ಅಂಕಣಗಳು

ಕೆಂಪುಕೋಟೆ ಬಳಿ ಸ್ಛೋಟ : ನಲುಗಿದ ದೆಹಲಿ, ನಡುಗಿದ ಮನಗಳು

ಸೋಮವಾರ (ನ.೧೦) ಸಂಜೆ ರೈಲ್ವೆ ಸ್ಟೇಷನ್ ತಲುಪುವ ಹೊತ್ತಿಗೆ ಅಲ್ಲಿನ ಜನಸಂದಣಿ ನೋಡಿಯೇಗಾಬರಿಯಾಗಿತ್ತು. ಅಸಹಜವೆನ್ನುವಷ್ಟು ಪೊಲೀಸು ಪಡೆಯ ನಾಯಿಗಳು ಪ್ಲಾಟ್ ಫಾರ್ಮಿನ ಉದ್ದಕ್ಕೂ ಪರಿವೀಕ್ಷಣೆ ನಡೆಸಿದ್ದವು. ಹಿಂದಿನ ದಿನವಷ್ಟೇ ಫರೀದಾಬಾದಿನ ಒಂದು ಮನೆಯಲ್ಲಿ ಸ್ಛೋಟಕ ವಸ್ತು ದೊರೆತ ವರದಿ ಓದಿದ್ದೆ. ಕೆಲವೇ ಕ್ಷಣಗಳಲ್ಲಿ ದಿಲ್ಲಿಯ ಕೆಂಪುಕೋಟೆಯ ಬಳಿ ನಡೆದ ಸ್ಛೋಟದ ಸುದ್ದಿ ಹರಡಿ ರೈಲ್ವೆ ನಿಲ್ದಾಣದಲ್ಲಿನ ಇಡೀ ವಾತಾವರಣದಲ್ಲಿ ಒಂದು ತೆರನಾದ ಭಯ ಆವರಿಸಿದಂತೆ ಶರತ್ಕಾಲದ ಸಂಜೆಗಪ್ಪು ಆವರಿಸಿತ್ತು.

