ಅಂಕಣಗಳು

ಕಾಂಗ್ರೆಸ್ ಮುಂದೆ ಮಂಕಾದ ವಿಪಕಗಳು

ಬೆಳಗಾವಿಯಲ್ಲಿ ನಡೆದ ವಿಧಾನಮಂಡಲ ಅಧಿವೇಶನ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಸುಭದ್ರವಾಗಿದೆ ಎಂಬ ಸಂಕೇತವನ್ನು ರವಾನಿಸಿದೆ.

ಅಧಿವೇಶನ ಸರ್ಕಾರ ಅಂದ ಹಾಗೆ ಈ ಬಾರಿಯ ಅಧಿವೇಶನಕ್ಕಿಂತ ಮುಂಚೆ ನಡೆದ ಕೆಲ ಬೆಳವಣಿಗೆಗಳು ಸಿದ್ದರಾಮಯ್ಯ ನೇತೃತ್ವದ ಸರ್ಕಾರಕ್ಕೆ ಸವಾಲಾಗಬಹುದು ಎಂಬ ಭಾವನೆ ಕಾಣಿಸಿಕೊಂಡಿತ್ತು. ಎಲ್ಲಕ್ಕಿಂತ ಮುಖ್ಯವಾಗಿ ಅಧಿಕೃತ ವಿರೋಧಪಕ್ಷವಾದ ಬಿಜೆಪಿಯಲ್ಲಿ ನಡೆದ ಬೆಳವಣಿಗೆಗಳನ್ನೇ ನೋಡಿ. ವಿಧಾನಸಭೆ ಚುನಾವಣೆಯ ಫಲಿತಾಂಶ ಬಂದು ಆರು ತಿಂಗಳ ನಂತರ ಬಿಜೆಪಿ ತನ್ನ ಶಾಸಕಾಂಗ ನಾಯಕನನ್ನು ಆರಿಸಿಕೊಂಡಿತ್ತು. ಈ ಹಿಂದೆ ಉಪಮುಖ್ಯಮಂತ್ರಿಯಾಗಿ, ಆರೋಗ್ಯ, ಸಾರಿಗೆ, ಗೃಹ, ಕಂದಾಯ ಸೇರಿದಂತೆ ಹಲವು ಮಹತ್ವದ ಖಾತೆಗಳನ್ನು ನಿಭಾಯಿಸಿದ್ದ ಆರ್.ಅಶೋಕ್ ಅವರು ಬಿಜೆಪಿಯ ಶಾಸಕಾಂಗ ಪಕ್ಷದ ನಾಯಕರಾಗಿ, ಆ ಮೂಲಕ ಪ್ರತಿಪಕ್ಷ ನಾಯಕರಾಗಿ ಬಂದು ಕುಳಿತರು. ಇದೇ ರೀತಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಪುತ್ರ ಬಿ.ವೈ.ವಿಜಯೇಂದ್ರ ಅವರು ಬಿಜೆಪಿಯ ರಾಜ್ಯಾಧ್ಯಕ್ಷರಾಗಿ ವಿರಾಜಮಾನರಾದರು.

