ಅಂಕಣಗಳು

ಭಾವಗಳನ್ನು ಬಡಿದೆಬ್ಬಿಸಿದ `ವಿನ್ಯಾಸ ಕಾವ್ಯ’

ಜಿ.ಪಿ.ಬಸವರಾಜು

ಮತ್ತೆ ಮತ್ತೆ ಕೇಳಬೇಕೆನ್ನಿಸುವ ಸಂಗೀತ ವಿತ್ತು. ಕಣ್ಣು ತುಂಬುವ ಬಣ್ಣಗಳಿದ್ದವು. ಕಾವ್ಯದ ಸಾಲುಗಳಿದ್ದವು. ನಟ ನಟಿಯರಿದ್ದರು. ಅಭಿನಯವೂ ಇತ್ತು. ತುಣುಕು ತುಣುಕು ಚಿತ್ರಗಳೂ ಇದ್ದವು. ಬೆಳಕಿನ ವಿನ್ಯಾಸದಲ್ಲಿ ಹೊಸ ಹೊಸ ಅರ್ಥಗಳಿ ದ್ದವು.

ಪಾತ್ರಗಳು ಆಡುವ ಮಾತುಗಳಲ್ಲಿ ಕಥೆಗಳೂ ಇದ್ದವು. ಅಲ್ಲಿ ಇಲ್ಲಿ ಹರಿ ದಾಡುತ್ತಿದ್ದ ಕಾವ್ಯದ ಸಾಲುಗಳ ಹುಡು ಕಾಟವೂ ಇತ್ತು. ಕತ್ತಲೆ-ಬೆಳಕಿನ ಆಟವೂ, ರಂಗ ವಿನ್ಯಾಸವೆಂಬ ಮೋಹಕ ನೋಟವೂ ಇದ್ದವು. ಶನಿವಾರ (ಜೂನ್ ೧೪, ೨೦೨೫) ಮೈಸೂರಿನ ರಂಗಾಯಣ ದಲ್ಲಿ ಪ್ರದರ್ಶನಗೊಂಡ ‘ವಿನ್ಯಾಸ ಕಾವ್ಯ’ದಲ್ಲಿ ಎಲ್ಲವೂ ಇದ್ದರೂ, ನೇರವಾಗಿ ಬಿಚ್ಚಿಕೊಳ್ಳುವ ಯಾವ ಕಥೆಯೂ ಇರಲಿಲ್ಲ.

ನಾಟಕದಲ್ಲಿ ಕಥೆಯನ್ನು ಹುಡುಕುವ ನೋಟಕರು ಅಂಥ ಕಥೆಗಾಗಿ ಹುಡುಕಾಡಿರಬಹುದು. ಆದರೆ ಅಂಥ ಕಥೆಯನ್ನು ಕಟ್ಟಿಕೊಡಲು ನಿರಾಕರಿಸಿದ ನಾಟಕ, ತುಣುಕು ತುಣುಕು ಚಿತ್ರಗಳನ್ನು ಕೊಡುತ್ತಲೇ ಮನದಾಳದ ಭಾವಗಳನ್ನು ಮೀಟಿತು. ಈ ಭಾವಗಳ ಮೂಲಕವೇ ಪ್ರತಿಯೊಬ್ಬರೂ ತಮ್ಮ ತಮ್ಮ ಕಥೆಗಳನ್ನು ಕಟ್ಟಿಕೊಂಡು ಚಪ್ಪಾಳೆ ತಟ್ಟಿದರು.

ರಂಗಾಯಣದಲ್ಲಿ ವಿನ್ಯಾಸಕಾರರಾಗಿ ಸುದೀರ್ಘಕಾಲ ಸೇವೆ ಸಲ್ಲಿಸಿದ್ದ ಎಚ್. ಕೆ.ದ್ವಾರಕಾನಾಥ್, ರಂಗಾಯಣದ ರಂಗ ಶಿಕ್ಷಣ ಕೇಂದ್ರದ ವಿದ್ಯಾರ್ಥಿಗಳಿಗಾಗಿ (೨೦೨೪- ೨೫) ನಡೆಸಿದ ಹತ್ತು ದಿನಗಳ ಕಾರ್ಯಾಗಾರ ದಲ್ಲಿ ಸಿದ್ಧಪಡಿಸಿದ ಈ ನಾಟಕ ಬಗೆ ಬಗೆಯ ಪ್ರಯೋಗಗಳಿಗೆ ತನ್ನನ್ನು ಒಡ್ಡಿಕೊಂಡಿತ್ತು.

