ಅಂಕಣಗಳು

ಪ್ರಜಾಪ್ರಭುತ್ವದಲ್ಲಿ ಗ್ರಾಮ ಸ್ವರಾಜ್‌ನ ಪ್ರಸ್ತುತತೆ

ದೇವರಾಜು

ಒಕ್ಯೂಟ ವ್ಯವಸ್ಥೆಯನ್ನು ಒಳಗೊಂಡ ಭಾರತದಂತಹ ದೇಶಕ್ಕೆ ಪ್ರಜಾಪ್ರಭುತ್ವವೇ ಜೀವಾಳ. ಇಂಥ ಒಂದು ಪ್ರಜಾಪ್ರಭುತ್ವ ಸಾಕಾರಗೊಳ್ಳಬೇಕಾದರೆ ಅಧಿಕಾರ ವಿಕೇಂದ್ರೀಕರಣ ಆಗಿರಬೇಕು ಎಂಬುದು ಮಹಾತ್ಮ ಗಾಂಧೀಜಿ ಅವರ ಆಶಯವಾಗಿತ್ತು. ಆದರೆ, ಪ್ರಸ್ತುತ ಸಂದರ್ಭದಲ್ಲಿ ಒಕ್ಕೂಟದ ವ್ಯವಸ್ಥೆಗೆ ಧಕ್ಕೆಯಾಗುವಂಥ ನೀತಿ ನಿಯಮಗಳು ಜಾರಿಯಾಗುತ್ತಿವೆ. ಗಾಂಧೀಜಿ ಅವರ ಸ್ಮರಣೆಯ ಸರ್ವೋದಯ (ಜ.30) ದಿನದಂದು ಗಾಂಧೀಜಿ ಅವರ ಗ್ರಾಮ ಸ್ವರಾಜ್ಯದ ಬಗ್ಗೆ ಒಂದಿಷ್ಟು ಮೆಲುಕು…

ಗಾಂಧೀಜಿಯವರ ಕಲ್ಪನೆಯಂತೆ ಗ್ರಾಮ ಸ್ವರಾಜ್ಯವೇ ನಿಜವಾದ ಪ್ರಜಾಪ್ರಭುತ್ವವಾಗಿದ್ದು, ರಾಜಕೀಯದ ಅನೇಕ ತೊಡಕುಗಳಿಗೆ ಇದೇ ಚಿಕಿತ್ಸೆ ನೀಡುತ್ತದೆ ಎಂದು ನಂಬಿದ್ದರು. ಅವರ ಪ್ರಕಾರ, ಭಾರತ ಸ್ವತಂತ್ರವಾಗಿದ್ದರೂ ನಗರಗಳು ಮತ್ತು ಪಟ್ಟಣಗಳಿಗಿಂತ ಭಿನ್ನವಾಗಿರುವ ಏಳು ಲಕ್ಷ ಹಳ್ಳಿಗಳ ವಿಷಯದಲ್ಲಿ ಇನ್ನೂ ಸಾಮಾಜಿಕ, ನೈತಿಕ ಮತ್ತು ಆರ್ಥಿಕ ಸ್ವಾತಂತ್ರ್ಯವನ್ನು ಪಡೆಯುವುದು ಅಗತ್ಯವಾಗಿತ್ತು.

ಗಾಂಧೀಜಿಯವರ ಪ್ರಕಾರ, ಗ್ರಾಮ ಸ್ವರಾಜ್ ಆರ್ಥಿಕತೆ ಮಾನವ ಕೇಂದ್ರಿತವಾಗಿದ್ದು, ಪಾಶ್ಚಿಮಾತ್ಯ ಆರ್ಥಿಕತೆಗಿಂತ ಭಿನ್ನವಾಗಿ ಇರುವ ಇದು ಸಂಪತ್ತು ಕೇಂದ್ರಿತವಾಗಿರುತ್ತದೆ. ಗ್ರಾಮ ಸ್ವರಾಜ್ಯದ ಆರ್ಥಿಕತೆಯು ತನ್ನ ಪ್ರತಿಯೊಬ್ಬ ನಾಗರಿಕರಿಗೂ ಸ್ವಯಂಪ್ರೇರಿತ ಸಹಕಾರದ ಆಧಾರದ ಮೇಲೆ ಪೂರ್ಣ ಉದ್ಯೋಗವನ್ನು ಒದಗಿಸುತ್ತದೆ ಮತ್ತು ಅದು ಆಹಾರ ಸೇರಿದಂತೆ ಮೂಲಭೂತ ಅವಶ್ಯಕತೆಗಳನ್ನು ಒದಗಿಸಿ ಸ್ವಾವಲಂಬನೆ ಯನ್ನು ಸಾಧಿಸಲು ಅನುವು ಮಾಡುತ್ತದೆ.

