ಅಂಕಣಗಳು

ಕೆಂಪುಕೋಟೆ ಬಳಿ ಸ್ಛೋಟ : ನಲುಗಿದ ದೆಹಲಿ, ನಡುಗಿದ ಮನಗಳು

ಸೋಮವಾರ (ನ.೧೦) ಸಂಜೆ ರೈಲ್ವೆ ಸ್ಟೇಷನ್ ತಲುಪುವ ಹೊತ್ತಿಗೆ ಅಲ್ಲಿನ ಜನಸಂದಣಿ ನೋಡಿಯೇಗಾಬರಿಯಾಗಿತ್ತು. ಅಸಹಜವೆನ್ನುವಷ್ಟು ಪೊಲೀಸು ಪಡೆಯ ನಾಯಿಗಳು ಪ್ಲಾಟ್ ಫಾರ್ಮಿನ ಉದ್ದಕ್ಕೂ ಪರಿವೀಕ್ಷಣೆ ನಡೆಸಿದ್ದವು. ಹಿಂದಿನ ದಿನವಷ್ಟೇ ಫರೀದಾಬಾದಿನ ಒಂದು ಮನೆಯಲ್ಲಿ ಸ್ಛೋಟಕ ವಸ್ತು ದೊರೆತ ವರದಿ ಓದಿದ್ದೆ. ಕೆಲವೇ ಕ್ಷಣಗಳಲ್ಲಿ ದಿಲ್ಲಿಯ ಕೆಂಪುಕೋಟೆಯ ಬಳಿ ನಡೆದ ಸ್ಛೋಟದ ಸುದ್ದಿ ಹರಡಿ ರೈಲ್ವೆ ನಿಲ್ದಾಣದಲ್ಲಿನ ಇಡೀ ವಾತಾವರಣದಲ್ಲಿ ಒಂದು ತೆರನಾದ ಭಯ ಆವರಿಸಿದಂತೆ ಶರತ್ಕಾಲದ ಸಂಜೆಗಪ್ಪು ಆವರಿಸಿತ್ತು.

