ಅಂಕಣಗಳು

ಸುಪ್ರೀಂ ತೀರ್ಪು ಮೂಲೆಗುಂಪು-ಮೋದಿ ಅಧಿಕಾರ ಸೊಂಪು ಸೊಂಪು!

ಕೇಂದ್ರೀಯ ಚುನಾವಣಾ ಆಯೋಗದ ನೇಮಕ ಪ್ರಕ್ರಿಯೆ ‘ಪಾರದರ್ಶಕವಾಗಿ ನಡೆಯಬೇಕೆಂಬುದು ಸುಪ್ರೀಂ ಕೋರ್ಟ್ ಇರಾದೆಯಾಗಿತ್ತು. ಈ ಸಂಬಂಧ ಅತ್ಯುನ್ನತ ಮಟ್ಟದ ಆಯ್ಕೆ ಸಮಿತಿ ರಚಿಸಬೇಕೆಂದು ನೀಡಿದ್ದ ತೀರ್ಪನ್ನು ಮೋದಿ ಸರ್ಕಾರ ‘ಕಸದ ಬುಟ್ಟಿಗೆ ಎಸೆದಿದೆ’. ತೀರ್ಪನ್ನು ಅಸಿಂಧುಗೊಳಿಸಿ ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಮೂರ್ತಿ ಮತ್ತು ಲೋಕಸಭೆಯ ಪ್ರತಿಪಕ್ಷದ ನಾಯಕನನ್ನು ಆಯ್ಕೆ ಪ್ರಕ್ರಿಯೆಯಿಂದ ಹೊರಗಿಟ್ಟಿದೆ. ಈ ಉದ್ದೇಶಕ್ಕಾಗಿ ಹೊಸ ವಿಧೇಯಕ ರೂಪಿಸಿ, ಅದಕ್ಕೆ ಸಂಸತ್ತಿನ ಒಪ್ಪಿಗೆ ಪಡೆದಿದೆ.

2023ರ ಮುಖ್ಯ ಚುನಾವಣಾ ಆಯುಕ್ತ ಮತ್ತು ಇತರೆ ಆಯುಕ್ತರ (ನೇಮಕ, ಸೇವಾ ನಿಯಮಗಳು ಹಾಗೂ ಅಧಿಕಾರಾವಧಿ) ವಿಧೇಯಕವನ್ನು ಲೋಕಸಭೆ ಮೊನ್ನೆ ಗುರುವಾರ ಅಂಗೀಕರಿಸಿತು. ರಾಜ್ಯಸಭೆಯ ಅಂಗೀಕಾರ ಈ ಮೊದಲೇ ದೊರೆತಿತ್ತು. ಲೋಕಸಭೆಯಲ್ಲಿ ಒಪ್ಪಿಗೆ ಪಡೆದಾಗ ಪ್ರತಿಪಕ್ಷಗಳ ಸುಮಾರು ನೂರು ಮಂದಿ ಸದಸ್ಯರನ್ನು ಅಮಾನತ್ತು ಮಾಡಲಾಗಿತ್ತು ಎಂಬುದು ಗಂಭೀರ ಸಂಗತಿ. ಅಳಿದುಳಿದವರು ಪ್ರತಿಭಟಿಸಿ ಸಭಾತ್ಯಾಗ ಮಾಡಿದ್ದರು.

ಮುಖ್ಯ ಚುನಾವಣಾ ಆಯುಕ್ತ ಮತ್ತು ಇಬ್ಬರು ಚುನಾವಣಾ ಆಯುಕ್ತರ ನೇಮಕ ಪ್ರಕ್ರಿಯೆ ಪಾರದರ್ಶಕವಾಗಿ ನಡೆಯಬೇಕೆಂಬುದು ಸುಪ್ರೀಂ ಕೋರ್ಟ್ ಇರಾದೆಯಾಗಿತ್ತು. ಈ ಸಂಬಂಧದಲ್ಲಿ ನ್ಯಾಯಮೂರ್ತಿ ಕೆ.ಎಂ.ಜೋಸೆಫ್‌ ನೇತೃತ್ವದ ಐವರು ನ್ಯಾಯಮೂರ್ತಿಗಳ ಈ ಪೀಠ ಹಲವು ತಿಂಗಳ ಕಾಲ ಸುದೀರ್ಘ ವಿಚಾರಣೆ ನಡೆಸಿತ್ತು. ಇದೇ ವರ್ಷದ ಮಾರ್ಚ್ ತಿಂಗಳಲ್ಲಿ ತೀರ್ಪು ನೀಡಿತ್ತು. ಅದನ್ನು ಜನತಂತ್ರಕ್ಕೆ ಶಕ್ತಿ ತುಂಬುವ ಐತಿಹಾಸಿಕ ತೀರ್ಪು ಎಂದು ಬಣ್ಣಿಸಲಾಗಿತ್ತು.