ಆಧುನಿಕ ಆರ್ಥಿಕ ವ್ಯವಸ್ಥೆಗಳು ಸ್ವಯಂ-ಭೋಗದಲ್ಲಿ ಬೇರೂರಿವೆ ಹಾಗೂ ಅವು ದೊಡ್ಡ ಪ್ರಮಾಣದ ಯಾಂತ್ರೀಕೃತ, ಕೇಂದ್ರೀಕೃತ, ಸಂಕೀರ್ಣವಾದ ಸಂಸ್ಥೆಗಳಾ ಗಿವೆ. ನಿರುದ್ಯೋಗ, ಬಡತನ, ಶೋಷಣೆ, ಮಾರುಕಟ್ಟೆ ಏಕಸ್ವಾಮ್ಯ ಮತ್ತು ಕಚ್ಚಾ ವಸ್ತುಗಳಿಗಾಗಿ ಭೂಮಿಯನ್ನು ವಶಪಡಿಸಿಕೊಳ್ಳುವಂಥ ಮಾನವ ಸ್ವಭಾವ ಇದರಲ್ಲಿ ಅಡಕವಾಗಿದೆ. ವ್ಯಕ್ತಿಯ ಗುಲಾಮಗಿರಿಯನ್ನು ಬೇಡುವ ಇವು, ಮನುಷ್ಯನನ್ನು ಯಂತ್ರಕ್ಕೆ ಆಹಾರ ನೀಡುವ ಕೈಯಾಗಿ ಮಾತ್ರ ಪರಿಗಣಿಸುತ್ತವೆ ಎಂಬುದು ಗಾಂಧೀಜಿಯವರ ವಾದ.

ಆಧುನಿಕ ಆರ್ಥಿಕ ವ್ಯವಸ್ಥೆಯಲ್ಲಿ ಮಾನವ ಪದೇ ಪದೇ ಮಾಡಿದ ಕೆಲಸವನ್ನಷ್ಟೇ ಮಾಡಿ ತನ್ನ ಸೂಕ್ಷ್ಮ ಸಂವೇ ದನೆಯನ್ನು ಕಳೆದುಕೊಳ್ಳುತ್ತಾನೆ. ಈಗ ಸಮಾಜವನ್ನು ಶ್ರೀಮಂತರು ಮತ್ತು ಬಡವರು ಎಂದು ವಿಂಗಡಿಸಲಾಗಿದೆ. ಕೋಟ್ಯಧಿಪತಿಗಳು ಐಷಾರಾಮಿ ಸ್ಥಳದಲ್ಲಿ ಗುರಿಯಿಲ್ಲದೆ ಬದುಕುತ್ತಿದ್ದಾರೆ. ಶ್ರಮಿಕ ಸಮಾಜ ಹಾಗೂ ಶ್ರೀಮಂತರ ನಡುವಿನ ಆರ್ಥಿಕ ಅಸಮಾನತೆ ಹಿಂದೆಂದೂ ಕಂಡುಬಾ ರದ ಮಟ್ಟಕ್ಕೆ ಹೋಗಿದೆ ಎಂದು ಗಾಂಧೀಜಿ ಅವರು ಅಂದೇ ಗುರುತಿಸಿದ್ದರು.