ದೆಹಲಿಯ ಬದುಕಿನಲ್ಲಿ ಅದೆಷ್ಟು ಬಾಂಬ್ ಸ್ಛೋಟಗಳನ್ನು ಕಂಡಿಲ್ಲ, ಜೀವ ಅಂಗೈಯಲ್ಲಿಟ್ಟುಕೊಂಡು ಓಡಾಡಿಲ್ಲ, ನಾಲ್ಕು ದಶಕದ ಈ ದೆಹಲಿ ವಾಸದಲ್ಲಿ ! ೨೦೦೫ರಲ್ಲಿ ಬಹುಶಃ ಸೆಪ್ಟೆಂಬರ್ ತಿಂಗಳಿರಬಹುದು. ದೀಪಾವಳಿಯ ಖರೀದಿಗಾಗಿ ಸರೋಜಿನಿ ನಗರಕ್ಕೆ (ಮಾರ್ಕೆಟ್) ಹೋಗಿ ಸಂಜೆ ತಡವಾಗಿ ಬರ್ತೀನಿ ಅಂತ ಮನೆಯಲ್ಲಿ ಹೇಳಿಬಂದಿದ್ದೆ. ಆಫೀಸಿನಲ್ಲಿ ಇದೇ ಕಾರಣ ಹೇಳಿ ಅವತ್ತು ಬೇಗ ಬಿಟ್ಟೆ. ಆಟೋ ತಗೊಳ್ಳಲು ಕಂಜೂಸಿ ಮಾಡಿ ಎರಡು ಬಸ್ಸು ಬದಲಿಸಿಕೊಂಡು ಸರೋಜಿನಿ ಮಾರ್ಕೆಟ್ ತಲುಪಿ ಅತ್ತ ಹೆಜ್ಜೆ ಹಾಕಬೇಕು, ಅಷ್ಟರಲ್ಲಿ ಅತ್ತಲಿಂದ ಜನ ಓಡೋಡಿ ಬರುತ್ತಿದ್ದಾರೆ, ಇತ್ತ ಮೊಬೈಲ್ ಹೊಡೆದುಕೊಳ್ಳತೊಡಗಿದೆ… ಅತ್ತ ಹೋಗಲೋ.. ಬಿಡಲೋ… ಏನಾಗುತ್ತಿದೆ ಎಂದು ಯೋಚಿಸಲೂ ಆಗದಂತಹ ಜನಜಂಗುಳಿಯಿಂದ ‘ಉಧರ್ ಮತ್ ಜಾವ್’ ಅನ್ನುವ ಸಾಮೂಹಿಕ ಕೂಗುಗಳಿಂದ ಅಲ್ಲೆನೋ ಆಗಿದೆ ಎಂದು ಗ್ರಹಿಸಿದ ಕಾಲುಗಳು ಅಲ್ಲೇ ನಿಂತವು. ಫೋನ್ ತಗೊಂಡಾಗ ಮನೆಯವರೆಲ್ಲ ಗಾಬರಿಯಲ್ಲಿ ಬ್ಲಾಸ್ಟ್ ಸುದ್ದಿಯ ಭೀಕರತೆಯನ್ನು ತಿಳಿಸಿದಾಗಲೇ ಮೈ ನಡುಗಿದ್ದು. ಮಾರ್ಕೆಟ್‌ನ ಒಂದು ಕಡೆಯಿಂದ ಏಳುತ್ತಿದ್ದ ದಟ್ಟ ಹೊಗೆ ಅನಂತವನ್ನು ಸೇರುತ್ತಿತ್ತು. ಸ್ವಲ್ಪದರಲ್ಲೇ ಬದುಕಿದೆನೇನೋ ಎಂಬ ಯೋಚನೆಯಿಂದ ಎದೆ ಢವಗುಡುತ್ತಿತ್ತು. ಬಸ್ಸಿಗಾಗಿ ಕಾಯದೇ ಆಟೋ ಹಿಡಿದು ತಲುಪಿದ್ದರೇ… ನಾನೂ..! ಕೈಕಾಲಿನ ಶಕ್ತಿಯೇ ಉಡುಗಿದಂತಾಗಿತ್ತು. ಹೇಗೆ ಮನೆ ಸೇರಿದೆನೋ ನನಗೇ ಗೊತ್ತಿಲ್ಲ.

ಇನ್ನೊಮ್ಮೆ ಆಫೀಸಿನ ಹತ್ತಿರದ ಗ್ರೇಟರ್ ಕೈಲಾಶ್‌ನ MBlock ಮಾರ್ಕೆಟ್ಟಿನಲ್ಲಿನ ಸ್ಛೋಟದ ಮುನ್ನ ಅಲ್ಲಿಯೇ ಇದ್ದೆ. ಡಿ ಪಾಲ್ ಕೋಲ್ಡ್ ಕಾಫೀ ಕುಡಿದು… ಹಾಗೇ ವಿಂಡೋ ಶಾಪಿಂಗ್ ಮಾಡುತ್ತಾ ಗೋಲಾ ಬರ್ಫಿನ ಚುಸ್ಕಿ ಕೈಗಾಡಿಯವನಿದ್ದ ಸ್ಛೋಟಗೊಂಡ ಜಾಗದಲ್ಲೇ ಇದ್ದೆ. ಕಾಯುವ ದೇವರು ದೊಡ್ಡವನು ಅನ್ನೋದು ನಿಜವಿರಬೇಕು. ಈಗ ದಶಕಗಳ ನಂತರ ಮತ್ತೆ ಸ್ಛೋಟ ದೆಹಲಿಯನ್ನು ನಡುಗಿಸಿದೆ.

ಇದನ್ನು ಓದಿ:  75 ರ ಪ್ರಾಯದಲ್ಲಿ ಜೆಸಿಬಿ ಚಲಾಯಿಸುವ ಮಣಿ ಅಮ್ಮ!

