ಅಂಕಣಗಳು

ಬಿಹಾರದಲ್ಲಿ ಅಚ್ಚರಿ ಮೂಡಿಸಿರುವ 65 ಲಕ್ಷ ಮತದಾರರ ‘ಕಣ್ಮರೆʼ

ದೆಹಲಿ ಕಣ್ಣೋಟ

ದಕ್ಷ ಮತ್ತು ಖಡಕ್ ವ್ಯಕ್ತಿತ್ವದ ಐಎ ಎಸ್ ಅಧಿಕಾರಿ ಟಿ.ಎನ್.ಶೇಷನ್ ಅವರು (೧೯೯೦ರಿಂದ ೧೯೯೬ರ ವರೆಗಿನ ಅವಧಿ) ಚುನಾವಣಾ ಆಯೋಗದ ಮುಖ್ಯ ಆಯುಕ್ತರಾಗಿ ನೇಮಕವಾಗುವವರೆಗೂ ಚುನಾವಣಾ ಆಯೋಗದ ನೀತಿ ನಿಯಮಗಳು ಕಟ್ಟುನಿಟ್ಟಾಗಿ ಜಾರಿಯಾಗಿರಲಿಲ್ಲ. ಹಣ ಬಲ, ತೋಳ್ಬಲದಿಂದಲೇ ನಡೆಯುತ್ತಿದ್ದ ಚುನಾವಣೆ ಅಕ್ರಮಗಳಿಗೆ ಕಡಿವಾಣ ಹಾಕಿ, ಚುನಾವಣಾ ಆಯೋಗದ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರುವ ಮೂಲಕ ಟಿ.ಎನ್.ಶೇಷನ್ ಪ್ರಖ್ಯಾತರಾಗಿದ್ದರು. ಚುನಾವಣಾ ಅಕ್ರಮಗಳನ್ನು ನಿರಂತರವಾಗಿ ನಡೆಸಿಕೊಂಡು ಬಂದ ರಾಜಕಾರಣಿಗಳಿಗೆ ಅವರು ಸಿಂಹಸ್ವಪ್ನವಾಗಿದ್ದರು.

ಶೇಷನ್ ನಿವೃತ್ತರಾದ ಬಳಿಕ ಪರಿಸ್ಥಿತಿ ಅವರಿದ್ದಂತಿಲ್ಲದಿದ್ದರೂ ಅವರ ಉತ್ತರಾಧಿಕಾರಿಗಳು ಸುಮಾರು ಹತ್ತನ್ನೆರಡು ವರ್ಷಗಳ ಅವಧಿಯಲ್ಲಿ ತಮ್ಮ ಶಕ್ತಿ ಸಾಮರ್ಥ್ಯಕ್ಕೆ ತಕ್ಕಂತೆ ಶೇಷನ್ ಅವರು ಹಾಕಿಕೊಟ್ಟ ಹೆಜ್ಜೆಯನ್ನು ಇಡುತ್ತಾ ಬಂದರು. ಆದರೂ ಶೇಷನ್ ಎಷ್ಟೇ ಕಟ್ಟುನಿಟ್ಟಿನ ಕ್ರಮಗಳನ್ನು ಜಾರಿಗೆ ತಂದಿದ್ದರೂ ಚುನಾವಣಾ ಆಯೋಗದ ವ್ಯವಸ್ಥೆಯೊಳಗೆ ಹಲವು ಲೋಪಗಳಿ ದ್ದವು. ಮತಪೆಟ್ಟಿಗೆ ಬದಲಿಗೆ ವಿದ್ಯುನ್ಮಾನ ಮತಯಂತ್ರ ಬಳಕೆ , ಪಕ್ಷಾಂತರ ತಡೆ ಮುಂತಾದ ಕಾಯ್ದೆಗಳನ್ನು ಬಿಗಿಗೊಳಿಸುವ ಆಯೋಗದ ನಿಯಮಾವಳಿಗಳಿಗೆ ತಿದ್ದುಪಡಿ ತಂದರೂ ನೀತಿ ನಿಯಮಗಳೆಲ್ಲವನ್ನೂ ಗಾಳಿಗೆ ತೂರಿದ ರಾಜಕೀಯ ಪಕ್ಷಗಳ ಆಡಂ ಬೊಲದಿಂದ ಚುನಾವಣಾ ಆಯೋಗ ಇನ್ನೂ ತನ್ನ ಪ್ರಾಮಾಣಿಕತೆಯನ್ನು ಪ್ರದರ್ಶಿಸಬೇಕು ಎನ್ನುವಂತೆ ಮತದಾರರು ಹೇಳುವಸ್ಥಿತಿ ಮುಂದು ವರಿದಿರುವುದು ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಯ ಅಣಕ.