ಈ ಬೆಳವಣಿಗೆ ಸಹಜವಾಗಿಯೇ ಬಿಜೆಪಿಗೆ ಹೊಸ ಚೈತನ್ಯ ತರುವುದರ ಜತೆಗೆ, ರಾಜ್ಯ ಸರ್ಕಾರದ ಪಾಲಿಗೆ ತಲೆನೋವಾಗಿಯೂ ಪರಿಣಮಿಸಬಹುದು ಎಂಬ ಭಾವನೆ ಮೂಡಿಸಿತ್ತು. ಈ ಮಧ್ಯೆ ದೇವೇಗೌಡರ ನೇತೃತ್ವದ ಜಾ.ದಳ ಜತೆಗಿನ ಮೈತ್ರಿ ಒಟ್ಟಾರೆಯಾಗಿ ಪ್ರತಿಪಕ್ಷಗಳ ಶಕ್ತಿಯನ್ನು ಹೆಚ್ಚಿಸಿದಂತೆ ಕಂಡಿತ್ತು. ಹೀಗೆ ಒಗ್ಗೂಡಿ ನಿಂತ ಬಿಜೆಪಿ ಮತ್ತು ಜಾ.ದಳ ಪಕ್ಷಗಳು ರಾಜ್ಯ ಸರ್ಕಾರ ಎದುರಿಸುತ್ತಿರುವ ಹಲವು ಆರೋಪ ಮತ್ತು ಸಮಸ್ಯೆಗಳನ್ನು ಹಿಡಿದುಕೊಂಡು ಹೋರಾಡುತ್ತವೆ, ಸರ್ಕಾರವನ್ನು ಇಕ್ಕಟಿಗೆ ಸಿಲುಕಿಸಿ ಮುಂದಿನ ಲೋಕಸಭಾ ಚುನಾವಣೆಗೆ ಅಗತ್ಯವಾದ ಸಂದೇಶವನ್ನು ಕಳಿಸುತ್ತವೆ ಎಂಬ ನಿರೀಕ್ಷೆ ಹೆಚ್ಚಾಗಿತ್ತು. ಆದರೆ ಎರಡು ವಾರಗಳ ಕಾಲ ನಡೆದ ವಿಧಾನಮಂಡಲ ಅಧಿವೇಶನದಲ್ಲಿ ಬಿಜೆಪಿ ಮತ್ತು ಜಾ.ದಳ ಮೈತ್ರಿಕೂಟ ಆಡಳಿತಾರೂಢ ಕಾಂಗ್ರೆಸ್ ಪಕ್ಷವನ್ನು ನೆಪ ಮಾತ್ರಕ್ಕೂ ಅಲುಗಾಡಿಸಲು ಶಕ್ತವಾಗಲಿಲ್ಲ.

ಈ ಪೈಕಿ ಪ್ರತಿಪಕ್ಷ ನಾಯಕರಾದ ಅಶೋಕ್ ಅವರು ತಮ್ಮ ನಿಲುವುಗಳ ಮೂಲಕ ಸ್ವಪಕ್ಷದ ಶಾಸಕರಿಂದಲೇ ತೀವ್ರ ವಿರೋಧ ಎದುರಿಸಿದರೆ, ಪಕ್ಷದ ರಾಜ್ಯಾಧ್ಯಕ್ಷರಾದ ವಿಜಯೇಂದ್ರ ಕೂಡ ಹಲವು ವಿಷಯಗಳಲ್ಲಿ ಯಾವುದೋ ಒತ್ತಡಕ್ಕೆ ಸಿಲುಕಿದವರಂತೆ ಕಂಡರು.

ಅಂದ ಹಾಗೆ ನಾಡಿನ ಸಮಸ್ಯೆಗಳೇ ಇರಬಹುದು, ಸರ್ಕಾರದ ವಿರುದ್ಧ ಕೇಳಿ ಬರುತ್ತಿದ್ದ ಭ್ರಷ್ಟಾಚಾರದ ಆರೋಪಗಳೇ ಇರಬಹುದು. ಈ ಯಾವುದನ್ನೂ ಪ್ರತಿಪಕ್ಷ ಬಿಜೆಪಿ ಸಮರ್ಥವಾಗಿ ಬಳಸಿಕೊಳ್ಳಲೇ ಇಲ್ಲ.
ಈ ಮಧ್ಯೆ ಜಾ.ದಳ ಶಾಸಕಾಂಗ ಪಕ್ಷದ ನಾಯಕ ಹೆಚ್.ಡಿ.ಕುಮಾರಸ್ವಾಮಿ ಕೂಡ ಸ್ವಪಕ್ಷದ ಶಾಸಕರ ಒತ್ತಡಕ್ಕೆ ಒಳಗಾಗಿ ಸದನದಲ್ಲಿ ಅಬ್ಬರಿಸಲಿಲ್ಲ. ಪರಿಣಾಮ ಸಿದ್ದರಾಮಯ್ಯ ಸರ್ಕಾರ ನಿರಾಯಾಸವಾಗಿ ಬಿಜೆಪಿ-ಜಾ.ದಳ ಮೈತ್ರಿಕೂಟವನ್ನು ಎದುರಿಸಿದ್ದಲ್ಲದೆ ಕೆಲವೊಂದು ಸನ್ನಿವೇಶಗಳಲ್ಲಿ ಮೈತ್ರಿಕೂಟದ ನಾಯಕರನ್ನೇ ಪೇಚಿಗೆ ಸಿಲುಕಿಸಿತು.