ದೆಹಲಿಯ ಬದುಕಿನಲ್ಲಿ ಅದೆಷ್ಟು ಬಾಂಬ್ ಸ್ಛೋಟಗಳನ್ನು ಕಂಡಿಲ್ಲ, ಜೀವ ಅಂಗೈಯಲ್ಲಿಟ್ಟುಕೊಂಡು ಓಡಾಡಿಲ್ಲ, ನಾಲ್ಕು ದಶಕದ ಈ ದೆಹಲಿ ವಾಸದಲ್ಲಿ ! ೨೦೦೫ರಲ್ಲಿ ಬಹುಶಃ ಸೆಪ್ಟೆಂಬರ್ ತಿಂಗಳಿರಬಹುದು. ದೀಪಾವಳಿಯ ಖರೀದಿಗಾಗಿ ಸರೋಜಿನಿ ನಗರಕ್ಕೆ (ಮಾರ್ಕೆಟ್) ಹೋಗಿ ಸಂಜೆ ತಡವಾಗಿ ಬರ್ತೀನಿ ಅಂತ ಮನೆಯಲ್ಲಿ ಹೇಳಿಬಂದಿದ್ದೆ. ಆಫೀಸಿನಲ್ಲಿ ಇದೇ ಕಾರಣ ಹೇಳಿ ಅವತ್ತು ಬೇಗ ಬಿಟ್ಟೆ. ಆಟೋ ತಗೊಳ್ಳಲು ಕಂಜೂಸಿ ಮಾಡಿ ಎರಡು ಬಸ್ಸು ಬದಲಿಸಿಕೊಂಡು ಸರೋಜಿನಿ ಮಾರ್ಕೆಟ್ ತಲುಪಿ ಅತ್ತ ಹೆಜ್ಜೆ ಹಾಕಬೇಕು, ಅಷ್ಟರಲ್ಲಿ ಅತ್ತಲಿಂದ ಜನ ಓಡೋಡಿ ಬರುತ್ತಿದ್ದಾರೆ, ಇತ್ತ ಮೊಬೈಲ್ ಹೊಡೆದುಕೊಳ್ಳತೊಡಗಿದೆ… ಅತ್ತ ಹೋಗಲೋ.. ಬಿಡಲೋ… ಏನಾಗುತ್ತಿದೆ ಎಂದು ಯೋಚಿಸಲೂ ಆಗದಂತಹ ಜನಜಂಗುಳಿಯಿಂದ ‘ಉಧರ್ ಮತ್ ಜಾವ್’ ಅನ್ನುವ ಸಾಮೂಹಿಕ ಕೂಗುಗಳಿಂದ ಅಲ್ಲೆನೋ ಆಗಿದೆ ಎಂದು ಗ್ರಹಿಸಿದ ಕಾಲುಗಳು ಅಲ್ಲೇ ನಿಂತವು. ಫೋನ್ ತಗೊಂಡಾಗ ಮನೆಯವರೆಲ್ಲ ಗಾಬರಿಯಲ್ಲಿ ಬ್ಲಾಸ್ಟ್ ಸುದ್ದಿಯ ಭೀಕರತೆಯನ್ನು ತಿಳಿಸಿದಾಗಲೇ ಮೈ ನಡುಗಿದ್ದು. ಮಾರ್ಕೆಟ್‌ನ ಒಂದು ಕಡೆಯಿಂದ ಏಳುತ್ತಿದ್ದ ದಟ್ಟ ಹೊಗೆ ಅನಂತವನ್ನು ಸೇರುತ್ತಿತ್ತು. ಸ್ವಲ್ಪದರಲ್ಲೇ ಬದುಕಿದೆನೇನೋ ಎಂಬ ಯೋಚನೆಯಿಂದ ಎದೆ ಢವಗುಡುತ್ತಿತ್ತು. ಬಸ್ಸಿಗಾಗಿ ಕಾಯದೇ ಆಟೋ ಹಿಡಿದು ತಲುಪಿದ್ದರೇ… ನಾನೂ..! ಕೈಕಾಲಿನ ಶಕ್ತಿಯೇ ಉಡುಗಿದಂತಾಗಿತ್ತು. ಹೇಗೆ ಮನೆ ಸೇರಿದೆನೋ ನನಗೇ ಗೊತ್ತಿಲ್ಲ.

ಇನ್ನೊಮ್ಮೆ ಆಫೀಸಿನ ಹತ್ತಿರದ ಗ್ರೇಟರ್ ಕೈಲಾಶ್‌ನ MBlock ಮಾರ್ಕೆಟ್ಟಿನಲ್ಲಿನ ಸ್ಛೋಟದ ಮುನ್ನ ಅಲ್ಲಿಯೇ ಇದ್ದೆ. ಡಿ ಪಾಲ್ ಕೋಲ್ಡ್ ಕಾಫೀ ಕುಡಿದು… ಹಾಗೇ ವಿಂಡೋ ಶಾಪಿಂಗ್ ಮಾಡುತ್ತಾ ಗೋಲಾ ಬರ್ಫಿನ ಚುಸ್ಕಿ ಕೈಗಾಡಿಯವನಿದ್ದ ಸ್ಛೋಟಗೊಂಡ ಜಾಗದಲ್ಲೇ ಇದ್ದೆ. ಕಾಯುವ ದೇವರು ದೊಡ್ಡವನು ಅನ್ನೋದು ನಿಜವಿರಬೇಕು. ಈಗ ದಶಕಗಳ ನಂತರ ಮತ್ತೆ ಸ್ಛೋಟ ದೆಹಲಿಯನ್ನು ನಡುಗಿಸಿದೆ.

ಇದನ್ನು ಓದಿ:  75 ರ ಪ್ರಾಯದಲ್ಲಿ ಜೆಸಿಬಿ ಚಲಾಯಿಸುವ ಮಣಿ ಅಮ್ಮ!