ಇದೀಗ ಬಿಹಾರ ವಿಧಾನಸಭೆಯ ಚುನಾವಣೆಗೆ ಇನ್ನು ಮೂರೇ ತಿಂಗಳು ಬಾಕಿ ಇರುವಾಗ ಚುನಾವಣಾ ಆಯೋಗದ ಸುತ್ತ ಅಕ್ರಮಗಳ ವಾಸನೆ ಬರಲು ಶುರುವಾಗಿದೆ. ಮೊದಲೇ ಬಿಹಾರದ ಚುನಾವಣೆ ಎಂದರೆ ಕೇಳಬೇಕೆ? ಅಕ್ರಮಗಳಿಗೆ ಹೆಸರುವಾಸಿಯಾಗಿದೆ. ವಿಧಾನಸಭೆ ಚುನಾವಣೆಗೆ ಮುನ್ನ ಮತದಾರರ ಪಟ್ಟಿಯ ಪರಿಷ್ಕರಣೆಯ ಸಿದ್ಧತೆ ನಡೆದಿದೆ. ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆಯನ್ನು ಒಂದು ತಿಂಗಳ ಹಿಂದೆಯೇ ಕೈಗೊಂಡಿದ್ದು, ಮೊದಲ ಹಂತದ ಪರಿಷ್ಕರಣೆಯ ಕರಡು ಪಟ್ಟಿಯನ್ನು ಶುಕ್ರವಾರ (ಆಗಸ್ಟ್ ೧) ಸಾರ್ವಜನಿಕ ತಿಳಿವಳಿಕೆಗಾಗಿ ಚುನಾವಣಾ ಆಯೋಗ ಪ್ರಕಟಿಸಿದೆ.

ಮತದಾರರ ಕರಡು ಪಟ್ಟಿಯ ಪರಿಷ್ಕರಣೆಗಾಗಿ ೧೨ ದಾಖಲೆಗಳನ್ನು ಮತದಾರರಿಂದ ಆಯೋಗ ನಿರೀಕ್ಷೆ ಮಾಡಿತ್ತು. ಈ ಅಭಿಯಾನಕ್ಕೂ ಮುಂಚೆ ರಾಜ್ಯದಲ್ಲಿ ೭.೮೯ ಕೋಟಿ ಮತದಾರರನ್ನು ನೋಂದಾಯಿಸಿಕೊಳ್ಳಲಾಗಿತ್ತು. ಆದರೆ ಮತದಾರರ ಪಟ್ಟಿಯ ಪರಿಷ್ಕರಣೆಯ ಅಭಿಯಾನ ಕೈಗೊಂಡ ಮೇಲೆ ಈ ಸಂಖ್ಯೆ ೭.೨೪ಕ್ಕೆ ಇಳಿದಿದೆ. ಇದರಿಂದ ಸುಮಾರು ೬೫ ಲಕ್ಷ ಮತದಾರರ ಹೆಸರು ಕಣ್ಮರೆಯಾಗಿದ್ದು, ಚುನಾವಣಾ ಆಯೋಗದ ಕಾರ್ಯವೈಖರಿ, ಪ್ರಾಮಾಣಿಕತೆ ವಿರುದ್ಧ ವಿರೋಧ ಪಕ್ಷಗಳು ಅಸಮಾಧಾನ ವ್ಯಕ್ತಪಡಿಸಿವೆ.