ಮನಸೋ ಇಚ್ಛೆ ನೇಮಕಾತಿಯ ‘ಅಕ್ರಮ’ವಷ್ಟೇ ಅಲ್ಲದೆ, ಆಯೋಗದ ‘ಬೆನ್ನುಮೂಳೆ’ಗೆ ತಗುಲಿರುವ ಕ್ಷಯರೋಗದ ಕುರಿತು ಕೆಲ ಮೂಲಭೂತ ಪ್ರಶ್ನೆಗಳನ್ನು ಸುಪ್ರೀಂ ಕೋರ್ಟು ಎತ್ತಿತ್ತು.

ಕೇಂದ್ರ ಚುನಾವಣಾ ಆಯೋಗ ಆಳುವವರ ಜೀತಕ್ಕೆ ಬೀಳುತ್ತ ಬಂದಿರುವುದು ಲಾಗಾಯ್ತಿನ ವಿದ್ಯಮಾನ. ಸರ್ಕಾರಗಳ ಮುಲಾಜಿಗೆ ಸಿಗದೆ ಅಕ್ರಮಗಳಿಗೆ ಸಿಂಹಸ್ವಪ್ನರಾಗಿ ಕೆಲಸ ಮಾಡಿದ ಮುಖ್ಯ ಚುನಾವಣಾ ಆಯುಕ್ತರನ್ನು ಹುಡುಕಿದರೆ ಅಲ್ಲಲ್ಲಿ ಒಬ್ಬ ಟಿ.ಎನ್.ಶೇಷನ್, ಮತ್ತೊಬ್ಬ ಜೆ. ಎಂ.ಲಿಂಗೋ ಕಂಡಾರು. ಸದ್ದು ಮಾಡದೆ ತಟಸ್ಥರಾಗಿ ಕೆಲಸ ಮಾಡಿದವರೂ ಉಂಟು. ಆದರೆ ಆಳುವವರ ಮರ್ಜಿಯನ್ನು ಅನುಸರಿಸಿದವರೇ ಅಧಿಕ.