ಹಾಗೆ ನೋಡಿದರೆ ವಿಧಾನಮಂಡಲ ಅಧಿವೇಶನದ ಇತಿಹಾಸದಲ್ಲಿ ಪ್ರತಿಪಕ್ಷಗಳಿಂದ ಸರ್ಕಾರ ಪೇಚಿಗೆ ಸಿಲುಕಿದ ನೂರಾರು ಉದಾಹರಣೆಗಳಿವೆ. ಆದರೆ ಸರ್ಕಾರದಿಂದ ಪ್ರತಿಪಕ್ಷವೇ ಪದೇ ಪದೇ ಪೇಚಿಗೆ ಸಿಲುಕುವಂತಹ ಘಟನೆಗಳು ನಡೆದಿದ್ದು ಇದೇ ಮೊದಲ ಬಾರಿ. ಇದಕ್ಕೇನು ಕಾರಣ ಅಂತ ಹುಡುಕಲು ಹೋದರೆ ಕಣ್ಣಿಗೆ ಕಾಣುವುದು ಪ್ರತಿಪಕ್ಷಗಳ, ಅದರಲ್ಲೂ ಮುಖ್ಯವಾಗಿ ಬಿಜೆಪಿಯ ಅಸಹಾಯಕತೆ. ಯಾವಾಗ ಪ್ರತಿಪಕ್ಷ ನೈತಿಕವಾಗಿ ಬಲಿಷ್ಠ ವಾಗಿರುತ್ತದೆಯೋ ಆಗ ಸರ್ಕಾರವನ್ನು ತನ್ನ ಕೈಯಲ್ಲಿರುವ ನೈತಿಕತೆಯ ಬಲೆಯಲ್ಲಿ ನಿರಾಯಾಸವಾಗಿ ಸಿಲುಕಿಸುತ್ತದೆ. ಆದರೆ ಯಾವಾಗ ಪ್ರತಿ ಪಕ್ಷದಲ್ಲೇ ನೈತಿಕತೆಯ ಕೊರತೆ ಕಾಣಿಸುತ್ತದೋ ಆಗ ಅದು ಎದುರಾಳಿಯ ಹೊಡೆತಕ್ಕೆ ತನ್ನ ಕಪಾಳವನ್ನೇ ಕೊಡಬೇಕಾಗುತ್ತದೆ. ಈ ಬಾರಿಯ ಅಧಿವೇಶನದಲ್ಲಿ ಉದ್ದಕ್ಕೂ ಈ ಅಂಶವೇ ಬಿಜೆಪಿಯನ್ನು ಕಾಡಿದ್ದು.

ಇಲ್ಲಿ ಎಲ್ಲಕ್ಕಿಂತ ಪ್ರಮುಖವಾಗಿ ಗಮನಿಸಬೇಕಾದ ಅಂಶವೆಂದರೆ ಆಳುವ ಸರ್ಕಾರದ ವಿರುದ್ಧ ದೂರಲು ಹಲವು ಆರೋಪಗಳ ಬೆಂಬಲ ಪ್ರತಿಪಕ್ಷಗಳಿಗಿತ್ತು. ಅದರಲ್ಲೂ ಮುಖ್ಯವಾಗಿ ಭ್ರಷ್ಟಾಚಾರದ ಆರೋಪಗಳನ್ನು ಹಿಡಿದು ಅದು ಅಧಿವೇಶನದಲ್ಲಿ ಸರ್ಕಾರಕಕ್ಕೆ ಮುಜುಗರ ಉಂಟು ಮಾಡಬಹುದಿತ್ತು. ಆದರೆ ಸರ್ಕಾರದ ವಿರುದ್ಧದ ಭ್ರಷ್ಟಾಚಾರದ ಆರೋಪಗಳನ್ನು ಹಿಡಿದುಕೊಂಡು ಪ್ರತಿಪಕ್ಷಗಳು ಪರಿಣಾಮಕಾರಿಯಾಗಿ ಹೋರಾಡಲೇ ಇಲ್ಲ. ಕಾರಣ ತಾವು ಸರ್ಕಾರದ ವಿರುದ್ಧ ಮಾತನಾಡಿದರೆ