ಕಳೆದ ಜನವರಿಯಲ್ಲಿದ್ದ ಈ ೬೫ ಲಕ್ಷ ಮಂದಿ ಮತದಾರರು ಈಗ ಎಲ್ಲಿಗೆ ಹೋದರು? ಎನ್ನುವ ಪ್ರಶ್ನೆ ಚುನಾವಣಾ ಆಯೋಗ ನಡೆಸುತ್ತಿರುವ ಮತದಾರರ ಪರಿಷ್ಕರಣೆ ಬಗ್ಗೆ ಅನುಮಾನ ಮೂಡಿಸಿದೆ. ಈ ಕುರಿತು ಅಲ್ಲಿನ ಎನ್ ಡಿ ಎ ಭಾಗವಾಗಿರುವ ಸಂಯುಕ್ತ ಜನತಾದಳ ಮತ್ತು ಅದರ ಪ್ರಮುಖ ಭಾಗೀದಾರಿ ಪಕ್ಷ ಬಿಜೆಪಿ ಹೊರತು ಪಡಿಸಿ ಎಲ್ಲ ರಾಜಕೀಯ ಪಕ್ಷಗಳೂ ಅಚ್ಚರಿ ವ್ಯಕ್ತಪಡಿಸಿವೆ . ಬಿಹಾರದವರೇ ಆದ ಸಾಮಾಜಿಕ ಚಿಂತಕ ಯೋಗೇಂದ್ರ ಯಾದವ್ ಪ್ರಕಾರ ೬೫ ಲಕ್ಷವಲ್ಲ ಸುಮಾರು ೯೫ ಲಕ್ಷ ಮಂದಿ ಮತದಾರರ ಹೆಸರನ್ನು ಪರಿಷ್ಕರಣೆ ಹೆಸರಿನಲ್ಲಿ ತೆಗೆದುಹಾಕಲಾಗಿದೆ.

ವಿಶೇಷ ಮತದಾರರ ಪರಿಷ್ಕರಣೆ ಕಾರ್ಯವನ್ನು ಕೈಗೊಂಡ ಆರಂಭದಲ್ಲೇ ಕೇಂದ್ರ ಸರ್ಕಾರ ಚುನಾವಣಾ ಆಯೋಗದ ಮೂಲಕ ಎನ್ ಆರ್ ಸಿ ಯನ್ನು ಜಾರಿಗೆ ತರಲು ಹೊರಟಿದೆ ಎಂದು ವಿರೋಧ ಪಕ್ಷಗಳು ಕೂಗೆಬ್ಬಿಸಿದವು. ಕೆಲವು ದಿನಗಳ ಹಿಂದೆ ನಕಲಿ ಮತದಾರರ ಸಂಖ್ಯೆಯ ವಿಚಾರವಾಗಿ ಮಾತನಾಡಿದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾ ವಿದೇಶಿಯರು ( ನೇಪಾಳ ಸೇರಿದಂತೆ ನೆರೆಹೊರೆ ದೇಶಗಳಿಂದ) ಅಕ್ರಮವಾಗಿ ನುಸುಳಿ ಬಂದವರಾಗಿದ್ದಾರೆ ಎಂದು ಹೇಳಿದ್ದರು. ಆದರೆ ಈ ಆರೋಪವನ್ನು ‘ಇಂಡಿಯಾ ಒಕ್ಕೂಟದ ಪಕ್ಷಗಳು ತಳ್ಳಿಹಾಕಿದವು.