ದ್ವಾರಕಾನಾಥ್ ಅವರ ಪ್ರತಿಭೆ, ಸೂಕ್ಷ್ಮಗ್ರಹಿಕೆ, ಬಣ್ಣ ಮತ್ತು ಗೆರೆಗಳನ್ನು ಬಳಸುವ ಅವರ ಅದ್ಭುತ ಕಲೆಗಾರಿಕೆ ಎಲ್ಲವನ್ನೂ ಬಿಂಬಿಸು ವಂತಿತ್ತು. ಜೊತೆಗೆ ಶಿಕ್ಷಣ ಕೇಂದ್ರದ ವಿದ್ಯಾರ್ಥಿ ಗಳ ಪ್ರತಿಭೆ ಮತ್ತು ಕೌಶಲಗಳನ್ನು ಕೂಡಾ ಈ ಪ್ರಯೋಗ ತೋರಿಸಿಕೊಟ್ಟಿತು.

ರಂಗದ ಮೇಲೂ ಕೆಲವು ಪ್ರತಿಮೆಗಳು, ಸಂಕೇತಗಳು, ಅಭಿನಯದ ವಿನ್ಯಾಸಗಳು, ಬೆಳಕಿನ ಸಂಯೋಜನೆ, ಧ್ವನಿಯ ಏರಿಳಿತ ಗಳು ಒಂದು ನಾಟಕ ಹೇಗೆ ರೂಪುಗೊಳ್ಳುತ್ತದೆ ಎಂಬುದನ್ನು ತೋರಿಸಿಕೊಟ್ಟವು. ಮಹೇಶ್ ಕಲ್ಲತ್ತಿ ಅವರ ಬೆಳಕಿನ ವಿನ್ಯಾಸ  ಎಂದೂ ಕಳಪೆಯಾಗುವುದಿಲ್ಲ. ಹಾಗೆಯೇ ಉಮೇಶ್ ಸಾಲಿಯಾನ ಅವರ ಧ್ವನಿ ವಿನ್ಯಾಸ ಕೂಡಾ. ತಮ್ಮನ್ನು ತಾವು ಮರೆತು ಪಾತ್ರದಲ್ಲಿ ಪೂರ್ಣವಾಗಿ ತಲ್ಲೀನರಾಗಿ ಅಭಿನಯಿಸಿದ ನಟ ನಟಿಯರು ಪ್ರೇಕ್ಷಕರ ನೆನಪಿನಲ್ಲಿ ಜಾಗ ಪಡೆದುಕೊಂಡರು.

ನೇರವಾಗಿ ಕಥೆ ಹೇಳದಿದ್ದರೂ, ಈ ಪ್ರಯೋಗದಲ್ಲಿನ ಪ್ರತಿಮೆಗಳು, ರೂಪಕಗಳು ಸಮಕಾಲೀನ ಸಮಸ್ಯೆಗಳನ್ನು ಸಂಕೇತಗಳಲ್ಲಿ ಕಾಣಿಸಿ, ಚಿಂತನೆಗೆ ಹಚ್ಚಿದವು. ಪುರಾಣಕಾಲದಿಂದ ಇಂದಿನವರೆಗೂ ಮಹಿಳೆಯರು ಎದುರಿಸುತ್ತಿರುವ ಸಮಸ್ಯೆಗಳು, ಸವಾಲು ಗಳು ಹೇಗೆ ಮೂಲಭೂತವಾಗಿ ಉಳಿದು ಬಂದಿವೆ ಎಂಬುದನ್ನೂ ಈ ಪ್ರತಿಮೆಗಳು ತೋರಿಸಿದವು. ಬಣ್ಣಗಳು, ಗೆರೆಗಳು, ರಂಗ ವಿನ್ಯಾಸ ಎಲ್ಲವೂ ಸೇರಿ ರಂಗ ಪ್ರಯೋಗಕ್ಕೆ ಹೊಸ ಆಯಾಮ ನೀಡಿದವು.