ಹಿಂದೆ ತಾವು ಅಧಿಕಾರದಲ್ಲಿದ್ದಾಗ ಕೇಳಿ ಬಂದ ಆರೋಪಗಳನ್ನು ಹಿಡಿದುಕೊಂಡು ಕಾಂಗ್ರೆಸ್ ಸರ್ಕಾರ ತನಿಖೆಗೆ ಮುಂದಾಗಬಹುದು ಎಂಬ ಆತಂಕ. ಯಾವಾಗ ಈ ಆತಂಕ ಅದನ್ನು ಕಾಡಿತೋ ಆಗ ಅದು ನಿರಂತರವಾಗಿ ನೆಪ ಮಾತ್ರಕ್ಕೆ ಸರ್ಕಾರದ ವಿರುದ್ಧ ಕೂಗಾಡಿದಂತೆ ಮಾಡಿತು. ಹೀಗೆ ಅದು ಯಾವ ವಿಷಯಗಳನ್ನು ಹಿಡಿದುಕೊಂಡು ಹೋರಾಡಿತೋ, ಆ ಪೈಕಿ ಯಾವೊಂದು ವಿಷಯಗಳನ್ನೂ ಅದು ತಾರ್ಕಿಕ ಅಂತ್ಯಕ್ಕೆ ತಲುಪಿಸಲಿಲ್ಲ.

ಇನ್ನು ಸಿದ್ದರಾಮಯ್ಯ ಸರ್ಕಾರದ ವಿರುದ್ಧ ದೊಡ್ಡ ಮಟ್ಟದಲ್ಲೇ ಹೋರಾಡುತ್ತಾ ಬಂದಿರುವ ಜಾ.ದಳ ನಾಯಕ ಹೆಚ್.ಡಿ.ಕುಮಾರಸ್ವಾಮಿ ಕೂಡ ಈ ಬಾರಿ ಆ ಮಟ್ಟದ ಹೋರಾಟಕ್ಕೆ ಮನಸು ಮಾಡಲಿಲ್ಲ.

ಕಾರಣ ಸರ್ಕಾರದ ವಿರುದ್ಧ ನೀವೊಬ್ಬರೇ ಗುರುತರ ಆರೋಪ ಮಾಡುತ್ತಿದ್ದೀರಿ, ನೀವು ಮಾಡುತ್ತಿರುವ ಆರೋಪಗಳಿಂದ ಸರ್ಕಾರದಲ್ಲಿರುವವರು ನಮ್ಮ ಮೇಲೆ ಕೆಂಗಣ್ಣು ಬೀರುತ್ತಿದ್ದಾರೆ. ಅರ್ಥಾತ್, ನಮ್ಮ ಕ್ಷೇತ್ರಗಳ ಕೆಲಸಕ್ಕೆ ಅಗತ್ಯವಾದ ಅನುದಾನವನ್ನು ಸಮರ್ಪಕವಾಗಿ ಪಡೆಯಲು ನಮಗೆ ಸಾಧ್ಯವಾಗುತ್ತಿಲ್ಲ ಎಂದು ಪಕ್ಷದ ಶಾಸಕರು ಕುಮಾರಸ್ವಾಮಿಯವರ ಬಳಿ ಹೇಳಿಕೊಂಡಿದ್ದರಂತೆ.

