ ದಿನಾಂಕ ಘೋಷಿಸಿದ ಚುನಾವಣಾ ಆಯೋಗ

ಹೊಸದಿಲ್ಲಿ : 4 ರಾಜ್ಯಗಳು ಮತ್ತು 1 ಕೇಂದ್ರಾಡಳಿತ ಪ್ರದೇಶಗಳ ವಿಧಾನಸಭಾ ಚುನಾವಣೆ ವೇಳಾಪಟ್ಟಿಯನ್ನು ಭಾರತ ಚುನಾವಣಾ ಆಯೋಗ(ಇಸಿಐ) ಅಧಿಕೃತವಾಗಿ…

2 hours ago