ಆದರೆ ವಿರೋಧ ಪಕ್ಷಗಳು ಸಂಶಯ ವ್ಯಕ್ತಪಡಿಸಿರುವುದಕ್ಕೆ ಚುನಾವಣಾ ಆಯೋಗ ತನ್ನ ಸಿದ್ಧ ಉತ್ತರವನ್ನು ನೀಡಿದೆ. ಈ ಕಣ್ಮರೆಯಾಗಿರುವ ಮತದಾರರು ಬಹುಶಃ ಕಾಯಂ ಆಗಿ ಬಿಹಾರದಿಂದ ಬೇರೆ ಕಡೆಗಳಿಗೆ ವಲಸೆ ಹೋಗಿರಬಹುದು ಹಾಗಾಗಿ ಅವರನ್ನು ಪತ್ತೆ ಹಚ್ಚಲು ಆಗಿಲ್ಲ ಎನ್ನುತ್ತದೆ ಆಯೋಗ. ಚುನಾವಣಾ ಆಯೋಗದ ಪ್ರಕಾರ ಜನವರಿಯಲ್ಲಿ ಸಿದ್ಧಪಡಿಸಿದ್ದ ಪಟ್ಟಿಯನ್ನು ಗಮನಿಸಿದಾಗ ಪಟ್ನಾದಲ್ಲಿ ೩.೯೫ ಲಕ್ಷ ಮತದಾರರು ಸೇರ್ಪಡೆ ಆಗಿಲ್ಲ. ಪಶ್ಚಿಮ ಚಂಪಾರಣ್ಯ, ಮಧುಬನಿ ಮತ್ತು ಗೋಪಾಲ್ ಗಂಜ್ ಜಿಲ್ಲೆಗಳಲ್ಲಿ ಮೂರು ಲಕ್ಷಕ್ಕೂ ಹೆಚ್ಚು ಮಂದಿ ಸೇರಿಲ್ಲ. ಹಾಗೆಯೇ ಹತ್ತು ಜಿಲ್ಲೆಗಳಲ್ಲಿ ಅಂದರೆ ಪ್ರತಿ ಜಿಲ್ಲೆಗಳಲ್ಲಿ ತಲಾ ಎರಡು ಲಕ್ಷ ಮತ್ತು ಇತರೆ ೧೩ಜಿಲ್ಲೆಗಳಲ್ಲಿ ಸುಮಾರು ಒಂದು ಲಕ್ಷ ಮತದಾರರು ಕಾಣೆಯಾಗಿದ್ದಾರೆ ಎನ್ನುವ ವಿವರವನ್ನು ನೀಡಿದೆ.

ಮತದಾರರ ಪಟ್ಟಿಯಲ್ಲಿನ ಬಡವರ ಹೆಸರನ್ನು ವಿಶೇಷವಾಗಿ ವಿರೋಧ ಪಕ್ಷಗಳಿಗೆ ಬೆಂಬಲವಿರುವ ಕಡೆಗಳಲ್ಲಿ ಕೈಬಿಡಲಾಗಿದೆ. ಬರಲಿರುವ ವಿಧಾನಸಭೆ ಚುನಾವಣೆಯು ನಿಷ್ಪಕ್ಷಪಾತವಾಗಿ ನಡೆಯುವ ಯಾವ ಸೂಚನೆಯೂ ಇಲ್ಲ ಎನ್ನುವ ಟೀಕೆಗಳು ಮುಖ್ಯವಾಗಿ ಕಾಂಗ್ರೆಸ್ ಮತ್ತು ಆರ್.ಜೆ.ಡಿ. ಯದು. ಆದರೆ ಈ ಟೀಕೆಗಳನ್ನು ಗಮನಿಸಿರುವ ಚುನಾವಣಾ ಆಯೋಗವು ರಾಜ್ಯದ ಚುನಾವಣಾ ಆಯೋಗದ ನೇತೃತ್ವದಲ್ಲಿ ಈ ಪಟ್ಟಿಯ ಪರಿಷ್ಕರಣೆ ನಡೆದಿದೆ. ಜೊತೆಗೆ ಈ ಅಭಿಯಾನದಲ್ಲಿ ೧೨ ಪ್ರತಿಪಕ್ಷಗಳ ಏಜೆಂಟರೂ ಭಾಗಿಯಾಗಿ ದ್ದರು. ಇದು ಕರಡು ಪಟ್ಟಿ. ಸೆಪ್ಟೆಂಬರ್ ೧ರವರೆಗೆ ಲೋಪಗಳಿದ್ದರೆ ಸರಿಪಡಿಸಿಕೊಳ್ಳಲು ಅವಕಾಶವಿದೆ ಎಂದು ಸ್ಪಷ್ಟನೆ ನೀಡಿದೆಯಾದರೂ, ಈ ಭಾರೀ ಪ್ರಮಾಣದ ಮತದಾರರ ಕಣ್ಮರೆ ಆತಂಕಕಕ್ಕೆ ಕಾರಣವಾಗಿದೆ.