ಪರಿಣಾಮ ಸರ್ಕಾರದ ವಿರುದ್ಧ ತಾವು ನಡೆಸುವ ಹೋರಾಟ ಅಂತಿಮವಾಗಿ ತಮ್ಮ ಪಕ್ಷದ ಶಾಸಕರಿಗೆ ಸಮಸ್ಯೆಯಾಗಿ ಪರಿಣಮಿಸುತ್ತದೆ ಎಂದರೆ ನಾನೇಕೆ ಒಬ್ಬಂಟಿ ಹೋರಾಟ ನಡೆಸಲಿ ಎಂದು ಕುಮಾರಸ್ವಾಮಿ ಮೌನವಾಗಿದ್ದರು.
ಹೀಗೆ ಯಾವುದೋ ಕಾರಣಗಳಿಗಾಗಿ ಬಿಜೆಪಿ ಮತ್ತು ಜಾ.ದಳ ನಾಯಕರು ಸಂಘಟಿತ ಹೋರಾಟಕ್ಕೆ ಇಳಿಯದಿರುವುದರಿಂದ ಸಹಜವಾಗಿಯೇ ಸರ್ಕಾರದ ಶಕ್ತಿ ಮತ್ತು ಭಾಸವಾಯಿತು. ವಾಸ್ತವವಾಗಿ ಐದೂ ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಪಕ್ಷ ಗಳಿಸಿದ ದೊಡ್ಡ ಗೆಲುವಿನಿಂದ ರಾಜ್ಯ ಬಿಜೆಪಿಯ ಶಕ್ತಿ ಮತ್ತು ಆತ್ಮವಿಶ್ವಾಸ ಹೆಚ್ಚಬೇಕಿತ್ತು. ಆದರೆ ಮೂರು ರಾಜ್ಯಗಳಲ್ಲಿ ಪಕ್ಷ ಗಳಿಸಿದ ಗೆಲುವು ರಾಜ್ಯ ಬಿಜೆಪಿಗೆ ಸಣ್ಣ ಮಟ್ಟದ ಟಾನಿಕ್ ಆಗಿಯೂ ಪರಿಣಮಿಸಲಿಲ್ಲ.

ಯಥಾ ಪ್ರಕಾರ, ಹಿಂದೆ ಇದ್ದ ತಮ್ಮದೇ ಸರ್ಕಾರ ಕೈಗೊಂಡ ತೀರ್ಮಾನಗಳು ತಮಗೆ ಕಂಟಕವಾಗುವ ಪರಿಯನ್ನು ಊಹಿಸಿ ಬಿಜೆಪಿ ಅಶಕ್ತವಾಯಿತು. ಅಂದ ಹಾಗೆ ಕೆಲ ದಿನಗಳ ಹಿಂದೆ ಬಿಜೆಪಿ ನಾಯಕರು ಪದೇ ಪದೇ ಸಿದ್ದರಾಮಯ್ಯ ಸರ್ಕಾರ ಸದ್ಯದಲ್ಲೇ ಉರುಳಲಿದೆ ಎಂದು ಹೇಳುತ್ತಿದ್ದರು. ನೆರೆಯ ಮಹಾರಾಷ್ಟ್ರದಲ್ಲಿ ಶಿವಸೇನೆ ನೇತೃತ್ವದ ಸರ್ಕಾರ ಹೇಗೆ ಬಿತ್ತೋ ಅದೇ ಮಾದರಿಯಲ್ಲಿ ಸಿದ್ದರಾಮಯ್ಯ ಸರ್ಕಾರವೂ ಬೀಳುತ್ತದೆ ಎಂದು ಹೇಳುತ್ತಿತ್ತು.
ಅಷ್ಟೇ ಅಲ್ಲ, ಏನೇ ಮಾಡಿದರೂ ಮುಂಬರುವ ಲೋಕಸಭಾ ಚುನಾವಣೆಗೂ ಮುನ್ನವೇ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಉರುಳಲಿದೆ ಎಂದು ಹೇಳುತ್ತಿತ್ತು. ಆದರೆ ಈ ಬಾರಿಯ ಅಧಿವೇಶನದ ನಂತರ ಪರಿಸ್ಥಿತಿ ಹೇಗಾಗಿದೆ ಎಂದರೆ ಕರ್ನಾಟಕದಲ್ಲಿ ತನ್ನನ್ನು ಸುಧಾರಿಸಿಕೊಳ್ಳಲು ಬಿಜೆಪಿಗೆ ಸಾಕಷ್ಟು ಸಮಯಾವಕಾಶ ಬೇಕು.