ದೆಹಲಿಯ ಹೃದಯವೆನಿಸಿರುವ ಕೆಂಪುಕೋಟೆ – ರಾಷ್ಟ್ರದ ಗೌರವದ ಸಂಕೇತ, ಸ್ವಾತಂತ್ರ್ಯದ ನೆನಪಿನ ಪುಣ್ಯಸ್ಥಳ. ಆ ಕೋಟೆಯ ಪಕ್ಕದಲ್ಲೇ, ಸುತ್ತಮುತ್ತಲಿನ ಚಾಂದನೀ ಚೌಕ್, ಜಮಾ ಮಸೀದಿಯಾಚೆಗಿನ ನಿತ್ಯವೂ ಸಾವಿರಾರು ಜನರು ನಡೆಯುವ ಆ ಬೀದಿಯಲ್ಲಿ ಮತ್ತೊಮ್ಮೆ ಅಕಸ್ಮಾತ್ ಉಂಟಾದ ಸ್ಛೋಟದ ಶಬ್ದ ನಗರವನ್ನೇ ನಡುಗಿಸಿದೆ. ಕ್ಷಣದಲ್ಲಿ ದೃಶ್ಯವೇ ಬದಲಾಯಿತು. ಕಾಲ ಕಾಲವೇ ಸ್ತಬ್ಧಗೊಂಡಿತು. ಹಕ್ಕಿಗಳು ನಿಶ್ಶಬ್ದವಾದವು, ಜನರ ಕಿರುಚಾಟದ ಮಧ್ಯೆ ಕಣ್ಮರೆಯಾದವು ನಗುಗಳು, ಕನಸುಗಳು. ಕೆಂಪುಕೋಟೆಯ ಆ ಭಿತ್ತಿಗಳ ಮೇಲೆ ಭಯ ಮತ್ತು ನೋವಿನ ಅಕ್ಷರಗಳಲ್ಲಿ ರಕ್ತದ ಕಲೆಗಳು ಹೊಸ ಇತಿಹಾಸವನ್ನು ಬರೆದಂತಿದ್ದವು.

ಸದಾ ಪ್ರವಾಸಿಗರ ಕಲರವ ಗಡಿಬಿಡಿ ಧಾವಂತದಲ್ಲಿ ಕೊಡಕೊಳ್ಳುವಿಕೆಯಲ್ಲಿ ಹಬ್ಬದಂತೆ ತುಂಬಿಕೊಂಡಿರುತ್ತಿದ್ದ ಆ ಸ್ಥಳ ಸೋಮವಾರ ಭಯದ ಬೂದಿಯೊಳಗೆ ಮುಳುಗಿತ್ತು. ಯಾರೋ ಒಬ್ಬ ತಂದೆ ತನ್ನ ಮಗುವನ್ನು ಹೊತ್ತು ಓಡುತ್ತಿರಬಹುದು, ಯಾರೋ ಒಬ್ಬ ತರುಣಿ ತನ್ನ ಸ್ನೇಹಿತನ ಹೆಸರನ್ನು ಕೂಗಿ ಹುಡುಕುತ್ತಿರಬಹುದು, ಆಂಬುಲೆನ್ಸ್‌ನ ಸೈರನ್‌ಗಳ ಶಬ್ದ ಗಗನಕ್ಕೇರಿದಾಗ ದೆಹಲಿಯ ನಾಡಿ ಬಡಿತವೇ ನಿಂತಂತಾಗುತ್ತದೆ. ಆದರೆ ಇಂತಹ ಹೃದಯವಿದ್ರಾವಕ ದಂಗೆಗಳನ್ನು, ದಾಳಿ – ಹಲ್ಲೆಗಳನ್ನು, ರಕ್ತದ ಹೊಳೆಗಳನ್ನು, ಗಾಯಗಳನ್ನು ಕಾಣುತ್ತಲೇ ಬಂದ ದೆಹಲಿಯೆಂಬ ಮಾಯಾಂಗನೆಯ ಅಂತಃ ಸತ್ವಕ್ಕೆ ಬೆರಗಾಗುತ್ತದೆ.