ಈ ವಿಷಯವಾಗಿ ಈಗಾಗಲೇ ಸುಪ್ರೀಂ ಕೋರ್ಟಿನಲ್ಲಿ ವಿಚಾರಣೆ ನಡೆಯುತ್ತಿದ್ದು, ಭಾರೀ ಪ್ರಮಾಣದ ಮತದಾರರು ಪಟ್ಟಿಯಿಂದ ಹೊರಗುಳಿದರೆ ನ್ಯಾಯಾಲಯ ಚುನಾವಣಾ ಆಯೋಗದ ಈ ಕಾರ್ಯದಲ್ಲಿ ಮಧ್ಯೆ ಪ್ರವೇಶಿಸಲಿದೆ . ಪಟ್ಟಿಯಿಂದ ತೆಗೆದು ಹಾಕಿರುವವರಲ್ಲಿ ಬಹುತೇಕ ಮಂದಿ ಮೃತಪಟ್ಟಿದ್ದಾರೆ ಎನ್ನುವ ಆಯೋಗದ ವಿವರಣೆಯನ್ನು ಒಪ್ಪದ ನ್ಯಾಯಾಲಯ ಹದಿನೈದು ಹೆಸರುಗಳಲ್ಲಿ ಒಬ್ಬ ವ್ಯಕ್ತಿ ಬಂದು ನಾನು ಸತ್ತಿಲ್ಲ. ಜೀವಂತವಾಗಿದ್ದೇನೆ. ನನ್ನ ಹೆಸರನ್ನು ಕೈಬಿಡಲಾಗಿದೆ ಎಂದು ನಮ್ಮ ಮುಂದೆ ಹೇಳಿದರೆ ಕಠಿಣ ಕ್ರಮಕ್ಕೆ ಮುಂದಾಗಿರುವುದಾಗಿ ಚುನಾವಣಾ ಆಯೋಗಕ್ಕೆ ಖಡಕ್ಕಾಗಿ ಎಚ್ಚರಿಕೆ ನೀಡಿರುವುದು ಪ್ರತಿಪಕ್ಷಗಳ ಆರೋಪಕ್ಕೆ ಪುಷ್ಟಿ ನೀಡಿದಂತಾಗಿದೆ.

ಬಿಹಾರದಲ್ಲಿ ಚುನಾವಣಾ ಆಯೋಗದ ಕಾರ್ಯ ವೈಖರಿಯ ಬಗ್ಗೆ ವಿರೋಧ ಪಕ್ಷಗಳು ಆಕ್ಷೇಪ ವ್ಯಕ್ತಪಡಿಸಿರುವ ಹಿನ್ನೆಲೆಯಲ್ಲಿ ಮುಂಬರುವ ವಿಧಾನಸಭೆ ಚುನಾವಣೆ ಪಾರದರ್ಶಕವಾಗಿ ಮತ್ತು ನಿಷ್ಪಕ್ಷಪಾತವಾಗಿ ನಡೆಯಲಿದೆಯೇ ಎನ್ನುವ ಸಂಶಯ ವ್ಯಕ್ತವಾಗಿದೆ. ಏತನ್ಮಧ್ಯೆ ಕೇಂದ್ರದ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರದ ಅಣತಿ ಯಂತೆ ಕೇಂದ್ರ ಚುನಾವಣಾ ಆಯೋಗ ‘ಮತ ಕಳ್ಳತನ’ ಕಾರ್ಯದಲ್ಲಿ ತೊಡಗಿದೆ. ಈ ಮತಕಳ್ಳತನ ಕಳೆದ ಲೋಕಸಭೆ ಚುನಾವಣೆಯಲ್ಲಿ ಮತ್ತು ಕೆಲವು ತಿಂಗಳ ಹಿಂದೆ ಮಹಾರಾಷ್ಟ್ರ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ನಡೆದಿರುವುದಾಗಿ ಲೋಕಸಭೆಯ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಅವರು ಆರೋಪಿಸುತ್ತಿದ್ದು, ಇದು ಬಿಹಾರದಲ್ಲಿನ ಮತದಾರರ ಪಟ್ಟಿ ಪರಿಷ್ಕರಣೆ ಕುರಿತ ಅವರ ಆರೋಪಕ್ಕೆ ಇಂಬು ಕೊಟ್ಟಂತಾಗಿದೆ.