ಆಯೋಗಕ್ಕೆ ಹೊಸ ವಿಶೇಷಾಧಿಕಾರಗಳ ಅಗತ್ಯ ಇಲ್ಲ. ಈಗಾಗಲೇ ತನಗಿರುವ ಅಧಿಕಾರಗಳನ್ನು ಪ್ರಯೋಗಿಸಿದರೂ ಸಾಕು, ಜನತಂತ್ರವನ್ನು ಎತ್ತಿ ಹಿಡಿವ ದಿಸೆಯಲ್ಲಿ ಚಮತ್ಕಾರಗಳನ್ನೇ ಮಾಡಿಬಿಡಬಹುದು ಎಂಬುದಕ್ಕೆ ಟಿ.ಎನ್.ಶೇಷನ್ ಅವರೇ ಸಾಕ್ಷಿ. 1990ರಲ್ಲಿ ಮುಖ್ಯ ಚುನಾವಣಾ ಆಯುಕ್ತರಾಗಿ ನೇಮಕಗೊಂಡರು. ಆಗ ಇತರೆ ಇಬ್ಬರು ಆಯುಕ್ತರ ಹುದ್ದೆ ಗಳು ಇರಲಿಲ್ಲ. ಶೇಷನ್‌ಗೆ ಕಡಿವಾಣ ಹಾಕಲು ಪಿ.ವಿ.ನರಸಿಂಹರಾವ್ ಸರ್ಕಾರ 1993ರ ನಂತರ ಇನ್ನೆರಡು ಆಯುಕ್ತ ಹುದ್ದೆಗಳನ್ನು ಸೃಷ್ಟಿಸಿತ್ತು. 1990ರಲ್ಲಿ ನೇಮಕವಾಗುತ್ತಲೇ ಶೇಷನ್, ತಾವೇ ಹೇಳುತ್ತಿದ್ದಂತೆ ಆಸ್ಟ್ರೇಷನ್’ ಆಗಿ ಬದಲಾಗಿ ರಾಜಕಾರಣಿಗಳ ಎದೆ ನಡುಗಿಸಿದರು. ಆಯೋಗಕ್ಕೆ ಇದ್ದ ಸಾಂವಿಧಾನಿಕ ಅಧಿಕಾರಗಳನ್ನೇ ಅಸ್ತ್ರಗಳಂತೆ ಪ್ರಯೋಗಿಸಿದರು. ಅಕ್ರಮಗಳ ವಾಸನೆ ಬಡಿದರೂ ಸಾಕು, ಚುನಾವಣೆಯನ್ನು ರದ್ದು ಮಾಡಿ ಹೊಸದಾಗಿ ನಡೆಸುತ್ತಿದ್ದರು. ನಕಲಿ ಮತದಾನ ನಿಲ್ಲಿಸಿದರು. ಮತದಾರರ ಗುರುತಿನ ಚೀಟಿಗಳಿಗೆ ಆಯಾ ಮತದಾರರ ಫೋಟೋ ಅಂಟಿಸುವುದನ್ನು ಕಡ್ಡಾಯಗೊಳಿಸಿದರು. ಅಧಿಕ ವೆಚ್ಚದ ಕಸರತ್ತು ಎಂಬ ಸರ್ಕಾರದ ನೆಪಕ್ಕೆ ಅವರು ಬಗ್ಗಲಿಲ್ಲ. ಫೋಟೋ ಸಹಿತ ಗುರುತಿನ ಚೀಟಿ ಜಾರಿಗೆ ಬರುವ ತನಕ ಚುನಾವಣೆಗಳನ್ನೇ ನಡೆಸುವುದಿಲ್ಲ ಎಂದು ಪಟ್ಟು ಹಿಡಿದು ಕುಳಿತರು. ಅವರ ಮಾತನ್ನು ಕೇಳದೆ ಸರ್ಕಾರಕ್ಕೆ ಬೇರೆ ದಾರಿ ಉಳಿಯಲಿಲ್ಲ. ‘ಬೆಳಗಿನ ಉಪಾಹಾರಕ್ಕೆ ನಾನು ರಾಜಕಾರಣಿಗಳನ್ನು ತಿನ್ನುತ್ತೇನೆ’ (ಮೇಂ, ನಾಸ್ತಾ ಮೇ ನೇತಾವೋಂ ಕೋ ಖಾತಾ ಹೂಂ) ಎಂದು ಗುಡುಗುತ್ತಿದ್ದರು. ‘ರಾಜಕಾರಣಿಗಳು ಒಂದೋ ದೇವರಿಗೆ ಹೆದರುತ್ತಾರೆ, ಇಲ್ಲವೇ ಶೇಷನ್‌ಗೆ ಭಯಬೀಳುತ್ತಾರೆ’ ಅಂತಿದ್ದರು. 1991ರ ಲೋಕಸಭಾ ಚುನಾವಣೆಗಳು, ಆನಂತರ ಅವರ ಅವಧಿಯಲ್ಲಿ ಜರುಗಿದ ಎಲ್ಲ ವಿಧಾನಸಭಾ ಚುನಾವಣೆಗಳಲ್ಲಿ ‘ಶೇಷನ್ ಎಫೆಕ್ಟ್’ ಎದ್ದು ಕಂಡಿತ್ತು. ಇಂತಹ ಮತ್ತೊಬ್ಬ ಶೇಷನ್ ಹುಟ್ಟುವುದನ್ನು ರೂಢಿವಾದಿ ರಾಜಕೀಯ ಪಕ್ಷಗಳು ಸಹಿಸುವುದಿಲ್ಲ. ಈಗ ಅಧಿಕಾರ ನಡೆಸಿರುವ ಮತ್ತು 2024ರಲ್ಲಿ ಅಧಿಕಾರ ಪುನಃ ತನ್ನದೇ ಎಂದು ಗಟ್ಟಿಯಾಗಿ ನಂಬಿರುವ ಮೋದಿಯವರ ಬಿಜೆಪಿಯೂ ಈ ಮಾತಿಗೆ ಹೊರತಲ್ಲ.