ದೆಹಲಿಯ ಹೃದಯವೆನಿಸಿರುವ ಕೆಂಪುಕೋಟೆ – ರಾಷ್ಟ್ರದ ಗೌರವದ ಸಂಕೇತ, ಸ್ವಾತಂತ್ರ್ಯದ ನೆನಪಿನ ಪುಣ್ಯಸ್ಥಳ. ಆ ಕೋಟೆಯ ಪಕ್ಕದಲ್ಲೇ, ಸುತ್ತಮುತ್ತಲಿನ ಚಾಂದನೀ ಚೌಕ್, ಜಮಾ ಮಸೀದಿಯಾಚೆಗಿನ ನಿತ್ಯವೂ ಸಾವಿರಾರು ಜನರು ನಡೆಯುವ ಆ ಬೀದಿಯಲ್ಲಿ ಮತ್ತೊಮ್ಮೆ ಅಕಸ್ಮಾತ್ ಉಂಟಾದ ಸ್ಛೋಟದ ಶಬ್ದ ನಗರವನ್ನೇ ನಡುಗಿಸಿದೆ. ಕ್ಷಣದಲ್ಲಿ ದೃಶ್ಯವೇ ಬದಲಾಯಿತು. ಕಾಲ ಕಾಲವೇ ಸ್ತಬ್ಧಗೊಂಡಿತು. ಹಕ್ಕಿಗಳು ನಿಶ್ಶಬ್ದವಾದವು, ಜನರ ಕಿರುಚಾಟದ ಮಧ್ಯೆ ಕಣ್ಮರೆಯಾದವು ನಗುಗಳು, ಕನಸುಗಳು. ಕೆಂಪುಕೋಟೆಯ ಆ ಭಿತ್ತಿಗಳ ಮೇಲೆ ಭಯ ಮತ್ತು ನೋವಿನ ಅಕ್ಷರಗಳಲ್ಲಿ ರಕ್ತದ ಕಲೆಗಳು ಹೊಸ ಇತಿಹಾಸವನ್ನು ಬರೆದಂತಿದ್ದವು.

ಸದಾ ಪ್ರವಾಸಿಗರ ಕಲರವ ಗಡಿಬಿಡಿ ಧಾವಂತದಲ್ಲಿ ಕೊಡಕೊಳ್ಳುವಿಕೆಯಲ್ಲಿ ಹಬ್ಬದಂತೆ ತುಂಬಿಕೊಂಡಿರುತ್ತಿದ್ದ ಆ ಸ್ಥಳ ಸೋಮವಾರ ಭಯದ ಬೂದಿಯೊಳಗೆ ಮುಳುಗಿತ್ತು. ಯಾರೋ ಒಬ್ಬ ತಂದೆ ತನ್ನ ಮಗುವನ್ನು ಹೊತ್ತು ಓಡುತ್ತಿರಬಹುದು, ಯಾರೋ ಒಬ್ಬ ತರುಣಿ ತನ್ನ ಸ್ನೇಹಿತನ ಹೆಸರನ್ನು ಕೂಗಿ ಹುಡುಕುತ್ತಿರಬಹುದು, ಆಂಬುಲೆನ್ಸ್‌ನ ಸೈರನ್‌ಗಳ ಶಬ್ದ ಗಗನಕ್ಕೇರಿದಾಗ ದೆಹಲಿಯ ನಾಡಿ ಬಡಿತವೇ ನಿಂತಂತಾಗುತ್ತದೆ. ಆದರೆ ಇಂತಹ ಹೃದಯವಿದ್ರಾವಕ ದಂಗೆಗಳನ್ನು, ದಾಳಿ – ಹಲ್ಲೆಗಳನ್ನು, ರಕ್ತದ ಹೊಳೆಗಳನ್ನು, ಗಾಯಗಳನ್ನು ಕಾಣುತ್ತಲೇ ಬಂದ ದೆಹಲಿಯೆಂಬ ಮಾಯಾಂಗನೆಯ ಅಂತಃ ಸತ್ವಕ್ಕೆ ಬೆರಗಾಗುತ್ತದೆ.