ಮತ ಕಳ್ಳತನ ದ ಮೂಲಕ ಬಿಜೆಪಿ ಅಽಕಾರ ಹಿಡಿಯುತ್ತಿದೆ. ಈ ಮತಕಳ್ಳತನದ ಬಗೆಗೆ ತಮ್ಮ ಪಕ್ಷದ ಕಾರ್ಯಕರ್ತರು ಕಳೆದ ಆರು ತಿಂಗಳುಗಳಿಂದ ಅಧ್ಯಯನ ಮತ್ತು ಸತ್ಯಶೋಧನೆಯಲ್ಲಿ ತೊಡಗಿದ್ದಾರೆ. ಸುಮಾರು ಒಂದು ಕೋಟಿಗೂ ಹೆಚ್ಚು ಮತಗಳ ಕಳ್ಳತನ ನಡೆದಿದೆ. ತಮ್ಮ ಈ ಆರೋಪ ನೂರಕ್ಕೆ ನೂರರಷ್ಟು ಸತ್ಯ. ಸದ್ಯದಲ್ಲಿಯೇ ತಾವು ಈ ವಿಚಾರ ವಾಗಿ ಮಾತನಾಡುವುದಾಗಿ ಚುನಾವಣಾ ಆಯೋಗ ಮತ್ತು ಕೇಂದ್ರದ ಬಿಜೆಪಿ ಸರ್ಕಾರಕ್ಕೆ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಸವಾಲು ಎಸೆದಿದ್ದು, ಅದನ್ನು ಪ್ರಧಾನಿ ನರೇಂದ್ರ ಮೋದಿ ಅವರು ಸ್ವೀಕರಿಸಿರುವುದು ಮುಂದಿನ ದಿನಗಳ ಬೆಳವಣಿಗೆ ಭಾರೀ ಕುತೂಹಲ ಮೂಡಿಸಿದೆ.

ರಾಹುಲ್ ಗಾಂಧಿ ಅವರ ಆರೋಪವನ್ನು ಸಾರಾಸಗಟಾಗಿ ತಳ್ಳಿ ಹಾಕಿರುವ ಚುನಾವಣಾ ಆಯೋಗ ಮುನ್ನೆಚ್ಚರಿಕೆಯಾಗಿ ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯ ಹಿನ್ನೆಲೆಯಲ್ಲಿ ಈಗಾಗಲೇ ಒಂದು ಸುತ್ತು ವಿದ್ಯುನ್ಮಾನ ಯಂತ್ರಗಳ ಮರುಪರಿಶೀಲನೆ ನಡೆಸಿದೆ. ಇಂತಹದ್ದೇ ಮತಕಳ್ಳತನ ಕರ್ನಾಟಕದ ಕೆಲವು ಕಡೆ ನಡೆದಿರುವುದಾಗಿ ರಾಹುಲ್ ಆರೋಪಿಸಿದ್ದು, ತಮ್ಮ ಈ ಹೋರಾಟವನ್ನು ಕರ್ನಾಟಕದಿಂದಲೇ ಆ. ೫ರಿಂದ ಆರಂಭಿಸುವುದಾಗಿ ಹೇಳಿರುವುದು ಮತ್ತಷ್ಟು ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ.

“ಬಿಹಾರದಲ್ಲಿ ಚುನಾವಣಾ ಆಯೋಗದ ಕಾರ್ಯ ವೈಖರಿಯ ಬಗ್ಗೆ ವಿರೋಧ ಪಕ್ಷಗಳು ಆಕ್ಷೇಪ ವ್ಯಕ್ತಪಡಿಸಿರುವ ಹಿನ್ನೆಲೆಯಲ್ಲಿ ಮುಂಬರುವ ವಿಧಾನಸಭೆ ಚುನಾವಣೆ ಪಾರದರ್ಶಕವಾಗಿ ಮತ್ತು ನಿಷ್ಪಕ್ಷಪಾತವಾಗಿ ನಡೆಯಲಿದೆಯೇ ಎನ್ನುವ ಸಂಶಯ ವ್ಯಕ್ತವಾಗಿದೆ.”