ಏಕೆಂದರೆ ಬಿಜೆಪಿ ಶಾಸಕಾಂಗ ಪಕ್ಷದ ನಾಯಕರಾದ ಆರ್.ಅಶೋಕ್ ಅವರ ಬಗ್ಗೆ ಬಿಜೆಪಿಯ ಶಾಸಕರಲ್ಲೇ ಅಸಮಾಧಾನವಿದೆ. ವಿಜಯೇಂದ್ರ ಅವರು ಬಿಜೆಪಿ ರಾಜ್ಯಾಧ್ಯಕ್ಷರಾದ ಬೆಳವಣಿಗೆಯಿಂದ ಯತ್ನಾಳ್, ಸೋಮಣ್ಣ, ಲಿಂಬಾವಳಿ ಮತ್ತು ಬೆಲ್ಲದ್ ಸೇರಿದಂತೆ ಹಲವು ನಾಯಕರು ಅತೃಪ್ತರಾಗಿದ್ದಾರೆ. ಮೊದಲನೆಯದಾಗಿ ಬಿಜೆಪಿ ನಾಯಕರು ಸ್ವಪಕ್ಷೀಯರಲ್ಲಿರುವ ಇಂತಹ ಅಸಮಾಧಾನವನ್ನು ನಿವಾರಿಸಬೇಕು. ಅಧಿವೇಶನದ ಸಂದರ್ಭದಲ್ಲಿ ಹೆಚ್ಚಾದ ಇಂತಹ ಅಸಮಾಧಾನ ಮುಂದಿನ ದಿನಗಳಲ್ಲಿ ತಾರಕಕ್ಕೆ ಹೋಗುವ ಲಕ್ಷಣ ಇರುವುದರಿಂದ ಬಿಜೆಪಿ ಮೊದಲು ತನ್ನನ್ನು ತಾನು ಸಂತೈಸಿಕೊಳ್ಳಬೇಕು.

ಆ ಕೆಲಸ ಸಾಧಿತವಾಗದೆ ಹೋದರೆ ಮುಂದಿನ ದಿನಗಳಲ್ಲಿ ರಾಜ್ಯ ಬಿಜೆಪಿಯ ಶಕ್ತಿ ಮತ್ತಷ್ಟು ಕುಗ್ಗಿ ಹೋಗುತ್ತದೆ. ಹೀಗೆ ಕುಗ್ಗಿ ಹೋದ ಪಕ್ಷದಿಂದ ಒಂದು ಬಲಿಷ್ಠ ಸರ್ಕಾರದ ಮೇಲೆ ಪ್ರಹಾರ ಮಾಡುವ ಕೆಲಸ ಸಾಧ್ಯವೇ ಇಲ್ಲ. ಹೀಗಾಗಿ ಬಿಜೆಪಿ ಮತ್ತು ಜಾ.ದಳ ಪಕ್ಷಗಳ ಇವತ್ತಿನ ಪರಿಸ್ಥಿತಿ ನೋಡಿದರೆ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಮತ್ತಷ್ಟು ಬಲಿಷ್ಠವಾದಂತಿದೆ. ಅದೇ ಸದ್ಯದ ವಿಶೇಷ.

andolanait

Recent Posts

ಓದುಗರ ಪತ್ರ: ಪುಷ್ಪ ವೃಷ್ಟಿ..!