ಎಲ್ಲೋ ಕಣ್ಣೀರಿನ ನಡುವೆ ಕೈಹಿಡಿದು ಸಂತೈಸುವ ನೂರಾರು ಹೃದಯವಂತರೂ ಇದ್ದಾರೆ. ನೊಂದವರ ಕಣ್ಣೊರೆಸಿ ತುತ್ತು ಕೊಡುವ ಕೈಗಳೂ ಇವೆ. ಇಲ್ಲಿ ಮಾನವೀಯತೆಯ ಅತ್ಯಂತ ಪ್ರಕಾಶಮಾನ ಮುಖಗಳಿವೆ. ಅಪರಿಚಿತರೇ ಪರಸ್ಪರ ಕೈಹಿಡಿದರು, ರಕ್ತದ ಮಧ್ಯೆ ಜೀವ ಉಳಿಸಲು ಹೋರಾಡಿದರು. ಸಂಘಟನೆಯ ಶಬ್ದವನ್ನು ಮೀರಿಸಿಕೊಂಡು – ದಯೆಯ ಶಬ್ದ ಕೇಳಿಬರುತ್ತದೆ.

ಸ್ಛೋಟವು ದೆಹಲಿಯ ಗೋಡೆಗಳನ್ನು ನಡುಗಿಸಬಹುದು. ಆದರೆ ದೆಹಲಿಯ ಆತ್ಮವನ್ನು ಮುರಿಯಲಾರದು. ಕೆಂಪುಕೋಟೆಯ ಆ ಕೆಂಪು ಇಟ್ಟಿಗೆಗಳಂತೆ, ಈ ನಗರವೂ ಮತ್ತೆ ಮತ್ತೆ ಎದ್ದು ನಿಲ್ಲುತ್ತದೆ – ಮತ್ತೆ ಬದುಕು ಮಾಮೂಲಾಗತೊಡಗುತ್ತದೆ. ಆದರೆ ಮನಸ್ಸಿನೊಳಗೆ ಉಳಿಯುವ ಒಂದು ಪ್ರಶ್ನೆ: ಯುದ್ಧ ಮತ್ತು ಹಿಂಸೆಗಳನ್ನು ಯಾವ ದೇಶದ ಜನರೂ ಬಯಸುವುದಿಲ್ಲ… ಹಾಗಾದರೆ ಕ್ಯೂಂ ಹೋತಾ ಹೈ?

” ಎಲ್ಲೋ ಕಣ್ಣೀರಿನ ನಡುವೆ ಕೈಹಿಡಿದು ಸಂತೈಸುವ ನೂರಾರು ಹೃದಯವಂತರೂ ಇದ್ದಾರೆ. ನೊಂದವರ ಕಣ್ಣೊರೆಸಿ ತುತ್ತು ಕೊಡುವ ಕೈಗಳೂ ಇವೆ. ಇಲ್ಲಿ ಮಾನವೀಯತೆಯ ಅತ್ಯಂತ ಪ್ರಕಾಶಮಾನ ಮುಖಗಳಿವೆ. ಅಪರಿಚಿತರೇ ಪರಸ್ಪರ ಕೈಹಿಡಿದರು, ರಕ್ತದ ಮಧ್ಯೆ ಜೀವ ಉಳಿಸಲು ಹೋರಾಡಿದರು. ಸಂಘಟನೆಯ ಶಬ್ದವನ್ನು ಮೀರಿಸಿಕೊಂಡು – ದಯೆಯ ಶಬ್ದ ಕೇಳಿಬರುತ್ತದೆ.”

ರೇಣುಕಾ ನಿಡುಗುಂದಿ, ನವದೆಹಲಿ

ಆಂದೋಲನ ಡೆಸ್ಕ್

Recent Posts

ಎಲ್‌ಪಿಜಿ ಕೊರತೆ | ಕೇಂದ್ರದಿಂದ 1955ರ ಕಾಯ್ದೆ ಜಾರಿ ; ಏನಿದು ಅಗತ್ಯ ಸರಕು ಕಾಯ್ದೆ?