– ಶಿವಾಜಿ ಗಣೇಶನ್‌

ಆಂದೋಲನ ಡೆಸ್ಕ್

Recent Posts

ನಾಳೆಯಿಂದ ಐಪಿಎಲ್‌ ಶುರು : ಅಧಿಕಾರಿಗಳ ಜತೆ ಸಿಎಸ್‌ ಸುದೀರ್ಘ ಸಭೆ

ಬೆಂಗಳೂರು : ನಾಳೆಯಿಂದ ಐಪಿಎಲ್ ಪಂದ್ಯಾವಳಿಗಳು ಆರಂಭವಾಗಲಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರು ಸಂಬಂಧಪಟ್ಟ…

9 hours ago

ಮದ್ದೂರು ಬಳಿ ಭೀಕರ ಅಪಘಾತ : 14 ಶಾಲಾ ಮಕ್ಕಳು ಸೇರಿದಂತೆ 20 ಮಂದಿಗೆ ಗಾಯ

ಮದ್ದೂರು : ಖಾಸಗಿ ಶಾಲೆ ಬಸ್ ಮತ್ತು ಖಾಸಗಿ ಬಸ್ ನಡುವೆ ಅಪಘಾತ ಸಂಭವಿಸಿ, 14 ವಿದ್ಯಾರ್ಥಿಗಳ ಜತೆಗೆ 6…

9 hours ago

ಮಹದೇಶ್ವರ ಬೆಟ್ಟ | 23 ದಿನದಲ್ಲಿ 2 ಕೋಟಿ ಒಡೆಯನಾದ ಮಾದಪ್ಪ

ಹನೂರು : ತಾಲ್ಲೂಕಿನ ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದಲ್ಲಿ ಬುಧವಾರ ನಡೆದ ಹುಂಡಿ ಹಣ ಎಣಿಕೆಯಲ್ಲಿ ಈ ಬಾರಿ…

10 hours ago

ಜನಪರ ಆಡಳಿತ ನೀಡುವಲ್ಲಿ ಸರ್ಕಾರ ವಿಫಲ : ನಿಖಿಲ್‌ ಕಿಡಿ

ಎಚ್.ಡಿ.ಕೋಟೆ : ರಾಜ್ಯದಲ್ಲಿ ಜಾತ್ಯತೀತ ಜನತಾದಳ-ಬಿಜೆಪಿಯ ಮೈತ್ರಿಯ ಸರ್ಕಾರ ಅಧಿಕಾರಕ್ಕೆ ಬಂದು ಜನಪರ ಆಡಳಿತ ನೀಡುವ ದಿನಗಳು ಹತ್ತಿರವಾಗುತ್ತಿವೆ ಎಂದು…

10 hours ago

ದಾವಣಗೆರೆ ದಕ್ಷಿಣ ಉಪಚುನಾವಣೆ : ಕಣದಿಂದ ಹಿಂದೆ ಸರಿದ ಬಂಡಾಯ ಅಭ್ಯರ್ಥಿ ಸಾದಿಕ್‌

ಬೆಂಗಳೂರು : ದಾವಣಗೆರೆ ಉಪಚುನಾವಣೆಗೆ ಸ್ವತಂತ್ರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದ ಸಾದಿಕ್ ಪೈಲ್ವಾನ್ ತಾವು ಕಣದಿಂದ ಹಿಂದೆ ಸರಿದಿರುವುದಾಗಿ ಘೋಷಿಸಿದ್ದಾರೆ.…

10 hours ago

SSLC | ಪರೀಕ್ಷೆ ಅಂಕ 625ರ ಬದಲಿಗೆ 525ಕ್ಕೆ ಇಳಿಕೆ ; ಲೆಕ್ಕಕ್ಕಿಲ್ಲ ತೃತೀಯ ಭಾಷೆ

ಬೆಂಗಳೂರು : ಕರ್ನಾಟಕದ ಶೈಕ್ಷಣಿಕ ಇತಿಹಾಸದಲ್ಲಿ ರಾಜ್ಯ ಸರ್ಕಾರವು ಅತ್ಯಂತ ಮಹತ್ವದ ತೀರ್ಮಾನವೊಂದನ್ನು ಕೈಗೊಂಡಿದ್ದು, ಎಸ್‌ಎಸ್‌ಎಲ್‌ಸಿ ಪರೀಕ್ಷಾ ಪದ್ಧತಿಯಲ್ಲಿ ಆಮೂಲಾಗ್ರ…

10 hours ago