ಈ ಎಲ್ಲಾ ಸಮಸ್ಯೆಗಳಿಗೆ ಗಾಂಧೀಜಿಯವರು ಗ್ರಾಮ ಸ್ವರಾಜ್ಯವೇ ಪರಿಹಾರ ಎಂದು ನಂಬಿದ್ದರು. ಭಾರತ ಮಾತ್ರವಲ್ಲದೆ, ಇಡೀ ಪ್ರಪಂಚಕ್ಕೆ ಇದು ಪರಿಹಾರವೆಂದು ಸೂಚಿಸಿದ್ದರು.

5-10-1945 ರಂದು ಪಂಡಿತ್ ನೆಹರೂ ಅವರಿಗೆ ಗಾಂಧೀಜಿ ಹೀಗೆ ಪತ್ರ ಬರೆದಿದ್ದರು: ಭಾರತವು ನಿಜವಾದ ಸ್ವಾತಂತ್ರ್ಯವನ್ನು ಪಡೆಯಬೇಕಾದರೆ ಜನರು ಪಟ್ಟಣಗಳ ಬದಲಿಗೆ ಹಳ್ಳಿಗಳಲ್ಲಿ ವಾಸ ಮಾಡಬೇಕು. ಕೋಟ್ಯಾನು ಕೋಟಿ ಜನರು ಪಟ್ಟಣ ಹಾಗೂ ಅರಮನೆಗಳಲ್ಲಿ ಪರಸ್ಪರ ನೆಮ್ಮದಿಯ ಜೀವನ ನಡೆಸಲಾರರು. ಆಗ ಅವರು ಹಿಂಸೆ ಮತ್ತು ಅಸತ್ಯ ಎರಡನ್ನೂ ಆಶ್ರಯಿಸಬೇಕಾಗುತ್ತದೆ. ಸತ್ಯ ಮತ್ತು ಅಹಿಂಸೆ ಇಲ್ಲದಿರುವಾಗ ಮಾನವೀಯತೆಯ
ವಿನಾಶವನ್ನು ಹೊರತುಪಡಿಸಿ ಬೇರೇನೂ ಸಾಧ್ಯವಿಲ್ಲ ಎಂದು ನಾನು ನಂಬುತ್ತೇನೆ. ಸರಳ ಗ್ರಾಮ ಜೀವನದಲ್ಲಿ ಮಾತ್ರ ಸತ್ಯ ಮತ್ತು ಅಹಿಂಸೆಯನ್ನು ನಾವು ಅರಿತುಕೊಳ್ಳಬಹುದು”.

ಹೀಗೆ ಗಾಂಧೀಜಿಯವರು ಸರಳ ಜೀವನದಲ್ಲಿ ನಂಬಿಕೆಯುಳ್ಳವರಾಗಿದ್ದರು. ಪ್ರತಿಯೊಬ್ಬರಿಗೂ ಸಮ ತೋಲಿತ ಆಹಾರ ಹಾಗೂ ಸೂರು ಸಿಗಬೇಕು, ಪ್ರತಿ ಜೀವಿಗೂ ಆಹಾರ ಪಡೆಯುವ ಹಕ್ಕು ಇದೆ ಎಂದು ಅವರು ಹೇಳಿದ್ದರು.

ಅವರೇ ಹೇಳಿದಂತೆ: “ನನ್ನ ಪ್ರಕಾರ ಪ್ರಾಪಂಚಿಕ ವಿಷಯವಾಗಿ ಭಾರತದ ಆರ್ಥಿಕ ಸಂವಿಧಾನದ ಅಡಿಯಲ್ಲಿ ಯಾರೂ ಆಹಾರ ಮತ್ತು ಬಟ್ಟೆಯ ಕೊರತೆ ಯಿಂದ ಬಳಲಬಾರದು. ತನ್ನ ಅಗತ್ಯತೆಗಳನ್ನು ಪೂರೈಸಿ ಕೊಳ್ಳಲು ಎಲ್ಲರಿಗೂ ಉದ್ಯೋಗ ಸಿಗಬೇಕು ಮತ್ತು ಇದು ಸಾಕಾರಗೊಳ್ಳುವುದು ಜೀವನದ ಅತ್ಯಗತ್ಯಗಳ ಉತ್ಪಾದನಾ ಸಾಧನಗಳು ಜನಸಾಮಾನ್ಯರ ನಿಯಂತ್ರಣ ದಲ್ಲಿ ಉಳಿದಿದ್ದರೆ ಮಾತ್ರ.”