ಹೊಸದಿಲ್ಲಿ : ಪಶ್ಚಿಮ ಏಷ್ಯಾ ಸಂಘರ್ಷದಿಂದಾಗಿ ಜಾಗತಿಕ ಇಂಧನ ಪೂರೈಕೆಯ ಮೇಲೆ ಹೆಚ್ಚುತ್ತಿರುವ ಒತ್ತಡದ ನಡುವೆ, ದೇಶೀಯ ಇಂಧನ ಮಾರುಕಟ್ಟೆಯನ್ನು…

15 mins ago

ನ್ಯಾಯಾಂಗ ಭ್ರಷ್ಟಾಚಾರ ಕುರಿತ ಅಧ್ಯಾಯ ವಿವಾದ ; ಸಾರ್ವಜನಿಕ ಕ್ಷಮೆ ಯಾಚಿಸಿದ ಎನ್‌ಸಿಇಆರ್‌ಟಿ

ಹೊಸದಿಲ್ಲಿ : ರಾಷ್ಟ್ರೀಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಪರಿಷತ್ (ಎನ್‌ಸಿಇಆರ್‌ಟಿ) ಇತ್ತೀಚೆಗೆ ಪ್ರಕಟಿಸಿದ್ದ 8ನೇ ತರಗತಿಯ ಸಮಾಜ ವಿಜ್ಞಾನ…

30 mins ago

ಟಿ.20 ವಿಶ್ವಕಪ್‌ | ವೀಕ್ಷಕರ ಸಂಖ್ಯೆಯಲ್ಲಿ ದಾಖಲೆ ; 82.1 ಕೋಟಿ ಮಂದಿ ವೀಕ್ಷಣೆ

ಅಹ್ಮದಾಬಾದ್ : ಅಹ್ಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಟಿ-20 ವಿಶ್ವಕಪ್ ಫೈನಲ್ ಪಂದ್ಯ…

37 mins ago

17ಬಾರಿ ಬಜೆಟ್‌ ಮಂಡಿಸಿ ಮೈಸೂರಿಗೆ ಏನು ಮಾಡಿದ್ದೀರಿ? ; ಸಿಎಂಗೆ ಪ್ರತಾಪ್‌ ಸಿಂಹ ಪ್ರಶ್ನೆ

ಮೈಸೂರು : 17 ಬಾರಿ ಬಜೆಟ್ ಮಂಡಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೈಸೂರಿಗೆ ಏನು ಮಾಡಿದ್ದಾರೆ ಎಂದು ಮಾಜಿ ಸಂಸದ…

46 mins ago

ವಿದ್ಯಾರ್ಥಿಗಳೇ ಮಾದಕ ವಸ್ತುಗಳಿಂದ ದೂರವಿರಿ : ಕಮಿಷನರ್‌ ಸೀಮಾ ಲಾಟ್ಕರ್‌

ಮೈಸೂರು : ವಿದ್ಯಾರ್ಥಿಗಳು ಮಾದಕ ವಸ್ತುಗಳಿಂದ ದೂರವಿದ್ದು, ಶಿಕ್ಷಣಕ್ಕೆ ಹೆಚ್ಚು ಮಹತ್ವ ಕೊಟ್ಟು ಉತ್ತಮ ಭವಿಷ್ಯ ರೂಪಿಸಿಕೊಳ್ಳಿ ಎಂದು ನಗರ…

1 hour ago

ಜಾಗತಿಕ ಇಂಧನ ಬಿಕ್ಕಟು ಸೃಷ್ಟಿ : ಯುದ್ಧ ಕೊನೆಗೊಳಿಸಲು ಅಮೆರಿಕಾ ಮೇಲೆ ಒತ್ತಡ

ಟೆಹ್ರಾನ್‌ : ಅಮೆರಿಕ-ಇಸ್ರೇಲ್-ಇರಾನ್ ನಡುವಿನ ಘರ್ಷಣೆ 11ನೇ ದಿನಕ್ಕೆ ಕಾಲಿಟ್ಟಿದೆ. ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ಪಡೆಗಳು…

2 hours ago