ತಿದ್ದುಪಡಿ ವಿಧೇಯಕಕ್ಕೆ ವಾಪಸು ಬರೋಣ: ಸಂವಿಧಾನದ 324 (2) ಕಲಂನ ಪ್ರಕಾರ ಆಯೋಗದ ಈ ಹುದ್ದೆಗಳಿಗೆ ನೇಮಕದ ಅಧಿಕಾರ ರಾಷ್ಟ್ರಪತಿಯವರದು. ಅರ್ಥಾತ್ ಪ್ರಧಾನಮಂತ್ರಿಯವರಿಗೆ ಸೇರಿದ್ದು. ನೇಮಕದ ಕುರಿತು ಸಂಸತ್ತು ಯಾವುದಾದರೂ ಕಾನೂನನ್ನು ರೂಪಿಸಿದರೆ, ಅಂತಹ ಕಾಯಿದೆ ಪ್ರಕಾರ ಈ ನೇಮಕಾತಿ ನಡೆಯತಕ್ಕದ್ದು. ಆದರೆ ಈ ಹಿಂದೆ ಆಡಳಿತ ನಡೆಸಿದ್ದ ಕಾಂಗ್ರೆಸ್ ಮತ್ತಿತರೆ ಸರ್ಕಾರಗಳು ಕಾನೂನನ್ನು ರೂಪಿಸುವ ಗೋಜಿಗೆ ಹೋಗಲಿಲ್ಲ. ನೇಮಕದ ನೇರ ಅಧಿಕಾರವನ್ನು ಬಿಟ್ಟುಕೊಟ್ಟು ಆಯೋಗವನ್ನು ತನ್ನ ಮರ್ಜಿಯಿಂದ ಮುಕ್ತಗೊಳಿಸುವ ಮನಸ್ಸು ಮಾಡಲಿಲ್ಲ. ಮೋದಿ ಸರ್ಕಾರಕ್ಕೂ ಹಳೆಯ ಸರ್ಕಾರಗಳು ಹಿಡಿದಿದ್ದ ದಾರಿಯೇ ಅನುಕೂಲವೆನಿಸಿತ್ತು.
ಸಂವಿಧಾನ ಸೂಚಿಸಿದ್ದ ಕಾನೂನನ್ನು ರೂಪಿಸಲು ರಾಜಕೀಯ ಪಕ್ಷಗಳು ಕೂಡ ಆಸಕ್ತಿ ತೋರಲಿಲ್ಲ. ಆಳುವವರ ಮೇಲೆ ಒತ್ತಡ ಹೇರಲಿಲ್ಲ. ಒಂದೇ ದೋಣಿಯ ಪಯಣಿಗರಂತೆ ವರ್ತಿಸಿದವು. ಇಂತಹ ನಡವಳಿಕೆಗೆ ಸುಪ್ರೀಂ ಕೋರ್ಟ್ ನಿಚ್ಚಳ ಕಾರಣಗಳನ್ನು ನೀಡಿದೆ. ಅಧಿಕಾರದ ಬೆನ್ನಟ್ಟುವ ರಾಜಕೀಯ ಪಕ್ಷಗಳು ಸ್ವತಂತ್ರವಾಗಿ ಕಾರ್ಯನಿರ್ವಹಿಸುವ ಚುನಾವಣಾ ಆಯೋಗವನ್ನು ಇಷ್ಟಪಡುವುದಿಲ್ಲ. ಈಗಾಗಲೇ ಅಧಿಕಾರವನ್ನು ಹಿಡಿದಿರುವ ಪಕ್ಷಕ್ಕೆ, ಆ ಅಧಿಕಾರ ಕೈಬಿಟ್ಟು ಹೋಗದಂತೆ ಉಳಿಸಿಕೊಂಡು ಮುಂದುವರಿಯುವುದೇ ಪರಮಧೇಯವಾಗಿರುತ್ತದೆ. ಅಧಿಕಾರ ಹಿಡಿಯಲು ಮತ್ತು ಅಧಿಕಾರದಲ್ಲಿ ಮುಂದುವರಿಯಲು ತನ್ನ ತಾಳಕ್ಕೆ ತಕ್ಕಂತೆ ಕುಣಿಯುವಂತೆ ಚುನಾವಣಾ ಆಯೋಗವನ್ನು ಸದಾ ಬಗ್ಗಿಸಿ ಇಟ್ಟುಕೊಂಡಿರುವುದೇ ‘ಸರಿ ದಾರಿ’. ಹಾಗಾದರೆ ನೇಮಕಾತಿ ಕುರಿತು ಸುಪ್ರೀಂ ಕೋರ್ಟ್ ಸೂಚಿಸಿದ್ದ ಪಾರದರ್ಶಕ ದಾರಿ ಯಾವುದು?