ಈ ನಾಟಕ ಕೇವಲ ಒಂದು ಪ್ರಯೋಗಕ್ಕೆ ಕೊನೆಯಾಗಬಾರದು. ಹಾಗೆಯೇ ಇದನ್ನು ಅಭ್ಯಾಸ ಮಾಲಿಕೆಯ ಪ್ರಯೋಗ ಎಂದೂ ಪರಿಗಣಿಸಬೇಕಾಗಿಲ್ಲ. ಪ್ರತಿಯೊಂದು ನಾಟಕವೂ ಪ್ರಯೋಗವೇ. ಅದು ರಂಗದ ಮೇಲೆ ಬಂದಾಗ ಕಂಡುಕೊಳ್ಳುವ ಯಶಸ್ಸೇ ನಿಜವಾದ ಯಶಸ್ಸು, ದ್ವಾರಕಿ ಅವರ ಪ್ರತಿಭೆಯ ಮೇಲೆ ಬೆಳಕು ಚೆಲ್ಲಿದ ‘ವಿನ್ಯಾಸ ಕಾವ್ಯ’ವು ಅವರು ಒಬ್ಬ ಸಮರ್ಥ ರಂಗನಿರ್ದೇಶಕ ಎಂಬುದನ್ನು ಮತ್ತೊಮ್ಮೆ ತೋರಿಸಿಕೊಟ್ಟಿತು.

ಆಂದೋಲನ ಡೆಸ್ಕ್

Recent Posts

ಸಿಎಂಗೆ ವಿದ್ಯಾರ್ಥಿಗಳ ಪತ್ರ

ಮಹಾದೇಶ್ ಎಂ ಗೌಡ ಹನೂರು: ತಮ್ಮ ಊರಿನಿಂದ ದೂರದಲ್ಲಿರುವ ಶಾಲಾ ಕಾಲೇಜುಗಳಿಗೆ ಹೋಗುವುದಕ್ಕೆ ಸಮರ್ಪಕವಾಗಿ ಬಸ್ ಸೌಲಭ್ಯ ಕಲ್ಪಿಸಲು ಕೋರಿ…

2 hours ago

ದಿವ್ಯ ಎಂಬ ಅಂದಿನ ಕಾಲದ ಪಣ ಪರೀಕ್ಷೆ

ಬಿ.ಎಸ್.ವಿನಯ್ ಮೊನ್ನೆ ಯಳಂದೂರಿನ ಬೀದಿಯಲ್ಲಿ ಸಾಗುತ್ತಿದ್ದಾಗ ಬಳೆಮಂಟಪದ ಮುಂದೆ ಪರಿಚಿತ ಹಿರಿಯರೊಬ್ಬರು ಎದುರಾದರು. ‘ಯಜಮಾನರೇ, ಕಾರ್ಯಕ್ರಮಕ್ಕೆ ಯಾಕೆ ಬರಲಿಲ್ಲ?’ ಕೇಳಿದರೆ…

2 hours ago

ಎಮ್ಮೆ ನಿನಗೆ ಸಾಟಿ ಇಲ್ಲ…

ವಿನುತ ಕೋರಮಂಗಲ ನಮ್ಮ ಹಟ್ಟಿಯಿಂದ ನಾಲ್ಕೈದು ಕಿ.ಮೀ. ದೂರವಿರುವ ನಮ್ಮೂರಿನ ಕೆರೆಯ ಅಂಗಳಕ್ಕೆ ನಾವೇನು ನಡೆದುಕೊಂಡು ಹೋಗುತ್ತಿರಲಿಲ್ಲ. ಗಂಗೆ ಎಂದು…

3 hours ago

ಭಾನುವಾರದ ಪುರವಣಿಗಳಲ್ಲಿ ಸಾಹಿತ್ಯ ಯಾಕೆ ಮಾಯ?

ಅಕ್ಷತಾ ಖಾಲಿ ಹಾಳೆಯ ಒಂದೇ ಮಗ್ಗುಲಿನಲ್ಲಿ ಚಿತ್ತಿಲ್ಲದಂತೆ ಬರೆದು, ಪದ ಮಿತಿಯನ್ನು ಬೆರಳು ಲೆಕ್ಕದಲ್ಲಿ ಎಣಿಸಿ, ಪತ್ರಿಕೆಯ ವಿಳಾಸಕ್ಕೆ ಕಳುಹಿಸಿದ…

3 hours ago

ಹನೂರು: ಏಕಕಾಲದಲ್ಲೇ ಕಾಣಿಸಿಕೊಂಡ ಎರಡು ಚಿರತೆಗಳು

ಹನೂರು: ತಾಲೂಕಿನ ಲೊಕ್ಕನಹಳ್ಳಿ ಹೋಬಳಿ ವ್ಯಾಪ್ತಿಯ ಮಲೆ ಮಹದೇಶ್ವರ ಅರಣ್ಯ ಪ್ರದೇಶ ವ್ಯಾಪ್ತಿಯ ಬಳಗುಡ್ಡ ಬಿಟ್ ವ್ಯಾಪ್ತಿಯಲ್ಲಿ ಏಕಕಾಲಕ್ಕೆ ಎರಡು…

14 hours ago