ಎಲ್ಲೋ ಕಣ್ಣೀರಿನ ನಡುವೆ ಕೈಹಿಡಿದು ಸಂತೈಸುವ ನೂರಾರು ಹೃದಯವಂತರೂ ಇದ್ದಾರೆ. ನೊಂದವರ ಕಣ್ಣೊರೆಸಿ ತುತ್ತು ಕೊಡುವ ಕೈಗಳೂ ಇವೆ. ಇಲ್ಲಿ ಮಾನವೀಯತೆಯ ಅತ್ಯಂತ ಪ್ರಕಾಶಮಾನ ಮುಖಗಳಿವೆ. ಅಪರಿಚಿತರೇ ಪರಸ್ಪರ ಕೈಹಿಡಿದರು, ರಕ್ತದ ಮಧ್ಯೆ ಜೀವ ಉಳಿಸಲು ಹೋರಾಡಿದರು. ಸಂಘಟನೆಯ ಶಬ್ದವನ್ನು ಮೀರಿಸಿಕೊಂಡು – ದಯೆಯ ಶಬ್ದ ಕೇಳಿಬರುತ್ತದೆ.

ಸ್ಛೋಟವು ದೆಹಲಿಯ ಗೋಡೆಗಳನ್ನು ನಡುಗಿಸಬಹುದು. ಆದರೆ ದೆಹಲಿಯ ಆತ್ಮವನ್ನು ಮುರಿಯಲಾರದು. ಕೆಂಪುಕೋಟೆಯ ಆ ಕೆಂಪು ಇಟ್ಟಿಗೆಗಳಂತೆ, ಈ ನಗರವೂ ಮತ್ತೆ ಮತ್ತೆ ಎದ್ದು ನಿಲ್ಲುತ್ತದೆ – ಮತ್ತೆ ಬದುಕು ಮಾಮೂಲಾಗತೊಡಗುತ್ತದೆ. ಆದರೆ ಮನಸ್ಸಿನೊಳಗೆ ಉಳಿಯುವ ಒಂದು ಪ್ರಶ್ನೆ: ಯುದ್ಧ ಮತ್ತು ಹಿಂಸೆಗಳನ್ನು ಯಾವ ದೇಶದ ಜನರೂ ಬಯಸುವುದಿಲ್ಲ… ಹಾಗಾದರೆ ಕ್ಯೂಂ ಹೋತಾ ಹೈ?

” ಎಲ್ಲೋ ಕಣ್ಣೀರಿನ ನಡುವೆ ಕೈಹಿಡಿದು ಸಂತೈಸುವ ನೂರಾರು ಹೃದಯವಂತರೂ ಇದ್ದಾರೆ. ನೊಂದವರ ಕಣ್ಣೊರೆಸಿ ತುತ್ತು ಕೊಡುವ ಕೈಗಳೂ ಇವೆ. ಇಲ್ಲಿ ಮಾನವೀಯತೆಯ ಅತ್ಯಂತ ಪ್ರಕಾಶಮಾನ ಮುಖಗಳಿವೆ. ಅಪರಿಚಿತರೇ ಪರಸ್ಪರ ಕೈಹಿಡಿದರು, ರಕ್ತದ ಮಧ್ಯೆ ಜೀವ ಉಳಿಸಲು ಹೋರಾಡಿದರು. ಸಂಘಟನೆಯ ಶಬ್ದವನ್ನು ಮೀರಿಸಿಕೊಂಡು – ದಯೆಯ ಶಬ್ದ ಕೇಳಿಬರುತ್ತದೆ.”

ರೇಣುಕಾ ನಿಡುಗುಂದಿ, ನವದೆಹಲಿ

ಆಂದೋಲನ ಡೆಸ್ಕ್

Recent Posts

ನನಗೂ ಸಿಎಂ ಆಗಬೇಕು ಎನ್ನುವ ಆಸೆ ಇದೆ: ಸಚಿವ ದಿನೇಶ್‌ ಗುಂಡೂರಾವ್‌

ಮೈಸೂರು: ಪಕ್ಷದಲ್ಲಿ ಎಲ್ಲರಿಗೂ ಸಿಎಂ ಆಗಬೇಕು ಎನ್ನುವ ಆಸೆ ಇದೆ ಎಂದು ಆರೋಗ್ಯ ಇಲಾಖೆ ಸಚಿವ ದಿನೇಶ್‌ ಗುಂಡೂರಾವ್‌ ಹೇಳಿದರು.…