ಈಗಾಗಲೇ ಹೇಳಿರುವಂತೆ ಈ ಹುದ್ದೆಗಳಿಗೆ ನೇಮಕ ಮಾಡುವ ಅಧಿಕಾರ ಪ್ರಧಾನಮಂತ್ರಿಯದು. ಈ ರೂಢಿಯ ಬದಲಿಗೆ ಆಯ್ಕೆ ಸಮಿತಿಯೊಂದನ್ನು ರಚಿಸಬೇಕು. ಪ್ರಧಾನಮಂತ್ರಿ, ಲೋಕಸಭೆಯ ಪ್ರತಿಪಕ್ಷದ ನಾಯಕ ಹಾಗೂ ಸುಪ್ರೀಂ ಕೋರ್ಟಿನ ಮುಖ್ಯನ್ಯಾಯಮೂರ್ತಿಯನ್ನು ಈ ಸಮಿತಿ ಒಳಗೊಂಡಿರಬೇಕು. ಈ ಸಮಿತಿಯೇ ಸೂಕ್ತ ಸಮರ್ಥ ನಿಷ್ಪಕ್ಷಪಾತ ಅಭ್ಯರ್ಥಿಗಳನ್ನು ಆರಿಸಿ ನೇಮಿಸಬೇಕೆಂದು ಸುಪ್ರೀಂ ತೀರ್ಪಿನ ಸಾರವಾಗಿತ್ತು. ಈ ತೀರ್ಪನ್ನು ಮೋದಿ ಸರ್ಕಾರ ಇದೀಗ ಮೂಲೆಗುಂಪು ಮಾಡಿದೆ. ನೇಮಕ ಪ್ರಕ್ರಿಯೆಯಿಂದ ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಮೂರ್ತಿಯವರನ್ನು ಹೊರಗಿಟ್ಟಿದೆ. ಅವರ ಜಾಗದಲ್ಲಿ ಕೇಂದ್ರ ಸರ್ಕಾರದ ಸಂಪುಟ ದರ್ಜೆಯ ಸಚಿವರೊಬ್ಬರು ಇರುತ್ತಾರೆ. ಈ ಸಚಿವರು ಯಾರೆಂಬುದನ್ನು ಪ್ರಧಾನಮಂತ್ರಿ ತೀರ್ಮಾನಿಸುತ್ತಾರೆ. ಹೀಗೆ ಮೂವರು ಸದಸ್ಯರ ಸಮಿತಿಯಲ್ಲಿ ಇಬ್ಬರ ತೀರ್ಮಾನವೇ ಬಹುಮತದ ಮತ್ತು ಅಂತಿಮ ತೀರ್ಮಾನ. ಒಂದು ವೇಳೆ ಪ್ರತಿಪಕ್ಷದ ನಾಯಕ ಒಪ್ಪಿಗೆ ನೀಡದೆ ಹೋದರೂ ಆಳುವ ಸರ್ಕಾರ ಆರಿಸಿದವರೇ ಮುಖ್ಯ ಆಯುಕ್ತ ಮತ್ತು ಆಯುಕ್ತರಾಗಿ ನೇಮಕಗೊಳ್ಳುತ್ತಾರೆ. ನ್ಯಾಯಾಲಯದ ತೀರ್ಪಿನ್ನು ಒಪ್ಪಿ ಆಯ್ಕೆ ಸಮಿತಿ ರಚಿಸಿದ್ದರೇನಾಗುತ್ತಿತ್ತು?