ಪುಷ್ಪ ವೃಷ್ಟಿ..! ಅತಿವೃಷ್ಟಿ, ಅನಾವೃಷ್ಟಿಯ ವರದಿ ಬರೆಯುತಿಹರಂತೆ ಸಚಿವರು... ‘ಒಂಬತ್ತು ಜಿಗಳಲ್ಲಿ ಮೋಡ ಕವಿದ ವಾತಾವರಣ ಕಾರಣ, ಅಲ್ಲಿಗಿಲ್ಲ ಮಂತ್ರಿ…

9 hours ago

ಓದುಗರ ಪತ್ರ: ರೈತ ಮಕ್ಕಳ ವಿದ್ಯಾಭ್ಯಾಸ ಶುಲ್ಕದಲ್ಲಿ

ರಿಯಾಯಿತಿಗೆ ಸರ್ಕಾರ ಕ್ರಮ ಕೈಗೊಳ್ಳಲಿ ರಾಜ್ಯದ ಹಲವು ಭಾಗಗಳಲ್ಲಿ ಕಳೆದ ವರ್ಷಕ್ಕಿಂತ ಈ ಬಾರಿ ನಿರೀಕ್ಷಿಸಿದಷ್ಟು ಮಳೆಯಿಲ್ಲದ ಕಾರಣ ಕೃಷಿ ಕ್ಷೇತ್ರ…

10 hours ago

ಓದುಗರ ಪತ್ರ: ಧಾರ್ಮಿಕ ಮುಖಂಡರು ರೈತರ ಬೆನ್ನಿಗೆ ನಿಲ್ಲಬೇಕು

ರಾಜ್ಯದಲ್ಲಿ ನಗರೀಕರಣದ ವೇಗದಿಂದಾಗಿ ಕೃಷಿ ಭೂಮಿಯ ವಿಸ್ತೀರ್ಣ ಸುಮಾರು ಶೇ. ೧೩ರಷ್ಟು ಕುಸಿದಿದೆ ಎಂದು ವರದಿಗಳು ಹೇಳಿವೆ. ಮೂಲಸೌಕರ್ಯಗಳ ಹೆಸರಿನಲ್ಲಿ…

10 hours ago

ಧ್ರುವೀಕರಣದ ನೆಲೆಗಟ್ಟಿನ ಮೇಲೆ ರಾಜ್ಯ ರಾಜಕಾರಣ

ಆರ್.‌ಟಿ.ವಿಠ್ಠಲಮೂರ್ತಿ ಅವರ ವಾರದ ಅಂಕಣ  ಕರ್ನಾಟಕದ ರಾಜಕಾರಣ ಧ್ರುವೀಕರಣದ ನೆಲೆಗಟ್ಟಿಗೆ ಬಂದು ತಲುಪಿದೆ. ಅಂದ ಹಾಗೆ ಧ್ರುವೀಕರಣಕ್ಕೆ ಅಸಮಾ ಧಾನ,ಅತೃಪ್ತಿ,ಭಿನ್ನಾಭಿಪ್ರಾಯಗಳೇ…

10 hours ago

ಪಕ್ಕದಲ್ಲೇ ನದಿಯಿದ್ದರೂ ಚಿಕ್ಕಮಂದಗೆರೆ ಗ್ರಾಮಕ್ಕಿಲ್ಲ ನೀರು!

ಮಹೇಶ್ ಕರೋಟಿ ಹೇಮಾವತಿ ನದಿ ದಡದಲ್ಲೇ ನೀರಿಗಾಗಿ ಹಾಹಾಕಾರ ಕಿಕ್ಕೇರಿ: ಮಂದಗೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಕ್ಕಮಂದಗೆರೆ ಗ್ರಾಮವು ಹೇಮಾವತಿ…

10 hours ago

ಕೊಡಗಿನಲ್ಲಿ1,20,874 ಮಕ್ಕಳಿಗೆ ಮಾತ್ರೆ ವಿತರಣೆ ಗುರಿ

ನವೀನ್ ಡಿಸೋಜ ಇಂದು ರಾಷ್ಟ್ರೀಯ ಜಂತುಹುಳು ನಿವಾರಣಾ ದಿನ ಜಂತುಹುಳು ಬಾಧೆ ತಡೆಗೆ ಆರೋಗ್ಯ ಇಲಾಖೆಯ ಮಹತ್ವದ ಹೆಜ್ಜೆ ಮಡಿಕೇರಿ:…

10 hours ago