23 mins ago

ಮಾಸ್ಕ್‌ ಮ್ಯಾನ್‌ ಚಿನ್ನಯ್ಯನಿಗೆ ಜಾಮೀನು ಸಿಕ್ಕರೂ ಬಿಡುಗಡೆ ಭಾಗ್ಯವಿಲ್ಲ

ಮಂಗಳೂರು: ಧರ್ಮಸ್ಥಳದಲ್ಲಿ ಶವಹೂತ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರುದಾರನಾಗಿ ಬಂದ ಬಳಿಕ ಆರೋಪಿಯಾಗಿ ಜೈಲಿನಲ್ಲಿರುವ ಮಾಸ್ಕ್‌ ಮ್ಯಾನ್‌ ಚಿನ್ನಯ್ಯನಿಗೆ ಜಾಮೀನು ಸಿಕ್ಕಿ…

33 mins ago

ಜಗದ್ಗುರು ಶ್ರೀ ಶಿವರಾತ್ರಿ ಡಾ.ರಾಜೇಂದ್ರ ಶ್ರೀಗಳ 110ನೇ ಜಯಂತೋತ್ಸವ, ಶ್ರೀ ನಂಜುಂಡಸ್ವಾಮಿಗಳ 16ನೇ ಸಂಸ್ಮರಣೋತ್ಸವ

ಟಿ.ನರಸೀಪುರ: ಜಗದ್ಗುರು ಶ್ರೀ ಶಿವರಾತ್ರಿ ಡಾ.ರಾಜೇಂದ್ರ ಶ್ರೀಗಳ 110ನೇ ಜಯಂತೋತ್ಸವ ಹಾಗೂ ಶ್ರೀ ನಂಜುಂಡಸ್ವಾಮಗಳ 16ನೇ ಸಂಸ್ಮರಣೋತ್ಸವ ಕಾರ್ಯಕ್ರಮ ಹೊಸಮಠದ…

46 mins ago

ರೆಪೋ ದರ ಕಡಿತಗೊಳಿಸಿದ ಭಾರತೀಯ ರಿಸರ್ವ್ ಬ್ಯಾಂಕ್

ನವದೆಹಲಿ: ಭಾರತೀಯ ರಿಸರ್ವ್ ಬ್ಯಾಂಕ್ ತನ್ನ ರೆಪೊ ದರವನ್ನು ಶೇ. 5.5% ರಿಂದ 5.25ಕ್ಕೆ ಅಂದರೆ 25 ಬೇಸಿಸ್ ಪಾಯಿಂಟ್‍ಗಳಷ್ಟು…

52 mins ago

ಮಂಡ್ಯ ಕೃಷಿ ಪ್ರದಾನ ಜಿಲ್ಲೆ: ಸಿಎಂ ಸಿದ್ದರಾಮಯ್ಯ

ಮಂಡ್ಯ: ಲ್ಯಾಬ್‌ ಟು ಲ್ಯಾಂಡ್‌ ಆದರೆ ಮಾತ್ರ ರೈತರಿಗೆ ಸಂಪೂರ್ಣ ಅನುಕೂಲವಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು. ಈ ಕುರಿತು…

1 hour ago

ಹೊಸ ದಾಖಲೆ ನಿರ್ಮಿಸಿದ ಬೆಂಗಳೂರು ಪೊಲೀಸರು: ಏನದು ಗೊತ್ತಾ?

ಬೆಂಗಳೂರು: ಮಾದಕದ್ರವ್ಯ ಮಾರಾಟ ಮತ್ತು ಮಾದಕದ್ರವ್ಯ ಸೇವನೆಯನ್ನು ನಿಗ್ರಹಿಸುವ ನಿಟ್ಟಿನಲ್ಲಿ ಬೆಂಗಳೂರು ಪೊಲೀಸರು ಹೊಸ ದಾಖಲೆ ನಿರ್ಮಿಸಿದ್ದಾರೆ. ಪ್ರಸಕ್ತ ಸಾಲಿನ…

1 hour ago