ಪ್ರತಿಪಕ್ಷದ ನಾಯಕ ಮತ್ತು ಮುಖ್ಯ ನ್ಯಾಯಮೂರ್ತಿ ಒಟ್ಟಿಗೆ ಮತ ಚಲಾಯಿಸಿದರೆಂದುಕೊಳ್ಳಿ. ಆಗ ಸರ್ಕಾರ ತನಗೆ ಬೇಕಿದ್ದ ಕೈಗೊಂಬೆಗಳನ್ನು ಆಯೋಗದಲ್ಲಿ ಪ್ರತಿಷ್ಠಾಪಿಸುವುದು ಅಸಾಧ್ಯವಾಗುತ್ತಿತ್ತು. ಸದ್ಯದಲ್ಲೇ ಕಾನೂನು ಆಗಲಿರುವ ಈ ವಿಧೇಯಕದಲ್ಲಿ ಮತ್ತೊಂದು ಹೊಸ ಕಳವಳಕಾರಿ ಅಂಶವನ್ನು ಸೇರಿಸಲಾಗಿದೆ. ಸೇವೆಯಲ್ಲಿರುವ ಮತ್ತು ನಿವೃತ್ತರಾಗಿರುವ ಮುಖ್ಯ ಚುನಾವಣಾ ಆಯುಕ್ತರು ಮತ್ತು ಚುನಾವಣಾ ಆಯುಕ್ತರಿಗೆ ಯಾವುದೇ ಸಿವಿಲ್ ಅಥವಾ ಕ್ರಿಮಿನಲ್ ವಿಚಾರಣೆಗಳಿಂದ ರಕ್ಷಣೆ ಒದಗಿಸಲಾಗಿದೆ. ತಮ್ಮ ಅಧಿಕೃತ ಕಾರ್ಯನಿರ್ವಹಣೆಯಲ್ಲಿ ಇವರು ಆಡುವ ಯಾವುದೇ ಮಾತು ಅಥವಾ ಕೈಗೊಳ್ಳುವ ಕ್ರಮಗಳ ವಿರುದ್ಧ ಯಾವುದೇ ಸಿವಿಲ್ ಅಥವಾ ಕ್ರಿಮಿನಲ್ ಕೇಸುಗಳನ್ನು ಯಾವ ನ್ಯಾಯಾಲಯವೂ ದಾಖಲಿಸುವಂತಿಲ್ಲ ಎಂದು ವಿಧಿಸಲಾಗಿದೆ.

ಪ್ರಧಾನಿ ನಿಯುಕ್ತ ಮುಖ್ಯ ಆಯುಕ್ತರು, ಆಯುಕ್ತರು ತಮ್ಮ ಅಧಿಕಾರಾವಧಿಯಲ್ಲಿ ಆಳುವ ಪಕ್ಷದ ಪರವಾಗಿ ಎಸಗುವ ಯಾವುದೇ ‘ತಪ್ಪುತಡೆ’ಗಳಿಗೆ ನೀಡಿರುವ ರಕ್ಷಣೆಯಿದು. ನ್ಯಾಯಾಲಯಗಳಿಗೆ ಅಳುಕಬೇಕಿಲ್ಲ. ಆಳುವ ಸರ್ಕಾರಕ್ಕೆ ವಿಧೇಯತೆ, ನಿಷ್ಠೆ, ಕೃತಜ್ಞತೆಯನ್ನು ತೋರುತ್ತಿದ್ದರೆ ಸಾಕು. ಆಯೋಗದ ಇಬ್ಬರು ಆಯುಕ್ತರ ಪೈಕಿ ಅನೂಪ್ ಚಂದ್ರ ಪಾಂಡೆ ಮುಂಬರುವ ಲೋಕಸಭಾ ಚುನಾವಣೆಗಳಿಗೆ ಮುನ್ನ (ಫೆಬ್ರವರಿ) ನಿವೃತ್ತರಾಗಲಿದ್ದಾರೆ. ಅವರಿಂದ ತೆರವಾಗುವ ಜಾಗಕ್ಕೆ ಹೊಸ ವ್ಯವಸ್ಥೆಯಡಿ ಮೊತ್ತಮೊದಲ ನೇಮಕ ನಡೆಯಲಿದೆ.

ಚುನಾವಣಾ ಆಯೋಗ ಆಳುವವರ ಪಂಜರದ ಗಿಳಿಯಾಗಿಯೇ ಮುಂದುವರಿಯಲಿದೆ. ಈ ಬೆಳವಣಿಗೆ “ಜನತಂತ್ರದ ಜನನಿ’ ಭಾರತ ಹೆಮ್ಮೆಪಡುವ ಸಂಗತಿಯೇನೂ ಅಲ್ಲ.

andolanait

Recent Posts

ಬಾಂಗ್ಲಾದೇಶಿಗರ ಉದ್ಧಟತನ: ಸಂಸದ ಯದುವೀರ್‌ ಒಡೆಯರ್‌ ಹೇಳಿದ್ದಿಷ್ಟು.!