ಅಧಿಕಾರ ಕೇಂದ್ರೀಕರಣವನ್ನು ವಿರೋಧಿಸಿದ್ದ ಗಾಂಧೀಜಿ, ಆಡಳಿತ ಕೇಂದ್ರೀಕರಣಗೊಳ್ಳುವುದರಿಂದ ಪ್ರಜಾಪ್ರಭುತ್ವಕ್ಕೆ ಮತ್ತು ಎಲ್ಲಾ ಪ್ರಜಾಸತ್ತಾತ್ಮಕ ಮೌಲ್ಯಗಳಿಗೆ ಅಪಾಯ ಎಂದು ನಂಬಿದ್ದರು. ಆಡಳಿತ ವಿಕೇಂದ್ರೀಕರಣ ಇಲ್ಲದೇ, ವ್ಯಕ್ತಿ ಸ್ವಾತಂತ್ರ್ಯ ಮತ್ತು ಮನುಷ್ಯನ ಮಾನಸಿಕ ಹಾಗೂ ನೈತಿಕ ಬೆಳವಣಿಗೆ ಸಾಧಿಸುವುದು ಅಸಾಧ್ಯ ಎಂಬುದು ಅವರ ವಾದವಾಗಿತ್ತು. ತಮ್ಮ ಜೀವನದುದ್ದಕ್ಕೂ, ಗಾಂಧೀಜಿಯವರು ಭಾರತದಲ್ಲಿ ಹಳ್ಳಿಯ ಮಹತ್ವವನ್ನು ಒತ್ತಿಹೇಳಿದ್ದಾರೆ. ಅವರ ಪ್ರಕಾರ, ಭಾರತದ ಪ್ರಗತಿ ಮತ್ತು ಸುಧಾರಣೆಗಾಗಿ, ಭಾರತೀಯ ಹಳ್ಳಿಗಳ ಸ್ಥಿತಿಯನ್ನು ಅಭಿವೃದ್ಧಿಪಡಿಸುವುದು ಅನಿವಾರ್ಯವಾಗಿತ್ತು. ಆದ್ದರಿಂದ, ಅವರು ಗ್ರಾಮೀಣ ಆಡಳಿತ ಮತ್ತು ಗ್ರಾಮೀಣ ಉನ್ನತಿಗಾಗಿ ಪಂಚಾಯತ್ ರಾಜ್ ವ್ಯವಸ್ಥೆಯನ್ನು ಸೂಚಿಸಿದರು.

ವಾಸ್ತವವೆಂದರೆ ಪಂಚಾಯತ್ ರಾಜ್ ವಿಷಯಕ್ಕೆ ಸಂಬಂಧಿಸಿದಂತೆ ಅವರಷ್ಟು ಕೊಡುಗೆ, ಸಲಹೆಯನ್ನು ಬೇರೆ ಯಾರೂ ನೀಡಿಲ್ಲ. ಅವರು ಈ ಬಗ್ಗೆ ಸ್ಪಷ್ಟ ದೃಷ್ಟಿಕೋನ ಒದಗಿಸಿಕೊಡುವಲ್ಲಿ ಸಮರ್ಥರಾಗಿದ್ದರು.

andolanait

Recent Posts

ಹೊಸ ವರ್ಷಾಚರಣೆ: ಮೈಸೂರಿನಲ್ಲಿ ಅಬಕಾರಿ ಪೊಲೀಸರ ಅಲರ್ಟ್

ಮೈಸೂರು: ಹೊಸ ವರ್ಷದ ಸಂಭ್ರಮದ ಹಿನ್ನೆಲೆಯಲ್ಲಿ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಅಕ್ರಮ ಮದ್ಯ ಹಾಗೂ ಮಾದಕ ವಸ್ತುಗಳ ಮಾರಾಟ ತಡೆಯಲು…