ಮೈಸೂರು: ದೇಶದೊಳಗೆ ಅಕ್ರಮವಾಗಿ ನುಸುಳುವವರ ಸಂಖ್ಯೆ ಹೆಚ್ಚಾಗಿದ್ದು, ಕರ್ನಾಟಕದಲ್ಲಿಯೂ ಬಾಂಗ್ಲಾದೇಶದ ಪ್ರಜೆಗಳು ಉದ್ಧಟತನ ತೋರುತ್ತಿದ್ದಾರೆ ಎಂದು ಸಂಸದ ಯದುವೀರ್‌ ಕೃಷ್ಣದತ್ತ…

2 mins ago

ಹೊಸ ವರ್ಷಾಚರಣೆ ಹಿನ್ನೆಲೆ ರಾಜ್ಯದ ಈ ಪ್ರವಾಸಿ ತಾಣಗಳಿಗೆ ಪ್ರವೇಶ ನಿರ್ಬಂಧ

ಬೆಂಗಳೂರು: ಹೊಸ ವರ್ಷಾಚರಣೆಯ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ಪ್ರವಾಸಿ ತಾಣಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುವ ಹಿನ್ನೆಲೆಯಲ್ಲಿ…

49 mins ago

ಹೊಸ ವರ್ಷಾಚರಣೆ: ಮೈಸೂರಿನಲ್ಲಿ ಅಬಕಾರಿ ಪೊಲೀಸರ ಅಲರ್ಟ್

ಮೈಸೂರು: ಹೊಸ ವರ್ಷದ ಸಂಭ್ರಮದ ಹಿನ್ನೆಲೆಯಲ್ಲಿ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಅಕ್ರಮ ಮದ್ಯ ಹಾಗೂ ಮಾದಕ ವಸ್ತುಗಳ ಮಾರಾಟ ತಡೆಯಲು…

1 hour ago

ನಂಜನಗೂಡು: ಪೊಲೀಸ್ ಠಾಣೆ ಪಕ್ಕದಲ್ಲೇ ಸರಣಿ ಕಳ್ಳತನ: ಪಟ್ಟಣದಲ್ಲಿ ಆತಂಕ

ನಂಜನಗೂಡು: ಪಟ್ಟಣದಲ್ಲಿ ಸರಣಿ ಕಳ್ಳತನ ಪ್ರಕರಣಗಳು ಬೆಳಕಿಗೆ ಬಂದಿದ್ದು, ನಗರವಾಸಿಗಳಲ್ಲಿ ಆತಂಕ ಮೂಡಿಸಿದೆ. ನಗರದ ಆರ್.ಪಿ. ರಸ್ತೆಯಲ್ಲಿರುವ ಸುಮಾರು 14…

1 hour ago

ಚಾಮರಾಜನಗರದಲ್ಲಿ ಮತ್ತೊಂದು ಹುಲಿ ಸೆರೆ

ಚಾಮರಾಜನಗರ: ಚಾಮರಾಜನಗರ ತಾಲ್ಲೂಕಿನ ಕಲ್ಪುರ ಭಾಗದಲ್ಲಿ ಸಂಚಾರ ಮಾಡುತ್ತಿದ್ದ ಮತ್ತೊಂದು ಹುಲಿಯನ್ನು ಅರವಳಿಕೆ ಚುಚ್ಚುಮದ್ದು ನೀಡಿ ಸೆರೆ ಹಿಡಿಯಲಾಗಿದೆ. ಕಳೆದ…

2 hours ago

ಓದುಗರ ಪತ್ರ: ಇಸ್ಕಾನ್ ಕೃಷ್ಣ ದೇವಾಲಯದ ಬಳಿಯಿದ್ದ ಕಸ ತೆರವು

ಮೈಸೂರಿನ ಜಯನಗರದಲ್ಲಿರುವ ಇಸ್ಕಾನ್ ದೇವಾಲಯದ ಪಕ್ಕದಲ್ಲಿದ್ದ ಕಸದ ರಾಶಿಯನ್ನು ಮೈಸೂರು ಮಹಾನಗರಪಾಲಿಕೆಯಿಂದ ಮಂಗಳವಾರ ತೆರವುಗೊಳಿಸಲಾಗಿದೆ. ಆಂದೋಲನ ದಿನಪತ್ರಿಕೆಯ ಓದುಗರ ಪತ್ರ…

5 hours ago