11 mins ago

ನಂಜನಗೂಡು: ಪೊಲೀಸ್ ಠಾಣೆ ಪಕ್ಕದಲ್ಲೇ ಸರಣಿ ಕಳ್ಳತನ: ಪಟ್ಟಣದಲ್ಲಿ ಆತಂಕ

ನಂಜನಗೂಡು: ಪಟ್ಟಣದಲ್ಲಿ ಸರಣಿ ಕಳ್ಳತನ ಪ್ರಕರಣಗಳು ಬೆಳಕಿಗೆ ಬಂದಿದ್ದು, ನಗರವಾಸಿಗಳಲ್ಲಿ ಆತಂಕ ಮೂಡಿಸಿದೆ. ನಗರದ ಆರ್.ಪಿ. ರಸ್ತೆಯಲ್ಲಿರುವ ಸುಮಾರು 14…

33 mins ago

ಚಾಮರಾಜನಗರದಲ್ಲಿ ಮತ್ತೊಂದು ಹುಲಿ ಸೆರೆ

ಚಾಮರಾಜನಗರ: ಚಾಮರಾಜನಗರ ತಾಲ್ಲೂಕಿನ ಕಲ್ಪುರ ಭಾಗದಲ್ಲಿ ಸಂಚಾರ ಮಾಡುತ್ತಿದ್ದ ಮತ್ತೊಂದು ಹುಲಿಯನ್ನು ಅರವಳಿಕೆ ಚುಚ್ಚುಮದ್ದು ನೀಡಿ ಸೆರೆ ಹಿಡಿಯಲಾಗಿದೆ. ಕಳೆದ…

1 hour ago

ಓದುಗರ ಪತ್ರ: ಇಸ್ಕಾನ್ ಕೃಷ್ಣ ದೇವಾಲಯದ ಬಳಿಯಿದ್ದ ಕಸ ತೆರವು

ಮೈಸೂರಿನ ಜಯನಗರದಲ್ಲಿರುವ ಇಸ್ಕಾನ್ ದೇವಾಲಯದ ಪಕ್ಕದಲ್ಲಿದ್ದ ಕಸದ ರಾಶಿಯನ್ನು ಮೈಸೂರು ಮಹಾನಗರಪಾಲಿಕೆಯಿಂದ ಮಂಗಳವಾರ ತೆರವುಗೊಳಿಸಲಾಗಿದೆ. ಆಂದೋಲನ ದಿನಪತ್ರಿಕೆಯ ಓದುಗರ ಪತ್ರ…

4 hours ago

ಓದುಗರ ಪತ್ರ: ಪ್ರಮುಖ ವೃತ್ತಗಳಲ್ಲಿ ಭಿಕ್ಷುಕರ ಹಾವಳಿ ನಿಯಂತ್ರಿಸಿ

ಮೈಸೂರಿನ ಪ್ರಮುಖ ವೃತ್ತಗಳಾದ ಸಿದ್ದಪ್ಪ ಸ್ಕ್ವೇರ್, ಸಂಸ್ಕೃತ ಪಾಠಶಾಲೆ, ವಿ.ವಿ.ಪುರಂ, ತಾತಯ್ಯ ವೃತ್ತ ಮೊದಲಾದ ಕಡೆಗಳಲ್ಲಿ ಭಿಕ್ಷುಕರು, ಅಂಗವಿಕಲರು ಪ್ರತಿನಿತ್ಯ…

4 hours ago

ಓದುಗರ ಪತ್ರ: ರಸ್ತೆಗೆ ಡಾಂಬರೀಕರಣ ಮಾಡಿ, ಯುಜಿಡಿ ಪೈಪ್ ಬದಲಿಸಿ

ಮೈಸೂರಿನ ವೀಣೆ ಶಾಮಣ್ಣ ರಸ್ತೆ ಅವ್ಯವಸ್ಥೆಯ ಆಗರವಾಗಿದೆ. ಒಳಚರಂಡಿ ನೀರು ರಸ್ತೆಯ ಮೇಲೆ ಹರಿಯುತ್ತಿದ್ದು, ಪ್ರತಿದಿನವೂ ನಿವಾಸಿಗಳು ಹೊಲಸು ನೀರನ್ನು…

4 hours ago